ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲಖನೌದಲ್ಲಿ ನಡೆದ `ಯುಪಿ ಹೂಡಿಕೆದಾರರ ಶೃಂಗಸಭೆ @3.0ʼರ ಭೂಮಿಪೂಜೆ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ


80,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ 1406 ಯೋಜನೆಗಳಿಗೆ ಶಂಕುಸ್ಥಾಪನೆ

"ಇಂದು ಜಗತ್ತು ಹುಡುಕುತ್ತಿರುವ ವಿಶ್ವಾಸಾರ್ಹ ಪಾಲುದಾರನ ಮಾನದಂಡಗಳನ್ನು ಪೂರೈಸುವ ಶಕ್ತಿ ನಮ್ಮ ಪ್ರಜಾಸತ್ತಾತ್ಮಕ ಭಾರತಕ್ಕೆ ಮಾತ್ರ ಇದೆ"

"ಇಂದು ಜಗತ್ತು ಭಾರತದ ಸಾಮರ್ಥ್ಯವನ್ನು ನೋಡುತ್ತಿದೆ ಮತ್ತು ಅದರ ಕಾರ್ಯಕ್ಷಮತೆಯನ್ನು ಶ್ಲಾಘಿಸುತ್ತಿದೆ"

"ನಾವು ಕಳೆದ 8 ವರ್ಷಗಳಲ್ಲಿ ನೀತಿ ಸ್ಥಿರತೆ, ಸಮನ್ವಯ ಮತ್ತು ಸುಗಮ ವ್ಯಾಪಾರಕ್ಕೆ ಒತ್ತು ನೀಡಿದ್ದೇವೆ.

"ಉತ್ತರ ಪ್ರದೇಶದ ತ್ವರಿತ ಬೆಳವಣಿಗೆಗಾಗಿ, ನಮ್ಮ ʻಅವಳಿ ಎಂಜಿನ್ʼ ಸರಕಾರವು ಮೂಲಸೌಕರ್ಯ, ಹೂಡಿಕೆ ಮತ್ತು ಉತ್ಪಾದನೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದೆ"

"ದೇಶವು ನಿರೀಕ್ಷಿಸುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಈ ರಾಜ್ಯದ ಆಡಳಿತ ಮತ್ತು ಸರಕಾರ ಹೊಂದಿದ್ದು, ರಾಜ್ಯದ ಸಂಸದನಾಗಿ ಅದು ನನ್ನ ಅನುಭವಕ್ಕೆ ಬಂದಿದೆ

"ನಾವು ನೀತಿ, ನಿರ್ಧಾರಗಳು ಮತ್ತು ಉದ್ದೇಶಗಳಲ್ಲಿ ಅಭಿವೃದ್ಧಿಯ ಪರವಾಗಿದ್ದೇವೆ"


Posted On: 03 JUN 2022 1:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಖನೌನಲ್ಲಿ ನಡೆದ ʻಯುಪಿ ಹೂಡಿಕೆದಾರರ ಶೃಂಗಸಭೆಯ@3.0ʼರ ಭೂಮಿಪೂಜೆ ಸಮಾರಂಭದಲ್ಲಿ ಭಾಗವಹಿಸಿದರು. ಭೂಮಿಪೂಜೆ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು 80,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ 1,406 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು; ಐಟಿ ಮತ್ತು ಎಲೆಕ್ಟ್ರಾನಿಕ್ಸ್, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು(ಎಂಎಸ್‌ಎಂಇ), ಉತ್ಪಾದನೆ, ನವೀಕರಿಸಬಹುದಾದ ಇಂಧನ, ಔಷಧ, ಪ್ರವಾಸೋದ್ಯಮ, ರಕ್ಷಣೆ ಮತ್ತು ಏರೋಸ್ಪೇಸ್, ಕೈಮಗ್ಗ ಹಾಗೂ ಜವಳಿ ಮುಂತಾದ ವೈವಿಧ್ಯಮಯ ವಲಯಗಳನ್ನು ಒಳಗೊಂಡಿವೆ. ಸಮಾರಂಭದಲ್ಲಿ ದೇಶದ ಉನ್ನತ ಕೈಗಾರಿಕಾ ದಿಗ್ಗಜರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಶ್ರೀ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 
 
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಉತ್ತರ ಪ್ರದೇಶದ ಯುವಕರ ಸಾಮರ್ಥ್ಯ, ಸಮರ್ಪಣಾ ಭಾವ, ಕಠಿಣ ಪರಿಶ್ರಮ ಮತ್ತು ತಿಳಿವಳಿಕೆ ಬಗ್ಗೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ಹೂಡಿಕೆದಾರರಿಗೆ ಧನ್ಯವಾದ ಅರ್ಪಿಸಿದರು. ಕಾಶಿಗೆ ಭೇಟಿ ನೀಡುವಂತೆ ಕೈಗಾರಿಕೋದ್ಯಮಿಗಳಿಗೆ ಅವರು ಮನವಿ ಮಾಡಿದರು. "ಕಾಶಿಯ ಪ್ರತಿನಿಧಿಯಾಗಿ, ನನ್ನ ಕ್ಷೇತ್ರವಾದ ಕಾಶಿಗೆ ಭೇಟಿ ನೀಡುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಕಾಶಿ, ಅದರ ಪ್ರಾಚೀನ ವೈಭವದ ಜೊತೆಗೆ ತನ್ನದೇ ಆದ ಹೊಸ ಅವತಾರ, ಆವೃತ್ತಿಯಲ್ಲಿ ಹೊರಹೊಮ್ಮಬಹುದು ಎಂಬುದು ಸಾಬೀತಾಗಿದೆ. ಇದು ಉತ್ತರ ಪ್ರದೇಶದ ಸಾಮರ್ಥ್ಯಗಳಿಗೆ ಜೀವಂತ ಉದಾಹರಣೆಯಾಗಿದೆ", ಎಂದು ಅವರು ಹೇಳಿದರು. 
 
ಇಂದು ಮುಂದಿಡಲಾದ ಪ್ರಸ್ತಾವನೆಗಳು ಉತ್ತರ ಪ್ರದೇಶದಲ್ಲಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತವೆ ಮತ್ತು ಉತ್ತರ ಪ್ರದೇಶದ ಬೆಳವಣಿಗೆಯ ಯಶೋಗಾಥೆಯಲ್ಲಿ ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಿ ಹೇಳಿದರು. "ವಿಶ್ವವು ಇಂದು ಹುಡುಕುತ್ತಿರುವ ವಿಶ್ವಾಸಾರ್ಹ ಪಾಲುದಾರನ ಮಾನದಂಡಗಳನ್ನು ಪೂರೈಸುವ ಶಕ್ತಿ ನಮ್ಮ ಪ್ರಜಾತಂತ್ರ ಭಾರತಕ್ಕೆ ಮಾತ್ರ ಇದೆ. ಇಂದು ಜಗತ್ತು ಭಾರತದ ಸಾಮರ್ಥ್ಯವನ್ನು ನೋಡುತ್ತಿದೆ ಮತ್ತು ಭಾರತದ ಸಾಧನೆಯನ್ನು ಶ್ಲಾಘಿಸುತ್ತಿದೆ," ಎಂದು ಅವರು ಹೇಳಿದರು. ಭಾರತವು ʻಜಿ20ʼ ಆರ್ಥಿಕತೆಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಜಾಗತಿಕ ಚಿಲ್ಲರೆ ಸೂಚ್ಯಂಕದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಭಾರತವು ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ ದೇಶ ಭಾರತವಾಗಿದೆ. ಕಳೆದ ವರ್ಷ, ವಿಶ್ವದ 100ಕ್ಕೂ ಹೆಚ್ಚು ದೇಶಗಳಿಂದ ದಾಖಲೆಯ 84 ಶತಕೋಟಿ ಡಾಲರ್ ವಿದೇಶಿ ನೇರ ಹೋಡಿಕೆ (ಎಫ್‌ಡಿಐ) ಹರಿದು ಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತವು 417 ಶತಕೋಟಿ ಡಾಲರ್‌ಗಿಂತಲೂ ಅಧಿಕ ಮೌಲ್ಯದ ಸರಕುಗಳನ್ನು ರಫ್ತು ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಅಂದರೆ ಕಳೆದ ಹಣಕಾಸು ವರ್ಷದಲ್ಲಿ 30 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ ಎಂದು ಅವರು ಮಾಹಿತಿ ನೀಡಿದರು. 
 
ಕೇಂದ್ರದಲ್ಲಿ ʻಎನ್‌ಡಿಎʼ ಸರಕಾರ 8 ವರ್ಷಗಳನ್ನು ಪೂರೈಸಿದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, "ಕಳೆದ ಹಲವು ವರ್ಷಗಳಿಂದ ನಾವು ಸುಧಾರಣೆ-ಕಾರ್ಯನಿರ್ವಹಣೆ-ಪರಿವರ್ತನೆʼಯ ಮಂತ್ರದೊಂದಿಗೆ ಮುಂದೆ ಸಾಗಿದ್ದೇವೆ. ನಾವು ನೀತಿ ಸ್ಥಿರತೆ, ಸಮನ್ವಯಕ್ಕೆ ಒತ್ತು ನೀಡಿದ್ದೇವೆ, ಸುಗಮ ವ್ಯಾಪಾರಕ್ಕೆ ಒತ್ತು ನೀಡಿದ್ದೇವೆ," ಎಂದರು.  ಇಡೀ ದೇಶವನ್ನು ಒಂದೇ ರಾಷ್ಟ್ರವಾಗಿ ಒಗ್ಗೂಡಿಸುತ್ತಿರುವ ಸುಧಾರಣೆಗಳ ಬಗ್ಗೆ ಮಾತನಾಡಿದ ಅವರು ಅವರು ಈ ಅಂಶವನ್ನು ಮತ್ತಷ್ಟು ವಿಸ್ತೃತವಾಗಿ ವಿವರಿಸಿದರು. "ನಮ್ಮ ಸುಧಾರಣೆಗಳ ಮೂಲಕ ಭಾರತವನ್ನು ಒಂದೇ ರಾಷ್ಟ್ರವಾಗಿ ಬಲಪಡಿಸುವತ್ತ ನಾವು ಕೆಲಸ ಮಾಡುತ್ತಿದ್ದೇವೆ. ʻಒಂದು ರಾಷ್ಟ್ರ-ಒಂದು ತೆರಿಗೆʼ-ಜಿಎಸ್‌ಟಿʼ, ʻಒಂದು ರಾಷ್ಟ್ರ-ಒಂದು ಗ್ರಿಡ್ʼ, ʻಒಂದು ರಾಷ್ಟ್ರ-ಒಂದು ಮೊಬಿಲಿಟಿ ಕಾರ್ಡ್ʼ, ʻಒಂದು ರಾಷ್ಟ್ರ-ಒಂದು ಪಡಿತರ ಚೀಟಿʼ ಹೀಗೆ ಈ ಪ್ರಯತ್ನಗಳು ನಮ್ಮ ದೃಢ ಮತ್ತು ಸ್ಪಷ್ಟ ನೀತಿಗಳ ಪ್ರತಿಬಿಂಬವಾಗಿವೆ," ಎಂದು ಅವರು ಹೇಳಿದರು. 
 
2017ರ ನಂತರ ಉತ್ತರ ಪ್ರದೇಶದಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ತ್ವರಿತ ಬೆಳವಣಿಗೆಗಾಗಿ, ನಮ್ಮ ʻಅವಳಿ ಎಂಜಿನ್ʼ ಸರಕಾರವು ಮೂಲಸೌಕರ್ಯ, ಹೂಡಿಕೆ ಮತ್ತು ಉತ್ಪಾದನೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದೆ. ಈ ವರ್ಷದ ಆಯವ್ಯಯದಲ್ಲಿ ಅಭೂತಪೂರ್ವ 7.50 ಲಕ್ಷ ಕೋಟಿ ರೂ.ಗಳ ಬಂಡವಾಳ ವೆಚ್ಚದ ಹಂಚಿಕೆಯು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ", ಎಂದು ಹೇಳಿದರು. ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯು ವ್ಯಾಪಾರ ಸಮುದಾಯದ ವಿಶ್ವಾಸವನ್ನು ಮರುಸ್ಥಾಪಿಸಿದೆ. ಕೈಗಾರಿಕೆಗಳಿಗೆ ಸೂಕ್ತ ವಾತಾವರಣವನ್ನು ಸೃಷ್ಟಿಸಿದೆ. ಜೊತೆಗೆ ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿದೆ ಎಂದು ಅವರು ಹೇಳಿದರು. ರಾಜ್ಯದ ಸಂಸದನಾಗಿ, ಉತ್ತರ ಪ್ರದೇಶದ ಆಡಳಿತ ಮತ್ತು ಸರಕಾರದಿಂದ ದೇಶವು ನಿರೀಕ್ಷಿಸುವ ಸಾಮರ್ಥ್ಯ ಮತ್ತು ಶಕ್ತಿಯನ್ನು ರಾಜ್ಯವು ಹೊಂದಿರುವುದು ಈ ರಾಜ್ಯದ ಸಂಸದನಾಗಿ ತಮ್ಮ ಅನುಭವಕ್ಕೆ ಬಂದಿದೆ ಎಂದು ಅವರು ಹೇಳಿದರು. ಸರಕಾರಿ ಯಂತ್ರದ ಬದಲಾದ ಮನಸ್ಥಿತಿ ಮತ್ತು ಕೆಲಸದ ಸಂಸ್ಕೃತಿಯನ್ನು ಅವರು ಶ್ಲಾಘಿಸಿದರು.  ಉತ್ತರ ಪ್ರದೇಶವು ದೇಶದ ಐದನೇ ಒಂದು ಅಥವಾ ಆರನೇ ಒಂದು ಭಾಗದಷ್ಟು ಜನಸಂಖ್ಯೆಗೆ ನೆಲೆಯಾಗಿದೆ, ಆದ್ದರಿಂದ ಇದು ದೇಶದ ಅಭಿವೃದ್ಧಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದರು.  ಉತ್ತರ ಪ್ರದೇಶದ ಅಂತರ್ಗತ ಸಾಮರ್ಥ್ಯಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಸಾಗುವುದನ್ನು ಎಂದಿಗೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಇತ್ತೀಚಿನ ಆಯವ್ಯಯದಲ್ಲಿ, ಗಂಗಾನದಿಯ ಎರಡೂ ದಂಡೆಗಳಲ್ಲಿ 5 ಕಿ.ಮೀ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಕಾರಿಡಾರ್ ಘೋಷಣೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.  ಉತ್ತರ ಪ್ರದೇಶವು 25-30 ಜಿಲ್ಲೆಗಳ ವ್ಯಾಪ್ತಿಯಲ್ಲಿ 1,100 ಕಿ.ಮೀ ಗಂಗಾ ನದಿಯನ್ನು ಹೊಂದಿದೆ. ಇದು ನೈಸರ್ಗಿಕ ಕೃಷಿಗೆ ದೊಡ್ಡ ಅವಕಾಶಗಳನ್ನು ಸೃಷ್ಟಿಸುತ್ತದೆ. ಕಾರ್ಪೊರೇಟ್ ಜಗತ್ತಿಗೆ ಈಗ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಸುವರ್ಣಾವಕಾಶವಾಗಿದೆ ಎಂದು ಅವರು ಹೇಳಿದರು. ʻಪಿಎಲ್ಐʼ ಯೋಜನೆಗಳು ಮತ್ತು ಬಂಡವಾಳ ವೆಚ್ಚಕ್ಕಾಗಿ 7.5 ಲಕ್ಷ ಕೋಟಿ ರೂ.ಗಳ ಹಂಚಿಕೆಯೂ ರಾಜ್ಯಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು. ರಾಜ್ಯದ ರಕ್ಷಣಾ ಕಾರಿಡಾರ್ ಹೊಸ ಅವಕಾಶಗಳ ಹರಿಕಾರನಾಗಲಿದೆ ಎಂದು ಅವರು ಉಲ್ಲೇಖಿಸಿದರು. ಆಧುನಿಕ ಪವರ್ ಗ್ರಿಡ್, ಗ್ಯಾಸ್ ಪೈಪ್‌ಲೈನ್‌, ಬಹು ಮಾದರಿ ಸಂಪರ್ಕ, ದಾಖಲೆಯ ಸಂಖ್ಯೆಯ ಎಕ್ಸ್‌ಪ್ರೆಸ್‌ ವೇಗಳು, ಆರ್ಥಿಕ ವಲಯಗಳ ಸಂಪರ್ಕ ವೃದ್ಧಿ, ಆಧುನಿಕ ರೈಲ್ವೆ ಮೂಲಸೌಕರ್ಯ, ವಿಶೇಷ ಪೂರ್ವ ಮತ್ತು ಪಶ್ಚಿಮ ಸರಕು ಕಾರಿಡಾರ್‌ನಂತಹ ಕ್ರಮಗಳು ರಾಜ್ಯದ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡುವ ಭರವಸೆಯೊಂದಿಗೆ ಉತ್ತರ ಪ್ರದೇಶದಲ್ಲಿ ಸಂಯೋಜನೆಗೊಳ್ಳುತ್ತಿವೆ ಎಂದು ಪ್ರಧಾನಿ ಹೇಳಿದರು. 

ಕಳೆದ ಕೆಲವು ವರ್ಷಗಳಲ್ಲಿ ಸಕಾಲದಲ್ಲಿ ಯೋಜನೆಗಳನ್ನು ತಲುಪಿಸುವ ಹೊಸ ಸಂಸ್ಕೃತಿಯು ದೇಶದಲ್ಲಿ ಬೆಳೆದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಡಿಜಿಟಲ್ ಕ್ರಾಂತಿಯನ್ನು ಈ ಪ್ರವೃತ್ತಿಗೆ ಉದಾಹರಣೆಯಾಗಿ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇತ್ತೀಚಿನ ವರ್ಷಗಳಲ್ಲಿ ದೇಶದ ಬೆಳವಣಿಗೆಯ ಯಶೋಗಾಥೆಯನ್ನು ಪುನರುಚ್ಚರಿಸಿದರು. 2014ರಲ್ಲಿ ನಮ್ಮ ದೇಶದಲ್ಲಿ ಕೇವಲ 65 ದಶಲಕ್ಷ ಬ್ರಾಡ್ ಬ್ಯಾಂಡ್ ಚಂದಾದಾರರಿದ್ದರು. ಇಂದು ಅವರ ಸಂಖ್ಯೆ 78 ಕೋಟಿ ದಾಟಿದೆ. 2014ರಲ್ಲಿ, ಒಂದು `ಜಿ.ಬಿ’ ಡೇಟಾದ ಬೆಲೆ ಸುಮಾರು 200 ರೂ. ಇತ್ತು. ಇಂದು ಅದರ ಬೆಲೆ 11-12 ರೂ.ಗೆ ಇಳಿದಿದೆ. ದತ್ತಾಂಶವು ತುಂಬಾ ಅಗ್ಗವಾಗಿರುವ ವಿಶ್ವದ ದೇಶಗಳಲ್ಲಿ ಭಾರತವೂ ಒಂದಾಗಿದೆ. 2014ರಲ್ಲಿ, ದೇಶದ 100ಕ್ಕಿಂತ ಕಡಿಮೆ ಗ್ರಾಮ ಪಂಚಾಯಿತಿಗಳು ಆಪ್ಟಿಕಲ್ ಫೈಬರ್‌ ಸಂಪರ್ಕ ಹೊಂದಿದ್ದವು. ಇಂದು ಆಪ್ಟಿಕಲ್ ಫೈಬರ್‌ ಸಂಪರ್ಕ ಹೊಂದಿರುವ ಗ್ರಾಮ ಪಂಚಾಯಿತಿಗಳ ಸಂಖ್ಯೆಯೂ ಎರಡೂವರೆ ಲಕ್ಷ ದಾಟಿದೆ. 2014ಕ್ಕಿಂತ ಮೊದಲು, ನವೋದ್ಯಮಗಳ ಸಂಖ್ಯೆ ಕೇವಲ ನೂರರ ಸಂಖ್ಯೆಯಲ್ಲಿತ್ತು. ಆದರೆ ಇಂದು ದೇಶದಲ್ಲಿ ನೋಂದಾಯಿತ ನವೋದ್ಯಮಗಳ ಸಂಖ್ಯೆಯೂ ಸುಮಾರು 70 ಸಾವಿರ ದಾಟಿದೆ. ಇತ್ತೀಚೆಗೆ, ಭಾರತವು 100 ಯುನಿಕಾರ್ನ್‌ಗಳ ದಾಖಲೆಯನ್ನು ಸಹ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.  "ನಾವು ನೀತಿ, ನಿರ್ಧಾರಗಳು ಮತ್ತು ಉದ್ದೇಶಗಳಲ್ಲಿ ಅಭಿವೃದ್ಧಿಯ ಪರವಾಗಿದ್ದೇವೆ.  ನಿಮ್ಮ ಪ್ರತಿಯೊಂದು ಪ್ರಯತ್ನದಲ್ಲೂ ನಾವೆಲ್ಲರೂ ನಿಮ್ಮೊಂದಿಗೆ ಇರುತ್ತೇವೆ ಮತ್ತು ಪ್ರತಿ ಹೆಜ್ಜೆಯಲ್ಲೂ ನಿಮಗೆ ಬೆಂಬಲ ನೀಡುತ್ತೇವೆ", ಎಂದು ಪ್ರಧಾನಮಂತ್ರಿಯವರು ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳಿಗೆ ಭರವಸೆ ನೀಡಿದರು. 
 
ʻಯುಪಿ ಹೂಡಿಕೆದಾರರ ಶೃಂಗಸಭೆ-2018ʼ ಅನ್ನು 2018ರ ಫೆಬ್ರವರಿ 21ರಿಂದ 22 ರವರೆಗೆ ನಡೆಸಲಾಯಿತು, ಉದ್ಘಾಟನಾ ಸಮಾರಂಭವು ಜುಲೈ 29, 2018ರಂದು ಮತ್ತು ಎರಡನೇ ಉದ್ಘಾಟನಾ ಸಮಾರಂಭವು 2019ರ ಜುಲೈ 28ರಂದು ನಡೆಯಿತು. ಮೊದಲ ಉದ್ಘಾಟನಾ ಸಮಾರಂಭದಲ್ಲಿ 61,500 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 81 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಎರಡನೇ ಉದ್ಘಾಟನಾ ಸಮಾರಂಭದಲ್ಲಿ, 67,000 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯ 290 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. 

 

*****


(Release ID: 1830991)