ಪ್ರಧಾನ ಮಂತ್ರಿಯವರ ಕಛೇರಿ

"ರೆಮುಲ್" ಚಂಡಮಾರುತದ ಪ್ರಭಾವ ಕುರಿತು ಪ್ರಧಾನ ಮಂತ್ರಿಗಳಿಂದ ಪರಿಶೀಲನೆ 


ರೆಮುಲ್ ಚಂಡಮಾರುತದ ಪ್ರಭಾವಪೀಡಿತ ರಾಜ್ಯಗಳ ಬಗ್ಗೆ ಪ್ರಧಾನ ಮಂತ್ರಿಗಳಿಂದ ವಿವರಣೆ 

ಚಂಡಮಾರುತದ ಪ್ರಭಾವ ರಾಜ್ಯಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಲಿದೆ ಎಂದ ಪ್ರಧಾನ ಮಂತ್ರಿಗಳು 

ಅಗತ್ಯಗಳಿಗೆ ಅನುಗುಣವಾಗಿ ಎನ್ ಡಿಆರ್ ಎಫ್ ತಂಡಗಳ ನಿಯೋಜನೆ; ಜನರನ್ನು ಸುರಕ್ಷಿತ ಸ್ಥಳಗಳಿಗೆ ತಂಡಗಳಿಂದ ಸ್ಥಳಾಂತರ, ಏರ್‌ಲಿಫ್ಟಿಂಗ್ ಮತ್ತು ರಸ್ತೆ ತೆರವು ಕಾರ್ಯಾಚರಣೆಗಳು 

ಪರಿಸ್ಥಿತಿಗಳ ಮೇಲ್ವಿಚಾರಣೆಗೆ ಮತ್ತು ಮರುಸ್ಥಾಪನೆಗೆ ಅಗತ್ಯ ನೆರವು ನೀಡಲು ನಿಯಮಿತವಾಗಿ ಪರಿಶೀಲನೆಗೆ ಗೃಹ ಸಚಿವಾಲಯಕ್ಕೆ ಪ್ರಧಾನ ಮಂತ್ರಿ ಸೂಚನೆ 

Posted On: 02 JUN 2024 2:34PM by PIB Bengaluru

"ರೆಮಲ್" ಚಂಡಮಾರುತದಿಂದ ಆಗಿರುವ ಪರಿಣಾಮಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಮುಂಜಾನೆ ದೆಹಲಿಯ 7 ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಪರಿಶೀಲನೆ ನಡೆಸಿದರು. 

ಸಭೆಯಲ್ಲಿ ಚಂಡಮಾರುತದಿಂದ ಪ್ರಭಾವಕ್ಕೊಳಗಾಗಿರುವ ರಾಜ್ಯಗಳ ಬಗ್ಗೆ ಪ್ರಧಾನಿಯವರಿಗೆ ಮಾಹಿತಿ ನೀಡಲಾಯಿತು. ಮಿಜೋರಾಂ, ಅಸ್ಸಾಂ, ಮಣಿಪುರ, ಮೇಘಾಲಯ ಮತ್ತು ತ್ರಿಪುರಾದಲ್ಲಿ ಭೂಕುಸಿತ, ಪ್ರವಾಹದಿಂದ ಜೀವಹಾನಿ ಮತ್ತು ಮನೆ, ಆಸ್ತಿಪಾಸ್ತಿ ಹಾನಿಯ ಬಗ್ಗೆಯೂ ಚರ್ಚಿಸಲಾಯಿತು. ಅಗತ್ಯಕ್ಕೆ ಅನುಗುಣವಾಗಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಪ್ರವಾಹ ಪೀಡಿತ ಅಪಾಯದಲ್ಲಿರುವ ಸ್ಥಳಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ, ಏರ್‌ಲಿಫ್ಟಿಂಗ್ ಮತ್ತು ರಸ್ತೆ ತೆರವು ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಗೃಹ ಸಚಿವಾಲಯವು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಸಹ ಸಭೆಯಲ್ಲಿ ವಿವರಿಸಲಾಯಿತು. 

ಚಂಡಮಾರುತದಿಂದ ಹಾನಿಗೊಳಗಾದ ರಾಜ್ಯಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಮರು ಸ್ಥಾಪನೆಗೆ ಅಗತ್ಯವಾದ ಸಹಾಯವನ್ನು ನೀಡಲು ನಿಯಮಿತವಾಗಿ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಪ್ರಧಾನಮಂತ್ರಿ ಸೂಚನೆ ನೀಡಿದರು.

ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ, ಡಿಜಿ ಎನ್‌ಡಿಆರ್‌ಎಫ್ ಮತ್ತು ಸದಸ್ಯ ಕಾರ್ಯದರ್ಶಿ, ಪ್ರಧಾನ ಮಂತ್ರಗಳ ಕಾರ್ಯಾಲಯದ ಇತರ ಹಿರಿಯ ಅಧಿಕಾರಿಗಳ ಜೊತೆಗೆ ಎನ್‌ಡಿಎಂಎ ಮತ್ತು ಸಂಬಂಧಪಟ್ಟ ಸಚಿವಾಲಯಗಳ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

*****
 



(Release ID: 2022513) Visitor Counter : 57