ಪ್ರಧಾನ ಮಂತ್ರಿಯವರ ಕಛೇರಿ

ʻಉದ್ಯೋಗ ಮೇಳʼದಡಿ 51,000ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ


"ನೀವು ಈ 'ಅಮೃತ ಕಾಲ'ದ 'ಅಮೃತ ರಕ್ಷಕರು'

, "ಕಳೆದ ಕೆಲವು ವರ್ಷಗಳಲ್ಲಿ, ನಾವು ಅರೆಸೈನಿಕ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅನೇಕ ಮಹತ್ವದ ಬದಲಾವಣೆಗಳನ್ನು ಮಾಡಿದ್ದೇವೆ"

 "ಕಾನೂನಿನ ಸುವ್ಯವಸ್ಥೆಯ ಪಾಲನೆಯಿಂದ ನೆಲೆಸುವ ಸುರಕ್ಷಿತ ವಾತಾವರಣವು ಅಭಿವೃದ್ಧಿಯ ವೇಗವನ್ನು ವೇಗಗೊಳಿಸುತ್ತದೆ"

"ಕಳೆದ 9 ವರ್ಷಗಳಲ್ಲಿ ಬದಲಾವಣೆಯ ಹೊಸ ಹಂತವನ್ನು ಕಾಣಬಹುದು" 

"9 ವರ್ಷಗಳ ಹಿಂದೆ ಈ ದಿನದಂದು ಪ್ರಾರಂಭಿಸಲಾದ ʻಜನ್ ಧನ್ ಯೋಜನೆʼ ಹಳ್ಳಿಗಳು ಮತ್ತು ಬಡವರ ಆರ್ಥಿಕ ಸಬಲೀಕರಣದಲ್ಲಿ ದೊಡ್ಡ ಪಾತ್ರ ವಹಿಸಿದೆ"

"ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ವೇಗಗೊಳಿಸುವಲ್ಲಿ ʻಜನ್ ಧನ್ ಯೋಜನೆʼ ವಹಿಸಿರುವ ಪಾತ್ರವು ನಿಜವಾಗಿಯೂ ಒಂದು ಅಧ್ಯಯನದ ವಿಷಯವಾಗಿದೆ”

"ಸರ್ಕಾರ ಮತ್ತು ಆಡಳಿತದಲ್ಲಿ ಬದಲಾವಣೆ ತರುವ ಧ್ಯೇಯದಲ್ಲಿ ನೀವೆಲ್ಲರೂ ಯುವಕರು ನನ್ನ ದೊಡ್ಡ ಶಕ್ತಿ"

Posted On: 28 AUG 2023 11:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಾಗಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡವರಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 51,000ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದರು. ʻಊದ್ಯೋಗ ಮೇಳʼವವನ್ನು ದೇಶಾದ್ಯಂತ 45 ಸ್ಥಳಗಳಲ್ಲಿ ನಡೆಸಲಾಯಿತು.  ಈ ಉದ್ಯೋಗ ಮೇಳ ಕಾರ್ಯಕ್ರಮದ ಮೂಲಕ, ಗೃಹ ಸಚಿವಾಲಯವು ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ(ಸಿಎಪಿಎಫ್) ʻಕೇಂದ್ರ ಮೀಸಲು ಪೊಲೀಸ್ ಪಡೆʼ(ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್ಎಫ್), ʻಸಶಸ್ತ್ರ ಸೀಮಾ ಬಲ್ʼ(ಎಸ್ಎಸ್‌ಬಿ), ʻಅಸ್ಸಾಂ ರೈಫಲ್ಸ್ʼ, ʻಕೇಂದ್ರ ಕೈಗಾರಿಕಾ ಭದ್ರತಾ ಪಡೆʼ(ಸಿಐಎಸ್ಎಫ್), ʻಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ʼ(ಐಟಿಬಿಪಿ) ಮತ್ತು ʻಮಾದಕವಸ್ತು ನಿಯಂತ್ರಣ ಬ್ಯೂರೋʼ(ಎನ್ಸಿಬಿ) ಹಾಗೂ ದೆಹಲಿ ಪೊಲೀಸ್‌ ಇಲಾಖೆಗೆ ಸಿಬ್ಬಂದಿಯನ್ನು ನೇಮಕ ಮಾಡುತ್ತಿದೆ.  ದೇಶಾದ್ಯಂತದಿಂದ ಹೊಸದಾಗಿ ಆಯ್ಕೆಯಾದ ಸಿಬ್ಬಂದಿಯು ಗೃಹ ಸಚಿವಾಲಯದ ಅಡಿಯಲ್ಲಿ ವಿವಿಧ ಸಂಸ್ಥೆಗಳಲ್ಲಿ ಕಾನ್ಸ್‌ಟೆಬಲ್(ಜನರಲ್ ಡ್ಯೂಟಿ), ಸಬ್ ಇನ್ಸ್‌ಪೆಕ್ಟರ್(ಜನರಲ್ ಡ್ಯೂಟಿ) ಮತ್ತು ನಾನ್-ಜನರಲ್ ಡ್ಯೂಟಿ ಕೇಡರ್ ಹುದ್ದೆಗಳಂತಹ ವಿವಿಧ ಹುದ್ದೆಗಳಿಗೆ ಸೇರಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಅಮೃತಕಾಲದ ಸಂದರ್ಭದಲ್ಲಿ 'ಅಮೃತ ರಕ್ಷಕ'ರಾಗಿ ಆಯ್ಕೆಯಾಗಿದ್ದಕ್ಕಾಗಿ ಹೊಸದಾಗಿ ನೇಮಕಗೊಂಡವರನ್ನು ಅಭಿನಂದಿಸಿದರು. ಹೊಸದಾಗಿ ನೇಕಕಗೊಂಡ ನೌಕರರನ್ನು 'ಅಮೃತ ರಕ್ಷಕರು' ಎಂದು ಪ್ರಧಾನಿ ಬಣ್ಣಿಸಿದರು. ಏಕೆಂದರೆ ಹೊಸದಾಗಿ ನೇಮಕಗೊಂಡವರು ದೇಶಕ್ಕೆ ಸೇವೆ ಸಲ್ಲಿಸುವುದಲ್ಲದೆ ದೇಶ ಮತ್ತು ದೇಶವಾಸಿಗಳನ್ನು ರಕ್ಷಿಸುತ್ತಾರೆ. ಹಾಗಾಗಿಯೇ "ನೀವು ಈ ಅಮೃತಕಾಲದ ಅಮೃತ ರಕ್ಷಕರು" ಎಂದು ಪ್ರಧಾನಿ ಹೇಳಿದರು.

ಇಡೀ ದೇಶವು ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ತುಂಬಿರುವ ಸಮಯದಲ್ಲಿ ಉದ್ಯೋಗ ಮೇಳದ ಈ ಆವೃತ್ತಿ ನಡೆಯುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಚಂದ್ರಯಾನ-3 ಮತ್ತು ʻಪ್ರಜ್ಞಾನ್ʼ ರೋವರ್ ಚಂದ್ರನ ಇತ್ತೀಚಿನ ಚಿತ್ರಗಳನ್ನು ನಿರಂತರವಾಗಿ ರವಾನಿಸುತ್ತಿವೆ ಎಂದು ಅವರು ಹೇಳಿದರು. ಈ ಪ್ರತಿಷ್ಠಿತ ಕ್ಷಣದಲ್ಲಿ, ಹೊಸದಾಗಿ ನೇಮಕಗೊಂಡವರು ತಮ್ಮ ಜೀವಮಾನದ ಅತ್ಯಂತ ಮಹತ್ವದ ಪ್ರಯಾಣವನ್ನು ಆರಂಭಿಸುತ್ತಿದ್ದಾರೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಹೊಸದಾಗಿ ನೇಮಕಗೊಂಡವರಿಗೆ ಮತ್ತು ಅವರ ಕುಟುಂಬಗಳಿಗೆ ಶುಭ ಕೋರಿದರು.

ರಕ್ಷಣೆ/ ಭದ್ರತೆ ಹಾಗೂ ಪೊಲೀಸ್ ಪಡೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾಗುವುದರ ಜೊತೆಗೆ ಬರುವ ಜವಾಬ್ದಾರಿಯನ್ನು ಸಹ ಪ್ರಧಾನಿ ಒತ್ತಿ ಹೇಳಿದರು. ಈ ಪಡೆಗಳ ಅಗತ್ಯಗಳ ಬಗ್ಗೆ ಸರ್ಕಾರ ತುಂಬಾ ಗಂಭೀರವಾಗಿದೆ ಎಂದರು. ಅರೆಸೈನಿಕ ಪಡೆಗಳ ನೇಮಕಾತಿಯಲ್ಲಿ ಮಹತ್ವದ ಬದಲಾವಣೆಗಳನ್ನು ಅವರು ಉಲ್ಲೇಖಿಸಿದರು. ಅರ್ಜಿಯಿಂದ ಅಂತಿಮ ಆಯ್ಕೆಯವರೆಗೆ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದೆ, ಹಿಂದಿನಂತೆ ಇಂಗ್ಲಿಷ್ ಅಥವಾ ಹಿಂದಿ ಮಾತ್ರವಲ್ಲದೆ 13 ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ನಿಯಮಗಳನ್ನು ಸಡಿಲಿಸುವ ಮೂಲಕ ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನೂರಾರು ಬುಡಕಟ್ಟು ಯುವಕರನ್ನು ನೇಮಕ ಮಾಡಿಕೊಂಡಿರುವುದನ್ನು ಅವರು ಉಲ್ಲೇಖಿಸಿದರು. ಗಡಿ ಪ್ರದೇಶ ಮತ್ತು ನಕ್ಸಲ್‌ ಪೀಡಿತ ಪ್ರದೇಶಗಳ ಯುವಕರಿಗೆ ವಿಶೇಷ ಕೋಟಾ ನೀಡುವ ಬಗ್ಗೆಯೂ ಅವರು ಮಾಹಿತಿ ನೀಡಿದರು.

ರಾಷ್ಟ್ರದ ಅಭಿವೃದ್ಧಿಯನ್ನು ಖಾತ್ರಿಪಡಿಸುವಲ್ಲಿ ಹೊಸದಾಗಿ ನೇಮಕಗೊಂಡವರ ಜವಾಬ್ದಾರಿಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕಾನೂನು ಸುವ್ಯವಸ್ಥೆಯ ಪಾಲನೆಯಿಂದ ನೆಲೆಸುವ ಸುರಕ್ಷಿತ ವಾತಾವರಣವು ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ ಎಂದರು. ಇದಕ್ಕೆ ಉತ್ತರ ಪ್ರದೇಶದ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ರಾಜ್ಯವು ಒಂದು ಕಾಲದಲ್ಲಿ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು. ಅಪರಾಧದ ವಿಷಯದಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯಗಳಲ್ಲಿ ಒಂದಾಗಿತ್ತು ಎಂದರು. ಉತ್ತರ ಪ್ರದೇಶದಲ್ಲಿ ಕಾನೂನಿನ ಸುವ್ಯವಸ್ಥೆಯ ಪಾಲನೆಯಿಂದಾಗಿ ಈಗ  ರಾಜ್ಯವು ಅಭಿವೃದ್ಧಿಯ ಹೊಸ ಎತ್ತರವನ್ನು ಏರಲು ಸಾಧ್ಯವಾಗಿದೆ. ಜೊತೆಗೆ, ಭಯದಿಂದ ಮುಕ್ತವಾದ ಹೊಸ ಸಮಾಜವನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು. "ಈ ರೀತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಯು ಜನರಲ್ಲಿ ನಂಬಿಕೆಯನ್ನು ಪುನಸ್ಥಾಪಿಸುತ್ತದೆ," ಎಂದು ಅವರು ಹೇಳಿದರು. ಅಪರಾಧ ಪ್ರಮಾಣ ಕಡಿಮೆಯಾಗುವುದರ ಜೊತೆಗೆ, ರಾಜ್ಯದಲ್ಲಿ ಹೂಡಿಕೆಗಳು ಹೆಚ್ಚುತ್ತಿವೆ ಎಂದು ಅವರು ಗಮನ ಸೆಳೆದರು. ಯಾವುದೇ ರಾಜ್ಯದಲ್ಲಿ ಅಪರಾಧ ಪ್ರಮಾಣಗಳು ಹೆಚ್ಚಿದಷ್ಟೂ ಆ ರಾಜ್ಯಗಳಲ್ಲಿ ಹೂಡಿಕೆ ಪ್ರಮಾಣ ಕಡಿಮೆಯಾಗುತ್ತದೆ. ಜೊತೆಗೆ ಎಲ್ಲಾ ಉದ್ಯೋಗಾವಕಾಶಗಳು ಸ್ಥಗಿತಗೊಳ್ಳುತ್ತವೆ ಎಂದು ಹೇಳಿದರು.

ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತದ ಸ್ಥಾನಮಾನವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ದಶಕದಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪುನರುಚ್ಚರಿಸಿದರು. "ಮೋದಿ ಅತ್ಯಂತ ಜವಾಬ್ದಾರಿಯಿಂದ ಇಂತಹ ಭರವಸೆಗಳನ್ನು ನೀಡುತ್ತಾರೆ," ಎಂದು ಪ್ರಧಾನಿ ಹೇಳಿದರು. ಪ್ರಗತಿಶೀಲ ಆರ್ಥಿಕತೆಯಿಂದ ಸಾಮಾನ್ಯ ನಾಗರಿಕರ ಮೇಲಾಗುವ ಪರಿಣಾಮದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಆರ್ಥಿಕತೆಯ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ವಲಯವೂ ಬೆಳೆಯುವುದು ಮುಖ್ಯ ಎಂದು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಔಷಧ ಉದ್ಯಮದ ಪಾತ್ರದ ಬಗ್ಗೆ ಅವರು ಮಾತನಾಡಿದರು. ಇಂದು, ಭಾರತದ ಔಷಧ ಉದ್ಯಮವು ಸುಮಾರು 4 ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ ಮತ್ತು 2030ರ ವೇಳೆಗೆ ಈ ಉದ್ಯಮವು ಸುಮಾರು 10 ಲಕ್ಷ ಕೋಟಿ ರೂಪಾಯಿಗಳ ಮೌಲ್ಯವನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ ಎಂದರು. ಈ ಬೆಳವಣಿಗೆಯಿಂದಾಗಿ ಮುಂಬರುವ ವರ್ಷಗಳಲ್ಲಿ ಔಷಧ ಉದ್ಯಮಕ್ಕೆ ಹೆಚ್ಚಿನ ಯುವಕರ ಅಗತ್ಯವಿರುತ್ತದೆ ಮತ್ತು ಉದ್ಯೋಗಾವಕಾಶಗಳಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಆಟೋಮೊಬೈಲ್ ಮತ್ತು ವಾಹನ ಬಿಡಿಭಾಗಗಳ ಉದ್ಯಮದ ವಿಸ್ತರಣೆಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಈ ಎರಡೂ ಉದ್ಯಮಗಳು 12 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ್ದಾಗಿವೆ ಮತ್ತು ಮುಂಬರುವ ವರ್ಷಗಳಲ್ಲಿ ಇವು ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಈ ಬೆಳವಣಿಗೆಯ ದರವನ್ನು ಕಾಪಾಡಿಕೊಳ್ಳಲು ಆಟೋಮೊಬೈಲ್ ಉದ್ಯಮಕ್ಕೆ ಇನ್ನೂ ಹೆಚ್ಚಿನ ಯುವಕರು ಬೇಕಾಗುತ್ತಾರೆ, ಆ ಮೂಲಕ ದೇಶದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಅವರು ಒತ್ತಿ ಹೇಳಿದರು. ಕಳೆದ ವರ್ಷ ಆಹಾರ ಸಂಸ್ಕರಣಾ ಉದ್ಯಮದ ಮೌಲ್ಯ ಸುಮಾರು 26 ಲಕ್ಷ ಕೋಟಿ ಇದ್ದ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ಮುಂದಿನ ಮೂರೂವರೆ ವರ್ಷಗಳಲ್ಲಿ ಇದು 35 ಲಕ್ಷ ಕೋಟಿಗೆ ಏರಲಿದೆ ಎಂದು ಹೇಳಿದರು. "ವಿಸ್ತರಣೆಯೊಂದಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ" ಎಂದು ಅವರು ವಿವರಿಸಿದರು.

ಮೂಲಸೌಕರ್ಯ ಅಭಿವೃದ್ಧಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಮೂಲಸೌಕರ್ಯಕ್ಕಾಗಿ 30 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ಮಾಹಿತಿ ನೀಡಿದರು. ಇದು ಸಂಪರ್ಕ ಮತ್ತು ಪ್ರವಾಸೋದ್ಯಮ ಹಾಗೂ ಆತಿಥ್ಯಕ್ಕೆ ಉತ್ತೇಜನ ನೀಡುತ್ತಿದೆ, ಜೊತೆಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದರು.

2030ರ ವೇಳೆಗೆ ಪ್ರವಾಸೋದ್ಯಮ ಕ್ಷೇತ್ರವು ಆರ್ಥಿಕತೆಗೆ 20 ಲಕ್ಷ ಕೋಟಿಗೂ ಹೆಚ್ಚು ಕೊಡುಗೆ ನೀಡುತ್ತದೆ ಮತ್ತು ಅಂದಾಜು 13-14 ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇವು ಕೇವಲ ಸಂಖ್ಯೆಗಳಲ್ಲ, ಈ ಬೆಳವಣಿಗೆಗಳು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ, ಜೀವನವನ್ನು ಸುಲಭಗೊಳಿಸುವ ಮೂಲಕ ಮತ್ತು ಆದಾಯವನ್ನು ಹೆಚ್ಚಿಸುವ ಮೂಲಕ ಸಾಮಾನ್ಯ ನಾಗರಿಕರ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ವಿವರಿಸಿದರು.

"ಕಳೆದ 9 ವರ್ಷಗಳಲ್ಲಿ ಸರ್ಕಾರದ ಪ್ರಯತ್ನಗಳಿಂದಾಗಿ ದೇಶವು ಪರಿವರ್ತನೆಯ ಹೊಸ ಯುಗಕ್ಕೆ ಸಾಕ್ಷಿಯಾಗಿದೆ" ಎಂದು ಪ್ರಧಾನಿ ಹೇಳಿದರು. ಕಳೆದ ವರ್ಷ ಭಾರತವು ದಾಖಲೆಯ ಮಟ್ಟದ ರಫ್ತು ಮಾಡಿದೆ, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ನಿರ್ಮಿತ ಸರಕುಗಳಿಗೆ ಹೆಚ್ಚಿದ ಬೇಡಿಕೆಯನ್ನು ಸೂಚಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ಇದರ ಪರಿಣಾಮವಾಗಿ ಉತ್ಪಾದನೆ ಹೆಚ್ಚಾಗಿದೆ, ಉದ್ಯೋಗಾವಕಾಶಗಳು ಹೆಚ್ಚಾಗಿವೆ ಮತ್ತು ಆ ಮೂಲಕ ಕುಟುಂಬದ ಆದಾಯ ಹೆಚ್ಚಾಗಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದನಾ ರಾಷ್ಟ್ರವಾಗಿದೆ ಮತ್ತು ಭಾರತದಲ್ಲಿ ಮೊಬೈಲ್ ಫೋನ್‌ಗಳ ಬೇಡಿಕೆಯೂ ಹೆಚ್ಚಾಗಿದೆ ಎಂದು ಅವರು ಉಲ್ಲೇಖಿಸಿದರು. ಮೊಬೈಲ್ ಉತ್ಪಾದನೆಯಲ್ಲಿ ಹಲವು ಪಟ್ಟು ಹೆಚ್ಚಳಕ್ಕೆ ಸರ್ಕಾರದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ದೇಶವು ಈಗ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೂ ಗಮನ ಹರಿಸುತ್ತಿದೆ ಎಂದು ಉಲ್ಲೇಖಿಸಿದ ಶ್ರೀ ಮೋದಿ, ಐಟಿ ಮತ್ತು ಹಾರ್ಡ್‌ವೇರ್ ಉತ್ಪಾದನಾ ವಲಯದಲ್ಲೂ ಮೊಬೈಲ್ ಉತ್ಪಾದನಾ ಕ್ಷೇತ್ರದ ಯಶಸ್ಸನ್ನು ಭಾರತ ಪುನರಾವರ್ತಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 'ವೋಕಲ್ ಫಾರ್ ಲೋಕಲ್' ಮಂತ್ರವನ್ನು ಉಲ್ಲೇಖಿಸಿದ ಅವರು "ಮೇಡ್ ಇನ್ ಇಂಡಿಯಾ ಲ್ಯಾಪ್ ಟಾಪ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳು ನಮಗೆ ಹೆಮ್ಮೆ ತರುವ ದಿನ ದೂರವಿಲ್ಲ" ಎಂದು ಹೇಳಿದರು. ಭಾರತೀಯ ನಿರ್ಮಿತ ಲ್ಯಾಪ್ ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳ ಖರೀದಿಗೆ ಸರ್ಕಾರ ಒತ್ತು ನೀಡುತ್ತಿದೆ ಮತ್ತು ಇದರ ಪರಿಣಾಮವಾಗಿ ಉತ್ಪಾದನೆ ಮತ್ತು ಉದ್ಯೋಗ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರದಲ್ಲಿ ನಡೆಯುತ್ತಿರುವ ಆರ್ಥಿಕ ಬೆಳವಣಿಗೆಗಳಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ ನೇಮಕಗೊಂಡವರ ಹೆಗಲ ಮೇಲೆ ಇರುವ ಜವಾಬ್ದಾರಿಯನ್ನು ಅವರು ಪುನರುಚ್ಚರಿಸಿದರು.

9 ವರ್ಷಗಳ ಹಿಂದೆ ಇದೇ ದಿನ ʻಪ್ರಧಾನ ಮಂತ್ರಿ ಜನ್ ಧನ್ ಯೋಜನೆʼಯನ್ನು ಆರಂಭಿಸಿದ್ದನ್ನು ಪ್ರಧಾನಿ ಸ್ಮರಿಸಿದರು. "ಈ ಯೋಜನೆಯು ಹಳ್ಳಿಗಳು ಮತ್ತು ಬಡವರ ಆರ್ಥಿಕ ಸಬಲೀಕರಣದ ಜೊತೆಗೆ ಉದ್ಯೋಗ ಸೃಷ್ಟಿಯಲ್ಲಿ ದೊಡ್ಡ ಪಾತ್ರ ವಹಿಸಿದೆ", ಎಂದು ಪ್ರಧಾನಿ ಹೇಳಿದರು. ಈ ಯೋಜನೆಯಡಿ ಕಳೆದ 9 ವರ್ಷಗಳಲ್ಲಿ 50 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಯೋಜನೆಯು ಬಡವರು ಮತ್ತು ಅವಕಾಶ ವಂಚಿತರಿಗೆ ನೇರವಾಗಿ ಪ್ರಯೋಜನಗಳನ್ನು ತಲುಪಿಸಲು ಸಹಾಯ ಮಾಡಿದೆ. ಜೊತೆಗೆ ಇದು ಬುಡಕಟ್ಟು ಜನರು, ಮಹಿಳೆಯರು, ದಲಿತರು ಮತ್ತು ಇತರ ವಂಚಿತ ವರ್ಗಗಳಿಗೆ ಉದ್ಯೋಗ ಪಡೆಯಲು ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯ ಮಾಡಿದೆ. ಅನೇಕ ಯುವಕರು ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳಾಗಿ, ಬ್ಯಾಂಕ್ ಮಿತ್ರರಾಗಿ ಉದ್ಯೋಗಗಳನ್ನು ಪಡೆದರು. 21 ಲಕ್ಷಕ್ಕೂ ಹೆಚ್ಚು ಯುವಕರು ʻಬ್ಯಾಂಕ್ ಮಿತ್ರರುʼ ಅಥವಾ ʻಬ್ಯಾಂಕ್ ಸಖಿʼಗಳಾಗಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು. ʻಜನ್ ಧನ್ ಯೋಜನೆʼ, ʻಮುದ್ರಾ ಯೋಜನೆʼಯನ್ನು ಬಲಪಡಿಸಿದೆ ಎಂದು ಅವರು ಹೇಳಿದರು. ʻಮುದ್ರಾ ಯೋಜನೆʼಯಡಿ ಈವರೆಗೆ 24 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಡಮಾನ ರಹಿತ ಸಾಲಗಳನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಫಲಾನುಭವಿಗಳಲ್ಲಿ, 8 ಕೋಟಿ ಮೊದಲ ಬಾರಿಗೆ ಉದ್ಯಮಿಗಳಿದ್ದಾರೆ. ʻಪಿಎಂ ಸ್ವನಿಧಿʼ ಅಡಿಯಲ್ಲಿ, ಸುಮಾರು 45 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಮೊದಲ ಬಾರಿಗೆ ಅಡಮಾನ ರಹಿತ ಸಾಲವನ್ನು ಅನುಮೋದಿಸಲಾಗಿದೆ.  ಈ ಯೋಜನೆಗಳ ಫಲಾನುಭವಿಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಯುವಕರು ಇದ್ದಾರೆ. ʻಜನ್ ಧನ್ʼ ಖಾತೆಗಳು ಹಳ್ಳಿಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಬಲಪಡಿಸಿವೆ ಎಂದು ಪ್ರಧಾನಿ ಹೇಳಿದರು. ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ವೇಗಗೊಳಿಸುವಲ್ಲಿ ʻಜನ್ ಧನ್ ಯೋಜನೆʼ ವಹಿಸಿರುವ ಪಾತ್ರ ನಿಜಕ್ಕೂ ಒಂದು ಅಧ್ಯಯನದ ವಿಷಯವಾಗಿದೆ ಎಂದು ಅವರು ಹೇಳಿದರು.

ಅನೇಕ ಉದ್ಯೋಗ ಮೇಳಗಳಲ್ಲಿ ಲಕ್ಷಾಂತರ ಯುವಕರನ್ನು ಉದ್ದೇಶಿಸಿ ತಾವು ಮಾತನಾಡಿದ್ದನ್ನು ಉಲ್ಲೇಖಿಸಿದ ಪ್ರಧಾನಿಯವರು, ಆ ಯುವಕರೆಲ್ಲರೂ ಸಾರ್ವಜನಿಕ ಸೇವೆಗೆ ಸೇರ್ಪಡೆಗೊಂಡಿದ್ದಾರೆ ಅಥವಾ ಇತರ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದಿದ್ದಾರೆ ಎಂದರು. "ಸರ್ಕಾರ ಮತ್ತು ಆಡಳಿತದಲ್ಲಿ ಬದಲಾವಣೆ ತರುವ ಧ್ಯೇಯದಲ್ಲಿ ನೀವೆಲ್ಲಾ ಯುವಕರು ನನ್ನ ದೊಡ್ಡ ಶಕ್ತಿ," ಎಂದು ಪ್ರಧಾನಿ ಹೇಳಿದರು. ಇಂದಿನ ಯುವಕರು ಎಲ್ಲವೂ ಕೇವಲ ಒಂದು ಕ್ಲಿಕ್ ದೂರದಲ್ಲಿರುವ ಪೀಳಿಗೆಯಿಂದ ಬಂದವರು ಎಂದು ಪ್ರಧಾನಮಂತ್ರಿಯವರು ಹೇಳಿದರು. ತ್ವರಿತ ವಿತರಣೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಂದಿನ ಪೀಳಿಗೆಯು ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಹುಡುಕುತ್ತಿದೆಯೇ ಹೊರತು ವಿಚಲಿತವಾಗುವುಇದಲ್ಲ ಎಂದರು. ಸಾರ್ವಜನಿಕ ಸೇವಕರಾಗಿ, ಹೊಸದಾಗಿ ನೇಮಕಗೊಂಡವರು ದೀರ್ಘಾವಧಿಯಲ್ಲಿ ಜನರಿಗೆ ಪ್ರಯೋಜನಕಾರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಒತ್ತಿಹೇಳಿದರು. "ನಿಮ್ಮ ಈ ಪೀಳಿಗೆಯು ಏನನ್ನಾದರೂ ಮಹತ್ವದ್ದನ್ನು ಸಾಧಿಸಬೇಕೆಂದು ನಿರ್ಧರಿಸಿದೆ. ಈ ಪೀಳಿಗೆಯು ಯಾರ ಅನುಗ್ರಹವನ್ನೂ ಬಯಸುವುದಿಲ್ಲ, ಅವರ ಹಾದಿಯಲ್ಲಿ ಯಾರೂ ಅಡ್ಡಿಯಾಗಬಾರದು ಎಂದು ಅದು ಬಯಸುತ್ತದೆ", ಎಂದು ಹೇಳುವ ಮೂಲಕ ಸಾರ್ವಜನಿಕ ಸೇವಕರಾಗಿ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಈ ತಿಳಿವಳಿಕೆಯೊಂದಿಗೆ ಕೆಲಸ ಮಾಡಿದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.
ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿಯವರು, ಅರೆಸೈನಿಕ ಪಡೆಗಳಾಗಿ ಕಲಿಕೆಯ ಮನೋಭಾವವನ್ನು ಕಾಪಾಡಿಕೊಳ್ಳುವಂತೆ ಒತ್ತಿ ಹೇಳಿದರು. ʻಐಜಿಒಟಿ ಕರ್ಮಯೋಗಿ ಪೋರ್ಟಲ್ʼನಲ್ಲಿ ಲಭ್ಯವಿರುವ 600ಕ್ಕೂ ಹೆಚ್ಚು ಕೋರ್ಸ್‌ಗಳ ಬಗ್ಗೆ ವಿವರಿಸಿದರು. "20 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ನೀವೆಲ್ಲರೂ ಕೂಡ ಈ ಪೋರ್ಟಲ್‌ಗೆ ನೋಂದಾವಣಿಗೊಂಡು ಇದರ ಲಾಭ ಪಡೆಯಬೇಕು ಎಂದು ನಾನು ಒತ್ತಾಯಿಸುತ್ತೇನೆ", ಎಂದು ಪ್ರಧಾನಿ ಹೇಳಿದರು. ಕೊನೆಯದಾಗಿ, ಹೊಸದಾಗಿ ನೇಮಕಗೊಂಡ ಸಿಬ್ಬಂದಿಯು ತಮ್ಮ ಜೀವನದಲ್ಲಿ ದೈಹಿಕ ಸಾಮರ್ಥ್ಯ ವೃದ್ಧಿ ಮತ್ತು ಯೋಗವನ್ನು ದೈನಂದಿನ ಅಭ್ಯಾಸವಾಗಿ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳುವುದರೊಂದಿಗೆ ಪ್ರಧಾನಿ ಮಾತು ಮುಗಿಸಿದರು.

ಹಿನ್ನೆಲೆ

ʻಸಿಎಪಿಎಫ್ʼ ಮತ್ತು ದೆಹಲಿ ಪೊಲೀಸರನ್ನು ಬಲಪಡಿಸುವುದರಿಂದ ಆಂತರಿಕ ಭದ್ರತೆ, ಭಯೋತ್ಪಾದನೆ ನಿಗ್ರಹ, ಬಂಡಾಯ ಶಮನ, ನಕ್ಸಲ್‌ ಉಪಟಳವನ್ನು ಎದುರಿಸುವುದು ಮತ್ತು ರಾಷ್ಟ್ರದ ಗಡಿಗಳನ್ನು ರಕ್ಷಿಸುವುದು ಮುಂತಾದ ಬಹು ಆಯಾಮದ ಪಾತ್ರವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಪಡೆಗಳಿಗೆ ಸಹಾಯ ಮಾಡುತ್ತದೆ.

ʻಉದ್ಯೋಗ ಮೇಳʼ ಅಭಿಯಾನವು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಉದ್ಯೋಗ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಕರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೊಸದಾಗಿ ನೇಮಕಗೊಂಡವರು ʻಐಜಿಒಟಿ ಕರ್ಮಯೋಗಿʼ ಪೋರ್ಟಲ್‌ನಲ್ಲಿ ಆನ್‌ಲೈನ್‌ ಮಾಡ್ಯೂಲ್ ಆಗಿರುವ ʻಕರ್ಮಯೋಗಿ ಪ್ರರಂಭ್ʼ ಮೂಲಕ ಸ್ವಯಂ ತರಬೇತಿ ಪಡೆಯಲು ಅವಕಾಶವನ್ನು ಪಡೆಯುತ್ತಿದ್ದಾರೆ. ಅಲ್ಲಿರುವ 673ಕ್ಕೂ ಹೆಚ್ಚು ಇ-ಕಲಿಕಾ ಕೋರ್ಸ್‌ಗಳನ್ನು 'ಎಲ್ಲಿದ ಬೇಕಾದರೂ, ಯಾವ ಸಾಧನದಿಂದ ಬೇಕಾದರೂʼ ಕಲಿಯಲು ಅನುಕೂಲವಾಗುಂತೆ ರೂಪಿಸಲಾಗಿದೆ. 
 

*****



(Release ID: 1952921) Visitor Counter : 121