ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಮೆಹ್ಸಾನದ ಮೋಧೆರಾದಲ್ಲಿ 3900 ಕೋಟಿ ರೂ. ಮೌಲ್ಯದ ನಾನಾ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಹಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಭಾರತದ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮವನ್ನಾಗಿ ಮೋಧೆರಾ ಘೋಷಿಸಿದ ಪ್ರಧಾನಿ 

“ಇಂದು ಮೋಧೆರಾ, ಮೆಹ್ಸಾನಾ ಮತ್ತು ಇಡೀ ಉತ್ತರ ಗುಜರಾತ್ ಅಭಿವೃದ್ಧಿ ವಲಯದಲ್ಲಿ ಹೊಸ ಶಕ್ತಿಯ ಉಗಮವನ್ನು ಗುರುತಿಸುತ್ತಿದೆ’’ 

“ಪ್ರಪಂಚದಲ್ಲಿ ಎಲ್ಲೆ ಸೌರಶಕ್ತಿಯ ಬಗ್ಗೆ ಚರ್ಚೆ ನಡೆದರೂ ಮೋಧೆರಾ ಹೆಸರು ಉಲ್ಲೇಖವಾಗುತ್ತದೆ’’ 

“ನಿಮಗೆ ಅಗತ್ಯವಿರುವಷ್ಟು ವಿದ್ಯುತ್ ಬಳಸಿಕೊಳ್ಳಿ ಮತ್ತು ಹೆಚ್ಚುವರಿ ವಿದ್ಯುತ್ ಸರ್ಕಾರಕ್ಕೆ ಮಾರಾಟ ಮಾಡಿ’’ 

“ಡಬ್ಬಲ್ ಎಂಜಿನ್ ಸರ್ಕಾರದಲ್ಲಿ ನರೇಂದ್ರ ಮತ್ತು ಭೂಪೇಂದ್ರ ಒಂದಾಗಿದ್ದಾರೆ’’ 

“ಸೂರ್ಯ ಹೇಗೆ ಬೆಳಕು ನೀಡಲು ತಾರತಮ್ಯ ಮಾಡುವುದಿಲ್ಲವೋ, ಹಾಗೆಯೇ ಅಭಿವೃದ್ಧಿಯ ಬೆಳಕು ಪ್ರತಿ ಮನೆ ಮತ್ತು ಗುಡಿಸಲು ತಲುಪುತ್ತಿದೆ’’ 

Posted On: 09 OCT 2022 10:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಹ್ಸಾನಾದ ಮೋಧೆರಾದಲ್ಲಿ ಸುಮಾರು 3900 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಾನಾ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಮೋಧೆರಾ ಗ್ರಾಮವನ್ನು ಭಾರತದ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ಘೋಷಿಸಿದರು. 

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ,  ಇಂದು ಮೋಧೆರಾ, ಮೆಹ್ಸಾನಾ ಮತ್ತು ಇಡೀ ಉತ್ತರ ಗುಜರಾತ್‌ಗೆ ಅಭಿವೃದ್ಧಿ  ವಲಯದಲ್ಲಿ ಹೊಸ ಶಕ್ತಿಯ ಉಗಮವಾಗಿದೆ ಎಂದು ಹೇಳಿದರು. ವಿದ್ಯುತ್ ನಿಂದ ಮತ್ತು ನೀರಿನವರೆಗೆ, ರೈಲ್ವೆಯಿಂದ ಮತ್ತು ರಸ್ತೆ ಮಾರ್ಗಗಳವರೆಗೆ, ಹೈನುಗಾರಿಕೆಯಿಂದ ಕೌಶಲ್ಯ ಅಭಿವೃದ್ಧಿಯವರೆಗೆ ಮತ್ತು ಆರೋಗ್ಯದವರೆಗೆ ಹಲವು ಯೋಜನೆಗಳನ್ನು ಉದ್ಘಾಟಿಸಲಾಗಿದೆ ಅಥವಾ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.  ಯೋಜನೆಗಳ ಪ್ರಯೋಜನಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಈ ಯೋಜನೆಗಳು ಈ ಪ್ರದೇಶದಲ್ಲಿ ಉದ್ಯೋಗದ ಮೂಲವಾಗಿ ಪರಿಣಮಿಸುತ್ತವೆ ಮತ್ತು ಪಶುಸಂಗೋಪನಾ ವಲಯದಲ್ಲಿ ರೈತರು ಮತ್ತು ಜನರ ಆದಾಯ ವೃದ್ಧಿಗೆ ಸಹಾಯ ಮಾಡುತ್ತದೆ ಮತ್ತು ರಾಜ್ಯದಲ್ಲಿ ಪಾರಂಪರಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ ಎಂದು ಹೇಳಿದರು. 

ಪ್ರಧಾನಮಂತ್ರಿ ಅವರು  ರಾಷ್ಟ್ರದ ಜನತೆಗೆ ಶರದ್ ಹುಣ್ಣಮೆ ಮತ್ತು ವಾಲ್ಮೀಕಿ ಜಯಂತಿಯ ಶುಭ ಕೋರಿದರು ಮತ್ತು ಮಹರ್ಷಿ ವಾಲ್ಮೀಕಿ ಅವರು ನಮಗೆ ಭಗವಾನ್ ರಾಮನ 'ಸಾಮರಸ್ಯದ' ಜೀವನ ಪರಿಚಯಿಸಿದ್ದಾರೆ ಮತ್ತು ನಮಗೆ ಸಮಾನತೆಯ ಪಾಠಗಳನ್ನು ಕಲಿಸಿದ್ದಾರೆ ಎಂದು ಹೇಳಿದರು. 

ಮೋಧೆರಾ ಮೊದಲು ಸೂರ್ಯ ಮಂದಿರಕ್ಕೆ ಹೆಸರುವಾಸಿಯಾಗಿತ್ತು, ಆದರೆ ಇದೀಗ ಸೂರ್ಯ ಮಂದಿರವು ಸೌರ್ ಗ್ರಾಮಕ್ಕೆ ಪ್ರೇರೇಣೆ ನೀಡಿದೆ ಮತ್ತು ಅದು ಪ್ರಪಂಚದ ಪರಿಸರ ಮತ್ತು ಇಂಧನ ನಕ್ಷೆಯಲ್ಲಿ ಸ್ಥಾನ ಪಡೆದಿದೆ ಎಂದು ಪ್ರಧಾನಿ ಹೇಳಿದರು. ಮೋಧೆರಾವನ್ನು ನೆಲಸಮ ಮಾಡಲು ಶತಮಾನಗಳ ಹಿಂದೆ ಹಲವು ಪ್ರಯತ್ನಗಳು ನಡೆದಿತ್ತು, ಆದರೀಗ ಮೋಧೆರಾ ಪ್ರಾಚೀನ ಮತ್ತು ಆಧುನಿಕತೆಯ ಮಿಶ್ರಣಕ್ಕೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. “ಪ್ರಪಂಚದಲ್ಲಿ ಎಲ್ಲೇ ಸೌರಶಕ್ತಿಯ ಬಗ್ಗೆ ಯಾವುದೇ ಚರ್ಚೆ ನಡೆದರೂ ಅಲ್ಲಿ ಮೋಧೆರಾ ಹೆಸರು ಸದಾ ಪ್ರಸ್ತಾಪವಾಗುತ್ತದೆ’’ ಎಂದು ಅವರು ಹೇಳಿದರು. ಸೌರಶಕ್ತಿ ಮತ್ತು ವಿದ್ಯುತ್ ವ್ಯಾಪ್ತಿಯ ಕ್ಷೇತ್ರದಲ್ಲಿನ ಯಶಸ್ಸಿಗೆ ಕೇಂದ್ರ ಮತ್ತು ರಾಜ್ಯದ ಸರ್ಕಾರಗಳ ಮೇಲೆ ಗುಜರಾತ್‌ನ ಜನರು ಇಟ್ಟಿರುವ ವಿಶ್ವಾಸ ಕಾರಣವಾಗಿದೆ ಎಂದು ಪ್ರಧಾನಮಂತ್ರಿ ಶ್ರೇಯವನ್ನು ಅವರಿಗೆ ನೀಡಿದರು. ಸಮರ್ಪಣೆ ಮತ್ತು ದೂರಗಾಮಿ ಚಿಂತನೆ ಮತ್ತು ಸ್ಪಷ್ಟ ಉದ್ದೇಶವಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳಿದರು. 

ಸೌರ ಶಕ್ತಿಯು ಮೋಧೆರಾದಲ್ಲಿ ಮನೆ ದೀಪಗಳು, ಕೃಷಿ ಅಗತ್ಯಗಳು ಮತ್ತು ವಾಹನಗಳಿಗೆ ವಿದ್ಯುತ್ ಶಕ್ತಿಯನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ಗಮನ ಸೆಳೆದರು. “21ನೇ ಶತಮಾನದ ಸ್ವಾವಲಂಬಿ ಭಾರತಕ್ಕಾಗಿ, ನಮ್ಮ ಇಂಧನ ಅಗತ್ಯಗಳಿಗೆ ಸಂಬಂಧಿಸಿದ ಇಂತಹ ಪ್ರಯತ್ನಗಳನ್ನು ನಾವು ಇನ್ನಷ್ಟು ಹೆಚ್ಚಿಸಬೇಕಾಗಿದೆ" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ವಿದ್ಯುತ್ ಉತ್ಪಾದಕರು ಮತ್ತು ಗ್ರಾಹಕರು ಜನರೇ ಆಗಿರುವ ಹಿನ್ನೆಲೆಯಲ್ಲಿ ತಾವು ಈ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. “ನಿಮಗೆ ಅಗತ್ಯವಿರುವ ವಿದ್ಯುತ್ ಅನ್ನು ಬಳಸಿ ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರಕ್ಕೆ ಮಾರಾಟ ಮಾಡಿ" ಎಂದು ಅವರು ಹೇಳಿದರು. ಇದು ವಿದ್ಯುತ್ ಶುಲ್ಕ ಪಾವತಿಸದಂತೆ ಮಾಡುತ್ತದೆ ಮತ್ತು ಹೆಚ್ಚುವರಿ ಆದಾಯ ತಂದುಕೊಡುತ್ತದೆ ಎಂದು ಅವರು ಹೇಳಿದರು. ಸರ್ಕಾರ ವಿದ್ಯುತ್ ಉತ್ಪಾದಿಸುತ್ತಿತ್ತು ಮತ್ತು ಗ್ರಾಹಕರು ಅದನ್ನು ಖರೀದಿಸುತ್ತಾರೆಂಬ ಪದ್ಧತಿ ಸಾಮಾನ್ಯವಾಗಿ ಚಾಲ್ತಿಯತ್ತು, ಆದರೆ ಇಂದು ಕೇಂದ್ರ ಸರ್ಕಾರವು ಜನರು ತಮ್ಮ ಮನೆಗಳಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಸ್ಥಾಪಿಸಲು ಮತ್ತು ರೈತರು ತಮ್ಮ ಹೊಲಗಳಲ್ಲಿ ನೀರಾವರಿಗಾಗಿ ಸೋಲಾರ್ ಪಂಪ್‌ಗಳನ್ನು ಅಳವಡಿಸಲು ಅವಕಾಶ ಮಾಡಿಕೊಡುವ ಮೂಲಕ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುವ ನೀತಿಗಳ ಪಾಲನೆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. 

ಸಂಕಷ್ಟದ ಸಮಯವನ್ನು ನೆನಪು ಮಾಡಿಕೊಂಡ ಪ್ರಧಾನಮಂತ್ರಿ, ವಿದ್ಯುತ್ ಇಲ್ಲದ ಕಾರಣ ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮಗಳಾಗುತ್ತಿದ್ದವು ಎಂದು ಹೇಳಿದರು. ಮೆಹ್ಸಾನಾದ ಜನರು ಗಣಿತ ಮತ್ತು ವಿಜ್ಞಾನದಲ್ಲಿ ಸ್ವಾಭಾವಿಕವಾಗಿ ಉತ್ತಮರು ಎಂದ ಪ್ರಧಾನಮಂತ್ರಿ “ನೀವು ಅಮೇರಿಕಾಕ್ಕೆ ಹೋದರೆ, ಅಲ್ಲಿ ಗಣಿತ ವಲಯದಲ್ಲಿ ಉತ್ತರ ಗುಜರಾತ್‌ನ ಪವಾಡವು ಕಂಡುಬರುತ್ತದೆ’’ ಎಂದು ಹೇಳಿದರು. “ನೀವು ಕಚ್‌ನಲ್ಲಿ ಎಲ್ಲೆ ಹೋದರೂ, ನೀವು ಮೆಹ್ಸಾನಾ ಜಿಲ್ಲೆಯ ಶಿಕ್ಷಕರನ್ನು ನೋಡುತ್ತೀರಿ’’ ಎಂದು ಅವರು ಹೇಳಿದರು. “ವಿದ್ಯುತ್ ಕೊರತೆಯು ಅವರ ಅರ್ಹತೆಯ ಎತ್ತರವನ್ನು ಸಾಧಿಸುವ ಸಾಮರ್ಥ್ಯಕ್ಕೆ ಅಡ್ಡಿಯಾಯಿತು’’ ಎಂದರು. ಕಳೆದ ಎರಡು ದಶಕಗಳಲ್ಲಿ ಸರ್ಕಾರದಲ್ಲಿ ಜನರು ವಿಶ್ವಾಸವಿಟ್ಟ ಕಾರಣ ಗುಜರಾತ್ ಭಾರತದಲ್ಲಿ ತನ್ನ ಕೀರ್ತಿ ಪತಾಕೆ ಹಾರಿಸಲು ಸಾಧ್ಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರು ತಾವು ಗುಜರಾತ್ ಮುಖ್ಯಮಂತ್ರಿಯಾಗಿ ನೇತೃತ್ವ ವಹಿಸಿದ್ದ ಕಾಲವನ್ನು ನೆನಪು ಮಾಡಿಕೊಂಡ ಶ್ರೀ ನರೇಂದ್ರ ಮೋದಿ, ಗುಜರಾತ್ ಹತ್ತು ವರ್ಷಗಳಲ್ಲಿ ಏಳು ವರ್ಷಗಳ ಕಾಲ ಬರಗಾಲದಿಂದ ತತ್ತರಿಸಿದ್ದರಿಂದ ರಾಜ್ಯ ಬಜೆಟ್‌ನ ಹೆಚ್ಚಿನ ಭಾಗವನ್ನು ನೀರಿಗೆ ಮೀಸಲಿಡಲಾಗಿತ್ತು ಎಂದು ಹೇಳಿದರು. “ಅದಕ್ಕಾಗಿಯೇ ನಾವು ಗುಜರಾತ್‌ನಲ್ಲಿನ ನೀರಿನ ಬಿಕ್ಕಟ್ಟಿನ ಮೇಲೆ ಕೇಂದ್ರೀಕರಿಸಿದ ಪಂಚಾಮೃತ ಯೋಜನೆ ಜಾರಿಗೊಳಿಸಿದೆವು’’ ಎಂದು ಅವರು ಹೇಳಿದರು. ಪ್ರತಿ ಗ್ರಾಮಕ್ಕೂ ಇಪ್ಪತ್ತನಾಲ್ಕು ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಉಂಜಾದಲ್ಲಿ ಪ್ರಾರಂಭವಾದ ಜ್ಯೋತಿಗ್ರಾಮ ಯೋಜನೆಯ ಯಶಸ್ಸನ್ನು ಮತ್ತು ಆ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರವು ಒಂದು ಸಾವಿರ ದಿನಗಳನ್ನು ನಿಗದಿಪಡಿಸಿದ್ದನ್ನು ಪ್ರಧಾನಿ ಸ್ಮರಿಸಿದರು. 

ಸುಜಲಾಂ ಸುಫಲಾಂ ಯೋಜನೆ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಉತ್ತರ ಗುಜರಾತ್‌ನ ಹೊಲಗಳಿಗೆ ಇಂದು ನೀರುಣಿಸುವ ಸುಜಲಾಂ ಸುಫಲಾಂ ನಾಲೆಗಳಿಗಾಗಿ ತಮ್ಮ ಭೂಮಿ ಬಿಟ್ಟು ಕೊಟ್ಟ ಭೂಮಿಯ ರೈತರಿಗೆ ಅಪಾರ ಕೃತಜ್ಞತೆ ಸಲ್ಲಿಸಿದರು. ಜಲ ಸಂಬಂಧಿ ಯೋಜನೆಗಳ ಉದ್ಘಾಟನೆಯಿಂದಾಗಿ ಇಂದು ಕುಟುಂಬಗಳು, ತಾಯಂದಿರು ಮತ್ತು ಸಹೋದರಿಯರ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಪ್ರಧಾನಿ ಹೇಳಿದರು. 

ಕಳೆದ ಎರಡು ದಶಕಗಳಲ್ಲಿ ಸರ್ಕಾರವು ಸಂಪರ್ಕಕ್ಕೆ ಒತ್ತು ನೀಡಿದೆ ಮತ್ತು ಡಬಲ್ ಇಂಜಿನ್ ಸರ್ಕಾರದೊಂದಿಗೆ ನರೇಂದ್ರ ಮತ್ತು ಭೂಪೇಂದ್ರ ಒಂದಾಗಿದ್ದಾರೆ ಎಂದು ಪ್ರಧಾನಿ ಗಮನ ಸೆಳೆದರು. 1930ರಲ್ಲಿ ಬ್ರಿಟಿಷರು ಮಹ್ಸಾನಾ-ಅಂಬಾಜಿ-ತರಂಗ-ಅಬುರೋಡ್ ರೈಲು ಮಾರ್ಗದ ಅಭಿವೃದ್ಧಿಯ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು, ಆದರೆ ನಂತರದ ಸರ್ಕಾರಗಳು ಅತ್ತ ಗಮನ ಹರಿಸಲಿಲ್ಲ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದರು. ”ನಾವು ಎಲ್ಲವನ್ನೂ ಪರಿಗಣಿಸಿದ್ದೇವೆ, ಎಲ್ಲಾ ಯೋಜನೆಗಳನ್ನು ಮಾಡಿದ್ದೇವೆ ಮತ್ತು ಅದರಿಂದ ಆಗಲಿರುವ ಆರ್ಥಿಕ ಏಳಿಗೆಯನ್ನು ನೀವು ಊಹಿಸಬಹುದು” ಎಂದು ಅವರು ಹೇಳಿದರು. 

ಸಬ್ಸಿಡಿ ದರದಲ್ಲಿ ಔಷಧಿಗಳನ್ನು ಒದಗಿಸುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಯಶಸ್ಸಿನ ಬಗ್ಗೆ ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. 1,000 ರೂ.ಆಗುತ್ತಿದ್ದ ಔಷಧಿಗಳ ಖರೀದಿ ವೆಚ್ಚ ಇದೀಗ 100-200 ರೂ.ಗಳಿಗೆ ಇಳಿಕೆಯಾಗಿದೆ, ಈ ಜನೌಷಧಿ ಕೇಂದ್ರಗಳಿಂದ ಪ್ರತಿಯೊಬ್ಬರೂ ತಮ್ಮ ಔಷಧ ಖರೀದಿಸಬೇಕು ಎಂದು ಶ್ರೀ ನರೇಂದ್ರ ಮೋದಿ ಆಗ್ರಹಿಸಿದರು. ಪ್ರವಾಸೋದ್ಯಮದ ಕುರಿತು ಮಾತನಾಡಿದ ಪ್ರಧಾನಿ, ಉದ್ಯಮವು ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗದ ಮೂಲವಾಗಿದೆ ಎಂದು ಹೇಳಿದರು. "ವಡ್ ನಗರದಲ್ಲಿ ನಡೆಸಲಾದ ಉತ್ಖನನವನ್ನು ನೋಡಿ!" ಎಂದು ಆಶ್ಚರ್ಯ ವ್ಯಕ್ತಪಡಿಸಿದ ನರೇಂದ್ರ ಮೋದಿ  “ಸಾವಿರಾರು ವರ್ಷಗಳಷ್ಟು ಹಳೆಯ ಅವಶೇಷಗಳು ಪತ್ತೆಯಾಗಿವೆ" ಎಂದರು. 

ಕಳೆದ ಎರಡು ದಶಕಗಳಲ್ಲಿ ಗುಜರಾತ್‌ನ ದೇವಾಲಯಗಳು ಮತ್ತು ಶಕ್ತಿಪೀಠಗಳನ್ನು ಪುನರ್ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. “ಸೋಮನಾಥ, ಚೋತಿಲಾ ಮತ್ತು ಪವಗಢ್ ದಲ್ಲಿನ ಪರಿಸ್ಥಿತಿ ಸುಧಾರಿಸಿರುವುದು ಇದಕ್ಕೆ ಉದಾಹರಣೆಯಾಗಿದೆ’’ ಎಂದ ಅವರು "ನಾನು ಬರುವವರೆಗೆ ಪವಗಢವು 500 ವರ್ಷಗಳ ಕಾಲ ತನ್ನ ಧ್ವಜವನ್ನು ಹಾರಿಸಲಿಲ್ಲ, 500 ವರ್ಷಗಳ ನಂತರ ನಾನು ಧ್ವಜಾರೋಹಣ ಮಾಡಿದೆ’’ ಎಂದು ಹೇಳಿದರು. 

ಭಾಷಣ ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿ ಅವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್,  ಔರ್ ಸಬ್ ಕಾ ಪ್ರಯಾಸ್’ ಎಂಬ ಮಂತ್ರವು ಡಬಲ್ ಇಂಜಿನ್ ಸರ್ಕಾರದ ಭದ್ರ ಬುನಾದಿಯಾಗಿದೆ ಎಂದು ಪ್ರಸ್ತಾಪಿಸಿದರು. “ಸೂರ್ಯ ಹೇಗೆ ತಾರತಮ್ಯ ಮಾಡದ ಬೆಳಕು ನೀಡುತ್ತಾನೆಯೋ ಅಂತೆಯೇ  ಅಭಿವೃದ್ಧಿಯ ಬೆಳಕು ಪ್ರತಿ ಮನೆ ಮತ್ತು ಗುಡಿಸಲುಗಳನ್ನು ತಲುಪುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು. 

ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಸಂಸದರಾದ ಶ್ರೀ ಸಿ.ಆರ್ ಪಾಟೀಲ್, ಶ್ರೀ ಭರಸಿನ್ಹಾ ಧಾಬಿ, ಶ್ರೀಮತಿ ಶಾರದಾ ಬೆನ್ ಪಟೇಲ್ ಮತ್ತು ಜುಗನ್ ಜಿ  ಲೋಖಂಡವಾಲಾ ಮತ್ತಿತರರು ಉಪಸ್ಥಿತರಿದ್ದರು.

 ಹಿನ್ನೆಲೆ

ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದ ಯೋಜನೆಗಳಲ್ಲಿ ಅಹಮದಾಬಾದ್-ಮೆಹ್ಸಾನಾ ಗೇಜ್ ಪರಿವರ್ತನೆ ಯೋಜನೆಯ ಸಾಬರಮತಿ-ಜಗುಡಾನ್ ವಿಭಾಗದ ಗೇಜ್ ಪರಿವರ್ತನೆ; ಒಎನ್ ಜಿಸಿ ಯ ನಂದಸನ್ ಭೂವೈಜ್ಞಾನಿಕ ತೈಲ ಉತ್ಪಾದನಾ ಯೋಜನೆ; ಖೇರವಾದಿಂದ ಶಿನ್ ಗೋಡ ಕೆರೆಯವರೆಗೆ ಸುಜಲಾಂ ಸುಫಲಾಂ ನಾಲೆ; ಧರೋಯ್ ಅಣೆಕಟ್ಟು ಆಧಾರಿತ ವಡ್ ನಗರ ಖೇರಾಲು ಮತ್ತು ಧರೋಯ್ ಸಮೂಹ ಸುಧಾರಣಾ ಯೋಜನೆ; ಬೆಚ್ರಾಜಿ ಮೋಧೆರಾ-ಚನಾಸ್ಮಾ ರಾಜ್ಯ ಹೆದ್ದಾರಿಯ ಒಂದು ಭಾಗದ ಚತುಷ್ಪಥ ಯೋಜನೆ; ಉಂಜಾ-ದಾಸಜ್ ಉಪೇರಾ ಲಾದೋಲ್ (ಭಂಖರ್ ಸಂಪರ್ಕ ರಸ್ತೆ) ವಿಭಾಗ ವಿಸ್ತರಣೆ ಯೋಜನೆ; ಸರ್ದಾರ್ ಪಟೇಲ್ ಸಾರ್ವಜನಿಕ ಆಡಳಿತ ಕೇಂದ್ರ (ಎಸ್ ಪಿಐಪಿಎ)ದ ಮೆಹ್ಸಾನದ ಪ್ರಾದೇಶಿಕ ತರಬೇತಿ ಕೇಂದ್ರದ ಹೊಸ ಕಟ್ಟಡ; ಮತ್ತು ಮೋಧೆರಾದ ಸೂರ್ಯ ದೇಗುಲದಲ್ಲಿ ಪ್ರೊಜೆಕ್ಷನ್ ಮ್ಯಾಪಿಂಗ್  ಮತ್ತಿತರ ಯೋಜನೆಗಳು ಸೇರಿವೆ. 

ಪಟಾನ್‌ನಿಂದ ಗೊಜಾರಿಯಾದವರೆಗೆ ರಾಷ್ಟ್ರೀಯ ಹೆದ್ದಾರಿ-68ರ ಒಂದು ವಿಭಾಗದ ಚತುಷ್ಪಥ ಯೋಜನೆ; ಮೆಹ್ಸಾನಾ ಜಿಲ್ಲೆಯ ಜೋತಾನಾ ತಾಲೂಕಿನ ಚಲಸನ್ ಗ್ರಾಮದಲ್ಲಿ ನೀರಿನ ಸಂಸ್ಕರಣಾ ಘಟಕ; ದೂಧಸಾಗರ ಡೈರಿಯಲ್ಲಿ ಹೊಸ ಸ್ವಯಂಚಾಲಿತ ಹಾಲಿನ ಪುಡಿ ಘಟಕ ಮತ್ತು ಯುಎಚ್ ಟಿ ಹಾಲಿನ  ಘಟಕ; ಮೆಹ್ಸಾನಾದ ಜನರಲ್ ಆಸ್ಪತ್ರೆಯ ನವೀಕರಣ ಮತ್ತು ಪುನರ್ ನಿರ್ಮಾಣ; ಮತ್ತು ಮೆಹ್ಸಾನಾ ಮತ್ತು ಉತ್ತರ ಗುಜರಾತ್‌ನ ಇತರ ಜಿಲ್ಲೆಗಳಿಗೆ ಪರಿಷ್ಕರಿಸಿದ ವಿತರಣಾ ವಲಯ ಯೋಜನೆ (ಆರ್ ಡಿಎಸ್ ಎಸ್) ಮತ್ತಿತರ ಹಲವು ಯೋಜನೆಗಳಿಗೆ ಪ್ರಧಾನಮಂತ್ರಿ ಇದೇ ವೇಳೆ ಶಂಕುಸ್ಥಾಪನೆಯನ್ನು ನೆರವೇರಿಸಿದರು. 

ಪ್ರಧಾನಮಂತ್ರಿ ಅವರ ಮೋಧೆರಾ ಗ್ರಾಮವನ್ನು ಭಾರತದ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮವೆಂದು ಘೋಷಿಸಿದರು; ಈ ಮೊದಲ-ರೀತಿಯ ಯೋಜನೆಯು ಸೂರ್ಯ-ದೇವಾಲಯದ ಪಟ್ಟಣವಾದ ಮೋಧೆರಾವನ್ನು ಸೌರಶಕ್ತಿ ಗ್ರಾಮವನ್ನಾಗಿ ಮಾಡುವಚ ಪ್ರಧಾನಮಂತ್ರಿ ಅವರ ದೂರದೃಷ್ಟಿ ಸಾಕಾರಗೊಳಿಸಿದೆ. ಇದು ನೆಲಮಟ್ಟದಿಂದ ಸೌರ ವಿದ್ಯುತ್ ಸ್ಥಾವರ ಮತ್ತು ವಸತಿ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ 1300 ಕ್ಕೂ ಅಧಿಕ ಮೇಲ್ಛಾವಣಿಯ ಸೌರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದನ್ನು ಒಳಗೊಂಡಿತ್ತು, ಎಲ್ಲವನ್ನೂ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆ (ಬಿಇಎಸ್ ಎಸ್)ಯೊಂದಿಗೆ ಸಂಯೋಜಿಸಲಾಗಿದೆ. ಭಾರತದ ನವೀಕರಿಸಬಹುದಾದ ಸಾಮರ್ಥ್ಯವು ತಳಮಟ್ಟದಲ್ಲಿ ಹೇಗೆ ಜನರನ್ನು ಸಬಲೀಕರಣಗೊಳಿಸ ಬಹುದು ಎಂಬುದನ್ನು ಈ ಯೋಜನೆಯು ತೋರಿಸುತ್ತದೆ.

*****



(Release ID: 1866541) Visitor Counter : 182