ಪ್ರಧಾನ ಮಂತ್ರಿಯವರ ಕಛೇರಿ

ಅಹಮದಾಬಾದ್‌ನಲ್ಲಿ ನವಭಾರತ್ ಸಾಹಿತ್ಯ ಮಂದಿರವು ಆಯೋಜಿಸಿದ್ದ ‘ಕಲಾಂ ನೋ ಕಾರ್ನಿವಲ್’ ಪುಸ್ತಕ ಮೇಳದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದ  ಪ್ರಧಾನಮಂತ್ರಿ  


"ಪುಸ್ತಕ ಮೇಳವು ಹೊಸ ಮತ್ತು ಯುವ ಬರಹಗಾರರಿಗೆ ವೇದಿಕೆಯಾಗಿದೆ ಮತ್ತು ಇದು ಗುಜರಾತ್‌ನ ಸಾಹಿತ್ಯ ಮತ್ತು ಜ್ಞಾನವನ್ನು ವಿಸ್ತರಿಸಲು ಸಹಾಯ ಮಾಡುತ್ತಿದೆ"

"ಪುಸ್ತಕ ಮತ್ತು ಪಠ್ಯಗಳೆರಡೂ ನಮ್ಮ ವಿದ್ಯಾ ಉಪಾಸನೆಯ ಮೂಲ ಅಂಶಗಳಾಗಿವೆ"

"ಸ್ವಾತಂತ್ರ್ಯ ಹೋರಾಟದ ಮರೆತುಹೋದ ಅಧ್ಯಾಯಗಳ ವೈಭವವನ್ನು ನಾವು ದೇಶದ ಮುಂದಿಡುತ್ತಿದ್ದೇವೆ"

"ತಂತ್ರಜ್ಞಾನವು ನಿಸ್ಸಂದೇಹವಾಗಿ ನಮಗೆ ಮಾಹಿತಿಯ ಪ್ರಮುಖ ಮೂಲವಾಗಿದೆ, ಆದರೆ ಇದು ಪುಸ್ತಕಗಳನ್ನು, ಪುಸ್ತಕಗಳ ಅಧ್ಯಯನವನ್ನು ಬದಲಿಸುವ ಮಾರ್ಗವಲ್ಲ, "

"ಮಾಹಿತಿಯು ನಮ್ಮ ಮನಸ್ಸಿನಲ್ಲಿರುವಾಗ, ಮೆದುಳು ಆ ಮಾಹಿತಿಯನ್ನು ಆಳವಾಗಿ ಪ್ರಕ್ರಿಯೆಗೊಳಿಸುತ್ತದೆ ಮತ್ತು ಅದು ಹೊಸ ಆಯಾಮಗಳಿಗೆ ಕಾರಣವಾಗುತ್ತದೆ. ಇದು ಹೊಸ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ದಾರಿಯಾಗುತ್ತದೆ. ಇದರಲ್ಲಿ ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರಾಗುತ್ತವೆ”

Posted On: 08 SEP 2022 5:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ನವಭಾರತ್ ಸಾಹಿತ್ಯ ಮಂದಿರ ಆಯೋಜಿಸಿದ್ದ ‘ಕಲಾಂ ನೋ ಕಾರ್ನಿವಲ್’ ಪುಸ್ತಕ ಮೇಳದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ‘ಕಲಾಂ ನೋ ಕಾರ್ನಿವಲ್’ ನ ಭವ್ಯ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು. ಅಹಮದಾಬಾದ್‌ನಲ್ಲಿ 'ನವ ಭಾರತ್ ಸಾಹಿತ್ಯ ಮಂದಿರ' ಆರಂಭಿಸಿದ ಪುಸ್ತಕ ಮೇಳದ ಸಂಪ್ರದಾಯವು ವರ್ಷದಿಂದ ವರ್ಷಕ್ಕೆ ಶ್ರೀಮಂತವಾಗುತ್ತಿರುವುದಕ್ಕೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಪುಸ್ತಕ ಮೇಳವು ಹೊಸ ಮತ್ತು ಯುವ ಬರಹಗಾರರಿಗೆ ವೇದಿಕೆಯಾಗಿದೆ ಮತ್ತು ಇದು ಗುಜರಾತ್‌ನ ಸಾಹಿತ್ಯ ಮತ್ತು ಜ್ಞಾನವನ್ನು ವಿಸ್ತರಿಸಲು ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಶ್ರೀಮಂತ ಸಂಪ್ರದಾಯಕ್ಕಾಗಿ ನವಭಾರತ ಸಾಹಿತ್ಯ ಮಂದಿರ ಮತ್ತು ಅದರ ಎಲ್ಲ ಸದಸ್ಯರನ್ನು ಪ್ರಧಾನಿಯವರು ಅಭಿನಂದಿಸಿದರು.

'ಕಲಾಂ ನೋ ಕಾರ್ನಿವಲ್' ಹಿಂದಿ, ಇಂಗ್ಲಿಷ್ ಮತ್ತು ಗುಜರಾತಿ ಭಾಷೆಗಳ ಪುಸ್ತಕಗಳ ಬೃಹತ್ ಸಮಾವೇಶವಾಗಿದೆ ಎಂದು ಪ್ರಧಾನಿ ಹೇಳಿದರು. ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯವು 'ವಂಚೆ ಗುಜರಾತ್' ಅಭಿಯಾನವನ್ನು ಆರಂಭಿಸಿತ್ತು ಮತ್ತು ಇಂದು 'ಕಲಾಂ ನೋ ಕಾರ್ನೀವಲ್' ನಂತಹ ಅಭಿಯಾನಗಳು ಗುಜರಾತ್‌ನ ಆ ಸಂಕಲ್ಪವನ್ನು ಮುಂದುವರೆಸುತ್ತಿವೆ ಶ್ರೀ ಮೋದಿ ಹೇಳಿದರು. ಪುಸ್ತಕಗಳು ಮತ್ತು ಪಠ್ಯಗಳೆರಡೂ ನಮ್ಮ ವಿದ್ಯಾ ಉಪಾಸನೆಯ ಮೂಲ ಅಂಶಗಳಾಗಿವೆ ಎಂದರು. ಗುಜರಾತಿನಲ್ಲಿ ಗ್ರಂಥಾಲಯಗಳ ಅತ್ಯಂತ ಹಳೆಯ ಸಂಪ್ರದಾಯವಿದೆ ಎಂದ ಪ್ರಧಾನಿಯವರು, ತಮ್ಮ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿದ ವಡೋದರಾ ಮಹಾರಾಜ ಸಯಾಜಿರಾವ್ ಗಾಯಕ್ವಾಡ್, 'ಭಗವತ್ ಗೋಮಂಡಲ' ಎಂಬ ಬೃಹತ್ ನಿಘಂಟನ್ನು ನೀಡಿದ ಗೊಂಡಲ್‌ನ ಮಹಾರಾಜ ಭಗವತ್ ಸಿಂಗ್ ಮತ್ತು 'ನರ್ಮ್ ಕೋಶ'ವನ್ನು ಸಂಪಾದಿಸಿದ ವೀರ ಕವಿ ನರ್ಮದ್ ಅವರ ಕೊಡುಗೆಗಳನ್ನು ಸ್ಮರಿಸಿದರು. ಗುಜರಾತ್ ಇತಿಹಾಸವು ಪುಸ್ತಕಗಳು, ಲೇಖಕರು, ಸಾಹಿತ್ಯ ರಚನೆಯ ವಿಷಯದಲ್ಲಿ ಬಹಳ ಶ್ರೀಮಂತವಾಗಿದೆ. ಇಂತಹ ಪುಸ್ತಕ ಮೇಳಗಳು ಗುಜರಾತಿನ ಮೂಲೆ ಮೂಲೆಯಲ್ಲಿರುವ ಜನರನ್ನು, ಅದರಲ್ಲೂ ವಿಶೇಷವಾಗಿ ಯುವಜನರನ್ನು ತಲುಪಿ, ಅವರು ಶ್ರೀಮಂತ ಇತಿಹಾಸದ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಮತ್ತು ಸ್ಫೂರ್ತಿ ಪಡೆಯುವಂತಾಗಬೇಕೆಂದು ಅವರು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪುಸ್ತಕ ಮೇಳ ನಡೆಯುತ್ತಿರುವ ಬಗ್ಗೆ ಪ್ರಧಾನಿ ಎಲ್ಲರ ಗಮನ ಸೆಳೆದರು. ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಪುನರುಜ್ಜೀವನಗೊಳಿಸುವುದು ಅಮೃತ ಮಹೋತ್ಸವದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯ ಹೋರಾಟದ ಮರೆತುಹೋದ ಅಧ್ಯಾಯಗಳ ವೈಭವವನ್ನು ನಾವು ದೇಶದ ಮುಂದೆ ತರುತ್ತಿದ್ದೇವೆ. 'ಕಲಾಂ ನೋ ಕಾರ್ನಿವಲ್' ನಂತಹ ಕಾರ್ಯಕ್ರಮಗಳು ದೇಶದಲ್ಲಿ ಈ ಅಭಿಯಾನಕ್ಕೆ ಉತ್ತೇಜನ ನೀಡಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಪುಸ್ತಕಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಬೇಕು ಮತ್ತು ಅಂತಹ ಲೇಖಕರಿಗೆ ಗಟ್ಟಿಯಾದ ವೇದಿಕೆಯನ್ನು ಒದಗಿಸಬೇಕು ಎಂದು ಅವರು ಒತ್ತಿ ಹೇಳಿದರು. ಈ ಮೇಳವು ಈ ದಿಕ್ಕಿನಲ್ಲಿ ಸಕಾರಾತ್ಮಕ ಮಾಧ್ಯಮವಾಗುವ ವಿಶ್ವಾಸ ನನಗಿದೆ ಎಂದು ಪ್ರಧಾನಿ ಹೇಳಿದರು.

ಧರ್ಮಗ್ರಂಥಗಳು, ಪಠ್ಯಗಳು ಮತ್ತು ಪುಸ್ತಕಗಳು ಪರಿಣಾಮಕಾರಿಯಾಗಿ ಮತ್ತು ಉಪಯುಕ್ತವಾಗಿ ಉಳಿಯಲು ಮತ್ತೆ ಮತ್ತೆ ಅಧ್ಯಯನ ಮಾಡಬೇಕು ಎಂದು ಪ್ರಧಾನಿ ಪುನರುಚ್ಚರಿಸಿದರು. ಜನರು ಅಂತರ್ಜಾಲದ ಸಹಾಯವನ್ನು ಪಡೆಯುತ್ತಿರುವ ಇಂದಿನ ಯುಗದಲ್ಲಿ ಇದು ಇನ್ನಷ್ಟು ಮುಖ್ಯವಾಗಿದೆ ಎಂದು ಅವರು ವಿವರಿಸಿದರು. ತಂತ್ರಜ್ಞಾನವು ನಿಸ್ಸಂದೇಹವಾಗಿ ನಮಗೆ ಮಾಹಿತಿಯ ಪ್ರಮುಖ ಮೂಲವಾಗಿದೆ, ಆದರೆ ಇದು ಪುಸ್ತಕಗಳನ್ನು, ಪುಸ್ತಕಗಳ ಅಧ್ಯಯನವನ್ನು ಬದಲಿಸುವ ಮಾರ್ಗವಲ್ಲ, ಮಾಹಿತಿಯು ನಮ್ಮ ಮನಸ್ಸಿನಲ್ಲಿರುವಾಗ, ಮೆದುಳು ಆ ಮಾಹಿತಿಯನ್ನು ಆಳವಾಗಿ ಸಂಸ್ಕರಿಸುತ್ತದೆ ಮತ್ತು ಅದು ಹೊಸ ಆಯಾಮಗಳಿಗೆ ಕಾರಣವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಇದು ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ದಾರಿ ತೆರೆಯುತ್ತದೆ. ಇದರಲ್ಲಿ ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರಾಗುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು.

ಪುಸ್ತಕಗಳು ಭೌತಿಕ ರೂಪದಲ್ಲಿರಲಿ ಅಥವಾ ಡಿಜಿಟಲ್ ರೂಪದಲ್ಲಿರಲಿ! ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಪುಸ್ತಕಗಳನ್ನು ಓದುವ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ ಎಂದು ಒತ್ತಿ ಹೇಳಿದರು. ಇಂತಹ ಮೇಳಗಳು ಯುವಜನರಲ್ಲಿ ಪುಸ್ತಕಗಳ ಬಗ್ಗೆ ಆಕರ್ಷಣೆಯನ್ನು ಸೃಷ್ಟಿಸಲು ಮತ್ತು ಅವುಗಳ ಮಹತ್ವವನ್ನು ಅರ್ಥಮಾಡಿಸಲು ಸಹಾಯ ಮಾಡುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ಹೇಳಿದರು.

*****

 



(Release ID: 1858380) Visitor Counter : 98