ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ


ಮಹಿಳೆಯರು ಏನನ್ನು ಬೇಕಾದರೂ ಮರೆಯಬಲ್ಲರು, ಆದರೆ ತಮ್ಮ ಘನತೆಗೆ ಮಾಡಿದ ಅಪಮಾನವನ್ನು ಅವರು ಎಂದಿಗೂ ಮರೆಯುವುದಿಲ್ಲ: ಪ್ರಧಾನಮಂತ್ರಿ

ಸಂಸತ್ತಿನಲ್ಲಿ ʻನಾರಿ ಶಕ್ತಿ ವಂದನ್ ಅಧಿನಿಯಮʼ ತಿದ್ದುಪಡಿಯನ್ನು ವಿರೋಧಿಸಿದ ಪಕ್ಷಗಳು ಮಹಿಳಾ ಶಕ್ತಿಯನ್ನು ಲಘುವಾಗಿ ಪರಿಗಣಿಸುತ್ತಿವೆ: ಪ್ರಧಾನಮಂತ್ರಿ

ʻನಾರಿ ಶಕ್ತಿ ವಂದನ್ ಅಧಿನಿಯಮ ತಿದ್ದುಪಡಿʼಯು 21ನೇ ಶತಮಾನದ ಮಹಿಳೆಯರನ್ನು ಸಬಲೀಕರಣಗೊಳಿಸುವ 'ಮಹಾಯಜ್ಞ'ವಾಗಿದೆ: ಪ್ರಧಾನಮಂತ್ರಿ

ವಂಶಪಾರಂಪರ್ಯ ರಾಜಕೀಯ ಪಕ್ಷಗಳು ʻನಾರಿ ಶಕ್ತಿ ವಂದನ್ ಅಧಿನಿಯಮʼವನ್ನು ವಿರೋಧಿಸಲು ಒಂದು ಪ್ರಮುಖ ಕಾರಣವೆಂದರೆ ಅವರ ಭಯ:  ಪ್ರಧಾನಮಂತ್ರಿ

ದೇಶದ ಶೇ.100ರಷ್ಟು ನಾರಿ ಶಕ್ತಿಯ ಆಶೀರ್ವಾದ ನಮ್ಮೊಂದಿಗಿದೆ: ಪ್ರಧಾನಮಂತ್ರಿ

ಮಹಿಳಾ ಮೀಸಲಾತಿಗೆ ಅಡ್ಡಿಯಾಗುವ ಪ್ರತಿಯೊಂದು ಅಡೆತಡೆಗಳನ್ನು ನಾವು ತೊಡೆದುಹಾಕುತ್ತೇವೆ: ಪ್ರಧಾನಮಂತ್ರಿ

ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡ ಈ ಜನರು ಮೇಜುಗಳನ್ನು ಬಡಿದು ಸಂಭ್ರಮಿಸಿದರು; ಇದು ಮಹಿಳೆಯರ ಘನತೆಯ ಮೇಲೆ, ಅವರ ಸ್ವಾಭಿಮಾನದ ಮೇಲಿನ ದಾಳಿ: ಪ್ರಧಾನಮಂತ್ರಿ

ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮೂಲಕ ಪ್ರತಿಪಕ್ಷಗಳು ಎಸಗಿದ ಪಾಪಕ್ಕೆ ಶಿಕ್ಷೆಯಾಗಲಿದೆ: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 18 APR 2026 11:39PM by PIB Bengaluru

ಭಾರತದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಅತ್ಯಂತ ನಿರ್ಣಾಯಕ ವಿಷಯದ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಹಿಳೆಯರ ಪ್ರಗತಿ ಸ್ಥಗಿತಗೊಂಡಿರುವ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರು. ಸರ್ಕಾರದ ಅತ್ಯಂತ ಮತ್ತು ಪ್ರಾಮಾಣಿಕ ಪ್ರಯತ್ನಗಳ ಹೊರತಾಗಿಯೂ, `ನಾರಿ ಶಕ್ತಿ ವಂದನ್ ಅಧಿನಿಯಮ ತಿದ್ದುಪಡಿ’ಯು ಅಂಗೀಕಾರಗೊಳ್ಳಲು ವಿಫಲವಾಯಿತು, ಇದು ಮಹಿಳಾ ಸಮುದಾಯದ ನ್ಯಾಯಸಮ್ಮತ ಕನಸುಗಳನ್ನು ಅಕ್ಷರಶಃ ನುಚ್ಚುನೂರು ಮಾಡಿದೆ ಎಂದು ಅವರು ಹೇಳಿದರು. "ಈ ದುರದೃಷ್ಟಕರ ಫಲಿತಾಂಶಕ್ಕಾಗಿ ನಾನು ರಾಷ್ಟ್ರದ ಎಲ್ಲಾ ತಾಯಂದಿರು ಮತ್ತು ಸಹೋದರಿಯರಲ್ಲಿ ಕ್ಷಮೆಯಾಚಿಸುತ್ತೇನೆ," ಎಂದು ಶ್ರೀ ಮೋದಿ ಹೇಳಿದರು.

ರಾಷ್ಟ್ರೀಯ ಹಿತಾಸಕ್ತಿಯು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿ ಉಳಿದಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ದೇಶದ ಕಲ್ಯಾಣಕ್ಕಿಂತ ಪಕ್ಷದ ಸ್ವಂತ ಲಾಭಗಳಿಗೆ ಆದ್ಯತೆ ನೀಡುತ್ತಿರುವ ನಿರ್ದಿಷ್ಟ ರಾಜಕೀಯ ಬಣಗಳನ್ನು ತೀವ್ರವಾಗಿ ಟೀಕಿಸಿದರು.

ದೇಶಾದ್ಯಂತ ಕಂಡುಬಂದಿರುವ ತೀವ್ರ ನಿರಾಶೆಯ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಮಸೂದೆಯ ಸೋಲಿನಿಂದ ಮಹಿಳೆಯರ ಸ್ವಾಭಿಮಾನಕ್ಕೆ ನೇರ ಪೆಟ್ಟು ಬಿದ್ದಿದೆ, ಇದು ಮಹಿಳಾ ಮತದಾರರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವ ಅವಮಾನವಾಗಿದೆ ಎಂದು ಗಮನಸೆಳೆದರು. "ಮಹಿಳೆಯರು ಎಲ್ಲವನ್ನೂ ಮರೆತುಬಿಡಬಹುದು, ಆದರೆ ಅವರು ತಮ್ಮ ಘನತೆಗೆ, ತಮ್ಮ ಹೆಮ್ಮೆಗೆ ಮಾಡಿದ ಅವಮಾನವನ್ನು ಎಂದಿಗೂ ಮರೆಯುವುದಿಲ್ಲ" ಎಂದು ಶ್ರೀ ಮೋದಿ ದೃಢವಾಗಿ ಹೇಳಿದರು.

ದುರುದ್ದೇಶಪೂರಿತ ಉದ್ದೇಶಗಳ ಬಗ್ಗೆ ಭಾರತದ ಮಹಿಳೆಯರಿಗೆ ಸಾಕಷ್ಟು ಅರಿವಿದೆ ಮತ್ತು ಮಹಿಳೆಯರು ಭವಿಷ್ಯದಲ್ಲಿ ಅಪರಾಧಿ ರಾಜಕಾರಣಿಗಳನ್ನು ಖಂಡಿತವಾಗಿಯೂ ಇದಕ್ಕೆ ಹೊಣೆಗಾರರನ್ನಾಗಿ ಮಾಡುತ್ತಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ʻನಾರಿ ಶಕ್ತಿ ವಂದನ್ ಅಧಿನಿಯʼಮ ತಿದ್ದುಪಡಿಯ ಪರಿವರ್ತನಾತ್ಮಕ ದೃಷ್ಟಿಕೋನವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಈ ಶಾಸನವು ದೀರ್ಘಕಾಲದಿಂದ ಬಾಕಿ ಉಳಿದಿರುವ ಹಕ್ಕುಗಳನ್ನು ನೀಡಲು ಮತ್ತು ಅರ್ಧದಷ್ಟು ಜನಸಂಖ್ಯೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾದ ಒಂದು ಭವ್ಯ ಪ್ರಯತ್ನವಾಗಿದೆ ಎಂದು ವಿವರಿಸಿದರು. ಈ ವಿಧೇಯಕವು ವ್ಯವಸ್ಥಿತ ಅಡೆತಡೆಗಳನ್ನು ತೆಗೆದುಹಾಕುವ ಮತ್ತು ಅವುಗಳ ಗಾತ್ರ ಅಥವಾ ಭೌಗೋಳಿಕತೆಯನ್ನು ಲೆಕ್ಕಿಸದೆ ಎಲ್ಲಾ ರಾಜ್ಯಗಳ ರಾಜಕೀಯ ಅಧಿಕಾರವನ್ನು ಸಮಾನವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ವಿವರಿಸಿದರು. "ಈ ತಿದ್ದುಪಡಿಯು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹಿಳೆಯರನ್ನು ಸಮಾನ ಸಹ-ಪ್ರಯಾಣಿಕರನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನವಾಗಿದೆ," ಎಂದು ಶ್ರೀ ಮೋದಿ ಹೇಳಿದರು.

ಭಾರತದ ನಾಗರಿಕರು ಈ ಕೊಳಕು ರಾಜಕೀಯ ಮಾದರಿಯನ್ನು ಸಂಪೂರ್ಣವಾಗಿ ಗುರುತಿಸಿದ್ದಾರೆ ಮತ್ತು ಅದರ ಮೂಲ ಉದ್ದೇಶಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲು ಬಳಸುವ ಕೊಳಕು ರಾಜಕೀಯ ಮಾದರಿಯನ್ನು ದೇಶವು ಈಗ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ." ಎಂದು ಶ್ರೀ ಮೋದಿ ಹೇಳಿದರು.

ವಂಶಪಾರಂಪರ್ಯ ರಾಜಕೀಯ ಪಕ್ಷಗಳು, ಕುಟುಂಬದ ಹೊರಗಿನಿಂದ ಬಂದ ಸಶಕ್ತ ಮಹಿಳೆಯರಿಂದ ತಮ್ಮ ಕೌಟುಂಬಿಕ ನಾಯಕತ್ವ ಅಪಾಯಕ್ಕೆ ಸಿಲುಕಬಹುದೆಂದು ಭಯಭೀತರಾಗಿವೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಪ್ರಸ್ತುತ ಪಂಚಾಯತ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಸಮರ್ಥ ಮಹಿಳೆಯರು ವಂಶಪಾರಂಪರ್ಯ ರಾಜಕಾರಣಿಗಳ ಆಳವಾಗಿ ಬೇರೂರಿರುವ ಅಭದ್ರತೆಗೆ ನೇರ ಸವಾಲನ್ನು ಒಡ್ಡಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಸುಳ್ಳು ನಿರೂಪಣೆಗಳನ್ನು ತಳ್ಳಿಹಾಕಿದ ಪ್ರಧಾನಮಂತ್ರಿಯವರು, ಯಾವುದೇ ರಾಜ್ಯವು ಪ್ರಾತಿನಿಧ್ಯವನ್ನು ಕಳೆದುಕೊಳ್ಳುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಏಕೆಂದರೆ ಎಲ್ಲಾ ರಾಜ್ಯಗಳ ಸ್ಥಾನಗಳು ಸ್ಥಾನಗಳನ್ನು ಸಮಾನ ಮತ್ತು ನ್ಯಾಯಯುತ ಪ್ರಮಾಣದಲ್ಲಿ ಹೆಚ್ಚಾಗುತ್ತವೆ ಎಂದು ಸ್ಪಷ್ಟಪಡಿಸಿದರು. ಪ್ರಾದೇಶಿಕ ಬೆಳವಣಿಗೆಗೆ ಕಳೆದುಹೋದ ಅವಕಾಶಗಳ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ತಿದ್ದುಪಡಿಯು ತಮಿಳುನಾಡು, ಬಂಗಾಳ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಿಗೆ ಸಂಸದೀಯ ಸ್ಥಾನಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಹೇಳಿದರು.

ಈ ಹಿಂದೆ ವಿರೋಧಿಸಲಾದ ಕ್ರಾಂತಿಕಾರಿ ಉಪಕ್ರಮಗಳ ಸರಣಿಯನ್ನು ಪಟ್ಟಿ ಮಾಡಿದ ಪ್ರಧಾನಮಂತ್ರಿಯವರು, ʻಜನ್‌ಧನ್-ಆಧಾರ್-ಮೊಬೈಲ್ʼ ತ್ರಿವಳಿ ವ್ಯವಸ್ಥೆ, ಡಿಜಿಟಲ್ ಪಾವತಿಗಳು, ಜಿಎಸ್‌ಟಿ ಮತ್ತು ತ್ರಿವಳಿ ತಲಾಖ್ ವಿರುದ್ಧದ ಕಾನೂನನ್ನು ಸಹ ಹೀಗೆಯೇ ವಿರೋಧಿಸಲಾಯಿತು ಎಂದು ಗಮನಸೆಳೆದರು. ಈ ಹಿಂದೆ ʻಸಿಎಎʼ ಕಾನೂನಿನ ಬಗ್ಗೆಯೂ ಗೊಂದಲ ಸೃಷ್ಟಿಸಲಾಗಿತ್ತು ಮತ್ತು ಮಾವೋವಾದಿ ಹಿಂಸಾಚಾರವನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳಿಗೆ ನಿರಂತರವಾಗಿ ಅಡ್ಡಿಪಡಿಸಲಾಯಿತು ಎಂದು ಅವರು ಒತ್ತಿ ಹೇಳಿದರು.

ಭಾರತದ ಐತಿಹಾಸಿಕ ಅಭಿವೃದ್ಧಿ ವಿಳಂಬಗಳನ್ನು ಪಟ್ಟಿ ಮಾಡಿದ ಪ್ರಧಾನಮಂತ್ರಿಯವರು, ಅತ್ಯಗತ್ಯವಾದ ನಿರ್ಧಾರಗಳನ್ನು ನನೆಗುದಿಗೆ ಹಾಕುವ ನಿರಂತರ ಕಾರ್ಯತಂತ್ರವು ಸ್ವಾತಂತ್ರ್ಯೋತ್ತರ ಭಾರತವನ್ನು ಮೀರಿ ಮುನ್ನಡೆಯಲು ಇತರ ರಾಷ್ಟ್ರಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು. ಗಡಿ ವಿವಾದ ಇತ್ಯರ್ಥ, ಒಬಿಸಿ ಮೀಸಲಾತಿ ಮತ್ತು ಸೈನಿಕರಿಗೆ ʻಒಂದು ಶ್ರೇಣಿ ಒಂದು ಪಿಂಚಣಿʼ ಯೋಜನೆ ಸೇರಿದಂತೆ ನಿರ್ಣಾಯಕ ರಾಷ್ಟ್ರೀಯ ನಿರ್ಣಯಗಳನ್ನು ಸ್ಥಗಿತಗೊಳಿಸಿ 40 ವರ್ಷಗಳನ್ನು ದೂಡಲಾಗಿದೆ ಎಂದು ಅವರು ಒತ್ತಿ ಹೇಳಿದರು.

ಇಂತಹ ಅನಿಶ್ಚಿತತೆ ಮತ್ತು ವಂಚನೆಯಿಂದಾಗಿ ಹಲವು ತಲೆಮಾರುಗಳಿಂದ ಭಾರತೀಯರು ತೀವ್ರ ತೊಂದರೆ ಅನುಭವಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಸ್ತುತ ರಾಜಕೀಯ ಹೋರಾಟವು ಕೇವಲ ಶಾಸನದ ಒಂದು ತುಣುಕಿನ ಬಗ್ಗೆ ಅಲ್ಲ, ಬದಲಿಗೆ ಆಳವಾದ ನಕಾರಾತ್ಮಕ, ಸುಧಾರಣಾ ವಿರೋಧಿ ಮನಸ್ಥಿತಿಯ ವಿರುದ್ಧದ ವ್ಯಾಪಕ ಯುದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು. "ದೇಶದ ಎಲ್ಲಾ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಈ ವಿಷಕಾರಿ ಮನಸ್ಥಿತಿಗೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ" ಎಂದು ಶ್ರೀ ಮೋದಿ ಗಮನಸೆಳೆದರು.

ವಿಧೇಯಕದ ವೈಫಲ್ಯವು ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ವಾದವನ್ನು ತಳ್ಳಿಹಾಕಿದ ಪ್ರಧಾನಮಂತ್ರಿ, ಪ್ರತಿಪಕ್ಷಗಳು ವಿಧೇಯಕವನ್ನು ಬೆಂಬಲಿಸಿದ್ದರೆ, ಜಾಹೀರಾತುಗಳ ಮೂಲಕ ಅದರ ಎಲ್ಲಾ ಶ್ರೇಯಸ್ಸನ್ನು ಸಂಪೂರ್ಣವಾಗಿ ಅವರಿಗೆ ನೀಡಲು ನಾವು ಸಿದ್ಧರಿದ್ದೆವು ಎಂದು ಪುನರುಚ್ಚರಿಸಿದರು. "ಈ ವಿಷಯವು ಎಂದಿಗೂ ರಾಜಕೀಯ ಶ್ರೇಯಸ್ಸು ತಮ್ಮದಾಗಿಸಿಕೊಳ್ಳುವ ಕುರಿತಾದದ್ದಲ್ಲ; ಬದಲಿಗೆ ಇದು ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯುವ ಕುರಿತಾದದ್ದು" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಮಹಿಳಾ ಸಬಲೀಕರಣಕ್ಕೆ ತಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಲಕ್ಷಾಂತರ ಮಹಿಳೆಯರ ದುಃಖವನ್ನು ಹಂಚಿಕೊಂಡರು. ಸಂಸತ್ತಿನಲ್ಲಿ ಸಂಖ್ಯಾಬಲದ ಕೊರತೆಯ ಹೊರತಾಗಿಯೂ ತಮ್ಮ ಸಂಕಲ್ಪವು ಸಂಪೂರ್ಣವಾಗಿ ಮುರಿಯದೆ ಉಳಿದಿದೆ ಎಂದು ಅವರಿಗೆ ಭರವಸೆ ನೀಡಿದರು. ಶಾಸನದ ಹಾದಿಯಲ್ಲಿ ಭವಿಷ್ಯದ ಪ್ರತಿಯೊಂದು ಅಡೆತಡೆಗಳನ್ನು ತೊಡೆದುಹಾಕುವುದಾಗಿ ಅವರು ಭರವಸೆ ನೀಡಿದರು. ದೇಶದ ಶೇಕಡಾ 100ರಷ್ಟು ಮಹಿಳೆಯರ ಆಶೀರ್ವಾದದೊಂದಿಗೆ ಸರ್ಕಾರವು ಅಂತಿಮವಾಗಿ ಈ ನಿಟ್ಟಿನಲ್ಲಿ ಯಶಸ್ವಿಯಾಗುತ್ತದೆ ಎಂದು ಘೋಷಿಸಿದರು. "ದೇಶದ ಅರ್ಧದಷ್ಟು ಜನಸಂಖ್ಯೆಯ ಕನಸುಗಳು ಮತ್ತು ದೇಶದ ಭವಿಷ್ಯಕ್ಕಾಗಿ, ನಾವು ಈ ಸಂಕಲ್ಪವನ್ನು ಈಡೇರಿಸಬೇಕಾಗಿದೆ," ಎಂದು ಶ್ರೀ ಮೋದಿ ಅವು ಒತ್ತಿ ಹೇಳಿದರು.

 

*****


(ಪ್ರಕಟಣೆ ಐ.ಡಿ.: 2253444) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , Marathi , हिन्दी , Assamese , Manipuri , Bengali , Punjabi , Gujarati , Tamil , Telugu