ಪ್ರಧಾನ ಮಂತ್ರಿಯವರ ಕಛೇರಿ
ರಾಜಸ್ಥಾನದ ಬಿಕಾನೇರ್ನಲ್ಲಿ 26,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಕಳೆದ 11 ವರ್ಷಗಳಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಹಿಂದೆಂದೂ ಕಾಣದ ವೇಗದಲ್ಲಿ ಕೆಲಸ ಮಾಡಲಾಗಿದೆ: ಪ್ರಧಾನಮಂತ್ರಿ
ಆಧುನೀಕರಿಸಲಾಗುತ್ತಿರುವ ರೈಲ್ವೆ ನಿಲ್ದಾಣಗಳಿಗೆ ದೇಶವು ಅಮೃತ ಭಾರತ ನಿಲ್ದಾಣಗಳು ಎಂದು ಹೆಸರಿಡಲಾಗಿದೆ; ಇಂದು, ಈ ಅಮೃತ ಭಾರತ ನಿಲ್ದಾಣಗಳ ಪೈಕಿ 100ಕ್ಕೂ ಹೆಚ್ಚು ನಿಲ್ದಾಣಗಳು ಸಿದ್ಧವಾಗಿವೆ: ಪ್ರಧಾನಮಂತ್ರಿ
ನಾವು ನೀರಾವರಿ ಯೋಜನೆಗಳನ್ನು ಏಕಕಾಲದಲ್ಲಿ ಪೂರ್ಣಗೊಳಿಸುತ್ತಿದ್ದೇವೆ ಮತ್ತು ನದಿಗಳ ಜೋಡಣೆ ಕಾರ್ಯ ಮಾಡುತ್ತಿದ್ದೇವೆ: ಪ್ರಧಾನಮಂತ್ರಿ
ನಮ್ಮ ಸರ್ಕಾರವು 3 ಸಶಸ್ತ್ರ ಪಡೆಗಳಿಗೆ ಮುಕ್ತ ಅಧಿಕಾರ ನೀಡಿತು, ಅದರಿಂದ 3 ಪಡೆಗಳು ಒಟ್ಟಾಗಿ ಅಂತಹ 'ಚಕ್ರವ್ಯೂಹ' ರೂಪಿಸಿ, ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದವು: ಪ್ರಧಾನಮಂತ್ರಿ
'ಸಿಂದೂರ್' 'ಬರೂದ್(ಬಂದೂಕು ಪುಡಿ)'ಯಾಗಿ ಬದಲಾದಾಗ ಏನಾಗುತ್ತದೆ ಎಂಬುದನ್ನು ಜಗತ್ತು ಮತ್ತು ದೇಶದ ಶತ್ರುಗಳು ನೋಡಿದ್ದಾರೆ: ಪ್ರಧಾನಮಂತ್ರಿ
ಆಪರೇಷನ್ ಸಿಂದೂರ್ ಭಯೋತ್ಪಾದನೆಯನ್ನು ಎದುರಿಸಲು 3 ತತ್ವಗಳನ್ನು ಅಳವಡಿಸಿಕೊಂಡು, ದೃಢ ನಿಶ್ಚಯ ಮಾಡಿದೆ: ಪ್ರಧಾನಮಂತ್ರಿ
ಭಾರತವೀಗ ಸ್ಪಷ್ಟ ನಿಲುವು ಹೊರಹಾಕಿದೆ, ಪಾಕಿಸ್ತಾನವು ಪ್ರತಿ ಭಯೋತ್ಪಾದಕ ದಾಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ; ಈ ಬೆಲೆಯನ್ನು ಪಾಕಿಸ್ತಾನದ ಸೈನ್ಯ, ಪಾಕಿಸ್ತಾನದ ಆರ್ಥಿಕತೆ ಮರಳಿಸಬೇಕಾಗುತ್ತದೆ : ಪ್ರಧಾನಮಂತ್ರಿ
ಭಾರತೀಯರ ಜೀವಗಳೊಂದಿಗೆ ಆಟವಾಡಿದರೆ ಪಾಕಿಸ್ತಾನ ಈಗ ಭಾರಿ ಬೆಲೆ ತೆರಬೇಕಾಗುತ್ತದೆ: ಪ್ರಧಾನಮಂತ್ರಿ
Posted On:
22 MAY 2025 1:48PM by PIB Bengaluru
ರಾಜಸ್ಥಾನದ ಬಿಕಾನೇರ್ನಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 26,000 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ, ಕಾರ್ಯಕ್ರಮದಲ್ಲಿ ನೆರೆದಿದ್ದ ಬೃಹತ್ ಜನಸಮೂಹವನ್ನು ಸ್ವಾಗತಿಸಿ ಮಾತನಾಡಿದ ಅವರು, ಆನ್ಲೈನ್ನಲ್ಲಿ ಭಾಗವಹಿಸಿರುವ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನರನ್ನು ಶ್ಲಾಘಿಸಿದರು. ಹಲವಾರು ರಾಜ್ಯಪಾಲರು, ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ಗಳು ಮತ್ತು ಇತರೆ ಸಾರ್ವಜನಿಕ ಪ್ರತಿನಿಧಿಗಳು ಇಲ್ಲಿ ಉಪಸ್ಥಿತರಿದ್ದು, ಜತೆಗೆ ದೇಶಾದ್ಯಂತ ಸಂಪರ್ಕ ಹೊಂದಿರುವ ಎಲ್ಲಾ ಗೌರವಾನ್ವಿತ ಗಣ್ಯರು ಮತ್ತು ನಾಗರಿಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಶ್ರೀ ಕರ್ಣಿ ಮಾತೆಯ ಆಶೀರ್ವಾದ ಪಡೆದು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ, ಈ ಆಶೀರ್ವಾದವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ರಾಷ್ಟ್ರದ ದೃಢ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ. 26,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಸ್ತಾಪಿಸಿದ ಅವರು, ದೇಶದ ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ಹೆಚ್ಚಿನ ಮಹತ್ವ ಹೊಂದಿವೆ. ಈ ಪರಿವರ್ತನೀಯ ಉಪಕ್ರಮಗಳಿಗಾಗಿ ಅವರು ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಭಾರತದ ಮೂಲಸೌಕರ್ಯ ವಲಯದಲ್ಲಿ ನಡೆಯುತ್ತಿರುವ ರೂಪಾಂತರಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಆಧುನೀಕರಣಕ್ಕೆ ರಾಷ್ಟ್ರವು ಬದ್ಧತೆ ಹೊಂದಿದೆ. ಕಳೆದ 11 ವರ್ಷಗಳಲ್ಲಿ ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲ್ವೆಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ತ್ವರಿತ ಪ್ರಗತಿ ಆಗಿದೆ. "ಭಾರತವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ 6 ಪಟ್ಟು ಹೆಚ್ಚಿನ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತಿದೆ, ಇದು ಜಾಗತಿಕ ಗಮನ ಸೆಳೆದ ಪ್ರಗತಿಯಾಗಿದೆ". ಉತ್ತರದಲ್ಲಿ ಗಮನಾರ್ಹವಾದ ಚೆನಾಬ್ ಸೇತುವೆ, ಅರುಣಾಚಲ ಪ್ರದೇಶದ ಸೆಲಾ ಸುರಂಗ ಮತ್ತು ಅಸ್ಸಾಂನ ಪೂರ್ವದಲ್ಲಿ ಬೋಗಿಬೀಲ್ ಸೇತುವೆ ಸೇರಿದಂತೆ ದೇಶಾದ್ಯಂತ ಪ್ರಾತಿನಿಧಿಕ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಲಾಗಿದೆ. ಮುಂಬೈನ ಅಟಲ್ ಸೇತುವೆ, ದಕ್ಷಿಣದಲ್ಲಿ ಭಾರತದ ಮೊದಲನೆಯದಾದ ಪಂಬನ್ ಸೇತುವೆ ನಿರ್ಮಿಸಲಾಗಿದೆ ಎಂದರು.
ಭಾರತದ ರೈಲ್ವೆ ಜಾಲ ಆಧುನೀಕರಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ದೇಶದ ಹೊಸ ವೇಗ ಮತ್ತು ಪ್ರಗತಿಯ ಸಂಕೇತಗಳಾಗಿ ವಂದೇ ಭಾರತ್, ಅಮೃತ ಭಾರತ್ ಮತ್ತು ನಮೋ ಭಾರತ್ ರೈಲುಗಳನ್ನು ಪರಿಚಯಿಸಲಾಗಿದೆ. ಸುಮಾರು 70 ಮಾರ್ಗಗಳಲ್ಲಿ ಈಗ ವಂದೇ ಭಾರತ್ ರೈಲುಗಳನ್ನು ನಿರ್ವಹಿಸಲಾಗುತ್ತಿವೆ, ಇದು ದೂರದ ಪ್ರದೇಶಗಳಿಗೆ ಆಧುನಿಕ ರೈಲು ಸಂಪರ್ಕವನ್ನು ತರುತ್ತಿದೆ. ನೂರಾರು ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ನಿರ್ಮಾಣ ಮತ್ತು 34,000 ಕಿಲೋಮೀಟರ್ಗಳಿಗೂ ಹೆಚ್ಚು ಹೊಸ ರೈಲ್ವೆ ಹಳಿಗಳನ್ನು ಹಾಕುವುದು ಸೇರಿದಂತೆ ಕಳೆದ 11 ವರ್ಷಗಳಲ್ಲಿ ಗಮನಾರ್ಹ ಮೂಲಸೌಕರ್ಯ ಪ್ರಗತಿ ನಡೆದಿದೆ. ಬ್ರಾಡ್ಗೇಜ್ ಮಾರ್ಗಗಳಲ್ಲಿ ಮಾನವರಹಿತ ಲೆವೆಲ್ ಕ್ರಾಸಿಂಗ್ಗಳನ್ನು ತೆಗೆದುಹಾಕಲಾಗಿದೆ, ಇದು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಸರಕು ಸಾಗಣೆಯನ್ನು ಸುಗಮಗೊಳಿಸಲು ಮೀಸಲಾದ ಸರಕು ಕಾರಿಡಾರ್ಗಳ ತ್ವರಿತ ಅಭಿವೃದ್ಧಿ ಮತ್ತು ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ನಿರ್ಮಾಣ ನಡೆಯುತ್ತಿದೆ. ಈ ಪ್ರಯತ್ನಗಳ ಜತೆಗೆ, ಪ್ರಯಾಣಿಕರ ಅನುಭವ ಸುಧಾರಿಸಲು 1,300ಕ್ಕೂ ಹೆಚ್ಚು ರೈಲು ನಿಲ್ದಾಣಗಳ ಆಧುನೀಕರಣ ಕೈಗೊಳ್ಳಲಾಗುತ್ತಿದೆ.
ಆಧುನೀಕರಿಸಿದ ರೈಲು ನಿಲ್ದಾಣಗಳನ್ನು ಅಮೃತ ಭಾರತ್ ನಿಲ್ದಾಣಗಳು ಎಂದು ಹೆಸರಿಸಲಾಗಿದೆ, ಅಂತಹ 100ಕ್ಕೂ ಹೆಚ್ಚು ನಿಲ್ದಾಣಗಳು ಪೂರ್ಣಗೊಂಡಿವೆ. ಸ್ಥಳೀಯ ಕಲೆ ಮತ್ತು ಇತಿಹಾಸದ ಪ್ರದರ್ಶನಗಳಾಗಿ ಕಾರ್ಯ ನಿರ್ವಹಿಸುವ ಈ ನಿಲ್ದಾಣಗಳ ಗಮನಾರ್ಹ ಪರಿವರ್ತನೆಯನ್ನು ಸಾಮಾಜಿಕ ಜಾಲತಾಣ ಬಳಕೆದಾರರು ವೀಕ್ಷಿಸಿದ್ದಾರೆ. ರಜಪೂತ ಸಂಪ್ರದಾಯಗಳ ಭವ್ಯತೆ ಪ್ರತಿಬಿಂಬಿಸುವ ರಾಜಸ್ಥಾನದ ಮಂಡಲಗಢ ನಿಲ್ದಾಣ ಮತ್ತು ಮಧುಬನಿ ಕಲಾಕೃತಿಯೊಂದಿಗೆ ಮಾತೆ ಥವೇವಾಲಿಯ ಪವಿತ್ರ ಉಪಸ್ಥಿತಿಯನ್ನು ಚಿತ್ರಿಸುವ ಬಿಹಾರದ ಥವೇ ನಿಲ್ದಾಣ, ಮಧ್ಯಪ್ರದೇಶದ ಓರ್ಚಾ ರೈಲು ನಿಲ್ದಾಣವು ಭಗವಾನ್ ರಾಮನ ದೈವಿಕ ಸಾರವನ್ನು ಹೊರಹಾಕುತ್ತದೆ, ಆದರೆ ಶ್ರೀರಂಗಂ ನಿಲ್ದಾಣದ ವಿನ್ಯಾಸವು ಶ್ರೀ ರಂಗನಾಥಸ್ವಾಮಿ ದೇವಾಲಯದಿಂದ ಸ್ಫೂರ್ತಿ ಪಡೆದಿದೆ. ಗುಜರಾತ್ನ ಡಾಕೋರ್ ನಿಲ್ದಾಣವು ರಾಂಚೋದ್ರಾಯ್ ಜಿ ಅವರಿಗೆ ಗೌರವ ಸಲ್ಲಿಸುತ್ತದೆ, ತಿರುವಣ್ಣಾಮಲೈ ನಿಲ್ದಾಣವು ದ್ರಾವಿಡ ವಾಸ್ತುಶಿಲ್ಪ ತತ್ವಗಳನ್ನು ಅನುಸರಿಸುತ್ತದೆ ಮತ್ತು ಬೇಗಂಪೆಟ್ ನಿಲ್ದಾಣವು ಕಾಕತೀಯ ರಾಜವಂಶದ ವಾಸ್ತುಶಿಲ್ಪ ಪರಂಪರೆಯನ್ನು ಸಾಕಾರಗೊಳಿಸುತ್ತದೆ. ಈ ಅಮೃತ್ ಭಾರತ್ ನಿಲ್ದಾಣಗಳು ಭಾರತದ ಸಾವಿರಾರು ವರ್ಷಗಳಷ್ಟು ಹಳೆಯದಾದ ಪರಂಪರೆಯನ್ನು ಸಂರಕ್ಷಿಸುವುದಲ್ಲದೆ, ರಾಜ್ಯಗಳಾದ್ಯಂತ ಪ್ರವಾಸೋದ್ಯಮ ಬೆಳವಣಿಗೆಗೆ ವೇಗವರ್ಧಕಗಳಾಗಿ ಕಾರ್ಯ ನಿರ್ವಹಿಸುತ್ತವೆ, ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ನಿಲ್ದಾಣಗಳ ಸ್ವಚ್ಛತೆ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳುವಂತೆ ಕರೆ ನೀಡಿದ ಪ್ರಧಾನಿ, ಏಕೆಂದರೆ ಅವುಗಳು ಈ ಮೂಲಸೌಕರ್ಯಗಳ ನಿಜವಾದ ಮಾಲೀಕರಾಗಿವೆ. ಮೂಲಸೌಕರ್ಯದಲ್ಲಿ ಸರ್ಕಾರಿ ಹೂಡಿಕೆಗಳು ಅಭಿವೃದ್ಧಿಯನ್ನು ಹೆಚ್ಚಿಸುವುದಲ್ಲದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ, ವ್ಯಾಪಾರ ಚಟುವಟಿಕೆಗಳನ್ನು ಹೆಚ್ಚಿಸುತ್ತವೆ. ಈ ಯೋಜನೆಗಳಿಗೆ ಖರ್ಚು ಮಾಡಲಾಗುತ್ತಿರುವ ಸಾವಿರಾರು ಕೋಟಿ ರೂಪಾಯಿಗಳು ಕಾರ್ಮಿಕರು, ಅಂಗಡಿಯವರು, ಕಾರ್ಖಾನೆ ಉದ್ಯೋಗಿಗಳು ಮತ್ತು ಟ್ರಕ್ ಮತ್ತು ಟೆಂಪೋ ನಿರ್ವಾಹಕರಂತಹ ಸಾರಿಗೆ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ನೇರವಾಗಿ ಪ್ರಯೋಜನ ನೀಡುತ್ತಿವೆ. ಮೂಲಸೌಕರ್ಯ ಯೋಜನೆಗಳು ಪೂರ್ಣಗೊಂಡ ನಂತರ, ಪ್ರಯೋಜನಗಳು ಹೆಚ್ಚಾಗುತ್ತವೆ. ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಮಾರುಕಟ್ಟೆಗಳಿಗೆ ಸಾಗಿಸಬಹುದು, ಇದು ಸಮಯ ವ್ಯರ್ಥವನ್ನು ಕಡಿಮೆ ಮಾಡುತ್ತದೆ. ಉತ್ತಮವಾಗಿ ಅಭಿವೃದ್ಧಿ ಹೊಂದಿದ ರಸ್ತೆಗಳು ಮತ್ತು ವಿಸ್ತೃತ ರೈಲ್ವೆ ಜಾಲಗಳು ಹೊಸ ಕೈಗಾರಿಕೆಗಳನ್ನು ಆಕರ್ಷಿಸುತ್ತವೆ ಮತ್ತು ಪ್ರವಾಸೋದ್ಯಮವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಮೂಲಸೌಕರ್ಯ ವೆಚ್ಚವು ಅಂತಿಮವಾಗಿ ಪ್ರತಿ ಮನೆಗೆ ಪ್ರಯೋಜನ ನೀಡುತ್ತದೆ, ಯುವಜನರು ಉದಯೋನ್ಮುಖ ಆರ್ಥಿಕ ಅವಕಾಶಗಳಿಂದ ಹೆಚ್ಚಿನದನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.
ಮೂಲಸೌಕರ್ಯ ಅಭಿವೃದ್ಧಿಯಿಂದ ರಾಜಸ್ಥಾನವು ಗಣನೀಯ ಪ್ರಯೋಜನಗಳನ್ನು ಪಡೆಯಲಿದೆ. ಹಳ್ಳಿಗಳಲ್ಲಿ ಮತ್ತು ಗಡಿ ಪ್ರದೇಶಗಳಲ್ಲೂ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ 11 ವರ್ಷಗಳಲ್ಲಿ, ರಾಜಸ್ಥಾನದ ರಸ್ತೆ ಮೂಲಸೌಕರ್ಯದಲ್ಲೇ ಸುಮಾರು 70,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಈ ವರ್ಷ ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸುಮಾರು 10,000 ಕೋಟಿ ರೂ. ಖರ್ಚು ಮಾಡಲು ಸಿದ್ಧವಾಗಿದೆ. ಇದು 2014ರ ಹಿಂದಿನ ಮಟ್ಟಕ್ಕೆ ಹೋಲಿಸಿದರೆ 15 ಪಟ್ಟು ಹೆಚ್ಚಾಗಿದೆ. ಬಿಕಾನೆರ್ ಅನ್ನು ಮುಂಬೈಗೆ ಸಂಪರ್ಕಿಸುವ ಹೊಸ ರೈಲಿನ ಉದ್ಘಾಟನೆ ನೆರವೇರಿಸಲಾಗಿದೆ. ಇದು ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ವಿವಿಧ ಪ್ರದೇಶಗಳಲ್ಲಿ ಆರೋಗ್ಯ, ನೀರು ಮತ್ತು ವಿದ್ಯುತ್ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಉಪಕ್ರಮಗಳು ರಾಜಸ್ಥಾನದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಪ್ರಗತಿಯನ್ನು ವೇಗಗೊಳಿಸುವ ಗುರಿ ಹೊಂದಿವೆ, ಯುವಜನರು ತಮ್ಮದೇ ಆದ ನಗರಗಳು ಮತ್ತು ಪಟ್ಟಣಗಳಲ್ಲಿ ಭರವಸೆಯ ಅವಕಾಶಗಳನ್ನು ಕಂಡುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿ, ರಾಜಸ್ಥಾನದಲ್ಲಿ ವೇಗವರ್ಧಿತ ಕೈಗಾರಿಕಾ ಅಭಿವೃದ್ಧಿ ನಡೆಯುತ್ತಿದೆ. ಮುಖ್ಯಮಂತ್ರಿ ಶ್ರೀ ಭಜನ್ಲಾಲ್ ಶರ್ಮಾ ಅವರ ಆಡಳಿತವು ವಿವಿಧ ವಲಯಗಳಲ್ಲಿ ಹೊಸ ಕೈಗಾರಿಕಾ ನೀತಿಗಳನ್ನು ಪರಿಚಯಿಸಿದೆ, ಇದು ಬಿಕಾನೆರ್ನಂತಹ ಪ್ರದೇಶಗಳಿಗೆ ಪ್ರಯೋಜನ ನೀಡುತ್ತದೆ. ಬಿಕನೇರಿ ಭುಜಿಯಾ ಮತ್ತು ಬಿಕನೇರಿ ರಸಗುಲ್ಲಾಗಳು ತಮ್ಮ ಜಾಗತಿಕ ಮನ್ನಣೆಯನ್ನು ವಿಸ್ತರಿಸುತ್ತವೆ, ರಾಜ್ಯದ ಆಹಾರ ಸಂಸ್ಕರಣಾ ಉದ್ಯಮವನ್ನು ಮತ್ತಷ್ಟು ಬಲಪಡಿಸುತ್ತವೆ. ರಾಜಸ್ಥಾನದ ಸಂಸ್ಕರಣಾಗಾರ ಯೋಜನೆಯು ಅಂತಿಮ ಹಂತದಲ್ಲಿದೆ, ಪೆಟ್ರೋಲಿಯಂ ಆಧಾರಿತ ಕೈಗಾರಿಕೆಗಳಿಗೆ ರಾಜ್ಯವನ್ನು ಪ್ರಮುಖ ಕೇಂದ್ರವಾಗಿ ಇರಿಸಲಾಗಿದೆ. ಶ್ರೀ ಗಂಗಾನಗರ, ಹನುಮಾನ್ಗಢ, ಬಿಕಾನೇರ್, ಜೋಧ್ಪುರ, ಬಾರ್ಮರ್ ಮತ್ತು ಜಾಲೋರ್ ಮೂಲಕ ಹಾದುಹೋಗುವ ಅಮೃತಸರದಿಂದ ಜಾಮ್ನಗರದವರೆಗಿನ 6 ಪಥಗಳ ಆರ್ಥಿಕ ಕಾರಿಡಾರ್ ಮಹತ್ವದ್ದಾಗಿದೆ. ಹೆಚ್ಚುವರಿಯಾಗಿ, ರಾಜಸ್ಥಾನದಲ್ಲಿ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಬಹುತೇಕ ಪೂರ್ಣಗೊಂಡಿದೆ. ಈ ಸಂಪರ್ಕ ಯೋಜನೆಗಳು ರಾಜ್ಯದ ಕೈಗಾರಿಕಾ ಬೆಳವಣಿಗೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ ಎಂದು ಹೇಳಿದರು.
ರಾಜಸ್ಥಾನದಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ತ್ವರಿತ ಪ್ರಗತಿ ಆಗಿದೆ. ರಾಜ್ಯದ 40,000ಕ್ಕೂ ಹೆಚ್ಚು ಜನರು ಈಗಾಗಲೇ ಈ ಉಪಕ್ರಮದಿಂದ ಪ್ರಯೋಜನ ಪಡೆದಿದ್ದಾರೆ, ಇದು ಅವರ ವಿದ್ಯುತ್ ಬಿಲ್ಗಳನ್ನು ತೆಗೆದುಹಾಕಿದೆ ಮತ್ತು ಸೌರಶಕ್ತಿಯ ಮೂಲಕ ಆದಾಯ ಗಳಿಸುವ ಅವಕಾಶ ಒದಗಿಸಿದೆ. ಹಲವಾರು ವಿದ್ಯುತ್ ಸಂಬಂಧಿತ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ರಾಜಸ್ಥಾನದ ವಿದ್ಯುತ್ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಉತ್ಪಾದನೆಯು ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದರು.
ರಾಜಸ್ಥಾನದ ಭೂಮಿ ಐತಿಹಾಸಿಕ ಮಹತ್ವ ಹೊಂದಿದೆ. ಮರುಭೂಮಿ ಭೂಪ್ರದೇಶವನ್ನು ಫಲವತ್ತಾದ ಭೂದೃಶ್ಯಗಳಾಗಿ ಪರಿವರ್ತಿಸುವಲ್ಲಿ ಮಹಾರಾಜ ಗಂಗಾ ಸಿಂಗ್ ಅವರ ದೂರದೃಷ್ಟಿಯ ಪ್ರಯತ್ನಗಳನ್ನು ಸ್ಮರಿಸಿದರು. ಈ ಪ್ರದೇಶಕ್ಕೆ ನೀರಿನ ನಿರ್ಣಾಯಕ ಪ್ರಾಮುಖ್ಯತೆ ಮತ್ತು ಬಿಕಾನೇರ್, ಶ್ರೀ ಗಂಗಾನಗರ, ಹನುಮಾನ್ಗಢ ಮತ್ತು ಪಶ್ಚಿಮ ರಾಜಸ್ಥಾನದಂತಹ ಪ್ರದೇಶಗಳ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಅವರ ಪಾತ್ರ ಶ್ಲಾಘನೀಯ. ನದಿ ಜೋಡಣೆ ಉಪಕ್ರಮಗಳನ್ನು ಏಕಕಾಲದಲ್ಲಿ ಅನುಷ್ಠಾನಗೊಳಿಸುವುದರೊಂದಿಗೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜಸ್ಥಾನದಾದ್ಯಂತ ಅನೇಕ ಜಿಲ್ಲೆಗಳಿಗೆ ಪ್ರಯೋಜನ ನೀಡುವ, ರೈತರಿಗೆ ಉತ್ತಮ ಕೃಷಿ ನಿರೀಕ್ಷೆಗಳನ್ನು ಖಾತ್ರಿಪಡಿಸುವ ಮತ್ತು ಪ್ರದೇಶದ ಸುಸ್ಥಿರತೆ ಹೆಚ್ಚಿಸುವ ಪಾರ್ವತಿ-ಕಾಳಿಸಿಂಧ್-ಚಂಬಲ್ ಜೋಡಣೆ ಯೋಜನೆಯ ಪರಿಣಾಮ ಮಹತ್ವದ್ದಾಗಿದೆ ಎಂದರು.
ರಾಜಸ್ಥಾನವು ಅಚಲ ಮನೋಭಾವ ಹೊಂದಿರುವ ರಾಜ್ಯವಾಗಿದೆ. ದೇಶ ಮತ್ತು ಅದರ ಜನರಿಗಿಂತ ದೊಡ್ಡದು ಯಾವುದೂ ಇಲ್ಲ. ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಪ್ರಧಾನಿ, ಅಲ್ಲಿ ದಾಳಿಕೋರರು ತಮ್ಮ ನಂಬಿಕೆಯ ಆಧಾರದ ಮೇಲೆ ಮುಗ್ಧ ಜೀವಗಳನ್ನು ಗುರಿಯಾಗಿಸಿಕೊಂಡರು. ಪಹಲ್ಗಾಮ್ನಲ್ಲಿ ಗುಂಡುಗಳು ಸಿಡಿದಾಗ 140 ಕೋಟಿ ಭಾರತೀಯರ ಹೃದಯಗಳನ್ನು ಗಾಯಗೊಳಿಸಿದವು, ಭಯೋತ್ಪಾದನೆ ವಿರುದ್ಧದ ದೃಢ ಸಂಕಲ್ಪದಲ್ಲಿ ರಾಷ್ಟ್ರವನ್ನು ಒಂದುಗೂಡಿಸಿದವು. ಭಾರತದ ಸಶಸ್ತ್ರ ಪಡೆಗಳು ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿವೆ, ನಮ್ಮ ಮೂರು ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ ನೀಡಲಾಗಿದೆ. ಎಚ್ಚರಿಕೆಯಿಂದ ಕಾರ್ಯಗತಗೊಳಿಸಿದ ಕಾರ್ಯಾಚರಣೆಯಲ್ಲಿ, 3 ಪಡೆಗಳು ಪಾಕಿಸ್ತಾನದ ಅಡಗುತಾಣಗಳನ್ನು ಕೆಡವಿದವು, ಅವುಗಳನ್ನು ಶರಣಾಗುವಂತೆ ಮಾಡಿದವು. ಏಪ್ರಿಲ್ 22ರ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತವು 22 ನಿಮಿಷಗಳಲ್ಲಿ ಪ್ರತಿದಾಳಿ ನಡೆಸಿ 9 ಪ್ರಮುಖ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು. "ಈ ಕ್ರಮವು ರಾಷ್ಟ್ರದ ಶಕ್ತಿಯನ್ನು ಪ್ರದರ್ಶಿಸಿತು, ಪವಿತ್ರ ಸಿಂದೂರವು ಬೆಂಕಿಯ ಶಕ್ತಿ(ಬಂದೂಕು ಪುಡಿ)ಯಾಗಿ ಬದಲಾದಾಗ, ಫಲಿತಾಂಶವು ನಿರ್ಣಾಯಕವಾಗಿರುತ್ತದೆ ಎಂಬುದನ್ನು ಸಾಬೀತುಪಡಿಸಿತು. 5 ವರ್ಷಗಳ ಹಿಂದೆ, ಬಾಲಕೋಟ್ ವಾಯುದಾಳಿಯ ನಂತರ, ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮ ರಾಜಸ್ಥಾನದಲ್ಲಿತ್ತು. ಅದೇ ರೀತಿ, ಇತ್ತೀಚಿನ ಆಪರೇಷನ್ ಸಿಂದೂರ್ ನಂತರವೂ ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮ ಮತ್ತೆ ರಾಜಸ್ಥಾನದಲ್ಲಿ, ಬಿಕಾನೇರ್ನಲ್ಲಿ ನಡೆಯುತ್ತಿದೆ. ಇದು ಈ ಭೂಮಿಯಲ್ಲಿ ಆಳವಾಗಿ ಬೇರೂರಿರುವ ಶೌರ್ಯ ಮತ್ತು ದೇಶಭಕ್ತಿಯನ್ನು ಪುನರುಚ್ಚರಿಸುತ್ತದೆ.
ಚುರುನಲ್ಲಿ ನೀಡಿದ್ದ ತಮ್ಮ ಹೇಳಿಕೆಯನ್ನು ನೆನಪಿಸಿಕೊಂಡ ಪ್ರಧಾನಿ, ರಾಷ್ಟ್ರದ ಬಗೆಗೆ ತಾವು ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದರು: "ಈ ಮಣ್ಣಿನ ಮೇಲೆ ಪ್ರತಿಜ್ಞೆ ಮಾಡಿ ಹೇಳುತ್ತೇನೆ, ನಾನು ದೇಶವನ್ನು ಬೀಳಲು ಬಿಡುವುದಿಲ್ಲ, ನಾನು ದೇಶವನ್ನು ತಲೆಬಾಗಲು ಬಿಡುವುದಿಲ್ಲ." ಪವಿತ್ರ ಸಿಂದೂರವನ್ನು ಅಳಿಸಲು ಪ್ರಯತ್ನಿಸಿದವರು ಧೂಳಾಗಿದ್ದಾರೆ, ಭಾರತದ ರಕ್ತ ಚೆಲ್ಲಿದವರು ಈಗ ಪೂರ್ಣ ಬೆಲೆ ತೆತ್ತಿದ್ದಾರೆ, ಭಾರತ ಮೌನವಾಗಿರುತ್ತದೆ ಎಂದು ಭಾವಿಸಿದವರು ಈಗ ಅಡಗಿಕೊಂಡಿದ್ದಾರೆ, ಆದರೆ ತಮ್ಮ ಶಸ್ತ್ರಾಸ್ತ್ರಗಳ ಬಗ್ಗೆ ಹೆಮ್ಮೆಪಡುವವರು ಈಗ ಅವಶೇಷಗಳ ಕೆಳಗೆ ಹೂತುಹೋಗಿದ್ದಾರೆ. ಆಪರೇಷನ್ ಸಿಂದೂರ್ ಸೇಡಿನ ಕ್ರಮವಲ್ಲ, ಆದರೆ ನ್ಯಾಯದ ಹೊಸ ರೂಪ, ಇದು ಕೇವಲ ಆಕ್ರೋಶದ ಅಭಿವ್ಯಕ್ತಿಯಲ್ಲ, ಆದರೆ ಭಾರತದ ಅಚಲ ಶಕ್ತಿ ಮತ್ತು ದೃಢಸಂಕಲ್ಪದ ಪ್ರದರ್ಶನವಾಗಿದೆ. ರಾಷ್ಟ್ರವು ದಿಟ್ಟ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ, ಶತ್ರುವನ್ನು ನೇರವಾಗಿ ಮತ್ತು ನಿರ್ಣಾಯಕವಾಗಿ ಹೊಡೆಯುತ್ತದೆ. "ಭಯೋತ್ಪಾದನೆಯನ್ನು ಹತ್ತಿಕ್ಕುವುದು ಕೇವಲ ಒಂದು ಕಾರ್ಯತಂತ್ರವಲ್ಲ, ಬದಲಾಗಿ ಅದು ಒಂದು ತತ್ವ, ಇದೇ ಇಂದಿನ ಭಾರತ, ಇದೇ ಹೊಸ ಭಾರತ" ಎಂದು ಮೋದಿ ಹೇಳಿದರು.
ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಆಪರೇಷನ್ ಸಿಂದೂರ್ ಮೂಲಕ ಸ್ಥಾಪಿಸಲಾದ 3 ಪ್ರಮುಖ ತತ್ವಗಳನ್ನು ವಿವರಿಸಿದ ಪ್ರಧಾನಿ, ಮೊದಲ ತತ್ವ - ಭಾರತದ ಮೇಲಿನ ಯಾವುದೇ ಭಯೋತ್ಪಾದಕ ದಾಳಿಗೆ ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು, ಸಮಯ, ವಿಧಾನ ಮತ್ತು ನಿಯಮಗಳನ್ನು ಭಾರತದ ಸಶಸ್ತ್ರ ಪಡೆಗಳು ಮಾತ್ರ ನಿರ್ಧರಿಸುತ್ತವೆ. ಎರಡನೆಯದಾಗಿ, ಪರಮಾಣು ಬೆದರಿಕೆಗಳಿಗೆ ಭಾರತ ಜಗ್ಗುವುದಿಲ್ಲ. ಮೂರನೆಯದಾಗಿ, ಭಾರತವು ಇನ್ನು ಮುಂದೆ ಭಯೋತ್ಪಾದಕ ಸೂತ್ರಧಾರಿಗಳು ಮತ್ತು ಅವರನ್ನು ಬೆಂಬಲಿಸುವ ಸರ್ಕಾರಗಳ ನಡುವೆ ಯಾವುದೇ ವ್ಯತ್ಯಾಸ ತೋರಿಸುವುದಿಲ್ಲ. ಭಯೋತ್ಪಾದನೆ ಪೋಷಿಸುವಲ್ಲಿ ಪಾಕಿಸ್ತಾನದ ಪಾತ್ರವನ್ನು ಬಹಿರಂಗಪಡಿಸಲು ನಡೆಯುತ್ತಿರುವ ಜಾಗತಿಕ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ವಿದೇಶಾಂಗ ನೀತಿ ತಜ್ಞರನ್ನು ಒಳಗೊಂಡ 7 ವಿಭಿನ್ನ ಗುಂಪುಗಳು ಪಾಕಿಸ್ತಾನದ ನಿಜವಾದ ಮುಖವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಪಾಕಿಸ್ತಾನವು ಭಾರತದೊಂದಿಗೆ ನೇರ ಮುಖಾಮುಖಿಯಾಗಿ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಹಿಂದಿನ ಸಂಘರ್ಷಗಳಲ್ಲಿ ಅದರ ಪುನರಾವರ್ತಿತ ವೈಫಲ್ಯಗಳನ್ನು ನೆನಪಿಸಿಕೊಳ್ಳುತ್ತಾರೆ. ಮುಕ್ತ ಯುದ್ಧಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗದೆ, ಪಾಕಿಸ್ತಾನವು ಭಾರತದ ವಿರುದ್ಧ ದೀರ್ಘಕಾಲದಿಂದ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ, ಹಿಂಸಾಚಾರವನ್ನು ಆಶ್ರಯಿಸುತ್ತದೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ಪಾಕಿಸ್ತಾನವು ಭಾರತದ ದೃಢಸಂಕಲ್ಪದ ಬಗ್ಗೆ ಕನಿಷ್ಠವಾಗಿ ಅಂದಾಜು ಮಾಡಿದೆ. ನನ್ನ ನಾಯಕತ್ವದಲ್ಲಿ, ರಾಷ್ಟ್ರವು ಬಲಿಷ್ಠ ಮತ್ತು ಅಚಲವಾಗಿ ನಿಂತಿದೆ. "ಭಾರತದ ಮೇಲಿನ ಯಾವುದೇ ಭಯೋತ್ಪಾದಕ ದಾಳಿಯು ಗಂಭೀರ ಪರಿಣಾಮಗಳನ್ನು ಬೀರುತ್ತದೆ, ಪಾಕಿಸ್ತಾನವು ತನ್ನ ಮಿಲಿಟರಿ ಮತ್ತು ಆರ್ಥಿಕತೆಯಿಂದ ಭಾರಿ ಬೆಲೆಯನ್ನು ತೆರಬೇಕಾಗುತ್ತದೆ" ಎಂದು ಮೋದಿ ಎಚ್ಚರಿಸಿದರು.
ಬಿಕಾನೇರ್ಗೆ ಬರುವಾಗ ನಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಪಾಕಿಸ್ತಾನವು ಇದೇ ಏರ್ ಪೋರ್ಟ್ ಗುರಿಯಾಗಿಸಲು ಪ್ರಯತ್ನಿಸಿತ್ತು, ಆದರೆ ಯಾವುದೇ ಹಾನಿ ಉಂಟುಮಾಡುವಲ್ಲಿ ಅದು ವಿಫಲವಾಗಿದೆ. ಭಾರತದ ನಿಖರ ಮಿಲಿಟರಿ ದಾಳಿಯಿಂದಾಗಿ ಗಡಿಯುದ್ದಕ್ಕೂ ಪಾಕಿಸ್ತಾನದ ರಹೀಮ್ ಯಾರ್ ಖಾನ್ ವಾಯುನೆಲೆಯನ್ನು ಹಲವಾರು ದಿನಗಳವರೆಗೆ ಸ್ಥಗಿತಗೊಳಿಸಬೇಕಾಯಿತು, ಇದು ಅದರ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮ ಬೀರಿತು. ಪಾಕಿಸ್ತಾನದೊಂದಿಗೆ ವ್ಯಾಪಾರ ಅಥವಾ ಮಾತುಕತೆ ಇರುವುದಿಲ್ಲ ಎಂದು ಪ್ರಧಾನಿ ದೃಢವಾಗಿ ಘೋಷಿಸಿದರು. ಯಾವುದೇ ಚರ್ಚೆಗಳು ಮುಂದೆ ನಡೆದರೆ, ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸುತ್ತ ಮಾತ್ರ ಸುತ್ತಲಿದೆ. ಪಾಕಿಸ್ತಾನ ಭಯೋತ್ಪಾದಕರ ರಫ್ತು ಮುಂದುವರಿಸಿದರೆ, ಅದು ಆರ್ಥಿಕ ನಾಶ ಎದುರಿಸಬೇಕಾಗುತ್ತದೆ. ಭಾರತವು ಪಾಕಿಸ್ತಾನಕ್ಕೆ ತನ್ನ ಹಕ್ಕಿನ ನೀರಿನ ಪಾಲು ಪಡೆಯಲು ಅವಕಾಶ ನೀಡುವುದಿಲ್ಲ, ಭಾರತದ ರಕ್ತದೊಂದಿಗೆ ಆಟವಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ. "ಈ ದೃಢಸಂಕಲ್ಪವು ಭಾರತದ ಬದ್ಧತೆಯಾಗಿದೆ, ಇದನ್ನು ವಿಶ್ವದ ಯಾವುದೇ ಶಕ್ತಿ ಅಲುಗಾಡಿಸಲು ಸಾಧ್ಯವಿಲ್ಲ" ಎಂದು ಎಚ್ಚರಿಸಿದರು.
"ಅಭಿವೃದ್ಧಿ ಹೊಂದಿದ ಭಾರತ ಕಟ್ಟಲು ಭದ್ರತೆ ಮತ್ತು ಸಮೃದ್ಧಿ ಎರಡೂ ಅತ್ಯಗತ್ಯ", ದೇಶದ ಪ್ರತಿಯೊಂದು ಮೂಲೆಯನ್ನೂ ಬಲಪಡಿಸಿದಾಗ ಮಾತ್ರ ಈ ದೃಷ್ಟಿಕೋನ ಸಾಕಾರಗೊಳಿಸಲು ಸಾಧ್ಯ. ಈ ಕಾರ್ಯಕ್ರಮವು ಭಾರತದ ಸಮತೋಲಿತ ಮತ್ತು ವೇಗವರ್ಧಿತ ಬೆಳವಣಿಗೆಯ ಅನುಕರಣೀಯ ಪ್ರದರ್ಶನವಾಗಿದೆ. ಈ ಶೌರ್ಯದ ಭೂಮಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಕಿಸನ್ರಾವ್ ಬಗಾಡೆ, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ಲಾಲ್ ಶರ್ಮಾ, ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಶ್ರೀ ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ದೇಶದಲ್ಲಿ ರೈಲು ಮೂಲಸೌಕರ್ಯವನ್ನು ನಿರಂತರವಾಗಿ ಸುಧಾರಿಸುವ ಮತ್ತು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಭಾರತದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 86 ಜಿಲ್ಲೆಗಳಲ್ಲಿ 1,100 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ 103 ಪುನರಾಭಿವೃದ್ಧಿ ಅಮೃತ್ ನಿಲ್ದಾಣಗಳನ್ನು ಉದ್ಘಾಟಿಸಿದರು. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ, ಪ್ರಾದೇಶಿಕ ವಾಸ್ತುಶಿಲ್ಪ ಬಳಸಿ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ 1,300ಕ್ಕೂ ಹೆಚ್ಚು ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಕರ್ಣಿ ಮಾತೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಸೇವೆ ಸಲ್ಲಿಸುವ ದೇಶ್ನೋಕ್ ರೈಲು ನಿಲ್ದಾಣವು ದೇವಾಲಯದ ವಾಸ್ತುಶಿಲ್ಪ, ಕಮಾನು ಮತ್ತು ಸ್ತಂಭದ ವಸ್ತುವಿಷಯ(ಥೀಮ್)ದಿಂದ ಪ್ರೇರಿತವಾಗಿದೆ. ತೆಲಂಗಾಣದ ಬೇಗಂಪೇಟೆ ರೈಲು ನಿಲ್ದಾಣವು ಕಾಕತೀಯ ಸಾಮ್ರಾಜ್ಯದ ವಾಸ್ತುಶಿಲ್ಪದಿಂದ ಪ್ರೇರಿತವಾಗಿದೆ. ಬಿಹಾರದ ಥಾವೆ ನಿಲ್ದಾಣವು 52 ಶಕ್ತಿಪೀಠಗಳಲ್ಲಿ ಒಂದಾದ ಮಾತೆ ಥಾವೆವಾಲಿಯನ್ನು ಪ್ರತಿನಿಧಿಸುವ ಮತ್ತು ಮಧುಬನಿ ವರ್ಣಚಿತ್ರಗಳನ್ನು ಚಿತ್ರಿಸುವ ವಿವಿಧ ಭಿತ್ತಿಚಿತ್ರಗಳು ಮತ್ತು ಕಲಾಕೃತಿಗಳನ್ನು ಒಳಗೊಂಡಿದೆ. ಗುಜರಾತ್ನ ಡಾಕೋರ್ ನಿಲ್ದಾಣವು ರಾಂಚೋದ್ರಾಯ್ ಜಿ ಮಹಾರಾಜ್ ಅವರಿಂದ ಪ್ರೇರಿತವಾಗಿದೆ. ಭಾರತದಾದ್ಯಂತ ಪುನರಾಭಿವೃದ್ಧಿಯಾದ ಅಮೃತ್ ನಿಲ್ದಾಣಗಳು ಸಾಂಸ್ಕೃತಿಕ ಪರಂಪರೆ, ದಿವ್ಯಾಂಗ ಜನರಿಗೆ ಸೇರಿದಂತೆ ಪ್ರಯಾಣಿಕ-ಕೇಂದ್ರಿತ ಸೌಲಭ್ಯಗಳು ಮತ್ತು ಪ್ರಯಾಣದ ಅನುಭವ ಹೆಚ್ಚಿಸಲು ಸುಸ್ಥಿರ ಅಭ್ಯಾಸಗಳೊಂದಿಗೆ ಆಧುನಿಕ ಮೂಲಸೌಕರ್ಯವನ್ನು ಸಂಯೋಜಿಸುತ್ತವೆ.
ಭಾರತೀಯ ರೈಲ್ವೆ ತನ್ನ ಜಾಲದ 100% ವಿದ್ಯುದೀಕರಣದತ್ತ ದಾಪುಗಾಲು ಹಾಕುತ್ತಿದ್ದು, ರೈಲ್ವೆ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡುತ್ತಿದೆ. ಇದಕ್ಕೆ ಅನುಗುಣವಾಗಿ, ಪ್ರಧಾನ ಮಂತ್ರಿ ಅವರು ಚುರು-ಸಾದುಲ್ಪುರ ರೈಲು ಮಾರ್ಗ(58 ಕಿ.ಮೀ) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು, ಸೂರತ್ಗಢ-ಫಲೋಡಿ(336 ಕಿ.ಮೀ); ಫುಲೇರಾ-ದೇಗಾನಾ(109 ಕಿ.ಮೀ); ಉದಯಪುರ-ಹಿಮ್ಮತ್ನಗರ(210 ಕಿ.ಮೀ); ಫಲೋಡಿ-ಜೈಸಲ್ಮೇರ್(157 ಕಿ.ಮೀ) ಮತ್ತು ಸಮ್ದಾರಿ-ಬಾರ್ಮೇರ್(129 ಕಿ.ಮೀ) ರೈಲು ಮಾರ್ಗದ ವಿದ್ಯುದೀಕರಣ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ರಾಜ್ಯದಲ್ಲಿ ರಸ್ತೆ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಪ್ರಧಾನ ಮಂತ್ರಿ ಅವರು 3 ವಾಹನ ಅಂಡರ್ಪಾಸ್ಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಮತ್ತು ಬಲವರ್ಧನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಅವರು ರಾಜಸ್ಥಾನದಲ್ಲಿ 7 ರಸ್ತೆ ಯೋಜನೆಗಳನ್ನು ಸಹ ಲೋಕಾರ್ಪಣೆ ಮಾಡಲಿದ್ದಾರೆ. 4,850 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ರಸ್ತೆ ಯೋಜನೆಗಳು ಸರಕು ಮತ್ತು ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತವೆ. ಹೆದ್ದಾರಿಗಳು ಭಾರತ-ಪಾಕ್ ಗಡಿಯವರೆಗೆ ವಿಸ್ತರಿಸುತ್ತವೆ, ಭದ್ರತಾ ಪಡೆಗಳಿಗೆ ಪ್ರವೇಶ ಹೆಚ್ಚಿಸುತ್ತವೆ ಮತ್ತು ಭಾರತದ ರಕ್ಷಣಾ ಮೂಲಸೌಕರ್ಯವನ್ನು ಬಲಪಡಿಸುತ್ತವೆ.
ಎಲ್ಲರಿಗೂ ವಿದ್ಯುತ್, ಹಸಿರು ಮತ್ತು ಸ್ವಚ್ಛ ಇಂಧನದ ದೃಷ್ಟಿಕೋನವನ್ನು ಮುಂದುವರಿಸಲು, ಪ್ರಧಾನ ಮಂತ್ರಿ ಅವರು ದಿಡ್ವಾನಾ ಕುಚಮನ್ನ ಬಿಕಾನೇರ್ ಮತ್ತು ನವದಲ್ಲಿ ಸೌರ ಯೋಜನೆಗಳು ಮತ್ತು ವಿದ್ಯುತ್ ಸ್ಥಳಾಂತರಿಸುವ ಪ್ರಸರಣ ವ್ಯವಸ್ಥೆಗಳು ಭಾಗ ಬಿ ಪವರ್ಗ್ರಿಡ್ ಸಿರೋಹಿ ಟ್ರಾನ್ಸ್ಮಿಷನ್ ಲಿಮಿಟೆಡ್ ಮತ್ತು ಭಾಗ ಇ ಪವರ್ಗ್ರಿಡ್ ಮೇವಾರ್ ಟ್ರಾನ್ಸ್ಮಿಷನ್ ಲಿಮಿಟೆಡ್ ಸೇರಿದಂತೆ ವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅವರು ಬಿಕಾನೇರ್ನಲ್ಲಿ ಸೌರ ಯೋಜನೆ, ನೀಮಚ್ ಮತ್ತು ಬಿಕಾನೇರ್ ಸಂಕೀರ್ಣದಿಂದ ವಿದ್ಯುತ್ ಸ್ಥಳಾಂತರಿಸುವ ಪ್ರಸರಣ ವ್ಯವಸ್ಥೆ, ಸ್ವಚ್ಛ ಇಂಧನ ಒದಗಿಸುವ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಫತೇಘರ್-II ವಿದ್ಯುತ್ ಕೇಂದ್ರದಲ್ಲಿ ಪರಿವರ್ತನೆ ಸಾಮರ್ಥ್ಯ ಹೆಚ್ಚಳ ಸೇರಿದಂತೆ ವಿದ್ಯುತ್ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ರಾಜಸ್ಥಾನದಾದ್ಯಂತ ಮೂಲಸೌಕರ್ಯ, ಸಂಪರ್ಕ, ವಿದ್ಯುತ್ ಸರಬರಾಜು, ಆರೋಗ್ಯ ಸೇವೆಗಳು ಮತ್ತು ನೀರಿನ ಲಭ್ಯತೆ ಹೆಚ್ಚಿಸಲು 25 ಪ್ರಮುಖ ರಾಜ್ಯ ಸರ್ಕಾರಿ ಯೋಜನೆಗಳಿಗೆ ಪ್ರಧಾನಿ ಅವರು ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಿದರು. ಇವುಗಳಲ್ಲಿ ಒಟ್ಟು 750 ಕಿ.ಮೀ. ಉದ್ದದ 3,240 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 12 ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ವಹಿಸುವ ಯೋಜನೆಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ಸೇರಿವೆ. ಈ ಕಾರ್ಯಕ್ರಮದಡಿ, ಮತ್ತಷ್ಟು ಹೆಚ್ಚುವರಿಯಾಗಿ 900 ಕಿ.ಮೀ. ಹೊಸ ಹೆದ್ದಾರಿ ವಿಸ್ತರಣೆ ಸೇರಿವೆ. ಬಿಕಾನೇರ್ ಮತ್ತು ಉದಯಪುರದಲ್ಲಿ ವಿದ್ಯುತ್ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ರಾಜ್ಸಮಂದ್, ಪ್ರತಾಪ್ಗಢ, ಭಿಲ್ವಾರಾ, ಧೋಲ್ಪುರದಲ್ಲಿ ನರ್ಸಿಂಗ್ ಕಾಲೇಜುಗಳನ್ನು ಸಹ ಅವರು ಉದ್ಘಾಟಿಸಿದರು. ಜುನ್ಜುನು ಜಿಲ್ಲೆಯಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ಫ್ಲೋರೋಸಿಸ್ ತಗ್ಗಿಸುವಿಕೆ ಯೋಜನೆ, ಅಮೃತ್ 2.0 ಅಡಿ, ಪಾಲಿ ಜಿಲ್ಲೆಯ 7 ಪಟ್ಟಣಗಳಲ್ಲಿ ನಗರ ನೀರು ಸರಬರಾಜು ಯೋಜನೆಗಳ ಪುನಾರಚನೆ ಸೇರಿದಂತೆ ಈ ಪ್ರದೇಶದ ವಿವಿಧ ಜಲ ಮೂಲಸೌಕರ್ಯ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು.
*****
(Release ID: 2130521)
Read this release in:
Bengali-TR
,
Khasi
,
English
,
Urdu
,
Marathi
,
Hindi
,
Nepali
,
Bengali
,
Assamese
,
Gujarati
,
Odia
,
Tamil
,
Telugu
,
Malayalam