ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರೊಂದಿಗೆ ಪ್ರಧಾನಮಂತ್ರಿಯವರ ಸಂವಾದ

Posted On: 07 SEP 2024 5:38PM by PIB Bengaluru

ಶಿಕ್ಷಕರು: ಗೌರವಾನ್ವಿತ ಪ್ರಧಾನಿ ಸರ್, ಶುಭಾಶಯಗಳು! ನಾನು ಜಾರ್ಖಂಡ್ ನ ಬೊಕಾರೊದ ಚಂದಂಕಿಯರಿಯ '12 ಹೈಸ್ಕೂಲ್'ನಿಂದ ಆಶಾ ರಾಣಿ.

ಶಿಕ್ಷಕರು: ಸರ್, ಸಂಸ್ಕೃತ ಶಿಕ್ಷಕಿನಾಗಿ, ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ನನ್ನ ಕನಸಾಗಿತ್ತು. ಈ ಸಂಸ್ಕೃತಿಯು ನಮ್ಮ ಪುರಾತನ ಬೋಧನೆಗಳು ಅಥವಾ ಸಂಸ್ಕಾರಗಳ ಮೂಲಕ ಜೀವನದ ಮೌಲ್ಯಗಳು ಮತ್ತು ಆದರ್ಶಗಳನ್ನು ನೀಡುತ್ತದೆ. ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಾನು ನನ್ನ ವಿದ್ಯಾರ್ಥಿಗಳಲ್ಲಿ ಸಂಸ್ಕೃತದ ಬಗ್ಗೆ ಆಸಕ್ತಿಯನ್ನು ಬೆಳೆಸಿದ್ದೇನೆ ಮತ್ತು ಅದನ್ನು ನೈತಿಕ ಶಿಕ್ಷಣದ ಅಡಿಪಾಯವನ್ನಾಗಿ ಮಾಡಿದ್ದೇನೆ. ವಿವಿಧ ಶ್ಲೋಕಗಳ ಮೂಲಕ, ಅವರಿಗೆ ಜೀವನದ ಮೌಲ್ಯಗಳನ್ನು ಕಲಿಸಲು ನಾನು ಪ್ರಯತ್ನಿಸಿದ್ದೇನೆ.

ಪ್ರಧಾನಮಂತ್ರಿಯವರು: ನೀವು ಅವರನ್ನು ಸಂಸ್ಕೃತದತ್ತ ಆಕರ್ಷಿಸುವ ಮೂಲಕ, ಅವರನ್ನು ಜ್ಞಾನದ ವಿಶಾಲ ಭಂಡಾರದತ್ತ ಮಾರ್ಗದರ್ಶನ ಮಾಡುತ್ತಿದ್ದೀರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದು ನಮ್ಮ ದೇಶದಲ್ಲಿ ಆಳವಾಗಿ ಅಧ್ಯಯನ ಮಾಡಲಾಗುತ್ತಿರುವ ವಿಷಯವಾಗಿದೆ. ವೈದಿಕ ಗಣಿತ ಎಂದರೇನು ಎಂಬುದನ್ನು ನೀವು ಈ ಮಕ್ಕಳಿಗೆ ಎಂದಾದರೂ ವಿವರಿಸಿದ್ದೀರಾ? ಸಂಸ್ಕೃತ ಶಿಕ್ಷಕರಾಗಿ, ಅಥವಾ ಶಿಕ್ಷಕರ ಕೊಠಡಿಯಲ್ಲಿ ನಿಮ್ಮ ಸಹೋದ್ಯೋಗಿಗಳ ನಡುವೆ ವೈದಿಕ ಗಣಿತದ ಕುರಿತು ಎಂದಾದರೂ ಚರ್ಚೆ ನಡೆದಿದೆಯೇ?

ಶಿಕ್ಷಕರು: ಇಲ್ಲ ಸರ್. ಇನ್ನೂ ಆಗಿಲ್ಲ.

ಪ್ರಧಾನಮಂತ್ರಿಯವರು: ಸರಿ, ನೀವು ಖಂಡಿತವಾಗಿ ಒಮ್ಮೆ ಪ್ರಯತ್ನಿಸಿ ನೋಡಬೇಕು. ಯಾರಿಗೆ ಗೊತ್ತು, ಅದರಿಂದ ನಿಮಗೆಲ್ಲರಿಗೂ ಲಾಭವಾಗಬಹುದು. ವೈದಿಕ ಗಣಿತಕ್ಕಾಗಿ ಆನ್ಲೈನ್ ತರಗತಿಗಳೂ ಲಭ್ಯವಿವೆ. ಯುಕೆಯಲ್ಲಿ, ಕೆಲವು ಕಡೆಗಳಲ್ಲಿ ವೈದಿಕ ಗಣಿತವನ್ನು ಈಗಾಗಲೇ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಸಾಮಾನ್ಯವಾಗಿ ಗಣಿತದಲ್ಲಿ ಆಸಕ್ತಿ ಇಲ್ಲದ ಮಕ್ಕಳಿಗೂ ಸಹ ಅದನ್ನು ನೋಡಿದಾಗ ಅದು ಆಕರ್ಷಕವಾಗಿ ಕಾಣಬಹುದು, ಬಹುಶಃ ಮಾಯಾಜಾಲದಂತೆಯೇ. ಅವರು ಇನ್ನಷ್ಟು ಕಲಿಯಲು ಬಯಸುತ್ತಾರೆ. ಹೀಗಾಗಿ, ಸಂಸ್ಕೃತದ ಮೂಲಕ, ನೀವು ಅವರಿಗೆ ನಮ್ಮ ದೇಶದ ಕೆಲವು ವಿಶಿಷ್ಟ ವಿಷಯಗಳನ್ನು ಪರಿಚಯಿಸಬಹುದು.

ಶಿಕ್ಷಕರು: ಸರ್, ಇದು ಅದ್ಭುತ ಸಲಹೆ. ಖಂಡಿತವಾಗಿಯೂ ನಾನು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತೇನೆ.

ಪ್ರಧಾನಮಂತ್ರಿಯವರು: ಸರಿ, ನಿಮಗೆ ಶುಭಾಶಯಗಳು.

ಶಿಕ್ಷಕರು: ಧನ್ಯವಾದಗಳು, ಸರ್.

ಶಿಕ್ಷಕರು: ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ನಿಮಗೆ ನನ್ನ ನಮನಗಳು. ನಾನು ಮಹಾರಾಷ್ಟ್ರದ ಕೊಲ್ಹಾಪುರದವನು, ರಾಜರ್ಷಿ ಶಾಹು ಜೀ ಜನಿಸಿದ  ಜಿಲ್ಲೆಯವನು.

ಪ್ರಧಾನಮಂತ್ರಿಯವರು: ಇಲ್ಲಿಗೆ ಬಂದ ಮೇಲೆ ನಿಮಗೆ ಗಂಟಲು ನೋವು ಬಂದಿದೆಯೇ ಅಥವಾ ಇದು ಸ್ವಾಭಾವಿಕವಾಗಿಯೇ?

ಶಿಕ್ಷಕರು: ಇಲ್ಲ ಸರ್, ನನ್ನ ಧ್ವನಿ ಯಾವಾಗಲೂ ಹೀಗೆಯೇ  

ಪ್ರಧಾನಮಂತ್ರಿಯವರು: ಆಹ್,  ನಿಮ್ಮ ಧ್ವನಿಯು ಸಹಜವಾಗಿಯೇ ಹಾಗೆ ಇದೆ.

ಶಿಕ್ಷಕರು: ಹೌದು ಸರ್, ನಾನು ಮಹಾರಾಷ್ಟ್ರದ ಕೊಲ್ಲಾಪುರದವನು ಮತ್ತು ನಾನು ಸಮಲವಿಯ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿ. ಕೊಲ್ಹಾಪುರವು ರಾಜರ್ಷಿ ಶಾಹುವಿನ ಜನ್ಮಸ್ಥಳವಾಗಿದೆ.

ಪ್ರಧಾನಮಂತ್ರಿಯವರು: ಹಾಗಾದರೆ ನೀವು ಕಲೆಯನ್ನು ಕಲಿಸುತ್ತೀರಾ?

ಶಿಕ್ಷಕರು: ಹೌದು, ಸರ್. ನಾನು ಚಿತ್ರಕಲೆ, ನೃತ್ಯ, ನಾಟಕ, ಸಂಗೀತ, ಹಾಡುಗಾರಿಕೆ, ವಾದ್ಯಗಳನ್ನು ನುಡಿಸುವುದು, ಕರಕುಶಲ ಮತ್ತು ಇತರ ಪ್ರಕಾರದ ಕಲೆಗಳನ್ನು ಕಲಿಸುತ್ತೇನೆ.

ಪ್ರಧಾನಮಂತ್ರಿಯವರು: ನಾನು ಅದನ್ನು ನೋಡುತ್ತೇನೆ.

ಶಿಕ್ಷಕರು: ಸಾಮಾನ್ಯವಾಗಿ ಬಾಲಿವುಡ್ ಅಥವಾ ಹಿಂದಿ ಚಲನಚಿತ್ರ ನೃತ್ಯಗಳು ಎಲ್ಲೆಡೆ ಮೇಲುಗೈ ಸಾಧಿಸುತ್ತವೆ. ಆದರೆ ನಾನು 23 ವರ್ಷಗಳಿಂದ ಬೋಧಿಸುತ್ತಿರುವ ನನ್ನ ಶಾಲೆಯಲ್ಲಿ, ನಾನು ಜಾನಪದ ಮತ್ತು ಶಾಸ್ತ್ರೀಯ ನೃತ್ಯಗಳನ್ನೊಳಗೊಂಡಂತೆ ಭಾರತೀಯ ಸಂಸ್ಕೃತಿಯನ್ನು ಆಧರಿಸಿದ ಪ್ರದರ್ಶನಗಳನ್ನು ಸಂಯೋಜಿಸಿದ್ದೇನೆ. ನಾನು ಶಿವ ತಾಂಡವ ಸ್ತೋತ್ರವನ್ನೂ ಮಾಡಿದ್ದೇನೆ. 200-300 ಹುಡುಗರನ್ನು ಒಳಗೊಂಡ ದೊಡ್ಡ ಮಟ್ಟದ ಪ್ರದರ್ಶನಗಳನ್ನು ನಡೆಸುತ್ತೇನೆ ಮತ್ತು ವಿಶ್ವಿ-ಕ್ರಮ್ ನಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇನೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಆಧರಿಸಿದ ಪ್ರದರ್ಶನವನ್ನೂ ನಾನು ಸಂಯೋಜಿಸಿದ್ದೇನೆ.  ಅದನ್ನು ವಿಶ್ವಿ-ಕ್ರಮ್ ನಲ್ಲಿ ರೆಕಾರ್ಡ್ ಮಾಡಲಾಗಿದೆ. ನಾನು ಶಿವ ತಾಂಡವ, ಹನುಮಾನ್ ಚಾಲೀಸಾ ಮತ್ತು ದೇವಿಯನ್ನು ಆರಾಧಿಸುವ ಭಕ್ತಿಗೀತೆಗಳನ್ನು ಪ್ರದರ್ಶಿಸಿದ್ದೇನೆ. ಈ  ಪ್ರದರ್ಶನಗಳಿಂದ ನಾನು ನೃತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿದ್ದೇನೆ.

ಪ್ರಧಾನಮಂತ್ರಿಯವರು: ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ ಎಂದು ನನಗೆ ಖಾತ್ರಿಯಿದೆ.

ಶಿಕ್ಷಕರು: ಹೌದು, ಸರ್, ನಾನು ಅದನ್ನು ನಾನೇ ಮಾಡುತ್ತೇನೆ ಮತ್ತು ನನ್ನ ವಿದ್ಯಾರ್ಥಿಗಳು ಸಹ ಪ್ರದರ್ಶನ ನೀಡುತ್ತಾರೆ.

ಪ್ರಧಾನಮಂತ್ರಿಯವರು: ನಿಜವಾಗಿ, ಆದರೆ ನೀವು ನಿಮ್ಮ ಜೀವನವನ್ನು ಮುಡಿಪಾಗಿಟ್ಟ ವಿದ್ಯಾರ್ಥಿಗಳಿಗೆ ಇನ್ನೇನು ಮಾಡುತ್ತೀರಿ?

ಶಿಕ್ಷಕರು: ಸಾರ್, ವಿದ್ಯಾರ್ಥಿಗಳು ಮಾತ್ರ ಎಲ್ಲವನ್ನೂ ಮಾಡುತ್ತಾರೆ!

ಪ್ರಧಾನಮಂತ್ರಿಯವರು: ಅವರು ಏನು ಮಾಡುತ್ತಾರೆ?

ಶಿಕ್ಷಕರು: 300 ರಿಂದ 400 ಮಕ್ಕಳು ಒಂದೇ ನೃತ್ಯ ಸಂಯೋಜನೆಯಲ್ಲಿ ಕೆಲಸ ಮಾಡುತ್ತಾರೆ. ಮತ್ತು ಇದು ನನ್ನ ಶಾಲೆಯ ವಿದ್ಯಾರ್ಥಿಗಳು ಮಾತ್ರವಲ್ಲ. ನಾನು ಸುತ್ತಮುತ್ತಲಿನ ಕೊಳಚೆ ಪ್ರದೇಶಗಳ ಮಕ್ಕಳು, ಲೈಂಗಿಕ ಕಾರ್ಯಕರ್ತೆಯರ ಮಕ್ಕಳು ಮತ್ತು ಗಾಲಿಕುರ್ಚಿಯಲ್ಲಿರುವ ಮಕ್ಕಳನ್ನು ಸಹ ಸೇರಿಸಿಕೊಳ್ಳುತ್ತೇನೆ. ನಾನು  ಅವರನ್ನು ಅತಿಥಿ ಕಲಾವಿದರಾಗಿ ಆಹ್ವಾನಿಸುತ್ತೇನೆ.

ಪ್ರಧಾನಮಂತ್ರಿಯವರು: ಆದರೆ ಆ ಮಕ್ಕಳಿಗೆ ಇಂದಿನ ದಿನಗಳಲ್ಲಿ ಸಿನಿಮಾ ಹಾಡುಗಳ ಬಗ್ಗೆ ಹೆಚ್ಚು ಆಸಕ್ತಿ ಇರಬೇಕು, ಅಲ್ಲವೇ? 

ಶಿಕ್ಷಕರು: ಹೌದು ಸರ್. ಆದಾಗ್ಯೂ, ಜಾನಪದ ನೃತ್ಯದಲ್ಲಿರುವ ಸಂಪತ್ತು ಮತ್ತು ಆಳವನ್ನು ಅವರಿಗೆ ವಿವರಿಸುತ್ತೇನೆ ಮತ್ತು ಅವರು ನನ್ನ ಮಾತನ್ನು ಕೇಳುತ್ತಾರೆ ಎಂಬುದು ನನ್ನ ಅದೃಷ್ಟ.

ಪ್ರಧಾನಮಂತ್ರಿಯವರು: ಅದರ ಬಗ್ಗೆ ಕೇಳೋಣ.

ಶಿಕ್ಷಕರು: ಹೌದು, ಕಳೆದ 10 ವರ್ಷಗಳಿಂದ ನಾನು ಇದನ್ನೆಲ್ಲ ಮಾಡುತ್ತಿದ್ದೇನೆ.

ಪ್ರಧಾನಮಂತ್ರಿಯವರು: ಒಂದು ಮಗು ತನ್ನ ಶಿಕ್ಷಕರ ಮಾತನ್ನು ಕೇಳದಿದ್ದರೆ, ಅವರು ಬೇರೆ ಯಾರ ಮಾತನ್ನು ಕೇಳುತ್ತಾರೆ? ನೀವು ಎಷ್ಟು ಸಮಯದಿಂದ ಕಲಿಸುತ್ತಿದ್ದೀರಿ?

ಶಿಕ್ಷಕರು: ಒಟ್ಟೂ 30 ವರ್ಷ ಆಯ್ತು ಸರ್.

ಪ್ರಧಾನಮಂತ್ರಿಯವರು: ನೀವು ಮಕ್ಕಳಿಗೆ ನೃತ್ಯದ ಮೂಲಕ ಕಲಿಸುವಾಗ, ಅದರ ಮೂಲಕ ನೀವು ಕೆಲವು ರೀತಿಯ ಸಂದೇಶವನ್ನು ರವಾನಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಯಾವ ಸಂದೇಶಗಳನ್ನು ಹಂಚಿಕೊಳ್ಳುತ್ತೀರಿ?

ಶಿಕ್ಷಕರು: ಹೌದು, ನಾನು ಸಾಮಾಜಿಕ ಸಂದೇಶಗಳೊಂದಿಗೆ ಪ್ರದರ್ಶನಗಳನ್ನು ರಚಿಸುತ್ತೇನೆ. ಉದಾಹರಣೆಗೆ, ನಾನು ಮದ್ಯಪಾನ ಮತ್ತು ವಾಹನ ಚಾಲನೆಯ ಅಪಾಯಗಳ ಕುರಿತು ನೃತ್ಯ ನಾಟಕವನ್ನು ಆಯೋಜಿಸಿದೆ, ಅದನ್ನು ನಾನು ಬೀದಿ ನಾಟಕವಾಗಿ ನಗರದಾದ್ಯಂತ ಪ್ರದರ್ಶಿಸಿದೆ. ಇನ್ನೊಂದು ಉದಾಹರಣೆಯೆಂದರೆ ನಾನು ನಿರ್ದೇಶಿಸಿದ 'ಸ್ಪರ್ಶ್' ಎಂಬ ಕಿರುಚಿತ್ರ, ಅಲ್ಲಿ ಇಡೀ ತಾಂತ್ರಿಕ ಸಿಬ್ಬಂದಿ ನನ್ನ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು.

ಪ್ರಧಾನಮಂತ್ರಿಯವರು: ಹಾಗಾದರೆ, ಕಳೆದ ಕೆಲವು ದಿನಗಳಿಂದ, ನೀವು ಬೇರೆ ಬೇರೆ ಜನರ ಮನೆಗಳಿಗೆ-ಈ ವ್ಯಕ್ತಿಯ ಮನೆಗೆ, ಆ ವ್ಯಕ್ತಿಯ ಮನೆಗೆ ಭೇಟಿ ನೀಡುತ್ತಿರಬೇಕು. ನೀವು ಸಾಕಷ್ಟು ದಣಿದಿರಬೇಕು. ನೀವು ಯಾರನ್ನಾದರೂ ವಿಶೇಷ ಭೇಟಿ ಮಾಡಿದ್ದೀರಾ? ನಿಮ್ಮ ಭೇಟಿಯಿಂದ ಯಾರಾದರೂ ಯಾವುದೇ ಪ್ರಯೋಜನಗಳನ್ನು ಬಯಸಿದ್ದಾರೆಯೇ?

ಶಿಕ್ಷಕರು: ಹೌದು, ಸರ್, ಅನೇಕ ಜನರು, ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿರುವವರು. ಆಹ್ವಾನ ನೀಡಿದರೆ ಅವರ ಕಾಲೇಜುಗಳಿಗೆ ಬರಲು ನಾನು ಸಿದ್ಧನಿದ್ದೇನೆಯೇ ಎಂದು ಕೆಲವರು ಕೇಳಿದರು.

ಪ್ರಧಾನಮಂತ್ರಿಯವರು: ಹಾಗಾದರೆ, ನೀವು ಭವಿಷ್ಯಕ್ಕಾಗಿ ಯೋಜನೆ ರೂಪಿಸಿರುವಂತಿದೆ. ಇದರರ್ಥ ನೀವು ವಾಣಿಜ್ಯ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತೀರಾ?

ಶಿಕ್ಷಕರು: ಹೌದು, ನಾನು ವಾಣಿಜ್ಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ, ಆದರೆ-

ಪ್ರಧಾನಮಂತ್ರಿಯವರು: ಹಾಗಾದರೆ ನಿಮಗೆ ದೊಡ್ಡ ಮಾರ್ಕೆಟ್ ಇರಬೇಕು.

ಶಿಕ್ಷಕರು: ಇಲ್ಲ, ಸರ್, ನಾನು ಸ್ಪಷ್ಟಪಡಿಸುತ್ತೇನೆ. ನಾನು ವಾಣಿಜ್ಯ ಉದ್ದೇಶಕ್ಕಾಗಿ ಕೆಲಸ ಮಾಡುತ್ತೇನೆ ನಿಜ, ಆದರೆ ಆ ಗಳಿಕೆಯನ್ನು ಒಂದು ಉದ್ದೇಶಕ್ಕಾಗಿ ಬಳಸುತ್ತೇನೆ. ನಾನು ಚಲನಚಿತ್ರಗಳಿಗೆ ನೃತ್ಯ ರಚನೆ ಮಾಡಿದ್ದೇನೆ, ಆದರೆ ನಾನು 11 ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದೇನೆ. ಅವರಿಗೆ ಬೆಂಬಲ ನೀಡಲು ನಾನು ವಾಣಿಜ್ಯ ಉದ್ದೇಶದ ಕೆಲಸ ಮಾಡುತ್ತೇನೆ.

ಪ್ರಧಾನಮಂತ್ರಿಯವರು: ನೀವು ಅವರಿಗಾಗಿ ಯಾವ ರೀತಿಯ ಕೆಲಸ ಮಾಡುತ್ತೀರಿ?

ಶಿಕ್ಷಕರು: ಈ ಮಕ್ಕಳು ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದರು ಮತ್ತು ಅವರಿಗೆ ಕಲೆಯಲ್ಲಿ ಆಸಕ್ತಿ ಇತ್ತು. ಅನಾಥಾಶ್ರಮವು ಅವರ ಸಾಮಾನ್ಯ ಅಭ್ಯಾಸದ ಭಾಗವಾಗಿ 10 ನೇ ತರಗತಿಯ ನಂತರ ಅವರನ್ನು ಐಟಿಐಗೆ ಕಳುಹಿಸಲು ಯೋಜಿಸಿದೆ. ನಾನು ಆ ಸಂಪ್ರದಾಯವನ್ನು ಮುರಿಯಲು ಬಯಸಿದೆ. ಆದರೆ ಅವರು ಮೊದಲು ನಿರಾಕರಿಸಿದರು. ಹಾಗಾಗಿ ಮಕ್ಕಳನ್ನು ಅನಾಥಾಶ್ರಮದಿಂದ ಹೊರಕ್ಕೆ ಕರೆದೊಯ್ದು, ಉಳಿದುಕೊಳ್ಳಲು ಸ್ಥಳಾವಕಾಶ ಕಲ್ಪಿಸಿ, ಅವರ ಕಲಾ ಪ್ರತಿಭೆಯನ್ನು ಪೋಷಿಸಿದೆ. ಅವರು ಬೆಳೆದಂತೆ, ಅವರು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದರು. ಈಗ ಇವರಲ್ಲಿ ಇಬ್ಬರು ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನಿಬ್ಬರು CBSE ಮಂಡಳಿಯ ಸರ್ಕಾರಿ ಶಾಲೆಗಳಲ್ಲಿ ನೃತ್ಯ ಬೋಧಕರಾಗಿದ್ದಾರೆ.

ಪ್ರಧಾನಮಂತ್ರಿಯವರು: ಅದು ನಿಜವಾಗಿಯೂ ಅದ್ಭುತವಾಗಿದೆ. ಕೊನೆಗೆ, ನೀವು ಮಾಡಿದ್ದು ಅದ್ಭುತವಾದ ಕಾರ್ಯ. ಇತರರು ಆ ಮಕ್ಕಳನ್ನು ತ್ಯಜಿಸಿರಬಹುದು, ಆದರೆ ನೀವು ಹಾಗೆ ಮಾಡಲಿಲ್ಲ; ನೀವು ಅವರನ್ನು ಸ್ವೀಕರಿಸಿ ದತ್ತು ಪಡೆದಿರಿ. ಎಂತಹ ಉದಾತ್ತ ಕಾರ್ಯ ಮಾಡಿದ್ದೀರಿ.

ಶಿಕ್ಷಕರು: ಸರ್, ಇದು ನನಗೆ ಬಹಳ ವೈಯಕ್ತಿಕವಾದ ವಿಷಯ. ನಾನು ಸ್ವತಃ ಅನಾಥಾಶ್ರಮದಲ್ಲಿ ಬೆಳೆದವನು, ಆದ್ದರಿಂದ ಅದರ ಅನುಭವ ನನಗೆ ತಿಳಿದಿದೆ. ಆ ಸಮಯದಲ್ಲಿ, ನನ್ನ ಬಳಿ ಏನೂ ಇರಲಿಲ್ಲ. ಆದ್ದರಿಂದ ಈಗ, ನಾನು ಕಷ್ಟದಲ್ಲಿರುವವರಿಗೆ ಏನಾದರೂ ಕೊಡಬಹುದಾದರೆ, ಅದು ನನಗೆ ದೊಡ್ಡ ಸೌಭಾಗ್ಯವೆಂದು ಭಾವಿಸುತ್ತೇನೆ.

ಪ್ರಧಾನಮಂತ್ರಿಯವರು: ನೀವು ಕಲೆಯ ಮೂಲಕ ಬದುಕಿರುವುದು ಮಾತ್ರವಲ್ಲ, ಮೌಲ್ಯಗಳೊಂದಿಗೆ ಬದುಕಿದ್ದೀರಿ. ಅದು ನಿಜವಾಗಿಯೂ ಮಹತ್ವದ್ದಾಗಿದೆ.

ಶಿಕ್ಷಕರು: ಧನ್ಯವಾದಗಳು, ಸರ್.

ಪ್ರಧಾನಮಂತ್ರಿಯವರು: ನಿಮ್ಮ ಹೆಸರು ಸಾಗರ್, ನಿಜವಾಗಿಯೂ ನಿಮಗೆ ಸರಿಹೊಂದುತ್ತದೆ.

ಶಿಕ್ಷಕರು: ಹೌದು, ಸರ್, ನಿಮ್ಮನ್ನು ಭೇಟಿ ಮಾಡಲು ಮತ್ತು ನಿಮ್ಮೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇದು ಒಂದು ದೊಡ್ಡ ಸೌಭಾಗ್ಯ.

ಪ್ರಧಾನಮಂತ್ರಿಯವರು: ನಿಮಗೆ ಶುಭ ಹಾರೈಸುತ್ತೇನೆ.

ಶಿಕ್ಷಕರು: ಧನ್ಯವಾದಗಳು, ಸರ್.

ಶಿಕ್ಷಕರು: ನಮಸ್ಕಾರ್, ಗೌರವಾನ್ವಿತ ಪ್ರಧಾನ ಮಂತ್ರಿ.

ಪ್ರಧಾನಮಂತ್ರಿಯವರು: ನಮಸ್ತೆ.

ಶಿಕ್ಷಕರು: ನಾನು ಡಾ. ಅವಿನಾಶ ಶರ್ಮಾ, ಹರಿಯಾಣ ಶಿಕ್ಷಣ ಇಲಾಖೆಯಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಗೌರವಾನ್ವಿತ ಸರ್, ಹರಿಯಾಣದ ವಂಚಿತ ಸಮುದಾಯಗಳ ಮಕ್ಕಳಿಗಾಗಿ ನಾನು ಒಂದು ಭಾಷಾ ಪ್ರಯೋಗಾಲಯವನ್ನು ಸ್ಥಾಪಿಸಿದ್ದೇನೆ. ಈ ಮಕ್ಕಳು ಇಂಗ್ಲಿಷ್ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಗ್ರಹಿಸುವುದು ಬಹಳ ಕಷ್ಟಕರವಾಗಿರುವ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಈ ಭಾಷಾ ಪ್ರಯೋಗಾಲಯವು ಕೇವಲ ಇಂಗ್ಲಿಷ್ ಮೇಲೆ ಗಮನ ಕೇಂದ್ರೀಕರಿಸಿಲ್ಲ. ಇದು ಪ್ರಾದೇಶಿಕ ಭಾಷೆಗಳು ಮತ್ತು ಮಾತೃಭಾಷೆಗಳನ್ನು ಸಹ ಒಳಗೊಂಡಿದೆ.

ಸರ್, ರಾಷ್ಟ್ರೀಯ ಶಿಕ್ಷಣ ನೀತಿ 2020 ಮಕ್ಕಳ ಕಲಿಕೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಬಳಕೆಗೆ ಒತ್ತು ನೀಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾನು ಪ್ರಯೋಗಾಲಯದಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸಿದ್ದೇನೆ. 'ಸ್ಪೀಕೋಮೀಟರ್' ಮತ್ತು 'ಟಾಕ್ಪಾಲ್' ನಂತಹ ಸಾಧನಗಳು ಕೃತಕ ಬುದ್ಧಿಮತ್ತೆ ಆಧಾರಿತವಾಗಿದ್ದು, ವಿದ್ಯಾರ್ಥಿಗಳಿಗೆ ಸರಿಯಾದ ಉಚ್ಚಾರಣೆಯನ್ನು ಕಲಿಯಲು ಮತ್ತು ಕರಗತ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. UNESCO, UNICEF, ಹಾಗೂ ಇಂಡೋನೇಷ್ಯಾ ಮತ್ತು ಉಜ್ಬೇಕಿಸ್ತಾನ್‌ನಂತಹ ದೇಶಗಳಲ್ಲಿ ನಾನು ನನ್ನ ರಾಜ್ಯವನ್ನು ಪ್ರತಿನಿಧಿಸಿದ್ದೇನೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಈ ಅನುಭವಗಳ ಪರಿಣಾಮವು ನನ್ನ ತರಗತಿಯಲ್ಲಿ ಅನುಭವಿಸಲ್ಪಟ್ಟಿದೆ. ಇಂದು, ಹರಿಯಾಣದ ಒಂದು ಸರಕಾರಿ ಶಾಲೆಯು ಜಾಗತಿಕ ತರಗತಿಯಾಗಿ ಪರಿವರ್ತನೆಗೊಂಡಿದೆ, ಇಲ್ಲಿ ವಿದ್ಯಾರ್ಥಿಗಳು ಇಂಡೋನೇಷ್ಯಾದ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಹೊಂದಿ, ಜ್ಞಾನ ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಪ್ರಧಾನಮಂತ್ರಿಯವರು: ನಿಮ್ಮ ಅನುಭವದ ಬಗ್ಗೆ ಮತ್ತು ನೀವು ಇದನ್ನು ಹೇಗೆ ಸಾಧಿಸಿದ್ದೀರಿ ಎಂಬುದರ ಕುರಿತು ನೀವು ಇನ್ನಷ್ಟು ಹಂಚಿಕೊಳ್ಳಬಹುದೇ, ಇದರಿಂದ ಇತರರು ಸಹ ಇದರಿಂದ ಕಲಿಯಬಹುದು?

ಶಿಕ್ಷಕರು: ಸರ್, ಮೈಕ್ರೋಸಾಫ್ಟ್ ಸ್ಕಾರ್ಪ್ಥೆನ್ (Microsoft Scarpthen) ಎನ್ನುವ ಕಾರ್ಯಕ್ರಮವನ್ನು ನಾನು ನನ್ನ ವಿದ್ಯಾರ್ಥಿಗಳಿಗೆ ಪರಿಚಯಿಸಿದೆ. ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಂದಿಗೆ ಅವರ ಪರಸ್ಪರ ಚರ್ಚೆಗಳ ಮೂಲಕ, ನಮ್ಮ ಮಕ್ಕಳು ಅವರ ಸಂಸ್ಕೃತಿ, ಭಾಷೆ, ಮತ್ತು ಶೈಕ್ಷಣಿಕ ಪ್ರಗತಿಯನ್ನು ಹೇಗೆ ಸಾಧಿಸುತ್ತಾರೆ ಎಂಬುದರ ಬಗ್ಗೆಕಲಿಯಲು ಸಾಧ್ಯವಾಗುತ್ತದೆ.ಸರ್, ನಾನು ನಿಮಗೆ ಒಂದು ಅದ್ಭುತ ಅನುಭವವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನಾನು ಉಜ್ಬೇಕಿಸ್ತಾನ್ಗೆ ಹೋದಾಗ ಅಲ್ಲಿನ ನನ್ನ ಅನುಭವಗಳನ್ನು ನನ್ನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡೆ.  ಅವರಿಗೆ ಇಂಗ್ಲಿಷ್ ಹೇಗೆ ಅವರ ಶೈಕ್ಷಣಿಕ ಭಾಷೆಯಾಗಿದೆಯೋ, ಅದೇ ರೀತಿ ಉಜ್ಬೇಕಿಸ್ತಾನದಲ್ಲಿ ಜನರು ತಮ್ಮ ಸ್ಥಳೀಯ ಭಾಷೆಯಾದ ಉಜ್ಬೇಕ್ ಮಾತನಾಡುತ್ತಾರೆ. ಆದರೆ ರಷ್ಯನ್ ಅಧಿಕೃತ ಮತ್ತು ರಾಷ್ಟ್ರೀಯ ಭಾಷೆಯಾಗಿ ಸೇವೆ ಮಾಡುತ್ತದೆ. ಇಂಗ್ಲಿಷ್ ಅವರ ಶೈಕ್ಷಣಿಕ ಭಾಷೆಯಾಗಿದ್ದು, ಜಗತ್ತಿನ ಇತರ ಭಾಗಗಳೊಂದಿಗೆ ಸಂಪರ್ಕ ಹೊಂದಲು ಸಹಾಯಕವಾಗಿದೆ. ಅವರಿಗೆ, ಇಂಗ್ಲಿಷ್ ಕೇವಲ ಪಠ್ಯಕ್ರಮದ ಒಂದು ಭಾಗವಲ್ಲ. ಈ ಅರ್ಥವನ್ನು ಅರಿತ ನಂತರ, ಮಕ್ಕಳು ಇಂಗ್ಲಿಷ್ ಕಲಿಯಲು ನಿಜವಾದ ಆಸಕ್ತಿ ಬೆಳೆಸಿದ್ದಾರೆ. ಏಕೆಂದರೆ ಈಗ ಅವರು ಇಂಗ್ಲಿಷ್ ಕೇವಲ ವಿದೇಶಗಳಲ್ಲಿ ಮಾತನಾಡುವ ಭಾಷೆಯಷ್ಟೇ ಅಲ್ಲ, ಅದು ಅವರಿಗೆ ಪರಿಚಿತವಾಗುತ್ತಿದೆ. ಆದಾಗ್ಯೂ, ಇಂಗ್ಲಿಷ್ ಕಲಿಯುವುದು ಅವರಿಗೆ ನಮ್ಮ ಭಾರತೀಯ ವಿದ್ಯಾರ್ಥಿಗಳಿಗೆ ಹೇಗೆ ಸವಾಲಿನಂತಿದೆ, ಹಾಗೆಯೇ ಕಷ್ಟಕರವಾಗಿದೆ.

ಪ್ರಧಾನಮಂತ್ರಿಯವರು: ನೀವು ಮಕ್ಕಳಿಗೆ ಜಗತ್ತನ್ನು ಪರಿಚಯಿಸುತ್ತಿದ್ದೀರಿ, ಇದು ಅದ್ಭುತ, ಆದರೆ ನೀವು ಅವರಿಗೆ ತಮ್ಮದೇ ದೇಶವನ್ನು ಪರಿಚಯಿಸುತ್ತಿದ್ದೀರಾ?

ಶಿಕ್ಷಕರು: ಖಂಡಿತವಾಗಿ, ಸರ್.

ಪ್ರಧಾನಮಂತ್ರಿಯವರು: ಹಾಗಾದರೆ, ನಮ್ಮ ದೇಶದಲ್ಲಿ ಅವರನ್ನು ಇಂಗ್ಲಿಷ್ ಕಲಿಯುವಂತೆ ಪ್ರೇರೇಪಿಸುವ ಅಂಶಗಳಿವೆಯೇ?

ಶಿಕ್ಷಕರು: ಸರ್, ನಾನು ಈ ಪ್ರಯೋಗಾಲಯದಲ್ಲಿ ಭಾಷಾ ಕೌಶಲ್ಯ ಅಭಿವೃದ್ಧಿಗೆ ಗಮನ ನೀಡಿದ್ದೇನೆ. ಇಂಗ್ಲಿಷ್ ಯಾವಾಗಲೂ ಪಠ್ಯಕ್ರಮದ ಭಾಗವಾಗಿದೆ, ಆದರೆ ಭಾಷೆಯನ್ನು ಹೇಗೆ ಕಲಿಯಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ. ನಾನು ಕಲಿಸುವ ವಿದ್ಯಾರ್ಥಿಗಳು ವೈವಿಧ್ಯಮಯ ಹರ್ಯಾನ್ವಿ ಹಿನ್ನೆಲೆಯಿಂದ ಬಂದವರು. ಉದಾಹರಣೆಗೆ, ರೋಹ್ಟಕ್ ನ ಮಗು ನುಹ್ ನ ಮಗುವಿನಿಂದ ಸಂಪೂರ್ಣವಾಗಿ ವಿಭಿನ್ನವಾದ ಉಪಭಾಷೆಯನ್ನು ಮಾತನಾಡುತ್ತದೆ.

ಪ್ರಧಾನಮಂತ್ರಿಯವರು: ಹೌದು, ನಮ್ಮ ಮನೆಯಲ್ಲಿ ಟೆಲಿಫೋನ್ ಇದ್ದ ದಿನಗಳನ್ನು ಇದು ನೆನಪಿಸುತ್ತದೆ.

ಶಿಕ್ಷಕರು: ನಿಜ, ಸರ್.

ಪ್ರಧಾನಮಂತ್ರಿಯವರು: ಆ ಬಾಕ್ಸ್ ಫೋನ್ ಆಗಿದೆ. ನಮ್ಮ ಮನೆಗೆ ಕೆಲವೊಮ್ಮೆ ಬಡ ಕುಟುಂಬದ ಮಹಿಳೆಯೊಬ್ಬರು ಕೆಲಸಕ್ಕೆ ಸಹಾಯ ಮಾಡಲು ಬರುತ್ತಿದ್ದರು. ಒಂದು ದಿನ, ಫೋನ್ ರಿಂಗಾಯಿತು, ಮತ್ತು ಅವಳು ಅದನ್ನು ತೆಗೆದುಕೊಂಡಳು. ಅವಳು ಉತ್ತರಿಸಿದ ತಕ್ಷಣ, "ಹಲೋ" ಎಂದಳು. ಅವಳು ಅದನ್ನು ಹೇಗೆ ಕಲಿತಳು?

ಶಿಕ್ಷಕರು: ಸರ್, ಇದು ಭಾಷಾ ಕೌಶಲ್ಯ ಅಭಿವೃದ್ಧಿಯ ಭಾಗವಾಗಿದೆ. ಭಾಷೆಯನ್ನು ಕೇಳುವ ಮತ್ತು ಬಳಕೆಯ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ.

ಪ್ರಧಾನಮಂತ್ರಿಯವರು: ನಿಜ! ಆ ಕಾರಣಕ್ಕಾಗಿಯೇ, ಭಾಷೆಯನ್ನು ಮಾತನಾಡುವುದರಿಂದ ಬೇಗನೆ ಕಲಿಯಬಹುದು. ನನಗೆ ನೆನಪಿದೆ, ನಾನು ಗುಜರಾತ್ನಲ್ಲಿ ಇದ್ದಾಗ, ಮಹಾರಾಷ್ಟ್ರದಿಂದ ಒಂದು ಕುಟುಂಬ ನನ್ನ ನಿವಾಸ ನಾಡಿಯಾಡ್ ಗೆ  ಕೆಲಸಕ್ಕಾಗಿ ಬಂತು. ಆ ವ್ಯಕ್ತಿ ಪ್ರಾಧ್ಯಾಪಕರಾಗಿದ್ದರು ಮತ್ತು ಅವರೊಂದಿಗೆ ಅವರ ವೃದ್ಧ ತಾಯಿಯನ್ನು ಕರೆತಂದರು. ಅವರು ದಿನವೆಲ್ಲಾ ಶಾಲೆಗಳಲ್ಲೂ ಕಾಲೇಜುಗಳಲ್ಲೂ ಕಳೆದರೂ, ಆರು ತಿಂಗಳಾದರೂ, ಅವರು ಸ್ಥಳೀಯ ಭಾಷೆಯನ್ನು ಕಲಿಯಲಿಲ್ಲ. ಆದರೆ ಅವರ ತಾಯಿ, ಸುಶಿಕ್ಷಿತರಲ್ಲದಿದ್ದರೂ, ಗುಜರಾತಿಯನ್ನು ಚೆನ್ನಾಗಿ ಮಾತನಾಡಲು ಕಲಿತಿದ್ದರು. ಒಂದು ದಿನ, ಅವರ ಮನೆಗೆ ಊಟಕ್ಕೆ ಹೋದಾಗ, ಅವರು ಅದನ್ನು ಹೇಗೆ ಕಲಿತರು ಎಂದು ಕೇಳಿದೆ. ಅವರು,  "ನಾನು ಮನೆಗೆಲಸದವರಿಂದ ಕಲಿತುಕೊಂಡೆ, ಅವರು ಕೇವಲ ಗುಜರಾತಿಯಲ್ಲಿ ಮಾತ್ರ ಮಾತನಾಡುತ್ತಿದ್ದರು" ಎಂದು ಹೇಳಿದರು.  ಭಾಷೆಯನ್ನು ಮಾತನಾಡುವ ಮೂಲಕ ಕಲಿಯಲಾಗುತ್ತದೆ.

ಶಿಕ್ಷಕರು: ಖಂಡಿತ, ಸರ್.

ಪ್ರಧಾನಮಂತ್ರಿಯವರು: ಇದು ನನ್ನ ಶಾಲಾ ದಿನಗಳನ್ನು ನೆನಪಿಸುತ್ತದೆ. ನಮ್ಮ ಶಿಕ್ಷಕರು ತುಂಬಾ ಕಟ್ಟುನಿಟ್ಟಾಗಿದ್ದರು ಮತ್ತು ನಾವು ಅವರ ಬಗ್ಗೆ ಸ್ವಲ್ಪ ಎಚ್ಚರದಿಂದಿರುತ್ತಿದ್ದೆವು. ರಾಜಾಜಿಯವರು 'ರಾಮಾಯಣ' ಮತ್ತು 'ಮಹಾಭಾರತ'ಗಳನ್ನು ಬರೆದಿದ್ದರು ಮತ್ತು ಎಲ್ಲರಿಗೂ 'ರಾಮಾಯಣ'ದ ಸಂಭಾಷಣೆಗಳು ಪರಿಚಿತವಾಗಿವೆ. ಈ ಭಾಷೆಯನ್ನು ಚೆನ್ನಾಗಿ ತಿಳಿಯದಿದ್ದರೂ ಸಹ. ನನಗೆ ಕಥೆ ಗೊತ್ತಿತ್ತು, ಆದರೆ ಭಾಷೆ ಗೊತ್ತಿರಲಿಲ್ಲ. ಆದರೂ, ಅಭ್ಯಾಸದ ಮೂಲಕ, ನಾನು ಕೊಂಚ, ಕೊಂಚ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದೆ. ಕೇವಲ ಒಂದು ಅಥವಾ ಎರಡು ಪದಗಳನ್ನು ಗುರುತಿಸುವ ಮೂಲಕವೇ, ಅವರು ಸೀತಾ ಮಾತೆಯ ಬಗ್ಗೆ ಮಾತನಾಡುತ್ತಿದ್ದರು ಎಂದು ಹೇಳಲು ಸಾಧ್ಯವಾಗುತ್ತಿತ್ತು.

ಶಿಕ್ಷಕರು: ಖಂಡಿತವಾಗಿ, ಸರ್.

ಪ್ರಧಾನಮಂತ್ರಿಯವರು: ಸರಿ, ಬಹಳ ಚೆನ್ನಾಗಿದೆ.

ಶಿಕ್ಷಕರು: ಧನ್ಯವಾದಗಳು, ಸರ್. ಧನ್ಯವಾದಗಳು.

ಪ್ರಧಾನಮಂತ್ರಿಯವರು: ಹರ ಹರ ಮಹಾದೇವ್.

ಶಿಕ್ಷಕರು: ಹರ ಹರ ಮಹಾದೇವ್.

ಪ್ರಧಾನಮಂತ್ರಿಯವರು: ಕಾಶಿಯ ಜನರಿಗೆ, ದಿನವು ಯಾವಾಗಲೂ 'ಹರ್ ಹರ ಮಹಾದೇವ್' ನೊಂದಿಗೆ ಪ್ರಾರಂಭವಾಗುತ್ತದೆ.

ಶಿಕ್ಷಕರು: ಸರ್, ಇಂದು ನಿಮ್ಮನ್ನು ಭೇಟಿಯಾಗಿ ನನಗೆ ಸಂತೋಷವಾಗಿದೆ. ನಾನು ಕೃಷಿ ವಿಜ್ಞಾನ ಸಂಸ್ಥೆಯಲ್ಲಿ ಸಸ್ಯ ರೋಗಗಳ ಕುರಿತು ಸಂಶೋಧನೆ ನಡೆಸುತ್ತಿದ್ದೇನೆ ಮತ್ತು ನನ್ನ ಪ್ರಾಥಮಿಕ ಗಮನವು ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು. ದುರದೃಷ್ಟವಶಾತ್, ಇದು ಇನ್ನೂ ತಳಮಟ್ಟದಲ್ಲಿ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಹೊಲಗಳಲ್ಲಿ ಅಭೂತಪೂರ್ವ ಫಲಿತಾಂಶಗಳನ್ನು ನೀಡುವ ತಂತ್ರಜ್ಞಾನಗಳನ್ನು ಬಳಸಲು ರೈತರಿಗೆ ಕಲಿಸುವುದು ನನ್ನ ಗುರಿಯಾಗಿದೆ. ಈ ಪ್ರಯತ್ನದಲ್ಲಿ ಮಕ್ಕಳು, ವಿದ್ಯಾರ್ಥಿಗಳು ಮತ್ತು ಮಹಿಳೆಯರನ್ನು ಒಳಗೊಳ್ಳುವುದು ನಿರ್ಣಾಯಕ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾನು ವಿದ್ಯಾರ್ಥಿಗಳೊಂದಿಗೆ ಹಳ್ಳಿಗಳಿಗೆ ಭೇಟಿ ನೀಡುತ್ತೇನೆ, ರೈತರೊಂದಿಗೆ ಕೆಲಸ ಮಾಡುತ್ತೇನೆ ಮತ್ತು ಮಹಿಳೆಯರಿಗೂ ಕೂಡ ಪಾಲ್ಗೊಳ್ಳಲು ಉತ್ತೇಜಿಸುತ್ತೇನೆ. ನಾವು ಅಭಿವೃದ್ಧಿ ಮಾಡಿದ ಸರಳ ತಂತ್ರಗಳನ್ನು ಬಳಸಿಕೊಂಡು, ನಾವು ಸುಸ್ಥಿರತೆಯತ್ತ ಮುನ್ನುಗ್ಗುತ್ತಿದ್ದೇವೆ, ಮತ್ತು ರೈತರು ಈಗಾಗಲೇ ಅದರ ಪ್ರಯೋಜನಗಳನ್ನು ಕಾಣುತ್ತಿದ್ದಾರೆ.

ಪ್ರಧಾನಮಂತ್ರಿಯವರು: ನೀವು ಏನು ಮಾಡಿದ್ದೀರಿ ಎಂದು ಹೇಳಬಲ್ಲಿರಾ?

ಶಿಕ್ಷಕರು: ಸರ್, ನಾವು ಬೀಜ ಶುದ್ಧೀಕರಣದ ತಂತ್ರವನ್ನು ಪರಿಪೂರ್ಣಗೊಳಿಸಿದ್ದೇವೆ. ನಾವು ಕೆಲವು ಸ್ಥಳೀಯ ಸೂಕ್ಷ್ಮಜೀವಿಗಳನ್ನು ಗುರುತಿಸಿದ್ದೇವೆ ಮತ್ತು ಇವುಗಳೊಂದಿಗೆ ಬೀಜಗಳನ್ನು ಶುದ್ಧೀಕರಿಸಿದಾಗ, ಬೆಳವಣಿಗೆಯಾಗುವ ಬೇರುಗಳು ಈಗಾಗಲೇ ಚೆನ್ನಾಗಿ ರೂಪುಗೊಂಡಿವೆ. ಇದು ಹೆಚ್ಚು ಆರೋಗ್ಯಕರ ಸಸ್ಯಕ್ಕೆ ಕಾರಣವಾಗುತ್ತದೆ. ಸಸ್ಯವು ರೋಗಗಳಿಗೆ ಒಳಗಾಗುವುದು ಕಡಿಮೆಯಾಗುತ್ತದೆ. ಏಕೆಂದರೆ ಬೇರುಗಳು ತುಂಬಾ ಬಲವಾಗಿರುತ್ತವೆ, ಇದು ಕೀಟಗಳು ಮತ್ತು ರೋಗಗಳನ್ನು ಎದುರಿಸಲು ಆಂತರಿಕ ಶಕ್ತಿಯನ್ನು ನೀಡುತ್ತದೆ.

ಪ್ರಧಾನಮಂತ್ರಿಯವರು: ನೀವು ಲ್ಯಾಬ್ ನಲ್ಲಿ ಮಾಡಿದ ಕೆಲಸವನ್ನು ವಿವರಿಸುತ್ತಿದ್ದೀರಿ. ನೀವು ಇದನ್ನು ಭೂಮಿಗೆ ಹೇಗೆ ಅನ್ವಯಿಸುತ್ತೀರಿ? ಪ್ರಯೋಗಾಲಯದಿಂದ ಭೂಮಿಗೆ? ನೀವು ವೈಯಕ್ತಿಕವಾಗಿ ರೈತರ ಬಳಿಗೆ ಹೋಗುತ್ತಿರುವುದಾಗಿ ಹೇಳುತ್ತೀರಿ. ಅವರು ಅದನ್ನು ಹೇಗೆ ಕಾರ್ಯಗತಗೊಳಿಸುತ್ತಾರೆ ಮತ್ತು ಅವರು ಹೇಗೆ ಪ್ರಾರಂಭಿಸುತ್ತಾರೆ?

ಶಿಕ್ಷಕರು: ಸಾರ್, ನಾವು 'ಪೌಡರ್ ಫಾರ್ಮುಲೇಶನ್' ಅನ್ನು ರಚಿಸಿದ್ದೇವೆ, ಅದನ್ನು ನಾವು ರೈತರಿಗೆ ವಿತರಿಸುತ್ತೇವೆ. ಅವರು ತಮ್ಮ ಬೀಜಗಳನ್ನು ಶುದ್ಧೀಕರಿಸಲು ಇದನ್ನು ಬಳಸುತ್ತಾರೆ ಮತ್ತು ನಾವು ಇದನ್ನು ಹಲವು ವರ್ಷಗಳಿಂದ ಮಾಡುತ್ತಿದ್ದೇವೆ. ಇಲ್ಲಿಯವರೆಗೆ, ನಾವು ವಾರಣಾಸಿ ಸುತ್ತಮುತ್ತಲಿನ 12 ಹಳ್ಳಿಗಳಲ್ಲಿ ಈ ತಂತ್ರವನ್ನು ಪರಿಚಯಿಸಿದ್ದೇವೆ ಮತ್ತು ಪ್ರಸ್ತುತ 3,000 ಕ್ಕೂ ಹೆಚ್ಚು ಮಹಿಳೆಯರು ಈ ತಂತ್ರಜ್ಞಾನವನ್ನು ಕಲಿಯುತ್ತಿದ್ದಾರೆ ಮತ್ತು ಬಳಸುತ್ತಿದ್ದಾರೆ.

ಪ್ರಧಾನಮಂತ್ರಿಯವರು: ಈ ರೈತರು ಇತರ ರೈತರಿಗೂ ಕಲಿಸಬಹುದೇ?

ಶಿಕ್ಷಕರು: ಖಂಡಿತವಾಗಿ, ಸರ್. ರೈತರು ಪುಡಿಯನ್ನು ತೆಗೆದುಕೊಳ್ಳಲು ಬಂದಾಗ, ಅವರು ಸಾಮಾನ್ಯವಾಗಿ ಇನ್ನೂ ನಾಲ್ವರು ರೈತರಿಗೆ ಬೇಕಾಗುವಷ್ಟು ತೆಗೆದುಕೊಳ್ಳುತ್ತಾರೆ. ರೈತರು ಪರಸ್ಪರ ಅವಲೋಕಿಸುವ ಮೂಲಕ ಕಲಿಯುತ್ತಾರೆ ಮತ್ತು ನಾವು ಆರಂಭದಲ್ಲಿ ಕಲಿಸಿದವರಿಗಿಂತ ಹೆಚ್ಚು ರೈತರು ಈ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ. ನನ್ನ ಬಳಿ ಈಗ ನಿಖರವಾದ ಸಂಖ್ಯೆ ಇಲ್ಲ.

ಪ್ರಧಾನಮಂತ್ರಿಯವರು: ಯಾವ ಬೆಳೆಗಳಿಗೆ ಇದರಿಂದ ಹೆಚ್ಚು ಲಾಭವಾಗಿದೆ?

ಶಿಕ್ಷಕರು: ಪ್ರಾಥಮಿಕವಾಗಿ ತರಕಾರಿಗಳು ಮತ್ತು ಗೋಧಿ.

ಪ್ರಧಾನಮಂತ್ರಿಯವರು: ನಮ್ಮ ಗಮನವು ಸಾವಯವ ಕೃಷಿ, ವಿಶೇಷವಾಗಿ ತರಕಾರಿಗಳು ಮತ್ತು ಗೋಧಿಗಳ ಮೇಲಿದೆ. ತಾಯಿ ಭೂಮಿಯನ್ನು ಉಳಿಸಲು ಬಯಸುವವರು . ನಮ್ಮ ಭೂಮಿ ತಾಯಿಯ ಆರೋಗ್ಯವನ್ನು ನಾವು ಯಾವ ರೀತಿ ಹಾಳು ಮಾಡುತ್ತಿದ್ದೇವೆ ಎಂಬ ಚಿಂತೆ ಅವರೆಲ್ಲರಲ್ಲಿದೆ . ತಾಯಿಯನ್ನು ಉಳಿಸುವುದು ಬಹಳ ಅವಶ್ಯಕವಾಗಿದೆ. ನೈಸರ್ಗಿಕ ಕೃಷಿಯು ಇದಕ್ಕೆ ಉತ್ತಮ ಪರಿಹಾರವಾಗಿದೆ . ಆ ನಿಟ್ಟಿನಲ್ಲಿ ವಿಜ್ಞಾನಿಗಳಲ್ಲಿ ಕೆಲವು ಚರ್ಚೆಗಳು ನಡೆಯುತ್ತಿವೆ.

ಶಿಕ್ಷಕರು: ಹೌದು, ಸರ್, ಖಂಡಿತವಾಗಿಯೂ ಆ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ, ರಾಸಾಯನಿಕಗಳನ್ನು ಬಳಸುವುದನ್ನು ನಿಲ್ಲಿಸಲು ರೈತರಿಗೆ ಸಂಪೂರ್ಣವಾಗಿ ಮನವರಿಕೆ ಮಾಡಲು ನಾವು ಇನ್ನೂ ಹೆಣಗಾಡುತ್ತಿದ್ದೇವೆ. ರಾಸಾಯನಿಕಗಳನ್ನು ಬಳಸದಿದ್ದರೆ, ತಮ್ಮ ಬೆಳೆಗಳಿಗೆ ಹಾನಿಯಾಗುತ್ತದೆ ಎಂದು ಅವರು ಹೆದರುತ್ತಾರೆ.

ಪ್ರಧಾನಮಂತ್ರಿಯವರು: ಇದಕ್ಕೊಂದು ಪರಿಹಾರವಿದೆ. ಒಬ್ಬ ರೈತನು ನಾಲ್ಕು ಬೀಘಾ ಜಮೀನು ಹೊಂದಿದ್ದಾನೆಂದು ಹೇಳೋಣ. ಅವನು 25% - ಒಂದು ಬೀಘಾದಲ್ಲಿ ಪ್ರಯೋಗ ಮಾಡಬಹುದು ಮತ್ತು ಉಳಿದ ಮೂರರಲ್ಲಿ ಸಾಂಪ್ರದಾಯಿಕ ವಿಧಾನಗಳನ್ನು ಮುಂದುವರಿಸಬಹುದು. ಅಲ್ಪ ಭಾಗವನ್ನು ಸಾವಯವ ಕೃಷಿಗೆ ಮೀಸಲಿಡುವುದರಿಂದ ರೈತನ ಆತ್ಮವಿಶ್ವಾಸ ಮೂಡುತ್ತದೆ.10% ಅಥವಾ 20% ನಷ್ಟವಾದರೂ ಸಹ, ಅದು ನಿರ್ವಹಿಸಬಹುದು ಮತ್ತು ಅವನ ಉಳಿದ ಬೆಳೆ ಸುರಕ್ಷಿತವಾಗಿರುವುದನ್ನು ಅವನು ನೋಡುತ್ತಾನೆ. ಗುಜರಾತ್ನ ರಾಜ್ಯಪಾಲರಾದ ಆಚಾರ್ಯ ದೇವ್ವ್ರತ್ ಜಿ ಅವರು ಈ ಕಾರಣಕ್ಕೆ ಬಹಳ ಬದ್ಧರಾಗಿದ್ದಾರೆ ಮತ್ತು ಈ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ನೀವು ಅವರ ವೆಬ್ ಸೈಟ್ ಗೆ ಭೇಟಿ ನೀಡಿದರೆ - ನಿಮ್ಮಲ್ಲಿ ಹಲವರು ಕೃಷಿ ಹಿನ್ನೆಲೆಯಿಂದ ಬಂದವರಾದ್ದರಿಂದ - ಸಾವಯವ ಕೃಷಿಯ ಕುರಿತು ಸಾಕಷ್ಟು ಮಾಹಿತಿಯನ್ನು ನೀವು ಕಾಣಬಹುದು. ನೀವು ಇಲ್ಲಿ ನೋಡುವ LKM ನಲ್ಲಿ ಎಲ್ಲವನ್ನೂ ಸಾವಯವ ಕೃಷಿ ವಿಧಾನಗಳನ್ನು ಬಳಸಿ ಮಾಡಲಾಗುತ್ತದೆ, ಯಾವುದೇ ರಾಸಾಯನಿಕಗಳನ್ನು ಅನುಮತಿಸಲಾಗುವುದಿಲ್ಲ. ಆಚಾರ್ಯ ದೇವ್ವ್ರತ್ ಜಿ ಅವರು ಹಸುವಿನ ಮೂತ್ರದ ಸಹಾಯದಿಂದ ಉತ್ತಮವಾದ ಸೂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಫಲಿತಾಂಶಗಳು ಪ್ರಭಾವಶಾಲಿಯಾಗಿದೆ. ನಿಮ್ಮ ವಿಶ್ವವಿದ್ಯಾನಿಲಯವು ಇದನ್ನು ಅಧ್ಯಯನ ಮಾಡಿದರೆ, ಏನು ಮಾಡಬಹುದೆಂದು ನೀವು ಪರಿಶೀಲಿಸಬಹುದು.

ಶಿಕ್ಷಕರು: ಖಂಡಿತ, ಸರ್.

ಪ್ರಧಾನಮಂತ್ರಿಯವರು: ಸರಿ, ಶುಭಾಶಯಗಳು.

ಶಿಕ್ಷಕರು: ಧನ್ಯವಾದಗಳು, ಸರ್.

ಪ್ರಧಾನಮಂತ್ರಿಯವರು: ವನಕ್ಕಮ್ (ಶುಭಾಶಯಗಳು)

ಶಿಕ್ಷಕರು: ವನಕ್ಕಮ್, ಪ್ರಧಾನ ಮಂತ್ರಿ ಜಿ. ನಾನು ಧೌತ್ರೆ ಗಾಂಧಿಮತಿ. ನಾನು ತಮಿಳುನಾಡಿನ ಸೇಲಂನ ತ್ಯಾಗರಾಜ್ ಪಾಲಿಟೆಕ್ನಿಕ್ ಕಾಲೇಜಿನಿಂದ ಬಂದಿದ್ದೇನೆ.  ನಾನು 16 ವರ್ಷಗಳಿಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂಗ್ಲಿಷ್ ಕಲಿಸುತ್ತಿದ್ದೇನೆ. ನನ್ನ ಬಹುಪಾಲು ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಅವರು ತಮಿಳು ಮಾಧ್ಯಮ ಶಾಲೆಗಳಿಂದ ಬಂದವರು, ಆದ್ದರಿಂದ ಅವರು ಇಂಗ್ಲಿಷ್ನಲ್ಲಿ ಮಾತನಾಡಲು ಅಥವಾ ಕನಿಷ್ಠ ಬಾಯಿ ತೆರೆಯಲು ಕಷ್ಟಪಡುತ್ತಾರೆ.

ಪ್ರಧಾನಮಂತ್ರಿಯವರು: ಆದರೆ ತಮಿಳುನಾಡಿನಲ್ಲಿ ಪ್ರತಿಯೊಬ್ಬರೂ ಇಂಗ್ಲಿಷ್ ತಿಳಿದಿದ್ದಾರೆ ಎಂಬ ತಪ್ಪು ಕಲ್ಪನೆಯನ್ನು ನಾವು ಹೊಂದಿರುತ್ತೇವೆ.

ಶಿಕ್ಷಕರು: ನಿಸ್ಸಂಶಯವಾಗಿ ಸರ್, ಅವರು ಸ್ಥಳೀಯ ಭಾಷಾ ಮಾಧ್ಯಮದಿಂದ ಕಲಿಯುವ ಗ್ರಾಮೀಣ ಜನರು. ಹಾಗಾಗಿ ಅವರಿಗೆ ಕಷ್ಟವಾಗುತ್ತಿದೆ ಸರ್. ಅವರಿಗೆ ನಾವು ಕಲಿಸುತ್ತೇವೆ.

ಪ್ರಧಾನಮಂತ್ರಿಯವರು: ಅದಕ್ಕಾಗಿಯೇ ಹೊಸ ಶಿಕ್ಷಣ ನೀತಿಯು ಮಾತೃಭಾಷೆಗೆ ಹೆಚ್ಚು ಒತ್ತು ನೀಡಿದೆ.

ಶಿಕ್ಷಕರು: ಆದ್ದರಿಂದ  ನಾವು ಇಂಗ್ಲಿಷ್ ಭಾಷೆಯನ್ನು ಕಲಿಸುತ್ತಿದ್ದೇವೆ ಸರ್. NEP 2020 ರ ಪ್ರಕಾರ, ನಾವು ಈಗ ಕಲಿಕೆಯಲ್ಲಿ ಮಾತೃಭಾಷೆ ಸೇರಿದಂತೆ ಕನಿಷ್ಠ ಮೂರು ಭಾಷೆಗಳನ್ನು ಸಂಯೋಜಿಸುತ್ತೇವೆ. ನಮ್ಮ ಸ್ವಾಯತ್ತ ಸಂಸ್ಥೆಯಲ್ಲಿ ಇದನ್ನು ಅಳವಡಿಸಿ ಈಗ ಮಾತೃಭಾಷೆಯಲ್ಲೂ ತಾಂತ್ರಿಕ ಶಿಕ್ಷಣವನ್ನು ಕಲಿಸುತ್ತಿದ್ದೇವೆ.

ಪ್ರಧಾನಮಂತ್ರಿಯವರು: ನಿಮ್ಮಲ್ಲಿ ಯಾರಾದರೂ ಧೈರ್ಯದಿಂದ ಇದನ್ನು ಪ್ರಯೋಗ ಮಾಡಿದ್ದೀರಾ? ಉದಾಹರಣೆಗೆ, ಒಂದು ಶಾಲೆಯಲ್ಲಿ 30 ಮಕ್ಕಳು ಸಂಪೂರ್ಣವಾಗಿ ಇಂಗ್ಲಿಷ್ನಲ್ಲಿ ಓದುತ್ತಿದ್ದರೆ ಮತ್ತು ಅದೇ ವಯಸ್ಸಿನ ಇನ್ನೂ 30 ಮಕ್ಕಳು ಅದೇ ವಿಷಯವನ್ನು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡುತ್ತಿದ್ದರೆ, ಯಾವ ಗುಂಪು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ? ನಿಮ್ಮ ಅನುಭವ ಏನು? ಮಾತೃಭಾಷೆಯಲ್ಲಿ ಕಲಿಯುವಾಗ, ಮಗುವು ಪರಿಕಲ್ಪನೆಯನ್ನು ನೇರವಾಗಿ ಗ್ರಹಿಸುತ್ತದೆ, ಆದರೆ ಇಂಗ್ಲಿಷ್ನಲ್ಲಿ, ಮಗು ಮಾನಸಿಕವಾಗಿ ಇಂಗ್ಲಿಷ್ ನಿಂದ ಅವರ ಸ್ಥಳೀಯ ಭಾಷೆಗೆ ಕಲ್ಪನೆಯನ್ನು ಭಾಷಾಂತರಿಸುತ್ತದೆ, ಇದು ಸಾಕಷ್ಟು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಮಕ್ಕಳಿಗೆ ಮೊದಲು ಅವರ ಮಾತೃಭಾಷೆಯಲ್ಲಿ ಕಲಿಸಬೇಕು, ನಂತರ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಸಂಪೂರ್ಣವಾಗಿ ಕಲಿಸಬೇಕು.

ತರಗತಿಯಲ್ಲಿರುವಾಗ ಸಂಸ್ಕೃತ ಶಿಕ್ಷಕರು ಸಂಸ್ಕೃತದಲ್ಲಿ ಮಾತನಾಡುವಂತೆಯೇ, ಇಂಗ್ಲಿಷ್ ಶಿಕ್ಷಕರು ತರಗತಿಗೆ ಪ್ರವೇಶಿಸಿದ ಕ್ಷಣದಿಂದ ಅವರು ಹೊರಡುವವರೆಗೂ ಇಂಗ್ಲಿಷ್ ಮಾತ್ರ ಮಾತನಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಇಂಗ್ಲಿಷ್ನಲ್ಲಿ ಅಷ್ಟೇ ಪ್ರವೀಣರಾಗಿರಬೇಕು. ಇದು ಇಂಗ್ಲಿಷ್ನಲ್ಲಿ ಒಂದು ವಾಕ್ಯ ಮತ್ತು ಮಾತೃಭಾಷೆಯಲ್ಲಿ ಮೂರು ವಾಕ್ಯಗಳ ಮಿಶ್ರಣವಾಗಿರಬಾರದು. ಮಗುವಿಗೆ ಆ ರೀತಿಯಲ್ಲಿ ಭಾಷೆಯನ್ನು ಗ್ರಹಿಸಲು ಸಾಧ್ಯವಿಲ್ಲ. ನಾವು ಭಾಷೆಗಳನ್ನು ಕಲಿಸುವಲ್ಲಿ ಈ ರೀತಿಯಲ್ಲಿ ನಿಷ್ಠರಾಗಿದ್ದರೆ ಅದು ಪ್ರಯೋಜನಕಾರಿಯಾಗಿದೆ. ನಾವು ನಮ್ಮ ಮಕ್ಕಳಲ್ಲಿ ಸಾಧ್ಯವಾದಷ್ಟು ಹೆಚ್ಚು ಭಾಷೆಗಳನ್ನು ಕಲಿಯುವ ಬಯಕೆಯನ್ನು ಬೆಳೆಸಬೇಕು. ಉದಾಹರಣೆಗೆ, ಶಾಲೆಗಳು ಈ ವರ್ಷ ಐದು ವಿಭಿನ್ನ ರಾಜ್ಯಗಳ ಹಾಡುಗಳನ್ನು ಕಲಿಸಲು ನಿರ್ಧರಿಸಬೇಕು. ವರ್ಷದಲ್ಲಿ ಐದು ಹಾಡುಗಳನ್ನು ಕಲಿಯುವುದು ಕಷ್ಟವೇನಲ್ಲ. ಒಬ್ಬರು ಅಸ್ಸಾಮಿ ಹಾಡು, ಅಥವಾ ಮಲಯಾಳಂ ಹಾಡು ಅಥವಾ ಪಂಜಾಬಿ ಹಾಡನ್ನು ಕಲಿಯಬಹುದು. ಮತ್ತು, ಸಹಜವಾಗಿ, ಪಂಜಾಬಿ ಕಷ್ಟವೇನಲ್ಲ. ಸರಿ, ನಿಮಗೆ ಶುಭವಾಗಲಿ!

ಶಿಕ್ಷಕರು: ಪ್ರಧಾನಮಂತ್ರಿ ಜಿ, ನನ್ನ ಹೆಸರು ಉತ್ಪಲ್ ಸೈಕಿಯಾ ಮತ್ತು ನಾನು ಅಸ್ಸಾಂನವನು. ನಾನು ಪ್ರಸ್ತುತ ಗುವಾಹಟಿಯಲ್ಲಿರುವ ನಾರ್ಥ್ ಈಸ್ಟ್ ಸ್ಕಿಲ್ ಸೆಂಟರ್ನಲ್ಲಿ ಫುಡ್ & ಬೆವರೇಜ್ ಸರ್ವೀಸ್ನಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ನಾನು ಆರು ವರ್ಷಗಳನ್ನು ಪೂರ್ಣಗೊಳಿಸಿದ್ದೇನೆ. ನನ್ನ ಮಾರ್ಗದರ್ಶನದಲ್ಲಿ 200 ಕ್ಕೂ ಹೆಚ್ಚು ಅಧಿವೇಶನಗಳನ್ನು ಯಶಸ್ವಿಯಾಗಿ ನಡೆಸಿದ್ದೇನೆ. ನನ್ನಿಂದ ತರಬೇತಿ ಪಡೆದವರು ಈಗ ದೇಶ ಮತ್ತು ವಿದೇಶದ ಪಂಚತಾರಾ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರಧಾನಮಂತ್ರಿಯವರು: ನಿಮ್ಮ ಕೋರ್ಸ್ ಎಷ್ಟು?

ಶಿಕ್ಷಕರು: ಇದು ಒಂದು ವರ್ಷದ ಕೋರ್ಸ್ ಸರ್.

ಪ್ರಧಾನಮಂತ್ರಿಯವರು: ಆತಿಥ್ಯ ತರಬೇತಿಯ ಬಗ್ಗೆ ನಿಮಗೆ ತಿಳಿದಿದೆಯೇ?

ಶಿಕ್ಷಕರು: ಹೌದು, ಸರ್. ಆತಿಥ್ಯ, ಆಹಾರ ಮತ್ತು ಪಾನೀಯ ಸೇವೆಗಳು.

ಪ್ರಧಾನಮಂತ್ರಿಯವರು: ಆಹಾರ ಮತ್ತು ಪಾನೀಯ, ಅದರಲ್ಲಿ ನೀವು ಯಾವ ನಿರ್ದಿಷ್ಟ ಕೌಶಲ್ಯಗಳನ್ನು ಕಲಿಸುತ್ತೀರಿ?

ಶಿಕ್ಷಕರು: ಅತಿಥಿಗಳೊಂದಿಗೆ ಹೇಗೆ ಸಂವಹನ ನಡೆಸಬೇಕು, ಆಹಾರವನ್ನು ಹೇಗೆ ಬಡಿಸಬೇಕು ಮತ್ತು ಪಾನೀಯ ಸೇವೆಯನ್ನು ಹೇಗೆ ಒದಗಿಸಬೇಕು ಎಂಬುದನ್ನು ನಾವು ವಿದ್ಯಾರ್ಥಿಗಳಿಗೆ ಕಲಿಸುತ್ತೇವೆ. ನಾವು ತರಗತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತೇವೆ, ಅತಿಥಿ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಅತಿಥಿಗಳೊಂದಿಗೆ ವಿವಿಧ ಸಂದರ್ಭಗಳನ್ನು ಹೇಗೆ ನಿರ್ವಹಿಸುವುದು ಮುಂತಾದ ವಿವಿಧ ತಂತ್ರಗಳನ್ನು ಕಲಿಸುತ್ತೇವೆ, ಸರ್.

ಪ್ರಧಾನಮಂತ್ರಿಯವರು: ನೀವು ಕೆಲವು ಉದಾಹರಣೆಗಳನ್ನು ನೀಡುತ್ತೀರಾ? ಮನೆಯಲ್ಲಿ, ಮಕ್ಕಳು ಸಾಮಾನ್ಯವಾಗಿ "ನಾನು ಇದನ್ನು ತಿನ್ನುವುದಿಲ್ಲ" ಅಥವಾ "ನಾನು ಅದನ್ನು ತಿನ್ನುತ್ತೇನೆ" ಎಂದು ಹೇಳುತ್ತಾರೆ. ಆದ್ದರಿಂದ, ಇದನ್ನು ನಿಭಾಯಿಸಲು ನಿಮ್ಮ ತಂತ್ರವನ್ನು ಕಲಿಸಿ.

ಶಿಕ್ಷಕರು: ನಾನು ಮಕ್ಕಳಿಗಾಗಿ ನಿರ್ದಿಷ್ಟ ತಂತ್ರವನ್ನು ಹೊಂದಿಲ್ಲ, ಸರ್, ಆದರೆ ಹೋಟೆಲ್‌ನಲ್ಲಿ ಅತಿಥಿಗಳ ವಿಷಯದಲ್ಲಿ, ನಾವು ವಿದ್ಯಾರ್ಥಿಗಳನ್ನು ನಯವಾಗಿ ಮತ್ತು ನಮ್ರತೆಯಿಂದ ನಿಭಾಯಿಸಲು, ಅವರ ಅಗತ್ಯಗಳನ್ನು ಆಲಿಸಲು ತರಬೇತಿ ನೀಡುತ್ತೇವೆ.

ಪ್ರಧಾನಮಂತ್ರಿಯವರು: ಹಾಗಾದರೆ, ನಿಮ್ಮ ಗಮನವು ಪ್ರಾಥಮಿಕವಾಗಿ ಸಾಫ್ಟ್ ಸ್ಕಿಲ್ಗಳ ಮೇಲಿದೆಯೇ?

ಶಿಕ್ಷಕರು: ಹೌದು, ಸರ್. ಖಂಡಿತ, ಸರ್. ಸಾಫ್ಟ್ ಸ್ಕಿಲ್ಲ್ಸ್.

ಪ್ರಧಾನಮಂತ್ರಿಯವರು: ನಿಮ್ಮ ಸಂಸ್ಥೆಯಿಂದ ಪದವಿ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗಾವಕಾಶಗಳನ್ನು ಎಲ್ಲಿ ಕಂಡುಕೊಳ್ಳುತ್ತಾರೆ?

ಶಿಕ್ಷಕರು: ಭಾರತದಾದ್ಯಂತ, ದೆಹಲಿ ಮತ್ತು ಮುಂಬೈ ಮುಂತಾದ ಸ್ಥಳಗಳಲ್ಲಿ.

ಪ್ರಧಾನಮಂತ್ರಿಯವರು: ಮುಖ್ಯವಾಗಿ ದೊಡ್ಡ ಹೋಟೆಲ್‌ಗಳಲ್ಲಿ?

ಶಿಕ್ಷಕರು: ಹೌದು, ಪ್ರಮುಖ ಹೋಟೆಲ್ಗಳಲ್ಲಿ. ನಾವು 100 ಪ್ರತಿಶತ ಉದ್ಯೋಗವನ್ನು ಖಾತರಿಪಡಿಸುತ್ತೇವೆ. ಈ ಕಾರ್ಯಕ್ಕಾಗಿ ವಿಶೇಷ ನೇಮಕಾತಿ ತಂಡವಿದೆ.

ಪ್ರಧಾನಮಂತ್ರಿಯವರು: ನೀವು ಗುವಾಹಟಿಯಲ್ಲಿರುವ ಕಾರಣ, ನಾನು ಹಿಮಂತ ಜಿ ಮತ್ತು ಅವರ ಎಲ್ಲಾ ಮಂತ್ರಿಗಳಿಗೆ ನೀವು ಅವರ ಸಿಬ್ಬಂದಿಯನ್ನು ತರಬೇತಿ ನೀಡಲು ಮತ್ತು ಅವರ ಸಾಮರ್ಥ್ಯವನ್ನು ನಿರ್ಮಿಸಲು ಅವಕಾಶ ಕೊಡಬೇಕೆಂದು ಕೇಳಿದರೆ—ಕಾರಣ ಅತಿಥಿಗಳು ಅವರನ್ನು ಭೇಟಿ ಮಾಡುವಾಗ ಅವರು ನೀರು ಎಡಗೈಯಲ್ಲಿ ಕೊಡುವುದೇ ಅಥವಾ ಬಲಗೈಯಲ್ಲಿ ಕೊಡುವುದೇ ಎಂಬುದನ್ನೂ ತಿಳಿಯದಿರುವ ಸಾಧ್ಯತೆಯಿದೆ—ಅದು ಸಾಧ್ಯವೇ? 

ಶಿಕ್ಷಕ:  ಹೌದು, ಖಂಡಿತವಾಗಿಯೂ. ಅದನ್ನು ಮಾಡಬಹುದು.

ಪ್ರಧಾನಮಂತ್ರಿಯವರು: ನೀವು ಆಶ್ಚರ್ಯಕ್ಕೊಳಗಾಗಬಹುದು, ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಅಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಶಾಲೆ ಇತ್ತು. ಅಲ್ಲಿ ನನ್ನ ಎಲ್ಲಾ ಸಚಿವರು ಮತ್ತು ಅವರ ವೈಯಕ್ತಿಕ ಸಿಬ್ಬಂದಿಯನ್ನು ಶನಿವಾರ ಮತ್ತು ಭಾನುವಾರಗಳಂದು ತರಬೇತಿ ನೀಡಬೇಕೆಂದು ನಾನು ಸೂಚಿಸಿದೆ. ಅವರು ಕಲಿಸಲು ನಿರ್ಧರಿಸಿದರು ಮತ್ತು ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಮಕ್ಕಳು, ನನಗೆ ಮತ್ತು ಇತರ ಸಚಿವರಿಗೆ ಕೆಲಸ ಮಾಡುತ್ತಿದ್ದ ತೋಟಗಾರರು ಅಥವಾ ಅಡುಗೆಯವರು ಕೂಡ ತರಬೇತಿ ಪಡೆಯುತ್ತಿದ್ದರು. ನಮ್ಮ ಬಳಿ ಸುಮಾರು 30 ರಿಂದ 40 ಗಂಟೆಗಳ ಪಠ್ಯಕ್ರಮವಿತ್ತು. ಅದರ ನಂತರ, ಅವರ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂತು. ಅವರು ಮನೆಗೆ ಹಿಂತಿರುಗಿದಾಗ, ಅದು ತಕ್ಷಣವೇ ಕಾಣುತ್ತಿತ್ತು. ಅವರ ಕುಟುಂಬಗಳು ಬಹುಶಃ ಗಮನಿಸುತ್ತಿರಲಿಲ್ಲ, ಆದರೆ ಅವರು ಈ ಹೊಸ ಕೌಶಲ್ಯಗಳನ್ನು ಹೇಗೆ ಕಲಿತಿದ್ದಾರೆ ಎಂಬುದು ನನಗೆ ಆಶ್ಚರ್ಯಕರವಾಗಿತ್ತು. ಅದು ಬಹಳವೇ ವಿಶಿಷ್ಟವಾಗಿತ್ತು.

ಆ ಅನುಭವದಿಂದ ನಾನು ಬಹಳಷ್ಟು ಕಲಿತೆ. ನಾವು ಈ ವಿಧಾನವನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ, ಇದನ್ನು ಶ್ರೇಷ್ಠತೆಯ ಬ್ರಾಂಡ್ ಆಗಿ ಮಾಡುತ್ತಾ. ಚಿಕ್ಕ ವಿಷಯಗಳೂ ಕೂಡ ಮುಖ್ಯ, ಉದಾಹರಣೆಗೆ ಜನರು ಒಳಗೆ ಬಂದ ಕೂಡಲೇ ಅವರನ್ನು ವಿನಯದಿಂದ ಸ್ವಾಗತಿಸುವುದು, ಅಥವಾ ಸರ್ಕಾರಿ ಕಚೇರಿ ನೌಕರರು ದೂರವಾಣಿಗೆ ಉತ್ತರಿಸುವ ರೀತಿ. ಉದಾಹರಣೆಗೆ, ಕೆಲವರು ಉತ್ತರಿಸುವಾಗ "ಜೈ ಹಿಂದ್" ಅಥವಾ "ನಮಸ್ತೆ" ಎನ್ನಲು ತರಬೇತಿ ಪಡೆದಿರುತ್ತಾರೆ, ಆದರೆ ಇತರರು ಅಸಭ್ಯವಾಗಿ "ನಿನಗೇನು ಬೇಕು?" ಎಂದು ಕೇಳಬಹುದು. ಅಲ್ಲಿಯೇ ವಿಷಯಗಳು ತಪ್ಪಾಗುತ್ತವೆ. ಅಂತಹ ಸಂದರ್ಭಗಳನ್ನು ಸರಿಯಾಗಿ ನಿಭಾಯಿಸಲು ನೀವು ಅವರಿಗೆ ತರಬೇತಿ ನೀಡುತ್ತೀರಾ?

ಶಿಕ್ಷಕರು: ಹೌದು, ಸರ್! ನಾನು ಅವರಿಗೆ ಈ ವಿಷಯಗಳನ್ನು ಕಲಿಸುತ್ತೇನೆ.

ಪ್ರಧಾನಮಂತ್ರಿಯವರು: ಸರಿ, ನಿಮಗೆ ಅನೇಕ ಅಭಿನಂದನೆಗಳು!

ಶಿಕ್ಷಕರು: ಧನ್ಯವಾದಗಳು, ಸರ್!

ಪ್ರಧಾನಮಂತ್ರಿಯವರು: ಹಾಗಾದರೆ ಬೋರಿಸಾಗರಕ್ಕೂ ನಿಮಗೇನಾದರೂ ಸಂಬಂಧವಿದೆಯೇ?

ಶಿಕ್ಷಕರು: ಹೌದು, ಸರ್. ನನ್ನ ಅಜ್ಜ ಬೋರಿಸಾಗರ!

ಪ್ರಧಾನಮಂತ್ರಿಯವರು: ಓಹ್, ಅವರು ನಿಮ್ಮ ತಾತ? ಅರ್ಥವಾಯಿತು! ಅವರು ನಮ್ಮ ಸಮುದಾಯದಲ್ಲಿ ಪ್ರಸಿದ್ಧ ಹಾಸ್ಯ ಲೇಖಕರಾಗಿದ್ದರು. ಹಾಗಾದರೆ, ನೀವು ಏನು ಮಾಡುತ್ತೀರಿ?

ಶಿಕ್ಷಕರು: ಸರ್, ನಾನು ಅಮ್ರೇಲಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, ಕಳೆದ 21 ವರ್ಷಗಳಿಂದ ಉತ್ತಮ ಶಾಲೆಯನ್ನು ನಿರ್ಮಿಸುವ ಮೂಲಕ ಉತ್ತಮ ರಾಷ್ಟ್ರವನ್ನು ನಿರ್ಮಿಸುವ ಜೀವನ ಮಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇನೆ.

ಪ್ರಧಾನಮಂತ್ರಿಯವರು: ನಿಮ್ಮ ವಿಶೇಷತೆ ಏನು?

ಶಿಕ್ಷಕರು: ಸರ್, ನಾನು ನಮ್ಮ ಜಾನಪದ ಹಾಡುಗಳಲ್ಲಿ ಪರಿಣತಿ ಹೊಂದಿದ್ದೇನೆ.

ಪ್ರಧಾನಮಂತ್ರಿಯವರು: ನೀವು ಸಾಕಷ್ಟು ಪೆಟ್ರೋಲ್ ಬಳಸುತ್ತೀರಿ ಎಂದು ನಾನು ಕೇಳಿದ್ದೇನೆ?

ಶಿಕ್ಷಕ: ಹೌದು, ಸರ್! 2003ರಿಂದ, ನಿಮ್ಮ ಉಪಕ್ರಮದಿಂದ ನಮ್ಮ ಶಾಲೆಯ 'ಪ್ರವೇಶೋತ್ಸವ' (ವಾರ್ಷಿಕ ಶಾಲಾ ಪ್ರವೇಶ ಉತ್ಸವ) ಶಿಕ್ಷಕರಿಗಾಗಿ ಬೈಕಿನಲ್ಲಿ ಆಚರಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಸರ್, ನಾನು ನಮ್ಮ ಸಂಪ್ರದಾಯದ ಗರ್ಭಾ ಹಾಡುಗಳನ್ನು ಹಾಡುತ್ತೇನೆ, ಆದರೆ ಅವುಗಳಿಗೆ ಶಿಕ್ಷಣದ ವಿಷಯಗಳನ್ನು ಹೊಂದಿಸಲಾಗಿದೆ. ಉದಾಹರಣೆಗೆ, "ಪಂಕೆಡಾ" ಎಂಬ ಹಾಡು. ನಿಮ್ಮ ಅನುಮತಿ ಇದ್ದರೆ, ನಾನು ಇದನ್ನು ಹಾಡಬಹುದೆ?

ಪ್ರಧಾನಮಂತ್ರಿಯವರು: ಹೌದು, ದಯವಿಟ್ಟು ಮಾಡಿ!

ಪ್ರಧಾನಮಂತ್ರಿಯವರು: ಇದು ಬಹಳ ಪ್ರಸಿದ್ಧವಾದ ಗುಜರಾತಿ ಜಾನಪದ ಗೀತೆ, ಅಲ್ಲವೇ?

ಶಿಕ್ಷಕರು: ಹೌದು, ಸರ್. ಅದೊಂದು ಗಾರ್ಬಾ ಹಾಡು.

ಪ್ರಧಾನಮಂತ್ರಿಯವರು: ಮಕ್ಕಳನ್ನು ಶಾಲೆಗೆ ಹೋಗಲು, ಓದಲು-ಅವರಿಗೆ ನಿಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕಲಿಸಲು ಪ್ರೋತ್ಸಾಹಿಸಲು ನೀವು ಸಾಹಿತ್ಯವನ್ನು ಬದಲಾಯಿಸಿದ್ದೀರಿ.

ಶಿಕ್ಷಕರು: ಹೌದು, ಸರ್, ನಿಜವಾಗಿ. ಮತ್ತು, ಸರ್, ನಾನು 20 ವಿವಿಧ ಭಾಷೆಗಳಲ್ಲಿ ಹಾಡಬಲ್ಲೆ.

ಪ್ರಧಾನಮಂತ್ರಿಯವರು: 20? ಓಹ್, ವಾಹ್!

ಶಿಕ್ಷಕರು: ಹೌದು, ಸರ್. ನಾನು ಕೇರಳದ ಬಗ್ಗೆ ಕಲಿಸುತ್ತಿದ್ದರೆ, ನಾನು ತಮಿಳಿನಲ್ಲಿ ಹಾಡುತ್ತೇನೆ, ಉದಾಹರಣೆಗೆ, "ವಾ" ಎಂದರೆ ಬನ್ನಿ, ರಾಜಸ್ಥಾನಿಯಲ್ಲಿ 'ಪದರೋ' ಎಂದರೆ ಸ್ವಾಗತ. ಮರಾಠಿ, ಕನ್ನಡ ಮತ್ತಿತರ ಭಾಷೆಗಳಲ್ಲಿ ಹಾಡುವುದನ್ನು ಹೇಳಿಕೊಡುತ್ತೇನೆ. ನಾನು ಭಾರತ ಮಾತೆಗೆ ನಮಸ್ಕರಿಸುತ್ತೇನೆ, ಸರ್!

ಪ್ರಧಾನಮಂತ್ರಿಯವರು: ಅಮೇಜಿಂಗ್! ಬಹಳ ಚೆನ್ನಾಗಿದೆ!

ಶಿಕ್ಷಕರು: ಧನ್ಯವಾದಗಳು, ಸರ್. 'ಏಕ ಭಾರತ್, ಶ್ರೇಷ್ಠ ಭಾರತ್' ನನ್ನ ಜೀವನ ಮಂತ್ರ, ಸರ್!

ಪ್ರಧಾನಮಂತ್ರಿಯವರು: ಅದ್ಭುತ!

ಶಿಕ್ಷಕರು: 2047ರೊಳಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ.

ಪ್ರಧಾನಮಂತ್ರಿಯವರು: ತುಂಬಾ ಚೆನ್ನಾಗಿದೆ!

ಶಿಕ್ಷಕರು: ಧನ್ಯವಾದಗಳು, ಸರ್.

ಪ್ರಧಾನಮಂತ್ರಿಯವರು: ನಿಮ್ಮ ಉಪನಾಮವನ್ನು ನೋಡಿದಾಗ, ನನಗೆ ತಕ್ಷಣ ನಿಮ್ಮ ತಾತನ ನೆನಪಾಯಿತು, ಅವರು ನನ್ನ ರಾಜ್ಯದಲ್ಲಿ ಅಂತಹ ಅದ್ಭುತ ಹಾಸ್ಯ ಬರಹಗಾರರಾಗಿದ್ದರು. ಅವರು ಬಹಳ ಪ್ರಸಿದ್ಧರಾಗಿದ್ದರು, ಆದರೆ ನೀವು ಅವರ ಪರಂಪರೆಯನ್ನು ಮುಂದುವರಿಸುತ್ತೀರಿ ಎಂದು ನನಗೆ ತಿಳಿದಿರಲಿಲ್ಲ. ಇದನ್ನು ನೋಡುವುದು ನಿಜಕ್ಕೂ ಹೃದಯಸ್ಪರ್ಶಿ!

ಸ್ನೇಹಿತರೇ, ನನ್ನ ಬಳಿ ನಿಮಗೆ ಯಾವುದೇ ವಿಶೇಷ ಸಂದೇಶವಿಲ್ಲ, ಆದರೆ ನಾನು ಖಂಡಿತವಾಗಿಯೂ ಹೇಳುವುದೇನೆಂದರೆ ಈ ಆಯ್ಕೆಯು ಒಂದು ಮಹತ್ವದ ಸಾಧನೆಯಾಗಿದೆ, ದೀರ್ಘ ಮತ್ತು ಕಠಿಣ ಪ್ರಕ್ರಿಯೆಯ ನಂತರ ಬಂದಿರುವಂತಹದ್ದು. ಹಿಂದೆ ಏನಾಗುತ್ತಿತ್ತು ಎಂಬುದರ ಬಗ್ಗೆ ನಾನು ಚರ್ಚಿಸುವುದಿಲ್ಲ, ಆದರೆ ಇಂದು ದೇಶದಲ್ಲಿ ಹೊಸದನ್ನು ಮಾಡುತ್ತಿರುವ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಇದರ ಅರ್ಥ ನಮಗಿಂತ ಉತ್ತಮ ಶಿಕ್ಷಕರು ಇಲ್ಲ ಎಂದಲ್ಲ, ಅಥವಾ ಇತರರು ಬೇರೆ ವಿಷಯಗಳಲ್ಲಿ ಶ್ರೇಷ್ಠರಾಗಿಲ್ಲ ಎಂದೂ ಅಲ್ಲ. ಇದು ಒಂದು ದೇಶ, ರತ್ನಗಳ ನೆಲ. ಕೋಟ್ಯಂತರ ಶಿಕ್ಷಕರು ಗಮನಾರ್ಹ ಕೆಲಸ ಮಾಡುತ್ತಿದ್ದಾರೆ, ಆದರೆ ಬೆಳಕು ನಿಮ್ಮ ಮೇಲೆ ಬಿದ್ದಿದೆ, ಇದು ನಿಮ್ಮಲ್ಲಿ ಕೆಲವು ಅನನ್ಯ ಗುಣಗಳಿವೆ ಎಂಬುದನ್ನು ಸೂಚಿಸುತ್ತದೆ.

ನಿಮ್ಮ ಪ್ರಯತ್ನಗಳು, ವಿಶೇಷವಾಗಿ ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ, ಬಹಳ ಮೌಲ್ಯಯುತವಾಗಿರಬಹುದು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ, ಒಂದು ವಿಷಯವು ನಮ್ಮ ಆರ್ಥಿಕತೆಯನ್ನು ಗಣನೀಯವಾಗಿ ಬಲಪಡಿಸಬಹುದಾಗಿತ್ತು, ಆದರೆ ಭಾರತವು ಆ ಅವಕಾಶವನ್ನು ಕಳೆದುಕೊಂಡಿದೆ. ನಾವು ಅದನ್ನು ಮರುಪಡೆಯಬೇಕು, ಮತ್ತು ಅದು ನಮ್ಮ ಶಾಲೆಗಳಲ್ಲಿ ಪ್ರಾರಂಭವಾಗಬಹುದು - ಪ್ರವಾಸೋದ್ಯಮದಿಂದ ಪ್ರಾರಂಭಿಸಿ.

ಈಗ, ನೀವು ಕೇಳಬಹುದು, ನಾವು ವಿದ್ಯಾರ್ಥಿಗಳಿಗೆ ಕಲಿಸಬೇಕೇ ಅಥವಾ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೇ. ನೀವು ನೇರವಾಗಿ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ನಾನು ಸೂಚಿಸುತ್ತಿಲ್ಲ, ಆದರೆ ಇದನ್ನು ಪರಿಗಣಿಸಿ: ಹೆಚ್ಚಿನ ಶಾಲಾ ಪ್ರವಾಸಗಳು ಎಲ್ಲಿ ನಡೆಯುತ್ತವೆ? ಸಾಮಾನ್ಯವಾಗಿ, ಅವರು ವಿದ್ಯಾರ್ಥಿಗಳು ಅನುಭವಿಸಬೇಕಾದದ್ದನ್ನು ಬಿಟ್ಟು, ಶಿಕ್ಷಕರು ನೋಡದಿರುವ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಒಬ್ಬ ಶಿಕ್ಷಕ ಉದಯಪುರವನ್ನು ನೋಡಿರದಿದ್ದರೆ, ಅವರು ಅಲ್ಲಿಗೆ ಶಾಲಾ ಪ್ರವಾಸವನ್ನು ಯೋಜಿಸುತ್ತಾರೆ, ಟಿಕೆಟ್ ಮತ್ತು ಪ್ರಯಾಣಕ್ಕಾಗಿ ಹಣವನ್ನು ಸಂಗ್ರಹಿಸುತ್ತಾರೆ, ಮತ್ತು ಹೊರಡುತ್ತಾರೆ.

ಒಂದು ವರ್ಷದ ಮುಂಚಿತವಾಗಿ ನಾವು ಯೋಜನೆ ಮಾಡಿದರೆ ಹೇಗೆ? ಪ್ರತಿ ವರ್ಗದ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ತಾಣಗಳನ್ನು ನಿರ್ಧರಿಸೋಣ. ಉದಾಹರಣೆಗೆ, 2024-2025 ಶೈಕ್ಷಣಿಕ ವರ್ಷದಲ್ಲಿ, 8 ಅಥವಾ 9 ನೇ ತರಗತಿಯ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ತಾಣವನ್ನು ಸಂದರ್ಶಿಸುವಂತೆ ಮಾಡಬಹುದು. ಶಾಲೆಯು ವರ್ಷಕ್ಕೆ 3 ರಿಂದ 5 ತಾಣಗಳನ್ನು ಆಯ್ಕೆ ಮಾಡಿಕೊಂಡು, ಆ ತಾಣಗಳನ್ನು ಆಧರಿಸಿ ವಿದ್ಯಾರ್ಥಿಗಳಿಗೆ ಯೋಜನೆಗಳನ್ನು ನೀಡಬಹುದು. ಆಯ್ಕೆಯಾದ ತಾಣ ಕೇರಳ ಎಂದು ಹೇಳೋಣ. 10 ವಿದ್ಯಾರ್ಥಿಗಳ ಗುಂಪುಗಳು ವಿಭಿನ್ನ ಯೋಜನೆಗಳನ್ನು ಹೊಂದಿರಬಹುದು - ಕೆಲವು ಕೇರಳದ ಸಾಮಾಜಿಕ ಸಂಸ್ಕಾರಗಳನ್ನು, ಇತರರು ಅದರ ಧಾರ್ಮಿಕ ಪರಂಪರೆಯನ್ನು ಮತ್ತು ಕೆಲವರು ಅದರ ದೇವಾಲಯಗಳು ಮತ್ತು ಅವುಗಳ ಇತಿಹಾಸಗಳನ್ನು ಅಧ್ಯಯನ ಮಾಡಬಹುದು. ವರ್ಷಪೂರ್ತಿ, ಕೇರಳದ ಬಗ್ಗೆ ಚರ್ಚೆಗಳು ನಡೆಯುತ್ತವೆ, ವಿದ್ಯಾರ್ಥಿಗಳನ್ನು ಅವರ ಭೇಟಿಗೆ ಸಿದ್ಧಗೊಳಿಸುತ್ತವೆ. ಅವರು ಆ ಸ್ಥಳದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುತ್ತಾರೆ, ಅವರು ಓದಿದ್ದನ್ನು ಅವರು ನೋಡುವುದರೊಂದಿಗೆ ಪರಸ್ಪರ ಸಂಬಂಧಿಸುತ್ತಾರೆ.

ಈಗ, ಗೋವಾ ಈ ವರ್ಷ ಎಲ್ಲಾ ಶಾಲೆಗಳು ಈಶಾನ್ಯ ಭಾಗವನ್ನು ಸಂದರ್ಶಿಸಬೇಕೆಂದು ನಿರ್ಧರಿಸಿದರೆ ಊಹಿಸಿ. ಗೋವಾದ ಎಲ್ಲೆಡೆಯಿಂದ 1,000 ರಿಂದ 2,000 ವಿದ್ಯಾರ್ಥಿಗಳು ಈಶಾನ್ಯ ಭಾರತಕ್ಕೆ ಪ್ರಯಾಣಿಸುತ್ತಾರೆ ಎಂದುಕೊಳ್ಳೋಣ. ಇದು ವಿದ್ಯಾರ್ಥಿಗಳನ್ನು ಹೊಸ ಪ್ರದೇಶಕ್ಕೆ ತೆರೆದಿಡುವುದಷ್ಟೇ ಅಲ್ಲದೆ, ಈಶಾನ್ಯ ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಸ್ಥಳೀಯ ಜನಸಂಖ್ಯೆಯು ಆಗಮಿಸುವ ಅತಿಥಿಗಳ ಹೆಚ್ಚಳವನ್ನು ಗಮನಿಸುತ್ತದೆ ಮತ್ತು ಚಹಾ ಅಂಗಡಿಗಳು ಅಥವಾ ಸಣ್ಣ ಅಂಗಡಿಗಳಂತಹ ಹೆಚ್ಚಿನ ಸೇವೆಗಳ ಅಗತ್ಯವನ್ನು ಅರಿತುಕೊಳ್ಳುತ್ತದೆ. ಇದು ಪರ್ಯಾಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಭಾರತ ಒಂದು ವಿಶಾಲವಾದ ದೇಶವಾಗಿದೆ ಮತ್ತು ನಾವು ಶಿಕ್ಷಣ ಕ್ಷೇತ್ರದೊಳಗೆ ಕೆಲಸ ಮಾಡುತ್ತಿದ್ದೇವೆ. ನಿಮ್ಮ ವಿದ್ಯಾರ್ಥಿಗಳು ಪ್ರಸ್ತುತ ನಡೆಯುತ್ತಿರುವ ಆನ್ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬಹುದು, ಅಲ್ಲಿ ಅವರು ತಮ್ಮ ರಾಜ್ಯದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳಿಗೆ ಮತ ಹಾಕಬಹುದು. ಆದಾಗ್ಯೂ, ಅವರು ಕೇವಲ ಬಾಕ್ಸ್ ಗಳನ್ನು ಟಿಕ್ ಮಾಡಬಾರದು; ಅವರು ಸ್ವಲ್ಪ ಸಂಶೋಧನೆ ಮಾಡಿದ ನಂತರ ಭಾಗವಹಿಸಬೇಕು. ಇದು 'ದೇಖೋ ಅಪ್ನಾ ದೇಶ್' ಯೋಜನೆಯಡಿಯಲ್ಲಿ ಸಾರ್ವಜನಿಕ ಮತದಾನದ ಮೂಲಕ ಪ್ರತಿ ರಾಜ್ಯದಲ್ಲಿಯೂ ಪ್ರಮುಖ ಆಕರ್ಷಣೆಗಳನ್ನು ಗುರುತಿಸುವ ಪ್ರಯತ್ನದ ಭಾಗವಾಗಿದೆ. ಇದು ಮತದ ಮೂಲಕ ತಾಣಗಳಿಗೆ ಆನ್ಲೈನ್ ಶ್ರೇಣಿಯನ್ನು ಒದಗಿಸುತ್ತದೆ. ಮತದಾನ ಮುಗಿದ ನಂತರ, ಸರ್ಕಾರವು ಈ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್ ಮೀಸಲಿಡುತ್ತದೆ.

ಆದರೆ ಪ್ರವಾಸೋದ್ಯಮ ಹೇಗೆ ಕೆಲಸ ಮಾಡುತ್ತದೆ? ಇದು ಹಳೆಯ ವಾದ: ಮೊಟ್ಟೆಯೇ ಮೊದಲು, ಅಥವಾ ಕೋಳಿಯೇ ಮೊದಲು? ಕೆಲವರು ಅಭಿವೃದ್ಧಿ ಇಲ್ಲದ ಕಾರಣ ಪ್ರವಾಸೋದ್ಯಮ ಇಲ್ಲ ಎಂದು ಹೇಳುತ್ತಾರೆ, ಆದರೆ ಇತರರು ಪ್ರವಾಸೋದ್ಯಮವೇ ಅಭಿವೃದ್ಧಿಗೆ ಕಾರಣ ಎಂದು ವಾದಿಸುತ್ತಾರೆ. ಇಂತಹ ತಾಣಗಳಿಗೆ ವಿದ್ಯಾರ್ಥಿಗಳ ಪ್ರವಾಸಗಳನ್ನು ಆಯೋಜಿಸುವ ಮೂಲಕ ನಾವು ಇದನ್ನು ನಿರ್ವಹಿಸಬಹುದು. ಯೋಜಿತ, ರಾತ್ರಿ ನಿಲುಗಡೆಯು ಸ್ಥಳೀಯ ನಿವಾಸಿಗಳನ್ನು ಹೋಮ್ ಸ್ಟೇಗಳು ಅಥವಾ ಇತರ ಸಣ್ಣ ವ್ಯಾಪಾರಗಳನ್ನು ತೆರೆಯಲು ಉತ್ತೇಜಿಸಬಹುದು. ಇದು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ನಾವು, ಶಾಲೆಗಳಾಗಿ, ಸಾಮೂಹಿಕವಾಗಿ ನಮ್ಮ ಪ್ರವಾಸಗಳನ್ನು ಯೋಜಿಸಿದರೆ, ನಾವು ಎರಡು ವರ್ಷಗಳಲ್ಲಿ ಭಾರತದಲ್ಲಿ 100 ಅಗ್ರ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸಬಹುದು. ಇದು ಶಿಕ್ಷಕರ ಕ್ರಾಂತಿಕಾರಿ ಸಾಮರ್ಥ್ಯವನ್ನು ತೋರಿಸುತ್ತದೆ.

ನಿಮ್ಮ ದಿನನಿತ್ಯ ಶಾಲಾ ಚಟುವಟಿಕೆಗಳಲ್ಲಿ, ಪ್ರವಾಸಗಳನ್ನು ಸಾಮಾನ್ಯವಾಗಿ ಆಯೋಜಿಸಲಾಗುತ್ತದೆ, ಆದರೆ ಸರಿಯಾದ ಅಧ್ಯಯನ ಅಥವಾ ತಯಾರಿ ಇರುವುದಿಲ್ಲ. ನೀವು ಒಂದು ಸ್ಥಳವನ್ನು ವರ್ಷಪೂರ್ತಿ ಸಂಪೂರ್ಣವಾಗಿ ಅಧ್ಯಯನ ಮಾಡಿ ನಂತರ ಅದನ್ನು ಸಂದರ್ಶಿಸಿದರೆ, ಅದು ವಿದ್ಯಾರ್ಥಿಗಳ ಶಿಕ್ಷಣವನ್ನು ಸಮೃದ್ಧಗೊಳಿಸುವುದಲ್ಲದೇ, ಸ್ಥಳೀಯ ಆರ್ಥಿಕತೆಗೂ ಪ್ರಯೋಜನವಾಗುತ್ತದೆ. ನಿಮ್ಮ 8 ಅಥವಾ 9 ನೇ ತರಗತಿಯ ವಿದ್ಯಾರ್ಥಿಗಳನ್ನು ಹತ್ತಿರದ ವಿಶ್ವವಿದ್ಯಾಲಯವನ್ನು ಸಂದರ್ಶಿಸಲು ಕರೆದೊಯ್ಯಲು ನಿಮ್ಮನ್ನು ಉತ್ತೇಜಿಸುತ್ತೇನೆ. ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಮತ್ತು ನಿಮ್ಮ ವಿದ್ಯಾರ್ಥಿಗಳು ಅದನ್ನು ನೋಡಲು ಬಯಸುತ್ತಾರೆ ಎಂದು ಅವರಿಗೆ ತಿಳಿಸಿ.

ನಾನು ಗುಜರಾತಿನಲ್ಲಿದ್ದಾಗ ಒಂದು ನಿಯಮ ಪಾಲಿಸುತ್ತಿದ್ದೆ. ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ನನ್ನನ್ನು ಆಹ್ವಾನಿಸಿದರೆ, ನಾನು ಹಾಜರಾಗಲು ಒಪ್ಪುತ್ತೇನೆ, ಆದರೆ ನಾನು ನನ್ನೊಂದಿಗೆ 50 ಅತಿಥಿಗಳನ್ನು ಕರೆತರುತ್ತೇನೆ ಎನ್ನುತ್ತಿದ್ದೆ. ಈ ಅತಿಥಿಗಳು ಯಾರು ಎಂದು ವಿಶ್ವವಿದ್ಯಾಲಯವು ಯಾವಾಗಲೂ ಆಶ್ಚರ್ಯ ಪಡುತ್ತಿತ್ತು. ರಾಜಕಾರಣಿಯೊಬ್ಬರು ಇದನ್ನು ಹೇಳಿದಾಗ, ಅವರು ಅನುಯಾಯಿಗಳು ಅಥವಾ ಬೆಂಬಲಿಗರು ಎಂದು ಭಾವಿಸುತ್ತಾರೆ. ಆದರೆ 50 ಅತಿಥಿಗಳು ಹತ್ತಿರದ ಸರ್ಕಾರಿ ಶಾಲೆಗಳ ಮಕ್ಕಳು, ವಿಶೇಷವಾಗಿ ಬಡ ಪ್ರದೇಶಗಳ ಮಕ್ಕಳು ಎಂದು ನಾನು ಸ್ಪಷ್ಟಪಡಿಸುತ್ತೇನೆ. ಈ ಮಕ್ಕಳು ಘಟಿಕೋತ್ಸವದ ಸಮಯದಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ.

ಈ ಮಕ್ಕಳು, ಬಹಳ ಬಡ ಕುಟುಂಬಗಳಿಂದ ಬಂದವರು, ಸ್ನಾತಕೋತ್ತರ ಸಮಾರಂಭವನ್ನು ಸಾಕ್ಷಿಯಾಗುವಾಗ, ಅವರ ಮನಸ್ಸಿನಲ್ಲಿ ಒಂದು ಕನಸು ನೆಲೆಸುತ್ತದೆ - ಒಂದು ದಿನ ನಾನು ಕ್ಯಾಪ್ ಮತ್ತು ಗೌನ್ ಧರಿಸಿ ಪ್ರಶಸ್ತಿ ಪಡೆಯುತ್ತೇನೆ. ಈ ಭಾವನೆ ಅವರ ಪ್ರಜ್ಞೆಯಲ್ಲಿ ಆಳವಾಗಿ ನೆಲೆಸುತ್ತದೆ. ನೀವು ನಿಮ್ಮ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯಕ್ಕೆ ಕರೆದುಕೊಂಡು ಹೋಗಿ ಅಂತಹ ಘಟನೆಗಳ ಪ್ರಾಮುಖ್ಯತೆಯನ್ನು ಅವರಿಗೆ ತೋರಿಸಿದರೆ, ನೀವು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಅದು ಅವರಿಗೆ ಸ್ಫೂರ್ತಿ ನೀಡುತ್ತದೆ.

ಅದೇ ರೀತಿಯಲ್ಲಿ, ಕ್ರೀಡಾ ಕಾರ್ಯಕ್ರಮಗಳಿಗೆ, ಇದನ್ನು ಪರಿಗಣಿಸಿ: ಬ್ಲಾಕ್ ಮಟ್ಟದ ಕ್ರೀಡಾ ಸ್ಪರ್ಧೆ ನಡೆಯುವಾಗ, ಅದರಲ್ಲಿ ಭಾಗವಹಿಸುವ PT ಶಿಕ್ಷಕ ಮತ್ತು ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಾರೆ. ಆದರೆ, ಸಂಪೂರ್ಣ ಶಾಲೆಯು ವೀಕ್ಷಿಸಲು ಮತ್ತು ಬೆಂಬಲಿಸಲು ಹಾಜರಾಗಬೇಕು. ಅದು ಕಬಡ್ಡಿ ಪಂದ್ಯವಾಗಿದ್ದರೂ ಸಹ, ನಾವು ಅಲ್ಲಿರಬೇಕು, ಪಕ್ಕದಲ್ಲಿ ಚೀರ್ ಮಾಡಬೇಕು. ಈ ಘಟನೆಗಳನ್ನು ವೀಕ್ಷಿಸುವುದು ವಿದ್ಯಾರ್ಥಿಗಳನ್ನು ಆಟಗಾರರಾಗಲು ಪ್ರೇರೇಪಿಸಬಹುದು ಮತ್ತು ಆಟಗಾರರು ಹೆಮ್ಮೆಯನ್ನು ಅನುಭವಿಸಬಹುದು. ಅವರು ತಮ್ಮನ್ನು ತಾವು ಮಾತ್ರ ಪ್ರತಿನಿಧಿಸುತ್ತಿಲ್ಲ, ಅವರ ಸಮುದಾಯವನ್ನೂ ಸಹ ಪ್ರತಿನಿಧಿಸುತ್ತಿದ್ದಾರೆ ಎಂದು ನಂಬುತ್ತಾರೆ.

ಶಿಕ್ಷಕರಾಗಿ, ನಾವು ಅಂತಹ ಅನುಭವಗಳನ್ನು ಹೆಚ್ಚಿಸಲು ನಿರಂತರವಾಗಿ ಹೊಸ ಮಾರ್ಗಗಳನ್ನು ಹುಡುಕಬೇಕು. ಈಗಾಗಲೇ ಇರುವಂತಹದಕ್ಕೆ ಸ್ವಲ್ಪ ಹೆಚ್ಚುವರಿ ಪ್ರಯತ್ನವನ್ನು ಸೇರಿಸುವ ಮೂಲಕ, ನಾವು ಪರಿಣಾಮವನ್ನು ಗಣನೀಯವಾಗಿ ಏರಿಸಬಹುದು. ಈ ವಿಧಾನವು ಶಾಲೆಯನ್ನು ಹೆಚ್ಚು ಹೆಸರುವಾಸಿಯಾಗಿಸುವುದಲ್ಲದೇ, ಶಿಕ್ಷಕರನ್ನು ಹೇಗೆ ಗ್ರಹಿಸಲಾಗುತ್ತದೆ ಎಂಬುದನ್ನೂ ಬದಲಿಸುತ್ತದೆ.

ಇದಲ್ಲದೆ, ಪ್ರಶಸ್ತಿ ಪಡೆದವರ ಯಶಸ್ಸಿನ ಹಿಂದಿನ ಕಾರಣಗಳು ಎಲ್ಲರಿಗೂ ತಿಳಿದಿರಬಹುದು ಎಂದಿಲ್ಲ. ಒಬ್ಬರು ಪ್ರಶಸ್ತಿ ಪಡೆದರೆ, ಇತರರೂ ಅದೇ ರೀತಿಯ ಕಾರಣಗಳಿಗಾಗಿ ಪಡೆದಿರಬೇಕು ಎಂದು ನೀವು ಭಾವಿಸಬಹುದು. ರಾಷ್ಟ್ರದ ಗಮನವನ್ನು ಸೆಳೆದ ಅವರ ವಿಶಿಷ್ಟ ಗುಣಗಳು ಮತ್ತು ಅವರಿಂದ ಕಲಿಯುವುದು ಮುಖ್ಯವಾಗಿದೆ. ನಾವು ಸಹ ಅಂತಹ ಗುಣಗಳನ್ನು ಕಲಿಯಬಹುದೇ? ಈ ನಾಲ್ಕು ಅಥವಾ ಐದು ದಿನಗಳನ್ನು ಅಧ್ಯಯನ ಪ್ರವಾಸವಾಗಿ ಬಳಸಿಕೊಂಡು ಇತರರು ಹೇಗೆ ಶ್ರೇಷ್ಟತೆಯನ್ನು ಸಾಧಿಸುತ್ತಾರೆ ಎಂಬುದರ ಬಗ್ಗೆ ಅರಿವು ಪಡೆಯಿರಿ.

ನಾನು ನಿಮ್ಮೊಂದಿಗೆ ಪರಸ್ಪರ ಸಂವಹನ ಮಾಡುತ್ತಿದ್ದಂತೆ, ನಾನು ಸಹ ನಿಮ್ಮಿಂದ ಕಲಿಯುತ್ತಿದ್ದೇನೆ. ನೀವು ನಿಮ್ಮ ಕೆಲಸವನ್ನು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ನೋಡುವುದು ನನಗೆ ಸಂತೋಷ ನೀಡುತ್ತದೆ. ಹಳೆಯ ಕಾಲದಲ್ಲಿ ನಾವು ಪೆನ್ ಪಾಲ್ಗಳನ್ನು ಹೊಂದಿದ್ದೆವು; ಈಗ ಸಾಮಾಜಿಕ ಮಾಧ್ಯಮದೊಂದಿಗೆ ಆ ಪರಿಕಲ್ಪನೆ ಇಲ್ಲ. ಆದರೆ ನೀವೆಲ್ಲರೂ ಒಂದು ವಾಟ್ಸಾಪ್ ಗ್ರೂಪ್ ರಚಿಸುವುದು ಏಕೆ ಸಾಧ್ಯವಿಲ್ಲ? ಯಾವಾಗ ರಚಿಸಲಾಯಿತು? ನಿನ್ನೆಯೇ? ಓಕೆ, ಅದು 8-10 ದಿನಗಳಾಗಿದೆ, ಅಂದರೆ ಇದು ಒಳ್ಳೆಯ ಆರಂಭ. ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಮತ್ತು ಪರಸ್ಪರ ಬೆಂಬಲಿಸಿ. ಉದಾಹರಣೆಗೆ, ನೀವು ತಮಿಳುನಾಡಿನ ಒಬ್ಬ ಶಿಕ್ಷಕರನ್ನು ಇಲ್ಲಿ ಭೇಟಿಯಾಗಿದ್ದೀರಿ ಎಂದು ಹೇಳೋಣ. ನೀವು ತಮಿಳುನಾಡಿಗೆ ಪ್ರವಾಸ ಹೋಗಲು ಯೋಜಿಸುತ್ತಿದ್ದರೆ, ಅಲ್ಲಿನ ಶಿಕ್ಷಕರೊಂದಿಗೆ ಸಂಪರ್ಕ ಸಾಧಿಸಿ. ಅವರು ನಿಮಗೆ ಎಷ್ಟು ದೊಡ್ಡ ಬಲವಾಗುತ್ತಾರೆ ಎಂದು ನಿಮಗೆ ಅರಿವಾಗುತ್ತದೆ. ಕೇರಳ, ಜಮ್ಮು ಮತ್ತು ಕಾಶ್ಮೀರ ಅಥವಾ ಇನ್ನೊಂದು ಪ್ರದೇಶದಿಂದ ಯಾರನ್ನಾದರೂ ನೀವು ಕಾಣಬಹುದು. ಅವರು ನಿಮಗೆ ಸಹಾಯ ಮಾಡಲು ಸಂತೋಷಪಡುತ್ತಾರೆ. ಅಂತಹ ನೆಟ್ವರ್ಕ್ ರಚಿಸುವುದು ಏಕತೆಯನ್ನು ಬೆಳೆಸುತ್ತದೆ ಮತ್ತು ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಬಲಪಡಿಸುತ್ತದೆ. ನೀವು ಒಬ್ಬ ಕುಟುಂಬ ಎಂದು ಭಾವಿಸುವ ಜನರ ಅಂತಹ ಗುಂಪನ್ನು ರಚಿಸಲು ನಾನು ಬಯಸುತ್ತೇನೆ.

'ಏಕ್ ಭಾರತ ಶ್ರೇಷ್ಠ ಭಾರತ' ಎಂಬ ಹಂಚಿದ ಅನುಭವಕ್ಕಿಂತ ಹೆಚ್ಚು ದೊಡ್ಡ ಅನುಭವವಿಲ್ಲ.ಸಣ್ಣ ವಿಷಯಗಳಿಗೆ ಗಮನ ಕೊಡುವ ಮೂಲಕ ಶಿಕ್ಷಕರು ಹೇಗೆ ಗಮನಾರ್ಹ ಬದಲಾವಣೆಯನ್ನು ತರಬಹುದು ಎಂಬುದನ್ನು ಇದು ತೋರಿಸುತ್ತದೆ.

ನೀವು ನರಂತರವಾಗಿ ಶಿಕ್ಷಕರ ಬಗ್ಗೆ "ಶಿಕ್ಷಕರು ಹೀಗೆ, ಶಿಕ್ಷಕರು ಅದು" ಎಂಬ ಹೇಳಿಕೆಗಳನ್ನು ಕೇಳುತ್ತಿ ಇರಬಹುದು. ಈ ಮಾತು ಕೇಳಲು ನಿಮಗೆ ಬೇಸರವಾಗಬಹುದು. ನಾನು ಇದನ್ನು ನನ್ನ ಸ್ವಂತ ಪ್ರಯೋಜನಕ್ಕಾಗಿ ಹೇಳುತ್ತಿಲ್ಲ ಎಂದು ಖಚಿತಪಡಿಸುತ್ತೇನೆ. ಆದಾಗ್ಯೂ, ಅತಿಯಾದ ಪ್ರಶಂಸೆಯು ಶಿಕ್ಷಕರನ್ನು ಅಪಮೌಲ್ಯಗೊಳಿಸಬಹುದು ಮತ್ತು ಅವರ ಕೆಲಸದ ಮಹತ್ವವನ್ನು ಕಡಿಮೆ ಮಾಡಬಹುದು.

ಬದಲಾಗಿ ವಿದ್ಯಾರ್ಥಿ ಮತ್ತು ಅವರ ಕುಟುಂಬವು ನಮ್ಮ ಮೇಲೆ ಇಟ್ಟಿರುವ ಅಪಾರ ವಿಶ್ವಾಸದ ಮೇಲೆ ನಾವು ಗಮನ ಹರಿಸೋಣ. ಆ ಕುಟುಂಬವು ತಮ್ಮ ಮಗುವನ್ನು ಕೇವಲ ಪೆನ್ನು ಹಿಡಿಯಲು, ಕಂಪ್ಯೂಟರ್ ಬಳಸಲು ಅಥವಾ ಉತ್ತಮ ಪರೀಕ್ಷಾ ಫಲಿತಾಂಶಗಳಿಗಾಗಿ ಪಠ್ಯಕ್ರಮವನ್ನು ಕಂಠಪಾಠ ಮಾಡಲು ನಮಗೆ ಒಪ್ಪಿಸಿಲ್ಲ. ಪೋಷಕರು ತಮ್ಮ ಮಕ್ಕಳನ್ನು ನಮಗೆ ಒಪ್ಪಿಸುವುದು, ಅವರು ಮೂಲಭೂತ ಜ್ಞಾನವನ್ನು ಒದಗಿಸಬಹುದು ಎಂಬ ನಂಬಿಕೆಯಿಂದಲೇ. ಆದರೆ ವಿದ್ಯಾರ್ಥಿಯ ನಿಜವಾದ ವೃದ್ಧಿಗೆ ಅಗತ್ಯವಾದ ಹೆಚ್ಚುವರಿ ಮೌಲ್ಯವನ್ನು ಸೇರಿಸುವ ಶಿಕ್ಷಕರೇ ಎಂಬುದನ್ನು ಅವರು ಅರಿತುಕೊಂಡಿದ್ದಾರೆ.

ಮಗುವಿನ ಶಿಕ್ಷಣಕ್ಕೆ 'ಪ್ಲಸ್ ಒಂದು' ಅನ್ನು ಯಾರು ಸೇರಿಸುವರು? ಅದು ಶಿಕ್ಷಕರು. ಮಗುವಿನ ಸಾಂಸ್ಕೃತಿಕ ಮೌಲ್ಯಗಳನ್ನು ಹೆಚ್ಚಿಸುವವರು ಯಾರು? ಅದು ಶಿಕ್ಷಕರು. ಅವರ ಅಭ್ಯಾಸಗಳನ್ನು ಸುಧಾರಿಸಲು ಯಾರು ಸಹಾಯ ಮಾಡುತ್ತಾರೆ? ಮತ್ತೆ, ಅದು ಶಿಕ್ಷಕರು. ಆದ್ದರಿಂದ, ನಮ್ಮ ಜವಾಬ್ದಾರಿಯು ಕೇವಲ ಸಿದ್ಧಾಂತವನ್ನು ಮೀರಿದೆ- ಮಗುವು ಮನೆಯಲ್ಲಿ ಪಡೆಯುವುದಕ್ಕಿಂತ ಹೆಚ್ಚಾಗಿ, ಅವರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆ ತರಲು ನಾವು ಹೆಚ್ಚುವರಿಯಾಗಿ ಏನನ್ನಾದರೂ ಸೇರಿಸಲು ಶ್ರಮಿಸಬೇಕು.

ನೀವು ಈ ಪ್ರಯತ್ನ ಮಾಡಿದರೆ, ನೀವು ಯಶಸ್ವಿಯಾಗುತ್ತೀರಿ ಎಂಬ ವಿಶ್ವಾಸವಿದೆ. ಮತ್ತು ಈ ಕಾರ್ಯದಲ್ಲಿ ನೀವು ಒಬ್ಬಂಟಿಯಾಗಿಲ್ಲ - ಇತರ ಶಿಕ್ಷಕರೊಂದಿಗೆ ತೊಡಗಿಸಿಕೊಳ್ಳಿ, ನಿಮ್ಮ ಪ್ರದೇಶ ಮತ್ತು ರಾಜ್ಯದಲ್ಲಿರುವವರೊಂದಿಗೆ ಸಹಕರಿಸಿ. ನಾಯಕತ್ವದ ಪಾತ್ರವನ್ನು ವಹಿಸಿ ಮತ್ತು ನಮ್ಮ ದೇಶದ ಹೊಸ ಪೀಳಿಗೆಯನ್ನು ತಯಾರು ಮಾಡಿ. ನೀವು ಇಂದು ಕಲಿಸುತ್ತಿರುವ ಮಕ್ಕಳು ಕೆಲವೇ ವರ್ಷಗಳಲ್ಲಿ ಕೆಲಸಕ್ಕೆ ಸೇರುತ್ತಾರೆ ಮತ್ತು ಅವರು 25 ಅಥವಾ 27 ರ ಹೊತ್ತಿಗೆ ಭಾರತವು ಇಂದಿನಂತೆ ಇರುವುದಿಲ್ಲ-ಇದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ.

ಅಭಿವೃದ್ಧಿ ಹೊಂದಿದ ಆ ಭಾರತದಲ್ಲಿ ನೀವು ನಿಮ್ಮ ನಿವೃತ್ತಿ ಪಿಂಚಣಿಯನ್ನು ಪಡೆಯುತ್ತಿರಬಹುದು. ಆದರೆ ನೀವು ಇಂದು ಪೋಷಿಸುತ್ತಿರುವ ವಿದ್ಯಾರ್ಥಿಗಳೇ ಆ ರಾಷ್ಟ್ರವನ್ನು ಹೆಚ್ಚಿನ ಎತ್ತರಕ್ಕೆ ಏರಿಸುವರು. ಇದು ಒಂದು ದೊಡ್ಡ ಜವಾಬ್ದಾರಿ.  ನೆನಪಿಡಿ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ಕೇವಲ ಮೋದಿಯವರ ದೃಷ್ಟಿ ಮಾತ್ರವಲ್ಲ - ಇದು ನಮ್ಮೆಲ್ಲರ ಸಾಮೂಹಿಕ ಮಿಷನ್.

ನಾವೆಲ್ಲರೂ ಒಟ್ಟಾಗಿ ಈ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಸಮರ್ಥ ಪೀಳಿಗೆಯನ್ನು ಸಿದ್ಧಪಡಿಸಬೇಕು. ನಾವು ನುರಿತ ಮತ್ತು ಜವಾಬ್ದಾರಿಯುತ ನಾಗರಿಕರನ್ನು ಬೆಳೆಸಬೇಕು. ಭವಿಷ್ಯದ ಕ್ರೀಡಾ ಸ್ಪರ್ಧೆಗಳಲ್ಲಿ 25 ರಿಂದ 50 ಚಿನ್ನದ ಪದಕಗಳನ್ನು ಗೆಲ್ಲಲು ನಾವು ಬಯಸಿದರೆ, ಆ ಕ್ರೀಡಾಪಟುಗಳು ಎಲ್ಲಿಂದ ಬರುತ್ತಾರೆ? ಅವರು ಇಂದು ನೀವು ಕಲಿಸುತ್ತಿರುವ ವಿದ್ಯಾರ್ಥಿಗಳಿಂದಲೇ ಹೊರಹೊಮ್ಮುತ್ತಾರೆ.

ನಿಮ್ಮ ಬಳಿ ಅನೇಕ ಕನಸುಗಳಿವೆ ಮತ್ತು ಅವುಗಳನ್ನು ಸಾಕಾರಗೊಳಿಸಲು ಪ್ರಯೋಗಶಾಲೆಯು ನಿಮ್ಮ ಮುಂದೆಯೇ ಇದೆ - ಕಚ್ಚಾ ವಸ್ತುವು ನಿಮ್ಮ ತರಗತಿಯಲ್ಲಿರುವ ಮಕ್ಕಳು. ಈ 'ಪ್ರಯೋಗಶಾಲೆಯಲ್ಲಿ' ನೀವು ಪ್ರಯೋಗ ಮಾಡಬಹುದು, ಹೊಸತನ ತರಬಹುದು ಮತ್ತು ಅಂತಿಮವಾಗಿ ಭವಿಷ್ಯವನ್ನು ರೂಪಿಸಬಹುದು. ನಿಮ್ಮ ಪ್ರಯತ್ನಗಳಿಂದ ನೀವು ಬಯಸಿದ ಫಲಿತಾಂಶಗಳನ್ನು ಸಾಧಿಸಬಹುದು.

ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಗಳು!

ಧನ್ಯವಾದಗಳು!

ಸೂಚನೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

 

*****



(Release ID: 2053090) Visitor Counter : 11