ಪ್ರಧಾನ ಮಂತ್ರಿಯವರ ಕಛೇರಿ

​​​​​​​ಮೇಘಾಲಯದ ಶಿಲ್ಲಾಂಗ್ನಲ್ಲಿ ಪ್ರಧಾನಿಯವರಿಂದ 2450 ಕೋಟಿ ರೂ.ಗಳ ಬಹುವಿಧದ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ 


"ಈಶಾನ್ಯದ ಅಭಿವೃದ್ಧಿಗೆ ಅಡ್ಡಿಯಾಗುವ ಎಲ್ಲಾ ಅಡೆತಡೆಗಳಿಗೆ ಸರ್ಕಾರ ರೆಡ್ ಕಾರ್ಡ್ ತೋರಿಸಿದೆ"

"ಭಾರತವು ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುವ ದಿನ ಮತ್ತು ಪ್ರತಿಯೊಬ್ಬ ಭಾರತೀಯ ಕೂಡ ನಮ್ಮ ತಂಡವನ್ನು ಹುರಿದುಂಬಿಸುವ ದಿನ ದೂರವಿಲ್ಲ "

"ಅಭಿವೃದ್ಧಿಯು ಬಜೆಟ್, ಟೆಂಡರ್, ಶಂಕುಸ್ಥಾಪನೆ ಮತ್ತು ಉದ್ಘಾಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ"

"ಇಂದು ನಾವು ನೋಡುತ್ತಿರುವ ಪರಿವರ್ತನೆಯು ನಮ್ಮ ಉದ್ದೇಶಗಳು, ನಿರ್ಣಯಗಳು, ಆದ್ಯತೆಗಳು ಮತ್ತು ನಮ್ಮ ಕೆಲಸದ ಸಂಸ್ಕೃತಿಯಲ್ಲಿನ ಬದಲಾವಣೆಯ ಪರಿಣಾಮವಾಗಿದೆ"

"ಕೇಂದ್ರ ಸರ್ಕಾರವು ಈ ವರ್ಷ 7 ಲಕ್ಷ ಕೋಟಿ ರೂಪಾಯಿಗಳನ್ನು ಮೂಲಸೌಕರ್ಯಕ್ಕಾಗಿಯೇ ಖರ್ಚು ಮಾಡುತ್ತಿದೆ, ಆದರೆ 8 ವರ್ಷಗಳ ಹಿಂದೆ ಈ ವೆಚ್ಚವು 2 ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆಯಾಗಿತ್ತು"

"ಪಿಎಂ-ಡಿವೈನ್ ಅಡಿಯಲ್ಲಿ ಮುಂದಿನ ಮೂರ್ನಾಲ್ಕು ವರ್ಷಗಳವರೆಗೆ 6,000 ಕೋಟಿ ರೂಪಾಯಿಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ"

"ಬುಡಕಟ್ಟು ಸಮುದಾಯದ ಸಂಪ್ರದಾಯ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಯ ಮಾಡುವುದು ಸರ್ಕಾರದ ಆದ್ಯತೆಯಾಗಿದೆ"

"ಹಿಂದಿನ ಸರ್ಕಾರವು ಈಶಾನ್ಯಕ್ಕೆ 'ವಿಭಜಿಸುವ' (ಡಿವೈಡ್) ವಿಧಾನವನ್ನು ಹೊಂದಿತ್ತು ಆದರೆ ನಮ್ಮ ಸರ್ಕಾರವು 'ದೈವಿಕ' (ಡಿವೈನ್)

Posted On: 18 DEC 2022 2:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೇಘಾಲಯದ ಶಿಲ್ಲಾಂಗ್ನಲ್ಲಿ 2450 ಕೋಟಿ ರೂ.ಗಳ ಬಹುವಿಧದ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮಾಡಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಇದಕ್ಕೂ ಮುನ್ನ ಶಿಲ್ಲಾಂಗ್ನ ಸ್ಟೇಟ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಈಶಾನ್ಯ ಮಂಡಳಿಯ ಸಭೆಯಲ್ಲಿ ಪ್ರಧಾನಮಂತ್ರಿಯವರು ಪಾಲ್ಗೊಂಡರು ಮತ್ತು ಅದರ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸಿದರು.

ಉದ್ಘಾಟನೆಯಾದ ಈ ಯೋಜನೆಗಳಲ್ಲಿ 320 ಪೂರ್ಣಗೊಂಡ ಮತ್ತು ನಿರ್ಮಾಣ ಹಂತದಲ್ಲಿರುವ 890 4ಜಿ ಮೊಬೈಲ್ ಟವರ್ಗಳ ಉದ್ಘಾಟನೆ, ಉಮ್ಸಾವ್ಲಿಯಲ್ಲಿ ಐಐಎಂ ಶಿಲ್ಲಾಂಗ್ನ ಹೊಸ ಕ್ಯಾಂಪಸ್, ಹೊಸ ಶಿಲ್ಲಾಂಗ್ ಸ್ಯಾಟಲೈಟ್ ಟೌನ್ಶಿಪ್ ಗೆ ಉತ್ತಮ ಸಂಪರ್ಕ ಕಲ್ಪಿಸುವ ಶಿಲ್ಲಾಂಗ್ - ಡೀಂಗ್ಪಾಸೋ ರಸ್ತೆ, ಮತ್ತು ಮೇಘಾಲಯ, ಮಣಿಪುರ ಮತ್ತು ಅರುಣಾಚಲ ಪ್ರದೇಶ ಮೂರು ರಾಜ್ಯಗಳಲ್ಲಿ ಬರುವ ಇತರ ನಾಲ್ಕು ರಸ್ತೆಗಳು ಯೋಜನೆಗಳು ಸೇರಿವೆ. ಪ್ರಧಾನಮಂತ್ರಿ ಅವರು ಮೇಘಾಲಯದಲ್ಲಿ ಅಣಬೆ ಅಭಿವೃದ್ಧಿ ಕೇಂದ್ರದ ಸ್ಪಾನ್ ಪ್ರಯೋಗಾಲಯ ಮತ್ತು ಸಮಗ್ರ ಜೇನುಸಾಕಣೆ ಅಭಿವೃದ್ಧಿ ಕೇಂದ್ರ ಮತ್ತು ಮಿಜೋರಾಂ, ಮಣಿಪುರ, ತ್ರಿಪುರಾ ಮತ್ತು ಅಸ್ಸಾಂನಲ್ಲಿ 21 ಹಿಂದಿ ಗ್ರಂಥಾಲಯಗಳನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಾದ್ಯಂತ ಆರು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಅವರು ತುರಾ ಇಂಟಿಗ್ರೇಟೆಡ್ ಹಾಸ್ಪಿಟಾಲಿಟಿ ಮತ್ತು ಕನ್ವೆನ್ಷನ್ ಸೆಂಟರ್ ಮತ್ತು ಶಿಲ್ಲಾಂಗ್ ಟೆಕ್ನಾಲಜಿ ಪಾರ್ಕ್ 2 ನೇ ಹಂತಕ್ಕೆ ಅಡಿಪಾಯವನ್ನು ಹಾಕಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮೇಘಾಲಯವು ಪ್ರಕೃತಿ ಮತ್ತು ಸಂಸ್ಕೃತಿಯಲ್ಲಿ ಸಮೃದ್ಧವಾಗಿರುವ ರಾಜ್ಯವಾಗಿದೆ ಮತ್ತು ಈ ಸಮೃದ್ಧಿಯು ಜನರ ಆತ್ಮೀಯ ಸ್ವಭಾವದ ಮೂಲಕ ಪ್ರತಿಫಲಿಸುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿಗಾಗಿ ಸಂಪರ್ಕ, ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗದಿಂದ ಹಿಡಿದು ಮುಂಬರುವ ಮತ್ತು ಹೊಸದಾಗಿ ಉದ್ಘಾಟನೆಗೊಂಡ ಹಲವಾರು ಯೋಜನೆಗಳಿಗಾಗಿ ಅವರು ಮೇಘಾಲಯದ ಜನತೆಯನ್ನು ಅಭಿನಂದಿಸಿದರು.

ಫುಟ್ಬಾಲ್ ವಿಶ್ವಕಪ್ ನಡೆಯುತ್ತಿರುವ ಸಮಯದಲ್ಲಿ ಇಂದಿನ ಸಾರ್ವಜನಿಕ ಕಾರ್ಯಕ್ರಮವು ಫುಟ್ಬಾಲ್ ಮೈದಾನದಲ್ಲಿ ನಡೆಯುತ್ತಿರುವ ಕಾಕತಾಳೀಯತೆಯ ಬಗ್ಗೆ ಪ್ರಧಾನಿ ಎಲ್ಲರ ಗಮನ ಸೆಳೆದರು. “ಒಂದೆಡೆ, ಫುಟ್ಬಾಲ್ ಸ್ಪರ್ಧೆ ನಡೆಯುತ್ತಿದೆ, ಆದರೆ ಇಲ್ಲಿ ನಾವು ಫುಟ್ಬಾಲ್ ಮೈದಾನದಲ್ಲಿ ಅಭಿವೃದ್ಧಿಯ ಸ್ಪರ್ಧೆಯನ್ನು ಮುನ್ನಡೆಸುತ್ತಿದ್ದೇವೆ. ಕತಾರ್ನಲ್ಲಿ ಫುಟ್ಬಾಲ್ ವಿಶ್ವಕಪ್ ನಡೆಯುತ್ತಿದ್ದರೂ ಇಲ್ಲಿನ ಜನರ ಉತ್ಸಾಹ ಕಡಿಮೆಯಾಗಿಲ್ಲ”ಎಂದು ಹೇಳಿದರು. ಫುಟ್ಬಾಲ್ನಲ್ಲಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದ ವ್ಯಕ್ತಿಗೆ  ತೋರಿಸುವ ರೆಡ್ ಕಾರ್ಡ್ ಸಾದೃಶ್ಯವನ್ನು ವಿವರಿಸಿದ ಪ್ರಧಾನಿ, ಈಶಾನ್ಯದ ಅಭಿವೃದ್ಧಿಗೆ ಅಡ್ಡಿಯಾಗುವ ಎಲ್ಲಾ ಅಡೆತಡೆಗಳಿಗೆ ಸರ್ಕಾರವು ರೆಡ್ ಕಾರ್ಡ್ ತೋರಿಸಿದೆ ಎಂದರು. ಭ್ರಷ್ಟಾಚಾರ, ತಾರತಮ್ಯ, ಸ್ವಜನಪಕ್ಷಪಾತ, ಹಿಂಸಾಚಾರ ಅಥವಾ ಮತಬ್ಯಾಂಕ್ ರಾಜಕಾರಣ ಹೀಗೆ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಯಾಗುವುದು ಯಾವುದೇ ಇರಲಿ, ಈ ಎಲ್ಲ ಅನಿಷ್ಟಗಳನ್ನು ಬೇರು ಸಮೇತ ಕಿತ್ತೆಸೆಯಲು ನಾವು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಇಂತಹ ಅನಿಷ್ಟಗಳು ಆಳವಾಗಿ ಬೇರೂರಿದ್ದರೂ, ಪ್ರತಿಯೊಂದನ್ನೂ ತೊಡೆದುಹಾಕುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ. ಸರ್ಕಾರದ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶವನ್ನು ತೋರಿಸುತ್ತಿವೆ ಎಂದು ಅವರು ಹೇಳಿದರು.

ಕ್ರೀಡಾ ಅಭಿವೃದ್ಧಿಗೆ ಒತ್ತು ನೀಡುವ ಕುರಿತು ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಕೇಂದ್ರ ಸರ್ಕಾರವು ಹೊಸ ವಿಧಾನದೊಂದಿಗೆ ಮುನ್ನಡೆಯುತ್ತಿದೆ ಮತ್ತು ಅದರ ಪ್ರಯೋಜನಗಳನ್ನು ಈಶಾನ್ಯ ಪ್ರದೇಶಗಳಲ್ಲಿಯೂ ಸ್ಪಷ್ಟವಾಗಿ ಕಾಣಬಹುದು ಎಂದು ಒತ್ತಿ ಹೇಳಿದರು. ಭಾರತದ ಮೊದಲ ಕ್ರೀಡಾ ವಿಶ್ವವಿದ್ಯಾನಿಲಯದ ಜೊತೆಗೆ, ಈಶಾನ್ಯ ಪ್ರದೇಶವು ಬಹುಪಯೋಗಿ ಸಭಾಂಗಣ, ಫುಟ್ಬಾಲ್ ಮೈದಾನ ಮತ್ತು ಅಥ್ಲೆಟಿಕ್ಸ್ ಟ್ರ್ಯಾಕ್ನಂತಹ ಬಹು ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ ಎಂದು ಅವರು ಹೇಳಿದರು. ಅಂತಹ ತೊಂಬತ್ತು ಯೋಜನೆಗಳ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು. ಕತಾರ್ನಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ನಲ್ಲಿ ಅಂತಾರಾಷ್ಟ್ರೀಯ ತಂಡಗಳು ಆಡುತ್ತಿರುವುದನ್ನು ನಾವು ನೋಡುತ್ತಿದ್ದರೂ ನಮ್ಮ ಯುವಕರ ಶಕ್ತಿಯಲ್ಲಿ ದೃಢ ನಂಬಿಕೆಯಿದೆ. ಭಾರತ ಇಂತಹ ಮಹತ್ವದ ಪಂದ್ಯಾವಳಿಯನ್ನು ಆಯೋಜಿಸುವ ದಿನ ದೂರವಿಲ್ಲ ಮತ್ತು ಅದರಲ್ಲಿ ಪಾಲ್ಗೊಳ್ಳುವ ನಮ್ಮ ತಂಡಕ್ಕೆ ಪ್ರತಿಯೊಬ್ಬ ಭಾರತೀಯನೂ ಹುರಿದುಂಬಿಸುವ ದಿನ ದೂರವಿಲ್ಲ ಎಂದು ಅವರು ಹೇಳಿದರು.

ಅಭಿವೃದ್ಧಿಯು ಬಜೆಟ್, ಟೆಂಡರ್ಗಳು, ಶಂಕುಸ್ಥಾಪನೆ ಮತ್ತು ಉದ್ಘಾಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ, 2014 ಕ್ಕೂ ಮೊದಲು ಇದು ರೂಢಿಯಲ್ಲಿತ್ತು ಎಂದು ಹೇಳಿದ ಪ್ರಧಾನಿ, ಇಂದು ನಾವು ನೋಡುತ್ತಿರುವ ಪರಿವರ್ತನೆಯು ನಮ್ಮ ನಿರ್ಣಯಗಳು, ಆದ್ಯತೆಗಳು ಮತ್ತು ನಮ್ಮ ಕೆಲಸದ ಸಂಸ್ಕೃತಿ, ಉದ್ದೇಶಗಳ ಬದಲಾವಣೆಯ ಪರಿಣಾಮವಾಗಿದೆ. ಫಲಿತಾಂಶಗಳನ್ನು ನಮ್ಮ ಪ್ರಕ್ರಿಯೆಗಳಲ್ಲಿ ಕಾಣಬಹುದು ಎಂದರು. ಆಧುನಿಕ ಮೂಲಸೌಕರ್ಯ, ಆಧುನಿಕ ಸಂಪರ್ಕದೊಂದಿಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ನಮ್ಮ ನಿರ್ಣಯವಾಗಿದೆ. ಸಬ್ಕಾ ಪ್ರಯಾಸ್ (ಎಲ್ಲರ ಪ್ರಯತ್ನಗಳು) ಮೂಲಕ ತ್ವರಿತ ಅಭಿವೃದ್ಧಿಯ ಉದ್ದೇಶದೊಂದಿಗೆ ಭಾರತದ ಪ್ರತಿಯೊಂದು ಪ್ರದೇಶ ಮತ್ತು ವಿಭಾಗವನ್ನು ಸಂಪರ್ಕಿಸುವ ಉದ್ದೇಶವಾಗಿದೆ. ಅಭಾವವನ್ನು ತೊಡೆದುಹಾಕಲು, ದೂರವನ್ನು ಕಡಿಮೆ ಮಾಡಲು, ಸಾಮರ್ಥ್ಯ ವರ್ಧನೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದು ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಕೆಲಸದ ಸಂಸ್ಕೃತಿಯಲ್ಲಿನ ಬದಲಾವಣೆಯು ಪ್ರತಿ ಯೋಜನೆ ಮತ್ತು ಕಾರ್ಯಕ್ರಮವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದರು. ಕೇಂದ್ರ ಸರ್ಕಾರವು ಈ ವರ್ಷ 7 ಲಕ್ಷ ಕೋಟಿ ರೂ.ಗಳನ್ನು ಮೂಲಸೌಕರ್ಯಕ್ಕಾಗಿಯೇ ಖರ್ಚು ಮಾಡುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು, ಆದರೆ 8 ವರ್ಷಗಳ ಹಿಂದೆ ಈ ವೆಚ್ಚವು 2 ಲಕ್ಷ ಕೋಟಿ ರೂ.ಗಿಂತ ಕಡಿಮೆ ಇತ್ತು. ಮೂಲಸೌಕರ್ಯವನ್ನು ವೃದ್ದಿಸುವ ವಿಷಯದಲ್ಲಿ ರಾಜ್ಯಗಳು ಪರಸ್ಪರ ಸ್ಪರ್ಧಿಸುತ್ತಿವೆ ಎಂದು ಅವರು ತಿಳಿಸಿದರು.

ಈಶಾನ್ಯದಲ್ಲಿನ ಮೂಲಸೌಕರ್ಯ ಅಭಿವೃದ್ಧಿಯ ಉದಾಹರಣೆಗಳನ್ನು ನೀಡಿದ ಪ್ರಧಾನಿಯವರು, ಶಿಲ್ಲಾಂಗ್ ಸೇರಿದಂತೆ ಈಶಾನ್ಯದ ಎಲ್ಲ ರಾಜಧಾನಿಗಳನ್ನು ರೈಲು ಸೇವೆಯೊಂದಿಗೆ ಸಂಪರ್ಕಿಸುವ ತ್ವರಿತ ಗತಿಯ ಕೆಲಸವನ್ನು ಮತ್ತು 2014 ಕ್ಕೂ ಮೊದಲು 900 ಇದ್ದ ಸಾಪ್ತಾಹಿಕ ವಿಮಾನಗಳ ಸಂಖ್ಯೆಯು 1900 ಕ್ಕೆ ಹೆಚ್ಚಳವಾಗಿರುವುದನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು. ಉಡಾನ್ ಯೋಜನೆಯಡಿಯಲ್ಲಿ, ಮೇಘಾಲಯದಲ್ಲಿ 16 ಮಾರ್ಗಗಳಲ್ಲಿ ವಿಮಾನಗಳಿವೆ ಮತ್ತು ಇದರ ಪರಿಣಾಮವಾಗಿ ಮೇಘಾಲಯದ ಜನರಿಗೆ ಅಗ್ಗದ ವಿಮಾನ ದರಗಳು ದೊರೆಯುತ್ತವೆ ಎಂದು ಪ್ರಧಾನಿ ಹೇಳಿದರು. ಮೇಘಾಲಯ ಮತ್ತು ಈಶಾನ್ಯ ಭಾಗದ ರೈತರಿಗೆ ಆಗಿರುವ ಪ್ರಯೋಜನಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ಕೃಷಿ ಉಡಾನ್ ಯೋಜನೆಯ ಮೂಲಕ ಇಲ್ಲಿ ಬೆಳೆಯುವ ಹಣ್ಣುಗಳು ಮತ್ತು ತರಕಾರಿಗಳನ್ನು ದೇಶ ಮತ್ತು ವಿದೇಶಗಳ ಮಾರುಕಟ್ಟೆಗಳಿಗೆ ಸುಲಭವಾಗಿ ತಲುಪಿಸಬಹುದಾಗಿದೆ ಎಂದು ತಿಳಿಸಿದರು.

ಇಂದು ಉದ್ಘಾಟನೆಯಾಗಿರುವ ಸಂಪರ್ಕ ಯೋಜನೆಗಳ ಬಗ್ಗೆ ಪ್ರಧಾನಿ ಎಲ್ಲರ ಗಮನ ಸೆಳೆದರು ಮೇಘಾಲಯದಲ್ಲಿ ಕಳೆದ 8 ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದರು. ಮೇಘಾಲಯದಲ್ಲಿ ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ ಕಳೆದ 8 ವರ್ಷಗಳಲ್ಲಿ ನಿರ್ಮಿಸಲಾದ ಗ್ರಾಮೀಣ ರಸ್ತೆಗಳ ಸಂಖ್ಯೆಯು ಮೇಘಾಲಯದಲ್ಲಿ ಹಿಂದಿನ 20 ವರ್ಷಗಳಲ್ಲಿ ನಿರ್ಮಿಸಿದ ರಸ್ತೆಗಳ ಏಳು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಈಶಾನ್ಯ ಭಾಗದ ಯುವಜನರಿಗೆ ದೊರೆಯುತ್ತಿರುವ ಡಿಜಿಟಲ್ ಸಂಪರ್ಕದ ಕುರಿತು ಮಾತನಾಡಿದ ಪ್ರಧಾನಿ, 2014 ಕ್ಕೆ ಹೋಲಿಸಿದರೆ ಈಶಾನ್ಯದಲ್ಲಿ ಆಪ್ಟಿಕಲ್ ಫೈಬರ್ ವ್ಯಾಪ್ತಿ 4 ಪಟ್ಟು ಮತ್ತು ಮೇಘಾಲಯದಲ್ಲಿ 5 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು. 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪ್ರದೇಶದ ಪ್ರತಿಯೊಂದು ಭಾಗಕ್ಕೂ ಮೊಬೈಲ್ ಸಂಪರ್ಕವನ್ನು ಪಡೆಯಲು 6 ಸಾವಿರ ಮೊಬೈಲ್ ಟವರ್ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಮೂಲಸೌಕರ್ಯವು ಮೇಘಾಲಯದ ಯುವಕರಿಗೆ ಹೊಸ ಅವಕಾಶಗಳನ್ನು ನೀಡುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಶಿಕ್ಷಣ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಿ, ಐಐಎಂ ಮತ್ತು ಟೆಕ್ನಾಲಜಿ ಪಾರ್ಕ್ ಶಿಕ್ಷಣದೊಂದಿಗೆ ಈ ಪ್ರದೇಶದಲ್ಲಿ ಗಳಿಕೆಯ ಅವಕಾಶಗಳು ಹೆಚ್ಚಾಗುತ್ತವೆ ಎಂದರು. ಈಶಾನ್ಯವು 150 ಕ್ಕೂ ಹೆಚ್ಚು ಏಕಲವ್ಯ ಶಾಲೆಗಳ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿದೆ, ಅದರಲ್ಲಿ 39 ಮೇಘಾಲಯದಲ್ಲಿವೆ ಎಂದು ಅವರು ಮಾಹಿತಿ ನೀಡಿದರು.

ರೋಪ್ವೇಗಳ ಜಾಲವನ್ನು ನಿರ್ಮಿಸುತ್ತಿರುವ ಪರ್ವತಮಾಲಾ ಯೋಜನೆ ಮತ್ತು ದೊಡ್ಡ ಅಭಿವೃದ್ಧಿ ಯೋಜನೆಗಳಿಗೆ ಸುಲಭ ಅನುಮೋದನೆಯನ್ನು ಖಾತರಿಪಡಿಸುವ ಮೂಲಕ ಈಶಾನ್ಯ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡಲು ಹೊರಟಿರುವ ಪಿಎಂ-ಡಿವೈನ್ ಯೋಜನೆಗಳ ಉದಾಹರಣೆಯನ್ನು ಪ್ರಧಾನಿ ನೀಡಿದರು. ಪಿಎಂ-ಡಿವೈನ್ ಅಡಿಯಲ್ಲಿ ಮುಂದಿನ 3-4 ವರ್ಷಗಳವರೆಗೆ 6,000 ಕೋಟಿ ರೂಪಾಯಿಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಈಶಾನ್ಯಕ್ಕೆ ಸಂಬಂಧಿಸಿದಂತೆ ಹಿಂದಿನ ಆಡಳಿತದ ಸರ್ಕಾರಗಳ 'ವಿಭಜನೆ' (ಡಿವೈಡ್) ವಿಧಾನದ ಬಗ್ಗೆ ವಿವರಿಸಿದ ಪ್ರಧಾನಿ, ನಮ್ಮ ಸರ್ಕಾರವು 'ದೈವಿಕ' (ಡಿವೈನ್) ಉದ್ದೇಶಗಳನ್ನು ಹೊಂದಿದೆ ಎಂದರು. ಅದು ವಿಭಿನ್ನ ಸಮುದಾಯಗಳಾಗಿರಲಿ ಅಥವಾ ವಿವಿಧ ಪ್ರದೇಶಗಳಾಗಿರಲಿ, ನಾವು ಎಲ್ಲ ರೀತಿಯ ವಿಭಜನೆಗಳನ್ನು ತೆಗೆದುಹಾಕುತ್ತಿದ್ದೇವೆ. ಇಂದು, ಈಶಾನ್ಯದಲ್ಲಿ, ನಾವು ಅಭಿವೃದ್ಧಿಯ ಕಾರಿಡಾರ್ ಗಳನ್ನು ನಿರ್ಮಿಸಲು ಒತ್ತು ನೀಡುತ್ತಿದ್ದೇವೆಯೇ ಹೊರತು ವಿವಾದಗಳ ಗಡಿ ನಿರ್ಮಿಸಲು ಅಲ್ಲ ಎಂದು ಅವರು ಹೇಳಿದರು. ಕಳೆದ 8 ವರ್ಷಗಳಲ್ಲಿ ಅನೇಕ ಸಂಘಟನೆಗಳು ಹಿಂಸೆಯ ಹಾದಿಯನ್ನು ಬಿಟ್ಟು ಶಾಶ್ವತ ಶಾಂತಿಯಲ್ಲಿ ಆಶ್ರಯ ಪಡೆದಿವೆ ಎಂದರು. ಈಶಾನ್ಯದಲ್ಲಿ ಎಎಫ್ಎಸ್ಪಿಎ ಅಗತ್ಯವಿಲ್ಲದ ಬಗ್ಗೆ ಮಾತನಾಡಿದ ಪ್ರಧಾನಿ, ರಾಜ್ಯ ಸರ್ಕಾರಗಳ ಸಹಾಯದಿಂದ ಪರಿಸ್ಥಿತಿಗಳು ನಿರಂತರವಾಗಿ ಸುಧಾರಿಸುತ್ತಿವೆ ಮತ್ತು ರಾಜ್ಯಗಳ ನಡುವೆ ದಶಕಗಳಿಂದ ನಡೆಯುತ್ತಿರುವ ಗಡಿ ವಿವಾದಗಳನ್ನು ಪರಿಹರಿಸಲಾಗುತ್ತಿದೆ ಎಂದು ಹೇಳಿದರು.

ಈಶಾನ್ಯವು ಕೇವಲ ಗಡಿ ಪ್ರದೇಶದ ಗಡಿಯಲ್ಲ, ಬದಲಾಗಿ ಭದ್ರತೆ ಮತ್ತು ಸಮೃದ್ಧಿಯ ಹೆಬ್ಬಾಗಿಲು ಎಂದು ಪ್ರಧಾನಿ ಹೇಳಿದರು. ರೋಮಾಂಚಕ ಗ್ರಾಮ ಯೋಜನೆಯಡಿಯಲ್ಲಿ ಗಡಿ ಗ್ರಾಮಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ಶತ್ರುಗಳಿಗೆ ಲಾಭವಾಗುವ ಭಯದಿಂದಾಗಿ ಗಡಿ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಯಾಗಿರಲಿಲ್ಲ ಎಂದು ಪ್ರಧಾನಿ ವಿಷಾದಿಸಿದರು. ಇಂದು ನಾವು ಧೈರ್ಯದಿಂದ ಹೊಸ ರಸ್ತೆಗಳು, ಹೊಸ ಸುರಂಗಗಳು, ಹೊಸ ಸೇತುವೆಗಳು, ಹೊಸ ರೈಲು ಮಾರ್ಗಗಳು ಮತ್ತು ಗಡಿಯಲ್ಲಿ ಏರ್ ಸ್ಟ್ರಿಪ್ ಗಳನ್ನು ನಿರ್ಮಿಸುತ್ತಿದ್ದೇವೆ. ನಿರ್ಜನ ಗಡಿ ಗ್ರಾಮಗಳು ರೋಮಾಂಚನಗೊಳ್ಳುತ್ತಿವೆ. ನಮ್ಮ ನಗರಗಳಿಗೆ ಬೇಕಾದ ವೇಗ ನಮ್ಮ ಗಡಿಗೂ ಬೇಕು ಎಂದು ಪ್ರಧಾನಿ ಹೇಳಿದರು.

ಪೋಪ್ ಅವರೊಂದಿಗಿನ ಭೇಟಿಯನ್ನು ಪ್ರಧಾನಿ ನೆನಪಿಸಿಕೊಂಡರು. ಇಂದು ಮನುಕುವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದೆವು ಮತ್ತು ಅವುಗಳನ್ನು ಎದುರಿಸಲು ಸಂಘಟಿತ ಪ್ರಯತ್ನಕ್ಕಾಗಿ ಒಮ್ಮತಕ್ಕೆ ಬಂದೆವು ಎಂದು ಅವರು ಹೇಳಿದರು. ‘ನಾವು ಈ ಭಾವನೆಯನ್ನು ಬಲಪಡಿಸಬೇಕಾಗಿದೆ’ ಎಂದು ಪ್ರಧಾನಿ ಹೇಳಿದರು.

ಸರ್ಕಾರ ಅಳವಡಿಸಿಕೊಂಡಿರುವ ಶಾಂತಿ ಮತ್ತು ಅಭಿವೃದ್ಧಿಯ ರಾಜಕಾರಣದ ಬಗ್ಗೆ ಒತ್ತಿ ಹೇಳಿದ ಪ್ರಧಾನಿ, ಇದರ ದೊಡ್ಡ ಫಲಾನುಭವಿ ನಮ್ಮ ಬುಡಕಟ್ಟು ಸಮುದಾಯವಾಗಿದೆ ಎಂದು ಹೇಳಿದರು. ಬುಡಕಟ್ಟು ಸಮಾಜದ ಸಂಪ್ರದಾಯ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿ ಮಾಡುವುದು ಸರ್ಕಾರದ ಆದ್ಯತೆಯಾಗಿದೆ ಎಂದರು. ಬಿದಿರು ಕೊಯ್ಲು ನಿಷೇಧವನ್ನು ರದ್ದುಪಡಿಸಿದ ಉದಾಹರಣೆಯನ್ನು ನೀಡಿದ ಪ್ರಧಾನಿ, ಇದು ಬಿದಿರಿಗೆ ಸಂಬಂಧಿಸಿದ ಬುಡಕಟ್ಟು ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡಿತು ಎಂದರು. ಕಾಡುಗಳಿಂದ ಪಡೆಯುವ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಈಶಾನ್ಯದಲ್ಲಿ 850 ವನಧನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅನೇಕ ಸ್ವಸಹಾಯ ಗುಂಪುಗಳು ಅವುಗಳೊಂದಿಗೆ ಸಹಯೋಗ ಹೊಂದಿವೆ, ಅವುಗಳಲ್ಲಿ ಹಲವು ನಮ್ಮ ಸಹೋದರಿಯರಿಗೆ ಸೇರಿವೆ ಎಂದು ಅವರು ಮಾಹಿತಿ ನೀಡಿದರು.

ಮನೆಗಳು, ನೀರು ಮತ್ತು ವಿದ್ಯುತ್ ನಂತಹ ಸಾಮಾಜಿಕ ಮೂಲಸೌಕರ್ಯಗಳು ಈಶಾನ್ಯಕ್ಕೆ ಭಾರಿ ಪ್ರಯೋಜನವನ್ನು ನೀಡಿವೆ ಎಂದು ಶ್ರೀ ಮೋದಿ ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ 2 ಲಕ್ಷ ಹೊಸ ಮನೆಗಳು ವಿದ್ಯುತ್ ಸಂಪರ್ಕ ಪಡೆದಿವೆ. ಬಡವರಿಗಾಗಿ 70 ಸಾವಿರಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದ್ದು, 3 ಲಕ್ಷ ಮನೆಗಳಿಗೆ ನಲ್ಲಿಯ ಮೂಲಕ ನೀರಿನ ಸಂಪರ್ಕ ನೀಡಲಾಗಿದೆ. ನಮ್ಮ ಬುಡಕಟ್ಟು ಕುಟುಂಬಗಳು ಈ ಯೋಜನೆಗಳ ದೊಡ್ಡ ಫಲಾನುಭವಿಗಳಾಗಿವೆ ಎಂದು ಅವರು ಹೇಳಿದರು.

ಈ ಪ್ರದೇಶದ ಅಭಿವೃದ್ಧಿಯ ವೇಗವನ್ನು ಮುಂದುವರಿಸುವಂತೆ ಹಾರೈಸಿದ ಅವರು, ಈಶಾನ್ಯದ ಅಭಿವೃದ್ಧಿಗೆ ಹಾಕುತ್ತಿರುವ ಎಲ್ಲ ಶಕ್ತಿಗೂ ಜನರ ಆಶೀರ್ವಾದವೇ ಕಾರಣ ಎಂದರು. ಮುಂಬರುವ ಕ್ರಿಸ್ಮಸ್ಗೆ ಶುಭ ಹಾರೈಸಿದ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಮೇಘಾಲಯದ ಮುಖ್ಯಮಂತ್ರಿ ಶ್ರೀ ಕಾನ್ರಾಡ್ ಕೆ ಸಂಗ್ಮಾ, ಮೇಘಾಲಯದ ರಾಜ್ಯಪಾಲ ಬ್ರಿಗೇಡಿಯರ್ (ಡಾ.) ಬಿ ಡಿ ಮಿಶ್ರಾ (ನಿವೃತ್ತ), ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಕೇಂದ್ರ ಸಚಿವರಾದ ಶ್ರೀ ಜಿ ಕಿಶನ್ ರೆಡ್ಡಿ, ಶ್ರೀ ಕಿರಣ್ ರಿಜಿಜು ಮತ್ತು ಸರ್ಬಾನಂದ ಸೋನೋವಾಲ್, ಕೇಂದ್ರ ರಾಜ್ಯ ಸಚಿವ ಶ್ರೀ ಬಿ ಎಲ್ ವರ್ಮಾ, ಮಣಿಪುರದ ಮುಖ್ಯಮಂತ್ರಿ ಶ್ರೀ ಎನ್ ಬಿರೇನ್ ಸಿಂಗ್, ಮಿಜೋರಾಂ ಮುಖ್ಯಮಂತ್ರಿ ಶ್ರೀ ಝೋರಮ್ ತಂಗಾ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ನಾಗಾಲ್ಯಾಂಡ್ ಮುಖ್ಯಮಂತ್ರಿ ಶ್ರೀ ನೆಫಿಯು ರಿಯೊ, ಸಿಕ್ಕಿಂನ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೇಮಾ ಖಂಡು ಮತ್ತು ತ್ರಿಪುರಾ ಮುಖ್ಯಮಂತ್ರಿ ಶ್ರೀ ಮಾಣಿಕ್ ಸಹಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಈಶಾನ್ಯ ಪ್ರದೇಶದಲ್ಲಿ ಟೆಲಿಕಾಂ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಕ್ರಮವಾಗಿ, ಪ್ರಧಾನಮಂತ್ರಿ ಅವರು 4ಜಿ ಮೊಬೈಲ್ ಟವರ್ಗಳನ್ನು ದೇಶಕ್ಕೆ ಸಮರ್ಪಿಸಿದರು, ಅದರಲ್ಲಿ 320 ಕ್ಕೂ ಹೆಚ್ಚು ಪೂರ್ಣಗೊಂಡಿದೆ ಮತ್ತು ಸುಮಾರು 890 ನಿರ್ಮಾಣ ಹಂತದಲ್ಲಿದೆ. ಅವರು ಉಮ್ಸಾವ್ಲಿಯಲ್ಲಿ ಐಐಎಂ ಶಿಲ್ಲಾಂಗ್ನ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಹೊಸ ಶಿಲ್ಲಾಂಗ್ ಉಪಗ್ರಹ ಟೌನ್ಶಿಪ್ಗೆ ಉತ್ತಮ ಸಂಪರ್ಕವನ್ನು ಒದಗಿಸುವ ಮತ್ತು ಶಿಲ್ಲಾಂಗ್ನ ದಟ್ಟಣೆಯನ್ನು ಕಡಿಮೆ ಮಾಡುವ ಶಿಲ್ಲಾಂಗ್ - ಡೀಂಗ್ಪಾಸೋಹ್ ರಸ್ತೆಯನ್ನು ಪ್ರಧಾನಿ ಉದ್ಘಾಟಿಸಿದರು. ಅವರು ಮೇಘಾಲಯ, ಮಣಿಪುರ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಬರುವ ಇತರ ನಾಲ್ಕು ರಸ್ತೆ ಯೋಜನೆಗಳನ್ನು ಉದ್ಘಾಟಿಸಿದರು.

ಅಣಬೆ ಬೀಜ(ಪುನರುತ್ಪಾದಕ ತಂತು) ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರೈತರಿಗೆ ಮತ್ತು ಉದ್ಯಮಿಗಳಿಗೆ ಕೌಶಲ್ಯ ತರಬೇತಿ ನೀಡಲು ಮೇಘಾಲಯದ ಅಣಬೆ ಅಭಿವೃದ್ಧಿ ಕೇಂದ್ರದಲ್ಲಿ ಸ್ಪಾನ್ ಪ್ರಯೋಗಾಲಯವನ್ನು ಪ್ರಧಾನಿ ಉದ್ಘಾಟಿಸಿದರು. ಸಾಮರ್ಥ್ಯ ವೃದ್ಧಿ ಮತ್ತು ತಂತ್ರಜ್ಞಾನದ ಉನ್ನತೀಕರಣದ ಮೂಲಕ ಜೇನುಸಾಕಣೆ ಮಾಡುವ ರೈತರ ಜೀವನೋಪಾಯವನ್ನು ಸುಧಾರಿಸಲು ಮೇಘಾಲಯದಲ್ಲಿ ಸಮಗ್ರ ಜೇನುಸಾಕಣೆ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿದರು. ಅವರು ಮಿಜೋರಾಂ, ಮಣಿಪುರ, ತ್ರಿಪುರ ಮತ್ತು ಅಸ್ಸಾಂನ 21 ಹಿಂದಿ ಗ್ರಂಥಾಲಯಗಳನ್ನು ಉದ್ಘಾಟಿಸಿದರು.

ಪ್ರಧಾನಮಂತ್ರಿಯವರು ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಾದ್ಯಂತ ಆರು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಅವರು ತುರಾ ಇಂಟಿಗ್ರೇಟೆಡ್ ಹಾಸ್ಪಿಟಾಲಿಟಿ ಮತ್ತು ಕನ್ವೆನ್ಷನ್ ಸೆಂಟರ್ ಮತ್ತು ಶಿಲ್ಲಾಂಗ್ ಟೆಕ್ನಾಲಜಿ ಪಾರ್ಕ್ ಹಂತ-II ಕ್ಕೆ ಅಡಿಪಾಯವನ್ನು ಹಾಕಿದರು. ಟೆಕ್ನಾಲಜಿ ಪಾರ್ಕ್ 2 ನೇ ಹಂತವು ಸುಮಾರು 1.5 ಲಕ್ಷ ಚದರ ಅಡಿಗಳಷ್ಟು ನಿರ್ಮಾಣ ಪ್ರದೇಶವನ್ನು ಹೊಂದಿರುತ್ತದೆ. ಇದು ವೃತ್ತಿಪರರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಮತ್ತು 3000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇಂಟಿಗ್ರೇಟೆಡ್ ಹಾಸ್ಪಿಟಾಲಿಟಿ ಮತ್ತು ಕನ್ವೆನ್ಷನ್ ಸೆಂಟರ್ ಕನ್ವೆನ್ಷನ್ ಹಬ್, ಅತಿಥಿ ಕೊಠಡಿಗಳು, ಫುಡ್ ಕೋರ್ಟ್ ಇತ್ಯಾದಿಗಳನ್ನು ಹೊಂದಿರುತ್ತದೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಈ ಪ್ರದೇಶದಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಅಗತ್ಯವಾದ ಮೂಲಸೌಕರ್ಯವನ್ನು ಒದಗಿಸುತ್ತದೆ.

*****



(Release ID: 1884632) Visitor Counter : 158