ಪ್ರಧಾನ ಮಂತ್ರಿಯವರ ಕಛೇರಿ

​​​​​​​ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ‘ಡೋನ್ಯಿ ಪೊಲೊ ವಿಮಾನ ನಿಲ್ದಾಣ’ ವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


​​​​​​​600 ಮೆ.ವಾ. ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಣೆ

"ಡೋನ್ಯಿ ಪೋಲೋ ವಿಮಾನ ನಿಲ್ದಾಣದ ಪ್ರಾರಂಭವು ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ಚುನಾವಣಾ ಗಿಮಿಕ್ ಎಂದು ಕರೆಯಲು ಯತ್ನಿಸಿದ ಟೀಕಾಕಾರರಿಗೆ ತಕ್ಕನಾದ ಉತ್ತರವಾಗಿದೆ"

“ಗಡಿ ಭಾಗದ ಗ್ರಾಮಗಳನ್ನು ದೇಶದ ಮೊದಲ ಗ್ರಾಮವೆಂದು ಪರಿಗಣಿಸಿ ನಮ್ಮ ಸರ್ಕಾರ ಕೆಲಸ ಮಾಡಿದೆ.”

"ಪ್ರವಾಸೋದ್ಯಮ ಅಥವಾ ವ್ಯಾಪಾರವೇ ಇರಲಿ, ಟೆಲಿಕಾಂ ಅಥವಾ ಜವಳಿಯೇ ಇರಲಿ, ಈಶಾನ್ಯಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತದೆ"

"ಇದು ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳ ಹೊಸ ಯುಗವಾಗಿದೆ ಮತ್ತು ಇಂದಿನ ಕಾರ್ಯಕ್ರಮವು ಭಾರತದ ಹೊಸ ವಿಧಾನಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ"
"ಕಳೆದ ಎಂಟು ವರ್ಷಗಳಲ್ಲಿ ಈಶಾನ್ಯದಲ್ಲಿ 7 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ"

"ಡೋನ್ಯಿ ಪೋಲೋ ವಿಮಾನ ನಿಲ್ದಾಣವು ಅರುಣಾಚಲ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಗೆ ಸಾಕ್ಷಿಯಾಗುತ್ತಿದೆ"

"ಈಗ ನೀವು ಬಿದಿರನ್ನು ಇತರ ಬೆಳೆಗಳಂತೆ ಬೆಳೆಯಬಹುದು, ಕೊಯ್ಲು ಮಾಡಬಹುದು ಮತ್ತು ಮಾರಾಟ ಮಾಡಬಹುದು"
"ಬಡವರು ನ್ಯಾಯೋಚಿತ ಜೀವನ ನಡೆಸುವುದು ಸರ್ಕಾರದ ಆದ್ಯತೆ"

"ರಾಜ್ಯದ ಡಬಲ್ ಇಂಜಿನ್ ಸರ್ಕಾರವು ‘ಸಬ್ಕಾ ಪ್ರಯಾಸ್’ ಜೊತೆಗೂಡಿ ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ"

Posted On: 19 NOV 2022 12:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಟಾನಗರದ ಡೋನ್ಯಿ ಪೋಲೋ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು ಮತ್ತು 600 ಮೆವಾ ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ಇಂದು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ವಿಮಾನ ನಿಲ್ದಾಣಕ್ಕೆ ಫೆಬ್ರವರಿ 2019 ರಲ್ಲಿ ಸ್ವತಃ ಪ್ರಧಾನ ಮಂತ್ರಿಯವರೇ ಶಂಕುಸ್ಥಾಪನೆ ಮಾಡಿದ್ದರು. ಈ ನಡುವೆ ಕರೊನಾದ ಸವಾಲುಗಳ ನಡುವೆಯೂ ವಿಮಾನ ನಿಲ್ದಾಣದ ಕಾಮಗಾರಿಯನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ತಾವು ಅರುಣಾಚಲಕ್ಕೆ ಆಗಾಗ ಭೇಟಿ ನೀಡುತ್ತಿರುವುದನ್ನು ಸ್ಮರಿಸಿಕೊಂಡರು ಮತ್ತು ಇಂದಿನ ಕಾರ್ಯಕ್ರಮದ ಭವ್ಯತೆಯನ್ನು ಗಮನಿಸಿದರು ಮತ್ತು ತಮ್ಮ ರಾಜ್ಯದ ಅಭಿವೃದ್ಧಿಗಾಗಿ ಅರುಣಾಚಲದ ಜನರ ಬದ್ಧತೆಯನ್ನು ಶ್ಲಾಘಿಸಿದರು. ಅವರು ಅರುಣಾಚಲದ ಜನರ ವಿನೋದ ಪ್ರವೃತ್ತಿ ಮತ್ತು ಶಿಸ್ತಿನ ಸ್ವಭಾವಗಳ ಬಗ್ಗೆ ಸಹ ಹೇಳಿದರು. ಪ್ರಧಾನಮಂತ್ರಿಯವರು ಸ್ಪರ್ಶಿಸಿದರು,  ಅಡಿಪಾಯ ಹಾಕುವವರೇ ಅದೇ ಯೋಜನೆಯನ್ನು ಪೂರ್ಣಗೊಳಿಸಿ ಸ್ವತಃ ಸಮರ್ಪಿಸುವ ಬದಲಾದ ಕೆಲಸದ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ಚುನಾವಣಾ ಗಿಮಿಕ್ ಎಂದು ಟೀಕಿಸುವವರಿಗೆ ಈ ವಿಮಾನ ನಿಲ್ದಾಣದ ಪ್ರಾರಂಭವು ತಕ್ಕ ಉತ್ತರವಾಗಿದೆ ಎಂದು ಅವರು ಹೇಳಿದರು.

ರಾಜಕೀಯ ವಿಮರ್ಶಕರು ಹೊಸ ರೀತಿಯಲ್ಲಿ ಚಿಂತಿಸಬೇಕು ಮತ್ತು ರಾಜ್ಯದ ಬೆಳವಣಿಗೆಗಳನ್ನು ರಾಜಕೀಯ ಲಾಭದ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಬೇಕು ಎಂದು ಪ್ರಧಾನಮಂತ್ರಿಗಳು ಒತ್ತಾಯಿಸಿದರು. ರಾಜ್ಯದಲ್ಲಿ ಈಗ ಚುನಾವಣೆ ನಡೆಯುತ್ತಿಲ್ಲ ಅಥವಾ ರಾಜ್ಯದಲ್ಲಿ ಮುಂದಿನ ಚುನಾವಣೆಯೂ ಇಲ್ಲ ಎಂದು ಅವರು ತಮ್ಮ ಅಭಿಪ್ರಾಯಕ್ಕೆ ಪೂರಕವಾಗಿ ಹೇಳಿದರು. ರಾಜ್ಯದ ಅಭಿವೃದ್ಧಿಯೇ ಸರ್ಕಾರದ ಆದ್ಯತೆ. "ನಾನು ದಿನವನ್ನು ಉದಯಿಸುತ್ತಿರುವ ಸೂರ್ಯನ ರಾಜ್ಯದಿಂದ ಪ್ರಾರಂಭಿಸುತ್ತಿದ್ದೇನೆ ಮತ್ತು ಭಾರತದಲ್ಲಿ ಸೂರ್ಯ ಮುಳುಗುವ ಸ್ಥಳ  ದಮನ್‌ನಲ್ಲಿ ಮುಗಿಸುತ್ತೇನೆ ಮತ್ತು ಅದರ ನಡುವೆ ನಾನು ಕಾಶಿಯಲ್ಲಿ ಇರುತ್ತೇನೆ" ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ ಈಶಾನ್ಯ ಪ್ರದೇಶವು ಅಸಡ್ಡೆ ಮತ್ತು ನಿರ್ಲಕ್ಷ್ಯವನ್ನು ಎದುರಿಸಿತು ಎಂದು ಪ್ರಧಾನಮಂತ್ರಿಯವರು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವು ಈ ಪ್ರದೇಶಕ್ಕೆ ಹೆಚ್ಚಿನ ಗಮನ ನೀಡಿತು ಮತ್ತು ಈಶಾನ್ಯಕ್ಕೆ ಪ್ರತ್ಯೇಕ ಸಚಿವಾಲಯವನ್ನು ರಚಿಸಿತು ಎಂದರು. ನಂತರ, ಆ ಆವೇಗವು ಕಳೆದುಹೋಯಿತು ಆದರೆ 2014 ರ ನಂತರ, ಅಭಿವೃದ್ಧಿಯ ಹೊಸ ಅಧ್ಯಾಯ ಪ್ರಾರಂಭವಾಯಿತು. “ಈ ಹಿಂದೆ ದೂರದ ಗಡಿ ಗ್ರಾಮಗಳನ್ನು ಕೊನೆಯ ಗ್ರಾಮವೆಂದು ಪರಿಗಣಿಸಲಾಗುತ್ತಿತ್ತು. ಗಡಿ ಭಾಗದ ಗ್ರಾಮಗಳನ್ನು ದೇಶದ ಮೊದಲ ಗ್ರಾಮ ಎಂದು ಪರಿಗಣಿಸಿ ನಮ್ಮ ಸರ್ಕಾರ ಕೆಲಸ ಮಾಡಿದೆ. ಇದು ಈಶಾನ್ಯ ಪ್ರದೇಶದ ಅಭಿವೃದ್ಧಿಯನ್ನು ಸರ್ಕಾರದ ಆದ್ಯತೆಯನ್ನಾಗಿ ಮಾಡಲು ಕಾರಣವಾಗಿದೆ. ಪ್ರವಾಸೋದ್ಯಮವಾಗಲಿ, ವ್ಯಾಪಾರವಾಗಲಿ, ಟೆಲಿಕಾಂ ಅಥವಾ ಜವಳಿಯಾಗಲಿ, ಈಶಾನ್ಯಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತದೆ,’’ ಎಂದು ಮುಂದುವರಿಸಿದ ಪ್ರಧಾನಮಂತ್ರಿಯವರು, ‘‘ಡ್ರೋನ್ ತಂತ್ರಜ್ಞಾನವಾಗಲಿ, ಕೃಷಿ ಉಡಾನ್ ಯೋಜನೆಯಾಗಲಿ, ವಿಮಾನ ನಿಲ್ದಾಣ ಸಂಪರ್ಕವಾಗಲಿ ಅಥವಾ ಬಂದರು ಸಂಪರ್ಕವಾಗಲಿ ಸರಕಾರವು ಈಶಾನ್ಯದ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಈ ಪ್ರದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಬಗ್ಗೆ ಎತ್ತಿ ತೋರಿಸಲು ಭಾರತದ ಅತಿ ಉದ್ದದ ಸೇತುವೆ, ಅತಿ ಉದ್ದದ ರೈಲು ಸೇತುವೆ, ರೈಲು ಮಾರ್ಗ ಸಂಪರ್ಕ ಮತ್ತು ಹೆದ್ದಾರಿಗಳ ದಾಖಲೆ ನಿರ್ಮಾಣದ ಉದಾಹರಣೆಗಳನ್ನು ಪ್ರಧಾನಮಂತ್ರಿಯವರು ನೀಡಿದರು. "ಇದು ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳ ಹೊಸ ಯುಗವಾಗಿದೆ ಮತ್ತು ಇಂದಿನ ಕಾರ್ಯಕ್ರಮವು ಭಾರತದ ಹೊಸ ವಿಧಾನದ ಪರಿಪೂರ್ಣ ಉದಾಹರಣೆಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಡೊನ್ಯಿ ಪೊಲೊ ವಿಮಾನ ನಿಲ್ದಾಣವು ಅರುಣಾಚಲ ಪ್ರದೇಶದ ನಾಲ್ಕನೇ ಕಾರ್ಯನಿರ್ವಹಿಸುವ ವಿಮಾನ ನಿಲ್ದಾಣವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು, ಈಶಾನ್ಯ ಪ್ರದೇಶದ ಒಟ್ಟು ವಿಮಾನ ನಿಲ್ದಾಣಗಳ ಸಂಖ್ಯೆ 16ರ ಬಗ್ಗೆ ಹೇಳುತ್ತಾ, 1947 ರಿಂದ 2014 ರವರೆಗೆ ಈಶಾನ್ಯ ಪ್ರದೇಶದಲ್ಲಿ ಕೇವಲ 9 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕಳೆದ ಎಂಟು ವರ್ಷಗಳ ಅಲ್ಪಾವಧಿಯಲ್ಲಿ ಈಶಾನ್ಯದಲ್ಲಿ 7 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿನ ವಿಮಾನ ನಿಲ್ದಾಣಗಳ ಈ ಕ್ಷಿಪ್ರ ಅಭಿವೃದ್ಧಿಯು ಈಶಾನ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಧಾನಮಂತ್ರಿಯವರ ವಿಶೇಷ ಒತ್ತು ನೀಡುವುದನ್ನು ಪ್ರತಿಬಿಂಬಿಸುತ್ತದೆ. ಈಶಾನ್ಯ ಭಾರತವನ್ನು ಸಂಪರ್ಕಿಸುವ ವಿಮಾನಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು. "ಡೋನ್ಯಿ ಪೋಲೋ ವಿಮಾನ ನಿಲ್ದಾಣವು ಅರುಣಾಚಲ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಗೆ ಸಾಕ್ಷಿಯಾಗುತ್ತಿದೆ" ಎಂದು ಶ್ರೀ ಮೋದಿ ಹೇಳಿದರು. ವಿಮಾನ ನಿಲ್ದಾಣದ ನಾಮಕರಣದ ಬಗ್ಗೆ    ಪ್ರಧಾನಮಂತ್ರಿಯವರು ‘ಡ್ಯೋನಿ’ ಎಂದರೆ ಸೂರ್ಯ ಮತ್ತು ‘ಪೊಲೊ’ ಎಂದರೆ ಚಂದ್ರ ಎಂದು ವಿವರಿಸಿದರು. ರಾಜ್ಯದ ಅಭಿವೃದ್ಧಿಯೊಂದಿಗೆ ಸೂರ್ಯ ಮತ್ತು ಚಂದ್ರನ ಬೆಳಕಿಗೆ ಸಾದೃಶ್ಯವನ್ನು ಚಿತ್ರಿಸಿದ ಪ್ರಧಾನಮಂತ್ರಿಯವರು ಬಡವರ ಅಭಿವೃದ್ಧಿಯಷ್ಟೇ ವಿಮಾನ ನಿಲ್ದಾಣದ ಅಭಿವೃದ್ಧಿಯೂ ಮುಖ್ಯವಾಗಿದೆ ಎಂದು ಹೇಳಿದರು.

ಅರುಣಾಚಲ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯನ್ನು ಬಗ್ಗೆ ಹೇಳಿದ ಪ್ರಧಾನಮಂತ್ರಿಗಳು, ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ಹೆದ್ದಾರಿ ನಿರ್ಮಾಣದ ಉದಾಹರಣೆ ನೀಡಿದರು ಮತ್ತು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಇನ್ನೂ 50,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಹೇಳಿದರು. ಪ್ರಧಾನಮಂತ್ರಿಯವರು ಅರುಣಾಚಲ ಪ್ರದೇಶದ ನೈಸರ್ಗಿಕ ಸೌಂದರ್ಯದ ಬಗ್ಗೆ ಒತ್ತಿ ಹೇಳಿದರು ಮತ್ತು ಪ್ರವಾಸೋದ್ಯಮಕ್ಕೆ ರಾಜ್ಯವು ಉತ್ತಮ ಸಾಮರ್ಥ್ಯವನ್ನು ಹೊಂದಿದೆ ಎಂದರು. ಅವರು ರಾಜ್ಯದ ದೂರದ ಪ್ರದೇಶಗಳಿಗೆ ಸರಿಯಾದ ಸಂಪರ್ಕದ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಅರುಣಾಚಲದ 85 ಪ್ರತಿಶತ ಹಳ್ಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯೊಂದಿಗೆ ಸಂಪರ್ಕ ಹೊಂದಿವೆ ಎಂದು ತಿಳಿಸಿದರು. ಹೊಸ ವಿಮಾನ ನಿಲ್ದಾಣದ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ, ಇದು ಕಾರ್ಗೋ ಸೇವೆಗಳ ಕ್ಷೇತ್ರದಲ್ಲಿ ದೊಡ್ಡ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು. ಇದರ ಪರಿಣಾಮವಾಗಿ ರಾಜ್ಯದ ರೈತರು ಈಗ ತಮ್ಮ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಮಾರಾಟ ಮಾಡಬಹುದು. ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ನಿಧಿಯ ಲಾಭವನ್ನು ರೈತರು ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ಅರುಣಾಚಲ ಪ್ರದೇಶದ ಜನರನ್ನು ಬಿದಿರು ಕೊಯ್ಲು ಮಾಡುವುದನ್ನು ನಿರ್ಬಂಧಿಸಿದ್ದ ವಸಾಹತುಶಾಹಿ ಕಾನೂನನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು ಮತ್ತು ಕಾನೂನನ್ನು ರದ್ದುಗೊಳಿಸುವ ಸರ್ಕಾರದ ಕ್ರಮದ ಬಗ್ಗೆ ತಿಳಿಸಿದರು. ಬಿದಿರು ರಾಜ್ಯದ ಜೀವನಶೈಲಿಯ ಭಾಗವಾಗಿದೆ ಮತ್ತು ಅದರ ಕೃಷಿಯು ಈ ಭಾಗದ ಜನರಿಗೆ ಭಾರತ ಮತ್ತು ಪ್ರಪಂಚದಾದ್ಯಂತ ಬಿದಿರಿನ ಉತ್ಪನ್ನಗಳನ್ನು ರಫ್ತು ಮಾಡಲು ಸಹಾಯ ಮಾಡುತ್ತಿದೆ ಎಂದು ಅವರು ತಿಳಿಸಿದರು. "ಈಗ ನೀವು ಯಾವುದೇ ಇತರ ಬೆಳೆಗಳಂತೆ ಬಿದಿರನ್ನು ಬೆಳೆಸಬಹುದು, ಕೊಯ್ಲು ಮಾಡಬಹುದು ಮತ್ತು ಮಾರಾಟ ಮಾಡಬಹುದು" ಎಂದು ಅವರು ಹೇಳಿದರು.

"ಬಡವರು ನ್ಯಾಯೋಚಿತ ಜೀವನ ನಡೆಸುವುದು ಸರ್ಕಾರದ ಆದ್ಯತೆಯಾಗಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಮಲೆನಾಡಿನಲ್ಲಿ ಶಿಕ್ಷಣ ಮತ್ತು ಆರೋಗ್ಯ ಒದಗಿಸುವಲ್ಲಿ ಹಿಂದಿನ ಸರ್ಕಾರಗಳ ಪ್ರಯತ್ನದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಪ್ರಸ್ತುತ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷದವರೆಗೆ ವಿಮಾ ಸೌಲಭ್ಯವನ್ನು ನೀಡುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ಮಾದರಿ ಏಕಲವ್ಯ ಶಾಲೆಗಳು ಮತ್ತು ಅರುಣಾಚಲ ನವೋದ್ಯಮ ನೀತಿಯ ಉದಾಹರಣೆಗಳನ್ನು ಸಹ ಪ್ರಧಾನಮಂತ್ರಿಯವರು ನೀಡಿದರು. ಎಲ್ಲಾ ಯೋಜನೆಗಳಿಗೆ ವಿದ್ಯುತ್ ಒದಗಿಸಲು 2014 ರಲ್ಲಿ ಪ್ರಾರಂಭವಾದ ಸೌಭಾಗ್ಯ ಯೋಜನೆಯ ಬಗ್ಗೆ ಹೇಳುತ್ತಾ, ಅರುಣಾಚಲ ಪ್ರದೇಶದ ಅನೇಕ ಹಳ್ಳಿಗಳಿಗೆ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ವಿದ್ಯುತ್ ದೊರೆತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

"ರಾಜ್ಯದ ಪ್ರತಿ ಮನೆ ಮತ್ತು ಹಳ್ಳಿಗಳು ಅಭಿವೃದ್ಧಿ ಹೊಂದಲು ನಾವು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ಶ್ರೀ ಮೋದಿ ಹೇಳಿದರು. ವೈಬ್ರೆಂಟ್ ಬಾರ್ಡರ್ ವಿಲೇಜ್ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು, ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ ಮತ್ತು ಈ ಪ್ರದೇಶದಲ್ಲಿ ವಲಸೆಯನ್ನು ಕಡಿಮೆ ಮಾಡುತ್ತದೆ. ರಾಷ್ಟ್ರದ ಯುವಕರನ್ನು ಎನ್‌ಸಿಸಿಗೆ ಸೇರಿಸುವ ವಿಶೇಷ ಕಾರ್ಯಕ್ರಮವನ್ನು ರಾಜ್ಯದಲ್ಲಿ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು, ಇದು ಯುವಜನರಿಗೆ ರಕ್ಷಣಾ ತರಬೇತಿ ನೀಡುವುದರ ಜೊತೆಗೆ ರಾಷ್ಟ್ರ ಸೇವೆಯ ಭಾವನೆಯನ್ನು ಮೂಡಿಸುತ್ತದೆ. "ರಾಜ್ಯದ ಡಬಲ್ ಇಂಜಿನ್ ಸರ್ಕಾರವು ‘ಸಬ್ಕಾ ಪ್ರಯಾಸ್’ ಜೊತೆಗೂಡಿ ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ" ಎಂದು ಹೇಳಿ ಪ್ರಧಾನಮಂತ್ರಿಯವರು ತಮ್ಮ ಮಾತನ್ನು ಮುಗಿಸಿದರು.

ಈ ಸಂದರ್ಭದಲ್ಲಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೆಮಾ ಕಂದು, ಅರುಣಾಚಲ ಪ್ರದೇಶದ ರಾಜ್ಯಪಾಲರಾದ ಶ್ರೀ ಬಿ ಡಿ ಮಿಶ್ರಾ ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತಿತರರು ಉಪಸ್ಥಿತರಿದ್ದರು.

ಹಿನ್ನೆಲೆ

ಡೋನ್ಯಿ ಪೋಲೋ ವಿಮಾನ ನಿಲ್ದಾಣ, ಇಟಾನಗರ

ಈಶಾನ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಪ್ರಮುಖ ಹಂತದಲ್ಲಿ, ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿಗಳು ಉದ್ಘಾಟಿಸಿದರು - ‘ಡೋನ್ಯಿ ಪೊಲೊ ವಿಮಾನ ನಿಲ್ದಾಣ, ಇಟಾನಗರ’. ವಿಮಾನ ನಿಲ್ದಾಣದ ಹೆಸರು ಅರುಣಾಚಲ ಪ್ರದೇಶದ ಸಂಪ್ರದಾಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಸೂರ್ಯ ('ಡೋನ್ಯಿ') ಮತ್ತು ಚಂದ್ರ ('ಪೊಲೊ') ಆಗಿ ಅದರ ಪ್ರಾಚೀನ ಸ್ಥಳೀಯ ಗೌರವವನ್ನು ಪ್ರತಿಬಿಂಬಿಸುತ್ತದೆ.

ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಿರುವ ಈ ವಿಮಾನ ನಿಲ್ದಾಣವನ್ನು 690 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಸುಮಾರು ರೂ. 640 ಕೋಟಿ. 2300 ಮೀ ರನ್‌ವೇ ಹೊಂದಿರುವ ವಿಮಾನ ನಿಲ್ದಾಣವು ಸರ್ವ ಋತು ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಆಧುನಿಕ ಕಟ್ಟಡವಾಗಿದೆ, ಇದು ಇಂಧನ ದಕ್ಷತೆ, ನವೀಕರಿಸಬಹುದಾದ ಶಕ್ತಿ ಮತ್ತು ಸಂಪನ್ಮೂಲಗಳ ಮರುಬಳಕೆಯನ್ನು ಉತ್ತೇಜಿಸುತ್ತದೆ.

ಇಟಾನಗರದಲ್ಲಿ ಹೊಸ ವಿಮಾನ ನಿಲ್ದಾಣದ ಅಭಿವೃದ್ಧಿಯು ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ ಜೊತೆಗೆ ವ್ಯಾಪಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಹೀಗಾಗಿ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.

ಐದು ಈಶಾನ್ಯ ರಾಜ್ಯಗಳಾದ ಮಿಜೋರಾಂ, ಮೇಘಾಲಯ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನ ವಿಮಾನ ನಿಲ್ದಾಣಗಳು 75 ವರ್ಷಗಳಲ್ಲಿ ಮೊದಲ ಬಾರಿಗೆ ವಿಮಾನಗಳ ಹಾರಾಟವನ್ನು ಕಂಡಿವೆ.
ಈಶಾನ್ಯ ಪ್ರದೇಶದಲ್ಲಿ ವಿಮಾನ ಸಂಚಾರವು 2014 ರಲ್ಲಿ ವಾರಕ್ಕೆ 852 ರಿಂದ 2022 ರಲ್ಲಿ ವಾರಕ್ಕೆ 1817 ಕ್ಕೆ ಹೆಚ್ಚಾಗಿದ್ದು, 2014 ರಿಂದ 113% ರಷ್ಟು ಹೆಚ್ಚಳವನ್ನು ಕಂಡಿದೆ.

600 ಮೆ.ವಾ ಕಮೆಂಗ್ ಜಲವಿದ್ಯುತ್ ಕೇಂದ್ರ
ಕಮೆಂಗ್ ಜಲವಿದ್ಯುತ್ ಕೇಂದ್ರ 8450 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ 80 ಕಿಲೋಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಹರಡಿರುವ ಈ ಯೋಜನೆಯು ಅರುಣಾಚಲ ಪ್ರದೇಶವನ್ನು ವಿದ್ಯುತ್ ಹೆಚ್ಚುವರಿ ರಾಜ್ಯವನ್ನಾಗಿ ಮಾಡುತ್ತದೆ ಮತ್ತು ಗ್ರಿಡ್ ಸ್ಥಿರತೆಯ ದೃಷ್ಟಿಯಿಂದ ರಾಷ್ಟ್ರೀಯ ಗ್ರಿಡ್‌ಗೆ ಪ್ರಯೋಜನವನ್ನು ನೀಡುತ್ತದೆ.   ಹಸಿರು ಶಕ್ತಿಯ ಅಳವಡಿಕೆಯನ್ನು ಹೆಚ್ಚಿಸುವ ದೇಶದ ಬದ್ಧತೆಯ ಈಡೇರಿಕೆಗೆ ಈ ಯೋಜನೆಯು ಪ್ರಮುಖ ರೀತಿಯಲ್ಲಿ ಕೊಡುಗೆ ನೀಡುತ್ತದೆ.

*****



(Release ID: 1877357) Visitor Counter : 191