ಪ್ರಧಾನ ಮಂತ್ರಿಯವರ ಕಛೇರಿ

ಡೆನ್ಮಾರ್ಕ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀಮತಿ ಮಿಟ್ಟೆ ಫ್ರೆಡ್ರಿಕ್ಸೆನ್ ರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ಭಾಷಣದ ಕನ್ನಡ ಭಾಷಾಂತರ

Posted On: 09 OCT 2021 1:29PM by PIB Bengaluru

ಘನತೆವೆತ್ತ,

ಡೆನ್ಮಾರ್ಕ್ ಪ್ರಧಾನಮಂತ್ರಿಯವರೇ,

ಡೆನ್ಮಾರ್ಕ್ ನ ಎಲ್ಲ ಪ್ರತಿನಿಧಿಗಳೇ,

ಮಾಧ್ಯಮದ ಸ್ನೇಹಿತರೆ,

ನಮಸ್ಕಾರ!

ಕರೋನಾ ಸಾಂಕ್ರಾಮಿಕದ ಆರಂಭಕ್ಕೂ ಮೊದಲು, ಈ  ಹೈದರಾಬಾದ್ ಹೌಸ್ ಸರ್ಕಾರದ ಮುಖ್ಯಸ್ಥರು ಮತ್ತು ದೇಶಗಳ ಮುಖ್ಯಸ್ಥರ ನಿಯಮಿತ ಆಗಮನಕ್ಕೆ ಸಾಕ್ಷಿಯಾಗುತ್ತಿತ್ತು. ಆದರೆ, ಕಳೆದ 18-20 ತಿಂಗಳುಗಳಿಂದ ಈ ಪದ್ಧತಿ ಸ್ಥಗಿತಗೊಂಡಿದೆ. ಇಂದು ಡ್ಯಾನಿಶ್ ಪ್ರಧಾನಮಂತ್ರಿಯವರ ಭೇಟಿಯೊಂದಿಗೆ ಹೊಸ ಆರಂಭವನ್ನು ಪಡೆಯುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.

ಘನತೆವೆತ್ತರೇ,

ಭಾರತಕ್ಕೆ ಇದು ನಿಮ್ಮ ಮೊದಲ ಭೇಟಿ ಎಂಬುದು ಸಂತಸದ ಕಾಕತಾಳೀಯವಾಗಿದೆ. ನಿಮ್ಮ ಜೊತೆ ಆಗಮಿಸಿರುವ ಎಲ್ಲಾ ಡ್ಯಾನಿಶ್ ಪ್ರತಿನಿಧಿಗಳು ಮತ್ತು ವಾಣಿಜ್ಯ ನಾಯಕರನ್ನು  ನಾನು ಸ್ವಾಗತಿಸುತ್ತೇನೆ.

ಸ್ನೇಹಿತರೇ,

ಇಂದಿನ ಸಭೆ, ನಮ್ಮ ಪ್ರಥಮ ಮುಖಾಮುಖಿ ಸಭೆಯಾಗಿದೆ, ಆದರೆ ಕರೋನಾ ಅವಧಿಯಲ್ಲಿ ಸಹ ಭಾರತ ಮತ್ತು ಡೆನ್ಮಾರ್ಕ್ ನಡುವಿನ ಸಂಪರ್ಕ ಮತ್ತು ಸಹಕಾರದ ವೇಗ ಸ್ಥಿರವಾಗಿತ್ತು. ವಾಸ್ತವವಾಗಿ, ಈಗ್ಗೆ ಒಂದು ವರ್ಷದ ಹಿಂದೆ, ನಮ್ಮ ವರ್ಚುವಲ್ ಶೃಂಗಸಭೆಯಲ್ಲಿ, ನಾವು ಭಾರತ ಮತ್ತು ಡೆನ್ಮಾರ್ಕ್ ನಡುವೆ ಹಸಿರು ವ್ಯೂಹಾತ್ಮಕ ಪಾಲುದಾರಿಕೆಯನ್ನು ಸ್ಥಾಪಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದೆವು. ಇದು ನಮ್ಮ ಎರಡೂ ದೇಶಗಳ ದೂರದೃಷ್ಟಿ ಮತ್ತು ಪರಿಸರದ ಬಗ್ಗೆ ಇರುವ ಗೌರವದ ಪ್ರತಿಬಿಂಬವಾಗಿದೆ. ಈ ಸಹಯೋಗವು ಒಂದು ಸಾಮೂಹಿಕ ಪ್ರಯತ್ನ, ತಂತ್ರಜ್ಞಾನದಿಂದ, ಪರಿಸರವನ್ನು ಸಂರಕ್ಷಿಸುತ್ತ ಹಸಿರು ಬೆಳವಣಿಗೆಗೆ ಹೇಗೆ ಕಾರ್ಯ ನಿರ್ವಹಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ. ಇಂದು ನಾವು ಈ ಪಾಲುದಾರಿಕೆಯ ಅಡಿಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದ್ದು ಮಾತ್ರವಲ್ಲದೆ, ಹವಾಮಾನ ಬದಲಾವಣೆಯ ಕುರಿತಂತೆ ಭವಿಷ್ಯದಲ್ಲಿ ಸಹಕಾರವನ್ನು ಹೆಚ್ಚಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ. ಈ ನಿಟ್ಟಿನಲ್ಲಿ, ಡೆನ್ಮಾರ್ಕ್ ಅಂತಾರಾಷ್ಟ್ರೀಯ ಸೌರ ಸಹಯೋಗದ ಸದಸ್ಯತ್ವ ಪಡೆದಿರುವುದು ಬಹಳ ಸಂತಸ ತಂದಿದೆ. ಇದು ನಮ್ಮ ಸಹಕಾರಕ್ಕೆ ಹೊಸ ಆಯಾಮವನ್ನು ನೀಡಿದೆ.

ಸ್ನೇಹಿತರೆ,

ಡ್ಯಾನಿಶ್ ಕಂಪನಿಗಳಿಗೆ ಭಾರತ ಹೊಸದೇನಲ್ಲ. ಡ್ಯಾನಿಶ್ ಕಂಪನಿಗಳು ಭಾರತದಲ್ಲಿ ದೀರ್ಘಕಾಲದಿಂದ ಇಂಧನ, ಆಹಾರ ಸಂಸ್ಕರಣೆ, ಸಾಗಣೆ, ಮೂಲಸೌಕರ್ಯ, ಯಂತ್ರೋಪಕರಣಗಳು, ತಂತ್ರಾಂಶ ಮೊದಲಾದವುಗಳಲ್ಲಿ ಕೆಲಸ ಮಾಡುತ್ತಿವೆ.  ಅವು 'ಮೇಕ್ ಇನ್ ಇಂಡಿಯಾ' (ಭಾರತದಲ್ಲಿ ಉತ್ಪಾದಿಸಿ)ಗೆ ಮಾತ್ರವಲ್ಲದೆ 'ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್' (ಭಾರತದಿಂದ ವಿಶ್ವಕ್ಕೆ ಉತ್ಪಾದನೆ)ಗೂ ಗಣನೀಯ ಕೊಡುಗೆ ನೀಡಿವೆ. ಡ್ಯಾನಿಶ್ ನೈಪುಣ್ಯ ಮತ್ತು ಡ್ಯಾನಿಶ್ ತಂತ್ರಜ್ಞಾನವು ನಾವು ಮುಂದುವರಿಯಲು ಬಯಸುವ ಪ್ರಮಾಣ ಮತ್ತು ವೇಗದಲ್ಲಿ ಹಾಗೂ ಭಾರತದ ಪ್ರಗತಿಯ ನಮ್ಮ ದೃಷ್ಟಿಕೋನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಬಹುದಾಗಿದೆ. ಭಾರತೀಯ ಆರ್ಥಿಕತೆಯಲ್ಲಿನ ಸುಧಾರಣೆಗಳು, ವಿಶೇಷವಾಗಿ ಉತ್ಪಾದನಾ ವಲಯದಲ್ಲಿ ಕೈಗೊಂಡ ಕ್ರಮಗಳು, ಅಂತಹ ಕಂಪನಿಗಳಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತಿವೆ. ಇಂದಿನ ಸಭೆಯಲ್ಲಿ, ನಾವು ಅಂತಹ ಕೆಲವು ಅವಕಾಶಗಳ ಬಗ್ಗೆಯೂ ಚರ್ಚಿಸಿದ್ದೇವೆ.

ಸ್ನೇಹಿತರೆ,

ನಮ್ಮ ಸಹಕಾರದ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ಮುಂದುವರಿಸಲು, ಅದಕ್ಕೆ ಹೊಸ ಆಯಾಮಗಳನ್ನು ಸೇರಿಸಲು ಇಂದು ನಾವು ನಿರ್ಧಾರ ಕೈಗೊಂಡಿದ್ದೇವೆ. ನಾವು ಆರೋಗ್ಯ ಕ್ಷೇತ್ರದಲ್ಲಿ ಹೊಸ ಸಹಯೋಗವನ್ನು ಆರಂಭಿಸಿದ್ದೇವೆ. ಭಾರತದಲ್ಲಿ ಕೃಷಿ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ, ನಾವು ಕೃಷಿ ಸಂಬಂಧಿತ ತಂತ್ರಜ್ಞಾನದಲ್ಲಿ ಸಹಕರಿಸಲು ನಿರ್ಧರಿಸಿದ್ದೇವೆ. ಇದರ ಅಡಿಯಲ್ಲಿ, ಆಹಾರ ಸುರಕ್ಷತೆ, ಶೀತಲೀಕರಣ ಸರಪಳಿ, ಆಹಾರ ಸಂಸ್ಕರಣೆ, ರಸಗೊಬ್ಬರ, ಮೀನುಗಾರಿಕೆ, ಜಲಚರ ಕೃಷಿ, ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡಲಿದ್ದೇವೆ. ನಾವು ಸ್ಮಾರ್ಟ್ ಜಲ ಸಂಪನ್ಮೂಲ ನಿರ್ವಹಣೆ, 'ವೇಸ್ಟ್ ಟು ಬೆಸ್ಟ್'(ತ್ಯಾಜ್ಯದಿಂದ ಅತ್ಯುತ್ತಮ), ಮತ್ತು ದಕ್ಷ ಪೂರೈಕೆ ಸರಪಳಿಗಳಂತಹ ಕ್ಷೇತ್ರಗಳಲ್ಲಿ ಸಹಕರಿಸುತ್ತೇವೆ.

ಸ್ನೇಹಿತರೆ,

ಇಂದು, ನಾವು ಅನೇಕ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಆಳವಾದ ಮತ್ತು ಉಪಯುಕ್ತವಾದ ಚರ್ಚೆಗಳನ್ನು ನಡೆಸಿದ್ದೇವೆ. ಡೆನ್ಮಾರ್ಕ್‌ ನಿಂದ ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಾವು ಪಡೆಯುತ್ತಿರುವ ಬಲವಾದ ಬೆಂಬಲಕ್ಕಾಗಿ ನಾನು ವಿಶೇಷವಾಗಿ ಡೆನ್ಮಾರ್ಕ್‌ ಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಭವಿಷ್ಯದಲ್ಲಿ, ಇದೇ ರೀತಿಯ ಬಲವಾದ ಸಹಕಾರ ಮತ್ತು ಸಮನ್ವಯದೊಂದಿಗೆ ನಮ್ಮ ಎರಡೂ ದೇಶಗಳು ಪ್ರಜಾಪ್ರಭುತ್ವ ಮೌಲ್ಯಗಳು, ನಿಯಮಗಳ ಆಧಾರದ ಮೇಲೆ ನಂಬಿಕೆ, ಪರಸ್ಪರ ಶ್ರಮಿಸುವುದನ್ನು ಮುಂದುವರಿಸುತ್ತವೆ.

ಘನತೆವೆತ್ತರೆ,

ಮುಂದಿನ ಭಾರತ-ನಾರ್ಡಿಕ್ ಶೃಂಗಸಭೆಯನ್ನು ಆಯೋಜಿಸುವ ಅವಕಾಶಕ್ಕಾಗಿ ಮತ್ತು ಡೆನ್ಮಾರ್ಕ್‌ ಗೆ ಭೇಟಿ ನೀಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇಂದಿನ ಅತ್ಯಂತ ಉಪಯುಕ್ತ ಮಾತುಕತೆಗಾಗಿ ಮತ್ತು ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡುವ ಎಲ್ಲಾ ನಿರ್ಧಾರಗಳ ಬಗ್ಗೆ ನಿಮ್ಮ ಧನಾತ್ಮಕ ಚಿಂತನೆಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣ ಅಂದಾಜು ಕನ್ನಡ ಭಾಷಾಂತರವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1762560) Visitor Counter : 216