ಪ್ರಧಾನ ಮಂತ್ರಿಯವರ ಕಛೇರಿ

ಕುಟುಂಬವನ್ನು ಸಲಹಲು  ಸಂಪಾದಿಸುವ ಸದಸ್ಯನನ್ನು ಕೋವಿಡ್ ನಿಂದಾಗಿ ಕಳೆದುಕೊಂಡ ಕುಟುಂಬಗಳಿಗೆ ನೆರವಾಗಲು ಮತ್ತಷ್ಟು ಕ್ರಮಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರ


ಕೋವಿಡ್‌ನಿಂದ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ನೌಕರರ ರಾಜ್ಯ ವಿಮಾ ನಿಗಮದಡಿಯಲ್ಲಿ ಕುಟುಂಬ ಪಿಂಚಣಿ

ಇಡಿಎಲ್ಐ ಯೋಜನೆಯಡಿ ವಿಮಾ ಪ್ರಯೋಜನಗಳ ಹೆಚ್ಚಳ ಮತ್ತು ಉದಾರೀಕರಣ

ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ತೊಂದರೆಗಳನ್ನು ತಗ್ಗಿಸಲು ಈ ಯೋಜನೆಗಳು ನೆರವಾಗುತ್ತವೆ: ಪ್ರಧಾನಿ

Posted On: 29 MAY 2021 7:47PM by PIB Bengaluru

ಕೋವಿಡ್ ಸಂತ್ರಸ್ತ ಮಕ್ಕಳ ಸಬಲೀಕರಣಕ್ಕಾಗಿ ಘೋಷಿಸಲಾದ ಮಕ್ಕಳಿಗಾಗಿ ಪಿಎಂ ಕೇರ್ಸ್ಕ್ರಮಗಳ ಜೊತೆಗೆ, ಕೋವಿಡ್ನಿಂದಾಗಿ ಸಂಪಾದಿಸುವ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ನೆರವಾಗಲು ಕೇಂದ್ರ ಸರ್ಕಾರ ಮತ್ತಷ್ಟು ಕ್ರಮಗಳನ್ನು ಪ್ರಕಟಿಸಿದೆ. ಕ್ರಮಗಳು ಕೋವಿಡ್ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪಿಂಚಣಿ ಮತ್ತು ವರ್ಧಿತ ಹಾಗೂ ಉದಾರೀಕೃತ ವಿಮಾ ಸೌಲಭ್ಯವನ್ನು ಒದಗಿಸುತ್ತವೆ.

ತಮ್ಮ ಸರ್ಕಾರ ಅವರ ಸಂತ್ರಸ್ತ ಕುಟುಂಬಗಳಿಗೆ ಬೆಂಬಲವಾಗಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕ್ರಮಗಳ ಮೂಲಕ, ಅವರು ಎದುರಿಸಬಹುದಾದ ಆರ್ಥಿಕ ತೊಂದರೆಗಳನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಅಡಿಯಲ್ಲಿ ಕುಟುಂಬ ಪಿಂಚಣಿ

  • ಕುಟುಂಬವು ಘನತೆಯ ಜೀವನವನ್ನು ನಡೆಸಲು ಮತ್ತು ಉತ್ತಮ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು, ಉದ್ಯೋಗ ಸಂಬಂಧಿತ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದ ಇಎಸ್ಐಸಿ ಪಿಂಚಣಿ ಯೋಜನೆಯ ಪ್ರಯೋಜನವನ್ನು ಕೋವಿಡ್ನಿಂದ ಸಾವನ್ನಪ್ಪಿದವರಿಗೂ ವಿಸ್ತರಿಸಲಾಗುತ್ತಿದೆ. ಅಸ್ತಿತ್ವದಲ್ಲಿರುವ ಮಾನದಂಡಗಳ ಪ್ರಕಾರ ಉದ್ಯೋಗಿಯು ಪಡೆಯುತ್ತಿದ್ದ ಸರಾಸರಿ ದೈನಂದಿನ ವೇತನದ ಶೇ.90 ಕ್ಕೆ ಸಮಾನವಾದ ಪಿಂಚಣಿ ಸೌಲಭ್ಯವನ್ನು ಮೃತ ವ್ಯಕ್ತಿಗಳ ಅವಲಂಬಿತ ಕುಟುಂಬ ಸದಸ್ಯರು ಪಡೆಯುತ್ತಾರೆ. ಸೌಲಭ್ಯವು 24.03.2020 ರಿಂದ ಪೂರ್ವಾನ್ವಯವಾಗಿ ಮತ್ತು 24.03.2022 ರವರೆಗೆ ಎಲ್ಲಾ ಪ್ರಕರಣಗಳಿಗೆ ಅನ್ವಯವಾಗುತ್ತದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ- ನೌಕರರ ಠೇವಣಿ ಆಧಾರಿತ ವಿಮಾ ಯೋಜನೆ (ಇಡಿಎಲ್ಐ)

ಇಡಿಎಲ್ಐ ಯೋಜನೆಯಡಿ ವಿಮಾ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ ಮತ್ತು ಉದಾರೀಕರಣ ಮಾಡಲಾಗಿದೆ. ಇದು ಇತರ ಎಲ್ಲಾ ಫಲಾನುಭವಿಗಳೊಂದಿಗೆ, ನಿರ್ದಿಷ್ಟವಾಗಿ ಕೋವಿಡ್ ನಿಂದ ಪ್ರಾಣ ಕಳೆದುಕೊಂಡ ನೌಕರರ ಕುಟುಂಬಗಳಿಗೆ ಸಹಾಯ ಮಾಡುತ್ತದೆ.

  • ಗರಿಷ್ಠ ವಿಮಾ ಲಾಭದ ಮೊತ್ತವನ್ನು 6 ಲಕ್ಷ ರೂ. ಗಳಿಂದ 7 ಲಕ್ಷ ರೂ. ಗಳಿಗೆ  ಹೆಚ್ಚಿಸಲಾಗಿದೆ
  • 2.5 ಲಕ್ಷ ರೂ. ಕನಿಷ್ಠ ವಿಮಾ ಪ್ರಯೋಜನವನ್ನು ಮರುಸ್ಥಾಪಿಸಲಾಗಿದೆ ಮತ್ತು 2020 ಫೆಬ್ರವರಿ 15 ರಿಂದ ಪೂರ್ವಾನ್ವಯದೊಂದಿಗೆ  ಮುಂದಿನ ಮೂರು ವರ್ಷಗಳವರೆಗೆ ಇದು ಅನ್ವಯವಾಗುತ್ತದೆ
  • ಗುತ್ತಿಗೆ / ಸಾಂದರ್ಭಿಕ ನೌಕರರ ಕುಟುಂಬಗಳಿಗೆ ಅನುಕೂಲವಾಗುವಂತೆ, ಕೇವಲ ಒಂದು ಸಂಸ್ಥೆಯಲ್ಲಿ ನಿರಂತರ ಉದ್ಯೋಗದಲ್ಲಿರಬೇಕಿದ್ದ ನಿಯಮವನ್ನು ಉದಾರೀಕರಣಗೊಳಿಸಲಾಗಿದ್ದು, ಸಾವಿಗೆ ಮುಂಚಿನ ಕಳೆದ 12 ತಿಂಗಳುಗಳಲ್ಲಿ ಸಂಸ್ಥೆಗಳನ್ನು ಬದಲಿಸಿದ ನೌಕರರ ಕುಟುಂಬಗಳಿಗೂ ಸೌಲಭ್ಯವನ್ನು ಒದಗಿಸಲಾಗಿದೆ.

ಯೋಜನೆಗಳ ವಿವರವಾದ ಮಾರ್ಗಸೂಚಿಗಳನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಿಸುತ್ತದೆ.

***



(Release ID: 1722794) Visitor Counter : 285