ಉಪರಾಷ್ಟ್ರಪತಿಗಳ ಕಾರ್ಯಾಲಯ
ಮೇರು ಸಂಗೀತಗಾರ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಉಪರಾಷ್ಟ್ರಪತಿ ಸಂತಾಪ
ನನಗೆ ತೀರಾ ಭಾವನಾತ್ಮಕವಾದ ಕ್ಷಣ: ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು
प्रविष्टि तिथि:
25 SEP 2020 2:16PM by PIB Bengaluru
ಮೇರು ಸಂಗೀತಗಾರ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಸಂತಾಪ ಸೂಚಿಸಿದ್ದಾರೆ.
ಅವರ ಪೂರ್ಣ ಹೇಳಿಕೆ -
“ನಾನು ಹಲವು ದಶಕಗಳಿಂದ ಬಲ್ಲ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ದುರಂತಮಯ ಸಾವಿನ ಬಗ್ಗೆ ತಿಳಿದು ಆಘಾತವಾಯಿತು. ಇದು ಸಂಗೀತ ಜಗತ್ತಿಗೆ ನಿಜಕ್ಕೂ ತುಂಬಲಾರದ ನಷ್ಟವಾಗಿದೆ. ನನಗೆ ವೈಯಕ್ತಿಕವಾಗಿ ತೀವಾ ಭಾವನಾತ್ಮಕವಾದ ಕ್ಷಣವಾಗಿದೆ. ತಮ್ಮ ಅಸಂಖ್ಯಾತ ಅಭಿಮಾನಿಗಳಿಂದ ಎಸ್.ಪಿ.ಬಿ. ಅಥವಾ ಬಾಲು ಎಂದೇ ಕರೆಸಿಕೊಳ್ಳುತ್ತಿದ್ದ ಅವರು, ನನ್ನ ಹುಟ್ಟೂರು ನೆಲ್ಲೂರ್ ನವರು. ನಾನು ಅವರ ಮಧುರ ಸಂಗೀತ ಕೇಳಿದ್ದೇನೆ, ಅವರಿಗೆ ಮಾತೃಭಾಷೆಯ ಮೇಲಿದ್ದ ಉತ್ಸಾಹ ಪ್ರೀತಿ ಕಂಡಿದ್ದೇನೆ ಮತ್ತು ಅವರು ಇಡೀ ತಲೆಮಾರಿನ ಪ್ರತಿಭಾವಂತ, ಯುವ ಸಂಗೀತಗಾರರನ್ನು ಬೆಳೆಸಿದ ಅಸಾಧಾರಣ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆಯನ್ನು ಹೊಂದಿದ್ದೇನೆ.
ಅವರು ನನ್ನ ಹೃದಯದಲ್ಲಿ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಸಂಗೀತ ಪ್ರಿಯರ ಹೃದಯದಲ್ಲಿ ನೆಲೆಸಿರುತ್ತಾರೆ. ದುರದೃಷ್ಟವಶಾತ್ ಒಂದು ವೈರಾಣು ಅವರ ಮಧುರ ಧ್ವನಿ ನಿಲ್ಲುವಂತೆ ಮಾಡಿತು. ಆದರೂ, ಅವರ ಸಹಜ ಮಂದಹಾಸ ಮತ್ತು ಹಾಸ್ಯ ನಮ್ಮ ನೆನಪುಗಳಲ್ಲಿ ಸದಾ ಉಳಿಯುತ್ತದೆ. ಅವರ ಅನುಪಮವಾದ ಗೀತಗಾಯನ ನಮ್ಮ ಕಿವಿಯಲ್ಲಿ ಅಣುರಣಿಸುತ್ತಲೇ ಇರುತ್ತವೆ ಮತ್ತು ಮುಂಬರುವ ದೀರ್ಘಕಾಲದವರೆಗೆ ನಮ್ಮ ಮನದಲ್ಲಿ ಗುನುಗುತ್ತಿರುತ್ತವೆ.
ನಾನು ಹತ್ತಿರದಿಂದ ಬಲ್ಲ ದಂತಕತೆಯೆನಿಸಿದ ಮೇರು ಗಾಯಕನಿಗೆ ಭಕ್ತಿಪೂರ್ವಕ ನಮನ ಸಲ್ಲಸುತ್ತೇನೆ. ಭಗವಂತ ಅನೂಹ್ಯವಾದ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ”.
***
(रिलीज़ आईडी: 1659048)
आगंतुक पटल : 316
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Tamil
,
Telugu
,
Malayalam