ಪ್ರಧಾನ ಮಂತ್ರಿಯವರ ಕಛೇರಿ

ರೆವರೆಂಡ್ ಡಾ. ಜೋಸೆಫ್ ಮಾರ್ ಥೋಮಾ ಮೆಟ್ರೊಪಾಲಿಟನ್ ಅವರ 90ನೇ ಜನ್ಮದಿನೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 27 JUN 2020 11:58AM by PIB Bengaluru

ಗೌರವಾನ್ವಿತ ರೆವರೆಂಡ್ ಡಾ. ಜೋಸೆಫ್ ಮಾರ್ ಥೋಮಾ ಮೆಟ್ರೊಪಾಲಿಟನ್, ರೆವರೆಂಡ್ ಫಾದರ್ಸ್ , ಆದರಣೀಯ ಸೆಂಟ್ ಮಾರ್ ಥೋಮ ಚರ್ಚ್ ನ ಸದಸ್ಯರೇ.

ಇಲ್ಲಿ ನೆರೆದಿರುವ ಸಭಿಕರನ್ನು ಉದ್ದೇಶಿಸಿ ಮಾತನಾಡುವ ಸೌಭಾಗ್ಯ ನನಗೆ ದೊರಕಿದೆ. ರೆವರೆಂಡ್ ಡಾ. ಜೋಸೆಫ್ ಮಾರ್ ಥೋಮಾ ಮೆಟ್ರೊಪಾಲಿಟನ್ ಅವರು 90ನೇ ಜನ್ಮ ದಿನೋತ್ಸವದ ವಿಶೇಷ ಸಂದರ್ಭದಲ್ಲಿ ನಾವೆಲ್ಲಾ ಇಲ್ಲಿ ಸೇರಿದ್ದೇವೆ. ನಾವು ಅವರಿಗೆ ಶುಭ ಕೋರುತ್ತೇನೆ ಮತ್ತು ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸು ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ರೆವರೆಂಡ್ ಡಾ. ಜೋಸೆಫ್ ಮಾರ್ ಥೋಮಾ ತಮ್ಮ ಜೀವನವನ್ನು ನಮ್ಮ ಸಮಾಜ ಮತ್ತು ದೇಶದ ಏಳಿಗೆಗಾಗಿ ಮುಡುಪಾಗಿಟ್ಟಿದ್ದಾರೆ. ಅವರು ವಿಶೇಷವಾಗಿ ಮಹಿಳಾ ಸಬಲೀಕರಣ ಹಾಗೂ ಬಡತನ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದ್ದಾರೆ.

ಮಿತ್ರರೇ,

ಮಾರ್ ಥೋಮಾ ಚರ್ಚ್ , ಯೇಸು ಕ್ರಿಸ್ತನ ಅನುಯಾಯಿಯಾಗಿದ್ದ ಸೆಂಟ್ ಥಾಮಸ್ ಅವರ ಆದರ್ಶ ಗುಣಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಭಾರತ ಸದಾ ಹಲವು ಮೂಲಗಳ ಆಧ್ಯಾತ್ಮಿಕ ಪ್ರಭಾವಗಳಿಗೆ ಮುಕ್ತವಾಗಿದೆ.ಸೆಂಟ್ ಥಾಮಸ್ ಅವರ ಕೊಡುಗೆ ಮತ್ತು ಅವರನ್ನು ಅನುಸರಿಸಿ, ಭಾರತೀಯ ಕ್ರೈಸ್ತ ಸಮುದಾಯ ಸಾಕಷ್ಟು ಮೌಲ್ಯಗಳನ್ನು ಅಳವಡಿಸಿಕೊಂಡಿದೆ. ಸೆಂಟ್ ಥಾಮಸ್ ಮಾನವೀಯತೆಗೆ ಹೆಸರಾಗಿದ್ದರು. ಅವರು “ಮಾನವೀಯತೆ ಎನ್ನುವುದು ಸದ್ಗುಣ, ಅದು ಸದಾ ಒಳ್ಳೆಯ ಕೆಲಸಗಳಿಗೆ ಫಲತಂದುಕೊಡಲಿದೆ’’ ಎಂದು ಸರಿಯಾಗಿಯೇ ಹೇಳಿದ್ದರು. ಮಾನವೀಯತೆಯ ಸ್ಪೂರ್ತಿಯಲ್ಲಿ ಮಾರ್ ಥೋಮಾ ಚರ್ಚ್ , ನಮ್ಮ ಭಾರತವಾಸಿಗಳಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ. ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಆ ಕೆಲಸಗಳನ್ನು ಮಾಡಿದ್ದಾರೆ. ಸೆಂಟ್ ಥಾಮಸ್ ಅವರಿಗೆ ಜ್ಞಾನದ ಕೃಪೆಯಿತ್ತು. ಮಾರ್ ಥೋಮಾ ಚರ್ಚ್ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾತ್ರವಹಿಸಿದೆ. ರಾಷ್ಟ್ರದ ಏಕತೆಯ ಹೋರಾಟದಲ್ಲೂ ಚರ್ಚ್ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿತ್ತು.

ಈ ಚರ್ಚ್ ತುರ್ತುಪರಿಸ್ಥಿಯ ವಿರುದ್ಧವೂ ಹೋರಾಟ ನಡೆಸಿತ್ತು. ಮಾರ್ ಥೋಮಾ ಚರ್ಚ್ ನ ಬೇರು ಭಾರತೀಯ ಮೌಲ್ಯಗಳ ಜೊತೆ ಆಳವಾಗಿ ಬೇರೂರಿದೆ ಎಂಬುದು ಹೆಮ್ಮೆಯ ಸಂಗತಿ. ಚರ್ಚ್ ನ ಕೊಡುಗೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಲಾಗುತ್ತಿದೆ. ಮಾರ್ ಥೋಮಾ ಚರ್ಚ್ ನ ಹಿಂದಿನ ಮೆಟ್ರೋಪಾಲಿಟನ್ ಫಿಲಿಪೋಸ್ ಮಾರ್ ಸೈರೋಸ್ ಸ್ಟೋಮ್ ಅವರಿಗೆ 2018ರಲ್ಲಿ ಪದ್ಮ ಭೂಷಣ ಗೌರವ ನೀಡಲಾಗಿತ್ತು. ಅವರು ಹಲವರಿಗೆ ಸ್ಪೂರ್ತಿದಾಯಕ.

ಮಿತ್ರರೇ.

ಜಾಗತಿಕ ಸಾಕ್ರಾಮಿಕದ ವಿರುದ್ಧ ಇಡೀ ವಿಶ್ವ ಕಠಿಣ ರೀತಿಯಲ್ಲಿ ಹೋರಾಟ ನಡೆಸುತ್ತಿದೆ. ಕೋವಿಡ್-19 ಕೇವಲ ಒಂದು ದೈಹಿಕ ಕಾಯಿಲೆಯಲ್ಲ, ಅದು ನಮ್ಮ ಜನರ ಜೀವನಕ್ಕೆ ಅಪಾಯ ತಂದೊಡ್ಡಿದೆ. ನಮ್ಮ ಗಮನವನ್ನು ಅನಾರೋಗ್ಯಕರ ಜೀವನ ಶೈಲಿಗಳತ್ತ ಹರಿಸುವಂತೆ ಮಾಡಿದೆ. ಜಾಗತಿಕ ಸಾಂಕ್ರಾಮಿಕ ಇಡೀ ಮನುಕುಲಕ್ಕೆ ಅನ್ವಯಿಸುತ್ತಿದ್ದು, ಅದಕ್ಕೆ ಚಿಕಿತ್ಸೆ ಕಂಡುಕೊಳ್ಳಬೇಕಿದೆ. ಭೂಮಿಯ ಮೇಲೆ ಸಂತೋಷ ಮತ್ತು ಸಾಮರಸ್ಯ ಕಾಯ್ದುಕೊಳ್ಳಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳೋಣ.

ಮಿತ್ರರೇ.

ಕೊರೊನಾ ವಾರಿಯರ್ಸ್ ಶಕ್ತಿಯಿಂದಾಗಿ ಭಾರತ ಕೋವಿಡ್-19 ವಿರುದ್ಧ ಖಚಿತ ಹೋರಾಟ ನಡೆಸುತ್ತಿದೆ ಎಂಬುದನ್ನು ತಿಳಿಯಲು ನಿಮಗೆ ಹರ್ಷವಾಗುತ್ತದೆ. ಈ ವರ್ಷದ ಆರಂಭದಲ್ಲಿ, ಸೋಂಕಿನ ಪರಿಣಾಮ ಭಾರತದಲ್ಲಿ ತೀರಾ ಗಂಭೀರವಾಗಿರಲಿದೆ ಎಂದು ಕೆಲವು ವ್ಯಕ್ತಿಗಳು ಊಹಿಸಿದ್ದರು.ಆದರೆ ಲಾಕ್ ಡೌನ್ ಮತ್ತು ಸರ್ಕಾರ ಕೈಗೊಂಡ ಹಲವು ಕ್ರಮಗಳು ಮತ್ತು ಜನರು ಹೋರಾಟಕ್ಕೆ ಬೆಂಬಲಿಸಿದ ಪರಿಣಾಮ, ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಇಂದು ಉತ್ತಮ ಸ್ಥಿತಿಯಲ್ಲಿದೆ. ಭಾರತದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ.

ಕೋವಿಡ್ ನಿಂದ ಇರಬಹುದು, ಅಥವಾ ಇನ್ನಾವುದೇ ಕಾಯಿಲೆಗಳಿಂದ ಇರಬಹುದು ಯಾವುದೇ ಜೀವ ಹಾನಿ ದುರದೃಷ್ಟಕರ. ಭಾರತದಲ್ಲಿ ಕೋವಿಡ್ ನಿಂದ ಆಗುತ್ತಿರುವ ಸಾವಿನ ಪ್ರಮಾಣ ಪ್ರತಿ ಮಿಲಿಯನ್ ಗೆ 12ಕ್ಕಿಂತಲೂ ಕಡಿಮೆ ಇದೆ. ಆದರೆ ಇಟಲಿಯಲ್ಲಿ ಆ ಪ್ರಮಾಣ ಪ್ರತಿ ಮಿಲಿಯನ್ ಗೆ 574 ಇದೆ . ಅಮೆರಿಕ, ಬ್ರಿಟನ್, ಸ್ಪೇನ್ ಮತ್ತು ಫ್ರಾನ್ಸ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತಕ್ಕಿಂತಲೂ ಆ ರಾಷ್ಟ್ರಗಳಲ್ಲಿ ಅಧಿಕ ಸಾವಿನ ಪ್ರಮಾಣವಿದೆ. ದೇಶದ ಲಕ್ಷಾಂತರ ಗ್ರಾಮಗಳಲ್ಲಿ ಮತ್ತು ಮನೆಗಳಲ್ಲಿರುವ ಸುಮಾರು 85 ಕೋಟಿ ಜನರಿಗೆ ಈವರೆಗೂ ಕೊರೊನಾ ಸೋಂಕು ತಟ್ಟಿಲ್ಲ..

ಮಿತ್ರರೇ.

ಕೋವಿಡ್-19 ವಿರುದ್ಧ ಹೋರಾಟವನ್ನು ಜನರೇ ಬೆಂಬಲಿಸಿದ್ದಾರೆ. ಅದರಿಂದಾಗಿ ಈವರೆಗೆ ಉತ್ತಮ ಫಲಿತಾಂಶಗಳು ದೊರಕಿವೆ. ಇದೀಗ ನಾವು ನಮ್ಮ ಹೋರಾಟವನ್ನು ನಿಲ್ಲಿಸಬಾರದು. ಮಾಸ್ಕ್ ಧರಿಸುವುದು, ಎರಡು ಗಜ ದೂರ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಜನದಟ್ಟಣೆ ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಿಕೊಳ್ಳುವುದು, ಪದೇ ಪದೇ ಕೈ ತೊಳೆಯುವುದು ಸೇರಿದಂತೆ ನಾವು ಇನ್ನೂ ಹೆಚ್ಚಿನ ಎಚ್ಚರಿಕೆ ಅಥವಾ ಜಾಗ್ರತೆಯಿಂದ ಇರಬೇಕಾದ್ದು ತುಂಬಾ ಅವಶ್ಯಕತೆ ಇದೆ.

ಇದೇ ವೇಳೆ ನಾವು, 130 ಕೋಟಿ ಭಾರತೀಯರ ಏಳಿಗೆ ಮತ್ತು ಆರ್ಥಿಕ ಪ್ರಗತಿಯತ್ತಲೂ ಗಮನ ಹರಿಸಬೇಕಾಗಿದೆ. ವ್ಯಾಪಾರ ಮತ್ತು ವಾಣಿಜ್ಯದ ಗಾಲಿಗಳು ತಿರುಗಬೇಕು. ಕೃಷಿ ಅಭಿವೃದ್ಧಿಯಾಗಬೇಕು. ಕಳೆದ ಕೆಲವು ವಾರಗಳಿಂದೀಚೆಗೆ ಆರ್ಥಿಕತೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಕೈಗೊಂಡಿದೆ. ಸಮುದ್ರದಿಂದ ಹಿಡಿದು ಬಾಹ್ಯಾಕಾಶದವರೆಗೆ, ಕೃಷಿಯಿಂದ ಹಿಡಿದು ಕಾರ್ಖಾನೆಯವರೆಗೆ ಹಲವು ವಲಯಗಳಲ್ಲಿ ಅಭಿವೃದ್ಧಿ ಸ್ನೇಹಿ ಮತ್ತು ಜನಸ್ನೇಹಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಆತ್ಮನಿರ್ಭರ ಭಾರತ, ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನೀಡಿರುವ ಕರೆಯಿಂದಾಗಿ ದೇಶ ಆರ್ಥಿಕವಾಗಿ ಬಲಾಢ್ಯವಾಗುವುದಲ್ಲದೆ, ಪ್ರತಿಯೊಬ್ಬ ಭಾರತೀಯರೂ ಏಳಿಗೆ ಹೊಂದಲಿದ್ದಾರೆ. ಒಂದು ತಿಂಗಳ ಹಿಂದೆ ಕೇಂದ್ರ ಸಚಿವ ಸಂಪುಟ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಅನುಮೋದನೆ ನೀಡಿತು. ಈ ಯೋಜನೆಯಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದ್ದು, ಇದು ಮೀನುಗಾರಿಕೆ ವಲಯದಲ್ಲಿ ಭಾರೀ ಕ್ರಾಂತಿಯನ್ನು ಉಂಟುಮಾಡಲಿದೆ. ರಫ್ತು ಆದಾಯವನ್ನು ಹೆಚ್ಚಿಸಲಿದೆ ಮತ್ತು ಸುಮಾರು 50 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸಿ ಕೊಡಲಿದೆ. ಉತ್ತಮ ತಂತ್ರಜ್ಞಾನ ಮತ್ತು ಮೂಲಸೌಕರ್ಯದಿಂದಾಗಿ ನಮ್ಮ ಪೂರೈಕೆ ಸರಣಿ ಇನ್ನಷ್ಟು ಬಲಿಷ್ಠವಾಗಲಿದೆ. ಈ ಯೋಜನೆಯ ಲಾಭವನ್ನು ಕೇರಳದ ನನ್ನ ಮೀನುಗಾರ ಸಹೋದರ, ಸಹೋದರಿಯರು ಪಡೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸ ನನಗಿದೆ.

ಮಿತ್ರರೇ.

ಬಾಹ್ಯಾಕಾಶ ವಲಯದಲ್ಲಿ ಕೈಗೊಂಡ ಐತಿಹಾಸಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಬಾಹ್ಯಾಕಾಶ ಸ್ವತ್ತು ಮತ್ತು ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ದತ್ತಾಂಶ ಮತ್ತು ತಂತ್ರಜ್ಞಾನದ ಲಭ್ಯತೆ ಹೆಚ್ಚಾಗಲಿದೆ. ಕೇರಳದಲ್ಲಿನ ಹಲವು ಯುವಕರು ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ದಕ್ಷಿಣ ಭಾರತದವರು, ಈ ಸುಧಾರಣೆಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳಲಿದ್ದಾರೆ.

ಮಿತ್ರರೇ.

ಭವಿಷ್ಯದಲ್ಲಿ ಭಾರತವನ್ನು ಅಭಿವೃದ್ಧಿಯ ಇಂಜಿನ್ ಆಗಿ ಪರಿವರ್ತಿಸಲು ಅತ್ಯಂತ ಸೂಕ್ಷ್ಮ ಹಾಗೂ ದೀರ್ಘಾವಧಿಯ ದೂರದೃಷ್ಟಿಯೊಂದಿಗೆ ಸರ್ಕಾರ ಕಾರ್ಯೋನ್ಮುಖವಾಗಿದೆ. ದೆಹಲಿಯ ಸರ್ಕಾರಿ ಕಚೇರಿಗಳಲ್ಲಿ ಆರಾಮಾಗಿ ಕುಳಿತಿರುವ ಅಧಿಕಾರಿಗಳು ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ, ಆದರೆ ತಳಮಟ್ಟದಲ್ಲಿ ಜನರು ನೀಡಿರುವ ಪ್ರತಿಕ್ರಿಯೆ ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ದೇಶದ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಲಾಗಿದೆ, ಸುಮಾರು 8 ಕೋಟಿ ಕುಟುಂಬಗಳೂ ಹೊಗೆರಹಿತ ಅಡುಗೆ ಕೋಣೆಗಳನ್ನು ಹೊಂದಿದ್ದಾರೆ. ಸುಮಾರು 1.5 ಕೋಟಿ ಕುಟುಂಬಗಳಿಗೆ ವಸತಿ ಕಲ್ಪಿಸಲಾಗಿದೆ.

ಭಾರತ, ಆಯುಷ್ಮಾನ್ ಭಾರತದಂತಹ ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆಯ ತವರೂರಾಗಿದೆ. ಸುಮಾರು ಒಂದು ಕೋಟಿ ಜನರು ಗುಣಮಟ್ಟದ ಚಿಕಿತ್ಸೆ ಪಡೆದಿದ್ದಾರೆ. ಒಂದು ರಾಷ್ಟ್ರ-ಒಂದು ಕಾರ್ಡ್ ವ್ಯವಸ್ಥೆಯಿಂದಾಗಿ ದೇಶದ ಬಡಜನರು ರಾಷ್ಟ್ರದ ಎಲ್ಲಿ ಬೇಕಾದರೂ ಪಡಿತರ ಪಡೆಯಲು ಅನುಕೂಲವಾಗಿದೆ. ಮಧ್ಯಮ ವರ್ಗದವರಿಗಾಗಿ ಹಾಗೂ ಅವರ ಜೀವನ ಸುಗಮಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರಿಗೆ, ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಹೆಚ್ಚಳ ಮಾಡಲಾಗಿದೆ ಮತ್ತು ಅವರಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಲಾಗಿದ್ದು, ಮಧ್ಯವರ್ತಿಗಳಿಂದ ಮುಕ್ತಗೊಳಿಸಲಾಗಿದೆ.

ಮಹಿಳೆಯರ ಆರೋಗ್ಯ ರಕ್ಷಣೆಗೆ ಹಲವು ಯೋಜನೆಗಳ ಮೂಲಕ ಹೆಚ್ಚಿನ ಗಮನಹರಿಸಲಾಗಿದ್ದು, ಹೆರಿಗೆ ರಜೆಯನ್ನು ವಿಸ್ತರಣೆ ಮಾಡುವ ಮೂಲಕ ಅವರು ವೃತ್ತಿಬದುಕಿನಲ್ಲಿ ರಾಜೀಯಾಗದಂತೆ ನೋಡಿಕೊಳ್ಳಲಾಗಿದೆ. ಭಾರತ ಸರ್ಕಾರ ಧರ್ಮ,ಲಿಂಗ, ಜಾತಿ, ವರ್ಣ ಅಥವಾ ಭಾಷೆ ಆಧಾರದ ಮೇಲೆ ಯಾವುದೇ ತಾರತಮ್ಯ ಎಸಗುತ್ತಿಲ್ಲ ಮತ್ತು “ಭಾರತದ ಸಂವಿಧಾನ” ನಮ್ಮ ಮಾರ್ಗದರ್ಶಿ ಸೂತ್ರವಾಗಿದ್ದು, ಅದರಂತೆ ದೇಶದ 130 ಕೋಟಿ ಭಾರತೀಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ.

ಮಿತ್ರರೇ.

ಪವಿತ್ರ ಬೈಬಲ್ ಗ್ರಂಥ ಒಟ್ಟಾಗಿ ಬಾಳ್ವೆ ನಡೆಸುವ ಬಗ್ಗೆ ವಿಸ್ತೃತವಾಗಿ ಹೇಳುತ್ತದೆ. ಇದೀಗ ನಾವೆಲ್ಲರೂ ಒಗ್ಗೂಡಿ ನಮ್ಮ ದೇಶದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಲು ಇದು ಸಕಾಲ. ನಮ್ಮ ಕ್ರಿಯೆಗಳು ಹೇಗೆ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ ಎಂಬ ನಿಟ್ಟಿನಲ್ಲಿ ಯೋಚನೆ ಮಾಡಿ. ನಾವು ಇಂದು ಭಾರತ, ನಾವು ಸ್ಥಳೀಯವಾಗಿಯೇ ಉತ್ಪತ್ತಿ ಮಾಡುತ್ತೇವೆ ಮತ್ತು ಸ್ಥಳೀಯ ವಸ್ತುಗಳನ್ನೇ ಖರೀದಿಸುತ್ತೇವೆ. ಇದು ಹಲವು ಮನೆಗಳ ಏಳಿಗೆಗೆ ಜ್ಯೋತಿಯಾಗಿ ಬೆಳೆಗಲಿವೆ. ನಮ್ಮ ರಾಷ್ಟ್ರವನ್ನು ಬಲಿಷ್ಠಗೊಳಿಸಲು ಹಲವು ಮಾರ್ಗಗಳಿವೆ. ಮಾರ್ ಥೋಮಾ ಚರ್ಚ್, ಮೌಲ್ಯಗಳಿಗೆ ಬದ್ಧವಾಗಿದ್ದು, ಅದು ಖಂಡಿತಾ ಸಂದರ್ಭಕ್ಕೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಭಾರತದ ಪ್ರಗತಿಗಾಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ನನಗಿದೆ.

ಮತ್ತೊಮ್ಮೆ ನಾನು ಗೌರವಾನ್ವಿತ ರೆವರೆಂಡ್ ಡಾ.ಜೊಸೆಫ್ ಮಾರ್ ಥೋಮಾ ಮೆಟ್ರೊಪಾಲಿಟನ್ ಅವರಿಗೆ ಶುಭಾಶಯಗಳನ್ನು ಕೋರುತ್ತೇನೆ.

ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು


***



(Release ID: 1655061) Visitor Counter : 203