PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 27 JUL 2020 6:51PM by PIB Bengaluru

https://static.pib.gov.in/WriteReadData/userfiles/image/image002GUVA.pnghttps://static.pib.gov.in/WriteReadData/userfiles/image/image001SDEU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

https://static.pib.gov.in/WriteReadData/userfiles/image/image0054J41.jpg

https://static.pib.gov.in/WriteReadData/userfiles/image/image006ENNY.jpg

ಭಾರತದ ಕೋವಿಡ್ ಪ್ರಕರಣಗಳ ಮೃತ್ಯು ಪ್ರಮಾಣ (ಸಿ.ಎಫ್.ಆರ್.) ಸತತ ಸುಧಾರಣೆಯ ಹಾದಿಯಲ್ಲಿದೆ ಮತ್ತು ಅದು 2.28 % ಆಗಿದೆ. ಒಟ್ಟು ಗುಣಮುಖ ಪ್ರಕರಣಗಳ ಸಂಖ್ಯೆ 9 ಲಕ್ಷ ದಾಟಿದೆ, ಸತತ 4  ನೇ ದಿನವೂ 30,000 ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ

ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಗಮನ ಕೇಂದ್ರಿತ ಪ್ರಯತ್ನಗಳ ಫಲ ಈಗ ಗೋಚರಿಸುತ್ತಿದೆ. ತೀವ್ರ ಗತಿಯಲ್ಲಿ ಪರೀಕ್ಷೆ ಮಾಡುವ ಮತ್ತು ಆಸ್ಪತ್ರೆಗಳಲ್ಲಿ  ಇರುವ ಪ್ರಕರಣಗಳ ದಕ್ಷ ಕ್ಲಿನಿಕಲ್ ನಿರ್ವಹಣೆಯ ಮೂಲಕ ಮುಂಚಿತವಾಗಿ ಸೋಂಕು ಪತ್ತೆ ಮತ್ತು ಐಸೋಲೇಶನ್ ಕ್ರಮಗಳಿಂದಾಗಿ, ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಮತ್ತು ಗುಣಮುಖದರ ಸತತ ಸುಧಾರಿಸುತ್ತಿದೆ. ದಕ್ಷ ಸೋಂಕು ನಿಯಂತ್ರಣ ಕ್ರಮಗಳು , ತೀವ್ರಗತಿಯ ಪರೀಕ್ಷಾ ಕ್ರಮಗಳು ಮತ್ತು ಕ್ಲಿನಿಕಲ್ ನಿರ್ವಹಣೆಯಲ್ಲಿ ಆರೈಕೆಗೆ ಸಂಬಂಧಿಸಿದ ಗುಣಮಟ್ಟದ ಶಿಷ್ಟಾಚಾರಗಳು   ಪ್ರಕರಣಗಳಲ್ಲಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಶಕ್ತವಾಗಿವೆ. ಪ್ರಕರಣಗಳಲ್ಲಿ ಸಾವುಗಳ ಸಂಖ್ಯೆ ಸತತವಾಗಿ ಇಳಿಮುಖವಾಗುತ್ತಿದ್ದು, ಮತ್ತು ಅದೀಗ 2.28% ನಲ್ಲಿದೆ. ಕೋವಿಡ್ ಪ್ರಕರಣಗಳಲ್ಲಿ ಮೃತ್ಯು ಪ್ರಮಾಣ ಅತ್ಯಂತ ಕಡಿಮೆ ಇರುವ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಸತತ ನಾಲ್ಕನೇ ದಿನವೂ  30,000 ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ, ಕಳೆದ 24 ಗಂಟೆಗಳಲ್ಲಿ 31,991 ರೋಗಿಗಳು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಒಟ್ಟು ಗುಣಮುಖರಾದವರ ಸಂಖ್ಯೆ 9 ಲಕ್ಷ ದಾಟಿ 9,17,567 ಕ್ಕೆ ತಲುಪಿದೆ. ಗುಣಮುಖ ದರ 64% ಆಗಿದೆ. ಕಡಿಮೆ ಮೃತ್ಯು ಪ್ರಮಾಣ ಮತ್ತು ಹೆಚ್ಚು ಜನರು ಗುಣಮುಖರಾಗುತ್ತಿರುವುದರ ಫಲವಾಗಿ ಸಕ್ರಿಯ ಪ್ರಕರಣಗಳಿಗಿಂತ ( 4,85,114 ) ಇಂದಿನವರೆಗೆ  ಗುಣಮುಖರಾದ ಒಟ್ಟು ಪ್ರಕರಣಗಳ ಸಂಖ್ಯೆ  4,32,453 ರಷ್ಟು ಹೆಚ್ಚಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1641486

ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಅಸ್ತಿತ್ವ ಕೋವಿಡ್ ಸಂದರ್ಭದಲ್ಲಿ ಮನವರಿಕೆಯಾಗಿದೆ

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಅದರಲ್ಲೂ ಗ್ರಾಮೀಣ ಒಳ ಪ್ರದೇಶಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ (ಎ.ಬಿ.-ಎಚ್.ಡಬ್ಲ್ಯು.ಸಿ. ಗಳು) ನಿರಂತರ ಕಾರ್ಯಾಚರಿಸುವಿಕೆ ಮತ್ತು ಕೋವಿಡೇತರ ಅವಶ್ಯಕ ಆರೋಗ್ಯ ಸೇವೆಗಳ ಒದಗಣೆ ಹಾಗು ಕೋವಿಡ್ -19 ರ ನಿರ್ವಹಣೆ ಮತ್ತು ಹರಡುವಿಕೆ ತಡೆಯುವಿಕೆಯ ತುರ್ತು ಕಾರ್ಯಗಳನ್ನು ನಿಭಾಯಿಸುವ ಮೂಲಕ ಅದರ ಮಹತ್ವ ಮತ್ತು ಪುನಶ್ಚೇತನವು ಜನತೆಗೆ ಅರಿವಿಗೆ ಬಂದಿದೆ. ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ (2020 ರ  ಜನವರಿಯಿಂದ 2020 ರ ಜುಲೈ ನಡುವಿನ ಅವಧಿಯಲ್ಲಿ ) ಹೆಚ್ಚುವರಿ 13,657 ಎಚ್.ಡಬ್ಲ್ಯು. ಸಿ. ಗಳನ್ನು ಕಾರ್ಯಾಚರಿಸುವಂತೆ ಮಾಡಲಾಗಿದೆ. ನಾಗರಿಕರ ವಿಸ್ತಾರ ಸಮುದಾಯಕ್ಕೆ  ಆರೋಗ್ಯ ಸೇವೆಗಳು ತಲುಪುವುದನ್ನು ಖಾತ್ರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. 2020 ರ ಜುಲೈ 24 ರ ವೇಳೆಗೆ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 43,022 ಎಚ್.ಡಬ್ಲ್ಯು. ಸಿ. ಗಳು ಕಾರ್ಯಾಚರಿಸುತ್ತಿವೆ. ಎ.ಬಿ-ಎಚ್.ಡಬ್ಲ್ಯು.ಸಿ. ಗಳು ಒದಗಿಸುತ್ತಿರುವ ಆರೋಗ್ಯ ಮತ್ತು ಕ್ಷೇಮ ಸೇವೆಗಳಿಂದ  ಜುಲೈ 18 ರಿಂದ ಜುಲೈ 24 ರ ನಡುವಿನ ವಾರದ ಅವಧಿಯಲ್ಲಿ 44.26 ಲಕ್ಷ ಜನರು ಪ್ರಯೋಜನಗಳನ್ನು ಪಡೆದಿದ್ದಾರೆ.ಇವುಗಳು ಆರಂಭಗೊಂಡಂದಿನಿಂದ ( 2018 ರ ಏಪ್ರಿಲ್ 14 ರಿಂದ ) ಎಚ್.ಡಬ್ಲ್ಯು.ಸಿ. ಗಳಿಗೆ ಭೇಟಿ ನೀಡಿದವರ ಒಟ್ಟು ಸಂಖ್ಯೆ  1923.93 ಲಕ್ಷ. ಕಳೆದ ವಾರ ಭಾರತದಾದ್ಯಂತ 32,000 ಯೋಗ ಅಧಿವೇಶನಗಳನ್ನು ನಡೆಸಲಾಗಿದೆ. ಎಚ್.ಡಬ್ಲ್ಯು.ಸಿ. ಗಳು ಕಾರ್ಯಾರಂಭ ಮಾಡಿದಂದಿನಿಂದ ಒಟ್ಟು 14.24 ಲಕ್ಷ ಯೋಗ ಅಧಿವೇಶನಗಳನ್ನು ನಡೆಸಲಾಗಿದೆ.

ವಿವರಗಳಿಗೆ: https://www.pib.gov.in/PressReleseDetail.aspx?PRID=1641512

ಯೋಜನೆಗಳನ್ನು ಕಾರ್ಯಾರಂಭಗೊಳಿಸಿದ  ಶ್ರೀ ಸದಾನಂದ ಗೌಡರಿಂದ ಬೃಹತ್ ಔಷಧಿ ಪಾರ್ಕ್ ಗಳು ಮತ್ತು ವೈದ್ಯಕೀಯ ಸಲಕರಣೆಗಳ ಪಾರ್ಕ್ ಗಳ ಸ್ಥಾಪನೆಗೆ ಮಾರ್ಗದರ್ಶಿಗಳ ಘೋಷಣೆ.

ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಖಾತೆ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ ಅವರು ಇಂದು ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಔಷಧಿಗಳನ್ನು ಉತ್ಪಾದಿಸುವ ಮತ್ತು ವೈದ್ಯಕೀಯ ಸಲಕರಣೆಗಳನ್ನು ತಯಾರಿಸುವುದಕ್ಕೆ ಉತೇಜನ ನೀಡುವ ನಾಲ್ಕು ಯೋಜನೆಗಳ ಕಾರ್ಯಾರಂಭವನ್ನು ಘೋಷಿಸಿದರು. ಭಾರತವನ್ನು “ವಿಶ್ವದ ಔಷಧಾಲಯ” ಎಂದು ಹೇಳಲಾಗುತ್ತದೆ , ಮತ್ತು ಇದು ಚಾಲ್ತಿಯಲ್ಲಿರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಸತ್ಯವೆಂಬುದು ಸಾಬೀತಾಗಿದೆ, ಭಾರತವು ಈ ಅವಧಿಯಲ್ಲಿ ಸಂಕೀರ್ಣ ಜೀವ ರಕ್ಷಕ ಔಷಧಿಗಳನ್ನು ಅವಶ್ಯಕತೆ ಇರುವ ದೇಶಗಳಿಗೆ ಭಾರತದಲ್ಲಿ ದೇಶವ್ಯಾಪೀ ಲಾಕ್ ಡೌನ್ ಇದ್ದಾಗಲೂ ರಫ್ತು ಮಾಡುವುದನ್ನು ಮುಂದುವರೆಸಿದೆ. ಈ ಸಾಧನೆಗಳ ಹೊರತಾಗಿಯೂ ನಮ್ಮ ದೇಶವು ಮೂಲ ಕಚ್ಚಾ ಸಾಮಗ್ರಿಗಳಿಗಾಗಿ ಆಮದನ್ನು ನೆಚ್ಚಿಕೊಂಡಿರುವುದು ಕಳವಳಕಾರಿಯಾಗಿದೆ ಎಂದವರು ಹೇಳಿದರು. ಯೋಜನಾ ಮಾರ್ಗದರ್ಶಿಗಳ ಪಟ್ಟಿಯಲ್ಲಿರುವ 41 ಉತ್ಪನ್ನಗಳು 53 ಔಷಧಿಗಳ ಬೃಹತ್ ಪ್ರಮಾಣದ ಉತ್ಪಾದನೆಗೆ ಅನುವು ಮಾಡಿಕೊಡಲಿವೆ. ಯೋಜನೆಗಳಲ್ಲಿ ಆಯ್ಕೆಯಾದ 136 ಮಂದಿ ಉತ್ಪಾದಕರಿಗೆ ಹಣಕಾಸು ಪ್ರೋತ್ಸಾಹಧನವನ್ನು ಅವರು ಸ್ಥಳೀಯವಾಗಿ ಉತ್ಪಾದಿಸಿ ದೇಶೀಯ ಮೌಲ್ಯವರ್ಧನೆಗೆ ಬೇಕಾದ ಮಟ್ಟದಲ್ಲಿ  ದೇಶೀಯವಾಗಿ ಮಾರಾಟ ಮಾಡುವ ಪ್ರಮಾಣದ ಮೇಲೆ ನಿಗದಿತ ಶೇಕಡವಾರು ಲೆಕ್ಕಾಚಾರದಲ್ಲಿ ನೀಡಲಾಗುತ್ತದೆ.

ವಿವರಗಳಿಗೆ: https://www.pib.gov.in/PressReleseDetail.aspx?PRID=1641517

ಭಾರತೀಯ ರೈಲ್ವೇಯಿಂದ ಬಾಂಗ್ಲಾದೇಶಕ್ಕೆ 10 ಬ್ರಾಡ್ ಗೇಜ್ ಲೊಕೊಮೊಟಿವ್ ಗಳ ಹಸ್ತಾಂತರ

ಇಂದು ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ 10 ಬ್ರಾಡ್ ಗೇಜ್ (ಬಿ.ಜಿ.) ಲೊಕೊಮೋಟಿವ್ ಗಳನ್ನು ವಿದೇಶಿ ವ್ಯವಹಾರ ಸಚಿವ ಡಾ. ಎಸ್. ಜೈಶಂಕರ್ ಮತ್ತು ರೈಲ್ವೇ ಸಚಿವ ಪೀಯುಷ್ ಗೋಯಲ್ ಅವರು  ವರ್ಚುವಲ್ ಮಾಧ್ಯಮದ ಮೂಲಕ ಹಸಿರು ನಿಶಾನೆ ತೋರಿ ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿದರು. ಸಮಾರಂಭದಲ್ಲಿ ಮಾತನಾಡಿದ ವಿದೇಶಿ ವ್ಯವಹಾರಗಳ ಸಚಿವರಾದ ಡಾ. ಎಸ್. ಜೈಶಂಕರ್ “ಉಭಯ ದೇಶಗಳ ನಡುವೆ ಪಾರ್ಸೆಲ್ ಮತ್ತು ಕಂಟೈನರ್ ರೈಲುಗಳು ಆರಂಭಗೊಂಡಿರುವುದನ್ನು ತಿಳಿದು ನನಗೆ ಸಂತೋಷವಾಗಿದೆ. ನಮ್ಮ ವ್ಯಾಪಾರ ವ್ಯವಹಾರಗಳಿಗೆ ಇದು ಹೊಸ ಅವಕಾಶಗಳನ್ನು ತೆರೆಯಲಿದೆ. ರೈಲುಗಳ ಮೂಲಕ ವ್ಯಾಪಾರವನ್ನು ಖಾತ್ರಿಪಡಿಸಿರುವುದು ನನಗೆ ಸಂತೋಷವನ್ನು ತಂದಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ , ಅದರಲ್ಲೂ ವಿಶೇಷವಾಗಿ ರಮ್ಜಾನ್ ತಿಂಗಳ ಪವಿತ್ರ ಮಾಸದಲ್ಲಿ ಅವಶ್ಯಕ ಸಾಮಗ್ರಿಗಳ ಪೂರೈಕೆಯನ್ನು ಖಾತ್ರಿಪಡಿಸಲಾಗಿದೆ “ ಎಂದರು. ದ್ವಿಪಕ್ಷೀಯ ಸಹಕಾರದ ವೇಗಕ್ಕೆ ಕೋವಿಡ್ ಜಾಗತಿಕ ಸಾಂಕ್ರಾಮಿಕದಿಂದ ಯಾವುದೇ ಅಡೆ ತಡೆಯುಂಟಾಗದಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಶ್ರೀ ಗೋಯಲ್ ಮಾತನಾಡಿ ಭಾರತ ಮತ್ತು ಬಾಂಗ್ಲಾದೇಶಗಳ ನಾಯಕತ್ವವು ಉಭಯ ದೇಶಗಳ ನಡುವೆ 1965 ಕ್ಕೆ ಪೂರ್ವದಲ್ಲಿದ್ದ ರೈಲ್ವೇ ಸಂಪರ್ಕವನ್ನು ಪುನಶ್ಚೇತನಗೊಳಿಸಲು ಬದ್ದವಾಗಿದೆ ಆಗ ಇದ್ದ 7 ರೈಲ್ವೇ ಸಂಪರ್ಕಗಳಲ್ಲಿ 4 ಈಗ ಕಾರ್ಯನಿರ್ವಹಿಸುತ್ತಿವೆ ಎಂದರು.   ಕೋವಿಡ್ -19 ಅವಧಿಯಲ್ಲಿ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಮತ್ತು ಅವಶ್ಯಕ ಸಾಮಗ್ರಿಗಳನ್ನು ಸಾಗಾಟವನ್ನು ತ್ವರಿತಗೊಳಿಸಿ,  ಸಾಗಾಟ  ಸರಪಳಿಯನ್ನು ನಿಭಾಯಿಸುವ ಮೂಲಕ ರೈಲ್ವೇಯು ಶ್ಲಾಘನೀಯ ಮುಂಗಾಣ್ಕೆಯನ್ನು ತೋರಿಸಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳು ಗಡಿ ರಸ್ತೆಯಲ್ಲಿ ವ್ಯಾಪಾರ ವಹಿವಾಟು ಅಸ್ತವ್ಯಸ್ತಗೊಂಡ ಕಾರಣದಿಂದ  ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಪರಿಣಾಮವನ್ನು ನಿವಾರಿಸಲು ರೈಲ್ವೇ ಸಹಕಾರವನ್ನು ಹೆಚ್ಚಿಸಿವೆ ಎಂದವರು ಹೇಳಿದರು.

ವಿವರಗಳಿಗೆ: https://www.pib.gov.in/PressReleseDetail.aspx?PRID=1641503

ಕೋವಿಡ್ ನಿಂದ  ಶೈಕ್ಷಣಿಕ ವೇಳಾಪಟ್ಟಿಯಲ್ಲಾಗಿರುವ ಅಸ್ತವ್ಯಸ್ತ ಸ್ಥಿತಿಯಿಂದ ಕಂಗೆಡದಿರಲು ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ಸಲಹೆ

ಇತ್ತೀಚಿನ ದಿನಗಳಲ್ಲಿ ಮಾಧ್ಯಮ ವಲಯದ ಭೂದೃಶ್ಯವನ್ನು ಅದರಲ್ಲೂ ವಿಶೇಷವಾಗಿ ಸುದ್ದಿ ಮಾಧ್ಯಮ ಪರಿಸರವನ್ನು ಸೋಂಕಿರುವ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳ ನಡುವೆ ಹೇಗೆ ಅವುಗಳನ್ನು ದಾಟಬೇಕು ಎಂಬುದನ್ನು ಮಕ್ಕಳಿಗಿಂದು ಕಲಿಸಿಕೊಡಬೇಕಾದ ಅಗತ್ಯವನ್ನು ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಒತ್ತಿ ಹೇಳಿದ್ದಾರೆ. “ಟೈಮ್ಸ್ ಸ್ಕಾಲರ್ಸ್ ಇವೆಂಟ್” ನಲ್ಲಿ ಭಾಗಿಯಾಗಿದ್ದ 200ಕ್ಕೂ ಅಧಿಕ ಮಂದಿ  ಯುವ ಪ್ರತಿನಿಧಿಗಳನ್ನು ಉದ್ದೇಶಿಸಿ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ವಿಶ್ಲೇಷಣಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಮತ್ತು ಸತ್ಯವನ್ನು ಒಪ್ಪಿಕೊಳ್ಳುವ ಹಾಗು ಸುಳ್ಳನ್ನು ತಿರಸ್ಕರಿಸುವ ಧೈರ್ಯ ತೋರುವಂತೆ ಕರೆ ನೀಡಿದರು. ಕೋವಿಡ್ ನಿಂದ ಶೈಕ್ಷಣಿಕ ವೇಳಾಪಟ್ಟಿಯಲ್ಲಾಗಿರುವ ಅಸ್ತವ್ಯಸ್ತ ಸ್ಥಿತಿಯು ಅನೇಕ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಒತ್ತಡ ಉಂಟು ಮಾಡಿರುವುದನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಗಳು ಯಾರೊಬ್ಬರ ನಿಯಂತ್ರಣದಲ್ಲಿಯೂ ಇಲ್ಲದಿರುವ ಘಟನೆಗಳಿಂದ ವಿಚಲಿತಗೊಳ್ಳಬಾರದು ಎಂದೂ ಸಲಹೆ ಮಾಡಿದರು. “ ನೀವೆಲ್ಲರೂ ಯುವಜನತೆ. ನೀವು ಬಲಿಷ್ಟವಾದ ಭಾವನಾತ್ಮಕ ಅಂಶಗಳನ್ನು ಮತ್ತು ಜೀವನದ ಏರಿಳಿತಗಳನ್ನು ನಿಭಾಯಿಸುವ ಸಾಮರ್ಥ್ಯ್ವವನ್ನು ಗಳಿಸಿಕೊಳ್ಳಬೇಕು “ ಎಂದವರು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ನಿಯಮಿತವಾಗಿ ಯೋಗವನ್ನು ಅಭ್ಯಾಸ ಮಾಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ಅದರಿಂದ ದೈಹಿಕ ಕ್ಷಮತೆ , ಮಾನಸಿಕ ದೃಢತೆ  ಮತ್ತು ಒತ್ತಡವನ್ನು ಹಾಗು ಆತಂಕವನ್ನು ತಡೆಯುವ ಶಕ್ತಿ ದೊರೆಯುತ್ತದೆ ಎಂದರು.

ವಿವರಗಳಿಗೆ: https://www.pib.gov.in/PressReleseDetail.aspx?PRID=1641527

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: ಕೋವಿಡ್ -19 ಸಾಮಗ್ರಿಗಳ ಪೂರೈಕೆ ಸರಪಳಿಯ  ಸಕಾಲಿಕ ಮೇಲುಸ್ತುವಾರಿಗಾಗಿ ಪರಿಣಾಮಕಾರಿ ಲಸಿಕೆ ಬುದ್ದಿಮತ್ತೆ ಜಾಲ (.ವಿ..ಎನ್.) ವನ್ನು ಪಂಜಾಬ್ ಸರಕಾರ ಬಳಸಿಕೊಳ್ಳುತ್ತಿದೆ. ವೇದಿಕೆಯು ಅವಶ್ಯಕ ಸಾಮಗ್ರಿಗಳ ಕೊರತೆಯನ್ನು ನಿಭಾಯಿಸಿಪೂರೈಕೆ ಮತ್ತು ಬೇಡಿಕೆ ಸಮತೋಲನವನ್ನು ನಿರ್ವಹಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ  ಎಂಬುದು ಸಾಬೀತಾಗಿದೆ.
  • ಹಿಮಾಚಲ ಪ್ರದೇಶ: ಅಂತಾರಾಜ್ಯ ಸಂಚಾರಕ್ಕೆ ಸಂಬಂಧಿಸಿ ರಾಜ್ಯ ಸರಕಾರ ನೀಡಿರುವ ಆದೇಶದಲ್ಲಿ ಆಂಶಿಕ ಬದಲಾವಣೆಗಳನ್ನು ಮಾಡಲಾಗಿದೆ. ತಿದ್ದುಪಡಿಗಳನ್ವಯ ಸ್ಪರ್ಧಾತ್ಮಕ/ ಆಯ್ಕೆ ಪರೀಕ್ಷೆಗಳಿಗಾಗಿ ರಾಜ್ಯದಿಂದ ಹೊರಗೆ ಹೋಗುವವರು ಮತ್ತು ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳು, ಅಭ್ಯರ್ಥಿಗಳು, ಮತ್ತು ಅವರ ಪೋಷಕರಿಗೆ ಕ್ವಾರಂಟೈನ್ ನಿಬಂಧನೆಗಳಿಂದ  ಅವರು ರಾಜ್ಯದಿಂದ ಹೊರಗೆ ಹೋಗುವ ಮತ್ತು ಬರುವ ಅವಧಿಯು 72 ಗಂಟೆಗಳಿಗಿಂತ ಕಡಿಮೆ ಅವಧಿಯದ್ದಾಗಿದ್ದರೆ ಅವರಿಗೆ ವಿನಾಯಿತಿ ನೀಡಬಹುದಾಗಿದೆ.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಪರಿಸರ ಖಾತೆ ಸಚಿವ ಸಂಜಯ್ ಬಾನ್ ಸೋಡೆ ಅವರು ಕೋವಿಡ್  -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಉದ್ಭವ್ ಠಾಕ್ರೆ ಮಂತ್ರಿ ಮಂಡಲದಲ್ಲಿ ಕೋವಿಡ್ ಪತ್ತೆಯಾಗಿರುವ ಆರನೇ  ಸಚಿವ ಅವರಾಗಿದ್ದಾರೆ. ನಡುವೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ಕೋವಿಡ್ -19 ಸೀರೋ ಸಮೀಕ್ಷೆಯ ಪ್ರಥಮ ಹಂತವನ್ನು ಪೂರ್ಣಗೊಳಿಸಿದೆ. ಇದರಲ್ಲಿ ನಗರದ 10,000 ನಿವಾಸಿಗಳನ್ನು ಒಳಗೊಳಿಸಿಕೊಳ್ಳಲಾಗಿದೆ. ಜನಸಂಖ್ಯೆಯಲ್ಲಿ ಆಂಟಿಬಾಡಿಗಳ ಮಟ್ಟವನ್ನು ನಿರ್ಧರಿಸುವುದಕ್ಕಾಗಿ ಇದನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೊಳೆಗೇರಿ ಮತ್ತು ಕೊಳೆಗೇರಿಯಲ್ಲದ ನಗರ ಪ್ರದೇಶಗಳಿಂದ ಸ್ಯಾಂಪಲ್ ಗಳನ್ನು ತೆಗೆದುಕೊಳ್ಳಲಾಗಿತ್ತು. ಅಲ್ಲಿ ಆಗಸ್ಟ್ ತಿಂಗಳಲ್ಲಿ ಇನ್ನೊಂದು ಸಮೀಕ್ಷೆಯನ್ನು ನಡೆಸಲಾಗುತ್ತದೆ. ಇಂದಿನವರೆಗೆ ಮಹಾರಾಷ್ಟ್ರದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 1.48 ಲಕ್ಷ. ಪುಣೆ ಜಿಲ್ಲೆ 43,838 ಸಕ್ರಿಯ ಪ್ರಕರಣಗಳೊಂದಿಗೆ ದೇಶದಲ್ಲಿಯೇ ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಥಾಣೆ 37,162 ಪ್ರಕರಣಗಳನ್ನು ಹೊಂದಿದ್ದು ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಎರಡನೆ ಜಿಲ್ಲೆಯಾಗಿದೆ. ಮುಂಬಯಿಯಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು ಅಲ್ಲಿ 22,443 ಪ್ರಕರಣಗಳಿವೆ.
  • ಗುಜರಾತ್: ಭಾನುವಾರದಂದು 1,110 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 55,822 ಕ್ಕೇರಿದೆ. ಒಟ್ಟು 753 ಮಂದಿ ಕಳೆದ 24 ಗಂಟೆಗಳಲ್ಲಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಇದರಿಂದ ಒಟ್ಟು ಗುಣಮುಖರಾದವರ ಸಂಖ್ಯೆ 40,365 ಕ್ಕೇರಿದೆ. 21 ಮಂದಿ ಸಾವನ್ನಪ್ಪುವುದರೊಂದಿಗೆ ರಾಜ್ಯದಲ್ಲಿ ಜಾಗತಿಕ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ 2,326 ಕ್ಕೇರಿದೆ.
  • ರಾಜಸ್ಥಾನ: ಕಳೆದ 24 ಗಂಟೆಗಳಲ್ಲಿ 448 ಹೊಸ ಪ್ರಕರಣಗಳು ಮತ್ತು 7 ಸಾವಿನ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 36,878 ಕ್ಕೇರಿದೆ , ಇದರಲ್ಲಿ 10,124 ಸಕ್ರಿಯ ಪ್ರಕರಣಗಳು. ಒಟ್ಟು ಗುಣಮುಖ ಪ್ರಕರಣಗಳ ಸಂಖ್ಯೆ 26,123 ಕ್ಕೇರಿದ್ದರೆ ಒಟ್ಟು ಮೃತರ ಸಂಖ್ಯೆ ಇದುವರೆಗೆ 631.
  • ಮಧ್ಯ ಪ್ರದೇಶ: ಭಾನುವಾರದಂದು 874 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು 644 ಮಂದಿ ಗುಣಮುಖರಾಗಿದ್ದಾರೆ ಹಾಗು 12 ಮಂದಿ ಕೋವಿಡ್ -19 ರಿಂದಾಗಿ ಮೃತಪಟ್ಟಿದ್ದಾರೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 7,857 ಆಗಿದೆ. ಹೆಚ್ಚಿನ ಹೊಸ ಪ್ರಕರಣಗಳು ಭೋಪಾಲದಿಂದ (205 ) ಮತ್ತು ಇಂದೋರಿನಿಂದ (149 ) ವರದಿಯಾಗಿವೆ.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶ ಸರಕಾರದ ಪರಿಷ್ಖೃತ ಎಸ್..ಪಿ. ಗಳ ಅನ್ವಯ ರಾಜ್ಯದಲ್ಲಿ ದೊಡ್ಡ ಯೋಜನೆಗಳನ್ನು ನಿರ್ವಹಿಸುತ್ತಿರುವ ನೊಂದಾಯಿತ ಗುತ್ತಿಗೆದಾರರಿಗೆ  ಓರ್ವ ಗುತ್ತಿಗೆದಾರರಿಗೆ ತಲಾ ಗರಿಷ್ಟ 50 ಕಾರ್ಮಿಕರನ್ನು  ಕರೆ ತರಲು ಅನುಮತಿ ನೀಡಲಾಗಿದೆ. ಅವರು ಪ್ರವೇಶಕ್ಕೆ ಆನ್ ಲೈನ್ ಮೂಲಕ ಅನುಮತಿ ಪಡೆಯಬೇಕು ಮತ್ತು ಓರ್ವ ವ್ಯಕ್ತಿಗೆ ತಲಾ 500 ರೂಪಾಯಿಯನ್ನು ಆಂಟಿಜೆನ್ ಪರೀಕ್ಷೆಗಾಗಿ ಪಾವತಿ ಮಾಡಬೇಕು.
  • ಅಸ್ಸಾಂ: ಜೋರ್ಹಟ್ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಇನ್ನೊಂದು ವೈರಾಣು ಸಂಶೋಧನಾ ಮತ್ತು ಅಭಿವೃದ್ದಿ ಪ್ರಯೋಗಾಲಯ (ವಿ.ಆರ್.ಡಿ.ಎಲ್.) ಇಂದಿನಿಂದ ಕಾರ್ಯಾರಂಭ ಮಾಡಿದೆ. ಇದರೊಂದಿಗೆ ಅಸ್ಸಾಂನಲ್ಲಿ 17 ವಿ.ಆರ್.ಡಿ.ಎಲ್. ಗಳಿವೆ ಎಂದು ಅಸ್ಸಾಂ ಆರೋಗ್ಯ ಸಚಿವ ಶ್ರೀ ಹಿಮಂತ ಬಿಸ್ವಾ ಸರ್ಮಾ ಟ್ವೀಟ್ ಮಾಡಿದ್ದಾರೆ.
  • ಮಣಿಪುರ: ಮಣಿಪುರ ರಾಜ್ಯದಲ್ಲಿ ಇದುವರೆಗೆ ಯಾವುದೇ ಭಾಗದಲ್ಲಿ ಕೋವಿಡ್ -19 ಸಮುದಾಯಕ್ಕೆ ಹರಡಿದ ಸೂಚನೆಗಳು ಇಲ್ಲ ಎಂದು ಕೋವಿಡ್ -19 ಸಾಮಾನ್ಯ ನಿಯಂತ್ರಣ ಕೊಠಡಿಯ ವಕ್ತಾರರು ಹೇಳಿದ್ದಾರೆ. ಮಣಿಪುರದ ಆರ್..ಎಂ.ಎಸ್. ನಲ್ಲಿ ಕೋವಿಡ್ -19 ಪತ್ತೆಯಾದ ಬಳಿಕ ಆಸ್ಪತ್ರೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜುಲೈ 29 ರವರೆಗೆ ಸ್ವಚ್ಚಗೊಳಿಸುವುದಕ್ಕಾಗಿ (ಸ್ಯಾನಿಟೈಸ್ ) ಮುಚ್ಚಲಾಗಿದೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡಿನಲ್ಲಿ ಕೊಹಿಮಾ ಜಿಲ್ಲಾಡಳಿತವು ಮಿಮಾ ಗ್ರಾಮದ ಸೂಚಿತ ಪ್ರದೇಶಗಳನ್ನು ಅಲ್ಲಿ ಕೋವಿಡ್ -19 ರೋಗಿ ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾದ ಪ್ರದೇಶ ಎಂದು ಘೋಷಿಸಿದೆ.
  • ಸಿಕ್ಕಿಂ: ಕೋವಿಡ್ -19 ಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಯೋಜನೆಯನ್ನು ಪರಾಮರ್ಶಿಸಲು ರಾಜ್ಯ ಕಾರ್ಯ ಪಡೆಯ ಉನ್ನತ ಮಟ್ಟದ ಸಭೆಯು  ಸಿಕ್ಕಿಂ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್ ಅವರ ಅಧ್ಯಕ್ಷತೆಯಲ್ಲಿ ಇಂದು ಸಮ್ಮಾನ್ ಭವನದಲ್ಲಿ ನಡೆಯಿತು
  • ಕೇರಳ: ಅಪ್ರಾಯೋಗಿಕವಾದುದರಿಂದ ರಾಜ್ಯವ್ಯಾಪೀ ಮತ್ತೆ ಲಾಕ್ ಡೌನ್ ಜಾರಿಗೆ  ತಾರದಿರುವಂತೆ ಇಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ರೋಗ ಹರಡುವಿಕೆ ಪ್ರಮಾಣ ಹೆಚ್ಚು ಇರುವ ಕಡೆಗಳಲ್ಲಿ ಪೊಲೀಸ್ ತಪಾಸಣೆ ಮತ್ತು ನಿರ್ಬಂಧಗಳನ್ನು ಬಿಗಿಗೊಳಿಸಲಾಗುತ್ತದೆ. ಅಂಗಡಿಗಳ ತೆರೆಯುವಿಕೆಗೆ ಸಂಬಂಧಿಸಿ ಜಿಲ್ಲಾ ಆಡಳಿತಗಳು ತೀರ್ಮಾನ ಕೈಗೊಳ್ಳಬಹುದಾಗಿದೆ. ನಡುವೆ ಕೋಝಿಕ್ಕೋಡಿನ ಕುಟುಂಬವೊಂದರ ಮೂರನೇ ಸದಸ್ಯರು ಇಂದು ಕೊರೊನಾವೈರಸ್ಸಿಗೆ ಬಲಿಯಾಗಿದ್ದಾರೆ.ಇನ್ನೊಂದು ಕೋವಿಡ್ ಸಾವು ಎರ್ನಾಕುಲಂ  ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದೆ. ಇದುವರೆಗಿನ  ಅಂಕಿ ಅಂಶಗಳ ಪ್ರಕಾರ ಕೋವಿಡ್ ನಿಂದ ಮೃತಪಟ್ಟವರ ಅಧಿಕೃತ ಸಂಖ್ಯೆ : 61. ಕೊಟ್ಟಾಯಂನಲ್ಲಿ ಕೋವಿಡ್ ರೋಗಿಯೊಬ್ಬರ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ತಡೆಯೊಡ್ಡಿದ ಸ್ಥಳೀಯ ಕೌನ್ಸಿಲರ್ ಸಹಿತ 50 ಮಂದಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 927 ಹೊಸ ಪ್ರಕರಣಗಳೊಂದಿಗೆ ಕೇರಳದ ಕೋವಿಡ್ ಪ್ರಕರಣಗಳ ಸಂಖ್ಯೆ ನಿನ್ನೆ 19,000 ದಾಟಿದೆ. ಪ್ರಸ್ತುತ 9,655 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 1.56 ಲಕ್ಷ ಜನರು ವಿವಿಧ ಜಿಲ್ಲೆಗಳಲ್ಲಿ ನಿಗಾದಲ್ಲಿದ್ದಾರೆ
  • ತಮಿಳುನಾಡು: ಓರ್ವ ಶಾಸಕರು ಮತ್ತು ಕಾವಲು ಸಿಬ್ಬಂದಿ ಕೋವಿಡ್ ಸೋಂಕಿನ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವುದರಿಂದ ಪುದುಚೇರಿಯ ವಿಧಾನಸಭೆ ಸಂಕೀರ್ಣ ಜುಲೈ 27 ಮತ್ತು 28 ರಂದು ಮುಚ್ಚಲ್ಪಟ್ಟಿರುತ್ತದೆ. ಮಧುರೈಯ ರಾಜಾಜಿ ಆಸ್ಪತ್ರೆಯ 29 ದಾದಿಯರು ಮತು ವೈದ್ಯರು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ತಮಿಳುನಾಡಿನ ಕಲಾ ಮತ್ತು ವಿಜ್ಞಾನ ಕಾಲೇಜುಗಳಿಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲಾಗಿದೆ; ವಿದ್ಯಾರ್ಥಿಗಳು ತಮ್ಮ ಕಾಗದ ಪತ್ರಗಳನ್ನು ಆಗಸ್ಟ್ 1 ರಿಂದ ಆಗಸ್ಟ್ 10 ನಡುವೆ ಅಪ್ ಲೋಡ್ ಮಾಡಬಹುದಾಗಿದೆ. ಕೋವಿಡ್ ಪ್ರಕರಣಗಳಲ್ಲಿ ಚೆನ್ನೈಯ ಪಾಲು ಕಡಿಮೆಯಾಗತೊಡಗಿದೆ. ಇತರ ಜಿಲ್ಲೆಗಳಿಂದ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದರಿಂದ ತಮಿಳುನಾಡಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ 6986 ಹೊಸ ಪ್ರಕರಣಗಳು ಮತ್ತು 85 ಸಾವುಗಳು ವರದಿಯಾಗಿವೆ. ಚೆನ್ನೈಯಿಂದ 1155 ಪ್ರಕರಣಗಳು ವರದಿಯಾಗಿವೆ. ಒಟ್ಟು ಕೋವಿಡ್ ಪ್ರಕರಣಗಳು:2,13,723; ಸಕ್ರಿಯ ಪ್ರಕರಣಗಳು: 53,703; ಮರಣ: 3494, ಚೆನ್ನೈಯಲ್ಲಿ ಸಕ್ರಿಯ ಪ್ರಕರಣಗಳು: 13,744.
  • ಕರ್ನಾಟಕ: ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರ  ಪ್ರಕಾರ ದೇಶದಲ್ಲಿಯ ಎಲ್ಲಾ ರಾಜ್ಯಗಳ ಪೈಕಿ ಕರ್ನಾಟಕವು ಕೋವಿಡ್ -19 ದತ್ತಾಂಶ ವರದಿಯ ಗುಣಮಟ್ಟದಲ್ಲಿ ಉತ್ತಮ ಸ್ಥಾನದಲ್ಲಿದೆ. ರಾಜ್ಯದ ಅರಣ್ಯ ಸಚಿವ ಆನಂದ ಸಿಂಗ್ ಅವರು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಭಾನುವಾರದ ಕರ್ಫ್ಯೂ ಮುಂದುವರಿಕೆ ನಿರ್ಧಾರ ಕೈಗೊಳ್ಳಲು ಕೇಂದ್ರ ಸರಕಾರದ ಮಾರ್ಗದರ್ಶಿಗಳನ್ನು ಎದುರು ನೋಡುತ್ತಿರುವುದಾಗಿ ರಾಜ್ಯ ಸರಕಾರ ಹೇಳಿದೆ.. ..ಎಸ್.ಸಿ. ತಂಡಗಳು ವಿನ್ಯಾಸ ಮಾಡಿದ ಮೊದಲ ಮೊಬೈಲ್ ಪ್ರಯೋಗಾಲಯಗಳು ನಿಯೋಜನೆಗೆ ಸಿದ್ದವಾಗಿದ್ದು, ಶೀಘ್ರವೇ ಅವುಗಳನ್ನು ರಾಜ್ಯ ಸರಕಾರಕ್ಕೆ ಹಸ್ತಾಂತರಿಸಲಾಗುತ್ತದೆ.ಕರ್ನಾಟಕವು ಭಾನುವಾರದಂದು ಏಕದಿನ ಗರಿಷ್ಟ ಅಂದರೆ 5,199 ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ , ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 96,141 ಕ್ಕೇರಿದೆ. ರಾಜ್ಯದಲ್ಲಿ 58,417 ಸಕ್ರಿಯ ಪ್ರಕರಣಗಳಿವೆ ಮತ್ತು ಭಾನುವಾರದಂದು 2,088 ಮಂದಿ ಬಿಡುಗಡೆಯಾಗುವುದರೊಂದಿಗೆ ಒಟ್ಟು ಬಿಡುಗಡೆಯಾದವರ ಸಂಖ್ಯೆ 35,838 ಕ್ಕೇರಿದೆ.
  • ಆಂಧ್ರ ಪ್ರದೇಶ: ಕೋವಿಡ್ -19 ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ  ರಾಜ್ಯವು ಮಾರ್ಗದರ್ಶಿಗಳನ್ನು ಹೊರಡಿಸಿದ್ದು, ಕೊರೊನಾವೈರಸ್ ಪರೀಕ್ಷೆಯನ್ನು .ಸಿ.ಎಂ.ಆರ್. ಅನುಮೋದಿತ ಪ್ರಯೋಗಾಲಯಗಳಲ್ಲಿ ಮಾತ್ರವೇ ನಡೆಸಬೇಕು ಎಂದು ಹೇಳಿದೆ. ತ್ವರಿತ ಆಂಟಿಜೆನ್ ಪರೀಕ್ಷೆಗಳಿಗೆ ಶುಲ್ಕವನ್ನು 750 ರೂ. ಮತ್ತು ವಿ.ಆರ್.ಡಿ.ಎಲ್. ಪರೀಕ್ಷೆಗಳಿಗೆ 2,800 ರೂ. ಗಳಿಗಿಂತ ಅಧಿಕ ಶುಲ್ಕ ವಿಧಿಸುವಂತಿಲ್ಲ ಎಂದು ಸರಕಾರ ಮಿತಿಗಳನ್ನು ಹೇರಿದೆ. ಸೆಪ್ಟೆಂಬರ್ 5 ರಿಂದ ರಾಜ್ಯವು ಶಾಲೆಗಳನ್ನು ಪುನರಾರಂಭಿಸಲು ಯೋಜನೆ ಹಾಕಿಕೊಂಡಿದ್ದು, ಸರಕಾರಿ ಶಾಲೆಗಳಲ್ಲಿ 2020-21 ನೇ ಸಾಲಿನ ಪ್ರವೇಶ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದೆ. ಕೋವಿಡ್ -19 ಮಾರ್ಗದರ್ಶಿಗಳ ಅನ್ವಯ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕಾಗಿ ಪೋಷಕರಿಗಷ್ಟೇ ಅವಕಾಶ ಮಾಡಿಕೊಡಲಾಗಿದೆ. ನಿನ್ನೆ 7627 ಹೊಸ ಪ್ರಕರಣಗಳು ಮತ್ತು 56 ಸಾವಿನ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು: 96,298. ; ಸಕ್ರಿಯ ಪ್ರಕರಣಗಳು: 48,956 ; ಮೃತಪಟ್ಟವರು : 1041. ಬಿಡುಗಡೆಯಾದವರು: 46,301
  • ತೆಲಂಗಾಣ: ಕೋವಿಡ್ -19 ನಿಭಾಯಿಸಲು ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಹೈದರಾಬಾದ್ ತನ್ನದೇ ಆದ ಹಾದಿಯನ್ನು ಕಂಡುಕೊಂಡಿದೆ. ಇಲ್ಲಿಯ ಅವ್ರಾ ಲ್ಯಾಬೋರೇಟರೀಸ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ಕೋವಿಡ್ -19 ಔಷಧಿ ಸಿಪ್ಲೆಂಜಾ ಸಿದ್ದಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಔಷಧಿಯು ಸಿಪ್ಲಾ ಲ್ಯಾಬೋರೇಟರೀಸ್ ಫೆವಿಪಿರವಿರ್ ಜೆನೆಟಿಕ್ ಆವೃತ್ತಿಯಾಗಿದೆ. ತೆಲಂಗಾಣದ ಆಸ್ಪತ್ರೆಗಳು ಕೋವಿಡ್ ರೋಗಿಗಳ ಹೆಚ್ಚಳವನ್ನು ನಿಭಾಯಿಸಲು ಕ್ರಮ ಕೈಗೊಂಡಿವೆ. ಎಲ್ಲಾ ಜಿಲ್ಲೆಗಳಲ್ಲಿ ಐಸೋಲೇಶನ್ ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ರೋಗಿಗಳಿಗೆ ಹೈದರಾಬಾದಿಗೆ ಧಾವಿಸದಂತೆ ಮನವಿ ಮಾಡುತ್ತಿವೆ. ಭಾನುವಾರದಂದು 1473 ಹೊಸ ಪ್ರಕರಣಗಳು, 774 ಗುಣಮುಖ ಪ್ರಕರಣಗಳು ಮತ್ತು 8 ಸಾವುಗಳು ವರದಿಯಾಗಿವೆ. 1473 ಪ್ರಕರಣಗಳಲ್ಲಿ ಜಿ.ಎಚ್.ಎಂ.ಸಿ.ಯಿಂದ ವರದಿಯಾದ ಪ್ರಕರಣಗಳ ಸಂಖ್ಯೆ 506.ನಿನ್ನೆಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ: 55,532; ಸಕ್ರಿಯ ಪ್ರಕರಣಗಳು: 12,955, ಮತ್ತು ಮೃತ್ಯು: 471. 

 

https://static.pib.gov.in/WriteReadData/userfiles/image/image007DRCH.jpg

https://static.pib.gov.in/WriteReadData/userfiles/image/image0087PO8.jpg

***



(Release ID: 1641936) Visitor Counter : 336