ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣ

Posted On: 04 JUN 2020 12:21PM by PIB Bengaluru

ಭಾರತ-ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣ

 

https://ci4.googleusercontent.com/proxy/p5aW6Il4nZldxu_gX0Ehsm6f6akWiFcGgoJg6TFCJIEDpM9wpwMLOjh7bjy0pwM2-RBWrJpV5Hoeb0_oKKuvs0yjaJQ-KgYyMfK0ws1itUBYHGV9WVkP=s0-d-e1-ft#https://static.pib.gov.in/WriteReadData/userfiles/image/DSC_4025JJ10.JPG

 

ಗೌರವಾನ್ವಿತರೇ, ನಮಸ್ಕಾರ!

ಮೊದಲನೆಯದಾಗಿ, ಆಸ್ಟ್ರೇಲಿಯಾದಲ್ಲಿ ಕೋವಿಡ್-19 ರಿಂದ ಬಳಲುತ್ತಿರುವ ಜನರು ಮತ್ತು ಅವರ ಕುಟುಂಬಗಳಿಗೆ ವೈಯಕ್ತಿವಾಗಿ ಮತ್ತು ಇಡೀ ಭಾರತದ ಪರವಾಗಿ ನಾನು ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಜಾಗತಿಕ ಸಾಂಕ್ರಾಮಿಕ ರೋಗವು ವಿಶ್ವದ ಎಲ್ಲಾ ರೀತಿಯ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿದೆ. ನಮ್ಮ ಶೃಂಗಸಭೆಯ ಡಿಜಿಟಲ್ ರೂಪವು ಸಹ ಇದೇ ಪರಿಣಾಮಗಳ ಉದಾಹರಣೆಯಾಗಿದೆ.

ಗೌರವಾನ್ವಿತರೇ, ಡಿಜಿಟಲ್ ಮಾಧ್ಯಮದ ಮೂಲಕ ನಿಮ್ಮನ್ನು ಭೇಟಿಯಾಗುತ್ತಿರುವುದು ನನಗೆ ಸಂತೋಷ ತಂದಿದೆ. ಆದರೆ ಸ್ವಲ್ಪ ನಿರಾಶೆಯೂ ಆಗಿದೆ. ಏಕೆಂದರೆ ಭಾರತದಲ್ಲಿ ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸಲು ನಮಗೆ ಅವಕಾಶ ತಪ್ಪಿ ಹೋಯಿತು. ನಿಮ್ಮ ಭಾರತ ಭೇಟಿಗಾಗಿ ನಾವು ಮೊದಲು ಜನವರಿಯಲ್ಲಿ ಮತ್ತು ನಂತರ ಕಳೆದ ತಿಂಗಳು ಕಾಯುತ್ತಿದ್ದೆವು. ಆದರೆ ದುರದೃಷ್ಟವಶಾತ್, ನಿಮ್ಮ ಎರಡೂ ಭೇಟಿಗಳನ್ನು ಮುಂದೂಡಬೇಕಾಯಿತು. ಇಂದಿನ ನಮ್ಮ ಸಭೆಯು ನಿಮ್ಮ ಭಾರತ ಭೇಟಿಗೆ ಸಾಟಿಯಾಗುವುದಿಲ್ಲ. ಪರಿಸ್ಥಿತಿ ಸುಧಾರಿಸಿದ ನಂತರ ಶೀಘ್ರದಲ್ಲೇ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಭೇಟಿ ನೀಡಲು ಮತ್ತು ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕೆಂದು ಸ್ನೇಹಿತನಾಗಿ ನಿಮ್ಮನ್ನು ಒತ್ತಾಯಿಸುತ್ತೇನೆ.

ಗೌರವಾನ್ವಿತರೇ, ಭಾರತ-ಆಸ್ಟ್ರೇಲಿಯಾ ಸಂಬಂಧಗಳು ವ್ಯಾಪಕವಾದವು ಮತ್ತು ಗಾಢವಾದವು. ಗಾಢತೆಯು ನಮ್ಮ ಹಂಚಿಕೆಯ ಮೌಲ್ಯಗಳು, ಹಂಚಿಕೆಯ ಆಸಕ್ತಿಗಳು, ಹಂಚಿಕೆಯ ಭೌಗೋಳಿಕತೆ ಮತ್ತು ಹಂಚಿಕೆಯ ಉದ್ದೇಶಗಳಿಂದ ಬಂದಿವೆ. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ಸಹಕಾರ ಮತ್ತು ಸಹಯೋಗವು ವೇಗವನ್ನು ಪಡೆದುಕೊಂಡಿದೆ. ನಮ್ಮ ಸಂಬಂಧದ ಒಂದು ತುದಿಯು ನಿಮ್ಮಂತಹ ಪ್ರಬಲ ಮತ್ತು ದೂರದೃಷ್ಟಿಯ ನಾಯಕರ ಕೈಯಲ್ಲಿರುವುದು ನಮ್ಮ ಅದೃಷ್ಟವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಇದು ಸೂಕ್ತ ಸಮಯ ಹಾಗೂ ಸೂಕ್ತ ಅವಕಾಶ ಎಂದು ನಾನು ನಂಬಿದ್ದೇನೆ.

ನಮ್ಮ ಸ್ನೇಹವನ್ನು ಬಲಪಡಿಸಲು ನಮಗೆ ಅಪಾರ ಸಾಧ್ಯತೆಗಳಿವೆ. ಸಾಧ್ಯತೆಗಳು ತಮ್ಮೊಂದಿಗೆ ಸವಾಲುಗಳನ್ನು ಸಹ ತರುತ್ತವೆ. ಸಾಧ್ಯತೆಗಳನ್ನು ವಾಸ್ತವವಾಗಿಸುವುದು ಹೇಗೆ ಎಂಬ ಸವಾಲುಗಳಿವೆ. ಇದರಿಂದ ಎರಡೂ ದೇಶಗಳ ನಾಗರಿಕರು, ವ್ಯವಹಾರಗಳು, ಶಿಕ್ಷಣ ತಜ್ಞರು, ಸಂಶೋಧಕರು ಇತ್ಯಾದಿಗಳ ನಡುವಿನ ಸಂಪರ್ಕವು ಬಲಗೊಳ್ಳುತ್ತದೆ. ನಮ್ಮ ಸಂಬಂಧಗಳು ಪ್ರದೇಶ ಮತ್ತು ಜಗತ್ತಿಗೆ ಹೇಗೆ ಸ್ಥಿರತೆಯ ಅಂಶವಾಗಬಹುದು; ಜಾಗತಿಕ ಒಳಿತಿಗಾಗಿ ನಾವು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು; ಎಲ್ಲಾ ಅಂಶಗಳನ್ನು ಪರಿಗಣಿಸಬೇಕಾಗಿದೆ.

https://ci5.googleusercontent.com/proxy/KDgXDczeaHNkYvulJsZWkyASShP3_GxIT5UwGsgCQdBYa7QY6iE3xQ06VApgvJtk-YSb61bMlTSBPaV247ytAszipw8CXneNrUffVlMwC67gh9iaUg79=s0-d-e1-ft#https://static.pib.gov.in/WriteReadData/userfiles/image/DSC_41947GXW.JPG

ಗೌರವಾನ್ವಿತರೇ, ಸಮಕಾಲೀನ ಜಗತ್ತಿನಲ್ಲಿ ಪರಸ್ಪರರ ದೇಶಗಳ ನಿರೀಕ್ಷೆಗಳು ಮತ್ತು ನಮ್ಮ ನಾಗರಿಕರ ನಿರೀಕ್ಷೆಗಳು ಹೆಚ್ಚಾಗಿವೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಂಚಿಕೊಳ್ಳುವ ಮೂಲಕ, ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುವ ಜವಾಬ್ದಾರಿ ನಮಗಿಬ್ಬರಿಗೂ ಇದೆ. ಆದ್ದರಿಂದ, ಪ್ರಜಾಪ್ರಭುತ್ವ, ಕಾನೂನು, ಸ್ವಾತಂತ್ರ್ಯ, ಪರಸ್ಪರ ಗೌರವ, ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಮನ್ನಣೆ ಮತ್ತು ಪಾರದರ್ಶಕತೆ ಮುಂತಾದ ಜಾಗತಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಮತ್ತು ರಕ್ಷಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಇದು ಒಂದು ರೀತಿಯಲ್ಲಿ ಭವಿಷ್ಯಕ್ಕಾಗಿ ನಮ್ಮ ಪರಂಪರೆಯಾಗಿದೆ. ಇಂದು ಮೌಲ್ಯಗಳಿಗೆ ಸವಾಲು ಎದುರಾದಾಗ, ನಾವು ನಮ್ಮ ಸಂಬಂಧಗಳನ್ನು ಬಲಪಡಿಸಿಕೊಳ್ಳುವ ಮೂಲಕವೇ ಅವುಗಳನ್ನು ಬಲಪಡಿಸಬಹುದು.

ಗೌರವಾನ್ವಿತರೇ, ಭಾರತವು ಆಸ್ಟ್ರೇಲಿಯಾದೊಂದಿಗಿನ ತನ್ನ ಸಂಬಂಧವನ್ನು ಸಮಗ್ರವಾಗಿ ಮತ್ತು ತ್ವರಿತವಾಗಿ ವಿಸ್ತರಿಸಲು ಬದ್ಧವಾಗಿದೆ. ಇದು ನಮ್ಮ ಎರಡು ದೇಶಗಳಿಗೆ ಮಾತ್ರವಲ್ಲದೆ ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಇಡೀ ವಿಶ್ವಕ್ಕೂ ಮುಖ್ಯವಾಗಿದೆ. ನಮ್ಮ ವಿವಿಧ ಸಾಂಸ್ಥಿಕ ಮಾತುಕತೆಗಳು ನಮ್ಮ ಸಂಬಂಧಗಳಿಗೆ ದೃಢತೆಯನ್ನು ಒದಗಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಉಭಯ ದೇಶಗಳ ನಡುವೆ ನಿರಂತರವಾದ ಉನ್ನತ ಮಟ್ಟದ ವಿನಿಮಯವೂ ಇದೆ. ವ್ಯಾಪಾರ ಮತ್ತು ಹೂಡಿಕೆ ಕೂಡ ಹೆಚ್ಚುತ್ತಿದೆ. ಆದರೆ ವಿಸ್ತರಣೆ ಮತ್ತು ಗತಿಯ ಬಗ್ಗೆ ನನಗೆ ತೃಪ್ತಿ ಇದೆ ಎಂದು ನಾನು ಹೇಳುವುದಿಲ್ಲ. ನಿಮ್ಮಂತಹ ನಾಯಕರು ನಮ್ಮ ಮಿತ್ರ ದೇಶವನ್ನು ಮುನ್ನಡೆಸುತ್ತಿರುವಾಗ, ನಮ್ಮ ಸಂಬಂಧಗಳಲ್ಲಿ ಅಭಿವೃದ್ಧಿಯ ಗತಿಯ ಮಾನದಂಡಗಳು ಸಹ ಮಹತ್ವಾಕಾಂಕ್ಷಿಯಾಗಿರಬೇಕು. ಇಂದು ನಾವು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ ಮಟ್ಟಕ್ಕೆ ಉನ್ನತೀಕರಿಸುತ್ತಿದ್ದೇವೆ ಎಂದು ನನಗೆ ತುಂಬಾ ಸಂತೋಷವಾಗಿದೆ.

ಜಾಗತಿಕ ಸಾಂಕ್ರಾಮಿಕ ರೋಗದ ಸಂದರ್ಭಲ್ಲಿ ನಮ್ಮ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಪಾತ್ರವು ಹೆಚ್ಚು ಮಹತ್ವದ್ದಾಗಿದೆ. ಸಾಂಕ್ರಾಮಿಕ ರೋಗದ ಆರ್ಥಿಕ ಮತ್ತು ಸಾಮಾಜಿಕ ಅಡ್ಡಪರಿಣಾಮಗಳಿಂದ ಹೊರಬರಲು ಜಗತ್ತಿಗೆ ಸಂಘಟಿತ ಮತ್ತು ಸಹಕಾರಿ ವಿಧಾನದ ಅಗತ್ಯವಿದೆ.

ಬಿಕ್ಕಟ್ಟನ್ನು ಒಂದು ಅವಕಾಶವಾಗಿ ಪರಿವರ್ತಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಭಾರತದಲ್ಲಿ, ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಸಮಗ್ರ ಸುಧಾರಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇದು ಶೀಘ್ರದಲ್ಲೇ ತಳಮಟ್ಟದಲ್ಲಿ ಫಲಿತಾಂಶಗಳನ್ನು ನೀಡಲಿದೆ. ಕಠಿಣ ಸಂದರ್ಭದಲ್ಲಿ ನೀವು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯವನ್ನು, ವಿಶೇಷವಾಗಿ ಭಾರತೀಯ ವಿದ್ಯಾರ್ಥಿಗಳನ್ನು ನೋಡಿಕೊಂಡಿರುವ ರೀತಿಗೆ ನಾನು ನಿಮಗೆ ಕೃತಜ್ಞನಾಗಿದ್ದೇನೆ.

***



(Release ID: 1629655) Visitor Counter : 238