ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಮಾಧ್ಯಮಗೋಷ್ಠಿ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ನಡುವೆಯೂ ದೇಶಾದ್ಯಂತ ಹಾಲಿನ ಸಂಗ್ರಹಣೆ, ಸಂಸ್ಕರಣೆ ಮತ್ತು ಪೂರೈಕೆ ಅಡೆತಡೆಯಿಲ್ಲದೆ ಮುಂದುವರಿದಿದೆ

ಡೈರಿ ಪೂರೈಕೆ ಸರಪಳಿಗಳು ಹಾಗೂ ಹಾಲು, ಇಂಧನ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ಲಭ್ಯತೆಯ ದೈನಂದಿನ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಲು ಎಲ್ಲಾ ರಾಜ್ಯ ಒಕ್ಕೂಟಗಳು ಮತ್ತು ಹಾಲು ಒಕ್ಕೂಟಗಳೊಂದಿಗೆ ಮೀಸಲಾದ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ

ಗೃಹಬಳಕೆಯ ಎಲ್‌ ಪಿ ಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ; ಎಲ್‌ ಪಿ ಜಿ ವಿತರಣಾ ಕೇಂದ್ರಗಳಲ್ಲಿ ಯಾವುದೇ ದಾಸ್ತಾನು ಖಾಲಿಯಾದ ವರದಿಗಳಿಲ್ಲ

ಮಾರ್ಚ್ 2026 ರಿಂದೀಚೆಗೆ 5.01 ಲಕ್ಷಕ್ಕೂ ಹೆಚ್ಚು ಪಿ ಎನ್‌ ಜಿ ಸಂಪರ್ಕಗಳಿಗೆ ಅನಿಲ ಪೂರೈಸಲಾಗಿದ್ದು, 5.68 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ

ಸಾರ್ವಜನಿಕ ಸ್ವಾಮ್ಯದ ಒಎಂಸಿಗಳು ಹಠಾತ್ ತಪಾಸಣೆಗಳನ್ನು ಮುಂದುವರಿಸಿವೆ; ನಿನ್ನೆಯವರೆಗೆ 274 ಎಲ್‌ ಪಿ ಜಿ ವಿತರಕರ ಮೇಲೆ ಕ್ರಮ ಜರುಗಿಸಲಾಗಿದೆ ಮತ್ತು 67 ಎಲ್‌ ಪಿ ಜಿ ವಿತರಕರನ್ನು ಅಮಾನತುಗೊಳಿಸಲಾಗಿದೆ

28 ಫೆಬ್ರವರಿ 2026 ರಿಂದ 9 ಎಲ್‌ ಪಿ ಜಿ ಹಡಗುಗಳು ಮತ್ತು 1 ಕಚ್ಚಾ ತೈಲ ಹಡಗು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಂಚರಿಸಿವೆ

ಇರಾಕ್‌ ನಲ್ಲಿ ಸಿಲುಕಿಕೊಂಡಿದ್ದ 12 ಭಾರತೀಯ ನಾವಿಕರು ಬಾಗ್ದಾದ್‌ ನಲ್ಲಿರುವ ಭಾರತೀಯ ಮಿಷನ್‌ ನ ನೆರವಿನೊಂದಿಗೆ ನಿನ್ನೆ ಮುಂಬೈಗೆ ಆಗಮಿಸಿದ್ದಾರೆ

ಪ್ರಕಟಣಾ ದಿನಾಂಕ: 21 APR 2026 6:09PM by PIB Bengaluru

ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವ ನಿರಂತರ ಪ್ರಯತ್ನದ ಭಾಗವಾಗಿ, ಭಾರತ ಸರ್ಕಾರವು ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಗೋಷ್ಠಿಯನ್ನು ನಡೆಸಿತು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು, ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವು ಮತ್ತು ಪ್ರಮುಖ ವಲಯಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಈ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ಹಂಚಿಕೊಂಡಿತು.

ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಮಾಹಿತಿಗಳು

ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಡೈರಿ ಮೌಲ್ಯ ಸರಪಳಿಯ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಇತರ ಸಂಬಂಧಿತ ಸಚಿವಾಲಯಗಳ ಸಮನ್ವಯದೊಂದಿಗೆ ಸರಣಿ ಕ್ರಮಗಳನ್ನು ಕೈಗೊಂಡಿದೆ.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆಯೂ ದೇಶಾದ್ಯಂತ ಹಾಲಿನ ಸಂಗ್ರಹಣೆ, ಸಂಸ್ಕರಣೆ ಮತ್ತು ಪೂರೈಕೆ ಅಡೆತಡೆಯಿಲ್ಲದೆ ಮುಂದುವರಿದಿದೆ. ಹಾಲಿನ ಉತ್ಪನ್ನಗಳ ಬೆಲೆಗಳು ಸ್ಥಿರವಾಗಿವೆ, ಮಾರುಕಟ್ಟೆಯಲ್ಲಿ ಯಾವುದೇ ಪೂರೈಕೆ ವ್ಯತ್ಯಯ ಸಂಭವಿಸಿಲ್ಲ ಮತ್ತು ಬಿಕ್ಕಟ್ಟಿನ ಅವಧಿಯುದ್ದಕ್ಕೂ ಹೈನಗಾರಿಕೆ ರೈತರಿಗೆ ಪಾವತಿಗಳು ಮುಂದುವರಿದಿವೆ.

ಇಲಾಖೆಯು ಕೈಗೊಂಡಿರುವ ಕ್ರಮಗಳು ಈ ಕೆಳಗಿನಂತಿವೆ:

  • ಉದ್ಭವಿಸುತ್ತಿರುವ ಪರಿಸ್ಥಿತಿಯನ್ನು ನಿರ್ಣಯಿಸಲು ಕಾರ್ಯದರ್ಶಿಗಳ (ಎ ಎಚ್ ಡಿ) ಅಧ್ಯಕ್ಷತೆಯಲ್ಲಿ ಭಾಗೀದಾರರೊಂದಿಗೆ ನಿಯಮಿತ ಸಭೆಗಳನ್ನು ನಡೆಸಲಾಗುತ್ತಿದೆ.

ಇಂಧನ ಲಭ್ಯತೆ

  • ಇಂಧನ (ಅನಿಲ) ಪೂರೈಕೆಗೆ ಸಂಬಂಧಿಸಿದಂತೆ, 8.4.2026 ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆದೇಶವು ಡೈರಿ ಸಂಸ್ಕರಣಾ ಘಟಕಗಳು ಸೇರಿದಂತೆ ನಿರ್ಣಾಯಕ ಉದ್ಯಮಗಳು ತಮ್ಮ ಮಾರ್ಚ್ 2026 ಕ್ಕಿಂತ ಮುಂಚಿನ ಬಲ್ಕ್ ಅಲ್ಲದ ಗೃಹಬಳಕೆಯ ಎಲ್‌ ಪಿ ಜಿ ಪೂರೈಕೆಯ ಶೇ. 70 ರಷ್ಟನ್ನು ಪಡೆಯುವುದನ್ನು ಖಚಿತಪಡಿಸಿದೆ, ಇದು ಡೈರಿ ಕಾರ್ಯಾಚರಣೆಗಳಿಗೆ ಯಾವುದೇ ಅಡ್ಡಿಯಾಗದಂತೆ ತಡೆದಿದೆ. ತರುವಾಯ, ಎಲ್‌ ಪಿ ಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕಾರ್ಯಾಚರಣೆಯ ದೃಷ್ಟಿಯಿಂದ ಸಾಧ್ಯವಿರುವ ಕಡೆಗಳಲ್ಲಿ ಎಲ್‌ ಪಿ ಜಿ ಯಿಂದ ಪಿ ಎನ್‌ ಜಿ ಗೆ ಬದಲಾಗಲು ಎಲ್ಲಾ ಡೈರಿ ಘಟಕಗಳಿಗೆ ಸಲಹೆ ನೀಡಲಾಗಿದೆ.

ಪ್ಯಾಕೇಜಿಂಗ್ ಸಾಮಗ್ರಿ

  • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಂಘಟಿಸಿದ ಪೆಟ್ರೋಕೆಮಿಕಲ್ಸ್ ಮೇಲಿನ ಜಂಟಿ ಕಾರ್ಯಕಾರಿ ಗುಂಪಿನ (ಜೆಡಬ್ಲ್ಯೂಜಿ) ಸದಸ್ಯರಾಗಿ, ಡೈರಿ ವಲಯದ ಪ್ಯಾಕೇಜಿಂಗ್ ಸಾಮಗ್ರಿಗಳ ಅವಶ್ಯಕತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಜೆಡಬ್ಲ್ಯೂಜಿ ಪರಿಹರಿಸಿದೆ. ಡೈರಿ ಉದ್ಯಮದಲ್ಲಿ ಬಳಸಲಾಗುವ ಪ್ಲಾಸ್ಟಿಕ್ ಪ್ಯಾಕೇಜಿಂಗ್‌ ನ ಪ್ರಮುಖ ಹೂಡಿಕೆಯಾದ ಎಲ್‌ ಡಿ ಪಿ ಇ ಅನ್ನು 0.23 ಟಿಎಂಟಿಯಷ್ಟು ಹಂಚಿಕೆ ಮಾಡಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕ್ರಮ ಕೈಗೊಂಡಿದೆ ಮತ್ತು ಡೈರಿ ಪ್ಯಾಕೇಜಿಂಗ್‌ ನಲ್ಲಿ ಬಳಸುವ ಪ್ಲಾಸ್ಟಿಕ್ ಕಪ್‌ ಗಳಿಗೆ ಅಗತ್ಯವಾದ ಪಾಲಿಪ್ರೊಪಿಲೀನ್ ಮತ್ತು ಪಾಲಿಸ್ಟೈರೀನ್ ಪೂರೈಕೆಯನ್ನು ಖಾತರಿಪಡಿಸಿದೆ.
  • ದೇಶಾದ್ಯಂತ ಪ್ಯಾಕೇಜಿಂಗ್ ಸಾಮಗ್ರಿಗಳ ಸುಗಮ ಪೂರೈಕೆಗಾಗಿ ಇಲಾಖೆಯು ಪ್ಲಾಸ್ಟಿಕ್ ಪ್ಯಾಕಿಂಗ್ ಸಾಮಗ್ರಿ ಪೂರೈಕೆದಾರರೊಂದಿಗೆ ನಿಕಟ ಸಮನ್ವಯ ಸಾಧಿಸುತ್ತಿದೆ.
  • ಹಾಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಡೈರಿ ವಲಯದ ಮೇಲೆ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮವನ್ನು ಮೇಲ್ವಿಚಾರಣೆ ಮಾಡಲು 20.4.2026 ರಂದು ಭಾರತದಾದ್ಯಂತ ಇರುವ ರಾಜ್ಯ ಹಾಲು ಒಕ್ಕೂಟಗಳು/ಹಾಲು ಒಕ್ಕೂಟಗಳೊಂದಿಗೆ ಸಭೆ ನಡೆಸಲಾಯಿತು. ಡೈರಿ ವಲಯಕ್ಕೆ ಇಂಧನ (ಅನಿಲ) ಮತ್ತು ಪ್ಲಾಸ್ಟಿಕ್ ಪ್ಯಾಕೇಜಿಂಗ್ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಲ್ಲ.
  • ಡೈರಿ ಪೂರೈಕೆ ಸರಪಳಿಗಳು ಮತ್ತು ಹಾಲು, ಇಂಧನ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ಲಭ್ಯತೆಯ ದೈನಂದಿನ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಲು 30.3.2026 ರಂದು ಎಲ್ಲಾ ರಾಜ್ಯ ಒಕ್ಕೂಟಗಳು ಮತ್ತು ಹಾಲು ಒಕ್ಕೂಟಗಳನ್ನು ಸದಸ್ಯರನ್ನಾಗಿ ಹೊಂದಿರುವ ಮೀಸಲಾದ ಪೋರ್ಟಲ್ ಅನ್ನು ಪ್ರಾರಂಭಿಸಲಾಯಿತು.

ರಫ್ತು

  • ರಫ್ತು ಮಾಡಿದ ಸರಕುಗಳನ್ನು ಸುಲಭವಾಗಿ ಭಾರತೀಯ ಬಂದರುಗಳಿಗೆ ಮರಳಿ ತರಲು ಸರಳೀಕೃತ ಪ್ರಾಣಿ ಕ್ವಾರಂಟೈನ್ ಕ್ಲಿಯರೆನ್ಸ್ ವಿಧಾನವನ್ನು 25.03.2026 ರಿಂದ ಜಾರಿಗೆ ಬರುವಂತೆ ಅಧಿಸೂಚಿಸಲಾಗಿದೆ.

ಇಂಧನ ಪೂರೈಕೆ ಮತ್ತು ಲಭ್ಯತೆ

ಹಾರ್ಮುಜ್ ಜಲಸಂಧಿಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ ಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಚಿವಾಲಯದ ಕ್ರಮಗಳು ಹೀಗಿವೆ:

ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ:

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ ನಾಗರಿಕರು ಗಾಬರಿಯಿಂದ ಖರೀದಿ ಮಾಡುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.
  • ವದಂತಿಗಳ ಬಗ್ಗೆ ಜಾಗರೂಕರಾಗಿರುವಂತೆ ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸುವಂತೆ ತಿಳಿಸಲಾಗಿದೆ.
  • ಎಲ್‌ ಪಿ ಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ಪ್ಲಾಟ್‌ಫಾರ್ಮ್‌ ಗಳನ್ನು ಬಳಸಲು ಮತ್ತು ವಿತರಕರ ಬಳಿ ಹೋಗುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
  • ಪಿ ಎನ್‌ ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್‌ಟಾಪ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ.
  • ಪ್ರಸ್ತುತ ಪರಿಸ್ಥಿತಿಯಲ್ಲಿ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡಲು ವಿನಂತಿಸಲಾಗಿದೆ.

ಸರ್ಕಾರದ ಸಿದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು:

  • ಭೌಗೋಳಿಕ ರಾಜಕೀಯ ಪರಿಸ್ಥಿತಿಯ ನಡುವೆಯೂ, ಗೃಹಬಳಕೆಯ ಎಲ್‌ ಪಿ ಜಿ, ಗೃಹಬಳಕೆಯ ಪಿ ಎನ್‌ ಜಿ ಮತ್ತು ಸಿ ಎನ್‌ ಜಿ (ಸಾರಿಗೆ) ಗೆ ಶೇ.100 ರಷ್ಟು ಪೂರೈಕೆಯನ್ನು ಸರ್ಕಾರ ಖಚಿತಪಡಿಸಿದೆ.
  • ವಾಣಿಜ್ಯ ಎಲ್‌ ಪಿ ಜಿ ಗಾಗಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ ಫಾರ್ಮಾ, ಸ್ಟೀಲ್, ಆಟೋಮೊಬೈಲ್, ಬೀಜ, ಕೃಷಿ ಇತ್ಯಾದಿಗಳಿಗೆ ಆದ್ಯತೆ ನೀಡಲಾಗಿದೆ. ಇದಲ್ಲದೆ, ವಲಸೆ ಕಾರ್ಮಿಕರಿಗೆ 5 ಕೆಜಿ ಎಫ್‌ ಟಿ ಎಲ್ ಪೂರೈಕೆಯನ್ನು 2026 ರ ಮಾರ್ಚ್ 2 ಮತ್ತು 3 ರ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ದ್ವಿಗುಣಗೊಳಿಸಲಾಗಿದೆ.
  • ತೈಲ ಸಂಸ್ಕರಣಾಗಾರಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಸೇರಿದಂತೆ ಪೂರೈಕೆ ಮತ್ತು ಬೇಡಿಕೆಯ ಎರಡೂ ಕಡೆಗಳಲ್ಲಿ ಸರ್ಕಾರವು ಈಗಾಗಲೇ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ.
  • ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
  • ಸಣ್ಣ ಮತ್ತು ಮಧ್ಯಮ ಗ್ರಾಹಕರಿಗೆ ವಿತರಿಸಲು ರಾಜ್ಯಗಳಿಗೆ ಹೆಚ್ಚುವರಿ ಕಲ್ಲಿದ್ದಲು ಪೂರೈಸುವಂತೆ ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲರೀಸ್‌ ಗೆ ಸೂಚಿಸಿದೆ.
  • ಗೃಹಬಳಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ಸುಲಭಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು:

  • ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ ಪಿ ಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕಾಳಸಂತೆ ಹಾಗೂ ಸಂಗ್ರಹಣೆಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕು. ಭಾರತ ಸರ್ಕಾರವು ಈ ಕುರಿತು ರಾಜ್ಯಗಳಿಗೆ ಹಲವಾರು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ ಗಳ ಮೂಲಕ ಪುನರುಚ್ಚರಿಸಿದೆ.
  • ಇಂಧನ ಲಭ್ಯತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಸಕ್ರಿಯ ಸಾರ್ವಜನಿಕ ಸಂವಹನದ ಅಗತ್ಯವನ್ನು ಭಾರತ ಸರ್ಕಾರವು 27.03.2026 ಮತ್ತು 02.04.2026 ರ ಪತ್ರಗಳಲ್ಲಿ ಒತ್ತಿಹೇಳಿದೆ. ರಾಜ್ಯಗಳೊಂದಿಗೆ ನಿಯಮಿತ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ 02.04.2026 ಮತ್ತು 06.04.2026 ರಂದು ನಡೆದ ಸಭೆಗಳಲ್ಲಿ ಈ ಕೆಳಗಿನವುಗಳನ್ನು ಒತ್ತಿಹೇಳಲಾಗಿದೆ:
    1. ದೈನಂದಿನ ಪತ್ರಿಕಾಗೋಷ್ಠಿಗಳನ್ನು ನಡೆಸಬೇಕು ಮತ್ತು ಸಾರ್ವಜನಿಕ ಸಲಹೆಗಳನ್ನು ನೀಡಬೇಕು.
    2. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ / ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ನಿಭಾಯಿಸಬೇಕು.
    3. ಜಿಲ್ಲಾಡಳಿತದಿಂದ ದೈನಂದಿನ ಜಾರಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಮತ್ತು ಒಎಂಸಿಗಳೊಂದಿಗೆ ಸಮನ್ವಯದೊಂದಿಗೆ ದಾಳಿ ಮತ್ತು ತಪಾಸಣೆಗಳನ್ನು ಮುಂದುವರಿಸಬೇಕು.
    4. ಆಯಾ ರಾಜ್ಯಗಳಲ್ಲಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆ ಆದೇಶಗಳನ್ನು ಹೊರಡಿಸಬೇಕು.
    5. ರಾಜ್ಯಗಳಿಗೆ ಹಂಚಿಕೆಯಾದ ಹೆಚ್ಚುವರಿ ಸೀಮೆಎಣ್ಣೆಗಾಗಿ ಹಂಚಿಕೆ ಆದೇಶಗಳನ್ನು ಹೊರಡಿಸಬೇಕು.
    6. ಪಿ ಎನ್‌ ಜಿ ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸಬೇಕು.
    7. ಎಲ್‌ ಪಿ ಜಿ ಪೂರೈಕೆಗೆ, ವಿಶೇಷವಾಗಿ ಗೃಹಬಳಕೆಯ ಅಗತ್ಯಗಳಿಗಾಗಿ ಆದ್ಯತೆ ನೀಡಲು ಮತ್ತು ಪೂರೈಕೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳ ಉದ್ದೇಶಿತ ವಿತರಣೆಯನ್ನು ಅಳವಡಿಸಿಕೊಳ್ಳಬೇಕು.
  • ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಂಗ್ರಹಣೆ ಮತ್ತು ಕಾಳಸಂತೆಯನ್ನು ತಡೆಯಲು ನಿಯಂತ್ರಣ ಕೊಠಡಿಗಳು ಮತ್ತು ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸಿವೆ.
  • ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.

ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು

  • ಎಲ್‌ ಪಿ ಜಿ ಸಂಗ್ರಹಣೆ ಮತ್ತು ಕಾಳಸಂತೆಯನ್ನು ತಡೆಯಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ. ನಿನ್ನೆ ದೇಶಾದ್ಯಂತ 2200 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ.
  • ಸಾರ್ವಜನಿಕ ಸ್ವಾಮ್ಯದ ಒಎಂಸಿಗಳು ಹಠಾತ್ ತಪಾಸಣೆಗಳನ್ನು ಬಲಪಡಿಸಿವೆ ಮತ್ತು ಮುಂದುವರಿಸಿವೆ ಮತ್ತು 274 ಎಲ್‌ ಪಿ ಜಿ ವಿತರಕರ ಮೇಲೆ ದಂಡ ವಿಧಿಸಿವೆ, ಮತ್ತು ನಿನ್ನೆಯವರೆಗೆ 67 ಎಲ್‌ ಪಿ ಜಿ ವಿತರಕರನ್ನು ಅಮಾನತುಗೊಳಿಸಲಾಗಿದೆ.

ಎಲ್‌ ಪಿ ಜಿ ಪೂರೈಕೆ

ಗೃಹಬಳಕೆಯ ಎಲ್‌ ಪಿ ಜಿ ಪೂರೈಕೆ ಸ್ಥಿತಿ:

  • ಪ್ರಚಲಿತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್‌ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
  • ಗೃಹಬಳಕೆಯ ಎಲ್‌ ಪಿ ಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ.
  • ಎಲ್‌ ಪಿ ಜಿ ವಿತರಣಾ ಕೇಂದ್ರಗಳಲ್ಲಿ ಯಾವುದೇ ದಾಸ್ತಾನು ಖಾಲಿಯಾದ ವರದಿಗಳಿಲ್ಲ.
  • ನಿನ್ನೆ ಉದ್ಯಮದ ಆಧಾರದ ಮೇಲೆ ಆನ್‌ಲೈನ್ ಎಲ್‌ ಪಿ ಜಿ ಸಿಲಿಂಡರ್ ಬುಕಿಂಗ್ ಶೇ. 98 ಕ್ಕೆ ಏರಿದೆ.
  • ದುರುಪಯೋಗ ತಡೆಯಲು ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ಆಧಾರಿತ ವಿತರಣೆಗಳು ಸುಮಾರು ಶೇ.92 ಕ್ಕೆ ಏರಿವೆ. ಡಿಎಸಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ.

ವಾಣಿಜ್ಯ ಎಲ್‌ ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:

  • ಒಟ್ಟು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಬಿಕ್ಕಟ್ಟಿನ ಮುಂಚಿನ ಮಟ್ಟದ ಸುಮಾರು ಶೇ.70 ಕ್ಕೆ ಹೆಚ್ಚಿಸಲಾಗಿದೆ, ಇದರಲ್ಲಿ ಶೇ.10 ಸುಧಾರಣೆ-ಸಂಬಂಧಿತ ಹಂಚಿಕೆಯೂ ಸೇರಿದೆ.
  • ವಲಸೆ ಕಾರ್ಮಿಕರಿಗೆ ವಿತರಿಸಲು ಲಭ್ಯವಿರುವ 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳ ದೈನಂದಿನ ಪ್ರಮಾಣವನ್ನು ಮಾರ್ಚ್ 2-3 ರ ಸರಾಸರಿ ಪೂರೈಕೆಯ ಆಧಾರದ ಮೇಲೆ ದ್ವಿಗುಣಗೊಳಿಸಲಾಗಿದೆ ಎಂದು ಭಾರತ ಸರ್ಕಾರವು 06.04.2026 ರ ಪತ್ರದ ಮೂಲಕ ತಿಳಿಸಿದೆ. ಈ ಸಿಲಿಂಡರ್‌ ಗಳು ತೈಲ ಕಂಪನಿಗಳ ನೆರವಿನೊಂದಿಗೆ ವಲಸೆ ಕಾರ್ಮಿಕರಿಗೆ ಮಾತ್ರ ಪೂರೈಸಲು ರಾಜ್ಯ ಸರ್ಕಾರದ ಬಳಿ ಲಭ್ಯವಿರುತ್ತವೆ.
  • 3ನೇ ಏಪ್ರಿಲ್ 2026 ರಿಂದ, ಸಾರ್ವಜನಿಕ ಸ್ವಾಮ್ಯದ ಒಎಂಸಿಗಳು 7400 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿವೆ, ಅಲ್ಲಿ 1,07,000 ಕ್ಕೂ ಹೆಚ್ಚು 5 ಕೆಜಿ ಸಿಲಿಂಡರ್‌ ಗಳನ್ನು ಮಾರಾಟ ಮಾಡಲಾಗಿದೆ. ನಿನ್ನೆ 410 ಕ್ಕೂ ಹೆಚ್ಚು ಶಿಬಿರಗಳ ಮೂಲಕ 5891 ಸಿಲಿಂಡರ್‌ ಗಳು ಮಾರಾಟವಾಗಿವೆ.
  • ಇತ್ತೀಚೆಗೆ 20 ಏಪ್ರಿಲ್ 2026 ರಂದು ತಾರಾಪುರದಲ್ಲಿ (ಮಹಾರಾಷ್ಟ್ರ) ನಡೆದ ಶಿಬಿರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೇ ದಿನದಲ್ಲಿ 550 ಸಿಲಿಂಡರ್‌ ಗಳು ಮಾರಾಟವಾಗಿವೆ.
  • 23ನೇ ಮಾರ್ಚ್ 2026 ರಿಂದ 19.28 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳು ಮಾರಾಟವಾಗಿವೆ.
  • ಐಒಸಿಎಲ್, ಎಚ್‌ ಪಿ ಸಿ ಎಲ್ ಮತ್ತು ಬಿಪಿಸಿಎಲ್‌ ನ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯು ವಾಣಿಜ್ಯ ಎಲ್‌ ಪಿ ಜಿ ವಿತರಣೆಯನ್ನು ಯೋಜಿಸಲು ರಾಜ್ಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
  • ಏಪ್ರಿಲ್ ತಿಂಗಳಲ್ಲಿ (20.04.26 ರವರೆಗೆ), ಒಟ್ಟು 1,23,680 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ ಪಿ ಜಿ ಮಾರಾಟವಾಗಿದೆ.
  • 20.04.2026 ರಂದು 8822 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ ಪಿ ಜಿ ಮಾರಾಟವಾಗಿದೆ.

ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿ ಎನ್‌ ಜಿ ವಿಸ್ತರಣಾ ಉಪಕ್ರಮಗಳು

  • ಡಿ-ಪಿ ಎನ್‌ ಜಿ ಮತ್ತು ಸಿ ಎನ್‌ ಜಿ-ಸಾರಿಗೆ ಗ್ರಾಹಕರಿಗೆ ಶೇ.100 ರಷ್ಟು ಪೂರೈಕೆಯೊಂದಿಗೆ ಆದ್ಯತೆ ನೀಡಲಾಗಿದೆ.
  • ರಸಗೊಬ್ಬರ ಘಟಕಗಳಿಗೆ ಒಟ್ಟಾರೆ ಅನಿಲ ಹಂಚಿಕೆಯನ್ನು ಅವುಗಳ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇ. 95 ಕ್ಕೆ ಹೆಚ್ಚಿಸಲಾಗಿದೆ.
  • ಹೆಚ್ಚುವರಿಯಾಗಿ, ಸಿಜಿಡಿ ಜಾಲಗಳ ಮೂಲಕ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಪೂರೈಕೆಯನ್ನು ಶೇ. 80 ರವರೆಗೆ ಹೆಚ್ಚಿಸಲಾಗಿದೆ.
  • ವಾಣಿಜ್ಯ ಎಲ್‌ ಪಿ ಜಿ ಲಭ್ಯತೆಯ ಕಾಳಜಿಗಳನ್ನು ಹೋಗಲಾಡಿಸಲು ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್‌ ಜಿ ಸಂಪರ್ಕಗಳಿಗೆ ಆದ್ಯತೆ ನೀಡಲು ಸಿಜಿಡಿ ಘಟಕಗಳಿಗೆ ಸೂಚಿಸಲಾಗಿದೆ.
  • ಐಜಿಎಲ್, ಎಂಜಿಎಲ್, ಗೇಲ್ ಗ್ಯಾಸ್ ಮತ್ತು ಬಿಪಿಸಿಎಲ್ ಕಂಪನಿಗಳು ಪಿ ಎನ್‌ ಜಿ ಸಂಪರ್ಕಗಳಿಗಾಗಿ ಪ್ರೋತ್ಸಾಹಕಗಳನ್ನು ನೀಡುತ್ತಿವೆ.
  • ಸಿಜಿಡಿ ಜಾಲಗಳ ವಿಸ್ತರಣೆಗೆ ಅಗತ್ಯವಿರುವ ಅನುಮೋದನೆಗಳನ್ನು ತ್ವರಿತಗೊಳಿಸಲು ರಾಜ್ಯಗಳಿಗೆ ವಿನಂತಿಸಲಾಗಿದೆ.
  • ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ದೀರ್ಘಕಾಲದವರೆಗೆ ಎಲ್‌ ಪಿ ಜಿ ಯಿಂದ ಪಿ ಎನ್‌ ಜಿ ಗೆ ಬದಲಾಗಲು ಸಹಾಯ ಮಾಡುವ ರಾಜ್ಯಗಳಿಗೆ ಶೇ. 10 ಹೆಚ್ಚುವರಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ನೀಡುವುದಾಗಿ ತಿಳಿಸಿದೆ.
  • 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈ ಪ್ರಯೋಜನ ಪಡೆಯುತ್ತಿವೆ.
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 24.03.26 ರ ಪತ್ರದ ಮೂಲಕ ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪ್ರಕ್ರಿಯೆಗೊಳಿಸಲು 3 ತಿಂಗಳ ಕಾಲ 'ಕಡಿಮೆ ಸಮಯದ ಅವಧಿಯೊಂದಿಗೆ ಸಿಜಿಡಿ ಮೂಲಸೌಕರ್ಯಕ್ಕಾಗಿ ವೇಗವರ್ಧಿತ ಅನುಮೋದನೆ ಚೌಕಟ್ಟು'ಯನ್ನು ವಿಶೇಷವಾಗಿ ಅಳವಡಿಸಿಕೊಂಡಿದೆ.
  • ಭಾರತ ಸರ್ಕಾರವು 24.03.2026 ರ ಗೆಜೆಟ್‌ನಲ್ಲಿ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್‌ಲೈನ್‌ ಮತ್ತು ಇತರ ಸೌಲಭ್ಯಗಳ ಜೋಡಣೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026 ಅನ್ನು ಅಗತ್ಯ ಸರಕುಗಳ ಕಾಯ್ದೆ, 1955 ರ ಅಡಿಯಲ್ಲಿ ಪ್ರಕಟಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್‌ ಗಳನ್ನು ಹಾಕಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಸಮಯಕ್ಕೆ ಸೀಮಿತವಾದ ಚೌಕಟ್ಟನ್ನು ಒದಗಿಸುತ್ತದೆ, ಅನುಮೋದನೆಗಳು ಮತ್ತು ಭೂಮಿಗೆ ಪ್ರವೇಶದಲ್ಲಿನ ವಿಳಂಬವನ್ನು ಪರಿಹರಿಸುತ್ತದೆ ಮತ್ತು ವಸತಿ ಪ್ರದೇಶಗಳನ್ನು ಒಳಗೊಂಡಂತೆ ನೈಸರ್ಗಿಕ ಅನಿಲ ಮೂಲಸೌಕರ್ಯದ ತ್ವರಿತ ಅಭಿವೃದ್ಧಿಯನ್ನು ಸಕ್ರಿಯಗೊಳಿಸುತ್ತದೆ. ಇದು ಪಿ ಎನ್‌ ಜಿ ನೆಟ್‌ವರ್ಕ್ ಬೆಳವಣಿಗೆಯನ್ನು ವೇಗಗೊಳಿಸುತ್ತದೆ, ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಶುದ್ಧ ಇಂಧನಗಳಿಗೆ ಪರಿವರ್ತನೆಯನ್ನು ಬೆಂಬಲಿಸುತ್ತದೆ, ಇದರಿಂದಾಗಿ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ ಎಂದು ನಿರೀಕ್ಷಿಸಲಾಗಿದೆ.
  • ಪಿ ಎನ್‌ ಜಿ ಆರ್‌ ಬಿ ವಿಸ್ತರಣೆಯನ್ನು ವೇಗಗೊಳಿಸಲು ಸೂಚಿಸಿದೆ ಮತ್ತು 'ನ್ಯಾಷನಲ್ ಪಿ ಎನ್‌ ಜಿ ಡ್ರೈವ್ 2.0' ಅನ್ನು 30.06.2026 ರವರೆಗೆ ವಿಸ್ತರಿಸಲಾಗಿದೆ.
  • ಸ್ವಚ್ಛ, ಹೆಚ್ಚು ಸುರಕ್ಷಿತ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಪ್ರೋತ್ಸಾಹಿಸಲು, ಭಾರತ ಸರ್ಕಾರವು ಮಾದರಿ ಕರಡು ರಾಜ್ಯ ಸಿಬಿಜಿ ನೀತಿಯನ್ನು ಅಭಿವೃದ್ಧಿಪಡಿಸಿದೆ. ಈ ಮಾದರಿ ನೀತಿಯು ರಾಜ್ಯಗಳು ಸಿಬಿಜಿ ಅಭಿವೃದ್ಧಿಗಾಗಿ ತಮ್ಮದೇ ಆದ ಹೂಡಿಕೆದಾರ ಸ್ನೇಹಿ ಮತ್ತು ಅನುಷ್ಠಾನ-ಆಧಾರಿತ ಪರಿಸರ ವ್ಯವಸ್ಥೆಯನ್ನು ರಚಿಸಲು ಅನುವು ಮಾಡಿಕೊಡಲು ಸಮಗ್ರ ಮಾರ್ಗದರ್ಶಿ ಚೌಕಟ್ಟಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿದೆ. ಇದನ್ನು ಆಯ್ಕೆ ಮಾಡುವ ರಾಜ್ಯಗಳಿಗೆ ವಾಣಿಜ್ಯ ಎಲ್‌ ಪಿ ಜಿ ಯ ಹೆಚ್ಚುವರಿ ಹಂಚಿಕೆಯ ಮುಂದಿನ ಕಂತಿಗೆ ಆದ್ಯತೆ ನೀಡಲಾಗುವುದು.
  • ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ದಿನಾಂಕ 07.04.2026 ರ ಆದೇಶದ ಪ್ರಕಾರ ಸಿಜಿಡಿ ನೆಟ್‌ವರ್ಕ್/ಮೂಲಸೌಕರ್ಯಕ್ಕಾಗಿ 15 ದಿನಗಳಲ್ಲಿ ಸ್ಥಾಪಿಸಲು ಅಥವಾ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಲು SPCB/PCC ಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಸಿಪಿಸಿಬಿಗೆ ನಿರ್ದೇಶನ ನೀಡಿದೆ.
  • ಮಾರ್ಚ್ 2026 ರಿಂದೀಚೆಗೆ 5.01 ಲಕ್ಷಕ್ಕೂ ಹೆಚ್ಚು ಪಿ ಎನ್‌ ಜಿ ಸಂಪರ್ಕಗಳಿಗೆ ಅನಿಲ ಪೂರೈಸಲಾಗಿದೆ ಮತ್ತು 5.68 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.
  • 19.04.2026 ರವರೆಗೆ ಸುಮಾರು 39,400 ಪಿ ಎನ್‌ ಜಿ ಗ್ರಾಹಕರು ತಮ್ಮ ಎಲ್‌ ಪಿ ಜಿ ಸಂಪರ್ಕಗಳನ್ನು ಮರಳಿಸಿದ್ದಾರೆ.

ಕಚ್ಚಾ ತೈಲ ಪರಿಸ್ಥಿತಿ ಮತ್ತು ಸಂಸ್ಕರಣಾಗಾರ ಕಾರ್ಯಾಚರಣೆಗಳು

  • ಎಲ್ಲಾ ತೈಲ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನು ಹೊಂದಿವೆ. ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನುಗಳನ್ನು ನಿರ್ವಹಿಸಲಾಗುತ್ತಿದೆ.
  • ದೇಶೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ಎಲ್‌ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
  • ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್ ಪೂರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತರ-ಸಚಿವಾಲಯ ಜಂಟಿ ಕಾರ್ಯ ಗುಂಪನ್ನು (ಜೆಡಬ್ಲ್ಯೂಜಿ) ಸ್ಥಾಪಿಸಲಾಗಿದೆ. ತರುವಾಯ, ಭಾರತ ಸರ್ಕಾರವು 01.04.2026 ರ ಆದೇಶದ ಮೂಲಕ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ ಗಳು ಸೇರಿದಂತೆ ತೈಲ ಸಂಸ್ಕರಣಾಗಾರ ಕಂಪನಿಗಳು ಉನ್ನತ ತಂತ್ರಜ್ಞಾನ ಕೇಂದ್ರ (ಸಿ ಎಚ್‌ ಟಿ) ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ಕೆಲವು ಕನಿಷ್ಠ ಪ್ರಮಾಣದ ಸಿ3 ಮತ್ತು ಸಿ4 ಸ್ಟ್ರೀಮ್‌ಗಳನ್ನು ಲಭ್ಯವಾಗುವಂತೆ ಮಾಡಲು ಅನುಮತಿ ನೀಡಿದೆ.
  • ಔಷಧೀಯ ಇಲಾಖೆ, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯಿಂದ ಸ್ವೀಕರಿಸಿದ ವಿನಂತಿಗಳ ಆಧಾರದ ಮೇಲೆ, ಎಲ್‌ ಪಿ ಜಿ ಪೂಲ್‌ ನಿಂದ ದಿನಕ್ಕೆ 1000 ಮೆಟ್ರಿಕ್‌ ಟನ್ ಗೆ ಔಷಧ ಮತ್ತು ರಾಸಾಯನಿಕ ವಲಯದ ಕಂಪನಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
  • 9 ಏಪ್ರಿಲ್ 2026 ರಿಂದ 4400 ಮೆಟ್ರಿಕ್ ಟನ್‌‌ ಗಿಂತ ಹೆಚ್ಚು ಪ್ರೊಪಿಲೀನ್ ಮಾರಾಟವಾಗಿದೆ.

ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು

  • ದೇಶಾದ್ಯಂತ ಚಿಲ್ಲರೆ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
  • ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆಯಲ್ಲಿ ಅಸಹಜ ಏರಿಕೆಯಾಗಿದೆ; ಆದಾಗ್ಯೂ, ಗ್ರಾಹಕರನ್ನು ರಕ್ಷಿಸಲು ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ ಗೆ ₹10 ರಷ್ಟು ಕಡಿಮೆ ಮಾಡಿದೆ.
  • ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು 11.04.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಡೀಸೆಲ್ ಮತ್ತು ಎಟಿಎಫ್ ಮೇಲಿನ ರಫ್ತು ತೆರಿಗೆಯನ್ನು ಹೆಚ್ಚಿಸಲಾಗಿದೆ.
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗದೆ ಉಳಿದಿವೆ ಮತ್ತು ಸರ್ಕಾರಿ ತೈಲ ಕಂಪನಿಗಳ ಮಳಿಗೆಗಳಲ್ಲಿ ಯಾವುದೇ ಬೆಲೆ ಏರಿಕೆಯಾಗಿಲ್ಲ.

ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು

  • ನಿಯಮಿತ ಹಂಚಿಕೆಗಿಂತ ಹೆಚ್ಚುವರಿಯಾಗಿ ರಾಜ್ಯಗಳಿಗೆ 48,000 ಕೆಎಲ್ ಸೀಮೆಎಣ್ಣೆಯನ್ನು ಒದಗಿಸಲಾಗಿದೆ.
  • 18 ರಾಜ್ಯಗಳು ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಆದರೆ ಹಿಮಾಚಲ ಪ್ರದೇಶ ಮತ್ತು ಲಡಾಖ್ ಅಗತ್ಯವಿಲ್ಲ ಎಂದು ತಿಳಿಸಿವೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಪರ್ಷಿಯನ್ ಕೊಲ್ಲಿಯಲ್ಲಿನ ಪ್ರಸ್ತುತ ಕಡಲ ಪರಿಸ್ಥಿತಿಯ ಜೊತೆಗೆ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಕೈಗೊಳ್ಳಲಾದ ಕ್ರಮಗಳ ಬಗ್ಗೆ ಬಂದರುಗಳು, ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಮಾಹಿತಿ ನೀಡಿತು.

  • ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಾಮಾನ್ಯವಾಗಿವೆ, ಯಾವುದೇ ದಟ್ಟಣೆ ವರದಿಯಾಗಿಲ್ಲ. ಈ ಸಂದರ್ಭದಲ್ಲಿ, ಸರಕು ಸಾಗಣೆ ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಮೊದಲೇ ತಿಳಿಸಿದಂತೆ, ಸುಮಾರು ಶೇ. 97 ರಷ್ಟು ಹಿಂತಿರುಗುವ ಕಂಟೇನರ್‌ ಗಳನ್ನು ಪ್ರಮುಖ ಪಶ್ಚಿಮ ಬಂದರುಗಳಿಂದ ತೆರವುಗೊಳಿಸಲಾಗಿದೆ.
  • ಬಂದರುಗಳಲ್ಲಿನ ಯಾರ್ಡ್ ಆಕ್ಯುಪೆನ್ಸಿ (ಸ್ಥಳ ಬಳಕೆ) ಶೇ. 80 ರಿಂದ ಶೇ. 60 ಕ್ಕೆ ಇಳಿಕೆಯಾಗಿದೆ, ಇದು ಮೂಲಸೌಕರ್ಯದ ಮೇಲಿನ ಒತ್ತಡ ಕಡಿಮೆಯಾಗಿರುವುದನ್ನು ತೋರಿಸುತ್ತದೆ.
  • 28 ಫೆಬ್ರವರಿ 2026 ರಿಂದ, ಒಟ್ಟು 9 ಎಲ್‌ ಪಿ ಜಿ ಹಡಗುಗಳು ಮತ್ತು 1 ಕಚ್ಚಾ ತೈಲ ಹಡಗು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಇದು ಈ ಪ್ರದೇಶದಲ್ಲಿ ಕಡಲ ಚಲನೆಯ ಕ್ರಮೇಣ ಸ್ಥಿರೀಕರಣವನ್ನು ಪ್ರತಿಬಿಂಬಿಸುತ್ತದೆ.
  • ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಪಶ್ಚಿಮ ಏಷ್ಯಾದಲ್ಲಿನ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ವಿದೇಶಾಂಗ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯದಿಂದ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ, ಇದು ನಾವಿಕರ ಕಲ್ಯಾಣ ಮತ್ತು ಕಡಲ ಕಾರ್ಯಾಚರಣೆಗಳ ನಿರಂತರತೆಯನ್ನು ಖಚಿತಪಡಿಸುತ್ತದೆ.
  • ಈ ಪ್ರದೇಶದ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳನ್ನು ಒಳಗೊಂಡ ಯಾವುದೇ ಘಟನೆ ವರದಿಯಾಗಿಲ್ಲ.
  • ಡಿಜಿ ಶಿಪ್ಪಿಂಗ್ ಕಂಟ್ರೋಲ್ ರೂಮ್ ಸಕ್ರಿಯಗೊಂಡ ನಂತರ 7,086 ಕರೆಗಳು ಮತ್ತು 14,975 ಕ್ಕೂ ಹೆಚ್ಚು ಇಮೇಲ್‌ ಗಳನ್ನು ನಿರ್ವಹಿಸಿದೆ.
  • ಇದುವರೆಗೆ 2,590 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಬಂದ 27 ಮಂದಿ ಸೇರಿದ್ದಾರೆ.

ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ

ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ, ಆ ಪ್ರದೇಶದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಗಮನ ಹರಿಸಲಾಗುತ್ತಿದೆ. ಈ ಕೆಳಗಿನ ಮಾಹಿತಿಯನ್ನು ನೀಡಲಾಗಿದೆ:

  • ಪ್ರಧಾನಮಂತ್ರಿಯವರ ನಿರ್ದೇಶನದಂತೆ, ಗಲ್ಫ್ ದೇಶಗಳೊಂದಿಗೆ ಉದ್ದೇಶಿತ ಸಂಪರ್ಕ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ.
  • ರಾಷ್ಟ್ರೀಯ ಭದ್ರತಾ ಸಲಹೆಗಾರರು 19 ಏಪ್ರಿಲ್ 2026 ರಂದು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು.
  • ಇದಕ್ಕೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವರು ಯುಎಇಗೆ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಕತಾರ್‌ ಗೆ ಭೇಟಿ ನೀಡಿದ್ದರು.
  • ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಸಹ ಗಲ್ಫ್ ಪ್ರದೇಶದ ತಮ್ಮ ಹಲವಾರು ಸಹವರ್ತಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
  • ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಮೀಸಲಾದ ವಿಶೇಷ ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅವು ಭಾರತೀಯ ಮಿಷನ್‌ ಗಳೊಂದಿಗೆ (ರಾಯಭಾರ ಕಚೇರಿಗಳು) ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ.
  • ಮಾಹಿತಿ ಹಂಚಿಕೆ ಮತ್ತು ಪ್ರಯತ್ನಗಳ ಉತ್ತಮ ಹೊಂದಾಣಿಕೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದೆ.
  • ಭಾರತೀಯ ಮಿಷನ್‌ ಗಳು ಮತ್ತು ಪೋಸ್ಟ್‌ ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿಗಳನ್ನು ನಡೆಸುತ್ತಿವೆ ಮತ್ತು ಭಾರತೀಯ ಪ್ರಜೆಗಳಿಗೆ ಸಕ್ರಿಯವಾಗಿ ಸಹಾಯ ಮಾಡುತ್ತಿವೆ. ಅವು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ.
  • ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು, ವಿಮಾನ ಮತ್ತು ಪ್ರಯಾಣದ ಪರಿಸ್ಥಿತಿಗಳು, ಕಾನ್ಸುಲರ್ ಸೇವೆಗಳು ಮತ್ತು ನಮ್ಮ ಸಮುದಾಯವನ್ನು ಬೆಂಬಲಿಸಲು ಕೈಗೊಳ್ಳಲಾಗುತ್ತಿರುವ ವಿವಿಧ ಕಲ್ಯಾಣ ಕ್ರಮಗಳ ಮಾಹಿತಿಯನ್ನು ಒಳಗೊಂಡಂತೆ ನಿಯಮಿತವಾಗಿ ನವೀಕರಿಸಿದ ಸಲಹೆಗಳನ್ನು ನೀಡಲಾಗುತ್ತಿದೆ.
  • ಭಾರತೀಯ ಮಿಷನ್‌ ಗಳು ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ರಾಯಭಾರಿಗಳು ಭಾರತೀಯ ಸಮುದಾಯದ ಸಂಘಗಳು, ಸಂಸ್ಥೆಗಳು, ವೃತ್ತಿಪರ ಗುಂಪುಗಳು ಮತ್ತು ಭಾರತೀಯ ಕಂಪನಿಗಳೊಂದಿಗೆ ಅವರ ಕಳವಳಗಳನ್ನು ಪರಿಹರಿಸಲು ನಿಯಮಿತವಾಗಿ ಸಂವಹನ ನಡೆಸುತ್ತಿದ್ದಾರೆ.
  • ಈ ಪ್ರದೇಶದಲ್ಲಿರುವ ಭಾರತೀಯ ನಾವಿಕರ ಕಲ್ಯಾಣಕ್ಕೆ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದೆ. ಭಾರತೀಯ ಮಿಷನ್‌ಗಳು ಸ್ಥಳೀಯ ಅಧಿಕಾರಿಗಳು ಮತ್ತು ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುವುದು, ಕಾನ್ಸುಲರ್ ನೆರವು ನೀಡುವುದು ಮತ್ತು ಭಾರತಕ್ಕೆ ಮರಳುವ ವಿನಂತಿಗಳಿಗೆ ಸಹಾಯ ಮಾಡುವುದು ಸೇರಿದಂತೆ ಎಲ್ಲಾ ರೀತಿಯ ನೆರವನ್ನು ನೀಡುತ್ತಿವೆ.
  • ವೈಮಾನಿಕ ಪ್ರದೇಶ ಮುಕ್ತವಾಗಿರುವ ದೇಶಗಳಿಂದ ಭಾರತಕ್ಕೆ ವಿಮಾನಗಳು ಕಾರ್ಯನಿರ್ವಹಿಸುತ್ತಲೇ ಇವೆ. ಫೆಬ್ರವರಿ 28 ರಿಂದ ಸುಮಾರು 11,61,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ.
  • ಯುಎಇಯಲ್ಲಿ, ಕಾರ್ಯಾಚರಣೆ ಮತ್ತು ಸುರಕ್ಷತೆಯ ಪರಿಗಣನೆಗಳ ಆಧಾರದ ಮೇಲೆ ಏರ್ಲೈನ್ಸ್ ಯುಎಇ ಮತ್ತು ಭಾರತದ ನಡುವೆ ಸೀಮಿತ ವಾಣಿಜ್ಯ ವಿಮಾನಗಳನ್ನು ಓಡಿಸುತ್ತಿವೆ, ಇಂದು ಯುಎಇ ಮತ್ತು ಭಾರತದ ನಡುವೆ ಸುಮಾರು 110 ವಿಮಾನಗಳನ್ನು ನಿರೀಕ್ಷಿಸಲಾಗಿದೆ.
  • ಸೌದಿ ಅರೇಬಿಯಾ ಮತ್ತು ಓಮನ್‌ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಸಂಚರಿಸುತ್ತಿವೆ.
  • ಕತಾರ್ ವೈಮಾನಿಕ ಪ್ರದೇಶವು ಭಾಗಶಃ ತೆರೆದಿರುವುದರಿಂದ, ಕತಾರ್ ಏರ್ವೇಸ್ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳ ಹಾರಾಟ ನಡೆಸುತ್ತಿದೆ.
  • ಕುವೈತ್ ವೈಮಾನಿಕ ಪ್ರದೇಶವು ಮುಚ್ಚಲ್ಪಟ್ಟಿದೆ. ಜಜೀರಾ ಏರ್ವೇಸ್ ಮತ್ತು ಕುವೈತ್ ಏರ್ವೇಸ್ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ನಿಗದಿತವಲ್ಲದ ವಾಣಿಜ್ಯ ವಿಮಾನಗಳ ಹಾರಾಟವನ್ನು ನಡೆಸುತ್ತಿವೆ.
  • ಬಹ್ರೇನ್ ವೈಮಾನಿಕ ಪ್ರದೇಶವು ಮುಕ್ತವಾಗಿದೆ. ಬಹ್ರೇನ್‌ನ ಗಲ್ಫ್ ಏರ್ ಇಂದಿನಿಂದ ಬಹ್ರೇನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
  • ಇರಾಕ್ ವೈಮಾನಿಕ ಪ್ರದೇಶವು ಮುಕ್ತವಾಗಿದ್ದು, ಈ ಪ್ರದೇಶದ ಇತರ ಸ್ಥಳಗಳಿಗೆ ಸೀಮಿತ ವಿಮಾನ ಕಾರ್ಯಾಚರಣೆಗಳಿವೆ, ಇದನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಬಹುದು.
  • ಇರಾನ್ ವೈಮಾನಿಕ ಪ್ರದೇಶವು ಸರಕು ಸಾಗಣೆ ಮತ್ತು ಚಾರ್ಟರ್ಡ್ ವಿಮಾನಗಳಿಗಾಗಿ ಭಾಗಶಃ ತೆರೆದಿದೆ. ಟೆಹ್ರಾನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳು ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತಕ್ಕೆ ಪ್ರಯಾಣಿಸಲು ಅನುಕೂಲ ಮಾಡಿಕೊಡುವುದನ್ನು ಮುಂದುವರಿಸಿದೆ.
  • ಇಸ್ರೇಲ್: ಇಸ್ರೇಲ್ ವೈಮಾನಿಕ ಪ್ರದೇಶವು ಮುಕ್ತವಾಗಿದೆ ಮತ್ತು ಈ ಪ್ರದೇಶದ ಇತರ ಸ್ಥಳಗಳಿಗೆ ಸೀಮಿತ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ, ಇದನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಬಹುದು. ನಾವು ಇಸ್ರೇಲ್‌ನಿಂದ ಜೋರ್ಡಾನ್ ಮತ್ತು ಈಜಿಪ್ಟ್ ಮೂಲಕ ಭಾರತೀಯ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಲು ಅನುಕೂಲ ಮಾಡಿಕೊಡುವುದನ್ನು ಮುಂದುವರಿಸಿದ್ದೇವೆ.

ಇರಾಕ್‌ನಿಂದ ಭಾರತೀಯ ನಾವಿಕರ ಮರಳುವಿಕೆಯ ಕುರಿತು ಇತ್ತೀಚಿನ ಮಾಹಿತಿ

· ಇರಾಕ್ ವೈಮಾನಿಕ ಪ್ರದೇಶವು ತೆರೆದ ನಂತರ, ಅಲ್ಲಿ ಸಿಲುಕಿಕೊಂಡಿದ್ದ 12 ಭಾರತೀಯ ನಾವಿಕರು ನಿನ್ನೆ ಮುಂಬೈಗೆ ಆಗಮಿಸಿದ್ದಾರೆ. ಬಾಗ್ದಾದ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅವರಿಗೆ ಎಲ್ಲಾ ರೀತಿಯ ಸಹಾಯವನ್ನು ಒದಗಿಸಿದೆ ಮತ್ತು ಅವರು ಭಾರತಕ್ಕೆ ಮರಳಲು ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ.

 

******

 


(ಪ್ರಕಟಣೆ ಐ.ಡಿ.: 2254313) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Gujarati , Tamil , Telugu , Malayalam