ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ವಲಯಗಳ ಸ್ಥಿತಿಗತಿ ಕುರಿತ ಮಾಹಿತಿ
ದೇಶದ ಎಲ್ಲಾ ಪೆಟ್ರೋಲ್ ಪಂಪ್ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಸಾಕಷ್ಟು ದಾಸ್ತಾನು ಲಭ್ಯವಿದೆ
ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಎಂದು ಸಲಹೆ ನೀಡಲಾಗಿದೆ
ಯೂರಿಯಾ ಘಟಕಗಳಿಗೆ ಪೂರೈಕೆಯು ಕಳೆದ 6 ತಿಂಗಳ ಸರಾಸರಿಯ ಶೇ. 70-75 ರಷ್ಟು ಸ್ಥಿರವಾಗಿದೆ; ಪೂರೈಕೆಯನ್ನು ಕಾಯ್ದುಕೊಳ್ಳಲು ಹೆಚ್ಚುವರಿ ಎಲ್ ಎನ್ ಜಿ ಮತ್ತು ಆರ್ ಎಲ್ ಎನ್ ಜಿ ಅನ್ನು ಪಡೆಯಲಾಗುತ್ತಿದೆ
ಮಾರ್ಚ್ ತಿಂಗಳಲ್ಲಿ ಗೃಹಬಳಕೆ, ವಾಣಿಜ್ಯ, ಹಾಸ್ಟೆಲ್, ಮೆಸ್ ಮತ್ತು ಕ್ಯಾಂಟೀನ್ ವಿಭಾಗಗಳಲ್ಲಿ 2.9 ಲಕ್ಷಕ್ಕೂ ಹೆಚ್ಚು ಗ್ಯಾಸ್ ಸಂಪರ್ಕಗಳನ್ನು ನೀಡಲಾಗಿದೆ
ಸುಮಾರು 94,000 ಮೆಟ್ರಿಕ್ ಟನ್ ಸರಕುಗಳನ್ನು ಹೊತ್ತ ಎರಡು ಎಲ್ ಪಿ ಜಿ ಹಡಗುಗಳು ಆ ಪ್ರದೇಶವನ್ನು ಸುರಕ್ಷಿತವಾಗಿ ದಾಟಿ ಭಾರತದ ತೀರದತ್ತ ಚಲಿಸುತ್ತಿವೆ
ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿದ್ದು, ಯಾವುದೇ ದಟ್ಟಣೆ ವರದಿಯಾಗಿಲ್ಲ.
ಗಲ್ಫ್ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಸರ್ಕಾರವು ನಿಕಟವಾಗಿ ಗಮನಿಸುತ್ತಿದೆ; ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಅತ್ಯುನ್ನತ ಆದ್ಯತೆ ನೀಡಲಾಗಿದೆ
ರಾಯಭಾರ ಕಚೇರಿಗಳು ನಾವಿಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರಿಗೆ ವೀಸಾ, ಕಾನ್ಸುಲರ್ ಮತ್ತು ಲಾಜಿಸ್ಟಿಕ್ ಬೆಂಬಲದ ಮೂಲಕ ನೆರವು ನೀಡುವುದನ್ನು ಮುಂದುವರಿಸಿವೆ
ಪ್ರಕಟಣಾ ದಿನಾಂಕ:
29 MAR 2026 3:10PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ನಡುವೆ, ಭಾರತ ಸರ್ಕಾರವು ನಿರಂತರ ಮೇಲ್ವಿಚಾರಣೆಯನ್ನು ನಡೆಸುತ್ತಿದೆ ಮತ್ತು ಪ್ರಮುಖ ವಲಯಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಸಿದ್ಧತೆ ಹಾಗೂ ಪ್ರತಿಕ್ರಿಯೆ ಕ್ರಮಗಳನ್ನು ಜಾರಿಗೆ ತರುತ್ತಿದೆ. ಅಡೆತಡೆಯಿಲ್ಲದ ಇಂಧನ ಪೂರೈಕೆಯನ್ನು ಕಾಯ್ದುಕೊಳ್ಳುವುದು, ಕಡಲ ಕಾರ್ಯಾಚರಣೆಗಳನ್ನು ರಕ್ಷಿಸುವುದು ಮತ್ತು ಈ ಪ್ರದೇಶದಲ್ಲಿರುವ ಭಾರತೀಯ ನಾಗರಿಕರಿಗೆ ಅಗತ್ಯ ನೆರವು ನೀಡುವುದರ ಮೇಲೆ ಪ್ರಯತ್ನಗಳು ಕೇಂದ್ರೀಕೃತವಾಗಿವೆ. 2026 ರ ಮಾರ್ಚ್ 29 ರವರೆಗೆ ಈ ಕ್ಷೇತ್ರಗಳಲ್ಲಿ ಕೈಗೊಳ್ಳಲಾದ ಕ್ರಮಗಳ ಇತ್ತೀಚಿನ ಮಾಹಿತಿ ಈ ಕೆಳಗಿನಂತಿದೆ:
ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ
ಹಾರ್ಮುಜ್ ಜಲಸಂಧಿಯ ನಿರಂತರ ಮುಚ್ಚುವಿಕೆಯ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್ ಪಿ ಜಿ ಲಭ್ಯತೆಯನ್ನು ಕಾಯ್ದುಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಸ್ಥಿತಿಗತಿ ಹೀಗಿದೆ:
ಕಚ್ಚಾ ತೈಲ/ಸಂಸ್ಕರಣಾಗಾರಗಳು
· ಎಲ್ಲಾ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳನ್ನು ಹೊಂದಿವೆ. ದೇಶವು ಪೆಟ್ರೋಲ್ ಮತ್ತು ಡೀಸೆಲ್ನ ಸಾಕಷ್ಟು ದಾಸ್ತಾನುಗಳನ್ನು ಸಹ ಕಾಯ್ದುಕೊಂಡಿದೆ.
· ಗೃಹಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ದೇಶೀಯ ಎಲ್ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
ಚಿಲ್ಲರೆ ಮಾರಾಟ ಕೇಂದ್ರಗಳು
· ದೇಶಾದ್ಯಂತ ಎಲ್ಲಾ ಚಿಲ್ಲರೆ ಮಾರಾಟ ಕೇಂದ್ರಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
· ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ.
· ಇದಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ 21.5 ರೂ. ಮತ್ತು ಏವಿಯೇಷನ್ ಟರ್ಬೈನ್ ಫ್ಯೂಯಲ್ ಮೇಲೆ 29.5 ರೂ. ರಫ್ತು ಸುಂಕವನ್ನು ವಿಧಿಸಿದೆ.
· ಕೆಲವು ಪ್ರದೇಶಗಳಲ್ಲಿ ಆತಂಕದ ಖರೀದಿ ವರದಿಯಾಗಿದೆ. ಕೆಲವು ರಾಜ್ಯಗಳಲ್ಲಿ ಹರಡಿದ ವದಂತಿಗಳಿಂದಾಗಿ ಮಾರಾಟ ಕೇಂದ್ರಗಳಲ್ಲಿ ಅತಿಯಾದ ಜನದಟ್ಟಣೆ ಮತ್ತು ಅಸಹಜ ಮಾರಾಟ ಕಂಡುಬಂದಿದೆ. ಆದಾಗ್ಯೂ, ದೇಶದ ಎಲ್ಲಾ ಪೆಟ್ರೋಲ್ ಪಂಪ್ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ತಿಳಿಸಲಾಗಿದೆ.
· ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಎಂದು ಸರ್ಕಾರವು ತನ್ನ ಸಲಹೆಯನ್ನು ಪುನರುಚ್ಚರಿಸಿದೆ.
ನೈಸರ್ಗಿಕ ಅನಿಲ
· ಮನೆಬಳಕೆಯ ಪಿ ಎನ್ ಜಿ ಮತ್ತು ಸಿ ಎನ್ ಜಿ-ಸಾರಿಗೆಯ ಗ್ರಾಹಕರಿಗೆ ಆದ್ಯತೆ ನೀಡಲಾಗಿದ್ದು, ಶೇ. 100 ರಷ್ಟು ಪೂರೈಕೆಯನ್ನು ಮಾಡಲಾಗುತ್ತಿದೆ.
· ಗ್ರಿಡ್ ಗೆ ಸಂಪರ್ಕ ಹೊಂದಿದ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪೂರೈಕೆಯು ಅವರ ಸರಾಸರಿ ಬಳಕೆಯ ಶೇ. 80 ರಷ್ಟಿದೆ.
· ವಾಣಿಜ್ಯ ಎಲ್ ಪಿ ಜಿ ಲಭ್ಯತೆಯ ಆತಂಕಗಳನ್ನು ನಿವಾರಿಸಲು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಮತ್ತು ಕ್ಯಾಂಟೀನ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್ ಜಿ ಸಂಪರ್ಕಗಳಿಗೆ ಆದ್ಯತೆ ನೀಡಲು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಸಿಜಿಡಿ) ಘಟಕಗಳಿಗೆ ಭಾರತ ಸರ್ಕಾರವು ಸಲಹೆ ನೀಡಿದೆ.
· ಕಾರ್ಯನಿರ್ವಹಿಸುತ್ತಿರುವ ಯೂರಿಯಾ ಘಟಕಗಳಿಗೆ ಪೂರೈಕೆಯು ಈಗ ಕಳೆದ 6 ತಿಂಗಳ ಸರಾಸರಿ ಬಳಕೆಯ ಶೇ. 70-75 ರಷ್ಟು ಸ್ಥಿರವಾಗಿದೆ. ಪೂರೈಕೆ ಮತ್ತು ಪೈಪ್ಲೈನ್ ಹೈಡ್ರಾಲಿಕ್ಸ್ ಅನ್ನು ಕಾಯ್ದುಕೊಳ್ಳಲು ಹೆಚ್ಚುವರಿ ಎಲ್ ಎನ್ ಜಿ ಕಾರ್ಗೋಗಳು ಮತ್ತು ರೀಗ್ಯಾಸಿಫೈಡ್ ಎಲ್ ಎನ್ ಜಿ ಅನ್ನು ಕೂಡ ಪಡೆಯಲಾಗುತ್ತಿದೆ.
· ರಸಗೊಬ್ಬರ ಘಟಕಗಳು ಸೇರಿದಂತೆ ಎಲ್ಲಾ ಕೈಗಾರಿಕಾ ಗ್ರಾಹಕರು ತಮ್ಮ ಹೆಚ್ಚುವರಿ ಅಗತ್ಯಗಳನ್ನು ಸ್ಪಾಟ್ ಆಧಾರದ ಮೇಲೆ ನೀಡಲು ಸೂಚಿಸಲಾಗಿದೆ, ಇದರಿಂದ ಅನಿಲ ಮಾರುಕಟ್ಟೆ ಕಂಪನಿಗಳು ಅವುಗಳನ್ನು ವ್ಯವಸ್ಥೆ ಮಾಡಬಹುದು.
· ಐಜಿಎಲ್, ಎಂಜಿಎಲ್, ಗೇಲ್ ಗ್ಯಾಸ್ ಮತ್ತು ಬಿಪಿಸಿಎಲ್ ನಂತಹ ಸಿಜಿಡಿ ಕಂಪನಿಗಳು ಗೃಹಬಳಕೆಯ ಮತ್ತು ವಾಣಿಜ್ಯ ಪಿ ಎನ್ ಜಿ ಸಂಪರ್ಕಗಳನ್ನು ಪಡೆಯಲು ಪ್ರೋತ್ಸಾಹಕಗಳನ್ನು ನೀಡಿವೆ.
· ಸಿಜಿಡಿ ಜಾಲದ ವಿಸ್ತರಣೆಗೆ ಅಗತ್ಯವಾದ ಅರ್ಜಿಗಳ ಅನುಮೋದನೆಯನ್ನು ತ್ವರಿತಗೊಳಿಸಲು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳಿಗೆ ಭಾರತ ಸರ್ಕಾರವು ವಿನಂತಿಸಿದೆ.
· ದಿನಾಂಕ 18.03.2026 ರ ಪತ್ರದ ಮೂಲಕ ಭಾರತ ಸರ್ಕಾರವು, ಎಲ್ ಪಿ ಜಿ ಯಿಂದ ಪಿ ಎನ್ ಜಿ ಗೆ ದೀರ್ಘಕಾಲೀನ ಸ್ಥಿತ್ಯಂತರಕ್ಕೆ ಸಹಾಯ ಮಾಡುವ ರಾಜ್ಯಗಳಿಗೆ ವಾಣಿಜ್ಯ ಎಲ್ ಪಿ ಜಿಯ ಹೆಚ್ಚುವರಿ ಶೇ. 10 ರಷ್ಟು ಹಂಚಿಕೆಯನ್ನು ನೀಡಿದೆ. ತರುವಾಯ, ಸಿಜಿಡಿ ಜಾಲ ಉತ್ತೇಜಿಸಲು ಸುಧಾರಣಾ ಕ್ರಮಗಳನ್ನು ಕೈಗೊಂಡ ಹಲವು ರಾಜ್ಯಗಳಿಂದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು (MoPNG) ಅರ್ಜಿಗಳನ್ನು ಸ್ವೀಕರಿಸಿದೆ. ಅದರಂತೆ, ಕೆಲವು ರಾಜ್ಯಗಳಿಗೆ ಹೆಚ್ಚುವರಿ ಹಂಚಿಕೆಯನ್ನು ಶಿಫಾರಸು ಮಾಡಲಾಗಿದೆ.
· ಪೈಪ್ಲೈನ್ ಮೂಲಸೌಕರ್ಯವು ಹತ್ತಿರದಲ್ಲಿ ಲಭ್ಯವಿರುವ ಕಡೆಗಳಲ್ಲಿ ವಸತಿ ಶಾಲೆಗಳು ಮತ್ತು ಕಾಲೇಜುಗಳು, ಹಾಸ್ಟೆಲ್ ಗಳು, ಸಮುದಾಯ ಅಡುಗೆ ಮನೆಗಳು, ಅಂಗನವಾಡಿ ಅಡುಗೆ ಮನೆಗಳು ಇತ್ಯಾದಿಗಳಿಗೆ 5 ದಿನಗಳೊಳಗೆ ಪಿ ಎನ್ ಜಿ ಸಂಪರ್ಕ ಕಲ್ಪಿಸಲು ಎಲ್ಲಾ ಸಿಜಿಡಿ ಘಟಕಗಳಿಗೆ ಪಿ ಎನ್ ಜಿ ಆರ್ ಬಿ ತನ್ನ 23.03.2026 ರ ಆದೇಶದ ಮೂಲಕ ನಿರ್ದೇಶನ ನೀಡಿದೆ.
· ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 24.03.2026 ರ ಪತ್ರದಲ್ಲಿ, ಸಿಜಿಡಿ ಮೂಲಸೌಕರ್ಯಕ್ಕಾಗಿ 3 ತಿಂಗಳ ಅವಧಿಗೆ ವಿಶೇಷ ಕ್ರಮವಾಗಿ "ಕಡಿಮೆ ಸಮಯದ ಮಿತಿಯೊಂದಿಗೆ ತ್ವರಿತ ಅನುಮೋದನೆ ಚೌಕಟ್ಟು" ಅಳವಡಿಸಿಕೊಂಡಿರುವುದಾಗಿ ತಿಳಿಸಿದೆ; ಇದರಲ್ಲಿ ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪ್ರಕ್ರಿಯೆಗೊಳಿಸಲಾಗುತ್ತದೆ.
· ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ (ಪೈಪ್ಲೈನ್ ಅಳವಡಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026' ಅನ್ನು ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್ಲೈನ್ ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಸಮಯಬದ್ಧ ಚೌಕಟ್ಟನ್ನು ಒದಗಿಸುತ್ತದೆ; ಇದು ಅನುಮೋದನೆಗಳು ಮತ್ತು ಭೂಮಿಯ ಲಭ್ಯತೆಯಲ್ಲಿನ ವಿಳಂಬಗಳನ್ನು ನಿವಾರಿಸುತ್ತದೆ ಮತ್ತು ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯಗಳ ವೇಗದ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ಇದು ಪಿ ಎನ್ ಜಿ ಜಾಲದ ಬೆಳವಣಿಗೆಯನ್ನು ವೇಗಗೊಳಿಸಲು, ಕೊನೆಯ ಹಂತದ ಸಂಪರ್ಕವನ್ನು ಹೆಚ್ಚಿಸಲು ಮತ್ತು ಸ್ವಚ್ಛ ಇಂಧನಗಳತ್ತ ಸ್ಥಿತ್ಯಂತರಗೊಳ್ಳಲು ಬೆಂಬಲ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದರಿಂದಾಗಿ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ.
· ರಕ್ಷಣಾ ವಲಯದ ಎಲ್ಲಾ ವಸತಿ ಪ್ರದೇಶಗಳಲ್ಲಿ/ಯೂನಿಟ್ ಲೈನ್ ಗಳಲ್ಲಿ ಪಿ ಎನ್ ಜಿ ಮೂಲಸೌಕರ್ಯ ಅಳವಡಿಕೆಯನ್ನು ತ್ವರಿತಗೊಳಿಸಲು ರಕ್ಷಣಾ ಸಚಿವಾಲಯವು 27.03.2026 ರ ಪತ್ರದ ಮೂಲಕ ಜೂನ್ 30, 2026 ರವರೆಗೆ ಜಾರಿಯಲ್ಲಿರುವಂತೆ ಅಲ್ಪಾವಧಿಯ ನೀತಿ ಮಾರ್ಪಾಡನ್ನು ಹೊರಡಿಸಿದೆ.
· ಮಾರ್ಚ್ ತಿಂಗಳ ಅವಧಿಯಲ್ಲಿ, ಮನೆಬಳಕೆ, ವಾಣಿಜ್ಯ, ಹಾಸ್ಟೆಲ್, ಮೆಸ್, ಕ್ಯಾಂಟೀನ್ ಸೇರಿದಂತೆ 2.9 ಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ಅನಿಲೀಕರಣಗೊಳಿಸಲಾಗಿದೆ.
ಎಲ್ ಪಿ ಜಿ
· ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.
ಮನೆಬಳಕೆಯ ಎಲ್ ಪಿ ಜಿ ಪೂರೈಕೆ:
· ಎಲ್ ಪಿ ಜಿ ವಿತರಕರಲ್ಲಿ ಯಾವುದೇ ಕೊರತೆ ವರದಿಯಾಗಿಲ್ಲ.
· ಆನ್ಲೈನ್ ಸಿಲಿಂಡರ್ ಬುಕಿಂಗ್ ಉದ್ಯಮದ ಆಧಾರದ ಮೇಲೆ ನಿನ್ನೆ ಶೇ. 94 ಕ್ಕೆ ಏರಿದೆ.
· ವಿತರಕರ ಮಟ್ಟದಲ್ಲಿ ಅಕ್ರಮ ವರ್ಗಾವಣೆ ತಡೆಯಲು, ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ಆಧಾರಿತ ವಿತರಣೆಯನ್ನು ಫೆಬ್ರವರಿಯ ಶೇ. 53 ರಿಂದ ನಿನ್ನೆ ಶೇ. 84 ಕ್ಕೆ ಹೆಚ್ಚಿಸಲಾಗಿದೆ.
· ನಿನ್ನೆ ಒಂದೇ ದಿನ 55 ಲಕ್ಷಕ್ಕೂ ಹೆಚ್ಚು ಎಲ್ ಪಿ ಜಿ ರೀಫಿಲ್ ಗಳನ್ನು ವಿತರಿಸಲಾಗಿದೆ.
· ಮನೆಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳ ವಿತರಣೆ ಸಹಜವಾಗಿದೆ.
ವಾಣಿಜ್ಯ ಎಲ್ ಪಿ ಜಿ ಪೂರೈಕೆ:
· ಸರ್ಕಾರವು ಈಗಾಗಲೇ ವಾಣಿಜ್ಯ ಎಲ್ ಪಿ ಜಿ ಪೂರೈಕೆಯನ್ನು ಶೇ. 20 ರಷ್ಟು ಪುನಃಸ್ಥಾಪಿಸಿದೆ. ಸುಧಾರಣೆಗಳನ್ನು ತರುವ ರಾಜ್ಯಗಳಿಗೆ ಹೆಚ್ಚುವರಿ ಶೇ. 10 ಹಂಚಿಕೆಯನ್ನು 18.03.2026 ರಂದು ಪ್ರಸ್ತಾಪಿಸಲಾಗಿತ್ತು.
· 21.03.2026 ರಂದು ಮತ್ತೊಂದು ಶೇ. 20 ಹಂಚಿಕೆಯನ್ನು ಅನುಮತಿಸಲಾಗಿದ್ದು, ಇದರಿಂದ ಒಟ್ಟು ಹಂಚಿಕೆ ಶೇ. 50 ಕ್ಕೆ ತಲುಪಿದೆ. ಇದನ್ನು ರೆಸ್ಟೋರೆಂಟ್ ಗಳು, ಡಾಬಾಗಳು, ಹೋಟೆಲ್ ಗಳು, ಕೈಗಾರಿಕಾ ಕ್ಯಾಂಟೀನ್ ಗಳು, ಆಹಾರ ಸಂಸ್ಕರಣೆ, ಸಬ್ಸಿಡಿ ದರದ ಕ್ಯಾಂಟೀನ್ ಗಳು ಮತ್ತು ವಲಸೆ ಕಾರ್ಮಿಕರಿಗೆ ನೀಡುವ 5 ಕೆಜಿ ಸಿಲಿಂಡರ್ ಗಳಿಗೆ ಆದ್ಯತೆಯ ಮೇಲೆ ನೀಡಲಾಗುವುದು.
· ಭಾರತ ಸರ್ಕಾರವು 27.03.2026 ರ ಪತ್ರದ ಮೂಲಕ ವಾಣಿಜ್ಯ ಎಲ್ ಪಿ ಜಿ ಗಾಗಿ ಹೆಚ್ಚುವರಿ ಶೇ. 20 ರಷ್ಟು ಹಂಚಿಕೆ ಮಾಡಲು ನಿರ್ಧರಿಸಿದೆ (ಇದು ಶೇ. 10 ಸುಧಾರಣೆ ಆಧಾರಿತ ಸೇರಿದಂತೆ ಒಟ್ಟು ವಾಣಿಜ್ಯ ಹಂಚಿಕೆಯನ್ನು ಬಿಕ್ಕಟ್ಟಿನ ಪೂರ್ವ ಹಂತದ ಶೇ. 70 ಕ್ಕೆ ತರುತ್ತದೆ). ಈ ಹೆಚ್ಚುವರಿ ಶೇ. 20 ರಷ್ಟು ಹಂಚಿಕೆಯನ್ನು ಉಕ್ಕು, ಆಟೋಮೊಬೈಲ್, ಜವಳಿ, ಬಣ್ಣ, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಗಳಿಗೆ ಆದ್ಯತೆ ನೀಡುವ ಕೈಗಾರಿಕೆಗಳಿಗೆ ನೀಡಲಾಗುವುದು. ಇವುಗಳಲ್ಲಿ, ಸಂಸ್ಕರಣಾ ಕೈಗಾರಿಕೆಗಳಿಗೆ ಅಥವಾ ನೈಸರ್ಗಿಕ ಅನಿಲದಿಂದ ಬದಲಾಯಿಸಲಾಗದ ವಿಶೇಷ ತಾಪನ ಉದ್ದೇಶಗಳಿಗಾಗಿ ಎಲ್ ಪಿ ಜಿ ಅಗತ್ಯವಿರುವವರಿಗೆ ಆದ್ಯತೆ ನೀಡಬೇಕು.
· ನಿನ್ನೆ, ಸುಮಾರು 64,000 – 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗಿದೆ.
· ಭಾರತ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ 28 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಗೃಹೇತರ ಎಲ್ ಪಿ ಜಿ ಅನ್ನು ಹಂಚಿಕೆ ಮಾಡಲು ಆದೇಶಗಳನ್ನು ಹೊರಡಿಸಿವೆ. ಉಳಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ, ಪಿ ಎಸ್ ಯು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ಗಳನ್ನು ಬಿಡುಗಡೆ ಮಾಡುತ್ತಿವೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಾಣಿಜ್ಯ ಘಟಕಗಳು 14ನೇ ಮಾರ್ಚ್ 2026 ರಿಂದ ಒಟ್ಟು 39368 ಮೆಟ್ರಿಕ್ ಟನ್ ಗಳನ್ನು ಪಡೆದಿವೆ.
ಸೀಮೆಎಣ್ಣೆ:
· ರಾಜ್ಯಗಳಿಗೆ ನಿಯಮಿತ ಹಂಚಿಕೆಗಿಂತ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.
· ಸೀಮೆಎಣ್ಣೆ ವಿತರಣೆಗಾಗಿ ಜಿಲ್ಲೆಗಳಲ್ಲಿ ಸ್ಥಳಗಳನ್ನು ಗುರುತಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗಿದೆ.
· 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎಸ್ ಕೆ ಒ ಹಂಚಿಕೆ ಆದೇಶಗಳನ್ನು ಹೊರಡಿಸಿವೆ. ಇದಲ್ಲದೆ, ಹಿಮಾಚಲ ಪ್ರದೇಶ ಮತ್ತು ಲಡಾಖ್ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಎಸ್ ಕೆ ಒ ಅವಶ್ಯಕತೆಯಿಲ್ಲ ಎಂದು ತಿಳಿಸಿವೆ.
ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಪಾತ್ರ
· ಅಗತ್ಯ ಸರಕುಗಳ ಕಾಯ್ದೆ, 1955 ಮತ್ತು ಎಲ್ ಪಿ ಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ, ಯಾವುದೇ ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರವು ಪ್ರಾಥಮಿಕ ಪಾತ್ರವನ್ನು ವಹಿಸಬೇಕು. ಭಾರತ ಸರ್ಕಾರವು ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಬಹು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್ ಗಳ ಮೂಲಕ ಇದನ್ನು ಪುನರುಚ್ಚರಿಸಿದೆ.
· ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಎಸಿಎಸ್/ಪ್ರಧಾನ ಕಾರ್ಯದರ್ಶಿ/ ಆಹಾರ ಮತ್ತು ನಾಗರಿಕ ಪೂರೈಕೆಯ ಕಾರ್ಯದರ್ಶಿಯವರಿಗೆ ಈ ಕೆಳಗಿನ ವಿನಂತಿಗಳನ್ನು ಮಾಡಲಾಗಿದೆ:
o ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ಸಾಂಸ್ಥಿಕಗೊಳಿಸುವುದು ಹಾಗೂ ನಿಯಮಿತವಾಗಿ ಸಾರ್ವಜನಿಕ ಸಲಹೆಗಳನ್ನು ಹೊರಡಿಸುವುದು.
o ಸಮರ್ಪಿತ ನಿಯಂತ್ರಣ ಕೊಠಡಿಗಳು ಅಥವಾ ಸಹಾಯವಾಣಿಗಳನ್ನು ಸ್ಥಾಪಿಸುವುದು.
o ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಸುಳ್ಳು ಸುದ್ದಿ ಅಥವಾ ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಗಮನಿಸುವುದು ಮತ್ತು ಅವುಗಳನ್ನು ಎದುರಿಸುವುದು.
o ಜಿಲ್ಲಾಡಳಿತಗಳ ಮೂಲಕ ದೈನಂದಿನ ಜಾರಿ ಪ್ರಕ್ರಿಯೆಗಳನ್ನು ತೀವ್ರಗೊಳಿಸುವುದು ಮತ್ತು ತೈಲ ಮಾರಾಟ ಕಂಪನಿಗಳ ಸಮನ್ವಯದೊಂದಿಗೆ ದಾಳಿ ಹಾಗೂ ತಪಾಸಣೆಗಳನ್ನು ಮುಂದುವರಿಸುವುದು.
o ತಮ್ಮ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ವಾಣಿಜ್ಯ ಎಲ್ ಪಿ ಜಿ ಹಂಚಿಕೆಯ ಆದೇಶಗಳನ್ನು ಹೊರಡಿಸುವುದು.
o ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಹಂಚಿಕೆಯಾದ ಸೀಮೆಎಣ್ಣೆಗಾಗಿ (ಎಸ್ ಕೆ ಒ) ಹಂಚಿಕೆ ಆದೇಶಗಳನ್ನು ಹೊರಡಿಸುವುದು.
o ಸಿಜಿಡಿ ವಿಸ್ತರಣೆಯನ್ನು ತ್ವರಿತಗೊಳಿಸುವುದು; ಇದರಲ್ಲಿ ರಸ್ತೆ ಬಳಕೆ ಹಕ್ಕು (RoW) ಅಥವಾ ಭೂಬಳಕೆ ಹಕ್ಕು (RoU) ಅನುಮತಿಗಳು ಮತ್ತು ದಿನದ 24 ಗಂಟೆಯೂ ಕೆಲಸ ಮಾಡಲು ನೀಡುವ ಅನುಮತಿ ಇತ್ಯಾದಿಗಳನ್ನು ವೇಗಗೊಳಿಸುವುದು ಸೇರಿದೆ.
o ಪಿ ಎನ್ ಜಿ ಅಳವಡಿಕೆ ಮತ್ತು ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸುವುದು.
o ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (MoPNG) ಜೊತೆಗಿನ ಸಮನ್ವಯಕ್ಕಾಗಿ ಹಿರಿಯ ನೋಡಲ್ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡುವುದು.
· ಭಾರತ ಸರ್ಕಾರವು 27.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತೊಮ್ಮೆ ವಿನಂತಿಸಿದ್ದು, ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡಲು ಮತ್ತು ವದಂತಿಗಳನ್ನು ಹೋಗಲಾಡಿಸಲು ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ನಡೆಸಲು ಹಾಗೂ ಸಾಮಾಜಿಕ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸಕ್ರಿಯವಾಗಿ ಅಪ್ಡೇಟ್ಗಳನ್ನು ನೀಡಲು ತಿಳಿಸಿದೆ. ಪ್ರಸ್ತುತ, 14 ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.
ಜಾರಿ ಕ್ರಮಗಳು:
· ಎಲ್ ಪಿ ಜಿ ಸಂಗ್ರಹಣೆ ಮತ್ತು ಕಾಳಸಂತೆ ಮಾರಾಟವನ್ನು ತಡೆಯಲು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿಗಳನ್ನು ಮುಂದುವರಿಸಲಾಗಿದೆ. ನಿನ್ನೆ ಸುಮಾರು 2,900 ದಾಳಿಗಳನ್ನು ನಡೆಸಲಾಗಿದ್ದು, ಅಂದಾಜು 1,000 ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
· ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಸಂಗ್ರಹಣೆ ಅಥವಾ ಕಾಳಸಂತೆ ಮಾರಾಟ ಪ್ರಕರಣಗಳನ್ನು ಪರೀಕ್ಷಿಸಲು, ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳ ಅಧಿಕಾರಿಗಳು ನಿನ್ನೆ ದೇಶಾದ್ಯಂತ 1,200ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಕೇಂದ್ರಗಳು ಮತ್ತು ಎಲ್ ಪಿ ಜಿ ವಿತರಣಾ ಕೇಂದ್ರಗಳಲ್ಲಿ ಅನಿರೀಕ್ಷಿತ ತಪಾಸಣೆಗಳನ್ನು ನಡೆಸಿದ್ದಾರೆ.
· ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ಎಲ್ ಪಿ ಜಿ ವಿತರಣಾ ಕೇಂದ್ರಗಳಿಗೆ ಈವರೆಗೆ ಸುಮಾರು 480 ಕಾರಣ ಕೇಳುವ ನೋಟಿಸ್ ಗಳನ್ನು ಜಾರಿಗೊಳಿಸಿವೆ.
ಇತರ ಸರ್ಕಾರಿ ಕ್ರಮಗಳು:
· ಈ ಯುದ್ಧದ ಪರಿಸ್ಥಿತಿಯ ಹೊರತಾಗಿಯೂ, ಸರ್ಕಾರವು ಮನೆಬಳಕೆಯ ಎಲ್ ಪಿ ಜಿ ಮತ್ತು ಪಿ ಎನ್ ಜಿ ಗೆ ಅತ್ಯುನ್ನತ ಆದ್ಯತೆ ನೀಡಿದೆ, ಇದರೊಂದಿಗೆ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.
· ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಹಲವಾರು ತರ್ಕಬದ್ಧಗೊಳಿಸುವ ಕ್ರಮಗಳನ್ನು ಜಾರಿಗೆ ತಂದಿದೆ; ಇದರಲ್ಲಿ ಸಂಸ್ಕರಣಾಗಾರಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಸಿಲಿಂಡರ್ ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಿವಿಧ ವಲಯಗಳಿಗೆ ಆದ್ಯತೆ ನೀಡುವುದು ಸೇರಿದೆ.
· ಎಲ್ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ.
· ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಕಲ್ಲಿದ್ದಲನ್ನು ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಕಲ್ಲಿದ್ದಲನ್ನು ಹಂಚಿಕೆ ಮಾಡುವಂತೆ ಕಲ್ಲಿದ್ದಲು ಸಚಿವಾಲಯವು ಈಗಾಗಲೇ ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕೋಲಿಯರೀಸ್ ಗೆ ಆದೇಶ ನೀಡಿದೆ.
· ಮನೆಬಳಕೆಯ ಮತ್ತು ವಾಣಿಜ್ಯ ಗ್ರಾಹಕರಿಬ್ಬರಿಗೂ ಹೊಸ ಪಿ ಎನ್ ಜಿ ಸಂಪರ್ಕಗಳನ್ನು ಕಲ್ಪಿಸಲು ಅನುಕೂಲ ಮಾಡಿಕೊಡುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
ಸಾರ್ವಜನಿಕ ಸಲಹೆ
· ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ನ ಆತಂಕದ ಖರೀದಿ ಮತ್ತು ಎಲ್ ಪಿ ಜಿ ಬುಕಿಂಗ್ ಮಾಡುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ.
· ನಾಗರಿಕರು ವದಂತಿಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಬೇಕು ಎಂದು ಸಲಹೆ ನೀಡಲಾಗಿದೆ.
· ಎಲ್ ಪಿ ಜಿ ಗಾಗಿ, ನಾಗರಿಕರಿಗೆ ಈ ಕೆಳಗಿನ ವಿನಂತಿಗಳನ್ನು ಮಾಡಲಾಗಿದೆ:
o ಬುಕಿಂಗ್ ಗಳಿಗಾಗಿ ಡಿಜಿಟಲ್ ವಿಧಾನವನ್ನು ಬಳಸಿ.
o ಎಲ್ ಪಿ ಜಿ ವಿತರಕರ ಬಳಿ ಭೇಟಿ ನೀಡುವುದನ್ನು ತಪ್ಪಿಸಿ.
· ಪಿ ಎನ್ ಜಿ, ಇಂಡಕ್ಷನ್/ಎಲೆಕ್ಟ್ರಿಕ್ ಸ್ಟೌವ್ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರಿಗೆ ವಿನಂತಿಸಲಾಗಿದೆ.
· ಪ್ರಸ್ತುತ ಪರಿಸ್ಥಿತಿಯಲ್ಲಿ, ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡಬೇಕೆಂದು ವಿನಂತಿಸಲಾಗಿದೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆ
ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನೌಕೆಗಳು ಮತ್ತು ನಾವಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯವು ತಿಳಿಸಿದೆ. ಸಚಿವಾಲಯದ ಪ್ರಕಾರ:
· ಆ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ನೌಕೆಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
· ಒಟ್ಟು ಸುಮಾರು 94,000 ಮೆಟ್ರಿಕ್ ಟನ್ ಎಲ್ ಪಿ ಜಿ ಸರಕನ್ನು ಹೊತ್ತ BW TYR ಮತ್ತು BW ELM ಎಂಬ ಎರಡು ಎಲ್ ಪಿ ಜಿ ವಾಹಕ ನೌಕೆಗಳು ಆ ಪ್ರದೇಶವನ್ನು ಸುರಕ್ಷಿತವಾಗಿ ದಾಟಿ ಭಾರತದ ತೀರದತ್ತ ಚಲಿಸುತ್ತಿವೆ. BW TYR ನೌಕೆಯು 2026 ರ ಮಾರ್ಚ್ 31 ರಂದು ಮುಂಬೈಗೆ ತಲುಪುವ ನಿರೀಕ್ಷೆಯಿದೆ ಮತ್ತು BW ELM ನೌಕೆಯು 2026 ರ ಏಪ್ರಿಲ್ 01 ರಂದು ನವ ಮಂಗಳೂರಿಗೆ ತಲುಪುವ ಹಾದಿಯಲ್ಲಿದೆ.
· 485 ಭಾರತೀಯ ನಾವಿಕರಿರುವ ಭಾರತೀಯ ಧ್ವಜ ಹೊಂದಿರುವ ಒಟ್ಟು 18 ನೌಕೆಗಳು ಪಶ್ಚಿಮ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಉಳಿದಿವೆ. ಹಡಗು ಮಾಲೀಕರು, ಆರ್ ಪಿ ಎಸ್ ಎಲ್ ಏಜೆನ್ಸಿಗಳು ಮತ್ತು ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಿ ಹಡಗು ನಿರ್ದೇಶನಾಲಯವು ಪರಿಸ್ಥಿತಿಯನ್ನು ಸಕ್ರಿಯವಾಗಿ ಗಮನಿಸುತ್ತಿದೆ.
· ಹಡಗು ನಿರ್ದೇಶನಾಲಯದ ನಿಯಂತ್ರಣ ಕೊಠಡಿಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಸಕ್ರಿಯಗೊಂಡ ದಿನದಿಂದ ಈವರೆಗೆ 4523 ಕರೆಗಳನ್ನು ಮತ್ತು 8,985 ಇಮೇಲ್ ಗಳನ್ನು ನಿರ್ವಹಿಸಿದೆ. ಕಳೆದ 24 ಗಂಟೆಗಳಲ್ಲಿ 92 ಕರೆಗಳು ಮತ್ತು 120 ಇಮೇಲ್ ಗಳನ್ನು ಸ್ವೀಕರಿಸಲಾಗಿದೆ.
· ಹಡಗು ನಿರ್ದೇಶನಾಲಯವು ಈವರೆಗೆ 942 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿಸಲು ಅನುಕೂಲ ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಮರಳಿದ 4 ನಾವಿಕರು ಸೇರಿದ್ದಾರೆ.
· ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿದ್ದು, ಯಾವುದೇ ದಟ್ಟಣೆ ವರದಿಯಾಗಿಲ್ಲ. ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿಯ ರಾಜ್ಯ ಸಮುದ್ರ ಮಂಡಳಿಗಳು ಸುಗಮ ಕಾರ್ಯಾಚರಣೆಯನ್ನು ದೃಢಪಡಿಸಿವೆ.
· ನಾವಿಕರ ಯೋಗಕ್ಷೇಮ ಮತ್ತು ಅಡೆತಡೆಯಿಲ್ಲದ ಸಮುದ್ರಯಾನ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ಸಮುದ್ರಯಾನದ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರಿಸಿದೆ.
ಪ್ರದೇಶದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ
ಪ್ರದೇಶದಲ್ಲಿರುವ ಭಾರತೀಯ ಸಮುದಾಯದೊಂದಿಗೆ ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ನಿರಂತರ ಸಂಪರ್ಕವನ್ನು ಹೊಂದಿವೆ; ಇದರೊಂದಿಗೆ ಅವರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಿರಂತರ ನೆರವು ಮತ್ತು ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಸಚಿವಾಲಯವು ತಿಳಿಸಿದೆ. ಸಚಿವಾಲಯವು ನೀಡಿದ ಮಾಹಿತಿಯ ಪ್ರಕಾರ:
· ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ; ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಅತ್ಯುನ್ನತ ಆದ್ಯತೆ ನೀಡಲಾಗಿದೆ.
· ಭಾರತೀಯ ನಾಗರಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಸಮರ್ಪಿತ ವಿಶೇಷ ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ; ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಸಮನ್ವಯವನ್ನು ಕಾಯ್ದುಕೊಳ್ಳಲಾಗುತ್ತಿದೆ.
· ಈ ಪ್ರದೇಶದಾದ್ಯಂತ ಇರುವ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ, ಸಹಾಯವಾಣಿಗಳನ್ನು ನಡೆಸುತ್ತಿವೆ ಮತ್ತು ಭಾರತೀಯ ಸಮುದಾಯದ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಇತ್ತೀಚಿನ ಸಲಹೆಗಳನ್ನು ನಿಯಮಿತವಾಗಿ ನೀಡಲಾಗುತ್ತಿದೆ ಮತ್ತು ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ತೊಡಗಿಸಿಕೊಂಡಿವೆ.
· ನಾವಿಕರು, ವಿದ್ಯಾರ್ಥಿಗಳು, ಸಿಲುಕಿಕೊಂಡಿರುವ ಭಾರತೀಯ ನಾಗರಿಕರು ಮತ್ತು ಅಲ್ಪಾವಧಿಯ ಸಂದರ್ಶಕರಿಗೆ ವೀಸಾ, ಕಾನ್ಸುಲರ್ ಮತ್ತು ಲಾಜಿಸ್ಟಿಕ್ ಬೆಂಬಲ ಸೇರಿದಂತೆ ನೆರವು ನೀಡುವುದನ್ನು ಮುಂದುವರಿಸಲಾಗಿದೆ.
· ಫೆಬ್ರವರಿ 28 ರಿಂದ ಸುಮಾರು 5,24,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಮರಳಿದ್ದಾರೆ. ವಿಮಾನ ಕಾರ್ಯಾಚರಣೆಗಳು ವ್ಯವಸ್ಥಿತ ರೀತಿಯಲ್ಲಿ ಮುಂದುವರಿದಿವೆ:
o ಯುಎಇ: ವಿವಿಧ ವಿಮಾನ ನಿಲ್ದಾಣಗಳಿಂದ ಇಂದು ಭಾರತಕ್ಕೆ ಸುಮಾರು 80 ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
o ಸೌದಿ ಅರೇಬಿಯಾ ಮತ್ತು ಓಮನ್: ಭಾರತಕ್ಕೆ ವಿಮಾನಗಳ ಸಂಚಾರ ಮುಂದುವರಿದಿದೆ.
o ಕತಾರ್: ವಾಯುಪ್ರದೇಶವು ಭಾಗಶಃ ಪುನಃ ತೆರೆದಿರುವುದರಿಂದ, ಇಂದು ಸುಮಾರು 8-10 ನಿಗದಿತವಲ್ಲದ ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
o ಕುವೈತ್ ಮತ್ತು ಬಹ್ರೇನ್: ವಾಯುಪ್ರದೇಶಗಳು ಮುಚ್ಚಲ್ಪಟ್ಟಿವೆ; ಕುವೈತ್ ನ ಜಜೀರಾ ಏರ್ವೇಸ್ ಮತ್ತು ಬಹ್ರೇನ್ನ ಗಲ್ಫ್ ಏರ್ ಸಂಸ್ಥೆಗಳ ವಿಶೇಷ ನಿಗದಿತವಲ್ಲದ ವಾಣಿಜ್ಯ ವಿಮಾನಗಳು ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತದ ವಿವಿಧ ಸ್ಥಳಗಳಿಗೆ ಕಾರ್ಯನಿರ್ವಹಿಸುತ್ತಿವೆ.
o ಇರಾನ್: ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
o ಇಸ್ರೇಲ್: ಈಜಿಪ್ಟ್ ಮತ್ತು ಜೋರ್ಡಾನ್ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
o ಇರಾಕ್: ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
o ಕುವೈತ್ ಮತ್ತು ಬಹ್ರೇನ್ ನಲ್ಲಿನ ನಿರ್ಬಂಧಗಳ ಹಿನ್ನೆಲೆಯಲ್ಲಿ, ಭಾರತೀಯ ನಾಗರಿಕರು ಸೌದಿ ಅರೇಬಿಯಾದ ಮೂಲಕ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
· 2026 ರ ಮಾರ್ಚ್ 27 ರಂದು ಅಬುಧಾಬಿಯಲ್ಲಿ ನಿಧನರಾದ ಭಾರತೀಯ ನಾಗರಿಕರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗಿದೆ. ಸಚಿವಾಲಯವು ಮೃತರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಈ ಕಷ್ಟದ ಸಮಯದಲ್ಲಿ ಅವರಿಗೆ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತದೆ.
· ಓಮನ್ ನ ಸಲಾಲ್ ನಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡಿರುವ ಭಾರತೀಯ ನಾಗರಿಕರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ; ರಾಯಭಾರ ಕಚೇರಿಯು ಅಗತ್ಯ ನೆರವು ನೀಡುತ್ತಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
*****
(ಪ್ರಕಟಣೆ ಐ.ಡಿ.: 2246672)
ವಿಸಿಟರ್ ಕೌಂಟರ್ : 13