|
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ್-ಸಚಿವಾಲಯದ ಮಾಧ್ಯಮಗೋಷ್ಠಿ
12,000ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ; ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆ ವಿರುದ್ಧದ ಕಾರ್ಯಾಚರಣೆಯಲ್ಲಿ 15,000ಕ್ಕೂ ಹೆಚ್ಚು ಎಲ್ ಪಿ ಜಿ ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ನಗರ ಪ್ರದೇಶದ ವಾಣಿಜ್ಯ ಎಲ್ ಪಿ ಜಿ ಗ್ರಾಹಕರು ಪಿ ಎನ್ ಜಿ ಗೆ ಬದಲಾಗಲು ಉತ್ತೇಜನ ಸಿಜಿಡಿ ಪೈಪ್ಲೈನ್ ಗಳನ್ನು ಅಳವಡಿಸಲು ಬಾಕಿ ಇರುವ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿನಂತಿ ಆನ್ಲೈನ್ ಎಲ್ ಪಿ ಜಿ ಬುಕಿಂಗ್ ಸುಮಾರು ಶೇ. 94ಕ್ಕೆ ಏರಿಕೆ ಅಗತ್ಯ ವಸ್ತುಗಳ ಕಾಯ್ದೆಯಡಿ ಕಾಳಸಂತೆ ಮತ್ತು ದಾಸ್ತಾನು ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಆಗ್ರಹ ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಹಲವಾರು ರಾಜ್ಯಗಳಲ್ಲಿ ವಾಣಿಜ್ಯ ಎಲ್ ಪಿ ಜಿ ಪೂರೈಕೆ ಆರಂಭ ಗಾಬರಿಯಿಂದ ಬುಕಿಂಗ್ ಮಾಡುವುದನ್ನು ತಪ್ಪಿಸಲು ಮತ್ತು ಎಲ್ ಪಿ ಜಿ ಸಿಲಿಂಡರ್ ಬುಕಿಂಗ್ ಗಾಗಿ ಡಿಜಿಟಲ್ ವಿಧಾನಗಳನ್ನು ಬಳಸಲು ನಾಗರಿಕರಿಗೆ ಮನವಿ ಎಲ್ ಪಿ ಜಿ ವಾಹಕ ನೌಕೆ 'ಶಿವಾಲಿಕ್' ನಿನ್ನೆ ಆಗಮಿಸಿದೆ; 'ನಂದಾದೇವಿ' ಇಂದು ತಲುಪಲಿದ್ದು, ಸರಕು ಇಳಿಸುವ ಪ್ರಕ್ರಿಯೆ ನಡೆಯುತ್ತಿದೆ ಅರ್ಮೇನಿಯಾಕ್ಕೆ ಪ್ರವೇಶಿಸಿದ್ದ ಸುಮಾರು 130 ಭಾರತೀಯ ಯಾತ್ರಿಕರು ಇಂದು ಆಗಮಿಸುವ ನಿರೀಕ್ಷೆಯಿದೆ ಈ ಪ್ರದೇಶದಾದ್ಯಂತ ಇರುವ ಭಾರತೀಯ ಪ್ರಜೆಗಳಿಗೆ ನೆರವು ಮತ್ತು ಬೆಂಬಲ ನೀಡಲು ಭಾರತೀಯ ಮಿಷನ್ ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ
ಪ್ರಕಟಣಾ ದಿನಾಂಕ:
17 MAR 2026 5:31PM by PIB Bengaluru
ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಕುರಿತಾದ ಅಂತರ್-ಸಚಿವಾಲಯದ ಮಾಧ್ಯಮ ಗೋಷ್ಠಿಯು ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆಯಿತು. ಬದಲಾಗುತ್ತಿರುವ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಇಂತಹ ಪತ್ರಿಕಾಗೋಷ್ಠಿಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ಇಂದಿನ ಸಭೆಯಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು, ಈ ಪ್ರದೇಶದಲ್ಲಿನ ಭಾರತೀಯ ಪ್ರಜೆಗಳ ಸ್ಥಿತಿಗತಿ ಮತ್ತು ಸಾರ್ವಜನಿಕ ಮಾಹಿತಿ ಪ್ರಯತ್ನಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡವು.
ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಸ್ತುತ ಇಂಧನ ಪೂರೈಕೆ ಸ್ಥಿತಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಎಲ್ ಪಿ ಜಿಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿತು. ಸಚಿವಾಲಯವು ಹೀಗೆ ತಿಳಿಸಿದೆ:
ಕಚ್ಚಾ ತೈಲ ಮತ್ತು ಶುದ್ಧೀಕರಣ ಘಟಕಗಳು
- ಎಲ್ಲಾ ಶುದ್ಧೀಕರಣ ಘಟಕಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳನ್ನು ಕಾಯ್ದುಕೊಂಡಿವೆ. ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬಿಯಾಗಿದೆ ಮತ್ತು ದೇಶೀಯ ಬೇಡಿಕೆಯನ್ನು ಪೂರೈಸಲು ಯಾವುದೇ ಆಮದುಗಳ ಅಗತ್ಯವಿಲ್ಲ.
ಚಿಲ್ಲರೆ ಮಾರಾಟ ಮಳಿಗೆಗಳು
- ತೈಲ ಮಾರುಕಟ್ಟೆ ಕಂಪನಿಗಳು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನ ಖಾಲಿಯಾದ ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲ ಮತ್ತು ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯನ್ನು ನಿಯಮಿತವಾಗಿ ನಿರ್ವಹಿಸಲಾಗುತ್ತಿದೆ.
- ಸಾಕಷ್ಟು ದಾಸ್ತಾನು ಲಭ್ಯವಿರುವುದರಿಂದ ನಾಗರಿಕರು ಗಾಬರಿಯಿಂದ ಇಂಧನ ಖರೀದಿಸಬಾರದು ಎಂದು ಸಲಹೆ ನೀಡಲಾಗಿದೆ.
ನೈಸರ್ಗಿಕ ಅನಿಲ
- ಪಿ ಎನ್ ಜಿ ಮತ್ತು ಸಿ ಎನ್ ಜಿ ಯ ಶೇ. 100 ರಷ್ಟು ಸರಬರಾಜು ಸೇರಿದಂತೆ ಆದ್ಯತೆಯ ವಲಯಗಳು ಸಂರಕ್ಷಿತ ಅನಿಲ ಪೂರೈಕೆಯನ್ನು ಪಡೆಯುತ್ತಿವೆ, ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಸರಬರಾಜನ್ನು ಸುಮಾರು ಶೇ. 80 ಕ್ಕೆ ನಿಯಂತ್ರಿಸಲಾಗುತ್ತಿದೆ.
- ನಗರ ಪ್ರದೇಶದ ವಾಣಿಜ್ಯ ಎಲ್ ಪಿ ಜಿ ಗ್ರಾಹಕರು ಪಿ ಎನ್ ಜಿ ಗೆ ಬದಲಾಗಲು ಉತ್ತೇಜಿಸಲಾಗುತ್ತಿದೆ ಮತ್ತು ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಆಸ್ಪತ್ರೆಗಳು ಮತ್ತು ಹಾಸ್ಟೆಲ್ ಗಳಂತಹ ಸಂಸ್ಥೆಗಳು ಅಧಿಕೃತ ನಗರ ಅನಿಲ ವಿತರಣಾ ಘಟಕಗಳಿಂದ ಪಿ ಎನ್ ಜಿ ಸಂಪರ್ಕಗಳನ್ನು ಪಡೆಯಬಹುದು.
- ಐಜಿಎಲ್, ಎಂಜಿಎಲ್, ಗೇಲ್ ಗ್ಯಾಸ್ ಮತ್ತು ಬಿಪಿಸಿಎಲ್ ಸೇರಿದಂತೆ ಸಿಜಿಡಿ ಕಂಪನಿಗಳು ದೇಶೀಯ ಮತ್ತು ವಾಣಿಜ್ಯ ಪಿ ಎನ್ ಜಿ ಸಂಪರ್ಕಗಳಿಗಾಗಿ ಪ್ರೋತ್ಸಾಹಕಗಳನ್ನು ನೀಡುತ್ತಿವೆ.
- ಸರ್ಕಾರವು ಸಿಜಿಡಿ ಜಾಲವನ್ನು ವಿಸ್ತರಿಸುತ್ತಿದೆ ಮತ್ತು ಪೈಪ್ಲೈನ್ ಅಳವಡಿಸಲು ಬಾಕಿ ಇರುವ ಅರ್ಜಿಗಳಿಗೆ ಅನುಮೋದನೆಗಳನ್ನು ತ್ವರಿತಗೊಳಿಸಲು ಮತ್ತು 'ಡೀಮ್ಡ್ ಪರ್ಮಿಷನ್' ನೀಡಲು, ರಸ್ತೆ ದುರಸ್ತಿ ಮತ್ತು ಅನುಮತಿ ಶುಲ್ಕಗಳನ್ನು ಮನ್ನಾ ಮಾಡಲು, ಕೆಲಸದ ಪರಿಸ್ಥಿತಿಗಳನ್ನು ಸಡಿಲಗೊಳಿಸಲು ಮತ್ತು ವೇಗವಾಗಿ ಕಾರ್ಯಗತಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿನಂತಿಸಿದೆ.
ಎಲ್ ಪಿ ಜಿ
- ಪ್ರಸ್ತುತ ಇರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್ ಪಿ ಜಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
- ಎಲ್ ಪಿ ಜಿ ವಿತರಕರಲ್ಲಿ ದಾಸ್ತಾನು ಖಾಲಿಯಾದ ವರದಿಯಾಗಿಲ್ಲ.
- ಸಂಸ್ಕರಣಾಗಾರಗಳಿಂದ ದೇಶೀಯ ಎಲ್ ಪಿ ಜಿ ಉತ್ಪಾದನೆಯನ್ನು ಸುಮಾರು ಶೇ. 38 ರಷ್ಟು ಹೆಚ್ಚಿಸಲಾಗಿದೆ.
- ಆನ್ಲೈನ್ ಎಲ್ ಪಿ ಜಿ ಬುಕಿಂಗ್ ಸುಮಾರು ಶೇ. 94 ಕ್ಕೆ ಏರಿದೆ, ಹಾಗೆಯೇ ವಿತರಣಾ ದೃಢೀಕರಣ ಕೋಡ್ ವ್ಯಾಪ್ತಿಯನ್ನು ಬಿಕ್ಕಟ್ಟಿನ ಮೊದಲಿದ್ದ ಶೇ. 53 ರಿಂದ ಶೇ. 76 ಕ್ಕೆ ವಿಸ್ತರಿಸಲಾಗಿದ್ದು, ಇದು ಅಕ್ರಮ ವರ್ಗಾವಣೆಯನ್ನು ತಡೆಯಲು ಸಹಾಯ ಮಾಡುತ್ತದೆ.
- ದೇಶೀಯ ಎಲ್ ಪಿ ಜಿ ಸಿಲಿಂಡರ್ ವಿತರಣೆಯು ಎಂದಿನಂತೆ ಮುಂದುವರಿದಿದೆ.
- ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಣಿಪುರ, ರಾಜಸ್ಥಾನ ಮತ್ತು ಉತ್ತರಾಖಂಡದಂತಹ ಹಲವಾರು ರಾಜ್ಯಗಳು ಸರ್ಕಾರಿ ಮಾರ್ಗಸೂಚಿಗಳಂತೆ ಗೃಹೇತರ ಎಲ್ ಪಿ ಜಿ ಹಂಚಿಕೆಗೆ ಆದೇಶ ಹೊರಡಿಸಿವೆ ಮತ್ತು ವಾಣಿಜ್ಯ ಎಲ್ ಪಿ ಜಿ ಪೂರೈಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಲಭ್ಯವಾಗುವಂತೆ ಮಾಡಲಾಗುತ್ತಿದೆ.
ಸೀಮೆಎಣ್ಣೆ
- ಹೆಚ್ಚುವರಿಯಾಗಿ 48,000 ಕೆ.ಎಲ್. ಸೀಮೆಎಣ್ಣೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದ್ದು, ವಿತರಣಾ ಕೇಂದ್ರಗಳನ್ನು ಗುರುತಿಸಲು ಅವರಿಗೆ ವಿನಂತಿಸಲಾಗಿದೆ.
- ಬಿಹಾರ, ಛತ್ತೀಸಗಢ, ಮಣಿಪುರ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಎಸ್ ಕೆ ಒ ಹಂಚಿಕೆ ಆದೇಶಗಳನ್ನು ಹೊರಡಿಸಿವೆ.
ರಾಜ್ಯ ಸರ್ಕಾರಗಳು ನಡೆಸಿದ ಸಭೆಗಳು
- ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್ ಪಿ ಜಿ ನಿಯಂತ್ರಣ ಆದೇಶ, 2000 ಅಡಿಯಲ್ಲಿ, ದಾಸ್ತಾನು ಮತ್ತು ಕಾಳಸಂತೆ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕಾರ ನೀಡಲಾಗಿದೆ.
- ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ನಿಯಂತ್ರಿಸುವುದು ಪ್ರಾಥಮಿಕವಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿಯಾಗಿದೆ.
- ಭಾರತ ಸರ್ಕಾರವು 13.03.2026 ರ ಪತ್ರದ ಮೂಲಕ, ಜಿಲ್ಲಾಧಿಕಾರಿಗಳು ಮತ್ತು ಜಾರಿ ಏಜೆನ್ಸಿಗಳಿಗೆ ತಪಾಸಣೆ ಮತ್ತು ಹಠಾತ್ ತಪಾಸಣೆಗಳನ್ನು ನಡೆಸಲು ನಿರ್ದೇಶಿಸುವಂತೆ ಮುಖ್ಯ ಕಾರ್ಯದರ್ಶಿಗಳನ್ನು ಕೇಳಿದೆ.
- 27 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿವೆ ಮತ್ತು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.
- ರಾಜಸ್ಥಾನ, ತೆಲಂಗಾಣ, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಒಡಿಶಾ ಮತ್ತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳನ್ನು ಸ್ಥಾಪಿಸಿವೆ; ಇತರರಿಗೆ ತುರ್ತಾಗಿ ಇದನ್ನು ಮಾಡಲು ವಿನಂತಿಸಲಾಗಿದೆ.
ಜಾರಿ ಕ್ರಮಗಳು
- ದೇಶಾದ್ಯಂತ ಎಲ್ ಪಿ ಜಿ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಯಲು ಜಾರಿ ಕ್ರಮಗಳನ್ನು ತೀವ್ರಗೊಳಿಸಲಾಗಿದೆ.
- 12,000ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, 15,000ಕ್ಕೂ ಹೆಚ್ಚು ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿ, ಗೋವಾ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇರಳ ಮತ್ತು ಮಧ್ಯಪ್ರದೇಶಗಳಲ್ಲಿ ಪ್ರಮುಖ ಕ್ರಮಗಳನ್ನು ವರದಿ ಮಾಡಲಾಗಿದೆ.
- ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಕ್ರಮಗಳನ್ನು ತಡೆಯಲು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಚಿಲ್ಲರೆ ಮಳಿಗೆಗಳು ಮತ್ತು ಎಲ್ ಪಿ ಜಿ ವಿತರಕರಲ್ಲಿ 2,500ಕ್ಕೂ ಹೆಚ್ಚು ಹಠಾತ್ ತಪಾಸಣೆಗಳನ್ನು ನಡೆಸಿವೆ.
ಸರ್ಕಾರದ ಇತರ ಕ್ರಮಗಳು
- ವಿಶೇಷವಾಗಿ ಮನೆಗಳಿಗೆ ಮತ್ತು ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಂತಹ ಆದ್ಯತೆಯ ವಲಯಗಳಿಗೆ ಅಡೆತಡೆಯಿಲ್ಲದ ಎಲ್ ಪಿ ಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ.
- ಎಲ್ ಪಿ ಜಿ ಪೂರೈಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು 14 ಮಾರ್ಚ್ 2026 ರ ಎಲ್ ಪಿ ಜಿ ನಿಯಂತ್ರಣ ಆದೇಶದ ತಿದ್ದುಪಡಿಯ ಅಡಿಯಲ್ಲಿ ಎಲ್ ಪಿ ಜಿ ಸಂಪರ್ಕಗಳನ್ನು ಬಿಟ್ಟುಕೊಡುವಂತೆ ಪಿ ಎನ್ ಜಿ ಗ್ರಾಹಕರಿಗೆ ಸಲಹೆ ನೀಡಲಾಗಿದೆ.
- ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಪರಿಷ್ಕರಿಸಲಾಗಿದೆ.
- ಎಲ್ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
- ಸಾರ್ವಜನಿಕ ವಲಯದ ತೈಲ ಕಂಪನಿಗಳು ಡಿಜಿಟಲ್ ಬುಕಿಂಗ್ ಗಳನ್ನು ಉತ್ತೇಜಿಸುತ್ತಿವೆ ಮತ್ತು ಗಾಬರಿಯಿಂದ ಬುಕಿಂಗ್ ಗಳನ್ನು ನಿರುತ್ಸಾಹಗೊಳಿಸುತ್ತಿವೆ, ಇದರಿಂದ ಆನ್ಲೈನ್ ಬುಕಿಂಗ್ ವ್ಯವಸ್ಥೆಯ ಬಳಕೆ ಸುಧಾರಿಸಿದೆ.
- ವಾಣಿಜ್ಯ ಎಲ್ ಪಿ ಜಿ ಪೂರೈಕೆಯನ್ನು ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಹಲವಾರು ರಾಜ್ಯಗಳಲ್ಲಿ ಆರಂಭಿಸಲಾಗಿದೆ.
ಸಾರ್ವಜನಿಕ ಸಲಹೆ
- ಮನೆಗಳು ಮತ್ತು ಅಗತ್ಯ ವಲಯಗಳಿಗೆ ಸಾಕಷ್ಟು ಎಲ್ ಪಿ ಜಿ ಪೂರೈಕೆಯನ್ನು ನಿರ್ವಹಿಸಲಾಗುತ್ತಿರುವುದರಿಂದ ನಾಗರಿಕರು ಗಾಬರಿಯಾಗಬಾರದು ಎಂದು ಸಲಹೆ ನೀಡಲಾಗಿದೆ.
- ಎಲ್ ಪಿ ಜಿ ಸಿಲಿಂಡರ್ ಗಳನ್ನು ಐ ವಿ ಆರ್ ಎಸ್, ಎಸ್ ಎಂ ಎಸ್, ವಾಟ್ಸಾಪ್, ಮೊಬೈಲ್ ಅಪ್ಲಿಕೇಶನ್ ಗಳು ಮತ್ತು ಇ-ಕಾಮರ್ಸ್ ಪ್ಲಾಟ್ಫಾರ್ಮ್ ಗಳಂತಹ ಡಿಜಿಟಲ್ ವೇದಿಕೆಗಳ ಮೂಲಕ ಬುಕ್ ಮಾಡಬಹುದು.
- ನಾಗರಿಕರು ಗಾಬರಿಯಿಂದ ಬುಕಿಂಗ್ ಮಾಡುವುದನ್ನು ತಪ್ಪಿಸಲು, ಡಿಜಿಟಲ್ ವಿಧಾನಗಳನ್ನು ಬಳಸಲು ಮತ್ತು ಎಲ್ ಪಿ ಜಿ ವಿತರಕರ ಬಳಿ ಅನಗತ್ಯ ಭೇಟಿಗಳನ್ನು ತಪ್ಪಿಸಲು ಮನವಿ ಮಾಡಲಾಗಿದೆ.
- ಗ್ರಾಹಕರು ಪರ್ಯಾಯ ಇಂಧನಗಳಾದ ಪಿ ಎನ್ ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್ಟಾಪ್ ಗಳನ್ನು ಬಳಸಲು ಮತ್ತು ಇಂಧನವನ್ನು ಉಳಿಸಲು ಪ್ರೋತ್ಸಾಹಿಸಲಾಗಿದೆ.
- ನಿಖರವಾದ ಮಾಹಿತಿಗಾಗಿ ನಾಗರಿಕರು ಅಧಿಕೃತ ಮೂಲಗಳನ್ನು ಅವಲಂಬಿಸಬೇಕು ಮತ್ತು ವದಂತಿಗಳನ್ನು ನಂಬಬಾರದು ಎಂದು ಸಲಹೆ ನೀಡಲಾಗಿದೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
- ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಕೊಲ್ಲಿಯಲ್ಲಿನ ಕಡಲ ಚಟುವಟಿಕೆಗಳ ಇತ್ತೀಚಿನ ಸ್ಥಿತಿ ಮತ್ತು ಭಾರತೀಯ ಹಡಗುಗಳು ಹಾಗೂ ಸಿಬ್ಬಂದಿಯ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳನ್ನು ಹಂಚಿಕೊಂಡಿದೆ. ಸಚಿವಾಲಯವು ಗಮನಿಸಿದಂತೆ:
- ಈ ಪ್ರದೇಶದಲ್ಲಿನ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ನಾವಿಕರಿಗೆ ಸಂಬಂಧಿಸಿದ ಯಾವುದೇ ಹಡಗು ಅಪಘಾತ ವರದಿಯಾಗಿಲ್ಲ.
- ಪ್ರಸ್ತುತ, 611 ಭಾರತೀಯ ನಾವಿಕರನ್ನು ಹೊಂದಿರುವ 22 ಭಾರತೀಯ ಧ್ವಜದ ಹಡಗುಗಳು ಪಶ್ಚಿಮ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿವೆ. ಹಡಗು ನಿರ್ದೇಶನಾಲಯ ಹಡಗು ಮಾಲೀಕರು, ಆರ್ ಪಿ ಎಸ್ ಎಲ್ ಏಜೆನ್ಸಿಗಳು ಮತ್ತು ಭಾರತೀಯ ಮಿಷನ್ ಗಳೊಂದಿಗೆ ಸಮನ್ವಯದ ಮೂಲಕ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ.
- ಹಡಗು ನಿರ್ದೇಶನಾಲಯ ನಿಯಂತ್ರಣ ಕೊಠಡಿ ಸಕ್ರಿಯಗೊಂಡ ನಂತರ, ನಾವಿಕರು, ಅವರ ಕುಟುಂಬಗಳು ಮತ್ತು ಕಡಲ ಪಾಲುದಾರರಿಂದ ಬಂದ 3,180 ಕರೆಗಳನ್ನು ಮತ್ತು 5,875 ಇಮೇಲ್ ಗಳನ್ನು ನಿರ್ವಹಿಸಲಾಗಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಬಂದ 150 ಕರೆಗಳು ಮತ್ತು 378 ಇಮೇಲ್ ಗಳು ಸೇರಿವೆ.
- ಹಡಗು ನಿರ್ದೇಶನಾಲಯವು ಇದುವರೆಗೆ 447ಕ್ಕೂ ಹೆಚ್ಚು ಭಾರತೀಯ ನಾವಿಕರ ಸುರಕ್ಷಿತ ಮರಳುವಿಕೆಗೆ ಅನುಕೂಲ ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಕೊಲ್ಲಿಯ ವಿಮಾನ ನಿಲ್ದಾಣಗಳು ಮತ್ತು ಪ್ರಾದೇಶಿಕ ಸ್ಥಳಗಳಿಂದ ಮರಳಿದ 161 ಜನರು ಸೇರಿದ್ದಾರೆ.
- ಎಲ್ ಪಿ ಜಿ ವಾಹಕ ನೌಕೆ 'ಶಿವಾಲಿಕ್' ಮುದ್ರಾ ಬಂದರನ್ನು ತಲುಪಿದೆ ಮತ್ತು ಸರಕು ಇಳಿಸುವ ಕಾರ್ಯ ನಡೆಯುತ್ತಿದೆ. ನೌಕೆ 'ನಂದಾದೇವಿ' ಇಂದು ಮುಂಜಾನೆ ಕಾಂಡ್ಲಾ ಬಂದರಿಗೆ ಆಗಮಿಸಿದ್ದು, ಪೂರ್ವ ಕರಾವಳಿಯ ಎನ್ನೋರ್ ಮತ್ತು ಹಲ್ದಿಯಾಗೆ ವರ್ಗಾಯಿಸಲು ಸರಕು ಇಳಿಸಲು ಪ್ರಾರಂಭಿಸಿದೆ.
- ಆದ್ಯತೆಯ ಮೇಲೆ ನಿಲುಗಡೆ ಮತ್ತು ತ್ವರಿತವಾಗಿ ಸರಕು ಇಳಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ದಾಖಲೆ ಮತ್ತು ಪೂರ್ವ ಆಗಮನದ ಪ್ರಕ್ರಿಯೆಗಳನ್ನು ಮುಂಚಿತವಾಗಿ ಪೂರ್ಣಗೊಳಿಸಲಾಗಿತ್ತು.
- ಪ್ರಮುಖ ಬಂದರುಗಳು ಹಡಗುಗಳ ಚಲನೆ ಮತ್ತು ಸರಕು ಕಾರ್ಯಾಚರಣೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ಅಗತ್ಯ ಬೆಂಬಲವನ್ನು ನೀಡುತ್ತಿವೆ, ಇದರಲ್ಲಿ ಟ್ರಾನ್ಸ್ ಶಿಪ್ಮೆಂಟ್ ಕಂಟೈನರ್ ಗಳಿಗಾಗಿ ವಿ.ಒ. ಚಿದಂಬರನಾರ್ ಬಂದರು ಪ್ರಾಧಿಕಾರ (ವಿಒಸಿಪಿಎ) ನೀಡಿದ ಸುಮಾರು 90,000 ಚದರ ಮೀಟರ್ ಹೆಚ್ಚುವರಿ ಶೇಖರಣಾ ಸ್ಥಳ ಸೇರಿದೆ.
- ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ (ಜೆ ಎನ್ ಪಿ ಎ) ಹೊರಗಿನ ರಸ್ತೆಗಳಲ್ಲಿ ಕಂಟೈನರ್ ಗಳು ಬಿದ್ದಿರುವ ವರದಿಗಳು ಸರಿಯಲ್ಲ. ಕಂಟೈನರ್ ಗಳು ಪ್ರಸ್ತುತ ಸಾಮಾನ್ಯ ಲಾಜಿಸ್ಟಿಕ್ಸ್ ಕಾರ್ಯಾಚರಣೆಯ ಭಾಗವಾಗಿ ಕಂಟೈನರ್ ಫ್ರೈಟ್ ಸ್ಟೇಷನ್ ಗಳು, ಗೋದಾಮುಗಳು ಅಥವಾ ಫ್ಯಾಕ್ಟರಿ ಆವರಣಗಳಲ್ಲಿವೆ.
- ಜೆ ಎನ್ ಪಿ ಎ ನಲ್ಲಿನ ದಟ್ಟಣೆ ಕಡಿಮೆಯಾಗುತ್ತಿದ್ದು, ತ್ವರಿತವಾಗಿ ಕೆಟ್ಟುಹೋಗುವ ವಸ್ತುಗಳ ಕಂಟೈನರ್ ಗಳು ಸುಮಾರು 2,000 ರಿಂದ ಸುಮಾರು 1,000 ಕ್ಕೆ ಇಳಿದಿವೆ.
- ಸಲಾಹ್ ಮತ್ತು ಖೋರ್ ಫಕ್ಕನ್ ಬಂದರುಗಳಿಗೆ ಹಡಗುಗಳು ಪ್ರಯಾಣ ಬೆಳೆಸಿದ್ದು, ಸುಮಾರು 200 ಕಂಟೈನರ್ ಗಳನ್ನು ಹೊತ್ತ ಮತ್ತೊಂದು ಹಡಗು ಇಂದು ಹೊರಡಲಿದೆ. ಸಿಲುಕಿಕೊಂಡಿರುವ ಕಂಟೈನರ್ ಗಳ ಸಂಖ್ಯೆ ಮುಂದಿನ 24-48 ಗಂಟೆಗಳಲ್ಲಿ ಸುಮಾರು 600ಕ್ಕೆ ಇಳಿಯುವ ನಿರೀಕ್ಷೆಯಿದೆ.
- ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಡಗು ಚಲನೆಗಳು, ಬಂದರು ಕಾರ್ಯಾಚರಣೆಗಳು, ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಡಲ ವ್ಯಾಪಾರದ ನಿರಂತರತೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ.
ಈ ಪ್ರದೇಶದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಿಷನ್ ಗಳ ಮೂಲಕ ನಡೆಯುತ್ತಿರುವ ನೆರವು ಮತ್ತು ಸಂಪರ್ಕದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದೆ:
- ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ. ಭಾರತೀಯ ಸಮುದಾಯದ ಸುರಕ್ಷತೆ, ಯೋಗಕ್ಷೇಮ ಮತ್ತು ಭದ್ರತೆಯು ಅತ್ಯಂತ ಆದ್ಯತೆಯಾಗಿ ಉಳಿದಿದೆ. ಮೀಸಲಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಮುಂದುವರಿದಿದೆ.
- ವಿದೇಶಾಂಗ ವ್ಯವಹಾರಗಳ ಸಚಿವರು ಇಯು ಹೈ ರೆಪ್ರೆಸೆಂಟೇಟಿವ್ ಮತ್ತು ಉಪಾಧ್ಯಕ್ಷೆ ಶ್ರೀಮತಿ ಕಾಜಾ ಕಲ್ಲಾಸ್ ಅವರ ಆಹ್ವಾನದ ಮೇರೆಗೆ ಇಯು ವಿದೇಶಾಂಗ ವ್ಯವಹಾರಗಳ ಮಂಡಳಿಯಲ್ಲಿ ಭಾಗವಹಿಸಲು ಬೆಲ್ಜಿಯಂಗೆ ಭೇಟಿ ನೀಡಿದ್ದರು.
- ಸಭೆಯ ಅವಧಿಯಲ್ಲಿ ಚರ್ಚೆಗಳು ಭಾರತ-ಇಯು ಸಂಬಂಧಗಳು ಮತ್ತು ಜಾಗತಿಕ ಸವಾಲುಗಳನ್ನು ಒಳಗೊಂಡಿದ್ದವು, ವಿಶೇಷವಾಗಿ ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಇಂಧನ ಭದ್ರತೆಯ ಮೇಲೆ ಅದರ ಪರಿಣಾಮಗಳ ಕುರಿತು ಸಂವಾದ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಲಾಯಿತು.
- ಮಂಡಳಿಯ ಅಂಚಿನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವರು ಇಯು ಹೈ ರೆಪ್ರೆಸೆಂಟೇಟಿವ್ ಮತ್ತು ಉಪಾಧ್ಯಕ್ಷೆ ಹಾಗೂ ಬೆಲ್ಜಿಯಂ, ಸೈಪ್ರಸ್, ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಸ್ಲೋವಾಕಿಯಾದ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು, ಅಲ್ಲಿ ಇತ್ತೀಚಿನ ಅಂತರರಾಷ್ಟ್ರೀಯ ಬೆಳವಣಿಗೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
- ಇರಾನ್ ನಿಂದ 700ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಅರ್ಮೇನಿಯಾ (ಸುಮಾರು 600) ಮತ್ತು ಅಜೆರ್ಬೈಜಾನ್ ಗೆ ತೆರಳಿದ್ದಾರೆ, ಇದರಲ್ಲಿ ನಿನ್ನೆ ಅರ್ಮೇನಿಯಾಕ್ಕೆ ಹೋದ ಸುಮಾರು 50 ಹೆಚ್ಚುವರಿ ಜನರು ಸೇರಿದ್ದಾರೆ.
- ಅರ್ಮೇನಿಯಾಕ್ಕೆ ಪ್ರವೇಶಿಸಿದ್ದ 284 ಭಾರತೀಯ ಯಾತ್ರಿಕರಲ್ಲಿ ಸುಮಾರು 130 ಜನರು ಇಂದು ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ.
- ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವರು ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ. ಆದರೆ, ನಿಯಂತ್ರಣ ಕೊಠಡಿಗೆ ಬರುವ ಕರೆಗಳು ಅಥವಾ ಇಮೇಲ್ ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ನಿನ್ನೆ 22 ಕರೆಗಳು ಮತ್ತು 6 ಇಮೇಲ್ಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ.
- ಪ್ರದೇಶದಾದ್ಯಂತ ಇರುವ ಭಾರತೀಯ ಮಿಷನ್ ಗಳು ಮತ್ತು ಪೋಸ್ಟ್ ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ, 24x7 ಸಹಾಯವಾಣಿಗಳನ್ನು ನಡೆಸುತ್ತಿವೆ, ಭಾರತೀಯ ಸಮುದಾಯದ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿವೆ ಮತ್ತು ನಿಯಮಿತವಾಗಿ ಸಲಹೆಗಳನ್ನು ನೀಡುತ್ತಿವೆ. ಮಿಷನ್ ಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಮತ್ತು ಸಿಲುಕಿಕೊಂಡಿರುವ ಭಾರತೀಯರು, ವಿದ್ಯಾರ್ಥಿಗಳು, ನಾವಿಕರು ಮತ್ತು ಅಲ್ಪಾವಧಿಯ ಸಂದರ್ಶಕರಿಗೆ ವೀಸಾ ಬೆಂಬಲ, ಲಾಜಿಸ್ಟಿಕ್ ನೆರವು ಮತ್ತು ಸಾರಿಗೆ ಸುಲಭಗೊಳಿಸುವಿಕೆ ಸೇರಿದಂತೆ ಸಹಾಯವನ್ನು ವಿಸ್ತರಿಸುತ್ತಿವೆ.
- ಫೆಬ್ರವರಿ 28 ರಿಂದ ಸುಮಾರು 2,44,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಮರಳಿದ್ದಾರೆ.
- ಯುಎಇಯಲ್ಲಿ ಇಂದು ಮುಂಜಾನೆ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು ಮತ್ತು ನಂತರ ಪುನಃ ತೆರೆಯಲಾಯಿತು. ನಾನ್ ಷೆಡ್ಯೂಲ್ಡ್ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ, 16 ಮಾರ್ಚ್ 2026 ರಂದು ಸುಮಾರು 55 ವಿಮಾನಗಳು ಮತ್ತು ಇಂದು ಯುಎಇಯ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತಕ್ಕೆ ಸುಮಾರು 70 ವಿಮಾನಗಳನ್ನು ನಿರೀಕ್ಷಿಸಲಾಗಿದೆ. ಪ್ರಯಾಣಿಕರು ಅಪ್ಡೇಟ್ ಮಾಡಲಾದ ವೇಳಾಪಟ್ಟಿಯನ್ನು ಏರ್ಲೈನ್ಸ್ ಗಳೊಂದಿಗೆ ಪರಿಶೀಲಿಸಲು ಸಲಹೆ ನೀಡಲಾಗಿದೆ ಮತ್ತು ಸಹಾಯಕ್ಕಾಗಿ ಭಾರತೀಯ ಮಿಷನ್ ಗಳನ್ನು ಸಂಪರ್ಕಿಸಬಹುದು.
- ಸೌದಿ ಅರೇಬಿಯಾ ಮತ್ತು ಓಮನ್ ನಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
- ಕತಾರ್ ವಾಯುಪ್ರದೇಶವು ಭಾಗಶಃ ತೆರೆದಿದೆ, 16 ಮಾರ್ಚ್ 2026 ರಂದು ಮೂರು ವಿಮಾನಗಳು ಭಾರತಕ್ಕೆ ಕಾರ್ಯನಿರ್ವಹಿಸಿವೆ ಮತ್ತು ಇಂದು ಮೂರು ವಿಮಾನಗಳನ್ನು ನಿರೀಕ್ಷಿಸಲಾಗಿದೆ.
- ಕುವೈತ್ ವಾಯುಪ್ರದೇಶವು 28 ಫೆಬ್ರವರಿ 2026 ರಿಂದ ಮುಚ್ಚಲ್ಪಟ್ಟಿದೆ. ಜಜೀರಾ ಏರ್ವೇಸ್ ನ ವಿಶೇಷ ನಾನ್ ಷೆಡ್ಯೂಲ್ಡ್ ವಿಮಾನಗಳು ಸೌದಿ ಅರೇಬಿಯಾದ ಅಲ್ ಕೈಸುಮಾ ವಿಮಾನ ನಿಲ್ದಾಣದಿಂದ ಭಾರತಕ್ಕೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
- ಬಹ್ರೇನ್ ಮತ್ತು ಇರಾಕ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ, ಅಲ್ಲಿ ವಾಯುಪ್ರದೇಶ ಮುಚ್ಚಿರುವುದರಿಂದ ಸೌದಿ ಅರೇಬಿಯಾ ಮೂಲಕ ಪ್ರಯಾಣ ಸುಲಭಗೊಳಿಸುವುದನ್ನು ಮುಂದುವರಿಸಲಾಗಿದೆ.
- 13 ಮಾರ್ಚ್ 2026 ರಂದು ಸೋಹಾರ್ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಇಬ್ಬರು ಭಾರತೀಯ ಪ್ರಜೆಗಳ ಪಾರ್ಥಿವ ಶರೀರಗಳನ್ನು ಜೈಪುರದಲ್ಲಿರುವ ಅವರ ಕುಟುಂಬಗಳು ಸ್ವೀಕರಿಸಿವೆ. ಭಾರತ ಸರ್ಕಾರವು ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತದೆ.
- ಗಾಯಗೊಂಡ ಭಾರತೀಯ ಪ್ರಜೆಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ರಾಯಭಾರ ಕಚೇರಿಯು ಆಸ್ಪತ್ರೆ ಅಧಿಕಾರಿಗಳು ಮತ್ತು ಸಂಬಂಧಿತ ಕಂಪನಿಯೊಂದಿಗೆ ಸಂಪರ್ಕದಲ್ಲಿದೆ, ಅವರಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ.
- ಬಸ್ರಾದಲ್ಲಿರುವ ಮಿಷನ್ ತಂಡವು ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟ ಮತ್ತು ಪ್ರಸ್ತುತ ಹೋಟೆಲ್ ನಲ್ಲಿ ಉಳಿದುಕೊಂಡಿರುವ 15 ಭಾರತೀಯ ಸಿಬ್ಬಂದಿಗೆ ಸಹಾಯ ಮಾಡುವುದನ್ನು ಮುಂದುವರಿಸಿದೆ. ಅವರು ಭಾರತಕ್ಕೆ ಶೀಘ್ರವಾಗಿ ಮರಳಲು ಪ್ರಯತ್ನಗಳು ನಡೆಯುತ್ತಿವೆ.
- ಮೃತಪಟ್ಟ ಭಾರತೀಯ ಪ್ರಜೆಯ ಪಾರ್ಥಿವ ಶರೀರವನ್ನು ಶೀಘ್ರವಾಗಿ ಭಾರತಕ್ಕೆ ಕಳುಹಿಸಲು ಮಿಷನ್ ಇರಾಕ್ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸುತ್ತಿದೆ.
- ಇತ್ತೀಚಿನ ಘಟನೆಗಳಲ್ಲಿ ಐವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ. ಓಮನ್ ನಿಂದ ಇಬ್ಬರು ಭಾರತೀಯ ಪ್ರಜೆಗಳ ಪಾರ್ಥಿವ ಶರೀರಗಳನ್ನು ಇಂದು ಭಾರತಕ್ಕೆ ತರಲಾಗಿದೆ.
- ಓಮನ್, ಇರಾಕ್ ಮತ್ತು ಯುಎಇಯಲ್ಲಿನ ಭಾರತೀಯ ಮಿಷನ್ ಗಳು ನಾಪತ್ತೆಯಾಗಿರುವ ವ್ಯಕ್ತಿಯ ಬಗ್ಗೆ ಮತ್ತು ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಉಳಿದ ಪಾರ್ಥಿವ ಶರೀರಗಳನ್ನು ಶೀಘ್ರವಾಗಿ ತಾಯ್ನಾಡಿಗೆ ಕಳುಹಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ.
ಸರ್ಕಾರವು ಜಾಗರೂಕವಾಗಿದೆ ಮತ್ತು ಸಂಬಂಧಿತ ಸಚಿವಾಲಯಗಳು ಹಾಗೂ ಏಜೆನ್ಸಿಗಳ ನಡುವೆ ನಿಕಟ ಸಮನ್ವಯವನ್ನು ಮುಂದುವರಿಸಿದೆ, ಪ್ರಮುಖ ವಲಯಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
(ಪ್ರಕಟಣೆ ಐ.ಡಿ.: 2241431)
|