ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

"ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನ, ಸುಧಾರಣೆಗಳು ಮತ್ತು ಹಣಕಾಸು" ಎನ್ನುವ ವಿಷಯದ ಕುರಿತು ಬಜೆಟ್ ನಂತರದ ವೆಬಿನಾರಿನಲ್ಲಿ ಪ್ರಧಾನಮಂತ್ರಿ ಅವರ ಭಾಷಣ

ಪ್ರಕಟಣಾ ದಿನಾಂಕ: 27 FEB 2026 1:01PM by PIB Bengaluru

ನಮಸ್ಕಾರ!

ಈ ವರ್ಷದ ಮೊದಲ ಬಜೆಟ್ ವೆಬಿನಾರಿಗೆ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ಕಳೆದ ಕೆಲವು ವರ್ಷಗಳಿಂದ, ಬಜೆಟ್ ವೆಬಿನಾರ್ ಗಳು ಅಗತ್ಯವಾದ ಸಂಪ್ರದಾಯವಾಗಿ ಮಾರ್ಪಟ್ಟಿವೆ. ಆಗಾಗ್ಗೆ, ಬಜೆಟ್ ಅನ್ನು ವಿವಿಧ ನಿಯತಾಂಕಗಳ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ - ಕೆಲವೊಮ್ಮೆ ಷೇರು ಮಾರುಕಟ್ಟೆಯ ಪ್ರವೃತ್ತಿಯ ಬಗ್ಗೆ ಚರ್ಚಿಸುವುದು, ಕೆಲವೊಮ್ಮೆ ಆದಾಯ ತೆರಿಗೆ ಪ್ರಸ್ತಾಪಗಳ ಮೇಲೆ ಕೇಂದ್ರೀಕರಿಸುವುದು. ನಿಜವೇನೆಂದರೆ  ದೇಶದ ಬಜೆಟ್ ಅಲ್ಪಾವಧಿಯ ವ್ಯಾಪಾರ ದಾಖಲೆಯಲ್ಲ; ಇದು ನೀತಿಯ ಮಾರ್ಗಸೂಚಿಯಾಗಿದೆ. ಆದ್ದರಿಂದ, ಬಜೆಟ್ ನ ಪರಿಣಾಮಕಾರಿತ್ವವನ್ನು ಗಟ್ಟಿಯಾದ ನಿಯತಾಂಕಗಳ ಮೇಲೆ ನಿರ್ಣಯಿಸಬೇಕು: ಮೂಲಸೌಕರ್ಯವನ್ನು ವಿಸ್ತರಿಸುವ, ಸಾಲದ ಹರಿವನ್ನು ಸುಗಮಗೊಳಿಸುವ, ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸುವ, ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಹಾಗು ಜನರಿಗೆ ಜೀವನವನ್ನು ಸುಲಭಗೊಳಿಸುವ ಮತ್ತು ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನೀತಿಗಳು. ಬಜೆಟ್ ನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಆರ್ಥಿಕತೆಗೆ ಶಾಶ್ವತ ಶಕ್ತಿಯನ್ನು ಒದಗಿಸುತ್ತವೆ ಮತ್ತು ಮುಖ್ಯವಾಗಿ, ಯಾವುದೇ ಬಜೆಟ್ ಅನ್ನು ಪ್ರತ್ಯೇಕವಾಗಿ ನೋಡಬಾರದು. 

ರಾಷ್ಟ್ರ ನಿರ್ಮಾಣವು ನಿರಂತರ ಪ್ರಕ್ರಿಯೆಯಾಗಿದೆ. ಪ್ರತಿಯೊಂದು ಬಜೆಟ್ ದೊಡ್ಡ ಗುರಿಯತ್ತ ಇಡುವ ಒಂದು ಹೆಜ್ಜೆಯಾಗಿದೆ, ಮತ್ತು ನಮ್ಮ ಮುಂದಿರುವ ಆ ದೊಡ್ಡ ಗುರಿ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದಾಗಿದೆ. ಪ್ರತಿಯೊಂದು ಸುಧಾರಣೆ, ಪ್ರತಿಯೊಂದು ಹಂಚಿಕೆ, ಪ್ರತಿಯೊಂದು ಬದಲಾವಣೆಯನ್ನು ಈ ದೀರ್ಘ ಪ್ರಯಾಣದ ಭಾಗವಾಗಿ ನೋಡಬೇಕು. ಆದ್ದರಿಂದ, ಬಜೆಟ್ ನಂತರ ಪ್ರತಿ ವರ್ಷ ನಡೆಯುವ ಈ ವೆಬಿನಾರ್ ಗಳು ಬಹಳ ಮುಖ್ಯ. ಈ ವೆಬಿನಾರ್ ಗಳು ಕೇವಲ ವಿಚಾರಗಳ ವಿನಿಮಯಕ್ಕಿಂತ ಹೆಚ್ಚಾಗಿ, ಪರಿಣಾಮಕಾರಿ ಚಿಂತನ ಮಂಥನವೂ  ಆಗಿರುತ್ತವೆ ಎಂದು ನಾನು ನಿರೀಕ್ಷಿಸುತ್ತೇನೆ. ನಿಮ್ಮ ಅನುಭವಗಳು ಮತ್ತು ನೈಜವಾದ ಸವಾಲುಗಳ ಆಧಾರದ ಮೇಲೆ ನಿಮ್ಮ ಸಲಹೆಗಳು ನಿಸ್ಸಂದೇಹವಾಗಿ ಆರ್ಥಿಕ ತಂತ್ರಗಳನ್ನು ಪರಿಷ್ಕರಿಸಲು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಉದ್ಯಮ, ಶೈಕ್ಷಣಿಕ, ವಿಶ್ಲೇಷಕರು ಮತ್ತು ನೀತಿ ನಿರೂಪಕರು ಒಟ್ಟಾಗಿ ಯೋಚಿಸಿದಾಗ, ಯೋಜನೆಗಳ ಅನುಷ್ಠಾನವು ಸುಧಾರಿಸುತ್ತದೆ ಮತ್ತು ಫಲಿತಾಂಶಗಳು ಹೆಚ್ಚು ನಿಖರವಾಗಿರುತ್ತವೆ. ಈ ವೆಬಿನಾರ್ ಗಳ ಸರಣಿಯ ಹಿಂದಿನ ಭಾವನೆ ಇದು.
 
ಸ್ನೇಹಿತರೇ,

21ನೇ ಶತಮಾನದ ಕಾಲು ಭಾಗ ಕಳೆದಿದೆ. ನೀವು ನಿಮ್ಮ ಬಗ್ಗೆ ಯೋಚಿಸಿ ನೋಡಿದಾಗ, ನೀವು ಈಗಾಗಲೇ ನಿಮ್ಮ ಜೀವನದಲ್ಲಿ ಒಂದು ಉತ್ತಮ ಮತ್ತು ಮಹತ್ವದ ಅವಧಿ ಸಾಗಿರುವುದನ್ನು ಗಮನಿಸುತ್ತೀರಿ. ನಮ್ಮ ದೇಶದ ಅಭಿವೃದ್ಧಿಯ ಪ್ರಯಾಣದಲ್ಲಿ ನಾವು ಈಗ ನಿರ್ಣಾಯಕ ಘಟ್ಟದಲ್ಲಿದ್ದೇವೆ. ನಮ್ಮ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಸಮಯ ಇದು, ಮತ್ತು ಕಳೆದ ದಶಕದಲ್ಲಿ, ಭಾರತವು ಅಸಾಧಾರಣ ಚೇತರಿಕೆಯನ್ನು ಪ್ರದರ್ಶಿಸಿದೆ. ಇದು ಕಾಕತಾಳೀಯವಲ್ಲ; ನಮ್ಮ ಚೇತರಿಕೆಯು ದೃಢನಿಶ್ಚಯದಿಂದ ಚಾಲಿತ ಸುಧಾರಣೆಗಳ ಪರಿಣಾಮವಾಗಿದೆ. ನಾವು ಪ್ರಕ್ರಿಯೆಗಳನ್ನು ಸರಳೀಕರಿಸಿದ್ದೇವೆ, ವ್ಯವಹಾರ ಮಾಡುವ ಸುಲಭತೆಯನ್ನು ಸುಧಾರಿಸಿದ್ದೇವೆ, ತಂತ್ರಜ್ಞಾನ ಚಾಲಿತ ಆಡಳಿತವನ್ನು ವಿಸ್ತರಿಸಿದ್ದೇವೆ, ಸಂಸ್ಥೆಗಳನ್ನು ಬಲಪಡಿಸಿದ್ದೇವೆ ಮತ್ತು ಇಂದಿಗೂ ಸಹ, ದೇಶವು Reform Express - ಸುಧಾರಣಾ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದೆ. ಈ  ರಭಸವನ್ನು  ಕಾಪಾಡಿಕೊಳ್ಳಲು, ನಾವು ನೀತಿ ಉದ್ದೇಶದ ಮೇಲೆ ಮಾತ್ರವಲ್ಲದೆ ವಿತರಣಾ ಶ್ರೇಷ್ಠತೆಯ ಮೇಲೂ ಗಮನಹರಿಸಬೇಕು. ಸುಧಾರಣೆಗಳನ್ನು ಕೇವಲ ಘೋಷಣೆಗಳಿಂದಲ್ಲ, ಜೊತೆಗೆ ತಳಮಟ್ಟದಲ್ಲಿ ಅವುಗಳ ಪ್ರಭಾವದಿಂದ ಮೌಲ್ಯಮಾಪನ ಮಾಡಬೇಕು. ನಾವು ಎಐ, ಬ್ಲಾಕ್ ಚೈನ್ ಮತ್ತು ದತ್ತಾಂಶ ವಿಶ್ಲೇಷಣೆಯ ವ್ಯಾಪಕ ಬಳಕೆಯ ಮೂಲಕ ಪಾರದರ್ಶಕತೆ, ವೇಗ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಬೇಕು ಹಾಗು ಕುಂದುಕೊರತೆ ಪರಿಹಾರ ವ್ಯವಸ್ಥೆಗಳ ಪರಿಣಾಮವನ್ನು ನಿರಂತರವಾಗಿ ನೋಡಿಕೊಳ್ಳುತ್ತಿರುಬೇಕು.

ಸ್ನೇಹಿತರೇ,

ಕಳೆದ ದಶಕದಲ್ಲಿ, ನಾವು ಮೂಲಸೌಕರ್ಯದ ಮೇಲೆಯೇ ಹೆಚ್ಚು ಗಮನಹರಿಸಿದ್ದೇವೆ. ಹೆದ್ದಾರಿಗಳು, ರೈಲ್ವೆಗಳು, ಬಂದರುಗಳು, ಡಿಜಿಟಲ್ ನೆಟ್ ವರ್ಕ್ ಗಳು, ವಿದ್ಯುತ್ ವ್ಯವಸ್ಥೆಗಳು ಮತ್ತು ಇತರ ಹಲವು ಘನವಾದ ಸ್ವತ್ತುಗಳನ್ನು ನಿರ್ಮಿಸುವ ಮೂಲಕ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ ಎಂದು ನಾವು ಚೆನ್ನಾಗಿ ಯೋಚಿಸಿ ನಿರ್ಧರಿಸಿದ್ದೇವೆ. ಇವು ಮುಂಬರುವ ದಶಕಗಳವರೆಗೆ ಉತ್ಪಾದಕತೆಯನ್ನು ಉತ್ಪಾದಿಸುತ್ತಲೇ ಇರುತ್ತವೆ. ಇದು ಮತ್ತು ಈ ಕಾರಣಕ್ಕಾಗಿಯೇ, ಸಾರ್ವಜನಿಕ ಬಂಡವಾಳ ವೆಚ್ಚದಲ್ಲಿ ಸ್ಥಿರವಾದ ಹೆಚ್ಚಳವನ್ನು ಮಾಡಲಾಗುತ್ತಿದೆ. ಹನ್ನೊಂದು ವರ್ಷಗಳ ಹಿಂದೆ, ಸಾರ್ವಜನಿಕ ಬಂಡವಾಳದ ಬಜೆಟ್ ಸುಮಾರು ₹2 ಲಕ್ಷ ಕೋಟಿಗಳಷ್ಟಿತ್ತು; ಪ್ರಸ್ತುತ ಬಜೆಟ್ ನಲ್ಲಿ, ಇದು ₹12 ಲಕ್ಷ ಕೋಟಿಗಳಿಗೂ ಹೆಚ್ಚಾಗಿದೆ. ಈ ಬೃಹತ್ ಸರ್ಕಾರಿ ಹೂಡಿಕೆಯು ಖಾಸಗಿ ವಲಯಕ್ಕೂ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ.

ಸ್ನೇಹಿತರೇ,

ಹೊಸ ಶಕ್ತಿಯೊಂದಿಗೆ ಕೈಗಾರಿಕೆ ಮತ್ತು ಹಣಕಾಸು ಸಂಸ್ಥೆಗಳು ಮುಂದೆ ಹೆಜ್ಜೆ ಹಾಕುವ ಸಮಯ ಇದು. ನಮಗೆ ಮೂಲಸೌಕರ್ಯದಲ್ಲಿ ಹೆಚ್ಚಿನ ಭಾಗವಹಿಸುವಿಕೆ, ಹಣಕಾಸು ಮಾದರಿಗಳಲ್ಲಿ ಹೆಚ್ಚಿನ ನಾವೀನ್ಯತೆ ಮತ್ತು ಉದಯೋನ್ಮುಖ ವಲಯಗಳಲ್ಲಿ ಬಲವಾದ ಸಹಯೋಗದ ಅಗತ್ಯವಿದೆ. ಈ ದಿಕ್ಕಿನಲ್ಲಿ ನನಲ್ಲಿ ಇನ್ನೊಂದು ಸಲಹೆ ಇದೆ: ನಾವು ಯೋಜನಾ ಮಂಜೂರಾತಿ ವಿಧಾನ ಮತ್ತು ಮೌಲ್ಯಮಾಪನ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸಬೇಕು. ವ್ಯರ್ಥ ಮತ್ತು ವಿಳಂಬವನ್ನು ತಡೆಗಟ್ಟಲು ನಾವು ವೆಚ್ಚಮತ್ತು ಲಾಭ ವಿಶ್ಲೇಷಣೆ ಹಾಗು ಜೀವನಚಕ್ರ ವೆಚ್ಚಕ್ಕೆಆದ್ಯತೆ ನೀಡಬೇಕು.
 
ಸ್ನೇಹಿತರೇ,

ನಾವು ವಿದೇಶಿ ಹೂಡಿಕೆ ಚೌಕಟ್ಟನ್ನು ಇನ್ನೂ ಸರಳಗೊಳಿಸುತ್ತಿದ್ದೇವೆ. ವ್ಯವಸ್ಥೆಯನ್ನು ಹೆಚ್ಚು ಊಹಿಸಬಹುದಾದ ಮತ್ತು ಹೂಡಿಕೆದಾರರ ಸ್ನೇಹಿಯನ್ನಾಗಿ ಮಾಡುವುದು ನಮ್ಮ ಪ್ರಯತ್ನ. ದೀರ್ಘಾವಧಿಯ ಹಣಕಾಸು ಸುಧಾರಿಸಲು ಮತ್ತು ಬಾಂಡ್ ಮಾರುಕಟ್ಟೆಗಳನ್ನು ಹೆಚ್ಚು ಕ್ರಿಯಾತ್ಮಕಗೊಳಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಬಾಂಡ್ ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಯನ್ನು ಸರಳೀಕರಿಸಲಾಗುತ್ತಿದೆ.

ಸ್ನೇಹಿತರೇ,

ನಾವು ಬಾಂಡ್ ಮಾರುಕಟ್ಟೆ ಸುಧಾರಣೆಗಳನ್ನು ದೀರ್ಘಾವಧಿಯ ಬೆಳವಣಿಗೆಯನ್ನು ಸಕ್ರಿಯಗೊಳಿಸುವ ಸಾಧನಗಳಾಗಿ ಪರಿಗಣಿಸಬೇಕು. ನಾವು ಭವಿಷ್ಯವನ್ನು ಖಚಿತಪಡಿಸಿಕೊಳ್ಳಬೇಕು, ದ್ರವ್ಯತೆಯನ್ನು ಹೆಚ್ಚಿಸಬೇಕು, ಹೊಸ ಸಾಧನಗಳನ್ನು ಪರಿಚಯಿಸಬೇಕು ಮತ್ತು ಅಪಾಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಆಗ ಮಾತ್ರ ನಾವು ಸುಸ್ಥಿರ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ನೀವು ಜಗತ್ತಿನಲ್ಲಿರುವ ಅತ್ಯುತ್ತಮ ಅಭ್ಯಾಸಗಳಿಂದ ಕಲಿಯುತ್ತೀರಿ ಮತ್ತು ವಿದೇಶಿ ಹೂಡಿಕೆ ಚೌಕಟ್ಟು ಹಾಗು ಬಾಂಡ್ ಮಾರುಕಟ್ಟೆಗಳನ್ನು ಬಲಪಡಿಸಲು ಸ್ಪಷ್ಟ ಮತ್ತು ಅತ್ಯುತ್ತಮ ಸಲಹೆಗಳನ್ನು ನೀಡುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ.
 
ಸ್ನೇಹಿತರೇ,

ಯಾರು ಬೇಕಾದರೂ ನೀತಿ ಚೌಕಟ್ಟನ್ನು ಅಭಿವೃದ್ಧಿಪಡಿಸಬಹುದು, ಆದರೆ ಅದರ ಯಶಸ್ಸು ನಿಮ್ಮೆಲ್ಲರ ಮೇಲೆ ಅವಲಂಬಿಸಿದೆ. ಉದ್ಯಮವು ಹೊಸ ಹೂಡಿಕೆ ಮತ್ತು ನಾವೀನ್ಯತೆಯೊಂದಿಗೆ ಮುಂದೆ ಬರಬೇಕು. ಹಣಕಾಸು ಸಂಸ್ಥೆಗಳು ಹಾಗು ವಿಶ್ಲೇಷಕರು ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಮಾರುಕಟ್ಟೆ ವಿಶ್ವಾಸವನ್ನು ಬಲಪಡಿಸಲು ಸಹಾಯ ಮಾಡಬೇಕು. ಸರ್ಕಾರ, ಉದ್ಯಮ ಮತ್ತು ಜ್ಞಾನ ಹಂಚಿಕೊಳ್ಳುವವರು ಒಟ್ಟಾಗಿ ಮುಂದುವರೆದಾಗ ಸುಧಾರಣೆಗಳು ಉಂಟಾಗುತ್ತವೆ. ಆಗ ಮಾತ್ರ ಘೋಷಣೆಗಳು ನೈಜವಾದ ಮಟ್ಟದಲ್ಲಿ ಸಾಧನೆಗಳಾಗುತ್ತವೆ. ಸ್ಪಷ್ಟವಾದ ಸುಧಾರಣಾ ಪಾಲುದಾರಿಕೆ ಚೌಕಟ್ಟನ್ನು ನಾವು ಅಭಿವೃದ್ಧಿಪಡಿಸಬೇಕೆಂದು ನನ್ನ ಸಲಹೆ. ಇದು ಸರ್ಕಾರ, ಕೈಗಾರಿಕೆ, ಹಣಕಾಸು ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಹಂಚಿಕೆಯ ಸಂಕಲ್ಪವಾಗಿರಬೇಕು. ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ಪ್ರಯಾಣದಲ್ಲಿ ಈ ಚೌಕಟ್ಟು, ಚಾರ್ಟರ್ , ಒಂದು ಬಹಳ ಪ್ರಮುಖವಾದ ದಾಖಲೆಯಾಗಲಿದೆ.
 
ಸ್ನೇಹಿತರೇ,

ಈ ಬಜೆಟ್ ತೆರೆದಿರುವ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಅದು ತೆರೆದಿರುವ ಹೊಸ ಅವಕಾಶಗಳೊಂದಿಗೆ ಆಳವಾಗಿ ತೊಡಗಿಸಿಕೊಳ್ಳಲು ಎಲ್ಲಾ ಸಂಬಂಧಪಟ್ಟವರು, ಹಣಕಾಸು ಸಂಸ್ಥೆಗಳು, ಮಾರುಕಟ್ಟೆಗಳು, ಉದ್ಯಮ, ವೃತ್ತಿಪರರು ಮತ್ತು ಅನ್ವೇಷಕರಿಗೆ ನಾನು ಹೇಳ ಬಯಸುತ್ತೇನೆ.  ನಿಮ್ಮ ಭಾಗವಹಿಸುವಿಕೆಯು ಯೋಜನೆಗಳ ಅನುಷ್ಠಾನವನ್ನು ಸುಧಾರಿಸುತ್ತದೆ ಹಾಗು ನಿಮ್ಮ ಪ್ರತಿಕ್ರಿಯೆ ಮತ್ತು ಸಹಕಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಬನ್ನಿ ನಾವೆಲ್ಲರೂ ಸಾಧ್ಯವಾದಷ್ಟು ಬೇಗ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಭವಿಷ್ಯವನ್ನು ಸುಧಾರಿಸೋಣ, ಬೆಳೆಯೋಣ ಮತ್ತು ನಿರ್ಮಿಸೋಣ.

ಇಂದು ನೀವೆಲ್ಲರೂ ಪ್ರಕ್ರಿಯೆಗಳನ್ನು ಸರಳಗೊಳಿಸುವತ್ತ ಗಮನಹರಿಸಿ ಆಳವಾದ ಚರ್ಚೆಯಲ್ಲಿ ತೊಡಗುತ್ತೀರಿ ಎಂದು ನನಗೆ ವಿಶ್ವಾಸವಿದೆ. ನಾವು ಈ ತಪ್ಪನ್ನು ಮಾಡಬಾರದು - ಬಜೆಟ್ಗೆ ಮೊದಲು ನಿಮ್ಮೆಲ್ಲರೊಂದಿಗೆ ಸಮಾಲೋಚಿಸುತ್ತೇವೆ,  ಅದರ ಉದ್ದೇಶ ಬೇರೆ, ಅದು ಉತ್ತಮ ಬಜೆಟ್ ಅನ್ನು ಖಚಿತಪಡಿಸಿಕೊಳ್ಳಲು. ಆದರೆ ಈಗ ಬಜೆಟ್ ಅನ್ನು ಮಾಡಲಾಗಿದೆ, ಅದರ ಬಗ್ಗೆ ಚರ್ಚಿಸಲು ಇನ್ನು ಮುಂದೆ ಯಾವುದೇ ಕಾರ್ಯಕ್ರಮವಿಲ್ಲ. ನಾವು ಈಗ ಬಜೆಟ್ ಅನ್ನು ಸಾಧ್ಯವಾದಷ್ಟು ಬೇಗ, ಸರಳ ರೀತಿಯಲ್ಲಿ ಕಾರ್ಯಗತಗೊಳಿಸಬೇಕು ಮತ್ತು ಎಲ್ಲರೂ, ಎಲ್ಲಾ ಸಂಬಂಧಪಟ್ಟವರು ಅದರಿಂದ ಪ್ರಯೋಜನ ಪಡೆಯುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ನೀವು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಚರ್ಚಿಸಿದರೆ ಮತ್ತು ಯೋಚಿಸಿದರೆ, ಈ ವೆಬಿನಾರ್ ನಿಜವಾಗಿಯೂ ಚೈತನ್ಯದಾಯಕ  ಆರ್ಥಿಕತೆಗೆ ಬಾಗಿಲು ತೆರೆಯುತ್ತದೆ.

ಬಹಳ  ಧನ್ಯವಾದಗಳು!

ನಮಸ್ಕಾರ!

 

*****


(ಪ್ರಕಟಣೆ ಐ.ಡಿ.: 2233764) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , Punjabi , Gujarati , Odia , Assamese , हिन्दी , Manipuri , Telugu , English