ಪ್ರಧಾನ ಮಂತ್ರಿಯವರ ಕಛೇರಿ
ಕೇರಳದ ತಿರುವನಂತಪುರಂನಲ್ಲಿ ವಿಳಿಂಜಂ ಅಂತಾರಾಷ್ಟ್ರೀಯ ಬಂದರು ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
02 MAY 2025 2:06PM by PIB Bengaluru
ಕೇರಳದ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಜೀ, ಮುಖ್ಯಮಂತ್ರಿಗಳಾದ ಶ್ರೀ ಪಿ. ವಿಜಯನ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ವೇದಿಕೆಯಲ್ಲಿ ಉಪಸ್ಥಿತರಿರುವ ಇತರೆ ಎಲ್ಲ ಗಣ್ಯರೆ ಮತ್ತು ಕೇರಳದ ನನ್ನ ಸಹೋದರ ಸಹೋದರಿಯರೆ.
ಎಲ್ಲವರ್ಕುಂ ಎಂದೆ ನಮಸ್ಕಾರಂ. ಒರಿಕ್ಕಲ್ ಕುಡಿ ಶ್ರೀ ಅನಂತಪದ್ಮನಾಭಾಂಡೆ ಮನ್ನಿಲೆಕ್ಕ ವರನ ಸಾಧಿಸಿಲ್ ಆನಿಕ್ಕ್ ಅತಿಯಾಯ ಸಂತೋಷಮುಂದ್.
ಸ್ನೇಹಿತರೆ,
ಇಂದು ಭಗವಾನ್ ಆದಿ ಶಂಕರಾಚಾರ್ಯರ ಜನ್ಮ ದಿನಾಚರಣೆ. 3 ವರ್ಷಗಳ ಹಿಂದೆ ಸೆಪ್ಟೆಂಬರ್ನಲ್ಲಿ ಅವರ ಜನ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡುವ ಸೌಭಾಗ್ಯ ನನಗೆ ಸಿಕ್ಕಿತು. ನನ್ನ ಸಂಸದೀಯ ಕ್ಷೇತ್ರ ಕಾಶಿಯಲ್ಲಿರುವ ವಿಶ್ವನಾಥ ಧಾಮ ಸಂಕೀರ್ಣದಲ್ಲಿ ಆದಿ ಶಂಕರಾಚಾರ್ಯರ ಭವ್ಯ ಪ್ರತಿಮೆ ಸ್ಥಾಪಿಸಲಾಗಿದೆ ಎಂಬ ವಿಷಯ ನನಗೆ ಸಂತೋಷ ತಂದಿದೆ. ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಆದಿ ಶಂಕರಾಚಾರ್ಯರ ದೈವಿಕ ವಿಗ್ರಹವನ್ನು ಅನಾವರಣಗೊಳಿಸುವ ಸೌಭಾಗ್ಯವೂ ನನಗೆ ಸಿಕ್ಕಿದೆ. ಇಂದು ಉತ್ತರಾಖಂಡದ ದೇವಭೂಮಿಯಲ್ಲಿ ಕೇದಾರನಾಥ ದೇವಾಲಯದ ಬಾಗಿಲುಗಳು ತೆರೆದಿವೆ. ಕೇರಳವನ್ನು ತೊರೆದ ನಂತರ, ಆದಿ ಶಂಕರಾಚಾರ್ಯರು ದೇಶದ ವಿವಿಧ ಮೂಲೆಗಳಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರದ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಈ ಶುಭ ಸಂದರ್ಭದಲ್ಲಿ, ನಾನು ಅವರಿಗೆ ನನ್ನ ಗೌರವಯುತ ನಮನ ಸಲ್ಲಿಸುತ್ತೇನೆ.
ಸ್ನೇಹಿತರೆ,
ಒಂದು ಕಡೆ ತನ್ನ ಅಗಾಧ ಸಾಧ್ಯತೆಗಳನ್ನು ಹೊಂದಿರುವ ವಿಶಾಲವಾದ ಸಾಗರವಿದೆ. ಇನ್ನೊಂದು ಕಡೆ ಪ್ರಕೃತಿಯ ಅದ್ಭುತ ಸೌಂದರ್ಯವಿದೆ. ಇದೆಲ್ಲದರ ನಡುವೆ, ಹೊಸ ಯುಗದ ಅಭಿವೃದ್ಧಿಯ ಸಂಕೇತವಾದ ವಿಳಿಂಜಂ(ವಿಜ್ಹನ್ ಜಾಂ) ಆಳ ನೀರಿನ ಸಮುದ್ರ ಬಂದರು ಇದೆ. ಇದಕ್ಕಾಗಿ, ನಾನು ಕೇರಳದ ಜನರನ್ನು, ದೇಶದ ಜನರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಈ ಸಮುದ್ರ ಬಂದರನ್ನು 8,800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸರಕು ಸಾಗಣೆಯ ಬಂದರಿನ ಪ್ರಸ್ತುತ ಸಾಮರ್ಥ್ಯವು ಮುಂಬರುವ ದಿನಗಳಲ್ಲಿ 3 ಪಟ್ಟು ಹೆಚ್ಚಾಗುತ್ತದೆ. ವಿಶ್ವದ ದೊಡ್ಡ ಸರಕು ಹಡಗುಗಳು ಇಲ್ಲಿಗೆ ಸುಲಭವಾಗಿ ಬರಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಭಾರತದ ಶೇಕಡ 75ರಷ್ಟು ಸರಕು ಸಾಗಣೆಯು ಭಾರತದ ಹೊರಗಿನ ಬಂದರುಗಳಲ್ಲಿ ನಡೆಯುತ್ತಿತ್ತು. ಇದರಿಂದಾಗಿ, ದೇಶವು ಭಾರಿ ಆದಾಯ ನಷ್ಟವನ್ನು ಎದುರಿಸುತ್ತಿತ್ತು. ಆದರೀಗ ಈ ಪರಿಸ್ಥಿತಿ ಬದಲಾಗಲಿದೆ. ಈಗ ದೇಶದ ಹಣವನ್ನು ದೇಶಕ್ಕಾಗಿ ಬಳಸಲಾಗುತ್ತದೆ. ಹೊರಹೋಗುತ್ತಿದ್ದ ಹಣವು ಕೇರಳ ಮತ್ತು ವಿಳಿಂಜಂ(ವಿಜ್ಹನ್ ಜಾಂ) ಜನರಿಗೆ ಹೊಸ ಆರ್ಥಿಕ ಅವಕಾಶಗಳನ್ನು ತರಲಿದೆ.
ಸ್ನೇಹಿತರೆ,
ಗುಲಾಮಗಿರಿಗೆ ಮುನ್ನ, ನಮ್ಮ ಭಾರತ ಸಾವಿರಾರು ವರ್ಷಗಳಿಂದ ಸಮೃದ್ಧಿ ಕಂಡಿದೆ. ಒಂದು ಕಾಲದಲ್ಲಿ, ಭಾರತವು ಜಾಗತಿಕ ಜಿಡಿಪಿಯಲ್ಲಿ ಪ್ರಮುಖ ಪಾಲು ಹೊಂದಿತ್ತು. ಆ ಸಮಯದಲ್ಲಿ, ಇತರ ದೇಶಗಳಿಗಿಂತ ನಮ್ಮನ್ನು ವಿಭಿನ್ನಗೊಳಿಸಿದ್ದು ನಮ್ಮ ಸಮುದ್ರ ಸಾಮರ್ಥ್ಯ ಮತ್ತು ನಮ್ಮ ಬಂದರು ನಗರಗಳ ಆರ್ಥಿಕ ಚಟುವಟಿಕೆ. ಇದರಲ್ಲಿ ಕೇರಳವು ಪ್ರಮುಖ ಕೊಡುಗೆ ನೀಡಿತು. ಕೇರಳದಿಂದ ಅರೇಬಿಯನ್ ಸಮುದ್ರದ ಮೂಲಕ ವಿಶ್ವದ ವಿವಿಧ ದೇಶಗಳಿಗೆ ವ್ಯಾಪಾರ ನಡೆಯುತ್ತಿತ್ತು. ಇಲ್ಲಿಂದ, ಹಡಗುಗಳು ವ್ಯಾಪಾರಕ್ಕಾಗಿ ವಿಶ್ವದ ಹಲವು ದೇಶಗಳಿಗೆ ಹೋಗುತ್ತಿದ್ದವು. ಇಂದು, ಭಾರತ ಸರ್ಕಾರವು ದೇಶದ ಆರ್ಥಿಕ ಶಕ್ತಿಯ ಆ ಮಾರ್ಗವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ. ಭಾರತದ ಕರಾವಳಿ ರಾಜ್ಯಗಳು ಮತ್ತು ನಮ್ಮ ಬಂದರು ನಗರಗಳು ಅಭಿವೃದ್ಧಿ ಹೊಂದಿದ ಭಾರತದ ಬೆಳವಣಿಗೆಯ ಪ್ರಮುಖ ಕೇಂದ್ರಗಳಾಗುತ್ತವೆ. ನಾನು ಬಂದರಿಗೆ ಭೇಟಿ ನೀಡಿ ಹಿಂತಿರುಗಿದ್ದೇನೆ, ಗುಜರಾತ್ನ ಜನರು ಅದಾನಿ ಕೇರಳದಲ್ಲಿ ಅಂತಹ ದೊಡ್ಡ ಬಂದರು ನಿರ್ಮಿಸಿದ್ದಾರೆ ಎಂದು ತಿಳಿದಾಗ, ಅವರು 30 ವರ್ಷಗಳಿಂದ ಗುಜರಾತ್ ಬಂದರಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಆದರೆ ಇಲ್ಲಿಯವರೆಗೆ ಅವರು ಅಲ್ಲಿ ಅಂತಹ ಬಂದರು ನಿರ್ಮಿಸಿಲ್ಲ, ಆಗ ಅವರು ಗುಜರಾತ್ ಜನರ ಕೋಪವನ್ನು ಸಹಿಸಿಕೊಳ್ಳಲು ಸಿದ್ಧರಾಗಿದ್ದರು. ನಮ್ಮ ಮುಖ್ಯಮಂತ್ರಿಗಳಿಗೆ ನಾನು ಹೇಳಲು ಬಯಸುತ್ತೇನೆ, ನೀವು ಭಾರತೀಯ ಒಕ್ಕೂಟದ ಬಲವಾದ ಆಧಾರಸ್ತಂಭ, ಶಶಿ ತರೂರ್ ಕೂಡ ಇಲ್ಲಿದ್ದಾರೆ, ಇಂದಿನ ಕಾರ್ಯಕ್ರಮವು ಅನೇಕ ಜನರಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುತ್ತದೆ. ಸಂದೇಶವು ಎಲ್ಲಿಗೆ ಹೋಗಬೇಕಿತ್ತೋ ಅಲ್ಲಿಗೆ ಹೋಗಿದೆ.
ಸ್ನೇಹಿತರೆ,
ಮೂಲಸೌಕರ್ಯ ಮತ್ತು ಸುಲಭವಾಗಿ ವ್ಯಾಪಾರ ವ್ಯವಹಾರ ಮಾಡುವುದನ್ನು ಉತ್ತೇಜಿಸಿದಾಗ ಮಾತ್ರ ಬಂದರು ಆರ್ಥಿಕತೆಯ ಸಂಪೂರ್ಣ ಸಾಮರ್ಥ್ಯ ಅರಿವಾಗುತ್ತದೆ. ಕಳೆದ 10 ವರ್ಷಗಳಲ್ಲಿ ಭಾರತ ಸರ್ಕಾರದ ಬಂದರು ಮತ್ತು ಜಲಮಾರ್ಗ ನೀತಿಯ ನೀಲನಕ್ಷೆ ಇದಾಗಿದೆ. ನಾವು ಕೈಗಾರಿಕಾ ಚಟುವಟಿಕೆಗಳು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಯ ಕೆಲಸದಲ್ಲಿ ವೇಗವಾಗಿ ಪ್ರಗತಿ ಸಾಧಿಸಿದ್ದೇವೆ. ಭಾರತ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ, ಸಾಗರಮಾಲಾ ಯೋಜನೆಯಡಿ, ಬಂದರು ಮೂಲಸೌಕರ್ಯವನ್ನು ನವೀಕರಿಸಿದೆ ಮತ್ತು ಬಂದರು ಸಂಪರ್ಕವನ್ನು ಹೆಚ್ಚಿಸಿದೆ. ಪಿಎಂ-ಗತಿಶಕ್ತಿ ಅಡಿ, ಜಲಮಾರ್ಗಗಳು, ರೈಲ್ವೆಗಳು, ಹೆದ್ದಾರಿಗಳು ಮತ್ತು ವಾಯುಮಾರ್ಗಗಳ ಅಂತರ-ಸಂಪರ್ಕವನ್ನು ತ್ವರಿತ ಗತಿಯಲ್ಲಿ ಸುಧಾರಿಸಲಾಗುತ್ತಿದೆ. ಸುಲಭವಾಗಿ ವ್ಯಾಪಾರ ಮಾಡಲು ತಂದ ಸುಧಾರಣೆಗಳು ಬಂದರುಗಳು ಮತ್ತು ಇತರೆ ಮೂಲಸೌಕರ್ಯ ವಲಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿವೆ. ಭಾರತೀಯ ನಾವಿಕರಿಗೆ ಸಂಬಂಧಿಸಿದ ನಿಯಮಗಳಲ್ಲಿ ಭಾರತ ಸರ್ಕಾರವು ಸುಧಾರಣೆಗಳನ್ನು ಮಾಡಿದೆ. ಇದೀಗ ದೇಶವು ಅದರ ಫಲಿತಾಂಶಗಳನ್ನು ನೋಡುತ್ತಿದೆ. 2014ರಲ್ಲಿ ಭಾರತೀಯ ನಾವಿಕರ ಸಂಖ್ಯೆ 1.25 ಲಕ್ಷಕ್ಕಿಂತ ಕಡಿಮೆಯಿತ್ತು. ಈಗ ಅವರ ಸಂಖ್ಯೆ 3.25 ಲಕ್ಷಕ್ಕಿಂತ ಹೆಚ್ಚಾಗಿದೆ. ಇಂದು ನಾವಿಕರ ಸಂಖ್ಯೆಯ ದೃಷ್ಟಿಯಿಂದ ಭಾರತವು ವಿಶ್ವದ ಅಗ್ರ 3 ದೇಶಗಳ ಪಟ್ಟಿಯಲ್ಲಿ ಸೇರಿದೆ.
ಸ್ನೇಹಿತರೆ,
ಹಡಗು ಉದ್ಯಮಕ್ಕೆ ಸಂಬಂಧಿಸಿದ ಜನರಿಗೆ 10 ವರ್ಷಗಳ ಹಿಂದೆ ನಮ್ಮ ಹಡಗುಗಳು, ಬಂದರುಗಳಲ್ಲಿ ಎಷ್ಟು ಸಮಯ ಕಾಯಬೇಕಾಗಿತ್ತು ಎಂಬುದು ತಿಳಿದಿದೆ. ಅವುಗಳನ್ನು ಇಳಿಸಲು ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದಾಗಿ, ವ್ಯವಹಾರ, ಕೈಗಾರಿಕೆ ಮತ್ತು ಆರ್ಥಿಕತೆಯ ವೇಗದ ಮೇಲೆ ಪರಿಣಾಮ ಬೀರಿತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ಪ್ರಮುಖ ಬಂದರುಗಳಲ್ಲಿ ಹಡಗು ತಿರುಗುವ ಸಮಯ ಶೇಕಡ 30ರಷ್ಟು ಕಡಿಮೆಯಾಗಿದೆ. ನಮ್ಮ ಬಂದರುಗಳ ದಕ್ಷತೆಯೂ ಹೆಚ್ಚಾಗಿದೆ, ಇದರಿಂದಾಗಿ ನಾವು ಕಡಿಮೆ ಸಮಯದಲ್ಲಿ ಹೆಚ್ಚಿನ ಸರಕುಗಳ ಸಾಗಣೆಯನ್ನು ನಿರ್ವಹಿಸುತ್ತಿದ್ದೇವೆ.
ಭಾರತದ ಈ ಯಶಸ್ಸಿನ ಹಿಂದೆ ಕಳೆದ ದಶಕದ ಕಠಿಣ ಪರಿಶ್ರಮ ಮತ್ತು ದೃಷ್ಟಿಕೋನವಿದೆ. ಕಳೆದ 10 ವರ್ಷಗಳಲ್ಲಿ, ನಾವು ನಮ್ಮ ಬಂದರುಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ್ದೇವೆ. ನಮ್ಮ ರಾಷ್ಟ್ರೀಯ ಜಲಮಾರ್ಗಗಳು ಸಹ 8 ಪಟ್ಟು ವಿಸ್ತರಿಸಿವೆ. ಇಂದು, ನಮ್ಮ 2 ಭಾರತೀಯ ಬಂದರುಗಳು ಜಾಗತಿಕ ಟಾಪ್ 30 ಬಂದರುಗಳಲ್ಲಿ ಸೇರಿವೆ. ಸರಕು ಸಾಗಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ನಮ್ಮ ಶ್ರೇಯಾಂಕವೂ ಸುಧಾರಿಸಿದೆ. ಜಾಗತಿಕ ಹಡಗು ನಿರ್ಮಾಣದಲ್ಲಿ ನಾವು ಟಾಪ್-20 ದೇಶಗಳಲ್ಲಿ ಸೇರಿದ್ದೇವೆ. ನಮ್ಮ ಮೂಲಭೂತ ಮೂಲಸೌಕರ್ಯವನ್ನು ಸುಧಾರಿಸಿದ ನಂತರ, ನಾವು ಈಗ ಜಾಗತಿಕ ವ್ಯಾಪಾರದಲ್ಲಿ ಭಾರತದ ಕಾರ್ಯತಂತ್ರ ಸ್ಥಾನದ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಈ ದಿಕ್ಕಿನಲ್ಲಿ, ನಾವು ಕಡಲ ಅಮೃತ್ ಕಾಲ್ ದೃಷ್ಟಿಯನ್ನು ಪ್ರಾರಂಭಿಸಿದ್ದೇವೆ. ಅಭಿವೃದ್ಧಿ ಹೊಂದಿದ ಭಾರತದ ಗುರಿ ತಲುಪಲು ನಮ್ಮ ಕಡಲ ಕಾರ್ಯತಂತ್ರ ಹೇಗಿರಬೇಕು ಎಂಬುದರ ಕುರಿತು ನಾವು ಒಂದು ಮಾರ್ಗಸೂಚಿ ರೂಪಿಸಿದ್ದೇವೆ. ಜಿ-20 ಶೃಂಗಸಭೆಯಲ್ಲಿ, ನಾವು ಅನೇಕ ದೊಡ್ಡ ದೇಶಗಳೊಂದಿಗೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ಬಗ್ಗೆ ಒಪ್ಪಿಕೊಂಡಿದ್ದೇವೆ ಎಂಬುದನ್ನು ನೀವು ನೆನಪಿಸಿಕೊಳ್ಳುತ್ತೀರಿ. ಈ ಮಾರ್ಗದಲ್ಲಿ ಕೇರಳವು ಬಹಳ ಮುಖ್ಯವಾದ ಸ್ಥಾನದಲ್ಲಿದೆ. ಇದರಿಂದ ಕೇರಳವು ಬಹಳಷ್ಟು ಪ್ರಯೋಜನ ಪಡೆಯಲಿದೆ.
ಸ್ನೇಹಿತರೆ,
ದೇಶದ ಕಡಲ ವಲಯಕ್ಕೆ ಹೊಸ ಎತ್ತರ ನೀಡುವಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸಿದೆ. ಕಳೆದ 10 ವರ್ಷಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಡಿ, ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಈ ಸಹಭಾಗಿತ್ವದೊಂದಿಗೆ, ನಮ್ಮ ಬಂದರುಗಳನ್ನು ಜಾಗತಿಕ ಮಾನದಂಡಗಳಿಗೆ ಮೇಲ್ದರ್ಜೆಗೆ ಏರಿಸುವ ಜತೆಗೆ, ಭವಿಷ್ಯಕ್ಕೆ ಸಿದ್ಧಪಡಿಸಿದ್ದೇವೆ. ಖಾಸಗಿ ವಲಯದ ಭಾಗವಹಿಸುವಿಕೆಯು ನಾವೀನ್ಯತೆ ಮತ್ತು ದಕ್ಷತೆ ಎರಡನ್ನೂ ಉತ್ತೇಜಿಸಿದೆ. ಮಾಧ್ಯಮ ಪ್ರತಿನಿಧಿಗಳು ಒಂದು ವಿಷಯದ ಮೇಲೆ ಗಮನ ಹರಿಸಿರಬಹುದು, ನಮ್ಮ ಬಂದರು ಸಚಿವರು ತಮ್ಮ ಭಾಷಣ ಮಾಡುತ್ತಿರುವಾಗ, ಅವರು ಅದಾನಿಯನ್ನು ಉಲ್ಲೇಖಿಸುತ್ತಾ, ನಮ್ಮ ಸರ್ಕಾರದ ಪಾಲುದಾರ, ಕಮ್ಯುನಿಸ್ಟ್ ಸರ್ಕಾರದ ಸಚಿವರು ಖಾಸಗಿ ವಲಯದ ಪರವಾಗಿ ಮಾತನಾಡುತ್ತಿದ್ದಾರೆ, ನಮ್ಮ ಸರ್ಕಾರದ ಪಾಲುದಾರ, ಇದು ಪರಿವರ್ತನೆಯಾಗುತ್ತಿರುವ ಭಾರತ ಎಂದು ಹೇಳಿದರು.
ಸ್ನೇಹಿತರೆ,
ನಾವು ಕೊಚ್ಚಿಯಲ್ಲಿ ಹಡಗು ನಿರ್ಮಾಣ ಮತ್ತು ದುರಸ್ತಿ ಕ್ಲಸ್ಟರ್ ಸ್ಥಾಪಿಸುವತ್ತ ಸಾಗುತ್ತಿದ್ದೇವೆ. ಈ ಕ್ಲಸ್ಟರ್ ಸ್ಥಾಪನೆಯೊಂದಿಗೆ, ಇಲ್ಲಿ ಅನೇಕ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಕೇರಳದ ಸ್ಥಳೀಯ ಪ್ರತಿಭೆಗಳು, ಕೇರಳದ ಯುವಕರು ಮುಂದುವರಿಯಲು ಅವಕಾಶ ಪಡೆಯುತ್ತಾರೆ.
ಸ್ನೇಹಿತರೆ,
ಭಾರತದ ಹಡಗು ನಿರ್ಮಾಣ ಸಾಮರ್ಥ್ಯಗಳನ್ನು ಹೆಚ್ಚಿಸಲು ದೇಶವು ಈಗ ದೊಡ್ಡ ಗುರಿಗಳೊಂದಿಗೆ ಮುಂದುವರಿಯುತ್ತಿದೆ. ಈ ವರ್ಷದ ಬಜೆಟ್ನಲ್ಲಿ, ಭಾರತದಲ್ಲಿ ದೊಡ್ಡ ಹಡಗುಗಳ ನಿರ್ಮಾಣ ಹೆಚ್ಚಿಸಲು ಹೊಸ ನೀತಿಯನ್ನು ಘೋಷಿಸಲಾಗಿದೆ. ಇದು ನಮ್ಮ ಉತ್ಪಾದನಾ ವಲಯಕ್ಕೂ ಉತ್ತೇಜನ ನೀಡುತ್ತದೆ. ಇದು ನಮ್ಮ ಎಂಎಸ್ಎಂಇಗಳಿಗೆ ನೇರವಾಗಿ ಪ್ರಯೋಜನ ನೀಡುತ್ತದೆ, ಇದು ಹೆಚ್ಚಿನ ಸಂಖ್ಯೆಯ ಉದ್ಯೋಗ ಮತ್ತು ಉದ್ಯಮಶೀಲತಾ ಅವಕಾಶಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೆ,
ಮೂಲಸೌಕರ್ಯ ನಿರ್ಮಾಣವಾದಾಗ, ವ್ಯಾಪಾರ ಬೆಳೆದಾಗ ಮತ್ತು ಸಾಮಾನ್ಯ ಜನರ ಮೂಲಭೂತ ಅಗತ್ಯಗಳು ಸಹ ಈಡೇರಿದಾಗ ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಸಂಭವಿಸುತ್ತದೆ. ಕಳೆದ 10 ವರ್ಷಗಳಲ್ಲಿ ಕೇರಳದಲ್ಲಿ ಹೆದ್ದಾರಿಗಳು, ರೈಲ್ವೆಗಳು ಮತ್ತು ವಿಮಾನ ನಿಲ್ದಾಣಗಳ ಜತೆಗೆ ಬಂದರು ಮೂಲಸೌಕರ್ಯವು ನಮ್ಮ ಪ್ರಯತ್ನಗಳಿಂದಾಗಿ ಎಷ್ಟು ವೇಗವಾಗಿ ಅಭಿವೃದ್ಧಿಗೊಂಡಿದೆ ಎಂದು ಕೇರಳದ ಜನರಿಗೆ ತಿಳಿದಿದೆ. ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕೊಲ್ಲಂ ಬೈಪಾಸ್ ಮತ್ತು ಆಲಪ್ಪುಳ ಬೈಪಾಸ್ನಂತಹ ಯೋಜನೆಗಳನ್ನು ಭಾರತ ಸರ್ಕಾರ ಮುಂದಕ್ಕೆ ಕೊಂಡೊಯ್ದಿದೆ. ನಾವು ಕೇರಳಕ್ಕೆ ಆಧುನಿಕ ವಂದೇ ಭಾರತ್ ರೈಲುಗಳನ್ನು ಸಹ ನೀಡಿದ್ದೇವೆ.
ಸ್ನೇಹಿತರೆ,
ಭಾರತ ಸರ್ಕಾರವು ಕೇರಳದ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯ ಮಂತ್ರವನ್ನು ನಂಬುತ್ತದೆ. ನಾವು ಸಹಕಾರಿ ಒಕ್ಕೂಟ ವ್ಯವಸ್ಥೆಯ ಉತ್ಸಾಹದಲ್ಲಿ ಕೆಲಸ ಮಾಡುತ್ತಿದ್ದೇವೆ. ಕಳೆದ ದಶಕದಲ್ಲಿ, ಅಭಿವೃದ್ಧಿಯ ಸಾಮಾಜಿಕ ನಿಯತಾಂಕಗಳಲ್ಲಿ ಕೇರಳವನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಕೆಲಸ ಮಾಡಿದ್ದೇವೆ. ಜಲಜೀವನ್ ಮಿಷನ್, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಂತಹ ಅನೇಕ ಯೋಜನೆಗಳಿಂದ ಕೇರಳದ ಜನರು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.
ಸ್ನೇಹಿತರೆ,
ನಮ್ಮ ಮೀನುಗಾರರಿಗೆ ಪ್ರಯೋಜನ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ನೀಲಿ ಕ್ರಾಂತಿ ಮತ್ತು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕೇರಳಕ್ಕೆ ನೂರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ನಾವು ಪೊನ್ನಣಿ ಮತ್ತು ಪುತಿಯಪ್ಪದಂತಹ ಮೀನುಗಾರಿಕಾ ಬಂದರುಗಳನ್ನು ಸಹ ಆಧುನೀಕರಿಸಿದ್ದೇವೆ. ಕೇರಳದ ಸಾವಿರಾರು ಮೀನುಗಾರ ಸಹೋದರ ಸಹೋದರಿಯರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ಸಹ ನೀಡಲಾಗಿದೆ, ಇದರಿಂದಾಗಿ ಅವರು ನೂರಾರು ಕೋಟಿ ರೂಪಾಯಿ ಸಹಾಯ ಪಡೆದಿದ್ದಾರೆ.
ಸ್ನೇಹಿತರೆ,
ನಮ್ಮ ಕೇರಳವು ಸಾಮರಸ್ಯ ಮತ್ತು ಸಹಿಷ್ಣುತೆಯ ಭೂಮಿಯಾಗಿದೆ. ದೇಶದ ಮೊದಲ ಚರ್ಚ್ ಮತ್ತು ವಿಶ್ವದ ಅತ್ಯಂತ ಹಳೆಯ ಚರ್ಚ್ಗಳಲ್ಲಿ ಒಂದಾದ ಸೇಂಟ್ ಥಾಮಸ್ ಚರ್ಚ್ ಅನ್ನು ನೂರಾರು ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಲಾಯಿತು. ಕೆಲವೇ ದಿನಗಳ ಹಿಂದೆ ನಮಗೆಲ್ಲರಿಗೂ ದುಃಖದ ಒಂದು ದೊಡ್ಡ ಕ್ಷಣ ಬಂದಿತ್ತು ಎಂದು ನಮಗೆಲ್ಲರಿಗೂ ತಿಳಿದಿದೆ. ನಾವೆಲ್ಲರೂ ಕೆಲವು ದಿನಗಳ ಹಿಂದೆ ಪೋಪ್ ಫ್ರಾನ್ಸಿಸ್ ಅವರನ್ನು ಕಳೆದುಕೊಂಡೆವು. ನಮ್ಮ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಪರವಾಗಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿದ್ದರು. ಕೇರಳದ ನಮ್ಮ ಸಹೋದ್ಯೋಗಿ, ನಮ್ಮ ಸಚಿವ ಶ್ರೀ ಜಾರ್ಜ್ ಕುರಿಯನ್ ಕೂಡ ಅವರೊಂದಿಗೆ ಹೋಗಿದ್ದರು. ನಾನು ಕೂಡ ಮತ್ತೊಮ್ಮೆ, ಕೇರಳ ಭೂಮಿಯಿಂದ, ಈ ದುಃಖದಲ್ಲಿ ಭಾಗಿಯಾಗಿರುವ ಎಲ್ಲರಿಗೂ ನನ್ನ ಸಂತಾಪ ಸೂಚಿಸುತ್ತೇನೆ.
ಸ್ನೇಹಿತರೆ,
ಪೋಪ್ ಫ್ರಾನ್ಸಿಸ್ ಅವರ ಸೇವಾ ಮನೋಭಾವ ಮತ್ತು ಕ್ರೈಸ್ತ ಸಂಪ್ರದಾಯಗಳಲ್ಲಿ ಎಲ್ಲರಿಗೂ ಸ್ಥಾನ ನೀಡುವ ಪ್ರಯತ್ನಗಳಿಗಾಗಿ ಜಗತ್ತು ಅವರನ್ನು ಯಾವಾಗಲೂ ಸ್ಮರಿಸುತ್ತದೆ. ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಾಗಲೆಲ್ಲಾ, ಅವರೊಂದಿಗೆ ಅನೇಕ ವಿಷಯಗಳ ಕುರಿತು ವಿವರವಾಗಿ ಮಾತನಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ನಾನು ಯಾವಾಗಲೂ ಅವರಿಂದ ವಿಶೇಷ ಪ್ರೀತಿ ಪಡೆಯುತ್ತಿದ್ದೆ. ಮಾನವತೆ, ಸೇವೆ ಮತ್ತು ಶಾಂತಿಯಂತಹ ವಿಷಯಗಳ ಕುರಿತು ನಾನು ಅವರೊಂದಿಗೆ ಚರ್ಚೆ ನಡೆಸಿದ್ದೆ, ಅವರ ಮಾತುಗಳು ನನಗೆ ಸದಾ ಸ್ಫೂರ್ತಿ ನೀಡುತ್ತವೆ.
ಸ್ನೇಹಿತರೆ,
ಇಂದಿನ ಕಾರ್ಯಕ್ರಮಕ್ಕಾಗಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಕೇರಳವನ್ನು ಜಾಗತಿಕ ಕಡಲ ವ್ಯಾಪಾರದ ಪ್ರಮುಖ ಕೇಂದ್ರವನ್ನಾಗಿ ಮಾಡಲು ಮತ್ತು ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಭಾರತ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ಕೇರಳದ ಜನರ ಸಾಮರ್ಥ್ಯದೊಂದಿಗೆ, ಭಾರತದ ಕಡಲ ವಲಯವು ಹೊಸ ಎತ್ತರಕ್ಕೆ ಏರುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.
ನಾವು ಕೇರಳವನ್ನು ಅಭಿವೃದ್ಧಿಪಡಿಸಲು ಬಯಸುತ್ತೇವೆ, ನಾವು ಭಾರತದ ಅಭಿವೃದ್ಧಿಗೆ ಸಾಗುತ್ತೇವೆ.
ಧನ್ಯವಾದಗಳು
*****
(Release ID: 2126830)
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam