ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ವೈಯುಜಿಎಂ ಸಮಾವೇಶದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 29 APR 2025 1:45PM by PIB Bengaluru

ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರೇ, ಡಾ. ಜಿತೇಂದ್ರ ಸಿಂಗ್ ಅವರೇ, ಶ್ರೀ ಜಯಂತ್ ಚೌಧರಿ ಅವರೇ, ಡಾ. ಸುಕಾಂತ ಮಜುಂದಾರ್ ಅವರೇ, ತಂತ್ರಜ್ಞಾನದ ಮೂಲಕ ನಮ್ಮೊಂದಿಗೆ ಸಂಪರ್ಕದಲ್ಲಿರುವ ನನ್ನ ಸ್ನೇಹಿತರಾದ ಶ್ರೀ ರೊಮೇಶ್ ವಾಧ್ವಾನಿ ಅವರೇ ಹಾಗೂ ಡಾ. ಅಜಯ್ ಕೇಲಾ ಅವರೇ, ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರದ ಎಲ್ಲ ಸಹೋದ್ಯೋಗಿಗಳೇ, ಇತರ ಗಣ್ಯ ಅತಿಥಿಗಳೇ, ಮಹಿಳೆಯರೇ ಹಾಗೂ ಮಹನೀಯರೇ!

ಇಂದು, ಸರ್ಕಾರ, ಶೈಕ್ಷಣಿಕ ವಲಯ, ವಿಜ್ಞಾನ ಮತ್ತು ಸಂಶೋಧನೆಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಉಪಸ್ಥಿತರಿದ್ದಾರೆ. ಈ ಏಕತೆ, ಈ ಸಂಗಮವನ್ನೇ ನಾವು ವೈಯುಜಿಎಂ ಎಂದು ಕರೆಯುತ್ತೇವೆ. ವಿಕಸಿತ ಭಾರತದ ಭವಿಷ್ಯದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರು ಒಟ್ಟಿಗೆ ಸೇರಿ ತೊಡಗಿಸಿಕೊಂಡಿರುವ ಒಂದು ವೈಯುಜಿಎಂ. ಭಾರತದ ಇನೋವೇಶನ್ ಸಾಮರ್ಥ್ಯವನ್ನು ಮತ್ತು ಡೀಪ್-ಟೆಕ್ನಲ್ಲಿ ಅದರ ಪಾತ್ರವನ್ನು ಹೆಚ್ಚಿಸಲು ನಾವು ಮಾಡುತ್ತಿರುವ ಪ್ರಯತ್ನಗಳನ್ನು ಈ ಕಾರ್ಯಕ್ರಮವು ಮತ್ತಷ್ಟು ಬಲಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಇಂದು ಐಐಟಿ ಕಾನ್ಪುರ ಮತ್ತು ಐಐಟಿ ಬಾಂಬೆಯಲ್ಲಿ AI, ಇಂಟೆಲಿಜೆಂಟ್ ಸಿಸ್ಟಮ್ಸ್, ಹಾಗೂ ಬಯೋಸೈನ್ಸಸ್, ಬಯೋಟೆಕ್ನಾಲಜಿ, ಆರೋಗ್ಯ ಮತ್ತು ವೈದ್ಯಕೀಯ ವಿಭಾಗಗಳಲ್ಲಿ ಸೂಪರ್ ಹಬ್ಗಳ ಆರಂಭಕ್ಕೆ ಚಾಲನೆ ದೊರೆತಿದೆ. ಇಂದು ವಾಧ್ವಾನಿ ಇನ್ನೋವೇಶನ್ ನೆಟ್ವರ್ಕ್ ನ ಉದ್ಘಾಟನೆಯೂ ಆಗಿದೆ. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸಹಯೋಗದೊಂದಿಗೆ ಸಂಶೋಧನೆಯನ್ನು ಮುನ್ನಡೆಸಲು ಪ್ರತಿಜ್ಞೆಯನ್ನು ಸಹ ತೆಗೆದುಕೊಳ್ಳಲಾಗಿದೆ. ಈ ಉಪಕ್ರಮಕ್ಕಾಗಿ ವಾಧ್ವಾನಿ ಫೌಂಡೇಶನ್, ನಮ್ಮ ಐಐಟಿಗಳು ಮತ್ತು ಇತರ ಎಲ್ಲ ಪಾಲುದಾರರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಶೇಷವಾಗಿ, ನನ್ನ ಸ್ನೇಹಿತರಾದ ರೊಮೇಶ್ ವಾಧ್ವಾನಿ ಜಿ ಅವರನ್ನು ನಾನು ಶ್ಲಾಘಿಸುತ್ತೇನೆ. ನಿಮ್ಮ ಸಮರ್ಪಣೆ ಮತ್ತು ಪೂರ್ವಭಾವಿ ಪ್ರಯತ್ನಗಳಿಂದಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯಗಳು ಒಟ್ಟಾಗಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತಂದಿವೆ.

ಸ್ನೇಹಿತರೇ,

‘ಪರಂ ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ’ ಅಂತ ನಮ್ಮ ಶಾಸ್ತ್ರಗಳು ಹೇಳುತ್ತವೆ.  ಅಂದರೆ—ಯಾರು ಇತರರ ಸೇವೆ ಮತ್ತು ಕಲ್ಯಾಣಕ್ಕಾಗಿ ಬದುಕುತ್ತಾರೋ, ಅವರೇ ನಿಜವಾಗಿಯೂ ಬದುಕಿದವರು. ಅದಕ್ಕಾಗಿಯೇ ನಾವು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸೇವೆಯ ಮಾಧ್ಯಮವೆಂದು ಪರಿಗಣಿಸುತ್ತೇವೆ. ನಮ್ಮ ದೇಶದಲ್ಲಿ ವಾಧ್ವಾನಿ ಫೌಂಡೇಶನ್ನಂತಹ ಸಂಸ್ಥೆಗಳನ್ನು ನಾನು ನೋಡಿದಾಗ, ರೊಮೇಶ್ ಜೀ ಮತ್ತು ಅವರ ತಂಡದ ಪ್ರಯತ್ನಗಳನ್ನು ನಾನು ಗಮನಿಸಿದಾಗ, ನಾವು ಭಾರತದಲ್ಲಿ ಸರಿಯಾದ ದಿಕ್ಕಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮುನ್ನಡೆಸುತ್ತಿದ್ದೇವೆ ಎಂಬ ಸಂತೋಷ ಮತ್ತು ಹೆಮ್ಮೆ ನನಗೆ ಉಂಟಾಗುತ್ತದೆ. ರೊಮೇಶ್ ಜೀ ತಮ್ಮ ಜೀವನವನ್ನು ಅಪಾರ ಹೋರಾಟದ ಮೂಲಕ ರೂಪಿಸಿಕೊಂಡು ಅದನ್ನು ಸೇವೆಗೆ ಅರ್ಪಿಸಿದ್ದಾರೆಂದು ನಾವೆಲ್ಲರೂ ಬಲ್ಲೆವು. ಅವರ ಹುಟ್ಟಿನ ಕೆಲವೇ ದಿನಗಳ ನಂತರ, ಅವರು ವಿಭಜನೆಯ ಭಯಾನಕತೆಯನ್ನು ಎದುರಿಸಬೇಕಾಯಿತು, ತಮ್ಮ ಹುಟ್ಟೂರನ್ನು ತೊರೆಯಬೇಕಾಯಿತು, ಬಾಲ್ಯದಲ್ಲಿ ಪೋಲಿಯೊಗೆ ತುತ್ತಾದರು ಮತ್ತು ಆ ಕಷ್ಟಕರ ಸಂದರ್ಭಗಳಿಂದ, ಅವರು ಒಂದು ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದರು. ಇದು ಸ್ವತಃ ಒಂದು ಅಸಾಧಾರಣ ಮತ್ತು ಸ್ಪೂರ್ತಿದಾಯಕ ಜೀವನ ಪಯಣವಾಗಿದೆ. ಮತ್ತು ಅಂತಹ ಯಶಸ್ಸನ್ನು ಭಾರತದ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಕ್ಕೆ, ಭಾರತದ ಯುವಕರಿಗೆ ಮತ್ತು ಭಾರತದ ಉಜ್ವಲ ಭವಿಷ್ಯಕ್ಕೆ ಅರ್ಪಿಸುವುದು ನಿಜಕ್ಕೂ ಪ್ರೇರಣಾದಾಯಕ ಉದಾಹರಣೆಯಾಗಿದೆ. ವಾಧ್ವಾನಿ ಫೌಂಡೇಶನ್ ಶಾಲಾ ಶಿಕ್ಷಣ, ಅಂಗನವಾಡಿ ಸೇವೆಗಳಲ್ಲಿ ತಂತ್ರಜ್ಞಾನ ಮತ್ತು ಕೃಷಿ ತಂತ್ರಜ್ಞಾನದಲ್ಲೂ ಮಹತ್ವದ ಕಾರ್ಯಗಳನ್ನು ಮಾಡುತ್ತಿದೆ. ವಾಧ್ವಾನಿ ಇನ್ಸ್ಟಿಟ್ಯೂಟ್ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಥಾಪನೆಯ ಸಂದರ್ಭದಲ್ಲಿ ನಾನು ಈ ಹಿಂದೆ ನಿಮ್ಮೆಲ್ಲರೊಂದಿಗೆ ಸೇರಿಕೊಂಡಿದ್ದೆ. ಮುಂಬರುವ ದಿನಗಳಲ್ಲಿ ವಾಧ್ವಾನಿ ಫೌಂಡೇಶನ್ ಇಂತಹ ಅನೇಕ ಮೈಲಿಗಲ್ಲುಗಳನ್ನು ಸಾಧಿಸುತ್ತದೆ ಎಂಬ ವಿಶ್ವಾಸ ನನಗಿದೆ. ನಿಮ್ಮ ಸಂಸ್ಥೆ ಮತ್ತು ನಿಮ್ಮ ಉಪಕ್ರಮಗಳಿಗೆ ನನ್ನ ಶುಭ ಹಾರೈಕೆಗಳು.

ಸ್ನೇಹಿತರೇ,

ಯಾವುದೇ ದೇಶದ ಭವಿಷ್ಯವು ಅದರ ಯುವಕರ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ನಮ್ಮ ಯುವಕರನ್ನು ಅವರ ಭವಿಷ್ಯಕ್ಕಾಗಿ ಮತ್ತು ಭಾರತದ ಉಜ್ವಲ ಭವಿಷ್ಯವನ್ನು ನಿರ್ಮಿಸಲು ನಾವು ಸಿದ್ಧಪಡಿಸುವುದು ಅತ್ಯಗತ್ಯ. ದೇಶದ ಶಿಕ್ಷಣ ವ್ಯವಸ್ಥೆಯು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ನಾವು 21ನೇ ಶತಮಾನದ ಅಗತ್ಯಗಳನ್ನು ಪೂರೈಸಲು ದೇಶದ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುತ್ತಿದ್ದೇವೆ. ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸಿ ಅಭಿವೃದ್ಧಿಪಡಿಸಲಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಪರಿಚಯಿಸಲಾಗಿದೆ. ಹೊಸ ಶಿಕ್ಷಣ ನೀತಿಯ ಪ್ರಾರಂಭದಿಂದಲೂ, ನಾವು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ಕಲಿಕೆ-ಬೋಧನಾ ಸಾಮಗ್ರಿಗಳು ಮತ್ತು 1 ರಿಂದ 7 ನೇ ತರಗತಿಗಳ ಹೊಸ ಪಠ್ಯಪುಸ್ತಕಗಳು ಈಗಾಗಲೇ ಸಿದ್ಧವಾಗಿವೆ. ಪಿಎಂ ಇ-ವಿದ್ಯಾ ಮತ್ತು ದೀಕ್ಷಾ ವೇದಿಕೆಯ ಅಡಿಯಲ್ಲಿ, ‘ಒಂದು ರಾಷ್ಟ್ರ, ಒಂದು ಡಿಜಿಟಲ್ ಶಿಕ್ಷಣ ಮೂಲಸೌಕರ್ಯ’ವನ್ನು ರಚಿಸಲಾಗಿದೆ. ಈ ಮೂಲಸೌಕರ್ಯವು ಕೃತಕ ಬುದ್ಧಿಮತ್ತೆ ಆಧಾರಿತ ಮತ್ತು ವಿಸ್ತರಿಸಬಹುದಾಗಿದೆ. ಇದನ್ನು 30 ಕ್ಕೂ ಹೆಚ್ಚು ಭಾರತೀಯ ಭಾಷೆಗಳು ಮತ್ತು 7 ವಿದೇಶಿ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ತಯಾರಿಸಲು ಬಳಸಲಾಗುತ್ತಿದೆ. ರಾಷ್ಟ್ರೀಯ ಕ್ರೆಡಿಟ್ ಫ್ರೇಮ್ವರ್ಕ್ ಮೂಲಕ, ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಅನೇಕ ವಿಷಯಗಳನ್ನು ಅಧ್ಯಯನ ಮಾಡುವುದು ಸುಲಭವಾಗಿದೆ. ಇದರರ್ಥ ಭಾರತದ ವಿದ್ಯಾರ್ಥಿಗಳಿಗೆ ಈಗ ಆಧುನಿಕ ಶಿಕ್ಷಣಕ್ಕೆ ಪ್ರವೇಶ ಸಿಗುತ್ತಿದೆ ಮತ್ತು ಅವರಿಗೆ ಹೊಸ ವೃತ್ತಿ ಮಾರ್ಗಗಳು ತೆರೆದುಕೊಳ್ಳುತ್ತಿವೆ. ಭಾರತದ ಅಭಿವೃದ್ಧಿ ಗುರಿಗಳ ಕಡೆಗಿನ ವೇಗವನ್ನು ಕಾಪಾಡಿಕೊಳ್ಳಲು, ದೇಶದ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಅವಶ್ಯಕ. ಕಳೆದ ದಶಕದಲ್ಲಿ ಈ ದಿಕ್ಕಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಮತ್ತು ಅಗತ್ಯ ಸಂಪನ್ಮೂಲಗಳನ್ನು ಹೆಚ್ಚಿಸಲಾಗಿದೆ. 2013-14ರಲ್ಲಿ, ಸಂಶೋಧನೆ ಮತ್ತು ಅಭಿವೃದ್ಧಿಯ ಒಟ್ಟು ವೆಚ್ಚ ಕೇವಲ 60,000 ಕೋಟಿ ರೂಪಾಯಿಗಳಷ್ಟಿತ್ತು. ನಾವು ಅದನ್ನು ದ್ವಿಗುಣಗೊಳಿಸಿ 1.25 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿಸಿದ್ದೇವೆ. ದೇಶಾದ್ಯಂತ ಹಲವಾರು ಅತ್ಯಾಧುನಿಕ ಸಂಶೋಧನಾ ಉದ್ಯಾನಗಳನ್ನು ಸ್ಥಾಪಿಸಲಾಗಿದೆ. ಸುಮಾರು 6,000 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶಗಳನ್ನು ಸ್ಥಾಪಿಸಲಾಗಿದೆ. ಈ ಪ್ರಯತ್ನಗಳ ಕಾರಣದಿಂದಾಗಿ, ದೇಶದಲ್ಲಿ ನಾವಿನ್ಯತೆಯ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ. 2014 ರಲ್ಲಿ, ಭಾರತದಲ್ಲಿ ಸುಮಾರು 40,000 ಪೇಟೆಂಟ್ ಗಳನ್ನು ದಾಖಲಿಸಲಾಗಿತ್ತು. ಆ ಸಂಖ್ಯೆ ಈಗ 80,000 ಕ್ಕಿಂತ ಹೆಚ್ಚಾಗಿದೆ. ದೇಶದ ಯುವಕರಿಗೆ ನಮ್ಮ ಬೌದ್ಧಿಕ ಆಸ್ತಿ ಪರಿಸರ ವ್ಯವಸ್ಥೆಯಿಂದ ಎಷ್ಟು ಬೆಂಬಲ ಸಿಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಸಂಶೋಧನಾ ಸಂಸ್ಕೃತಿಯನ್ನು ಮತ್ತಷ್ಟು ಉತ್ತೇಜಿಸಲು, 50,000 ಕೋಟಿ ರೂಪಾಯಿಗಳ ಬಜೆಟ್ ನೊಂದಿಗೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ ಉಪಕ್ರಮವು ಯುವಕರಿಗೆ ಸರ್ಕಾರದ ಕಾಳಜಿ ಅರ್ಥವಾಗುತ್ತದೆ ಎಂಬ ಭರವಸೆಯನ್ನು ನೀಡಿದೆ. ಈ ಯೋಜನೆಯು ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಸಂಶೋಧನಾ ನಿಯತಕಾಲಿಕೆಗಳಿಗೆ ಪ್ರವೇಶವನ್ನು ಸುಲಭಗೊಳಿಸಿದೆ. ಪ್ರತಿಭಾವಂತ ವ್ಯಕ್ತಿಗಳು ತಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಯಾವುದೇ ಅಡೆತಡೆಗಳನ್ನು ಎದುರಿಸಬಾರದು ಎಂದು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿಗಳ ಸಂಶೋಧನಾ ಫೆಲೋಶಿಪ್ ಅನ್ನು ಪರಿಚಯಿಸಲಾಗಿದೆ.

ಸ್ನೇಹಿತರೇ,

ಈ ಪ್ರಯತ್ನಗಳ ಫಲವಾಗಿ, ಇಂದಿನ ಯುವಕರು ಕೇವಲ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ (R&D) ಮುಂದಿಲ್ಲ – ವಾಸ್ತವವಾಗಿ, ಅವರೇ ಇಂದು ಸಂಶೋಧನೆ ಮತ್ತು ಅಭಿವೃದ್ಧಿಯ ಸ್ವರೂಪವಾಗಿದ್ದಾರೆ! ಮತ್ತು ನಾನು ಅವರು ಸಂಶೋಧನೆ ಮತ್ತು ಅಭಿವೃದ್ಧಿ ಎಂದರೆ, ಅವರು ಸನ್ನದ್ಧ (Ready) ಮತ್ತು ಕ್ರಾಂತಿಕಾರಿ (Disruptive) ಮನೋಭಾವದವರು ಎಂದರ್ಥ! ಭಾರತವು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಯ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ. ಕಳೆದ ವರ್ಷ, ಭಾರತವು ವಿಶ್ವದ ಅತಿ ಉದ್ದದ ಹೈಪರ್ಲೂಪ್ ಪರೀಕ್ಷಾ ಪಥವನ್ನು ಕಾರ್ಯಗತಗೊಳಿಸಿತು. ಈ 422 ಮೀಟರ್ ಹೈಪರ್ ಲೂಪ್ ಅನ್ನು ಐಐಟಿ ಮದ್ರಾಸ್ ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಬೆಂಗಳೂರಿನ ಐಐಎಸ್ಸಿ ವಿಜ್ಞಾನಿಗಳು ನ್ಯಾನೊಪ್ರಮಾಣದಲ್ಲಿ ಬೆಳಕನ್ನು ನಿಯಂತ್ರಿಸಬಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅದೇ ಸಂಸ್ಥೆಯಲ್ಲಿ, ಸಂಶೋಧಕರು ‘ಬ್ರೈನ್ ಆನ್ ಎ ಚಿಪ್’ ತಂತ್ರಜ್ಞಾನವನ್ನು ಸಹ ಅಭಿವೃದ್ಧಿಪಡಿಸಿದ್ದಾರೆ – ಇದು ಒಂದೇ ಅಣು ಪದರದಲ್ಲಿ 16,000 ಕ್ಕೂ ಹೆಚ್ಚು ವಾಹಕ ಸ್ಥಿತಿಗಳಲ್ಲಿ ದತ್ತಾಂಶವನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ! ಕೇವಲ ಕೆಲವು ವಾರಗಳ ಹಿಂದೆ, ದೇಶವು ತನ್ನ ಮೊದಲ ಸ್ವದೇಶಿ MRI ಯಂತ್ರವನ್ನು ಸಹ ಅಭಿವೃದ್ಧಿಪಡಿಸಿತು. ಇವು ನಮ್ಮ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಅನೇಕ ಅದ್ಭುತ ಮತ್ತು ಭೇದಕ ಸಂಶೋಧನೆ ಮತ್ತು ಅಭಿವೃದ್ಧಿ ಸಾಧನೆಗಳಲ್ಲಿ ಕೆಲವೇ ಕೆಲವು. ಇದು ‘ವಿಕಸಿತ ಭಾರತ’ದ ಯುವ ಶಕ್ತಿ – ಸನ್ನದ್ಧ, ಕ್ರಾಂತಿಕಾರಿ ಮತ್ತು ಪರಿವರ್ತನಾಶೀಲ!"

ಸ್ನೇಹಿತರೇ,

ಭಾರತದ ವಿಶ್ವವಿದ್ಯಾನಿಲಯಗಳ ಆವರಣಗಳು ಇಂದು ನವೀನತೆಯ ಹೊಸ, ಕ್ರಿಯಾತ್ಮಕ ಕೇಂದ್ರಗಳಾಗಿ ಮಾರ್ಪಡಾಗುತ್ತಿವೆ – ಯುವಶಕ್ತಿಯ ಸಾಮರ್ಥ್ಯವು ಅದ್ಭುತ ಆವಿಷ್ಕಾರಗಳಿಗೆ ಚಾಲನೆ ನೀಡುತ್ತಿದೆ. ಇತ್ತೀಚೆಗೆ, ಉನ್ನತ ಶಿಕ್ಷಣದ ಪ್ರಭಾವ ಶ್ರೇಯಾಂಕಗಳಲ್ಲಿ, ಭಾರತವು ಜಾಗತಿಕವಾಗಿ ಅತಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿತ್ತು, 125 ದೇಶಗಳ 2,000 ಸಂಸ್ಥೆಗಳಲ್ಲಿ 90 ಕ್ಕೂ ಹೆಚ್ಚು ಭಾರತೀಯ ವಿಶ್ವವಿದ್ಯಾನಿಲಯಗಳು ಶ್ರೇಯಾಂಕ ಪಡೆದಿವೆ. 2014 ರಲ್ಲಿ, ಕೇವಲ 9 ಭಾರತೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು QS ವಿಶ್ವ ಶ್ರೇಯಾಂಕದಲ್ಲಿದ್ದವು. 2025 ರಲ್ಲಿ, ಆ ಸಂಖ್ಯೆ 46 ಕ್ಕೆ ಏರಿದೆ. ವಿಶ್ವದ ಅಗ್ರ 500 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೇಯಾಂಕ ಪಡೆದ ಭಾರತೀಯ ಸಂಸ್ಥೆಗಳ ಸಂಖ್ಯೆಯೂ ಕಳೆದ 10 ವರ್ಷಗಳಲ್ಲಿ ತೀವ್ರ ಏರಿಕೆ ಕಂಡಿದೆ. ಈಗ, ಭಾರತೀಯ ಸಂಸ್ಥೆಗಳು ವಿದೇಶಗಳಲ್ಲಿ ತಮ್ಮ ಕ್ಯಾಂಪಸ್ಗಳನ್ನು ತೆರೆಯುತ್ತಿವೆ – ಉದಾಹರಣೆಗೆ ಅಬುಧಾಬಿಯಲ್ಲಿ ಐಐಟಿ ದೆಹಲಿ ಮತ್ತು ಟಾಂಜಾನಿಯಾದಲ್ಲಿ ಐಐಟಿ ಮದ್ರಾಸ್. ದುಬೈನಲ್ಲಿ ಐಐಎಂ ಅಹಮದಾಬಾದ್ ಕ್ಯಾಂಪಸ್ ತೆರೆಯುವ ಸಿದ್ಧತೆಗಳು ನಡೆಯುತ್ತಿವೆ. ಮತ್ತು ನಮ್ಮ ಉನ್ನತ ಸಂಸ್ಥೆಗಳು ಮಾತ್ರ ಜಾಗತಿಕ ಮಟ್ಟಕ್ಕೆ ಹೋಗುತ್ತಿಲ್ಲ; ಜಾಗತಿಕ ಮಟ್ಟದ ಉನ್ನತ ಸಂಸ್ಥೆಗಳು ಸಹ ಭಾರತಕ್ಕೆ ಬರುತ್ತಿವೆ. ವಿಶ್ವದ ಕೆಲವು ಉನ್ನತ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್ಗಳನ್ನು ಭಾರತದಲ್ಲಿ ತೆರೆಯುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಇದು ಶೈಕ್ಷಣಿಕ ವಿನಿಮಯವನ್ನು ಹೆಚ್ಚಿಸುತ್ತದೆ, ಸಂಶೋಧನೆಯಲ್ಲಿ ಸಹಯೋಗವನ್ನು ಉತ್ತೇಜಿಸುತ್ತದೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಅಂತರ-ಸಾಂಸ್ಕೃತಿಕ ಕಲಿಕೆಗೆ ಅಮೂಲ್ಯವಾದ ಅವಕಾಶವನ್ನು ನೀಡುತ್ತದೆ.

ಸ್ನೇಹಿತರೇ, 

ಪ್ರತಿಭೆ (Talent), ಮನೋಧರ್ಮ (Temperament) ಮತ್ತು ತಂತ್ರಜ್ಞಾನ (Technology) ದ ಈ ತ್ರಿವೇಣಿ ಸಂಗಮವು ಭಾರತದ ಭವಿಷ್ಯವನ್ನು ಪರಿವರ್ತಿಸುತ್ತದೆ. ಇದನ್ನು ಬೆಂಬಲಿಸಲು, ನಾವು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಅಗತ್ಯವಾದ ಅವಕಾಶಗಳನ್ನು (exposure) ಒದಗಿಸುತ್ತಿದ್ದೇವೆ. ಇದೀಗ, ನಮ್ಮ ಸಹೋದ್ಯೋಗಿ ಧರ್ಮೇಂದ್ರ ಜೀ ಅವರು ಅಟಲ್ ಟಿಂಕರಿಂಗ್ ಲ್ಯಾಬ್ ಗಳಂತಹ ಉಪಕ್ರಮಗಳ ಬಗ್ಗೆ ವಿವರಿಸಿದರು. ಇಲ್ಲಿಯವರೆಗೆ, ದೇಶಾದ್ಯಂತ 10,000 ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಸ್ಥಾಪಿಸಲಾಗಿದೆ. ಈ ವರ್ಷದ ಬಜೆಟ್ ನಲ್ಲಿ (2025 ರ ಬಜೆಟ್), ಸರ್ಕಾರವು ಇನ್ನೂ 50,000 ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ತೆರೆಯುವುದಾಗಿ ಘೋಷಿಸಿದೆ. ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಪಿಎಂ ವಿದ್ಯಾ ಲಕ್ಷ್ಮೀ ಯೋಜನೆಯನ್ನು (PM Vidya Lakshmi Yojana) ಸಹ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಪ್ರಾಯೋಗಿಕ ಅನುಭವವಾಗಿ (hands-on experience) ಪರಿವರ್ತಿಸಲು ಅನುಕೂಲವಾಗುವಂತೆ ನಾವು 7,000 ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಸೆಲ್ಗಳನ್ನು (internship cells) ಸ್ಥಾಪಿಸಿದ್ದೇವೆ. ಯುವಕರು ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಯುವಕರ ಈ ಶಕ್ತಿ - ಅವರ ಪ್ರತಿಭೆ, ಮನೋಧರ್ಮ ಮತ್ತು ತಂತ್ರಜ್ಞಾನ - ಭಾರತವನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ.

ಸ್ನೇಹಿತರೇ, 

‘ವಿಕಸಿತ ಭಾರತ’ದ ಗುರಿಯನ್ನು ಮುಟ್ಟಲು ನಾವು 25 ವರ್ಷಗಳ ಗಡುವನ್ನು ನಿಗದಿಪಡಿಸಿದ್ದೇವೆ. ಸಮಯವು ಮಿತಿಯಲ್ಲಿದೆ, ಮತ್ತು ಗುರಿಗಳು ಮಹತ್ವಾಕಾಂಕ್ಷೆಯಿಂದ ಕೂಡಿವೆ. ಕೇವಲ ಈಗಿನ ಪರಿಸ್ಥಿತಿಯನ್ನಷ್ಟೇ ಗಮನದಲ್ಲಿಟ್ಟುಕೊಂಡು ನಾನು ಇದನ್ನು ಹೇಳುತ್ತಿಲ್ಲ – ಆದರೆ ಈ ಕಾರಣದಿಂದಲೇ, ಒಂದು ಕಲ್ಪನೆಯು ಮಾದರಿಯಾಗಿ ಮತ್ತು ಅಂತಿಮವಾಗಿ ಉತ್ಪನ್ನವಾಗಿ ರೂಪುಗೊಳ್ಳುವ ಪಯಣವು ಅತಿ ಕಡಿಮೆ ಅವಧಿಯಲ್ಲಿ ನಡೆಯುವುದು ನಿರ್ಣಾಯಕ. ನಾವು ಪ್ರಯೋಗಾಲಯದಿಂದ ಮಾರುಕಟ್ಟೆಗೆ ಇರುವ ದೂರವನ್ನು ತಗ್ಗಿಸಿದಾಗ, ಸಂಶೋಧನೆಯ ಫಲಿತಾಂಶಗಳು ಜನರನ್ನು ಕ್ಷಿಪ್ರವಾಗಿ ತಲುಪುತ್ತವೆ. ಇದು ಸಂಶೋಧಕರಿಗೂ ಹುಮ್ಮಸ್ಸು ನೀಡುತ್ತದೆ, ಏಕೆಂದರೆ ಅವರು ತಮ್ಮ ಕಾರ್ಯದ ನೇರ ಪರಿಣಾಮ ಮತ್ತು ಪ್ರಯೋಜನಗಳನ್ನು ಕಣ್ಣಾರೆ ಕಾಣುತ್ತಾರೆ. ಇದು ಸಂಶೋಧನೆ, ನಾವಿನ್ಯತೆ ಮತ್ತು ಮೌಲ್ಯವರ್ಧನೆಯ ಸುದೀರ್ಘ ಚಕ್ರಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತದೆ. ಇದು ಸಾಕಾರಗೊಳ್ಳಲು, ನಮ್ಮೆಲ್ಲಾ ಸಂಶೋಧನಾ ಪರಿಸರ ವ್ಯವಸ್ಥೆ – ಶೈಕ್ಷಣಿಕ ಸಂಸ್ಥೆಗಳು, ಹೂಡಿಕೆದಾರರು ಮತ್ತು ಕೈಗಾರಿಕೆ – ನಮ್ಮ ಸಂಶೋಧಕರ ಬೆಂಬಲಕ್ಕೆ ನಿಂತು ಅವರಿಗೆ ಮಾರ್ಗದರ್ಶನ ನೀಡುವುದು ಅತ್ಯಂತ ಅಗತ್ಯ. ಉದ್ಯಮದ ನಾಯಕರು ಯುವಕರಿಗೆ ಮಾರ್ಗದರ್ಶನ ನೀಡುವುದರ ಮೂಲಕ, ಧನಸಹಾಯವನ್ನು ಒದಗಿಸುವುದರ ಮೂಲಕ ಮತ್ತು ನವೀನ ಪರಿಹಾರಗಳನ್ನು ಒಟ್ಟಾಗಿ ಅಭಿವೃದ್ಧಿಪಡಿಸುವುದರ ಮೂಲಕ ಒಂದು ಹೆಜ್ಜೆ ಮುಂದೆ ಹೋಗಬಹುದು. ಅದಕ್ಕಾಗಿಯೇ ಸರ್ಕಾರವು ನಿಯಮಾವಳಿಗಳನ್ನು ಸರಳಗೊಳಿಸಲು ಮತ್ತು ಅನುಮೋದನೆ ಪ್ರಕ್ರಿಯೆಯನ್ನು ವೇಗಗೊಳಿಸಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ.

ಸ್ನೇಹಿತರೇ, 

ನಾವು ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್, ಸುಧಾರಿತ ವಿಶ್ಲೇಷಣೆ, ಬಾಹ್ಯಾಕಾಶ ತಂತ್ರಜ್ಞಾನ, ಆರೋಗ್ಯ ತಂತ್ರಜ್ಞಾನ ಮತ್ತು ಸಂಶ್ಲೇಷಿತ ಜೀವಶಾಸ್ತ್ರವನ್ನು ನಿರಂತರವಾಗಿ ಉತ್ತೇಜಿಸಬೇಕು. ಇಂದು, ಭಾರತವು ಕೃತಕ ಬುದ್ಧಿಮತ್ತೆಯ ಅಭಿವೃದ್ಧಿ ಮತ್ತು ಅಳವಡಿಕೆಯಲ್ಲಿ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಬೆಳವಣಿಗೆಗೆ ಬೆಂಬಲ ನೀಡಲು, ಸರ್ಕಾರವು ಇಂಡಿಯಾ-AI ಮಿಷನ್ ಅನ್ನು ಪ್ರಾರಂಭಿಸಿದೆ, ಇದು ವಿಶ್ವ ದರ್ಜೆಯ ಮೂಲಸೌಕರ್ಯ, ಉತ್ತಮ ಗುಣಮಟ್ಟದ ದತ್ತಾಂಶ ಸಮೂಹಗಳು ಮತ್ತು ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳನ್ನು ರಚಿಸಲು ಸಹಾಯ ಮಾಡುತ್ತದೆ. ದೇಶದಲ್ಲಿ ಕೃತಕ ಬುದ್ಧಿಮತ್ತೆಯ ಉತ್ಕೃಷ್ಟತಾ ಕೇಂದ್ರಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗುತ್ತಿದೆ. ಈ ಉತ್ಕೃಷ್ಟತಾ ಕೇಂದ್ರಗಳು ಭಾರತದ ಪ್ರಮುಖ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸ್ಟಾರ್ಟ್ಅಪ್ಗಳ ಸಹಯೋಗದಿಂದ ಮುನ್ನಡೆಯುತ್ತಿವೆ. ನಾವು "ಮೇಕ್ AI ಇನ್ ಇಂಡಿಯಾ" ಎಂಬ ದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ನಮ್ಮ ಗುರಿ "ಮೇಕ್ AI ವರ್ಕ್ ಫಾರ್ ಇಂಡಿಯಾ" ಎಂಬುದಾಗಿದೆ. ಈ ವರ್ಷದ ಆಯವ್ಯಯದಲ್ಲಿ, ನಾವು ಐಐಟಿಗಳಲ್ಲಿ ಸೀಟುಗಳು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ಐಐಟಿಗಳು ಮತ್ತು ಏಮ್ಸ್ ಸಹಯೋಗದೊಂದಿಗೆ ಹಲವಾರು ಮೆಡಿಟೆಕ್ – ಅಂದರೆ ವೈದ್ಯಕೀಯ ಮತ್ತು ತಂತ್ರಜ್ಞಾನ – ಕೋರ್ಸ್ಗಳನ್ನು ಪರಿಚಯಿಸಲಾಗಿದೆ. ನಾವು ಈ ಪಯಣವನ್ನು ಸಮಯದೊಳಗೆ ಪೂರ್ಣಗೊಳಿಸಬೇಕು. ಪ್ರತಿಯೊಂದು ಭವಿಷ್ಯದ ತಂತ್ರಜ್ಞಾನದಲ್ಲೂ, ಭಾರತವು ವಿಶ್ವದ ಅತ್ಯುತ್ತಮ ರಾಷ್ಟ್ರಗಳ ಸಾಲಿನಲ್ಲಿ ಇರಬೇಕು. ಯುಗ್ಮ್ನಂತಹ ಉಪಕ್ರಮಗಳ ಮೂಲಕ, ನಾವು ಈ ಪ್ರಯತ್ನಗಳಿಗೆ ಹೊಸ ಶಕ್ತಿಯನ್ನು ತುಂಬಬಹುದು. ಶಿಕ್ಷಣ ಸಚಿವಾಲಯ ಮತ್ತು ವಾಧ್ವಾನಿ ಫೌಂಡೇಶನ್ನ ಈ ಜಂಟಿ ಉಪಕ್ರಮದೊಂದಿಗೆ, ದೇಶದ ಇನೋವೇಶನ್ ಲ್ಯಾಂಡ್‌ಸ್ಕೇಪ್ ಪರಿವರ್ತಿಸುವ ಸಾಮರ್ಥ್ಯ ನಮಗಿದೆ. ಇಂದಿನ ಈ ಕಾರ್ಯಕ್ರಮವು ಆ ಗುರಿಯನ್ನು ಮತ್ತಷ್ಟು ಮುನ್ನಡೆಸಲು ಬಹಳ ಸಹಾಯಕವಾಗಲಿದೆ. ಮತ್ತೊಮ್ಮೆ, YUGM ಉಪಕ್ರಮಕ್ಕಾಗಿ ವಾಧ್ವಾನಿ ಫೌಂಡೇಶನ್ಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ನನ್ನ ಸ್ನೇಹಿತ ರೊಮೇಶ್ ಜೀ ಅವರಿಗೆ ನನ್ನ ಶುಭಾಶಯಗಳು.

ತುಂಬಾ ಧನ್ಯವಾದಗಳು. 

ನಮಸ್ಕಾರ!

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿತ್ತು.

 

*****


(Release ID: 2125474)