ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

‘ಭವಿಷ್ಯದ ಶೃಂಗಸಭೆ’ ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ

Posted On: 23 SEP 2024 11:09PM by PIB Bengaluru

ನ್ಯೂಯಾರ್ಕ್ ನ ವಿಶ್ವಸಂಸ್ಥೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಭವಿಷ್ಯದ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಿದರು.

'ಉತ್ತಮ ನಾಳೆಗಾಗಿ ಬಹುಪಕ್ಷೀಯ ಪರಿಹಾರಗಳು' ಎಂಬುದು ಶೃಂಗಸಭೆಯ ಪ್ರಮುಖ ವಿಷಯವಾಗಿತ್ತು. ಹೆಚ್ಚಿನ ಸಂಖ್ಯೆಯ ವಿಶ್ವ ನಾಯಕರ ಭಾಗವಹಿಸುವಿಕೆಗೆ ಈ ಶೃಂಗಸಭೆಯು ಸಾಕ್ಷಿಯಾಯಿತು.

ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ, ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಜಗತ್ತನ್ನು ರೂಪಿಸುವ ಭಾರತದ ದೂರದೃಷ್ಟಿಯ ಕುರಿತು ತಿಳಿಸಿದರು. ಜಾಗತಿಕ ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಬಯಸುವ ಮಾನವೀಯತೆಯ ಆರನೇ ಒಂದು ಭಾಗದ ಪರವಾಗಿ ತಾವು ಶೃಂಗಸಭೆಯಲ್ಲಿ ಮಾತನಾಡುತ್ತಿರುವುದಾಗಿ ಪ್ರಧಾನಿ ಹೇಳಿದರು. ಉಜ್ವಲ ಜಾಗತಿಕ ಭವಿಷ್ಯಕ್ಕಾಗಿ ನಮ್ಮ ಸಾಮೂಹಿಕ ಅನ್ವೇಷಣೆಯಲ್ಲಿ ಮಾನವ-ಕೇಂದ್ರಿತ ವಿಧಾನದ ಪ್ರಾಮುಖ್ಯತೆಗೆ ಕರೆ ನೀಡಿದ ಪ್ರಧಾನಮಂತ್ರಿಗಳು, ಸುಸ್ಥಿರ ಅಭಿವೃದ್ಧಿ ಉಪಕ್ರಮಗಳಿಂದಾಗಿ ಭಾರತ ಸಾಧಿಸಿರುವ ಯಶಸ್ಸನ್ನು ಪ್ರಸ್ತಾಪಿಸಿ ಇದರ ಪರಿಣಾಮವಾಗಿ ಕಳೆದೊಂದು ದಶಕದಲ್ಲಿ ದೇಶದ 250 ದಶಲಕ್ಷ ಜನರನ್ನು ಬಡತನದಿಂದ ಹೊರತರಲಾಗಿದೆ ಎಂದು ವಿವರಿಸಿದರು. 

ಜಾಗತಿಕ ದಕ್ಷಿಣದ ದೇಶಗಳೊಂದಿಗೆ ಸಹಮತವನ್ನು ವ್ಯಕ್ತಪಡಿಸಿದ ಅವರು, ಅಭಿವೃದ್ಧಿ ಅನುಭವವನ್ನು ಈ ದೇಶಗಳೊಂದಿಗೆ ಹಂಚಿಕೊಳ್ಳುವುದು ಭಾರತಕ್ಕೆ ಸೌಭಾಗ್ಯ ಎಂದು ಹೇಳಿದರು. ತಂತ್ರಜ್ಞಾನದ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸಲು ಸಮತೋಲಿತ ನಿಯಂತ್ರಣಗಳಿಗೆ ಕರೆ ನೀಡಿದ ಅವರು, ಸಾರ್ವಜನಿಕರ ಹೆಚ್ಚಿನ ಒಳಿತಿಗಾಗಿ ಭಾರತವು ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹಂಚಿಕೊಳ್ಳಲು ಮುಕ್ತವಾಗಿದೆ ಎಂದರು. "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಮಾರ್ಗದರ್ಶಿ ತತ್ವಕ್ಕೆ ಭಾರತ ಬದ್ಧವಾಗಿರಲಿದೆ ಎಂದು ಅವರು ಒತ್ತಿ ಹೇಳಿದರು.

ಪ್ರಸ್ತುತತೆಗೆ ಸುಧಾರಣೆಯು ಪ್ರಮುಖವಾಗಿದೆ ಎಂದು ಒತ್ತಿ ಹೇಳಿರುವ ಪ್ರಧಾನಮಂತ್ರಿಗಳು ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸೇರಿದಂತೆ ಜಾಗತಿಕ ಆಡಳಿತಾತ್ಮಕ ಸಂಸ್ಥೆಗಳ ತುರ್ತು ಸುಧಾರಣೆಗೆ ಕರೆ ನೀಡಿದ್ದಾರೆ. ಜಾಗತಿಕ ಕ್ರಿಯೆಯು ಜಾಗತಿಕ ಗುರಿಯೊಂದಿಗೆ ಹೊಂದಿಕೆಯಾಗಬೇಕು ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿಗಳ ಪೂರ್ಣ ಭಾಷಣವನ್ನು ಇಲ್ಲಿ ನೋಡಬಹುದು:  https://bit.ly/4diBR08

ಜಾಗತಿಕ ಡಿಜಿಟಲ್ ಒಪ್ಪಂದ ಮತ್ತು ಭವಿಷ್ಯದ ಪೀಳಿಗೆಗಳ ಕುರಿತು ಘೋಷಣೆ ಎಂಬ ಎರಡು ಅನುಬಂಧ ಸಹಿತವಾಗಿ “ಭವಿಷ್ಯಕ್ಕಾಗಿ ಒಪ್ಪಂದ” ಎಂಬ ಸಭಾ ವರದಿಯ ಅಳವಡಿಕೆಯೊಂದಿಗೆ ಶೃಂಗಸಭೆ ಸಂಪನ್ನಗೊಂಡಿತು.

 

*****



(Release ID: 2058419) Visitor Counter : 7