ಪ್ರಧಾನ ಮಂತ್ರಿಯವರ ಕಛೇರಿ

ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್ 2024 ರ ಭಾರತೀಯ ತಂಡದೊಂದಿಗೆ ಪ್ರಧಾನ ಮಂತ್ರಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಸಂವಾದ 

Posted On: 19 AUG 2024 10:17PM by PIB Bengaluru

ನಿರೂಪಕ: ನಮಸ್ಕಾರ ಸರ್. ಮೊದಲಿಗೆ, ನಾವು ನಮ್ಮ ಬಿಲ್ಲುಗಾರ್ತಿ ಶೀತಲ್ ದೇವಿಯೊಂದಿಗೆ ಮಾತನಾಡೋಣ. ಶೀತಲ್ ದೇವಿ, ದಯವಿಟ್ಟು

ಪ್ರಧಾನ ಮಂತ್ರಿಯವರು: ನಮಸ್ತೆ ಶೀತಲ್

ಶೀತಲ್: ನಮಸ್ತೆ, ಸರ್. ಜೈ ಮಾತಾ ದಿ

ಪ್ರಧಾನ ಮಂತ್ರಿಯವರು: ಜೈ ಮಾತಾ ದಿ

ಶೀತಲ್: ನಾನು ಶೀತಲ್

ಪ್ರಧಾನ ಮಂತ್ರಿಯವರು: ಶೀತಲ್, ನೀವು ಭಾರತ ತಂಡದ ಅತ್ಯಂತ ಕಿರಿಯ ಕ್ರೀಡಾಪಟುವಾಗಿದ್ದೀರಿ ಮತ್ತು ಇದು ನಿಮ್ಮ ಮೊದಲ ಪ್ಯಾರಾಲಿಂಪಿಕ್ಸ್ ಆಗಿರುತ್ತದೆ. ನಿಮ್ಮ ಮನಸ್ಸಿನಲ್ಲಿ ಹಲವು ವಿಷಯಗಳು ನಡೆಯುತ್ತಿರಬೇಕು. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಹಂಚಿಕೊಳ್ಳಬಹುದೇ? ನೀವು ಯಾವುದೇ ಒತ್ತಡವನ್ನು ಅನುಭವಿಸುತ್ತಿದ್ದೀರಾ?

ಶೀತಲ್: ಇಲ್ಲ ಸರ್, ನಾನು ಒತ್ತಡದಲ್ಲಿಲ್ಲ. ಇಷ್ಟೊಂದು ಕಡಿಮೆ ವಯಸ್ಸಿನಲ್ಲಿ ಮತ್ತು ಇಷ್ಟೊಂದು ಕಡಿಮೆ ಸಮಯದಲ್ಲಿ ಪ್ಯಾರಾಲಿಂಪಿಕ್ಸ್ನಲ್ಲಿ ಆಡಲು ಹೋಗುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಇಷ್ಟೊಂದು ಕಡಿಮೆ ವಯಸ್ಸಿನಲ್ಲಿ ಮತ್ತು ಇಷ್ಟೊಂದು ಕಡಿಮೆ ಸಮಯದಲ್ಲಿ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಸರ್. ನನಗೆ ಬೆಂಬಲ ನೀಡುವಲ್ಲಿ ದೇಗುಲ ಮಂಡಳಿ ಮಹತ್ವದ ಪಾತ್ರ ವಹಿಸಿದೆ ಎಂದೂ ಹೇಳಬಯಸುತ್ತೇನೆ. ಅವರ ಬೆಂಬಲ, ಹಾಗೆಯೇ ಎಲ್ಲರ ಬೆಂಬಲವು ನಂಬಲಸಾಧ್ಯವಾಗಿದೆ. ನಾನು ಇಲ್ಲಿಗೆ ಬಂದಿದ್ದು ಹೀಗೆ ಸರ್.

ಪ್ರಧಾನ ಮಂತ್ರಿಯವರು: ಶೀತಲ್, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ನಿಮ್ಮ ಗುರಿ ಏನು ಮತ್ತು ಅದಕ್ಕಾಗಿ ನೀವು ಹೇಗೆ ತಯಾರಿ ನಡೆಸಿದ್ದೀರಿ?

ಶೀತಲ್: ಹೌದು ಸರ್. ನನ್ನ ತಯಾರಿ ತುಂಬಾ ಚೆನ್ನಾಗಿದೆ ಮತ್ತು ನನ್ನ ತರಬೇತಿಯೂ ಅದ್ಭುತವಾಗಿ ನಡೆಯುತ್ತಿದೆ ಸರ್. ಇಲ್ಲಿ ಭಾರತದ ಧ್ವಜ ಹಾರಿಸುವುದು ಮತ್ತು ನಮ್ಮ ರಾಷ್ಟ್ರಗೀತೆ ಹಾಡುವಂತೆ ಮಾಡುವುದು ನನ್ನ ಗುರಿ. ಅಷ್ಟೇ ನನ್ನ ಗುರಿ ಸರ್. ಅದನ್ನು ಮೀರಿ ನನಗೆ ಬೇರೇನೂ ಇಲ್ಲ.

ಪ್ರಧಾನ ಮಂತ್ರಿಯವರು: ಶೀತಲ್, ನಾನು ಮೊದಲು ಹೇಳಿದಂತೆ, ನೀವು ಈ ತಂಡದಲ್ಲಿ ಅತ್ಯಂತ ಕಿರಿಯರು. ಅಂತಹ ದೊಡ್ಡ ಈವೆಂಟ್ ನ ಒತ್ತಡವನ್ನು ತೆಗೆದುಕೊಳ್ಳಬೇಡಿ ಎಂಬುದು ನನ್ನ ಸಲಹೆ. ಗೆಲುವು ಅಥವಾ ಸೋಲಿನ ಬಗ್ಗೆ ಚಿಂತಿಸದೆ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿ. ಇಡೀ ದೇಶ ಮತ್ತು ನಾನು ನಿಮ್ಮೊಂದಿಗೆ ಇದ್ದೇವೆ. ಮತ್ತು ನಿಮಗೆ ಯಾವಾಗಲೂ ಮಾತಾ ವೈಷ್ಣೋ ದೇವಿಯ ಆಶೀರ್ವಾದವಿದೆ. ನನ್ನ ಕಡೆಯಿಂದ ಆಲ್ ದಿ ಬೆಸ್ಟ್.

ಶೀತಲ್: ಧನ್ಯವಾದಗಳು ಸರ್. ಮಾತಾ ರಾಣಿ ನನ್ನನ್ನು ಆಶೀರ್ವದಿಸಿದ್ದಾರೆ, ಅದಕ್ಕಾಗಿಯೇ ನಾನು ಇಷ್ಟೊಂದು ಕಡಿಮೆ ಸಮಯದಲ್ಲಿ ಇಲ್ಲಿಗೆ ಬಂದಿದ್ದೇನೆ. ನನಗೆ ಮಾತಾ ರಾಣಿಯಿಂದ ತುಂಬಾ ಆಶೀರ್ವಾದಗಳು ಸಿಕ್ಕಿವೆ ಸರ್ ಮತ್ತು ಸರ್, ಇಡೀ ಭಾರತೀಯರ ಪ್ರಾರ್ಥನೆಯಿಂದಲೇ ನಾನು ಇಷ್ಟು ಬೇಗ ಇಲ್ಲಿಗೆ ಬಂದಿದ್ದೇನೆ. ನಿಮ್ಮ ಆಶೀರ್ವಾದವೂ ನನ್ನ ಮೇಲಿದೆ ಸರ್. ಧನ್ಯವಾದಗಳು ಸರ್.

ಪ್ರಧಾನ ಮಂತ್ರಿಯವರು: ಶುಭಾಶಯಗಳು

ನಿರೂಪಕ: ಶ್ರೀಮತಿ ಅವನಿ ಲೇಖರಾ

ಪ್ರಧಾನ ಮಂತ್ರಿಯವರು: ನಮಸ್ತೆ, ಅವನಿ

ಅವನಿ ಲೇಖರಾ: ನಮಸ್ಕಾರ, ಸರ್!

ಪ್ರಧಾನ ಮಂತ್ರಿಯವರು: ಅವನಿ, ನೀವು ಕಳೆದ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕದೊಂದಿಗೆ ಮತ್ತೊಂದು ಪದಕವನ್ನು ಗೆದ್ದಿದ್ದೀರಿ. ಆ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ. ಈ ಬಾರಿ ನಿಮ್ಮ ಗುರಿ ಏನು?

ಅವನಿ ಲೇಖರಾ: ಸರ್, ಕಳೆದ ಬಾರಿ ನನ್ನ ಮೊದಲ ಪ್ಯಾರಾಲಿಂಪಿಕ್ ಕ್ರೀಡಾಕೂಟವಾಗಿ. ನಾನು ಅನುಭವವನ್ನು ಪಡೆಯಲು ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ. ಈ ಬಾರಿ, ಕ್ರೀಡೆ ಮತ್ತು ತಂತ್ರಗಳಲ್ಲಿ ಹೆಚ್ಚು ಪಕ್ವತೆಯನ್ನು ಗಳಿಸಿದ್ದೇನೆ. ಈ ಬಾರಿಯೂ ನಾನು ಭಾಗವಹಿಸುವ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇನೆ. ಕಳೆದ ಪ್ಯಾರಾಲಿಂಪಿಕ್ಸ್ ನ ನಂತರ, ವಿಶೇಷವಾಗಿ ಭಾರತದಾದ್ಯಂತ ನಾನು ಪಡೆದುಕೊಂಡ ಬೆಂಬಲ ಮತ್ತು ಪ್ರೀತಿ, ಹಾಗೆಯೇ ನಿಮ್ಮ ಬೆಂಬಲವೂ ಸರ್, ನನ್ನನ್ನು ಬಹಳ ಪ್ರೇರೇಪಿಸಿದೆ. ಇದು ನನಗೆ ನನ್ನ ಶ್ರೇಷ್ಠ ಪ್ರದರ್ಶನ ನೀಡುವ ಜವಾಬ್ದಾರಿಯಯನ್ನೂ ತಂದಿದೆ.

ಪ್ರಧಾನ ಮಂತ್ರಿಯವರು: ಅವನಿ, ಟೋಕಿಯೋದಲ್ಲಿ ನಿಮ್ಮ ಗೆಲುವಿನ ನಂತರ ನಿಮ್ಮ ಜೀವನ ಹೇಗೆ ಬದಲಾಯಿತು? ಹೊಸ ಸ್ಪರ್ಧೆಗೆ ನಿಮ್ಮನ್ನು ನೀವು ನಿರಂತರವಾಗಿ ಹೇಗೆ ಸಿದ್ಧಪಡಿಸಿದ್ದೀರಿ?

ಅವನಿ ಲೇಖರಾ: ಸರ್, ಕಳೆದ ಬಾರಿ ಭಾಗವಹಿಸಿದಾಗ, ನಾನು ಅದನ್ನು ಮಾಡಬಹುದೋ ಇಲ್ಲವೋ ಎಂಬ ಬಗ್ಗೆ ನನ್ನ ಮನಸ್ಸಿನಲ್ಲಿ ಒಂದು ಅಡೆತಡೆ ಇತ್ತು. ಆದರೆ ಎರಡು ಪದಕಗಳು ಗೆದ್ದ ನಂತರ, ಆ ಅಡೆತಡೆ ಮುರಿದು, ಮತ್ತು ನಾನು ಒಂದು ಬಾರಿ ಮಾಡಬಲ್ಲೆ ಎಂದಾದರೆ, ಕಷ್ಟಪಟ್ಟು ಮತ್ತೊಮ್ಮೆ ಮಾಡಬಲ್ಲೆ ಎಂಬುದನ್ನು ಅರಿತುಕೊಂಡೆ. ನಾನು ಭಾರತಕ್ಕಾಗಿ, ವಿಶೇಷವಾಗಿ ವೀಲ್ ಚೇರ್ ನಲ್ಲಿ ದೇಶವನ್ನು ಪ್ರತಿನಿಧಿಸುವಾಗ, ಇದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ. ಆ ಕಾರಣದಿಂದಲೇ ನಾನು ಯಾವಾಗಲೂ ಅದನ್ನು ಪುನಃ ಪುನಃ ಮಾಡಬೇಕೆಂದು ಬಯಸುತ್ತೇನೆ.

ಪ್ರಧಾನ ಮಂತ್ರಿಯವರು: ಅವನಿ, ನೀವು ನಿಮ್ಮ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೀರಿ ಮತ್ತು ರಾಷ್ಟ್ರವು ನಿಮ್ಮ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಆದರೆ ಈ ನಿರೀಕ್ಷೆಗಳು ಹೊರೆಯಾಗಲು ಬಿಡಬೇಡಿ ಎಂದು ನಾನು ಹೇಳಲು ಬಯಸುತ್ತೇನೆ. ಈ ನಿರೀಕ್ಷೆಗಳು ನಿಮ್ಮ ಶಕ್ತಿಯಾಗಲಿ. ನಿಮಗೆ ಶುಭಾಶಯಗಳು.

ಅವನಿ ಲೇಖರಾ: ಧನ್ಯವಾದಗಳು ಸರ್!

ನಿರೂಪಕ: ಶ್ರೀ ಮರಿಯಪ್ಪನ್ ತಂಗವೇಲು

ಮರಿಯಪ್ಪನ್ ತಂಗವೇಲು: ವನಕ್ಕಂ ಸರ್

ಪ್ರಧಾನ ಮಂತ್ರಿಯವರು: ಮರಿಯಪ್ಪನ್ ಜಿ, ವನಕ್ಕಂ. ಮರಿಯಪ್ಪನ್, ನೀವು ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದೀರಿ. ಈ ಬಾರಿ ಅದನ್ನು ಚಿನ್ನವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರಬೇಕು. ನಿಮ್ಮ ಹಿಂದಿನ ಅನುಭವಗಳಿಂದ ನೀವು ಏನು ಕಲಿತಿದ್ದೀರಿ?

ಮರಿಯಪ್ಪನ್: ಸರ್, ನಾನು ಜರ್ಮನಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ತರಬೇತಿ ಉತ್ತಮವಾಗಿ ನಡೆಯುತ್ತಿದೆ. ಕಳೆದ ಬಾರಿ ಸಣ್ಣ ತಪ್ಪಿನಿಂದಾಗಿ ಬೆಳ್ಳಿ ಸಿಕ್ಕಿತ್ತು. ಈ ಬಾರಿ 100 ಪರ್ಸೆಂಟ್ ಚಿನ್ನ ತರುತ್ತೇನೆ.

ಪ್ರಧಾನ ಮಂತ್ರಿಯವರು: ಖಂಡಿತಾ?

ಮರಿಯಪ್ಪನ್: ಖಂಡಿತ ಸರ್, 100 ಪರ್ಸೆಂಟ್

ಪ್ರಧಾನ ಮಂತ್ರಿಯವರು: ಮರಿಯಪ್ಪನ್, ನೀವು ಒಬ್ಬ ಕ್ರೀಡಾಪಟು ಮತ್ತು ತರಬೇತುದಾರರೂ ಆಗಿದ್ದೀರಿ. 2016 ರಿಂದ ಇಲ್ಲಿಯವರೆಗಿನ ಪ್ಯಾರಾ ಅಥ್ಲೀಟ್ ಗಳ ಸಂಖ್ಯೆಯನ್ನು ಗಮನಿಸಿದಾಗ , ಈ ಸಂಖ್ಯೆಯು ಅಪಾರವಾಗಿ ಹೆಚ್ಚಾಗಿದೆ . ಈ ಬದಲಾವಣೆಯನ್ನು ನೀವು ಹೇಗೆ ನೋಡುತ್ತೀರಿ ?

ಮರಿಯಪ್ಪನ್: ಸರ್, ನಾನು 2016 ರಲ್ಲಿ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್ ಗೆ ಪ್ರವೇಶಿಸಿದೆ. ನಾನು ಚಿನ್ನ ಗೆಲ್ಲಲು ಸಾಧ್ಯವಿಲ್ಲ ಎಂದು ಭಾವಿಸಿ ಸ್ವಲ್ಪ ಭಯಪಟ್ಟಿದ್ದೆ. ಆದರೆ ನಾನು ಗೆದ್ದೆ. ಚಿನ್ನ ಗೆದ್ದ ನಂತರ, ಸಂಪೂರ್ಣ ಸಿಬ್ಬಂದಿ ಮತ್ತು ಪ್ಯಾರಾಲಿಂಪಿಕ್ ಸಮುದಾಯವು ನನ್ನನ್ನು ಬೆಂಬಲಿಸಿತು. ನಾನು ಪಡೆದ ಬೆಂಬಲವನ್ನು ನೋಡಿ, ಇನ್ನೂ ಹೆಚ್ಚು ಜನರು ಕ್ರೀಡೆಯಲ್ಲಿ ತೊಡಗಿಸಿಕೊಂಡರು. ಈಗ, ನಾವು ಭಾರತಕ್ಕೆ 100 ಪದಕಗಳನ್ನು ಗುರಿಯಾಗಿಸಿಕೊಳ್ಳಬೇಕು. ಈ ಬಾರಿ ಅದು ಸಾಧ್ಯವಾಗುತ್ತದೆ ಸರ್.

ಪ್ರಧಾನ ಮಂತ್ರಿಯವರು: ಮರಿಯಪ್ಪನ್, ನಮ್ಮ ಕ್ರೀಡಾಪಟುಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ನೀವು ನಿಮ್ಮ ಕಾರ್ಯಕ್ಷಮತೆಯ ಮೇಲೆ ಮಾತ್ರ ಗಮನ ಹರಿಸಬೇಕು. ದೇಶ ನಿಮ್ಮೊಂದಿಗಿದೆ. ನಿಮಗೆ ಶುಭ ಹಾರೈಕೆಗಳು.

ಮರಿಯಪ್ಪನ್: ಧನ್ಯವಾದಗಳು ಸರ್

ನಿರೂಪಕ: ಶ್ರೀ ಸುಮಿತ್ ಅಂಟಿಲ್

ಪ್ರಧಾನ ಮಂತ್ರಿಯವರು: ನಮಸ್ತೆ, ಸುಮಿತ್

ಸುಮಿತ್ ಅಂಟಿಲ್: ನಮಸ್ತೆ ಸರ್, ಧನ್ಯವಾದಗಳು ಸರ್

ಪ್ರಧಾನ ಮಂತ್ರಿಯವರು:  ಸುಮಿತ್, ಏಷ್ಯನ್ ಪ್ಯಾರಾ ಗೇಮ್ಸ್  ಮತ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ನೀವು ಒಂದರ ಹಿಂದೆ ಒಂದರಂತೆ ವಿಶ್ವದಾಖಲೆಗಳನ್ನು ರಚಿಸಿದ್ದೀರಿ. ನಿಮ್ಮ ಸ್ವಂತ ದಾಖಲೆಯನ್ನು ಮುರಿಯಲು ನೀವು ಎಲ್ಲಿ ಸ್ಫೂರ್ತಿ ಪಡೆಯುತ್ತೀರಿ?

ಸುಮಿತ್ ಅಂಟಿಲ್: ಸರ್, ಭಾರತದಲ್ಲಿ ಸ್ಫೂರ್ತಿಯ ಕೊರತೆಯಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ PCI ಅಧ್ಯಕ್ಷ ದೇವೇಂದ್ರ ಝಾಝರಿಯಾ, ನೀರಜ್ ಚೋಪ್ರಾ ಮತ್ತು ನನ್ನ ಮುಂಚೆ ದೇಶಕ್ಕೆ ಖ್ಯಾತಿ ತಂದ ಅನೇಕ ಕ್ರೀಡಾಪಟುಗಳಂತಹ ದಂತಕತೆಗಳನ್ನು ನಾವು ಹೊಂದಿದ್ದೇವೆ. ಅವರಿಂದ ನಾನು ಸ್ಫೂರ್ತಿ ಪಡೆಯುತ್ತೇನೆ ಸರ್. ಆದರೆ ಸ್ಫೂರ್ತಿಗಿಂತ ಹೆಚ್ಚಾಗಿ, ಸ್ವಯಂ ಶಿಸ್ತು ಮತ್ತು ಸ್ವಯಂ ಪ್ರೇರಣೆಯೇ ವಿಶ್ವ ದಾಖಲೆಗಳನ್ನು ಬ್ಯಾಕ್  ಟು ಬ್ಯಾಕ್ ಮುರಿಯುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ ಸರ್.

ಪ್ರಧಾನ ಮಂತ್ರಿಯವರು: ಸುಮಿತ್, ಸೋನಿಪತ್ ನ ಮಣ್ಣು ತುಂಬಾ ವಿಶೇಷವಾಗಿದೆ. ನಿಮ್ಮಂತಹ ಅನೇಕ ವಿಶ್ವ ದಾಖಲೆದಾರರು ಮತ್ತು ಕ್ರೀಡಾಪಟುಗಳು ಅಲ್ಲಿಂದ ಹೊರಹೊಮ್ಮಿದ್ದಾರೆ. ಹರಿಯಾಣದ ಕ್ರೀಡಾ ಸಂಸ್ಕೃತಿಯು ನಿಮಗೆ ಎಷ್ಟು ಸಹಾಯ ಮಾಡಿದೆ?

ಸುಮಿತ್ ಅಂಟಿಲ್: ಖಂಡಿತವಾಗಿ ಸರ್. ಇಲ್ಲಿನ ಜನರು ಬೆಂಬಲಿಸುವ ರೀತಿ ಮತ್ತು ಸರ್ಕಾರ ಬೆಂಬಲಿಸುವ ರೀತಿ ದೊಡ್ಡ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಹರ್ಯಾಣದ ಹಲವಾರು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸಿ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ.  ಸರ್ಕಾರವೂ ತುಂಬಾ ಬೆಂಬಲ ನೀಡಿದೆ ಸರ್ , ಜನರು ಇಲ್ಲಿ ಕ್ರೀಡಾ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿರುವ ರೀತಿ , ನಾವು  ಅದರಿಂದ ನಮಗೆ ಹೆಚ್ಚಿನ ಲಾಭವಾಗುತ್ತಿದೆ ಎಂದು ನಾನು ಭಾವಿಸುತ್ತೇನೆ.

ಪ್ರಧಾನ ಮಂತ್ರಿಯವರು: ಸುಮಿತ್, ನೀನು ವಿಶ್ವ ಚಾಂಪಿಯನ್. ಅದಕ್ಕಿಂತ ಹೆಚ್ಚಾಗಿ ನೀವು ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದೀರಿ. ನನ್ನ ಶುಭ ಹಾರೈಕೆಗಳು ಸದಾ ನಿಮ್ಮೊಂದಿಗೆ ಇರುತ್ತವೆ. ನಿಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿ. ಇಡೀ ದೇಶವೇ ನಿಮ್ಮೊಂದಿಗೆ ನಿಂತಿದೆ. ಅನಂತಾನಂತ ಶುಭಾಶಯಗಳು!

ಸುಮಿತ್ ಅಂಟಿಲ್: ತುಂಬಾ ಧನ್ಯವಾದಗಳು ಸರ್

ನಿರೂಪಕರು: ಶ್ರೀಮತಿ ಅರುಣಾ ತನ್ವಾರ್

ಅರುಣಾ ತನ್ವಾರ್: ನಮಸ್ಕಾರ್, ಸರ್! ನಾನು ನಿಮಗೆ ರಕ್ಷಾ ಬಂಧನದ ಶುಭಾಶಯಗಳನ್ನು ಕೋರುತ್ತೇನೆ!

ಪ್ರಧಾನ ಮಂತ್ರಿಯವರು: ಅರುಣಾ ಜೀ, ನಿಮಗೂ ನನ್ನ ಶುಭಾಶಯಗಳು!

ಅರುಣಾ ತನ್ವಾರ್: ಧನ್ಯವಾದಗಳು ಸರ್!

ಪ್ರಧಾನ ಮಂತ್ರಿಯವರು: ಅರುಣಾ, ನಿಮ್ಮ ಯಶಸ್ಸಿನಲ್ಲಿ ನಿನ್ನ ತಂದೆಯ ಪಾತ್ರ ದೊಡ್ಡದು ಎಂದು ಕೇಳಿದ್ದೇನೆ. ಅವರ ಬೆಂಬಲ ಮತ್ತು ನಿಮ್ಮ ಪ್ರಯಾಣದ ಬಗ್ಗೆ ನಮಗೆ ಹೇಳಬಲ್ಲಿರಾ?

ಅರುಣಾ ತನ್ವಾರ್: ಸರ್, ಕುಟುಂಬದ ಬೆಂಬಲವಿಲ್ಲದೆ ನಾವು ಸಾಮಾನ್ಯ ಟೂರ್ನಮೆಂಟ್ ಕೂಡ ಆಡಲು ಸಾಧ್ಯವಿಲ್ಲ. ನಾನು ಎರಡನೇ ಬಾರಿಗೆ ಪ್ಯಾರಾಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಹೊರಟಿದ್ದೇನೆ. ಸಾಮಾಜಿಕ ಒತ್ತಡ ಇರುವಾಗ ಜನರು 'ದಿವ್ಯಾಂಗ'ರನ್ನು  ಅವರು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ. ಆದರೆ ನನ್ನ ಪೋಷಕರು ನಾನು ಬಹಳಷ್ಟು ಸಾಧಿಸಬಲ್ಲೆ ಎಂದು ನನಗೆ ಭರವಸೆ ತುಂಬಿದರು.  ಸರ್‌ ಇಂದು ನನ್ನ ಮನೆಯಲ್ಲಿ ನನ್ನನ್ನು ನನ್ನ ಸಹೋದರರಿಗಿಂತ ಕಡಿಮೆ ಎಂದು ಪರಿಗಣಿಸಲಾಗುವುದಿಲ್ಲ. ನಾವು ಮೂವರು ಸಹೋದರರು ಎಂದು ನನ್ನ ತಾಯಿ ಹೇಳುತ್ತಾರೆ. ಹಾಗಾಗಿ, ನನ್ನ ಕುಟುಂಬವು ನನ್ನನ್ನು ಯಾವಾಗಲೂ ಬೆಂಬಲಿಸಿದೆ ಸರ್.

ಪ್ರಧಾನ ಮಂತ್ರಿಯವರು: ಅರುಣಾ, ಕಳೆದ ಪ್ಯಾರಾಲಿಂಪಿಕ್ಸ್ ನಲ್ಲಿ ಪ್ರಮುಖ ಪಂದ್ಯವೊಂದರ ಮೊದಲು ನೀವು ಗಾಯಗೊಂಡಿದ್ದೀರಿ. ಈ ಗಾಯದ ನಂತರ ನೀವು ನಿಮ್ಮನ್ನು ಹೇಗೆ ಪ್ರೇರೇಪಿಸಿದ್ದೀರಿ ಮತ್ತು ನೀವು ಅದನ್ನು ಹೇಗೆ ಜಯಿಸಲು ಸಾಧ್ಯವಾಯಿತು?

ಅರುಣಾ ತನ್ವಾರ್: ಸರ್ , ನೀವು ಪ್ರಮುಖ ಪಂದ್ಯಾವಳಿಯನ್ನು ಪ್ರತಿನಿಧಿಸಿದಾಗ , ಭಾರತವನ್ನು ಪ್ರತಿನಿಧಿಸಿದಾಗ , ಅದೂ ಒಂದೇ ಪಂದ್ಯದಲ್ಲಿ . ನಾನು ಪ್ಯಾರಾಲಿಂಪಿಕ್ಸ್ನಲ್ಲಿ ಇಡೀ ಟೇಕ್ವಾಂಡೋ ಸಮಿತಿಯನ್ನು ಪ್ರತಿನಿಧಿಸಿದ್ದೆ , ಆದರೆ ಎಲ್ಲೋ ಗಾಯಗೊಂಡ ಕಾರಣ ನಾನು ಹಿಂದುಳಿದಿದ್ದೆ . ಆದರೆ ಸರ್ , ಗಾಯವು ನಿಮ್ಮ ಆಟವನ್ನು ನಿಲ್ಲಿಸಲು ಸಾಧ್ಯವಿಲ್ಲ ಏಕೆಂದರೆ ನನ್ನ ಗುರಿ ತುಂಬಾ ದೊಡ್ಡದಾಗಿದೆ . ನೀವು ಗಾಯಗಳನ್ನು ಅನುಭವಿಸದ ಹೊರತು ನೀವು ಕ್ರೀಡೆಗಳನ್ನು ಆನಂದಿಸಲು ಸಾಧ್ಯವಿಲ್ಲ . ಕ್ರೀಡೆಯಲ್ಲಿ ಗಾಯಗಳು ಒಂದು ರತ್ನ ಸಾರ್. ಆದ್ದರಿಂದ, ಹಿಂತಿರುಗಿ ಬರುವುದು ತುಂಬಾ ಕಷ್ಟವಾಗಿರಲಿಲ್ಲ ಸರ್. ನಾನು ಬಲವಾಗಿರಲು ಪ್ರಯತ್ನಿಸಿದೆ. ನನ್ನ ತರಬೇತುದಾರರು, ವಿಶೇಷವಾಗಿ ಸಂಧ್ಯಾ ಭಾರತಿ ಮೇಡಮ್ ಮತ್ತು ನನ್ನ ಪೋಷಕರು, ಒಂದು ಪ್ಯಾರಾಲಿಂಪಿಕ್ಸ್ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ; ಇನ್ನೂ ಅನೇಕ ಪ್ಯಾರಾಲಿಂಪಿಕ್ಸ್ ಆಡಲು ಇವೆ ಎಂದು ನನಗೆ ಹೇಳಿದರು.

ಪ್ರಧಾನ ಮಂತ್ರಿಯವರು: ಅರುಣಾ , ನೀವು ಗಾಯವನ್ನು ರತ್ನದಂತೆ ಪರಿಗಣಿಸುತ್ತೀರಿ . ನಿಮ್ಮ ಈ ಮನಸ್ಥಿತಿ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಆದರೆ ನೀವು ಅಂತಹ ಆಭರಣವನ್ನು ಧರಿಸುವುದು ನನಗೆ ಇಷ್ಟವಿಲ್ಲ . ಅರುಣಾ, ನೀವು ನಿಮ್ಮ ಆಟದಲ್ಲಿ ಮತ್ತು ನಿಮ್ಮ ಜೀವನ ಎರಡರಲ್ಲೂ  ಹೋರಾಟಗಾರ್ತಿ.  ನೀವು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೀರಿ ಮಾತ್ರವಲ್ಲದೆ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸ್ಫೂರ್ತಿ ನೀಡಿದ್ದೀರಿ. ಹೋರಾಟಗಾರನ ಮನಸ್ಥಿತಿಯೊಂದಿಗೆ ಪ್ಯಾರಿಸ್ಗೆ ಹೋಗಿ ಮತ್ತು ಅದ್ಭುತ ಪ್ರದರ್ಶನ ನೀಡಿ. ಇಡೀ ದೇಶದ ಶುಭಾಶಯಗಳು ನಿಮ್ಮೊಂದಿಗಿವೆ.

ಅರುಣಾ ತನ್ವಾರ್: ತುಂಬಾ ಧನ್ಯವಾದಗಳು ಸರ್

ಪ್ರಧಾನ ಮಂತ್ರಿಯವರು: ಈಗ ನಾನೇ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ ಮತ್ತು ನಿಮ್ಮಲ್ಲಿ ಯಾರಾದರೂ ಇದಕ್ಕೆ ಉತ್ತರಿಸಬಹುದು. ವಿಶೇಷವಾಗಿ ಇನ್ನೂ ಮಾತನಾಡದವರು. ನಿಮ್ಮಲ್ಲಿ ಹಲವರು ನಿಮ್ಮ ಮೊದಲ ಪ್ಯಾರಾಲಿಂಪಿಕ್ಸ್‌ ಗಾಗಿ ಪ್ಯಾರಿಸ್‌ಗೆ ಹೋಗುತ್ತಿರುವಿರಿ. ಮೊದಲ ಬಾರಿಗೆ ಇಂತಹ ಜಾಗತಿಕ ಸಮಾರಂಭದಲ್ಲಿ ನೀವು ನಿಮ್ಮ  ದೇಶವನ್ನು ಪ್ರತಿನಿಧಿಸುವ ಭಾವನೆಯನ್ನು ಯಾರಾದರೂ ವಿವರಿಸಬಹುದುದೇ? ಇನ್ನೂ ಮಾತನಾಡದವರು ದಯವಿಟ್ಟು ಉತ್ತರಿಸಿ

ಅಶೋಕ್ ಮಲಿಕ್: ಸರ್, ನನ್ನ ಹೆಸರು ಅಶೋಕ್! ನಾನು ಮೊದಲ ಬಾರಿಗೆ ಹೋಗುತ್ತಿದ್ದೇನೆ, ಸರ್! ಇದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು...

ಪ್ರಧಾನ ಮಂತ್ರಿಯವರು: ನಿಮ್ಮ ಹೆಸರೇನು?

ಅಶೋಕ್ ಮಲಿಕ್: ಅಶೋಕ್ ಮಲಿಕ್, ಸರ್!

ಪ್ರಧಾನ ಮಂತ್ರಿಯವರು: ಅಶೋಕ್ ಜೀ, ಹೌದು, ದಯವಿಟ್ಟು ಮುಂದುವರಿಯಿರಿ!

ಅಶೋಕ್ ಮಲಿಕ್: ಸರ್, ಒಲಿಂಪಿಕ್ಸ್ ನಲ್ಲಿ ಆಡುವುದು ಪ್ರತಿಯೊಬ್ಬ ಆಟಗಾರನ ಕನಸು ಮತ್ತು ನನ್ನ ಕನಸು ನನಸಾಗಲಿದೆ ಸರ್. ನನ್ನ ದೇಶವನ್ನು ಪ್ರತಿನಿಧಿಸಲು ನಾನು ಪ್ಯಾರಾಲಿಂಪಿಕ್ಸ್‌ ಗಾಗಿ  ಪ್ಯಾರಿಸ್‌ಗೆ ಹೋಗುತ್ತಿದ್ದೇನೆ ಸರ್. ಅಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ ಸರ್. ಸಾಧ್ಯವಾದರೆ ನನ್ನ ದೇಶಕ್ಕೆ ಪದಕವನ್ನೂ ತಂದು ಕೊಡುತ್ತೇನೆ ಸರ್. 

ಪ್ರಧಾನ ಮಂತ್ರಿಯವರು: ಅಶೋಕ್, ನೀವು ಎಲ್ಲಿಂದ ಬಂದಿದ್ದೀರಿ?

ಅಶೋಕ್ ಮಲಿಕ್: ಹರಿಯಾಣದಿಂದ ಸರ್, ಸೋನಿಪತ್!

ಪ್ರಧಾನ ಮಂತ್ರಿಯವರು: ಸೋನಿಪತ್ ನಿಂದ, ನೀವೂ ಸೋನಿಪತ್ ನವರು!

ಅಶೋಕ್ ಮಲಿಕ್: ಹೌದು, ಸರ್!

ಪ್ರಧಾನ ಮಂತ್ರಿಯವರು: ಸರಿ,  ನಿಮ್ಮಲ್ಲಿ ಎಷ್ಟು ಮಂದಿ ನಿಮ್ಮ ಎರಡನೇ ಅಥವಾ ಮೂರನೇ ಪ್ಯಾರಾಲಿಂಪಿಕ್ಸ್ ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ ಹೋಗುತ್ತಿರುವಿರಿ? ನಿಮ್ಮ ಮೊದಲ ಪ್ಯಾರಾಲಿಂಪಿಕ್ಸ್ ಹೋಲಿಸಿದರೆ ಈಗ ಎಷ್ಟು ವಿಭಿನ್ನವಾಗಿದೆ? ಯಾರು ಉತ್ತರಿಸಲು ಬಯಸುತ್ತಾರೆ?

ಅಮಿತ್ ಸರೋಹ: ಸರ್, ನಮಸ್ಕಾರ್!

ಪ್ರಧಾನ ಮಂತ್ರಿಯವರು: ನಮಸ್ಕಾರ್ ಜೀ!

ಅಮಿತ್ ಸರೋಹ: ಸರ್, ನಮಸ್ಕಾರ್!

ಪ್ರಧಾನ ಮಂತ್ರಿಯವರು: ನಮಸ್ಕಾರ್ ಜೀ!

ಅಮಿತ್ ಸರೋಹಾ: ಸರ್, ನಾನು ಅಮಿತ್ ಸರೋಹಾ, ಮತ್ತು ಇದು ನನ್ನ ನಾಲ್ಕನೇ ಪ್ಯಾರಾಲಿಂಪಿಕ್ಸ್ ಆಗಿರುತ್ತದೆ. ನಾಲ್ಕನೇ ಬಾರಿ ಪ್ಯಾರಾಲಿಂಪಿಕ್ಸ್‌ ಹೋಗುವ ತಂಡದಲ್ಲಿ ನಾನು ಅತ್ಯಂತ ಹಿರಿಯ ಕ್ರೀಡಾಪಟು. ಸರ್. ನಾನು ನೋಡಿದ ದೊಡ್ಡ ಬದಲಾವಣೆ ಏನೆಂದರೆ, ನಾವು 2012 ರಲ್ಲಿ ಹೋದಾಗ, ನಾವು ಕೇವಲ ಒಂದು ಪದಕವನ್ನು ಗೆದ್ದಿದ್ದೇವೆ. ಅದರ ನಂತರ, ನಾನು ಇನ್ನೂ ಎರಡು ಒಲಿಂಪಿಕ್ಸ್ ಗಳಲ್ಲಿ ಭಾಗವಹಿಸಿದ್ದೇನೆ ಮತ್ತು ನಮ್ಮ ತಂಡದ ಪ್ರದರ್ಶನವು ಸುಧಾರಿಸುತ್ತಲೇ ಇತ್ತು. ಈಗ 84 ಕ್ರೀಡಾಪಟುಗಳು ಹೋಗುತ್ತಿದ್ದಾರೆ ಸರ್. SAI (ಭಾರತೀಯ ಕ್ರೀಡಾ ಪ್ರಾಧಿಕಾರ) ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಸರ್ , ನಮ್ಮ ತಂಡಕ್ಕೆ ಸಿಗುತ್ತಿದ್ದ ಬೆಂಬಲ ಮತ್ತು ಆರ್ಥಿಕ ಸಹಾಯ ಬಹಳಷ್ಟು ಹೆಚ್ಚಿದೆ ಸರ್  2015 ರಲ್ಲಿ TOPS (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್) ಅನ್ನು ಪರಿಚಯಿಸಿದಾಗಿನಿಂದ ನಮಗೆ ತುಂಬಾ ಬೆಂಬಲ ಸಿಕ್ಕಿದೆ. ಈಗ ನಾವು ವಿದೇಶದಲ್ಲಿ ಎಲ್ಲಿ ಬೇಕಾದರೂ ಪ್ರಯಾಣಿಸಬಹುದು ಮತ್ತು ತರಬೇತಿ ಪಡೆಯಬಹುದು. ನಾವು ವೈಯಕ್ತಿಕ ತರಬೇತುದಾರರು, ರ್ಸನಲ್ ಫಿಸಿಯೋ ಮತ್ತು ವೈಯಕ್ತಿಕ ಪೋಷಕ ಸಿಬ್ಬಂದಿಯನ್ನು ಸಹ ಹೊಂದಿದ್ದೇವೆ. ನಮ್ಮ ಅವಶ್ಯಕತೆಗಳು ಏನೇ ಇರಲಿ, ಅವುಗಳನ್ನು ಪೂರೈಸಲಾಗುತ್ತಿದೆ ಮತ್ತು ಅದಕ್ಕಾಗಿಯೇ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದೇವೆ ಸರ್.

ಪ್ರಧಾನ ಮಂತ್ರಿಯವರು: ಸರಿ , ಈ ಗುಂಪಿನಲ್ಲಿ ಇನ್ನೂ ತಮ್ಮ ಶಾಲೆ ಅಥವಾ ಕಾಲೇಜಿನಲ್ಲಿ ಓದುತ್ತಿರುವ ಅನೇಕ ಯುವಕರನ್ನು ನಾನು ನೋಡುತ್ತೇನೆ . ನಿಮ್ಮ ಅಧ್ಯಯನದೊಂದಿಗೆ ನೀವು ಕ್ರೀಡೆಗಳನ್ನು ಹೇಗೆ ನಿರ್ವಹಿಸುತ್ತೀರಿ ?

ರುದ್ರಾಂಶ್ ಖಂಡೇಲ್ವಾಲ್:  ನನ್ನ ಹೆಸರು  ರುದ್ರಾಂಶ್ ಖಂಡೇಲ್ವಾಲ್. ನಾನು ಭರತ್ ಪುರ ರಾಜಸ್ಥಾನದವನು. ಈ ವರ್ಷವೇ ನಾನು 12 ಬೋರ್ಡ್ ಪರೀಕ್ಷೆಗಳನ್ನು ನೀಡಿದ್ದೇನೆ ಮತ್ತು ನಾನು ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದೆ. ನಾನು 83% ಪಡೆದಿದ್ದೆ.  ಆ ಸಮಯದಲ್ಲಿ ವಿಶ್ವಕಪ್‌ ಕೂಡ ನವದೆಹಲಿಯಲ್ಲಿ ನಡೆಯುತ್ತಿತ್ತು. ಆದ್ದರಿಂದ ನಾನು ಎರಡೂ ಕೆಲಸಗಳನ್ನು ಏಕಕಾಲದಲ್ಲಿ ಮಾಡುತ್ತಿದ್ದೆ, ನಿರ್ವಹಿಸುತ್ತಿದ್ದೆ.  ಹಾಗಾಗಿ ಶಿಕ್ಷಣ ಮತ್ತು ಕ್ರೀಡೆಗಳೆರಡೂ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಕ್ರೀಡೆಯು ನಿಮ್ಮ ಗುಣವನ್ನು ಅಭಿವೃದ್ಧಿಪಡಿಸುತ್ತದೆ. ಪ್ರತಿದಿನ ನಿಮ್ಮನ್ನು ಸುಧಾರಿಸುತ್ತದೆ ಮತ್ತು ಶಿಕ್ಷಣವು ಜೀವನವನ್ನು ಹೇಗೆ ಬದುಕಬೇಕು ಮತ್ತು ಮತ್ತು ನೀವು ಏನು ಮಾಡಬೇಕೆಂದು ಹೇಳುತ್ತದೆ.  ಹಾಗಾಗಿ ನನಗನ್ನಿಸುತ್ತದೆ ಸರ್, ಎರಡನ್ನೂ ನಿರ್ವಹಿಸುವುದು ಅಷ್ಟು ಕಷ್ಟವಲ್ಲ ಮತ್ತು ಎರಡೂ ಬಹಳ ಮುಖ್ಯ.

ಪ್ರಧಾನ ಮಂತ್ರಿಯವರು: ಪ್ಯಾರಾ-ಅಥ್ಲೀಟ್ ಗಳ ಸಲಹೆಗಳ ಆಧಾರದ ಮೇಲೆ, ನಾವು ಡಿಸೆಂಬರ್ 2023 ರಲ್ಲಿ ಮೊದಲ ಬಾರಿಗೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಅನ್ನು ಆಯೋಜಿಸಿದ್ದೇವೆ. ಅಂತಹ ಘಟನೆಯು ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಹೇಗೆ ಸಹಾಯ ಮಾಡುತ್ತದೆ ಎಂದು ಯಾರಾದರೂ ನನಗೆ ಹೇಳಬಹುದೇ?

ಭಾವಿನಾ: ನಮಸ್ತೆ, ಸಾರ್!

ಪ್ರಧಾನ ಮಂತ್ರಿಯವರು: ನಮಸ್ತೆ!

ಭಾವಿನಾ: ಭಾವಿನಾ ಸರ್.

ಪ್ರಧಾನ ಮಂತ್ರಿಯವರು: ಹೌದು ಭಾವಿನಾ ಹೇಗಿದ್ದೀರಶ?

ಭಾವಿನಾ: ನಾನು ಚೆನ್ನಾಗಿದ್ದೇನೆ ಸರ್. ನೀವು ಹೇಗಿದ್ದೀರಿ?

ಪ್ರಧಾನ ಮಂತ್ರಿಯವರು: ಹೌದು, ಭಾವಿನಾ, ದಯವಿಟ್ಟು ಹೇಳಿ!

ಭಾವಿನಾ: ಸರ್, ಖೇಲೋ ಇಂಡಿಯಾ ಅಭಿಯಾನವು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕ್ರೀಡೆಯ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ, ತಳಮಟ್ಟದಿಂದ ಹಲವಾರು ಪ್ರತಿಭೆಗಳನ್ನು ಮುಂಚೂಣಿಗೆ ತರುತ್ತಿದೆ. ಖೇಲೋ ಇಂಡಿಯಾದಲ್ಲಿ ಪ್ಯಾರಾ ಕ್ರೀಡೆಗಳನ್ನು ಸೇರಿಸಿರುವುದರಿಂದ, ಪ್ಯಾರಾ-ಅಥ್ಲೀಟ್ ಗಳು ಉತ್ತಮ ವೇದಿಕೆ ಮತ್ತು ಹೊಸ ನಿರ್ದೇಶನಗಳನ್ನು ಪಡೆದಿದ್ದಾರೆ. ಖೇಲೋ ಇಂಡಿಯಾದ 16 ಅಥ್ಲೀಟ್ ಗಳು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವುದು ನಾನು ನೀಡುವ ಅತ್ಯುತ್ತಮ ಉದಾಹರಣೆಯಾಗಿದೆ.
ಪ್ರಧಾನ ಮಂತ್ರಿಯವರು: ವಾಹ್ ! ಉತ್ತಮ ಆಟಗಾರರಿಗೆ ಗಾಯಗಳು ದೊಡ್ಡ ಸಮಸ್ಯೆಯಾಗಿದೆ . ಪ್ಯಾರಾಲಿಂಪಿಕ್ಸ್‌ಗೆ ತಯಾರಿ ನಡೆಸುವಾಗ ಕ್ರೀಡಾಪಟುಗಳು ಗಾಯಗಳನ್ನು ಹೇಗೆ ನಿಭಾಯಿಸುತ್ತಾರೆ ? ನಿಮ್ಮನ್ನು ನೀವು ಹೇಗೆ ಪ್ರೇರೇಪಿಸುತ್ತೀರಿ ?

ತರುಣ್ ಧಿಲ್ಲೋನ್: ನಮಸ್ಕಾರ ಸರ್ !

ಪ್ರಧಾನ ಮಂತ್ರಿಯವರು: ನಮಸ್ಕಾರ ?

ತರುಣ್ ಧಿಲ್ಲೋನ್: ಸರ್, ನನ್ನ ಹೆಸರು ತರುಣ್ ಧಿಲ್ಲೋನ್. ನಾನು ಹರಿಯಾಣದ ಹಿಸಾರ್ ನವನು! ನನ್ನ ಕ್ರೀಡೆ ಬ್ಯಾಡ್ಮಿಂಟನ್ ಸರ್. ಮತ್ತು ನೀವು ಕೇಳಿದ ಗಾಯದ ಬಗ್ಗೆ, ನಾನು ನನ್ನ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಸರ್, 2022 ರ ಕೆನಡಾ ಅಂತರಾಷ್ಟ್ರೀಯ ಟೂರ್ನಮೆಂಟ್ ಸಮಯದಲ್ಲಿ, ನನ್ನ ಮೊಣಕಾಲು ಸ್ನಾಯು ಪಂದ್ಯದ ಸಮಯದಲ್ಲಿ ಮುರಿದುಹೋಯಿತು. ಇದು ಬ್ಯಾಡ್ಮಿಂಟನ್ ಆಟಗಾರನಿಗೆ ತೀವ್ರವಾದ ಗಾಯ ಸರ್.  ನಾನು ಟಾಪ್ ಅಥ್ಲೀಟ್ ಆಗಲು ತುಂಬಾ ಅದೃಷ್ಟಶಾಲಿ ಸರ್. ನಾನು ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ನಿಮಗೆ ಹೇಳಲು ಬಯಸುತ್ತೇನೆ ಸರ್, ನಾನು TOPS ನ ಭಾಗವಾಗಿರುವುದರಿಂದ, ನನ್ನ ಗಾಯದ ಸಮಯದಲ್ಲಿ SAI ಅಧಿಕಾರಿಗಳು ಮತ್ತು SAI SAI ತಂಡವು ನನಗೆ ಸಾಕಷ್ಟು ಸಹಾಯ ಮಾಡಿದೆ. ಮುಂಬೈನಲ್ಲಿರುವ ಅತ್ಯುತ್ತಮ ವೈದ್ಯ ಡಾ. ದಿನ್ ಶಾ ಅವರೊಂದಿಗೆ ಚಿಕಿತ್ಸೆಗಾಗಿ ನನ್ನನ್ನು ಭಾರತಕ್ಕೆ ಮರಳಿ ಕರೆತರಲು ಅವರು ವ್ಯಾಪಾರ ದರ್ಜೆಯ ವಿಮಾನದ ಟಿಕೆಟ್  ವ್ಯವಸ್ಥೆ ಮಾಡಿದರು. ನನ್ನ ಶಸ್ತ್ರಚಿಕಿತ್ಸೆಯನ್ನು ಬಹಳ ಕಡಿಮೆ ಸಮಯದಲ್ಲಿ ಮಾಡಲಾಯಿತು. SAI ನ ಬೆಂಬಲಕ್ಕೆ ಧನ್ಯವಾದಗಳು. ನಾನು ಚೇತರಿಸಿಕೊಳ್ಳಲು ಮತ್ತು ಕ್ರೀಡೆಗೆ ಮರಳಲು ಸಾಧ್ಯವಾಯಿತು. ಚೇತರಿಸಿಕೊಳ್ಳಲು 10-11 ತಿಂಗಳು ಬೇಕು ಎಂದು ವೈದ್ಯರು ಹೇಳಿದರು. ಆದರೆ SAI ಯ ಬೆಂಬಲದಿಂದ ನಾನು 7 ತಿಂಗಳಲ್ಲಿ ಚೇತರಿಸಿಕೊಂಡೆ ಮತ್ತು 8 ನೇ ತಿಂಗಳಲ್ಲಿ, ನಾನು ಅಂತರಾಷ್ಟ್ರೀಯ ಟೂರ್ನಮೆಂಟ್ನಲ್ಲಿ ಆಡಲು ಹೋದೆ. ಅಲ್ಲಿ ನಾನು ಚಿನ್ನದ ಪದಕ ಗೆದ್ದೆ. TOPS ಯೋಜನೆಯಿಂದಾಗಿ ಇಂದು ನಮ್ಮಂತಹ ಮಧ್ಯಮ ವರ್ಗದ ಕುಟುಂಬಗಳು ಅಂತಹ ದೊಡ್ಡ ಗಾಯಗಳನ್ನು ಸುಲಭವಾಗಿ ಜಯಿಸಬಹುದು ಮತ್ತು ಕ್ರೀಡೆಯಲ್ಲಿ ನಮ್ಮ ಕನಸುಗಳನ್ನು ಸಾಧಿಸಬಹುದು ಎಂದು ನಾನು ನಂಬುತ್ತೇನೆ.

ಪ್ರಧಾನ ಮಂತ್ರಿಯವರು: ನಿಮಗೆ ಅಭಿನಂದನೆಗಳು! ನಿಮ್ಮಲ್ಲಿ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ. ಪ್ಯಾರಾ ಕ್ರೀಡೆಗಳಲ್ಲಿ ಸಾಮಾಜಿಕ ಮಾಧ್ಯಮ ಹೇಗೆ ಸಹಾಯ ಮಾಡುತ್ತದೆ ಎಂದು ಯಾರಾದರೂ ನನಗೆ ಹೇಳಬಹುದೇ?

ಯೋಗೇಶ್ ಕಥುನಿಯಾ: ನಮಸ್ತೆ, ಸರ್! ಹರ್ ಹರ್ ಮಹಾದೇವ್! ನನ್ನ ಹೆಸರು ಯೋಗೇಶ್ ಕಥುನಿಯಾ. ನಾನು ಹರಿಯಾಣದ ಬಹದ್ದೂರ್ ಗಢದಿಂದ ಬಂದವನು. ಸಾಮಾಜಿಕ ಮಾಧ್ಯಮವು ಪ್ಯಾರಾ ಕ್ರೀಡೆಗಳ ಮೇಲೆ, ವಿಶೇಷವಾಗಿ ಹಿಂದೆ ಇರಲಿಲ್ಲವಾದ ಜಾಗೃತಿಯನ್ನು ಹೆಚ್ಚಿಸುವಲ್ಲಿ ಬಹಳ ಸಕಾರಾತ್ಮಕ ಪರಿಣಾಮವನ್ನು ಬೀರಿದೆ. ಕ್ರಮೇಣ ಭಾರತದ ಜನರು ಪ್ಯಾರಾ ಕ್ರೀಡೆಗಳು ಸಹ ಒಂದು ವಿಷಯ ಎಂದು ಅರಿತುಕೊಳ್ಳುತ್ತಿದ್ದಾರೆ ಮತ್ತು ಅವರು ಸಾಮಾಜಿಕ ಮಾಧ್ಯಮದಲ್ಲಿ ನೋಡುವ ಕಾರಣದಿಂದಾಗಿ ಅನೇಕ ಹೊಸ ಕ್ರೀಡಾಪಟುಗಳು ಪ್ಯಾರಾ ಕ್ರೀಡೆಗಳಿಗೆ ಬರುತ್ತಿದ್ದಾರೆ. ಅಂಗವೈಕಲ್ಯ ಹೊಂದಿರುವ ಅನೇಕ ಜನರು ಶಿಕ್ಷಣ ಮತ್ತು ಇತರ ಅಂತಹ ವಿಷಯಗಳನ್ನು ಮಾತ್ರ ಅನುಸರಿಸಬಹುದು ಎಂದು ಭಾವಿಸುತ್ತಿದ್ದರು. ಆದರೆ ಈಗ ನಾವು ಅವರಲ್ಲಿ ಹೆಚ್ಚು ಹೆಚ್ಚು ಜನರು ಪ್ಯಾರಾ ಕ್ರೀಡೆಗಳಿಗೆ ಬರುತ್ತಿರುವುದನ್ನು ನೋಡುತ್ತಿದ್ದೇವೆ. ಪ್ಯಾರಾ ಕ್ರೀಡೆಗಳ ಗೋಚರತೆ ಸಾಮಾಜಿಕ ಮಾಧ್ಯಮದಿಂದಾಗಿ ಗಣನೀಯವಾಗಿ ಹೆಚ್ಚಾಗಿದೆ. ಇದು ಜನರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಒದಗಿಸುತ್ತದೆ. ಸಾಮಾಜಿಕ ಮಾಧ್ಯಮದ ಮೂಲಕ ನಾವು ಅನೇಕ ಅಭಿಮಾನಿಗಳನ್ನು ಹೊಂದಿದ್ದೇವೆ ಮತ್ತು ನಮ್ಮ ವೀಡಿಯೊಗಳನ್ನು ನೋಡುವ ಅನೇಕ ಜನರನ್ನು ಹೊಂದಿದ್ದೇವೆ. ನಮ್ಮ ವೀಡಿಯೋಗಳನ್ನು ವೀಕ್ಷಿಸುವವರು ಪ್ರೇರಣೆ ಪಡೆಯುತ್ತಾರೆ.  ಗ್ರಾಸ್ ರೂಟ್ ಮಟ್ಟದ ಕ್ರೀಡಾಪಟುಗಳು ವೀಡಿಯೊವನ್ನು ವೀಕ್ಷಿಸುತ್ತಾರೆ. ಅವರು ಅದನ್ನು ತಮ್ಮ ವ್ಯಾಯಾಮಗಳಿಗೆ ಸೇರಿಸಬಹುದು. ಹಾಗಾಗಿ ಪ್ಯಾರಾ ಕ್ರೀಡೆಗಳ ಬೆಳವಣಿಗೆಯಲ್ಲಿ ಸಾಮಾಜಿಕ ಮಾಧ್ಯಮಗಳು ಸಾಕಷ್ಟು ಪ್ರಭಾವ ಬೀರಿವೆ.

ನಿರೂಪಕ: ಸರ್, ನಮ್ಮ ಕ್ರೀಡಾಪಟುಗಳ ಸ್ಥೈರ್ಯವನ್ನು ಹೆಚ್ಚಿಸಲು ಕೆಲವು ಪ್ರೋತ್ಸಾಹದ ಮಾತುಗಳನ್ನು ಹೇಳಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ಧನ್ಯವಾದಗಳು, ಸರ್

ಪ್ರಧಾನ ಮಂತ್ರಿಯವರು: ದೇಶದ ಕ್ರೀಡಾ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಜಿ , ಕ್ರೀಡಾ ರಾಜ್ಯ ಸಚಿವ ರಕ್ಷಾ ಖಡ್ಸೆ ಜಿ , ಪ್ಯಾರಾ ಅಥ್ಲೀಟ್ ಗಳು, ತರಬೇತುದಾರರು ಮತ್ತು ಸಿಬ್ಬಂದಿ ವಿಶ್ವದ ಮೂಲೆ ಮೂಲೆಯಲ್ಲಿದ್ದಾರೆ. ಅಂತಿಮ ಕೋಚಿಂಗ್ ಹಂತದಲ್ಲಿದ್ದರೂ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ  ನಿಮ್ಮನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದೆ. ನೀವೆಲ್ಲರೂ ಭಾರತದ ಧ್ವಜಧಾರಿಗಳಾಗಿ ಪ್ಯಾರಿಸ್ಗೆ ಹೋಗುತ್ತಿದ್ದೀರಿ. ಈ ಪ್ರಯಾಣವು ನಿಮ್ಮ ಜೀವನ ಮತ್ತು ವೃತ್ತಿಜೀವನದಲ್ಲಿ ಬಹಳ ಮಹತ್ವದ್ದಾಗಿದೆ ಮತ್ತು ಇದು ದೇಶಕ್ಕೂ ಅಷ್ಟೇ ಮಹತ್ವದ್ದಾಗಿದೆ. ದೇಶದ ಹೆಮ್ಮೆಯು ಪ್ಯಾರಿಸ್ನಲ್ಲಿ ನಿಮ್ಮ ಉಪಸ್ಥಿತಿಯೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ, ಇಂದು ಇಡೀ ದೇಶವು ನಿಮ್ಮನ್ನು ಆಶೀರ್ವದಿಸುತ್ತಿದೆ . ನಮ್ಮ ಪರಂಪರೆಯಲ್ಲಿ, ಇದೇ ರೀತಿ ಆಶೀರ್ವಾದಗಳನ್ನು ನೀಡಿದಾಗ, ಜನರು "ವಿಜಯಿ ಭವ" (ವಿಜಯಿ ಆಗಿರಿ) ಎಂದು ಹೇಳುತ್ತಾರೆ. 140 ಕೋಟಿ ಭಾರತೀಯರು ನಿಮ್ಮನ್ನು ಆಶೀರ್ವದಿಸುತ್ತಾರೆ - "ವಿಜಯಿ ಭವ". ಟೋಕಿಯೋ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್ನಂತೆ, ನೀವು ಹೊಸ ದಾಖಲೆಗಳನ್ನು ನಿರ್ಮಿಸಲು ಬಯಸುತ್ತಿರುವುದು ನಿಮ್ಮ ಉತ್ಸಾಹವನ್ನು ತೋರಿಸುತ್ತದೆ. ಮುಂದೆ ಹೋಗಿ ಧೈರ್ಯ ಮತ್ತು ನಿರ್ಧಾರವು ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸಿ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.

ಸ್ನೇಹಿತರೇ,

ಯಾವುದೇ ಕ್ರೀಡೆಯಲ್ಲಿ ಒಬ್ಬ ಆಟಗಾರ ದೊಡ್ಡ ಹಂತವನ್ನು ತಲುಪಿದಾಗ, ಅದರ ಹಿಂದೆ ಧೈರ್ಯ, ನಿಷ್ಠೆ ಮತ್ತು ತ್ಯಾಗದ ಸಂಪೂರ್ಣ ಕಥೆ ಇರುತ್ತದೆ.  ಯಾವುದೇ ಕ್ರೀಡಾಪಟುವಿನ ಅಡಿಪಾಯ ಧೈರ್ಯ. ಆಟಗಾರನು ಶಿಸ್ತಿನ ಶಕ್ತಿಯೊಂದಿಗೆ ಮುಂದುವರಿಯುತ್ತಾನೆ. ಅವರ ಯಶಸ್ಸು ಅವರ ಆತ್ಮವಿಶ್ವಾಸ ಮತ್ತು ಸ್ವಯಂ ನಿಯಂತ್ರಣಕ್ಕೆ ಸಾಕ್ಷಿಯಾಗಿದೆ.ಆದರೆ ಪ್ಯಾರಾ-ಕ್ರೀಡಾಪಟುಗಳಿಗೆ ಬಂದಾಗ, ಈ ಸತ್ಯ ಮತ್ತು ಸವಾಲು ಹಲವು ಪಟ್ಟು ಹೆಚ್ಚಾಗುತ್ತದೆ. ನೀವು ಈ ಹಂತವನ್ನು ತಲುಪುವುದು ನೀವು ಒಳಗಿನಿಂದ ಎಷ್ಟು ಬಲಶಾಲಿ ಎಂಬುದನ್ನು ತೋರಿಸುತ್ತದೆ. ಪ್ರತಿಕೂಲವಾದ ಗಾಳಿಯನ್ನು ಮಾತ್ರವಲ್ಲದೆ ಪ್ರತಿಕೂಲವಾದ ಚಂಡಮಾರುತಗಳನ್ನೇ  ನೀವು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೀರಿ ಎಂಬುದನ್ನು ನಿಮ್ಮ ಯಶಸ್ಸು ತೋರಿಸುತ್ತದೆ . ನೀವು ಸಮಾಜದ ಸ್ಥಾಪಿತ ನಂಬಿಕೆಗಳನ್ನು ಸೋಲಿಸಿದ್ದೀರಿ , ದೇಹದ ಸವಾಲುಗಳನ್ನು ನೀವು ಜಯಿಸಿದ್ದೀರಿ . ಆದ್ದರಿಂದ , ನೀವು ಯಶಸ್ಸಿನ ಮಂತ್ರ , ನೀವು ಯಶಸ್ಸಿನ ಉದಾಹರಣೆ ಮತ್ತು ನೀವು ಯಶಸ್ಸಿಗೆ ಸಾಕ್ಷಿಯಾಗಿದ್ದೀರಿ . ಸಂಪೂರ್ಣ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಿರಿ, ನಿಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಸ್ನೇಹಿತರೇ, 

ಪ್ಯಾರಾ-ಆಟಗಳಲ್ಲಿ ಭಾರತದ ಯಶಸ್ಸು ಮತ್ತು ಪ್ರಾಬಲ್ಯವು ಇತ್ತೀಚಿನ ವರ್ಷಗಳಲ್ಲಿ ಹೇಗೆ ಹೆಚ್ಚಾಗಿದೆ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ. 2012 ರಲ್ಲಿ, ಭಾರತವು ಲಂಡನ್ ಪ್ಯಾರಾಲಿಂಪಿಕ್ಸ್ ನಲ್ಲಿ ಕೇವಲ ಒಂದು ಪದಕವನ್ನು ಗೆದ್ದಿತು. ನಾವು ಯಾವುದೇ ಚಿನ್ನವನ್ನು ಗೆಲ್ಲಲಿಲ್ಲ. 2016 ರಲ್ಲಿ ಭಾರತವು 2 ಚಿನ್ನದ  ಪದಕಗಳು ಮತ್ತು ರಿಯೋದಲ್ಲಿ ಒಟ್ಟು 4 ಪದಕಗಳನ್ನು ಗೆದ್ದಿತು.  ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನಾವು ದಾಖಲಯೆ 19 ಪದಕಗಳನ್ನು ಗೆದ್ದಿದ್ದೇವೆ - 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚು. ನಿಮ್ಮಲ್ಲಿ ಅನೇಕರು ಆ ದಂಡಯಾತ್ರೆಯ ಭಾಗವಾಗಿದ್ದರು ಮತ್ತು ಪದಕಗಳನ್ನು ಗೆದ್ದಿದ್ದರು. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇದುವರೆಗೆ ಗೆದ್ದಿರುವ 31 ಪದಕಗಳಲ್ಲಿ 19 ಟೋಕಿಯೊದಲ್ಲಿ ಮಾತ್ರ  ಬಂದಿವೆ. ಕಳೆದ 10 ವರ್ಷಗಳಲ್ಲಿ ಭಾರತವು ಕ್ರೀಡೆ ಮತ್ತು ಪ್ಯಾರಾ ಗೇಮ್ ಗಳಲ್ಲಿ ಎಷ್ಟು ಎತ್ತರಕ್ಕೆ ಹಾರಿದೆ ಎಂದು ನೀವು ಊಹಿಸಬಹುದು.

ಸ್ನೇಹಿತರೇ, 

ಭಾರತದ ಕ್ರೀಡಾ ಸಾಧನೆಗಳು ಕ್ರೀಡೆಗಳತ್ತ ಸಮಾಜದ ದೃಷ್ಟಿಕೋನದ ಬದಲಾವಣೆವನ್ನು ಪ್ರತಿಬಿಂಬಿಸುತ್ತವೆ. ಒಂದು ಕಾಲವಿತ್ತು, ಕ್ರೀಡೆಗಳನ್ನು ಕೇವಲ ಮನರಂಜನೆ, ಖಾಲಿ ಸಮಯವಿರುವವರು ಮಾತ್ರ ಮಾಡುವ ಕಾರ್ಯ ಎಂದು ಪರಿಗಣಿಸಲಾಗುತ್ತಿತ್ತು. ಮನೆಯಲ್ಲಿಯೂ ಹೆಚ್ಚು ಆಡಿದವರನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿತ್ತು; ಕ್ರೀಡೆಗಳನ್ನು ವೃತ್ತಿಯಾಗಿ ಅಲ್ಲ, ವೃತ್ತಿಗೆ ಅಡ್ಡಿಯಾಗಿ ನೋಡಲಾಗುತ್ತಿತ್ತು. ಕ್ರೀಡೆಗಳಲ್ಲಿ ಅವಕಾಶಗಳು ಬಹುತೇಕ ಇರಲಿಲ್ಲ. ನನ್ನ ದಿವ್ಯಾಂಗ ಸಹೋದರ ಸಹೋದರಿಯರನ್ನು ಸಹ ದುರ್ಬಲರು ಮತ್ತು ನಿರ್ಗತಿಕರು ಎಂದು ಪರಿಗಣಿಸಲಾಗಿತ್ತು. ಆ ಚಿಂತನೆಯನ್ನು ಬದಲಿಸಿ ಅವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿದೆವು. ನಾವು ಈ ಮಾನಸಿಕತೆಯನ್ನು ಬದಲಾಯಿಸಿ ಅವರಿಗೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿದ್ದೇವೆ. ಇಂದು, ಪ್ಯಾರಾ-ಆಟಗಳು ಇತರ ಕ್ರೀಡೆಗಳಿಗೆ ಸಮಾನ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ದೇಶದಲ್ಲಿ 'ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್' ಕೂಡ ಪ್ರಾರಂಭಿಸಲಾಗಿದೆ. ನಮ್ಮ ಪ್ಯಾರಾ-ಕ್ರೀಡಾಪಟುಗಳಿಗೆ ಸಹಾಯ ಮಾಡಲು ಗ್ವಾಲಿಯರ್ ನಲ್ಲಿ ಪ್ಯಾರಾ ಕ್ರೀಡೆಗಳ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ನಮ್ಮ ಪ್ಯಾರಾ-ಕ್ರೀಡಾಪಟುಗಳು TOPS ಮತ್ತು ಖೇಲೋ ಇಂಡಿಯಾ ಸೌಲಭ್ಯಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಈ ಗುಂಪಿನಲ್ಲಿ 50 ಕ್ರೀಡಾಪಟುಗಳು TOPS ಯೋಜನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು 16 ಕ್ರೀಡಾಪಟುಗಳು ಖೇಲೋ ಇಂಡಿಯಾದಿಂದ ಬಂದವರು ಎಂದು ನನಗೆ ಸಂತೋಷವಾಗಿದೆ. ನಿಮ್ಮ ವಿಶೇಷ ಅಗತ್ಯಗಳನ್ನು ಪರಿಗಣಿಸಿ, ವಿದೇಶಿ ತರಬೇತುದಾರರು, ತಜ್ಞರು ಮತ್ತು ಬೆಂಬಲ ಸಿಬ್ಬಂದಿಯನ್ನು ಸಹ ನೇಮಿಸಲಾಗಿದೆ. ಮತ್ತು ಈ ಬಾರಿ ನೀವು ಪ್ಯಾರಿಸ್ನಲ್ಲಿ ಇನ್ನೂ ಒಂದು ಅದ್ಭುತವಾದ ವಿಷಯವನ್ನು ನೋಡುತ್ತೀರಿ . ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್ ವಿಲೇಜ್ನಲ್ಲಿ ನಿಮಗಾಗಿ ವಿಶೇಷ ಚೇತರಿಕೆ ಕೇಂದ್ರವನ್ನು ಕೂಡ ಸ್ಥಾಪಿಸಲಾಗಿದೆ . ಈ ಚೇತರಿಕೆ ಕೇಂದ್ರವು ನಿಮಗೆ ತುಂಬಾ ಸಹಾಯಕವಾಗಿದೆ ಎಂದು ನಾನು ಭಾವಿಸುತ್ತೇನೆ .

ಸ್ನೇಹಿತರೇ, 

ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್ ದೇಶಕ್ಕೆ ಹಲವು ರೀತಿಗಳಲ್ಲಿ ವಿಶೇಷವಾಗಿದೆ. ಅನೇಕ ಆಟಗಳಲ್ಲಿ ನಮ್ಮ ಸ್ಲಾಟ್ಗಳು ಹೆಚ್ಚಿವೆ, ನಮ್ಮ ಭಾಗವಹಿಸುವಿಕೆ ಹೆಚ್ಚಾಗಿದೆ. ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟವು ಭಾರತದ ಸುವರ್ಣ ಪಯಣದಲ್ಲಿ ಒಂದು ದೊಡ್ಡ ಮೈಲಿಗಲ್ಲು ಎಂದು ಸಾಬೀತಾಗುತ್ತದೆ ಎಂದು ನಾನು ನಂಬುತ್ತೇನೆ. ನೀವು ಹೊಸ ದಾಖಲೆಗಳನ್ನು ಬರೆದು ದೇಶಕ್ಕೆ ಹಿಂತಿರುಗಿದಾಗ ನಾವು ನಿಮ್ಮನ್ನು ಮತ್ತೆ ಭೇಟಿ ಮಾಡುತ್ತೇವೆ. ಮತ್ತೊಮ್ಮೆ, ಸಂಪೂರ್ಣ ದೇಶದ ಪರವಾಗಿ ನಾನು ನಿಮಗೆಲ್ಲರಿಗೂ  ಶುಭಾಶಯಗಳನ್ನು ತಿಳಿಸುತ್ತೇನೆ. ಇಡೀ ದೇಶವು ನಿಮಗಾಗಿ ಒಂದು ಮಂತ್ರವನ್ನು ಪಠಿಸುತ್ತಿದೆ - ವಿಜಯಿ ಭವ.. ವಿಜಯಿ ಭವ.. ವಿಜಯಿ ಭವ. 

ಧನ್ಯವಾದಗಳು.

ಸೂಚಣೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು .

 

*****



(Release ID: 2048562) Visitor Counter : 4