ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2024, ಜುಲೈ 18 ಗುರುವಾರದಂದು ನವದೆಹಲಿಯಲ್ಲಿ ನಡೆಯಲಿರುವ ʻಎನ್‌ಸಿಒಆರ್‌ಡಿʼ 7ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ


ಗೃಹ ಸಚಿವರು ರಾಷ್ಟ್ರೀಯ ಮಾದಕವಸ್ತು ಸಹಾಯವಾಣಿ 'ಮಾನಸ್'ಗೆ ಚಾಲನೆ ನೀಡಲಿದ್ದಾರೆ ಮತ್ತು ಶ್ರೀನಗರದಲ್ಲಿ ʻಎನ್‌ಸಿಬಿʼ ವಲಯ ಕಚೇರಿಯನ್ನು ಉದ್ಘಾಟಿಸಲಿದ್ದಾರೆ

ಶ್ರೀ ಅಮಿತ್ ಶಾ ಅವರು ಎನ್‌ಸಿಬಿ 'ವಾರ್ಷಿಕ ವರದಿ-2023' ಮತ್ತು 'ನಶಾ ಮುಕ್ತ ಭಾರತ್' ಸಂಗ್ರಹವನ್ನು ಬಿಡುಗಡೆ ಮಾಡಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತ ಸರ್ಕಾರವು ಮಾದಕವಸ್ತುಗಳ ಪಿಡುಗನ್ನು ನಿಗ್ರಹಿಸಲು ಮಾದಕವಸ್ತು ಕಳ್ಳಸಾಗಣೆ ವಿರುದ್ಧ 'ಶೂನ್ಯ ಸಹಿಷ್ಣುತೆ ನೀತಿ'ಯನ್ನು ಅಳವಡಿಸಿಕೊಂಡಿದೆ

ಸಾಂಸ್ಥಿಕ ರಚನೆಯನ್ನು ಬಲಪಡಿಸುವುದು, ಎಲ್ಲಾ ಮಾದಕವಸ್ತು ಏಜೆನ್ಸಿಗಳ ನಡುವೆ ಸಮನ್ವಯ ಮತ್ತು ವ್ಯಾಪಕವಾದ ಸಾರ್ವಜನಿಕ ಜಾಗೃತಿ ಅಭಿಯಾನ ಎಂಬ 3 ಅಂಶಗಳ ಕಾರ್ಯತಂತ್ರದ ಮೂಲಕ 2047ರ ವೇಳೆಗೆ ಮಾದಕವಸ್ತು ಮುಕ್ತ ಭಾರತ ನಿರ್ಮಿಸುವ ಪ್ರಧಾನಿ ಮೋದಿಯವರ ಗುರಿಯನ್ನು ಗೃಹ ಸಚಿವಾಲಯವು ಸಾಧಿಸಲಿದೆ



Posted On: 15 JUL 2024 6:01PM by PIB Bengaluru

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2024ರ ಜುಲೈ 18ರ ಗುರುವಾರ ನವದೆಹಲಿಯಲ್ಲಿ ʻನಾರ್ಕೋ-ಸಹಕಾರ ಕೇಂದ್ರʼದ(ನಾರ್ಕೊ ಕೋಆರ್ಡಿನೇಷನ್‌ ಸೆಂಟರ್‌-ಎನ್‌ಸಿಒಆರ್‌ಡಿ) 7ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹ ಸಚಿವರು ರಾಷ್ಟ್ರೀಯ ಮಾದಕವಸ್ತು ಸಹಾಯವಾಣಿ 'ಮಾನಸ್'ಗೆ (ಮಾದಕ ಪದಾರ್ಥ ನಿಷೇಧ ಗುಪ್ತಚರ ಕೇಂದ್ರ) ಚಾಲನೆ ನೀಡಲಿದ್ದಾರೆ ಮತ್ತು ಶ್ರೀನಗರದಲ್ಲಿ ಮಾದಕವಸ್ತು ನಿಯಂತ್ರಣ ಬ್ಯೂರೋ(ಎನ್‌ಸಿಬಿ) ವಲಯ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಶ್ರೀ ಅಮಿತ್ ಶಾ ಅವರು ʻಎನ್‌ಸಿಬಿ ವಾರ್ಷಿಕ ವರದಿ 2023' ಮತ್ತು 'ನಶಾ ಮುಕ್ತ ಭಾರತ್' ಸಂಗ್ರಹವನ್ನು ಬಿಡುಗಡೆ ಮಾಡಲಿದ್ದಾರೆ. ಭಾರತದಲ್ಲಿ ಮಾದಕವಸ್ತು ಕಳ್ಳಸಾಗಣೆ ಮತ್ತು ದುರುಪಯೋಗವನ್ನು ಎದುರಿಸುವಲ್ಲಿ ತೊಡಗಿರುವ ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳ ಪ್ರಯತ್ನಗಳನ್ನು ಸಮನ್ವಯಗೊಳಿಸುವ ಮತ್ತು ಸಂಯೋಜಿಸುವ ಗುರಿಯನ್ನು ಈ ಸಭೆಯು ಹೊಂದಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತ ಸರ್ಕಾರವು ಮಾದಕವಸ್ತುಗಳ ಪಿಡುಗನ್ನು ನಿಗ್ರಹಿಸಲು ಮಾದಕವಸ್ತು ಕಳ್ಳಸಾಗಣೆ ವಿರುದ್ಧ 'ಶೂನ್ಯ ಸಹಿಷ್ಣುತೆ ನೀತಿ'ಯನ್ನು ಅಳವಡಿಸಿಕೊಂಡಿದೆ. ಸಾಂಸ್ಥಿಕ ರಚನೆಯನ್ನು ಬಲಪಡಿಸುವುದು, ಎಲ್ಲಾ ಮಾದಕವಸ್ತು ಏಜೆನ್ಸಿಗಳ ನಡುವೆ ಸಮನ್ವಯ ಮತ್ತು ವ್ಯಾಪಕವಾದ ಸಾರ್ವಜನಿಕ ಜಾಗೃತಿ ಅಭಿಯಾನ ಎಂಬ 3 ಅಂಶಗಳ ಕಾರ್ಯತಂತ್ರದ ಮೂಲಕ 2047ರ ವೇಳೆಗೆ ಮಾದಕವಸ್ತು ಮುಕ್ತ ಭಾರತ ನಿರ್ಮಿಸುವ ಪ್ರಧಾನಿ ಮೋದಿಯವರ ಗುರಿಯನ್ನು ಗೃಹ ಸಚಿವಾಲಯ ಸಾಧಿಸಲಿದೆ.

ಈ ಕಾರ್ಯತಂತ್ರದ ಭಾಗವಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ, ಅವುಗಳೆಂದರೆ:

  • ʻಎನ್‌ಸಿಒಆರ್‌ಡಿʼನ ಎಲ್ಲಾ ನಾಲ್ಕು ಹಂತಗಳಲ್ಲಿ, ಎಲ್ಲಾ ಪಾಲುದಾರರನ್ನು ಒಳಗೊಂಡ ಸಭೆಗಳನ್ನು ನಿಯಮಿತವಾಗಿ ಆಯೋಜಿಸುವುದು.
  • ಚಟುವಟಿಕೆಗಳು ಮತ್ತು ಉತ್ತಮ ಕಾರ್ಯವಿಧಾನಗಳ ಬಗ್ಗೆ ಪರಸ್ಪರ ಮಾಹಿತಿ ವಿನಿಮಯಕ್ಕಾಗಿ ವಿಶೇಷ ಕೇಂದ್ರೀಕೃತ ʻಎನ್‌ಸಿಒಆರ್‌ಡಿʼ ಪೋರ್ಟಲ್ ಅನ್ನು ಪ್ರಾರಂಭಿಸುವುದು.
  • ಇತರ ಅಪರಾಧಗಳೊಂದಿಗೆ ನಂಟು ಹೊಂದಿರುವ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಗಳನ್ನು ಹೊಂದಿರುವ ನಿರ್ದಿಷ್ಟವಾದ ದೊಡ್ಡ ಪ್ರಕರಣಗಳ ಕಾರ್ಯಾಚರಣೆಯಲ್ಲಿ ಸಮನ್ವಯಕ್ಕಾಗಿ ʻಜಂಟಿ ಸಮನ್ವಯ ಸಮಿತಿʼಯನ್ನು ರಚಿಸುವುದು.
  • ಪ್ರತಿ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಮಾದಕವಸ್ತು ವಿರೋಧಿ ಕಾರ್ಯಪಡೆ (ಎಎನ್‌ಟಿಎಫ್) ಸ್ಥಾಪನೆ.
  • ಮಾದಕ ವಸ್ತು ವಿಲೇವಾರಿ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ.
  • ಮಂಪರು ಅಪರಾಧಿಗಳಿಗಾಗಿ ʻನಿದಾನ್ʼ ಪೋರ್ಟಲ್ ಆರಂಭ.
  • ಮಾದಕ ದ್ರವ್ಯ ಪತ್ತೆಗಾಗಿ ಶ್ವಾನ ದಳಗಳ ರಚನೆ.
  • ವಿಧಿವಿಜ್ಞಾನ ಸಾಮರ್ಥ್ಯಗಳನ್ನು ಬಲಪಡಿಸುವುದು.
  • ವಿಶೇಷ ʻಎನ್‌ಡಿಪಿಎಸ್ʼ ನ್ಯಾಯಾಲಯಗಳು ಮತ್ತು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ.
  • ಮಾದಕ ದ್ರವ್ಯ ಸೇವನೆಯ ವಿರುದ್ಧ ಜಾಗೃತಿ ಮೂಡಿಸಲು ʻನಶಾ ಮುಕ್ತ ಭಾರತʼ ಅಭಿಯಾನ (ಎನ್ಎಂಬಿಎ).

 

ರಾಜ್ಯಗಳು ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ನಡುವೆ ಉತ್ತಮ ಸಮನ್ವಯಕ್ಕಾಗಿ 2016ರಲ್ಲಿ ʻಎನ್‌ಸಿಒಆರ್‌ಡಿʼ ವ್ಯವಸ್ಥೆಯನ್ನು ರಚಿಸಲಾಯಿತು. 2019ರಲ್ಲಿ ನಾಲ್ಕು ಹಂತದ ವ್ಯವಸ್ಥೆಯ ಮೂಲಕ ಇದನ್ನು ಮತ್ತಷ್ಟು ಬಲಪಡಿಸಲಾಗಿದೆ. ಇದು ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ʻಎನ್‌ಸಿಒಆರ್‌ಡಿ ಸಮಿತಿʼ, ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ನೇತೃತ್ವದ ಕಾರ್ಯಕಾರಿ ಮಟ್ಟದ ʻಎನ್‌ಸಿಒಆರ್‌ಡಿ ಸಮಿತಿʼ, ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ರಾಜ್ಯ ಮಟ್ಟದ ʻಎನ್‌ಸಿಒಆರ್‌ಡಿ ಸಮಿತಿʼಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳ ನೇತೃತ್ವದ ಜಿಲ್ಲಾ ಮಟ್ಟದ ʻಎನ್‌ಸಿಒಆರ್‌ಡಿ ಸಮಿತಿʼಗಳನ್ನು ಹೊಂದಿದೆ.

 

*****



(Release ID: 2033561) Visitor Counter : 6