ಪ್ರಧಾನ ಮಂತ್ರಿಯವರ ಕಛೇರಿ

ಜಮ್ಮು ಮತ್ತು ಕಾಶ್ಮೀರದಲ್ಲಿ 32,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿಯವರು ಉದ್ಘಾಟನೆ, ರಾಷ್ಟ್ರ ಸಮರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದರು


ಐಐಟಿ ಭಿಲಾಯ್, ಐಐಟಿ ತಿರುಪತಿ, ಐಐಐಟಿಡಿಎಂ ಕರ್ನೂಲ್, ಐಐಎಂ ಬೋಧಗಯಾ, ಐಐಎಂ ಜಮ್ಮು, ಐಐಎಂ ವಿಶಾಖಪಟ್ಟಣ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಕಾನ್ಪುರದಂತಹ ಹಲವಾರು ಪ್ರಮುಖ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ ಗಳನ್ನು ದೇಶಕ್ಕೆ ಸಮರ್ಪಿಸಿದರು

ದೇಶದಾದ್ಯಂತ ಹಲವಾರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಅನೇಕ ಯೋಜನೆಗಳ ಉದ್ಘಾಟನೆ, ಸಮರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದರು

ಏಮ್ಸ್ ಜಮ್ಮು‌ ಉದ್ಘಾಟನೆ

ಜಮ್ಮು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಮತ್ತು ಜಮ್ಮುವಿನಲ್ಲಿ ಸಾಮಾನ್ಯ ಬಳಕೆದಾರ ಸೌಲಭ್ಯ ಪೆಟ್ರೋಲಿಯಂ ಡಿಪೋಗೆ ಶಂಕುಸ್ಥಾಪನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಮಹತ್ವದ ರಸ್ತೆ ಮತ್ತು ರೈಲು ಸಂಪರ್ಕ ಯೋಜನೆಗಳ ರಾಷ್ಟ್ರ ಸಮರ್ಪಣೆ ಮತ್ತು ಶಿಲಾನ್ಯಾಸ

ಜಮ್ಮು ಮತ್ತು ಕಾಶ್ಮೀರದಾದ್ಯಂತ ನಾಗರಿಕ ಮತ್ತು ನಗರ ಮೂಲಸೌಕರ್ಯಗಳನ್ನು ಬಲಪಡಿಸುವ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ

"ಇಂದಿನ ಉಪಕ್ರಮಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುತ್ತವೆ"

"ನಾವು ವಿಕಸಿತ ಜಮ್ಮು ಕಾಶ್ಮೀರವನ್ನು ಖಚಿತಪಡಿಸುತ್ತೇವೆ"

"ವಿಕಸಿತ ಜಮ್ಮು ಮತ್ತು ಕಾಶ್ಮೀರವನ್ನು ನಿರ್ಮಿಸಲು, ಸರ್ಕಾರವು ಬಡವರು, ರೈತರು, ಯುವಜನರು ಮತ್ತು ನಾರಿ ಶಕ್ತಿಯ ಮೇಲೆ ಗಮನ ಕೇಂದ್ರೀಕರಿಸಿದೆ"

"ನವ ಭಾರತವು ತನ್ನ ಇಂದಿನ ಪೀಳಿಗೆಗೆ ಆಧುನಿಕ ಶಿಕ್ಷಣವನ್ನು ಒದಗಿಸಲು ಹೆಚ್ಚು ಹೆಚ್ಚು ಖರ್ಚು ಮಾಡುತ್ತಿದೆ"

"ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಮಂತ್ರವು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯ ಅಡಿಪಾಯವಾಗಿದೆ"

"ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ಜನರು ಭಾರತದ ಸಂವಿಧಾನದಲ್ಲಿ ನೀಡಲಾದ ಸಾಮಾಜಿಕ ನ್ಯಾಯದ ಭರವಸೆಯನ್ನು ಪಡೆಯುತ್ತಿದ್ದಾರೆ"

"ಹೊಸ ಜಮ್ಮು ಕಾಶ್ಮೀರವು ಅಸ್ತಿತ್ವಕ್ಕೆ ಬರುತ್ತಿದೆ, ಏಕೆಂದರೆ 370 ನೇ ವಿಧಿಯ ರದ್ದತಿಯೊಂದಿಗೆ ಅದರ ಅಭಿವೃದ್ಧಿಗೆ ಇದ್ದ ದೊಡ್ಡ ಅಡಚಣೆಯನ್ನು ತೆಗೆದುಹಾಕಲಾಗಿದೆ"

“ವಿಕಸಿತ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಜಗತ್ತು ಉತ್ಸುಕವಾಗಿದೆ”

Posted On: 20 FEB 2024 2:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮುವಿನಲ್ಲಿ 32,000 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಯೋಜನೆಗಳು ಆರೋಗ್ಯ, ಶಿಕ್ಷಣ, ರೈಲು, ರಸ್ತೆ, ವಾಯುಯಾನ, ಪೆಟ್ರೋಲಿಯಂ ಮತ್ತು ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿವೆ. ಜಮ್ಮು ಮತ್ತು ಕಾಶ್ಮೀರದ ಸುಮಾರು 1500 ಹೊಸ ಸರ್ಕಾರಿ ಉದ್ಯೋಗಗಳಿಗೆ ಪ್ರಧಾನಿ ನೇಮಕಾತಿ ಆದೇಶಗಳನ್ನು ವಿತರಿಸಿದರು. ‘ವಿಕಸಿತ ಭಾರತ ವಿಕಸಿತ ಜಮ್ಮು’ಕಾರ್ಯಕ್ರಮದ ಅಂಗವಾಗಿ ಅವರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಕಿಶ್ತವಾರ್‌ ಜಿಲ್ಲೆಯ ವೀಣಾ ದೇವಿ ಅವರು, ತಾವು ಉಜ್ವಲಾ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಂಡಿರುವುದಾಗಿ ಮತ್ತು ಇದು ತಮ್ಮ ಜೀವನವನ್ನು ಉತ್ತಮಗೊಳಿಸಿದೆ ಮತ್ತು ತನಗೆ ಮತ್ತು ತನ್ನ ಕುಟುಂಬಕ್ಕಾಗಿ ಸಮಯವನ್ನು ನೀಡಲು ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಧಾನಿಯವರಿಗೆ ತಿಳಿಸಿದರು. ಮೊದಲು ಅಡುಗೆಗೆ ಕಟ್ಟಿಗೆಯನ್ನು ಕಾಡಿನಿಂದ ತರುತ್ತಿದ್ದೆನು, ತಮ್ಮ ಕುಟುಂಬವು ಆಯುಷ್ಮಾನ್ ಕಾರ್ಡ್‌ಗಳನ್ನು ಸಹ ಹೊಂದಿದೆ ಎಂದು ಅವರು ಪ್ರಧಾನಿಗೆ ತಿಳಿಸಿದರು ಮತ್ತು ಅದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿಯವರು ಆಕೆ ಮತ್ತು ಆಕೆಯ ಕುಟುಂಬಕ್ಕೆ ಉತ್ತಮ ಆರೋಗ್ಯವನ್ನು ಹಾರೈಸಿದರು.

ರಾಷ್ಟ್ರೀಯ ಅಜೀವಿಕಾ ಅಭಿಯಾನದ ಫಲಾನುಭವಿ ಕಥುವಾದ ಕೀರ್ತಿ ಶರ್ಮಾ ಅವರು ಸ್ವಸಹಾಯ ಸಂಘಕ್ಕೆ ಸೇರುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಪ್ರಧಾನ ಮಂತ್ರಿಯವರಿಗೆ ತಿಳಿಸಿದರು. 30,000 ರೂ. ಸಾಲದೊಂದಿಗೆ ಉದ್ಯಮವನ್ನು ಪ್ರಾರಂಭಿಸಿದೆ ಮತ್ತು ನಂತರ 1 ಲಕ್ಷ ರೂಪಾಯಿಗಳ ಎರಡನೇ ಸಾಲದೊಂದಿಗೆ ಮೂರು ಹಸುಗಳನ್ನು ಖರೀದಿಸಿದೆನು ಎಂದು ಅವರು ಹೇಳಿದರು. ಇದು ತಮ್ಮ ಗುಂಪಿಗೆ ಮಾತ್ರವಲ್ಲದೆ ಇಡೀ ಜಿಲ್ಲೆಯ ಮಹಿಳೆಯರಿಗೆ ಸ್ವಾವಲಂಬನೆಯ ಭರವಸೆಯಾಗಿದೆ ಎಂದು ಅವರು ಹೇಳಿದರು. ಆಕೆಯ ಸ್ವಸಹಾಯ ಗುಂಪು ಬ್ಯಾಂಕ್ ಸಾಲವನ್ನು ಮರುಪಾವತಿಸಿದೆ ಮತ್ತು ಈಗ ಅವರ ಬಳಿ 10 ಹಸುಗಳಿವೆ. ಅವರು ಮತ್ತು ಅವರ ಸ್ವಸಹಾಯ ಗುಂಪಿನ ಸದಸ್ಯರು ಅನೇಕ ಇತರ ಸರ್ಕಾರಿ ಯೋಜನೆಗಳಿಂದ ಪ್ರಯೋಜನ ಪಡೆದಿದ್ದಾರೆ. 3 ಕೋಟಿ ಲಕ್ಷಾಧಿಪತಿ ದೀದಿಗಳನ್ನು ರಚಿಸುವ ಯೋಜನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಪ್ರಧಾನಿಯವರಿಗೆ ಭರವಸೆ ನೀಡಿದರು.

ಪೂಂಚ್‌ ನ ರೈತ ಶ್ರೀ ಲಾಲ್ ಮೊಹಮ್ಮದ್ ಅವರು ತಾವು ಗಡಿ ಪ್ರದೇಶದಿಂದ ಬಂದವರು ಎಂದು ಪ್ರಧಾನಿಯವರಿಗೆ ತಿಳಿಸಿದರು, ಅಲ್ಲಿ ಅವರ ಮಣ್ಣಿನ ಮನೆಯು ಗಡಿಯ ಇನ್ನೊಂದು ಭಾಗದಿಂದ ಶೆಲ್ ದಾಳಿಗೆ ಒಳಗಾಯಿತು. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 1,30,000 ರೂ. ಸ್ವೀಕರಿಸಿದ ಅವರು ಈಗ ವಾಸಿಸಲು ಪಕ್ಕಾ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ, ಅದಕ್ಕಾಗಿ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಸರ್ಕಾರದ ಯೋಜನೆಗಳು ದೇಶದ ದೂರದ ಪ್ರದೇಶಗಳಿಗೆ ತಲುಪುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿಯವರು, ಮೊಹಮ್ಮದ್ ಅವರ ಪಕ್ಕಾ ಮನೆಗಾಗಿ ಅಭಿನಂದನೆ ತಿಳಿಸಿದರು. ಶ್ರೀ ಲಾಲ್ ಮೊಹಮ್ಮದ್ ಅವರು ಪ್ರಧಾನ ಮಂತ್ರಿಯವರನ್ನು ಶ್ಲಾಘಿಸಲು 'ವಿಕಸಿತ ಭಾರತ' ವಿಷಯದ ಮೇಲೆ ಒಂದು ಪದ್ಯವನ್ನೂ ಓದಿದರು.

ಬಂಡಿಪೋರಾದ ಶ್ರೀಮತಿ ಶಹೀನಾ ಬೇಗಂ ಅವರು, ತಾವು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ನಿರುದ್ಯೋಗದ ಕಾರಣದಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಪ್ರಧಾನ ಮಂತ್ರಿಯವರಿಗೆ ಮಾಹಿತಿ ನೀಡಿದರು. 2018 ರಲ್ಲಿ, ಅವರು ಸ್ವ-ಸಹಾಯ ಗುಂಪಿನ ಭಾಗವಾದರು ಮತ್ತು ಜೇನು ಕೃಷಿ ವ್ಯವಹಾರವನ್ನು ಪ್ರಾರಂಭಿಸಲು ಸಾಲವನ್ನು ಪಡೆದರು ಮತ್ತು ನಂತರ ಅದನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ನೆರವಿನಿಂದ ವಿಸ್ತರಿಸಿದರು, ಆ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಂಡರು ಮತ್ತು ಲಕ್ಷಾಧಿಪತಿ ದೀದಿಯಾದರು. ಪ್ರಧಾನಿಯವರು ಆಕೆಯನ್ನು ಅಭಿನಂದಿಸಿದರು. ದೂರದ ಹಳ್ಳಿಗಳಲ್ಲಿ ಮಹಿಳೆಯರು ಲಕ್ಷಾಧಿಪತಿ ದೀದಿಗಳಾಗಲು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಆಕೆ ಸ್ಫೂರ್ತಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ತಮ್ಮ ಕೋಳಿ ವ್ಯಾಪಾರಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್‌ ನ ಪ್ರಯೋಜನಗಳನ್ನು ಪಡೆದಿರುವ ಬಗ್ಗೆಯೂ ಶ್ರೀಮತಿ ಶಹೀನಾ ಅವರು ಪ್ರಸ್ತಾಪಿಸಿದರು. ಪ್ರಧಾನಮಂತ್ರಿಯವರು ಆಕೆಗೆ ಸ್ನಾತಕೋತ್ತರ ಹಂತದ ಶಿಕ್ಷಣವನ್ನು ನೀಡಿರುವುದಕ್ಕೆ ಆಕೆಯ ಪೋಷಕರನ್ನು ಶ್ಲಾಘಿಸಿದರು ಮತ್ತು ಕೆಲಸದಲ್ಲಿ ಆಕೆಯ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದರು. ತಮ್ಮ ಕನಸುಗಳನ್ನು ನನಸಾಗಿಸಲು ಮಹಿಳೆಯರ ಅಭಿವೃದ್ಧಿ ಮತ್ತು ಸಬಲೀಕರಣದ ಕುರಿತು ಮಾತನಾಡಿದ ಪ್ರಧಾನಿ, "ಮೋದಿಯವರ ಆಡಳಿತದಲ್ಲಿ ಎಲ್ಲವೂ ಸಾಧ್ಯ" ಎಂದು ಹೇಳಿದರು.

ಪುಲ್ವಾಮಾದ ರಿಯಾಜ್ ಅಹ್ಮದ್ ಕೋಲಿ ಜಲ ಜೀವನ್ ಮಿಷನ್‌ ನ ಫಲಾನುಭವಿ. ಅವರ ಹಳ್ಳಿಯ ಪ್ರತಿ ಮನೆಗೆ ಕೊಳವೆ ಮೂಲಕ ನೀರು ಬರುತ್ತಿದೆ. ಇದು ತಮ್ಮ ಕುಟುಂಬದ ಜೀವನದಲ್ಲಿ ದೊಡ್ಡ ಪರಿವರ್ತನೆಗೆ ಕಾರಣವಾಗಿದೆ ಎಂದು ಪ್ರಧಾನಿಯವರಿಗೆ ತಿಳಿಸಿದರು. ಗ್ರಾಮಗಳ ಮಹಿಳೆಯರ ಆಶೀರ್ವಾದವನ್ನೂ ಅವರು ಪ್ರಧಾನಿಯವರಿಗೆ ತಿಳಿಸಿದರು. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಅವರು ತಮ್ಮ ಭೂಮಿಯ ಆಸ್ತಿ ಹಕ್ಕುಗಳನ್ನು ಪಡೆದಿದ್ದಾರೆ. ಅವರು ಮತ್ತು ಬುಡಕಟ್ಟು ಸಮುದಾಯದ ಇತರ ಸದಸ್ಯರು ಅದರಿಂದ ಹೆಚ್ಚು ಪ್ರಯೋಜನ ಪಡೆದಿದ್ದಾರೆ. ರಾಜಕೀಯ ಕಾರ್ಯಕರ್ತನಾಗಿದ್ದ ತಮ್ಮ ದಿನಗಳನ್ನು ಸ್ಮರಿಸಿದ ಪ್ರಧಾನಿಯವರು ಗುಜ್ಜರ್ ಸಮುದಾಯದ ಆತಿಥ್ಯವನ್ನು ಶ್ಲಾಘಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ತಮ್ಮ ಹಿಂದಿನ ಜಮ್ಮು ಭೇಟಿಗಳನ್ನು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಇಂದಿನ ಭವ್ಯವಾದ ಸಭೆಗೆ  ಹೋಲಿಸಿದರು. ಜಮ್ಮುವಿನ ನಾಗರಿಕರು ದೊಡ್ಡ ಪರದೆಯ ಮೇಲೆ ಕಾರ್ಯಕ್ರಮವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿರುವ 3 ವಿವಿಧ ಸ್ಥಳಗಳ ಬಗ್ಗೆ ಅವರು ಮಾಹಿತಿ ನೀಡಿದರು. ಶ್ರೀ ಮೋದಿಯವರು ಜಮ್ಮು ಮತ್ತು ಕಾಶ್ಮೀರದ ಜನರ ಉತ್ಸಾಹವನ್ನು ಶ್ಲಾಘಿಸಿದರು ಮತ್ತು ಇಂದಿನ ಕಾರ್ಯಕ್ರಮವು ಆಶೀರ್ವಾದವಾಗಿದೆ ಎಂದು ಹೇಳಿದರು. ಇಂದಿನ ಸಂದರ್ಭವು ಕೇವಲ ವಿಕಸಿತ ಭಾರತಕ್ಕೆ ಸೀಮಿತವಾಗಿಲ್ಲ, ದೇಶಾದ್ಯಂತದ ಶಿಕ್ಷಣ ಸಂಸ್ಥೆಗಳ ಲಕ್ಷಾಂತರ ಜನರನ್ನು ಒಳಗೊಂಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದ 285 ಬ್ಲಾಕ್‌ ಗಳಲ್ಲಿ ನಾಗರಿಕರು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು ಮತ್ತು ಕೇಂದ್ರಾಡಳಿತ ಪ್ರದೇಶದ ಜನರ ಉತ್ಸಾಹವನ್ನು ಪ್ರಶಂಸಿಸಿದರು.

ತಮ್ಮೊಂದಿಗೆ ಸಂವಾದ ನಡೆಸಿದ ಫಲಾನುಭವಿಗಳು ಸರ್ಕಾರದ ಯೋಜನೆಗಳ ಪ್ರಯೋಜನಗಳ ಬಗ್ಗೆ ಸ್ಪಷ್ಟವಾದ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಪ್ರಶಂಸಿಸಿದರು. ವಿಕಸಿತ ಭಾರತ, ವಿಕಸಿತ ಜಮ್ಮು ಮತ್ತು ಕಾಶ್ಮೀರ ಮತ್ತು ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಜಮ್ಮು ಮತ್ತು ಕಾಶ್ಮೀರದ ಜನರು ತೋರಿದ ಉತ್ಸಾಹವನ್ನು ಪ್ರಧಾನಿ ಶ್ಲಾಘಿಸಿದರು. ಪ್ರತಿಯೊಬ್ಬ ಫಲಾನುಭವಿಯ ಮನೆ ಬಾಗಿಲಿಗೆ ತಲುಪುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು ಯಾವುದೇ ಅರ್ಹ ಫಲಾನುಭವಿಗಳನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದರು. “ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ. ನಾವು ಖಂಡಿತವಾಗಿ ವಿಕಸಿತ ಜಮ್ಮು ಕಾಶ್ಮೀರವನ್ನು ನಿರ್ಮಿಸುತ್ತೇವೆ. 70 ವರ್ಷಗಳಿಂದ ನನಸಾಗದೆ ಉಳಿದಿದ್ದ ಕನಸುಗಳನ್ನು ಮೋದಿಯವರು ಶೀಘ್ರದಲ್ಲೇ ನನಸಾಗಿಸುತ್ತಾರೆ”ಎಂದು ಪ್ರಧಾನಿ ಹೇಳಿದರು.

ಹತಾಶೆ ಮತ್ತು ಪ್ರತ್ಯೇಕತಾವಾದದ ದಿನಗಳನ್ನು ಬಿಟ್ಟು ಜಮ್ಮು ಕಾಶ್ಮೀರ ವಿಕಸಿತವಾಗುವ ಪ್ರತಿಜ್ಞೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. 32,000 ಕೋಟಿ ರೂ.ಮೌಲ್ಯದ ಇಂದಿನ ಯೋಜನೆಗಳು ಶಿಕ್ಷಣ, ಕೌಶಲ್ಯ, ಉದ್ಯೋಗಗಳು, ಆರೋಗ್ಯ, ಕೈಗಾರಿಕೆ ಮತ್ತು ಸಂಪರ್ಕಕ್ಕೆ ಉತ್ತೇಜನ ನೀಡುತ್ತವೆ ಎಂದು ಅವರು ಹೇಳಿದರು. ಐಐಎಂ, ಐಐಟಿ ಮತ್ತು ನೇಮಕಾತಿ ಪತ್ರಗಳಿಗಾಗಿ ರಾಷ್ಟ್ರದ ಯುವಜನರನ್ನು ಪ್ರಧಾನಿ ಅಭಿನಂದಿಸಿದರು.

ಜಮ್ಮು ಮತ್ತು ಕಾಶ್ಮೀರವು ಅನೇಕ ತಲೆಮಾರುಗಳಿಂದ ವಂಶಪಾರಂಪರ್ಯ ರಾಜಕೀಯಕ್ಕೆ ಬಲಿಯಾಗಿದೆ, ಇಲ್ಲಿನ ಜನರ ಕಲ್ಯಾಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು ಮತ್ತು ಯುವಕರು ಭಾರಿ ನಷ್ಟವನ್ನು ಅನುಭವಿಸಿದರು ಎಂದು ಹೇಳಿದ ಪ್ರಧಾನಿ, ಅಂತಹ ಸರ್ಕಾರಗಳು ಯುವಜನರಿಗಾಗಿ ನೀತಿಗಳನ್ನು ರೂಪಿಸಲು ಆದ್ಯತೆಯನ್ನೇ ನೀಡಲಿಲ್ಲ ಎಂದು ಒತ್ತಿ ಹೇಳಿದರು. "ತಮ್ಮ ಕುಟುಂಬದ ಕಲ್ಯಾಣದ ಬಗ್ಗೆ ಯೋಚಿಸುವವರು ಸಾಮಾನ್ಯ ನಾಗರಿಕರ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು. ಇದೀಗ ಕೇಂದ್ರಾಡಳಿತ ಪ್ರದೇಶದಲ್ಲಿ ವಂಶಾಡಳಿತಕ್ಕೆ ತೆರೆ ಬೀಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಕಸಿತ ಜಮ್ಮು ಮತ್ತು ಕಾಶ್ಮೀರವನ್ನು ರಚಿಸಲು ಸರ್ಕಾರವು ಬಡವರು, ರೈತರು, ಯುವಜನರು ಮತ್ತು ನಾರಿ ಶಕ್ತಿಯ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಪ್ರಧಾನಿ ಹೇಳಿದರು. ಜಮ್ಮು ಮತ್ತು ಕಾಶ್ಮೀರವು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಐಐಟಿ ಮತ್ತು ಐಐಎಂ ಸ್ಥಾಪಿಸುವ ಬಗ್ಗೆ ಇದೇ ಸ್ಥಳದಲ್ಲಿ 2013ರಲ್ಲಿ ಭರವಸೆ ನೀಡಿದ್ದನ್ನು ಪ್ರಧಾನಿ ನೆನಪಿಸಿಕೊಂಡರು. ಆ ಭರವಸೆ ಇಂದು ಈಡೇರುತ್ತಿದೆ ಎಂದರು. ಅದಕ್ಕಾಗಿಯೇ ಜನರು "ಮೋದಿಯವರ ಗ್ಯಾರಂಟಿ ಎಂದರೆ ಗ್ಯಾರಂಟಿಯಾಗಿ ಈಡೇರುವ ಗ್ಯಾರಂಟಿ" ಎಂದು ಹೇಳುತ್ತಾರೆ ಎಂದು ಪ್ರಧಾನಿ ತಿಳಿಸಿದರು.

ಇಂದಿನ ಕಾರ್ಯಕ್ರಮದ ಶೈಕ್ಷಣಿಕ ಮೂಲಸೌಕರ್ಯ ಯೋಜನೆಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳ ಪ್ರಗತಿ ಹತ್ತು ವರ್ಷಗಳ ಹಿಂದೆ ದೂರದ ಮಾತಾಗಿತ್ತು ಎಂದು ಒತ್ತಿ ಹೇಳಿದರು. "ಆದರೆ, ಇದು ನವ ಭಾರತ", ಇಂದಿನ ಸರ್ಕಾರವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಆಧುನಿಕ ಶಿಕ್ಷಣಕ್ಕಾಗಿ ಗರಿಷ್ಠ ವೆಚ್ಚವನ್ನು ಮಾಡುತ್ತಿದೆ ಎಂದು ಒತ್ತಿ ಹೇಳಿದರು. ಕಳೆದ 10 ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ 50 ಹೊಸ ಪದವಿ ಕಾಲೇಜುಗಳು ಒಳಗೊಂಡಂತೆ ದೇಶವು ದಾಖಲೆ ಸಂಖ್ಯೆಯ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸಾಕ್ಷಿಯಾಗಿದೆ ಎಂದು ಶ್ರೀ ಮೋದಿ ಅವರು ಮಾಹಿತಿ ನೀಡಿದರು. ಶಾಲೆಗಳಿಂದ ಹೊರಗುಳಿದಿದ್ದ 45,000 ಹೊಸ ಮಕ್ಕಳು ಈಗ ಪ್ರವೇಶ ಪಡೆದಿದ್ದಾರೆ ಎಂದು ಅವರು ಹೇಳಿದರು ಮತ್ತು ವಿದ್ಯಾರ್ಥಿನಿಯರು ಶಿಕ್ಷಣಕ್ಕಾಗಿ ದೂರದವರೆಗೆ ಪ್ರಯಾಣಿಸಬೇಕಾಗಿಲ್ಲ ಎಂದು ಅವರು ಸಂತಸ ವ್ಯಕ್ತಪಡಿಸಿದರು. "ಒಂದು ಕಾಲದಲ್ಲಿ ಶಾಲೆಗಳು ನಡೆಯುತ್ತಿದ್ದವು, ಆದರೆ ಇಂದು ಶಾಲೆಗಳನ್ನು ಹೆಚ್ಚಿಸಲಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಆರೋಗ್ಯ ಸೌಲಭ್ಯಗಳ ಸುಧಾರಣೆಯ ಬಗ್ಗೆ ಮಾತನಾಡಿದ ಪ್ರಧಾನಿ, ಜಮ್ಮು ಮತ್ತು ಕಾಶ್ಮೀರದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 2014 ರಲ್ಲಿದ್ದ 4 ರಿಂದ 12 ಕ್ಕೆ ಏರಿಕೆಯಾಗಿದೆ, ಎಂಬಿಬಿಎಸ್‌ ಸೀಟುಗಳು 2014 ರಲ್ಲಿದ್ದ 500 ಕ್ಕೆ ಹೋಲಿಸಿದರೆ 1300 ಮತ್ತು ಪಿಜಿ ಮೆಡಿಕಲ್ ಸೀಟುಗಳು . 2014ರಲ್ಲಿದ್ದ ಶೂನ್ಯದಿಂದ 650 ಕ್ಕೆ ಹೆಚ್ಚಳವಾಗಿವೆ. ಕಳೆದ 4 ವರ್ಷಗಳಲ್ಲಿ 45 ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿರುವ ಬಗ್ಗೆಯೂ ಅವರು ಮಾಹಿತಿ ನೀಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಏಮ್ಸ್‌ ಗಳು ಬರಲಿವೆ. ಅದರಲ್ಲಿ ಜಮ್ಮು ಏಮ್ಸ್ ಅನ್ನು ಪ್ರಧಾನಿ ಇಂದು ಉದ್ಘಾಟಿಸಿದರು. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 15 ಹೊಸ ಏಮ್ಸ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

370 ನೇ ವಿಧಿ ರದ್ದತಿಯ ಕುರಿತು ಮಾತನಾಡಿದ ಪ್ರಧಾನಿ, ಹೊಸ ಜಮ್ಮು ಕಾಶ್ಮೀರವು ಅಸ್ತಿತ್ವಕ್ಕೆ ಬರುತ್ತಿದೆ, ಅದರ ಅಭಿವೃದ್ಧಿಗೆ ಇದ್ದ ದೊಡ್ಡ ಅಡಚಣೆಯನ್ನು ತೆಗೆದುಹಾಕಲಾಗಿದೆ ಮತ್ತು ಈ ಪ್ರದೇಶವು ಸಮತೋಲಿತ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರು. ಅವರು ಮುಂಬರುವ ಆರ್ಟಿಕಲ್ 370 ಚಲನಚಿತ್ರವನ್ನು ಸಹ ಉಲ್ಲೇಖಿಸಿದರು.

ಯಾರನ್ನೂ ಹಿಂದೆ ಬಿಡುವುದಿಲ್ಲ ಮತ್ತು ದಶಕಗಳಿಂದ ನಿರ್ಲಕ್ಷಿಸಲ್ಪಟ್ಟವರು ಈಗ ಪರಿಣಾಮಕಾರಿ ಸರ್ಕಾರದ ಉಪಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ಎಂಬ ನಂಬಿಕೆಯು ಯುವಜನರಲ್ಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ವಂಶಾಡಳಿತ ಮತ್ತು ತುಷ್ಟೀಕರಣದ ರಾಜಕೀಯವನ್ನು ದೂರವಿಡುವ ಹೊಸ ಅಲೆಯು ದೇಶದಲ್ಲಿ ಹೊರಹೊಮ್ಮಿದೆ ಎಂದು ಅವರು ಒತ್ತಿ ಹೇಳಿದರು. "ಜಮ್ಮು ಮತ್ತು ಕಾಶ್ಮೀರದ ಯುವಜನರು ಅಭಿವೃದ್ಧಿಯ ಕಹಳೆಯನ್ನು ಊದುತ್ತಿದ್ದಾರೆ ಮತ್ತು ತಮ್ಮ ಭವಿಷ್ಯವನ್ನು ಸೃಷ್ಟಿಸಲು ಮುಂದೆ ಸಾಗುತ್ತಿದ್ದಾರೆ" ಎಂದು ಅವರು ಹೇಳಿದರು. ಕೇಂದ್ರಾಡಳಿತ ಪ್ರದೇಶದ ವಾತಾವರಣದಲ್ಲಿನ ಧನಾತ್ಮಕ ಬದಲಾವಣೆಯ ಬಗ್ಗೆ ಪ್ರಧಾನಮಂತ್ರಿಯವರು ಗಮನ ಸೆಳೆದರು. ಜಮ್ಮು ಮತ್ತು ಕಾಶ್ಮೀರದ ಜನರು ಹಾಗೂ ರಕ್ಷಣಾ ಸಿಬ್ಬಂದಿಯ ಬಗ್ಗೆ ಹಿಂದಿನ ಸರ್ಕಾರಗಳು ತೋರಿದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರದೇಶದವರು ಸೇರಿದಂತೆ ಮಾಜಿ ಸೈನಿಕರಿಗೆ ಪ್ರಯೋಜನಗಳನ್ನು ನೀಡುವ ಬಹುಕಾಲದ ಬೇಡಿಕೆಯಾದ ʼಒಂದು ಶ್ರೇಣಿ ಒಂದು ಪಿಂಚಣಿʼ ಯನ್ನು ಪ್ರಸ್ತುತ ಸರ್ಕಾರವು ಈಡೇರಿಸಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಸಾಮಾಜಿಕ ನ್ಯಾಯದ ಸಾಂವಿಧಾನಿಕ ಭರವಸೆ ಅಂತಿಮವಾಗಿ ನಿರಾಶ್ರಿತರ ಕುಟುಂಬಗಳು, ಬಾಲ್ಮೀಕಿ ಸಮುದಾಯ ಮತ್ತು ಸಫಾಯಿ ಕರ್ಮಚಾರಿಗಳನ್ನು ತಲುಪಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬಾಲ್ಮೀಕಿ ಸಮುದಾಯವು ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆದುಕೊಂಡಿದೆ, ಇದು ಹಲವು ವರ್ಷಗಳ ಹಿಂದಿನ ಬೇಡಿಕೆಯ ಈಡೇರಿಕೆಯಾಗಿದೆ ಎಂದು ಪ್ರಧಾನಿ ಹೇಳಿದರು. ಪದ್ದರಿ, ಪಹಾರಿ, ಗಡ್ಡ ಬ್ರಾಹ್ಮಣ ಮತ್ತು ಕೋಲಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ಮತ್ತು ಪಂಚಾಯತ್‌ ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿಯನ್ನು ಪ್ರಸ್ತಾಪಿಸಿದ ಪ್ರಧಾನಿ, ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್, ಸಬ್‌ ಕಾ ವಿಶ್ವಾಸ್ ಮತ್ತು ಸಬ್‌ ಕಾ ಪ್ರಯಾಸ್ ಮಂತ್ರವು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯ ಅಡಿಪಾಯವಾಗಿದೆ" ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಮಹಿಳೆಯರು ಹೆಚ್ಚು ಪ್ರಯೋಜನ ಪಡೆದಿದ್ದಾರೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಪಕ್ಕಾ ಮನೆಗಳನ್ನು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಹರ್ ಘರ್ ಜಲ್ ಯೋಜನೆಯಡಿ ಶೌಚಾಲಯಗಳ ನಿರ್ಮಾಣ ಮತ್ತು ಆಯುಷ್ಮಾನ್ ಕಾರ್ಡ್‌ ಗಳ ವಿತರಣೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ. "370ನೇ ವಿಧಿಯ ರದ್ದತಿಯು ಮಹಿಳೆಯರಿಗೆ ಈ ಮೊದಲು ವಂಚಿತವಾಗಿದ್ದ ಹಕ್ಕುಗಳನ್ನು ಉಡುಗೊರೆಯಾಗಿ ನೀಡಿದೆ" ಎಂದು ಅವರು ಹೇಳಿದರು.

ಡ್ರೋನ್ ಪೈಲಟ್‌ ಗಳಾಗಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿರುವ ನಮೋ ಡ್ರೋನ್ ದೀದಿ ಯೋಜನೆಯನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಹಾಯ ಮಾಡಲು ಸಾವಿರಾರು ಸ್ವಸಹಾಯ ಗುಂಪುಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರೋನ್‌ ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಇದರಿಂದ ರಸಗೊಬ್ಬರ ಅಥವಾ ಕೀಟನಾಶಕಗಳನ್ನು ಸಿಂಪಡಿಸುವ ಕೆಲಸ ಹೆಚ್ಚು ಸುಲಭವಾಗುತ್ತದೆ ಮತ್ತು ಅವರಿಗೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಇಂದು ಇಡೀ ದೇಶದಲ್ಲಿ ಏಕಕಾಲದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಒತ್ತಿ ಹೇಳಿದ ಪ್ರಧಾನಿವರು, ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿದ ಸಂಪರ್ಕ ವ್ಯವಸ್ಥೆಯನ್ನು ಪ್ರಸ್ತಾಪಿಸಿದರು. ಜಮ್ಮು ವಿಮಾನ ನಿಲ್ದಾಣದ ವಿಸ್ತರಣೆ, ಕಾಶ್ಮೀರದಿಂದ ಕನ್ಯಾಕುಮಾರಿಗೆ ರೈಲು ಸಂಪರ್ಕ ಮತ್ತು ಶ್ರೀನಗರದಿಂದ ಸಂಗಲ್ದನ್ ಮತ್ತು ಸಂಗಲ್ದನ್‌ ನಿಂದ ಬಾರಾಮುಲ್ಲಾಗೆ ಸಂಚರಿಸುವ ರೈಲುಗಳ ಆರಂಭವನ್ನು ಅವರು ಪ್ರಸ್ತಾಪಿಸಿದರು. "ಕಾಶ್ಮೀರದಿಂದ ರೈಲಿನಲ್ಲಿ ಜನರು ದೇಶಾದ್ಯಂತ ಪ್ರಯಾಣಿಸಲು ಸಾಧ್ಯವಾಗುವ ದಿನ ದೂರವಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು. ದೇಶದಲ್ಲಿ ನಡೆಯುತ್ತಿರುವ ರೈಲು ಮಾರ್ಗಗಳ ವಿದ್ಯುದೀಕರಣದ ಬೃಹತ್ ಅಭಿಯಾನದ ಕುರಿತು ಮಾತನಾಡಿದ ಪ್ರಧಾನಿ, ಇಂದು ಮೊದಲ ಎಲೆಕ್ಟ್ರಿಕ್ ರೈಲನ್ನು ಪಡೆದಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ವಂದೇ ಭಾರತ್‌ ನಂತಹ ಆಧುನಿಕ ರೈಲುಗಳನ್ನು ಉಲ್ಲೇಖಿಸಿದ ಪ್ರಧಾನಿ, ಈ ರೈಲುಗಳ ಆರಂಭಿಕ ಮಾರ್ಗಗಳಲ್ಲಿ ಜಮ್ಮು ಕಾಶ್ಮೀರವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ವಂದೇ ಭಾರತ್ ರೈಲುಗಳು ಓಡುತ್ತಿವೆ ಮತ್ತು ಮಾತಾ ವೈಷ್ಣೋ ದೇವಿಗೆ ಸಂಪರ್ಕವನ್ನು ಸುಧಾರಿಸಲಾಗಿದೆ ಎಂದು ಅವರು ಹೇಳಿದರು.

ಈ ಪ್ರದೇಶದ ರಸ್ತೆ ಯೋಜನೆಗಳನ್ನು ಪ್ರಧಾನಿ ಮೋದಿ ಪಟ್ಟಿ ಮಾಡಿದರು. ಇಂದಿನ ಯೋಜನೆಗಳಲ್ಲಿ, ಶ್ರೀನಗರ ವರ್ತುಲ ರಸ್ತೆಯ ಎರಡನೇ ಹಂತವನ್ನು ಅವರು ಪ್ರಸ್ತಾಪಿಸಿದರು, ಇದು ಮಾನಸಬಲ್ ಸರೋವರ ಮತ್ತು ಖೀರ್ ಭವಾನಿ ದೇವಸ್ಥಾನಕ್ಕೆ ಸಂಪರ್ಕವನ್ನು ಸುಧಾರಿಸುತ್ತದೆ. ಅದೇ ರೀತಿ ಶ್ರೀನಗರ-ಬಾರಾಮುಲ್ಲಾ-ಉರಿ ಹೆದ್ದಾರಿಯಿಂದ ರೈತರಿಗೆ ಮತ್ತು ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ಜಮ್ಮು ಮತ್ತು ದೆಹಲಿ ನಡುವಿನ ಪ್ರಯಾಣವನ್ನು ಸುಲಭವಾಗಿಸುತ್ತದೆ ಎಂದು ಅವರು ಹೇಳಿದರು.

"ಇಂದು, ಇಡೀ ವಿಶ್ವದಲ್ಲಿ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಉತ್ಸುಕತೆಯಿದೆ" ಎಂದು ಪ್ರಧಾನಿ ಹೇಳಿದರು, ಕೇಂದ್ರಾಡಳಿತ ಪ್ರದೇಶದಲ್ಲಿ ಹೂಡಿಕೆಯ ಬಗ್ಗೆ ಸಕಾರಾತ್ಮಕತೆ ಹೆಚ್ಚಿರುವ ಗಲ್ಫ್ ರಾಷ್ಟ್ರಗಳಿಗೆ ತಮ್ಮ ಇತ್ತೀಚಿನ ಭೇಟಿಯನ್ನು ಪ್ರಧಾನಿ ನೆನಪಿಸಿಕೊಂಡರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಲಾದ ಹಲವಾರು ಜಿ 20 ಸಭೆಗಳನ್ನು ಸಹ ಪ್ರಧಾನಿ ಮೋದಿ ಪ್ರಸ್ತಾಪಿಸಿದರು ಮತ್ತು ಇಡೀ ಜಗತ್ತು ಇದರ ನೈಸರ್ಗಿಕ ಸೌಂದರ್ಯದಿಂದ ಮೋಡಿಗೊಳಗಾಗಿದೆ  ಎಂದು ಹೇಳಿದರು. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರವು 2 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ದಾಖಲಿಸಿದ್ದರೆ, ಅಮರನಾಥ ಮತ್ತು ಶ್ರೀ ಮಾತಾ ವೈಷ್ಣೋ ದೇವಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯು ಕಳೆದ ದಶಕದಲ್ಲಿ ಅತಿ ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. ಮೂಲಸೌಕರ್ಯಗಳ ತ್ವರಿತ ಅಭಿವೃದ್ಧಿಯನ್ನು ಪರಿಗಣಿಸಿ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಅಗ್ರ 5 ಜಾಗತಿಕ ಆರ್ಥಿಕತೆಗಳಿಗೆ ಭಾರತದ ಪ್ರವೇಶವನ್ನು ಪ್ರಸ್ತಾಪಿಸಿದ ಪ್ರಧಾನಿ, ಸುಧಾರಿತ ಆರ್ಥಿಕತೆಯಿಂದಾಗಿ ಕಲ್ಯಾಣ ಯೋಜನೆಗಳಿಗೆ ಖರ್ಚು ಮಾಡುವ ಸರ್ಕಾರದ ಸಾಮರ್ಥ್ಯ ಹೆಚ್ಚುತ್ತಿದೆ ಎಂದರು. ಸುಧಾರಿತ ಆರ್ಥಿಕತೆಯಿಂದಾಗಿ ಭಾರತವು ಉಚಿತ ಪಡಿತರ, ವೈದ್ಯಕೀಯ ಚಿಕಿತ್ಸೆ, ಪಕ್ಕಾ ಮನೆಗಳು, ಗ್ಯಾಸ್ ಸಂಪರ್ಕಗಳು, ಶೌಚಾಲಯಗಳು ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು. “ಈಗ ನಾವು ಭಾರತವನ್ನು ಮುಂದಿನ 5 ವರ್ಷಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಬೇಕಾಗಿದೆ. ಇದು ದೇಶದ ಬಡವರ ಕಲ್ಯಾಣ ಮತ್ತು ಮೂಲಸೌಕರ್ಯಕ್ಕಾಗಿ ಖರ್ಚು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಂದು ಕುಟುಂಬವೂ ಇದರಿಂದ ಪ್ರಯೋಜನ ಪಡೆಯಲಿದೆ” ಎಂದು ಪ್ರಧಾನಿ ತಮ್ಮ ಮಾತು ಮುಗಿಸಿದರು.

ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಮತ್ತು ಪ್ರಧಾನ ಮಂತ್ರಿಯವರ ಕಛೇರಿಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಇತರರು ಉಪಸ್ಥಿತರಿದ್ದರು.

ಹಿನ್ನೆಲೆ

ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಉತ್ತೇಜನ

ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯಗಳನ್ನು ಉನ್ನತೀಕರಿಸುವ ಮತ್ತು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯಲ್ಲಿ, ಪ್ರಧಾನಿಯವರು ಸುಮಾರು 13,375 ಕೋಟಿ ರೂ. ಮೌಲ್ಯದ ಹಲವಾರು ಯೋಜನೆಗಳನ್ನು ಉದ್ಘಾಟಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಅಡಿಪಾಯ ಹಾಕಿದರು.

ಐಐಟಿ ಭಿಲಾಯ್, ಐಐಟಿ ತಿರುಪತಿ, ಐ ಐ ಎಸ್‌ ಇ ಆರ್ ತಿರುಪತಿ, ಐಐಐಟಿಡಿಎಂ ಕರ್ನೂಲ್‌ ನ ಶಾಶ್ವತ ಕ್ಯಾಂಪಸ್; ಐಐಟಿ ಪಾಟ್ನಾ ಮತ್ತು ಐಐಟಿ ರೋಪರ್‌ ನಲ್ಲಿ ಶೈಕ್ಷಣಿಕ ಮತ್ತು ವಸತಿ ಸಂಕೀರ್ಣ; ದೇವಪ್ರಯಾಗ (ಉತ್ತರಾಖಂಡ) ಮತ್ತು ಅಗರ್ತಲಾ (ತ್ರಿಪುರ) ದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಎರಡು ಶಾಶ್ವತ ಕ್ಯಾಂಪಸ್‌ ಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಐಐಎಂ ವಿಶಾಖಪಟ್ಟಣಂ, ಐಐಎಂ ಜಮ್ಮು ಮತ್ತು ಐಐಎಂ ಬೋಧಗಯಾದ ಶಾಶ್ವತ ಕ್ಯಾಂಪಸ್‌ ಗಳನ್ನು ಪ್ರಧಾನಿ ಉದ್ಘಾಟಿಸಿದರು. ಅವರು ಕಾನ್ಪುರದ ಸುಧಾರಿತ ತಂತ್ರಜ್ಞಾನಗಳ ಪ್ರವರ್ತಕ ಕೌಶಲ್ಯ ತರಬೇತಿ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಅನ್ನು ಉದ್ಘಾಟಿಸಿದರು.

ಐಐಟಿ ಜಮ್ಮು, ಎನ್‌ ಐ ಟಿ ದೆಹಲಿ, ಐಐಟಿ ಖರಗಪುರ, ಎನ್‌ ಐ ಟಿ ದುರ್ಗಾಪುರ, ಐ ಐ ಎಸ್‌ ಇ ಆರ್ ಬೆಹ್ರಾಂಪುರ, ಎನ್‌ ಐ ಟಿ ಅರುಣಾಚಲ ಪ್ರದೇಶ, ಐಐಐಟಿ ಲಕ್ನೋ, ಐಐಟಿ ಬಾಂಬೆ, ಐಐಟಿ ದೆಹಲಿ, ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಇತ್ಯಾದಿ ದೇಶಾದ್ಯಂತದ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್‌ಗಳು, ಶೈಕ್ಷಣಿಕ ಬ್ಲಾಕ್‌ ಗಳು, ಆಡಳಿತಾತ್ಮಕ ಕಟ್ಟಡಗಳು, ಗ್ರಂಥಾಲಯಗಳು, ಸಭಾಂಗಣಗಳು ಮುಂತಾದ ಸುಧಾರಿತ ಮೂಲಸೌಕರ್ಯಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. 

ದೇಶದಾದ್ಯಂತ ಹಲವಾರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಅನೇಕ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಸಿಂಧು ಕೇಂದ್ರೀಯ ವಿಶ್ವವಿದ್ಯಾನಿಲಯ ಮತ್ತು ಐಐಐಟಿ ರಾಯಚೂರಿನ ಶಾಶ್ವತ ಕ್ಯಾಂಪಸ್ ನಿರ್ಮಾಣ; ಐಐಟಿ ಬಾಂಬೆಯಲ್ಲಿ ಶೈಕ್ಷಣಿಕ ಬ್ಲಾಕ್, ಹಾಸ್ಟೆಲ್, ಸಿಬ್ಬಂದಿ ವಸತಿ ಇತ್ಯಾದಿಗಳ ನಿರ್ಮಾಣ; ಐಐಟಿ ಗಾಂಧಿನಗರದಲ್ಲಿ ಹಾಸ್ಟೆಲ್ ಮತ್ತು ಸಿಬ್ಬಂದಿ ವಸತಿ ನಿರ್ಮಾಣ, ಬಿ ಎಚ್‌ ಯು ನಲ್ಲಿ ಬಾಲಕಿಯರ ಹಾಸ್ಟೆಲ್ ನಿರ್ಮಾಣ ಸೇರಿವೆ.

ಏಮ್ಸ್ ಜಮ್ಮು

ಜಮ್ಮು ಮತ್ತು ಕಾಶ್ಮೀರದ ಜನರಿಗೆ ವ್ಯಾಪಕ, ಗುಣಮಟ್ಟದ ಮತ್ತು ಸಮಗ್ರ ತೃತೀಯ ಆರೈಕೆ ಆರೋಗ್ಯ ಸೇವೆಗಳನ್ನು ಒದಗಿಸುವ ಕ್ರಮವಾಗಿ, ಪ್ರಧಾನಮಂತ್ರಿ ಅವರು ಜಮ್ಮುವಿನ ವಿಜಯಪುರ (ಸಾಂಬಾ) ದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌)ಯನ್ನು ಉದ್ಘಾಟಿಸಿದರು. ಫೆಬ್ರುವರಿ 2019 ರಲ್ಲಿ ಪ್ರಧಾನಮಂತ್ರಿಯವರಿಂದ ಶಂಕುಸ್ಥಾಪನೆ ನಡೆದ ಈ ಸಂಸ್ಥೆಯು ಕೇಂದ್ರ ವಲಯದ ಯೋಜನೆಯಾದ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿಯಲ್ಲಿ ಸ್ಥಾಪನೆಯಾಗುತ್ತಿದೆ.

1660 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ 227 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಆಸ್ಪತ್ರೆಯು 720 ಹಾಸಿಗೆಗಳು, 125 ಸೀಟುಗಳ ವೈದ್ಯಕೀಯ ಕಾಲೇಜು, 60 ಸೀಟುಗಳ ನರ್ಸಿಂಗ್ ಕಾಲೇಜು, 30 ಹಾಸಿಗೆಗಳ ಆಯುಷ್ ಬ್ಲಾಕ್, ಬೋಧಕರು ಮತ್ತು ಸಿಬ್ಬಂದಿಗೆ ವಸತಿ ಸೌಕರ್ಯಗಳು, ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ರಾತ್ರಿ ಆಶ್ರಯ, ಅತಿಥಿ ಗೃಹ, ಆಡಿಟೋರಿಯಂ, ಶಾಪಿಂಗ್ ಕಾಂಪ್ಲೆಕ್ಸ್ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ.  ಅತ್ಯಾಧುನಿಕ ಆಸ್ಪತ್ರೆಯು 18 ವಿಶೇಷತೆಗಳಲ್ಲಿ ಮತ್ತು ಹೃದ್ರೋಗ, ಗ್ಯಾಸ್ಟ್ರೋಎಂಟರಾಲಜಿ, ನೆಫ್ರಾಲಜಿ, ಯುರಾಲಜಿ, ನ್ಯೂರಾಲಜಿ, ನ್ಯೂರೋಸರ್ಜರಿ, ಮೆಡಿಕಲ್ ಆಂಕೊಲಾಜಿ, ಸರ್ಜಿಕಲ್ ಆಂಕೊಲಾಜಿ, ಎಂಡೋಕ್ರೈನಾಲಜಿ, ಬರ್ನ್ಸ್ & ಪ್ಲ್ಯಾಸ್ಟಿಕ್ ಸರ್ಜರಿ ಸೇರಿದಂತೆ 17 ಸೂಪರ್ ಸ್ಪೆಷಾಲಿಟಿಗಳಲ್ಲಿ ಉತ್ತಮ ಗುಣಮಟ್ಟದ ರೋಗಿಗಳ ಆರೈಕೆ ಸೇವೆಗಳನ್ನು ಒದಗಿಸುತ್ತದೆ. ಸಂಸ್ಥೆಯು ತೀವ್ರ ನಿಗಾ ಘಟಕ, ತುರ್ತು ಮತ್ತು ಆಪಘಾತ ಘಟಕ, 20 ಮಾಡ್ಯುಲರ್ ಶಸ್ತ್ರಚಿಕಿತ್ಸಾ ಕೊಠಡಿಗಳು, ಡಯಾಗ್ನೋಸ್ಟಿಕ್ ಪ್ರಯೋಗಾಲಯಗಳು, ಬ್ಲಡ್ ಬ್ಯಾಂಕ್, ಫಾರ್ಮಸಿ ಇತ್ಯಾದಿಗಳನ್ನು ಹೊಂದಿರುತ್ತದೆ. ಆಸ್ಪತ್ರೆಯು ಈ ಪ್ರದೇಶದ ದೂರದ ಪ್ರದೇಶಗಳಿಗೆ ತಲುಪಲು ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಸಹ ಬಳಸುತ್ತದೆ.

ಜಮ್ಮು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ

ಜಮ್ಮು ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ ಕಟ್ಟಡಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. 40,000 ಚದರ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿರುವ ಹೊಸ ಟರ್ಮಿನಲ್ ಕಟ್ಟಡವು ಗರಿಷ್ಠ ಸಂದಣಿಯ ಅವಧಿಯಲ್ಲಿ ಸುಮಾರು 2000 ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಲಿದೆ. ಹೊಸ ಟರ್ಮಿನಲ್ ಕಟ್ಟಡವು ಪರಿಸರ ಸ್ನೇಹಿಯಾಗಿರುತ್ತದೆ ಮತ್ತು ಇದನ್ನು ಈ ಪ್ರದೇಶದ ಸ್ಥಳೀಯ ಸಂಸ್ಕೃತಿಯನ್ನು ಪ್ರದರ್ಶಿಸುವ ರೀತಿಯಲ್ಲಿ ನಿರ್ಮಿಸಲಾಗುವುದು. ಇದು ವಾಯು ಸಂಪರ್ಕವನ್ನು ಬಲಪಡಿಸುತ್ತದೆ, ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸುತ್ತದೆ ಮತ್ತು ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.

ರೈಲು ಯೋಜನೆಗಳು

ಬನಿಹಾಲ್-ಖಾರಿ-ಸುಂಬರ್-ಸಂಗಲ್ದಾನ್‌ (48 ಕಿಮೀ) ಮತ್ತು ಹೊಸದಾಗಿ ವಿದ್ಯುದ್ದೀಕರಿಸಿದ ಬಾರಾಮುಲ್ಲಾ-ಶ್ರೀನಗರ-ಬನಿಹಾಲ್-ಸಂಗಲ್ದಾನ್ ವಿಭಾಗ (185.66 ಕಿಮೀ) ನಡುವಿನ ಹೊಸ ರೈಲು ಮಾರ್ಗ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ರೈಲು ಯೋಜನೆಗಳನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಪ್ರಧಾನಮಂತ್ರಿಯವರು ಕಣಿವೆಯಲ್ಲಿ ಮೊದಲ ಎಲೆಕ್ಟ್ರಿಕ್ ರೈಲು ಮತ್ತು ಸಂಗಲ್ದಾನ್ ನಿಲ್ದಾಣ ಮತ್ತು ಬಾರಾಮುಲ್ಲಾ ನಿಲ್ದಾಣದ ನಡುವೆ ರೈಲು ಸೇವೆಗೂ ಹಸಿರುನಿಶಾನೆ ತೋರಿಸಿದರು.

ಬನಿಹಾಲ್-ಖಾರಿ-ಸುಂಬರ್-ಸಂಗಲ್ದಾನ್ ವಿಭಾಗದ ಕಾರ್ಯಾರಂಭವು ಮಹತ್ವದ್ದಾಗಿದೆ, ಏಕೆಂದರೆ ಇದು ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವವನ್ನು ಒದಗಿಸುವ ಮಾರ್ಗದುದ್ದಕ್ಕೂ ಬ್ಯಾಲಸ್ಟ್ ಲೆಸ್ ಟ್ರ್ಯಾಕ್ (BLT) ಬಳಕೆಯನ್ನು ಒಳಗೊಂಡಿದೆ. ಅಲ್ಲದೆ, ಭಾರತದ ಅತಿ ಉದ್ದದ ಸಾರಿಗೆ ಸುರಂಗ T-50 (12.77 ಕಿಮೀ) ಖಾರಿ-ಸುಂಬರ್ ನಡುವಿನ ಈ ಭಾಗದಲ್ಲಿದೆ. ರೈಲು ಯೋಜನೆಗಳು ಸಂಪರ್ಕವನ್ನು ಸುಧಾರಿಸುತ್ತವೆ, ಪರಿಸರ ಸುಸ್ಥಿರತೆಯನ್ನು ಖಚಿತಪಡಿಸುತ್ತವೆ ಮತ್ತು ಪ್ರದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತವೆ.

ರಸ್ತೆ ಯೋಜನೆಗಳು

ಕಾರ್ಯಕ್ರಮದ ಸಂದರ್ಭದಲ್ಲಿ, ಜಮ್ಮುವನ್ನು ಕತ್ರಾಕ್ಕೆ ಸಂಪರ್ಕಿಸುವ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇಯ ಎರಡು ಪ್ಯಾಕೇಜ್‌ಗಳು (44.22 ಕಿಮೀ) ಸೇರಿದಂತೆ ಪ್ರಮುಖ ರಸ್ತೆ ಯೋಜನೆಗಳಿಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದರು; ಶ್ರೀನಗರ ವರ್ತುಲ ರಸ್ತೆಯ ಚತುಷ್ಪಥದ ಎರಡನೇ ಹಂತ; ಎನ್‌ ಎಚ್-01 ರ 161 ಕಿಮೀ ಉದ್ದದ ಶ್ರೀನಗರ-ಬಾರಾಮುಲ್ಲಾ-ಉರಿ ವಿಸ್ತರಣೆಗೆ ಐದು ಪ್ಯಾಕೇಜ್‌ಗಳು; ಮತ್ತು ಎನ್‌ ಎಚ್-444 ರಲ್ಲಿ ಕುಲ್ಗಾಮ್ ಬೈಪಾಸ್ ಮತ್ತು ಪುಲ್ವಾಮಾ ಬೈಪಾಸ್ ನಿರ್ಮಾಣ ಇದರಲ್ಲಿ ಸೇರಿವೆ.

ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇನ ಎರಡು ಪ್ಯಾಕೇಜ್‌ಗಳು ಪೂರ್ಣಗೊಂಡಾಗ, ಮಾತಾ ವೈಷ್ಣೋದೇವಿಯ ಪವಿತ್ರ ದೇಗುಲಕ್ಕೆ ಯಾತ್ರಾರ್ಥಿಗಳ ಭೇಟಿಯನ್ನು ಸುಗಮಗೊಳಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ; ಶ್ರೀನಗರ ವರ್ತುಲ ರಸ್ತೆಯ ನಾಲ್ಕು-ಪಥದ ಎರಡನೇ ಹಂತವು ಅಸ್ತಿತ್ವದಲ್ಲಿರುವ ಸುಂಬಲ್-ವಾಯುಲ್ ಎನ್‌ ಎಚ್-1 ರ ಮೇಲ್ದರ್ಜೆಯನ್ನು ಒಳಗೊಂಡಿರುತ್ತದೆ. 24.7 ಕಿಮೀ ಉದ್ದದ ಈ ಬ್ರೌನ್‌ಫೀಲ್ಡ್ ಯೋಜನೆಯು ಶ್ರೀನಗರ ನಗರ ಮತ್ತು ಸುತ್ತಮುತ್ತಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇದು ಮನಸ್ಬಾಲ್ ಸರೋವರ ಮತ್ತು ಖೀರ್ ಭವಾನಿ ಮಂದಿರದಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಲೇಹ್, ಲಡಾಖ್‌ ಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ; ಎನ್‌ ಎಚ್-01 ರ 161 ಕಿಮೀ ಉದ್ದದ ಶ್ರೀನಗರ-ಬಾರಾಮುಲ್ಲಾ-ಉರಿ ವಿಸ್ತರಣೆಯ ಯೋಜನೆಯು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಬಾರಾಮುಲ್ಲಾ ಮತ್ತು ಉರಿಯ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ; ಖಾಜಿಗುಂಡ್ - ಕುಲ್ಗಾಮ್ - ಶೋಪಿಯಾನ್ - ಪುಲ್ವಾಮಾ - ಬದ್ಗಾಮ್ - ಶ್ರೀನಗರವನ್ನು ಸಂಪರ್ಕಿಸುವ ಎನ್‌ ಎಚ್-444 ರಲ್ಲಿ ಕುಲ್ಗಾಮ್ ಬೈಪಾಸ್ ಮತ್ತು ಪುಲ್ವಾಮಾ ಬೈಪಾಸ್ ಈ ಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯವನ್ನು ಸುಧಾರಿಸುತ್ತವೆ.

ಸಿ ಯು ಎಫ್ ಪೆಟ್ರೋಲಿಯಂ ಡಿಪೋ

ಪ್ರಧಾನಮಂತ್ರಿಯವರು ಜಮ್ಮುವಿನಲ್ಲಿ ಸಿ ಯು ಎಫ್ (ಸಾಮಾನ್ಯ ಬಳಕೆದಾರ ಸೌಲಭ್ಯ) ಪೆಟ್ರೋಲಿಯಂ ಡಿಪೋವನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಅಡಿಪಾಯ ಹಾಕಿದರು. ಸುಮಾರು 677 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ ಅತ್ಯಾಧುನಿಕ ಸಂಪೂರ್ಣ ಸ್ವಯಂಚಾಲಿತ ಡಿಪೋವು ಮೋಟಾರ್ ಸ್ಪಿರಿಟ್ (MS), ಹೈಸ್ಪೀಡ್ ಡೀಸೆಲ್ (HSD), ಸುಪೀರಿಯರ್ ಸೀಮೆಎಣ್ಣೆ ತೈಲ (SKO), ಏವಿಯೇಷನ್ ಟರ್ಬೈನ್ ಇಂಧನ (ATF), ಎಥೆನಾಲ್, ಜೈವಿಕ ಡೀಸೆಲ್ ಮತ್ತು ಚಳಿಗಾಲದ ದರ್ಜೆಯ HSD ಸಂಗ್ರಹಿಸಲು ಸುಮಾರು 100000 ಕಿಲೋ.ಲೀ. ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇತರ ಯೋಜನೆಗಳು

ಜಮ್ಮು ಮತ್ತು ಕಾಶ್ಮೀರದಾದ್ಯಂತ ನಾಗರಿಕ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ 3150 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಿದರು. ಪ್ರಧಾನಮಂತ್ರಿಯವರು ಉದ್ಘಾಟಿಸಿದ ಯೋಜನೆಗಳಲ್ಲಿ ರಸ್ತೆ ಯೋಜನೆಗಳು ಮತ್ತು ಸೇತುವೆಗಳು ಸೇರಿವೆ; ಗ್ರಿಡ್ ಕೇಂದ್ರಗಳು, ಸ್ವೀಕರಣಾ ಕೇಂದ್ರಗಳು, ಪ್ರಸರಣ ಮಾರ್ಗ ಯೋಜನೆಗಳು; ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳು; ಹಲವಾರು ಪದವಿ ಕಾಲೇಜು ಕಟ್ಟಡಗಳು; ಶ್ರೀನಗರದಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್; ಆಧುನಿಕ ನರ್ವಾಲ್ ಹಣ್ಣಿನ ಮಂಡಿ; ಕಥುವಾದಲ್ಲಿ ಔಷಧ ಪರೀಕ್ಷಾ ಪ್ರಯೋಗಾಲಯ; ಮತ್ತು ಸಾರಿಗೆ ಸೌಕರ್ಯಗಳು - ಗಂದರ್‌ಬಾಲ್ ಮತ್ತು ಕುಪ್ವಾರದಲ್ಲಿ 224 ಫ್ಲಾಟ್‌ ಗಳನ್ನು ಪ್ರಧಾನಿ ಉದ್ಘಾಟಿಸಿದರು. ಅಡಿಪಾಯ ಹಾಕಲಾದ ಯೋಜನೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಐದು ಹೊಸ ಕೈಗಾರಿಕಾ ಎಸ್ಟೇಟ್‌ಗಳ ಅಭಿವೃದ್ಧಿ; ಜಮ್ಮು ಸ್ಮಾರ್ಟ್ ಸಿಟಿಯ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ ನ ಡೇಟಾ ಸೆಂಟರ್/ ಡಿಸಾಸ್ಟರ್ ರಿಕವರಿ ಸೆಂಟರ್; ಪರಿಂಪೋರಾ ಶ್ರೀನಗರದಲ್ಲಿ ಸಾರಿಗೆ ನಗರದ ಉನ್ನತೀಕರಣ; 62 ರಸ್ತೆ ಯೋಜನೆಗಳು ಮತ್ತು 42 ಸೇತುವೆಗಳ ಉನ್ನತೀಕರಣ ಮತ್ತು ಸಾರಿಗೆ ಸೌಕರ್ಯಗಳ ಅಭಿವೃದ್ಧಿ ಯೋಜನೆ - ಅನಂತನಾಗ್, ಕುಲ್ಗಾಮ್, ಕುಪ್ವಾರಾ, ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳ ಒಂಬತ್ತು ಸ್ಥಳಗಳಲ್ಲಿ 2816 ಫ್ಲಾಟ್‌ ಗಳ ನಿರ್ಮಾಣ ಸೇರಿವೆ.

***



(Release ID: 2007433) Visitor Counter : 48