ಪ್ರಧಾನ ಮಂತ್ರಿಯವರ ಕಛೇರಿ

​​​​​​​ʻಸಿಎಲ್ಇಎ- ಕಾಮನ್ವೆಲ್ತ್ ಅಟಾರ್ನಿಗಳು ಮತ್ತು ಸಾಲಿಸಿಟರ್‌ ಜನರಲ್‌ಗಳ ಸಮ್ಮೇಳನ-2024’ ಉದ್ಘಾಟಿಸಿದ ಪ್ರಧಾನಿ


ʻಇನ್‌ಕ್ರೆಡಿಬಲ್‌ ಇಂಡಿಯಾʼವನ್ನು ಭಾರತವನ್ನು ಪೂರ್ಣವಾಗಿ ಕಣ್ತುಂಬಿಕೊಳ್ಳುವಂತೆ ನಾನು ಎಲ್ಲಾ ಅಂತರರಾಷ್ಟ್ರೀಯ ಅತಿಥಿಗಳನ್ನು ಒತ್ತಾಯಿಸುತ್ತೇನೆ: ಪ್ರಧಾನಿ ಮೋದಿ

"ಭಾರತದ ಅಧ್ಯತೆಯ ಅವಧಿಯಲ್ಲಿ ಆಫ್ರಿಕನ್ ಯೂನಿಯನ್ ʻಜಿ-20ʼಯ ಭಾಗವಾಗಿದ್ದು ನಮಗೆ ಹೆಮ್ಮೆಯ ವಿಷಯ"

"ನ್ಯಾಯವು ಸ್ವತಂತ್ರ ಸ್ವ-ಆಡಳಿತದ ಮೂಲವಾಗಿದೆ, ಮತ್ತು ನ್ಯಾಯದ ಅನುಪಸ್ಥಿತಿಯಲ್ಲಿ, ರಾಷ್ಟ್ರದ ಅಸ್ತಿತ್ವವೂ ಸಾಧ್ಯವಿಲ್ಲ"

"ನಮ್ಮ ನಡುವೆ ಸಹಕಾರ ಇದ್ದಾಗ, ನಾವು ಪರಸ್ಪರರ ವ್ಯವಸ್ಥೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಹೆಚ್ಚಿನ ತಿಳಿವಳಿಕೆಯು ಹೆಚ್ಚಿನ ಸಹಕ್ರಿಯೆಗೆ ದಾರಿ ಮಾಡುತ್ತದೆ. ಸಹಕ್ರಿಯೆಯು ನ್ಯಾಯ ವಿತರಣೆಯನ್ನು ಉತ್ತಮ ಮತ್ತು ವೇಗಗೊಳಿಸುತ್ತದೆ"

"21ನೇ ಶತಮಾನದ ಸಮಸ್ಯೆಗಳನ್ನು 20ನೇ ಶತಮಾನದ ಕಾರ್ಯವಿಧಾನದಿಂದ ನಿಭಾಯಿಸಲು ಸಾಧ್ಯವಿಲ್ಲ. ಮರುಚಿಂತನೆ, ಮರುಕಲ್ಪನೆ ಮತ್ತು ಸುಧಾರಣೆಯ ಅವಶ್ಯಕತೆಯಿದೆ"

"ನ್ಯಾಯ ವಿತರಣೆಯನ್ನು ಹೆಚ್ಚಿಸುವಲ್ಲಿ ಕಾನೂನು ಶಿಕ್ಷಣವು ಪ್ರಮುಖ ಸಾಧನವಾಗಿದೆ"

"ಪ್ರಸ್ತುತ ವಾಸ್ತವಗಳನ್ನು ಪ್ರತಿಬಿಂಬಿಸಲು ಭಾರತವು ಕಾನೂನುಗಳನ್ನು ಆಧುನೀಕರಿಸುತ್ತಿದೆ

" "ಪ್ರತಿಯೊಬ್ಬರಿಗೂ ಸಮಯೋಚಿತ ನ್ಯಾಯ ಸಿಗುವಂತಹ ಮತ್ತು ಯಾರೂ ಹಿಂದೆ ಉಳಿಯದಂತಹ ಜಗತ್ತನ್ನು ನಿರ್ಮಿಸೋಣ"

Posted On: 03 FEB 2024 12:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ʻಕಾಮನ್ ವೆಲ್ತ್ ಕಾನೂನು ಶಿಕ್ಷಣ ಸಂಘ(ಸಿಎಲ್‌ಇಎ) - ಕಾಮನ್ ವೆಲ್ತ್ ಅಟಾರ್ನಿಗಳು ಮತ್ತು ಸಾಲಿಸಿಟರ್‌ ಜನರಲ್‌ಗಳ ಸಮ್ಮೇಳನ (ಸಿಎಎಸ್‌ಜಿಸಿ)-2024ʼ ಅನ್ನು ಉದ್ಘಾಟಿಸಿದರು. "ನ್ಯಾಯ ವಿತರಣೆಯಲ್ಲಿ ಗಡಿಯಾಚೆಗಿನ ಸವಾಲುಗಳು" ಎಂಬುದು ಸಮ್ಮೇಳನದ ವಿಷಯವಸ್ತುವಾಗಿತ್ತು. ನ್ಯಾಯಾಂಗ ಪರಿವರ್ತನೆ ಮತ್ತು ಕಾನೂನು ಅಭ್ಯಾಸದ ನೈತಿಕ ಆಯಾಮ; ಕಾರ್ಯಾಂಗದ ಉತ್ತರದಾಯಿತ್ವ; ಮತ್ತು ಆಧುನಿಕ-ದಿನದ ಕಾನೂನು ಶಿಕ್ಷಣದ ಮರುಪರಿಶೀಲನೆ ಸೇರಿದಂತೆ ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗೆ ಈ ಸಮ್ಮೇಳನ ವೇದಿಕೆಯಾಗಲಿದೆ.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ವಿಶ್ವದ ನಾನಾ ಭಾಗಗಳ ಪ್ರಮುಖ ಕಾನೂನು ಪಂಡಿತರ ಭಾಗವಹಿಸುವಿಕೆಗೆ ಸಾಕ್ಷಿಯಾದ ʻಸಿಎಲ್‌ಇಎ - ಕಾಮನ್ ವೆಲ್ತ್ ಅಟಾರ್ನಿಗಳು ಮತ್ತು ಸಾಲಿಸಿಟರ್‌ ಜನರಲ್‌ಗಳ ಸಮ್ಮೇಳನʼ ಉದ್ಘಾಟಿಸಲು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ, 1.4 ಶತಕೋಟಿ ಭಾರತೀಯ ನಾಗರಿಕರ ಪರವಾಗಿ ಎಲ್ಲ ಅಂತಾರಾಷ್ಟ್ರೀಯ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ʻಇನ್‌ಕ್ರೆಡಿಬಲ್‌ ಇಂಡಿಯಾʼವನ್ನು ಪೂರ್ಣವಾಗಿ ಕಣ್ತುಂಭಿಕೊಳ್ಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ" ಎಂದು ಅವರು ಮನವಿ ಮಾಡಿದರು.

 

ಸಮ್ಮೇಳನದಲ್ಲಿ ಆಫ್ರಿಕನ್ ಪ್ರತಿನಿಧಿಗಳ ಉಪಸ್ಥಿತಿಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಆಫ್ರಿಕನ್ ಒಕ್ಕೂಟದೊಂದಿಗಿನ ಭಾರತದ ವಿಶೇಷ ಸಂಬಂಧವನ್ನು ಒತ್ತಿ ಹೇಳಿದರು. ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಆಫ್ರಿಕ್‌ ಒಕ್ಕೂಟವು ʻಜಿ-20ʼಯ ಭಾಗವಾದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಆಫ್ರಿಕಾದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಇದು ಬಹಳ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.

ಕಳೆದ ಕೆಲವು ತಿಂಗಳುಗಳಲ್ಲಿ ವಿಶ್ವದಾದ್ಯಂತದ ಕಾನೂನು ವೃತ್ತಿಯಲ್ಲಿ ತೊಡಗಿರುವ ವರ್ಗದೊಂದಿಗೆ ತಮ್ಮ ಒಡನಾಟವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಕೆಲವು ದಿನಗಳ ಹಿಂದೆ ಭಾರತದ ಸರ್ವೋಚ್ಚ ನ್ಯಾಯಾಲಯದ ವಜ್ರ ಮಹೋತ್ಸವ ಆಚರಣೆ ಮತ್ತು ಸೆಪ್ಟೆಂಬರ್‌ನಲ್ಲಿ ʻಭಾರತ್ ಮಂಟಪʼದಲ್ಲಿ ನಡೆದ ʻಅಂತಾರಾಷ್ಟ್ರೀಯ ವಕೀಲರ ಸಮ್ಮೇಳನʼವನ್ನು ಉಲ್ಲೇಖಿಸಿದರು. ಇಂತಹ ಕಾರ್ಯಕ್ರಮಗಳು ನ್ಯಾಯ ವ್ಯವಸ್ಥೆಯ ಕೆಲಸವನ್ನು ಸಂಭ್ರಮಿಸುವ ಮಾಧ್ಯಮವಾಗುತ್ತವೆ ಜೊತೆಗೆ, ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿ ನ್ಯಾಯ ವಿತರಣೆಗೆ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಒತ್ತಿಹೇಳಿದರು.

ಭಾರತೀಯ ಚಿಂತನೆಗಳಲ್ಲಿ ನ್ಯಾಯದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರಾಚೀನ ಭಾರತೀಯ ಗಾದೆಯೊಂದನ್ನು ಉಲ್ಲೇಖಿಸಿದರು: ‘न्यायमूलं स्वराज्यं स्यात्’. ಅಂದರೆ ನ್ಯಾಯವು ಸ್ವತಂತ್ರ ಸ್ವ-ಆಡಳಿತದ ಮೂಲವಾಗಿದೆ, ಮತ್ತು ನ್ಯಾಯವಿಲ್ಲದೆ, ರಾಷ್ಟ್ರದ ಅಸ್ತಿತ್ವವೂ ಸಾಧ್ಯವಿಲ್ಲ.

ಇಂದಿನ ಸಮ್ಮೇಳನದ ಧ್ಯೇಯವಾಕ್ಯವಾದ ʻನ್ಯಾಯ ವಿತರಣೆಯಲ್ಲಿ ಗಡಿಯಾಚೆಗಿನ ಸವಾಲುಗಳʼ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಈ ವಿಷಯದ ಪ್ರಸ್ತುತತೆಯನ್ನು ಒತ್ತಿ ಹೇಳಿದರು ಮತ್ತು ನ್ಯಾಯ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ರಾಷ್ಟ್ರಗಳು ಒಗ್ಗೂಡುವ ಅಗತ್ಯವನ್ನು ಉಲ್ಲೇಖಿಸಿದರು. "ನಮ್ಮ ನಡುವೆ ಸಹಕಾರವಿದ್ದಾಗ, ನಾವು ಪರಸ್ಪರರ ವ್ಯವಸ್ಥೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದು. ಹೆಚ್ಚಿನ ತಿಳಿವಳಿಕೆಯು ಹೆಚ್ಚಿನ ಸಹಕ್ರಿಯೆಗೆ ದಾರಿ ಮಾಡುತ್ತದೆ. ಹೀಗೆ ಬಂದ ಸಹಕ್ರಿಯೆಯು ನ್ಯಾಯ ವಿತರಣೆಯನ್ನು ಉತ್ತಮ ಮತ್ತು ವೇಗಗೊಳಿಸುತ್ತದೆ," ಎಂದು ಪ್ರಧಾನಿ ಹೇಳಿದರು. ಆದ್ದರಿಂದ, ಇಂತಹ ವೇದಿಕೆಗಳು ಮತ್ತು ಸಮ್ಮೇಳನಗಳು ಬಹಳ ಮುಖ್ಯ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ವಾಯು ಮತ್ತು ಕಡಲ ಸಾರಿಗೆ ನಿಯಂತ್ರಣದಂತಹ ವ್ಯವಸ್ಥೆಗಳ ಸಹಕಾರ ಮತ್ತು ಪರಸ್ಪರ ಅವಲಂಬನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನಾವು ತನಿಖೆ ಮತ್ತು ನ್ಯಾಯ ವಿತರಣೆಗೆ ಸಹಕಾರವನ್ನು ವಿಸ್ತರಿಸುವ ಅಗತ್ಯವಿದೆ ಎಂದರು. ಪರಸ್ಪರರ ನ್ಯಾಯವ್ಯಾಪ್ತಿಯನ್ನು ಗೌರವಿಸುವುದರಿಂದ ಸಹಕಾರ ಸಾಧ್ಯವಾಗುತ್ತದೆ.  ನಾವು ಒಟ್ಟಾಗಿ ಕೆಲಸ ಮಾಡಿದಾಗ, ವಿಳಂಬವಿಲ್ಲದೆ ನ್ಯಾಯವನ್ನು ಪಡೆಯಲು ನ್ಯಾಯವ್ಯಾಪ್ತಿಯು ಸಾಧನವಾಗುತ್ತದೆ ಎಂದು ಅವರು ಒತ್ತಿಹೇಳಿದರು.

ಇತ್ತೀಚಿನ ದಿನಗಳಲ್ಲಿ ಅಪರಾಧದ ಸ್ವರೂಪ ಮತ್ತು ವ್ಯಾಪ್ತಿಯಲ್ಲಿನ ಆಮೂಲಾಗ್ರ ಬದಲಾವಣೆಗಳ ಬಗ್ಗೆ ಪ್ರಧಾನಿ ಮೋದಿ ಬೆಳಕು ಚೆಲ್ಲಿದರು. ವಿವಿಧ ದೇಶಗಳಲ್ಲಿ ಅಪರಾಧಿಗಳು ರಚಿಸಿದ ವ್ಯಾಪಕ ಜಾಲಗಳ ಬಗ್ಗೆ ಉಲ್ಲೇಖಿಸಿದ ಅವರು, ಹಣಕಾಸು ವರ್ಗಾವಣೆಗಳು ಮತ್ತು ಕಾರ್ಯಾಚರಣೆಗಳಲ್ಲಿ ಅಪರಾಧಿಗಳಿಂದ ಇತ್ತೀಚಿನ ತಂತ್ರಜ್ಞಾನದ ಬಳಕೆಯ ಬಗ್ಗೆ ಗಮನಸೆಳೆದರು. ಒಂದು ಪ್ರದೇಶದಲ್ಲಿನ ಆರ್ಥಿಕ ಅಪರಾಧಗಳನ್ನು ಇತರ ಪ್ರದೇಶಗಳಲ್ಲಿನ ಚಟುವಟಿಕೆಗಳಿಗೆ ಧನಸಹಾಯ ಮಾಡಲು ಬಳಸಲಾಗುತ್ತಿದೆ ಎಂದ ಅವರು, ʻಕ್ರಿಪ್ಟೋಕರೆನ್ಸಿʼ ಮತ್ತು ಸೈಬರ್ ಅಪಾಯಗಳ ಹೆಚ್ಚಳದಿಂದ ಎದುರಾಗಿರುವ ಸವಾಲುಗಳ ಬಗ್ಗೆಯೂ ಗಮನ ಸೆಳೆದರು. 21ನೇ ಶತಮಾನದ ಸಮಸ್ಯೆಗಳನ್ನು 20ನೇ ಶತಮಾನದ ಕಾರ್ಯವಿಧಾನದಿಂದ ನಿಭಾಯಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ ಪ್ರಧಾನಿ, ಕಾನೂನು ವ್ಯವಸ್ಥೆಗಳನ್ನು ಆಧುನೀಕರಿಸುವುದು, ವ್ಯವಸ್ಥೆಯನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡುವುದು ಸೇರಿದಂತೆ ಮರುಚಿಂತನೆ, ಮರುಕಲ್ಪನೆ ಮತ್ತು ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿದರು.

ನ್ಯಾಯ ವ್ಯವಸ್ಥೆಯನ್ನು ಹೆಚ್ಚು ಜನಕೇಂದ್ರಿತಗೊಳಿಸದ ಹೊರತು ಸುಧಾರಣೆ ಸಾಧ್ಯವಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. ಏಕೆಂದರೆ ನ್ಯಾಯದ ಸುಗಮತೆಯ ನ್ಯಾಯ ವಿತರಣೆಯ ಆಧಾರಸ್ತಂಭವಾಗಿದೆ ಎಂದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯವನ್ನು ನೆನಪಿಸಿಕೊಂಡ ಅವರು, ಸಂಜೆ ನ್ಯಾಯಾಲಯಗಳನ್ನು ಸ್ಥಾಪಿಸುವುದರಿಂದ ಜನಸಾಮಾನ್ಯರು ತಮ್ಮ ಕೆಲಸದ ಸಮಯದ ನಂತರ ವಿಚಾರಣೆಗೆ ಹಾಜರಾಗಲು ಅನುವು ಮಾಡಿಕೊಟ್ಟಿತು - ಇದು ನ್ಯಾಯವನ್ನು ನೀಡಿತು, ಜೊತೆಗೆ ಸಮಯ ಮತ್ತು ಹಣವನ್ನು ಉಳಿಸಿತು. ನೂರಾರು ಜನರಿಗೆ ಪ್ರಯೋಜನವಾಯಿತು ಎಂದು ಹೇಳಿದರು.

ʻಲೋಕ ಅದಾಲತ್ʼ ಅಥವಾ 'ಜನರ ನ್ಯಾಯಾಲಯ'ದ ವ್ಯವಸ್ಥೆಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ಇದು ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ಸಣ್ಣ ಪ್ರಕರಣಗಳಿಗೆ ಇತ್ಯರ್ಥ ವ್ಯವಸ್ಥೆಯನ್ನು ಒದಗಿಸುತ್ತದೆ. ಇದು ವ್ಯಾಜ್ಯ ಪೂರ್ವ ಸೇವೆಯಾಗಿದ್ದು, ನ್ಯಾಯ ವಿತರಣೆಯನ್ನು ಸುಲಭಗೊಳಿಸುವ ಜೊತೆಗೆ ಸಾವಿರಾರು ಪ್ರಕರಣಗಳನ್ನು ಬಗೆಹರಿಸುತ್ತದೆ ಎಂದರು. ಜಗತ್ತಿಗೆ ಹೆಚ್ಚಿನ ಮೌಲ್ಯವರ್ಧನೆ ಮಾಡುವಂತಹ ಇಂತಹ ಉಪಕ್ರಮಗಳ ಬಗ್ಗೆ ಚರ್ಚೆಗಳನ್ನು ನಡೆಸುವಂತೆ ಅವರು ಸಲಹೆ ನೀಡಿದರು.

"ನ್ಯಾಯ ವಿತರಣೆಯನ್ನು ಹೆಚ್ಚಿಸುವಲ್ಲಿ ಕಾನೂನು ಶಿಕ್ಷಣವು ಪ್ರಮುಖ ಸಾಧನವಾಗಿದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಶಿಕ್ಷಣದ ಮೂಲಕ ಯುವ ಮನಸ್ಸುಗಳಿಗೆ ಉತ್ಸಾಹ ಮತ್ತು ವೃತ್ತಿಪರ ಸಾಮರ್ಥ್ಯ ಎರಡನ್ನೂ ಪರಿಚಯಿಸಲಾಗಿದೆ ಎಂದರು. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಸಾಮರ್ಥ್ಯವನ್ನು ಅರಿತುಕೊಳ್ಳುವ ಬಗ್ಗೆ ಒಳನೋಟಗಳನ್ನು ನೀಡಿದ ಪಿಎಂ ಮೋದಿ, ಶೈಕ್ಷಣಿಕ ಮಟ್ಟದಲ್ಲಿ ಪ್ರತಿಯೊಂದು ಕ್ಷೇತ್ರವನ್ನು ಒಳಗೊಳ್ಳುವಂತೆ ಸಲಹೆ ನೀಡಿದರು. ಕಾನೂನು ಶಾಲೆಗಳಲ್ಲಿ ಮಹಿಳೆಯರ ಸಂಖ್ಯೆಯ ಹೆಚ್ಚಳವು ಕಾನೂನು ವೃತ್ತಿಯಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಹೆಚ್ಚಿನ ಮಹಿಳೆಯರನ್ನು ಕಾನೂನು ಶಿಕ್ಷಣಕ್ಕೆ ಹೇಗೆ ತರಬಹುದು ಎಂಬುದರ ಕುರಿತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದರು.

ಕಾನೂನು ಶಿಕ್ಷಣವು, ಬದಲಾಗುತ್ತಿರುವ ಸಮಯ ಮತ್ತು ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಪ್ರಧಾನಿ, ವೈವಿಧ್ಯಮಯ ಅನುಭವ ಹೊಂದಿರುವ ಯುವ ಕಾನೂನು ತಜ್ಞರ ಅಗತ್ಯವನ್ನು ಒತ್ತಿ ಹೇಳಿದರು. ಅಪರಾಧಗಳು, ತನಿಖೆ ಮತ್ತು ಪುರಾವೆಗಳ ಇತ್ತೀಚಿನ ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳುವತ್ತ ಗಮನ ಹರಿಸುವುದು ಸಹಾಯಕವಾಗಲಿದೆ ಎಂದು ಅವರು ಹೇಳಿದರು.

ಹೆಚ್ಚಿನ ಅಂತರರಾಷ್ಟ್ರೀಯ ಮಾನ್ಯತೆಯ ಮೂಲಕ ಯುವ ಕಾನೂನು ವೃತ್ತಿಪರರಿಗೆ ಸಹಾಯ ಮಾಡುವ ಅಗತ್ಯವನ್ನು ಎತ್ತಿ ತೋರಿದ ಪ್ರಧಾನಿ ಮೋದಿ, ದೇಶಗಳ ನಡುವಿನ ವಿನಿಮಯ ಕಾರ್ಯಕ್ರಮಗಳನ್ನು ಬಲಪಡಿಸಲು ಕಾನೂನು ವಿಶ್ವವಿದ್ಯಾಲಯಗಳಿಗೆ ಕರೆ ನೀಡಿದರು. ಭಾರತದಲ್ಲಿ ವಿಧಿವಿಜ್ಞಾನಕ್ಕೆಂದೇ  ಮೀಸಲಾಗಿರುವ ವಿಶ್ವದ ಏಕೈಕ ವಿಶ್ವವಿದ್ಯಾಲಯದ ಉದಾಹರಣೆಯನ್ನು ನೀಡಿದ ಪ್ರಧಾನಿಯವರು, ವಿದ್ಯಾರ್ಥಿಗಳು, ಕಾನೂನು ಬೋಧಕರು ಮತ್ತು ವಿವಿಧ ದೇಶಗಳ ನ್ಯಾಯಾಧೀಶರು ಸಹ ಇಲ್ಲಿ ಕಿರು ಕೋರ್ಸ್ ಗಳನ್ನು ಅಭ್ಯಾಸ ಮಾಡಲು ಸಹಾಯಕವಾಗಿದೆ ಎಂದು ಹೇಳಿದರು. ನ್ಯಾಯ ವಿತರಣೆಗೆ ಸಂಬಂಧಿಸಿದ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆಯಲು ಅಭಿವೃದ್ಧಿಶೀಲ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಅವರು ಸಲಹೆ ನೀಡಿದರು. ಇದರಿಂದ ಇಂಟರ್ನ್‌ಶಿಪ್‌ಗಳನ್ನು ಹುಡುಕಲು ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತದೆ, ಆ ಮೂಲಕ ಕಾನೂನು ವ್ಯವಸ್ಥೆಗಳು ಅಂತರರಾಷ್ಟ್ರೀಯ ಉತ್ತಮ ಕಾರ್ಯವಿಧಾನಗಳನ್ನು ಕಲಿಯಲು ಅನುವಾಗುತ್ತದೆ ಎಂದರು.

ಭಾರತದ ಕಾನೂನು ವ್ಯವಸ್ಥೆಯು ವಸಾಹತುಶಾಹಿ ಕಾಲದಿಂದ ಬಂದಂಥದ್ದಾಗಿದೆ.  ಆದರೆ ಕಳೆದ ಕೆಲವು ವರ್ಷಗಳಲ್ಲಿ ದಾಖಲೆಯ ಸಂಖ್ಯೆಯ ಸುಧಾರಣೆಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಗಮನಸೆಳೆದರು. ಜನರಿಗೆ ಕಿರುಕುಳ ನೀಡಲು ಬಳಸಬಹುದಾಗಿದ್ದ ವಸಾಹತುಶಾಹಿ ಕಾಲದ,  ಸಾವಿರಾರು ಹಳೆಯ ಕಾನೂನುಗಳನ್ನು ರದ್ದುಪಡಿಸಿರುವುದನ್ನು ಅವರು ಉಲ್ಲೇಖಿಸಿದರು. ಇದರಿಂದ ಜೀವನವನ್ನು ಸಗಮತೆ ಮತ್ತು ವ್ಯವಹಾರದ ಸುಗಮತೆ ಹೆಚ್ಚಿದೆ ಎಂದು ಒತ್ತಿಹೇಳಿದರು. "ಪ್ರಸ್ತುತ ವಾಸ್ತವಗಳನ್ನು ಪ್ರತಿಬಿಂಬಿಸಲು ಭಾರತವು ಕಾನೂನುಗಳನ್ನು ಆಧುನೀಕರಿಸುತ್ತಿದೆ," ಎಂದು ಶ್ರೀ ಮೋದಿ ಹೇಳಿದರು. 3 ಹೊಸ ಶಾಸನಗಳು 100 ವರ್ಷಗಳಿಗಿಂತಲೂ ಹಳೆಯದಾದ ವಸಾಹತುಶಾಹಿ ಕ್ರಿಮಿನಲ್ ಕಾನೂನುಗಳನ್ನು ಬದಲಿಸಿವೆ ಎಂದು ಒತ್ತಿ ಹೇಳಿದರು. "ಈ ಮೊದಲು, ಶಿಕ್ಷೆ ಮತ್ತು ದಂಡದ ಅಂಶಗಳ ಮೇಲೆ ಗಮನ ಹರಿಸಲಾಗುತ್ತಿತ್ತು. ಈಗ, ನ್ಯಾಯವನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಲಾಗಿದೆ. ಆದ್ದರಿಂದ, ಜನರಲ್ಲಿ ಭಯಕ್ಕಿಂತಲೂ ಭರವಸೆಯ ಪ್ರಜ್ಞೆ ಮೂಡಿದೆ," ಎಂದು ಅವರು ಹೇಳಿದರು.

ತಂತ್ರಜ್ಞಾನವು ನ್ಯಾಯ ವ್ಯವಸ್ಥೆಗಳ ಮೇಲೂ ಸಕಾರಾತ್ಮಕ ಪರಿಣಾಮ ಬೀರಬಹುದು ಎಂದು ಪ್ರಧಾನಿ ಒತ್ತಿ ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ, ಭಾರತವು ಸ್ಥಳಗಳನ್ನು ನಕ್ಷೆ ಮಾಡಲು ಮತ್ತು ಗ್ರಾಮೀಣ ಜನರಿಗೆ ಸ್ಪಷ್ಟ ಆಸ್ತಿ ಕಾರ್ಡ್‌ಗಳನ್ನು ಒದಗಿಸಲು, ವಿವಾದಗಳನ್ನು ಕಡಿಮೆ ಮಾಡಲು, ದಾವೆಯ ಸಾಧ್ಯತೆಯನ್ನು ಕಡಿಮೆ ಮಾಡಲು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಡ್ರೋನ್‌ಗಳನ್ನು ಬಳಸಿದೆ. ಇದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಮಾಹಿತಿ ನೀಡಿದರು. ಡಿಜಿಟಲೀಕರಣವು ದೇಶದ ಅನೇಕ ನ್ಯಾಯಾಲಯಗಳಿಗೆ ಸಹಾಯ ಮಾಡಿದೆ, ಆನ್‌ಲೈನ್‌ನಲ್ಲಿ ವಿಚಾರಣೆಗಳಿಗೆ ಹಾಜರಾಗಲು ಸಹಾಯ ಮಾಡಿದೆ. ಇದು ದೂರದ ಸ್ಥಳಗಳಿಂದ ಸಹ ಜನರಿಗೆ ನ್ಯಾಯವನ್ನು ಪಡೆಯಲು ಸಹಾಯ ಮಾಡಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಭಾರತವು ತನ್ನ ಕಲಿಕೆಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆ ಮತ್ತು ಇತರ ದೇಶಗಳಲ್ಲಿ ಇದೇ ರೀತಿಯ ಉಪಕ್ರಮಗಳ ಬಗ್ಗೆ ಕಲಿಯಲು ನಾವು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದರು.

ಕೊನೆಯದಾಗಿ, ನ್ಯಾಯದ ಬಗ್ಗೆ ಉತ್ಸಾಹವುಳ್ಳ ಸಮಾನ ಮೌಲ್ಯವು  ರಾಷ್ಟ್ರಗಳ ನಡುವೆ ಇದ್ದರೆ, ನ್ಯಾಯ ವಿತರಣೆಯಲ್ಲಿನ ಪ್ರತಿಯೊಂದು ಸವಾಲನ್ನು ಪರಿಹರಿಸಬಹುದು ಎಂದು ಪ್ರಧಾನಿ ಪ್ರತಿಪಾದಿಸಿದರು. "ಈ ಸಮ್ಮೇಳನವು ಈ ಮನೋಭಾವವನ್ನು ಬಲಪಡಿಸಲಿ. ಪ್ರತಿಯೊಬ್ಬರಿಗೂ ಸಕಾಲಿಕ ನ್ಯಾಯ ದೊರಕುವಂತಹ ಮತ್ತು ಯಾರೂ ಹಿಂದೆ ಉಳಿಯದಂತಹ ಜಗತ್ತನ್ನು ನಿರ್ಮಿಸೋಣ", ಎಂದು ಹೇಳುವ ಮೂಲಕ ಶ್ರೀ ಮೋದಿ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ಡಾ. ಡಿ.ವೈ.ಚಂದ್ರಚೂಡ್, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್, ಭಾರತದ ಅಟಾರ್ನಿ ಜನರಲ್ ನ್ಯಾ. ಸೂರ್ಯಕಾಂತ್, ಭಾರತದ ಸಾಲಿಸಿಟರ್ ಜನರಲ್‌ಗಳಾದ ಡಾ.ಆರ್.ವೆಂಕಟರಮಣಿ, ಶ್ರೀ ತುಷಾರ್ ಮೆಹ್ತಾ ಹಾಗೂ ಕಾಮನ್ವೆಲ್ತ್ ಕಾನೂನು ಶಿಕ್ಷಣ ಸಂಘದ ಅಧ್ಯಕ್ಷ ಪ್ರೊ.ಡಾ.ಎಸ್.ಶಿವಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಈ ಸಮ್ಮೇಳನದಲ್ಲಿ ಏಷ್ಯಾ-ಪೆಸಿಫಿಕ್, ಆಫ್ರಿಕಾ ಮತ್ತು ಕೆರಿಬಿಯನ್ ವ್ಯಾಪ್ತಿಯ ಕಾಮನ್ವೆಲ್ತ್ ರಾಷ್ಟ್ರಗಳ ಅಟಾರ್ನಿ ಜನರಲ್‌ಗಳು ಮತ್ತು ಸಾಲಿಸಿಟರ್‌ಗಳು ವಿವಿಧ ಅಂತರರಾಷ್ಟ್ರೀಯ ನಿಯೋಗಗಳೊಂದಿಗೆ ಭಾಗವಹಿಸಿದ್ದರು. ಕಾಮನ್ವೆಲ್ತ್ ಕಾನೂನು ವೃತ್ತಿಪರರ ವಿವಿಧ ಮಧ್ಯಸ್ಥಗಾರರ ನಡುವೆ ಸಂವಾದಕ್ಕೆ ವೇದಿಕೆಯನ್ನು ಒದಗಿಸುವ ಮೂಲಕ ಸಮ್ಮೇಳನವು ಅನನ್ಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಕಾನೂನು ಶಿಕ್ಷಣ ಮತ್ತು ಬಹುರಾಷ್ಟ್ರೀಯ ನ್ಯಾಯ ವಿತರಣೆಯಲ್ಲಿನ ಸವಾಲುಗಳನ್ನು ಎದುರಿಸಲು ಸಮಗ್ರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಅಟಾರ್ನಿಗಳು ಮತ್ತು ಸಾಲಿಸಿಟರ್ ಜನರಲ್‌ಗಳಿಗಾಗಿ ವಿನ್ಯಾಸಗೊಳಿಸಲಾದ ವಿಶೇಷ ದುಂಡು ಮೇಜಿನ ಸಮ್ಮೇಳನವೂ ಇದರ ಭಾಗವಾಗಿದೆ.

 

***



(Release ID: 2002925) Visitor Counter : 46