ಪ್ರಧಾನ ಮಂತ್ರಿಯವರ ಕಛೇರಿ

​​​​​​​ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಗಳ ಸಂವಾದ

ದೇಶಾದ ನಾನಾ ಭಾಗಗಳಿಂದ ಸಾವಿರಾರು ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು

"ವಿಕಸಿತ ಭಾರತಸಂಕಲ್ಪ ಯಾತ್ರೆ' ಸರ್ಕಾರಿ ಯೋಜನೆಗಳ ಪರಿಪೂರ್ಣ ಜಾರಿಯ ಮೇಲೆ ಗಮನ ಕೇಂದ್ರೀಕರಿಸಿದೆ"

"ನಾನು ನಿರಂತರವಾಗಿ ಸರಕಾರದ ಸೌಲಭ್ಯಗಳು ಹಾಗೂ ಅವಕಾಶಗಳಿಂದ ಹೊರಗುಳಿದ ಜನರನ್ನು ಹುಡುಕುತ್ತಿದ್ದೇನೆ"

"ಮೋದಿ ಅವರ ಗ್ಯಾರಂಟಿಯ ಗಾಡಿ ಗಾಡಿ ಎಲ್ಲಿಗೆ ಹೋದರೂ ಅದು ಜನರ ವಿಶ್ವಾಸವನ್ನು ಹೆಚ್ಚಿಸುತ್ತಿದೆ ಮತ್ತು ಜನರ ಭರವಸೆಗಳನ್ನು ಈಡೇರಿಸುತ್ತಿದೆ"

"ನಾನು 2 ಕೋಟಿ ʻಲಕ್ಷಾಧಿಪತಿ ದೀದಿʼಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇನೆ”

"ಒಂದು ಜಿಲ್ಲೆ, ಒಂದು ಉತ್ಪನ್ನ" ಉಪಕ್ರಮವು ಅನೇಕರ ಜೀವನದಲ್ಲಿ ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ"

"ಸಹಕಾರಿ ಸಂಸ್ಥೆಗಳನ್ನು ಭಾರತದ ಗ್ರಾಮೀಣ ಜೀವನದ ಸದೃಢ ಬೆನ್ನೆಲುಬಾಗಿ ಪರಿವರ್ತಿಸುವುದು ನಮ್ಮ ಪ್ರಯತ್ನವಾಗಿದೆ"

Posted On: 27 DEC 2023 3:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ದೇಶಾದ ನಾನಾ ಭಾಗಗಳಿಂದ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಸಾವಿರಾರು ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, "ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದೊಂದಿಗೆ ಸಂಪರ್ಕ ಸಾಧಿಸುವ ಈ ಅಭಿಯಾನವು ನಿರಂತರವಾಗಿ ವಿಸ್ತರಿಸುತ್ತಿದೆ. ʻವಿಕಾಸ ಭಾರತ ಸಂಕಲ್ಪ ಯಾತ್ರೆʼ ಪ್ರಾರಂಭವಾಗಿ 50 ದಿನಗಳು ಸಹ ಕಳೆದಿಲ್ಲ, ಆದರೆ ಈಗಾಗಲೇ ಈ ಯಾತ್ರೆಯು 2.25 ಲಕ್ಷ ಗ್ರಾಮಗಳನ್ನು ತಲುಪಿದೆ. ಇದು ಸ್ವತಃ ಒಂದು ದಾಖಲೆಯಾಗಿದೆ," ಎಂದು ಹೇಳಿದರು.  ಈ ನಿಟ್ಟಿನಲ್ಲಿ ಪ್ರಧಾನಿಯವರು ಎಲ್ಲರಿಗೂ, ವಿಶೇಷವಾಗಿ ಮಹಿಳೆಯರು ಮತ್ತು ಯುವಕರಿಗೆ ಧನ್ಯವಾದ ಅರ್ಪಿಸಿದರು. "ಕೆಲವು ಕಾರಣಗಳಿಂದ ಭಾರತ ಸರ್ಕಾರದ ಯೋಜನೆಗಳಿಂದ ವಂಚಿತರಾಗಿರುವ ವ್ಯಕ್ತಿಯನ್ನು ತಲುಪುವುದು ʻವಿಕಾಸ ಭಾರತ ಸಂಕಲ್ಪ ಯಾತ್ರೆʼಯ ಉದ್ದೇಶವಾಗಿದೆ" ಎಂದು ಪ್ರಧಾನಿ ವಿವರಿಸಿದರು. ಜನರನ್ನು ತಲುಪುವ ಈ ಸಕ್ರಿಯಾತ್ಮಕ ಸಂಪರ್ಕ ಅಭಿಯಾನವು ಸರ್ಕಾರದ ಯೋಜನೆಗಳು ಎಲ್ಲರಿಗೂ ಲಭ್ಯವಾಗುವುದನ್ನು ಮತ್ತು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಲಭ್ಯವಾಗುವುದನ್ನು ಖಾತರಿಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು. "ನಾನು ಸರಕಾರಿ ಯೋಜನೆಗಳ ವ್ಯಾಪ್ತಿಯಿಂದ ಮತ್ತು ಅವಕಾಶಗಳಿಂದ ಹೊರಗುಳಿದ ಜನರನ್ನು ಹುಡುಕುತ್ತಿದ್ದೇನೆ," ಎಂದು ಪ್ರಧಾನಿ ಹೇಳಿದರು. ಫಲಾನುಭವಿಗಳಲ್ಲಿನ ಅಭೂತಪೂರ್ವ ವಿಶ್ವಾಸವನ್ನು ಉಲ್ಲೇಖಿಸಿದ ಪ್ರಧಾನಿ, "ಕಳೆದ 10 ವರ್ಷಗಳಲ್ಲಿ ತಮ್ಮ ಜೀವನದಲ್ಲಿ ಉಂಟಾದ ಬದಲಾವಣೆಗಳ ಬಗ್ಗೆ ದೇಶದ ಪ್ರತಿಯೊಬ್ಬ ಫಲಾನುಭವಿ ಬಳಿಯೂ ಒಂದೊಂದು ಕಥೆ ಇದೆ. ಇವೆಲ್ಲವೂ ಧೈರ್ಯದಿಂದ ತುಂಬಿರುವ ಕಥೆಗಳಾಗಿವೆ ಎಂದರು.

ಈ ಪ್ರಯೋಜನಗಳು ಫಲಾನುಭವಿಗಳನ್ನು ತಮ್ಮ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರೇರೇಪಿಸುತ್ತಿವೆ ಎಂದು ಪ್ರಧಾನಿ ಹೇಳಿದರು. "ಇಂದು, ದೇಶದ ಲಕ್ಷಾಂತರ ಫಲಾನುಭವಿಗಳು ತಾವು ಮುಂದೆ ಸಾಗಲು ಸರ್ಕಾರದ ಯೋಜನೆಗಳನ್ನು ಮಾಧ್ಯಮವಾಗಿ ಬಳಸುತ್ತಿದ್ದಾರೆ" ಎಂದು ಅವರು ಹೇಳಿದರು.

ʻಮೋದಿ ಅವರ ಗ್ಯಾರಂಟಿಯ ಗಾಡಿʼ ಎಲ್ಲಿಗೇ ಹೋದರೂ ಅದು ಜನರ ವಿಶ್ವಾಸವನ್ನು ಹೆಚ್ಚಿಸುತ್ತಿದೆ ಮತ್ತು ಜನರ ಭರವಸೆಗಳನ್ನು ಈಡೇರಿಸುತ್ತಿದೆ ಎಂದು ಅವರು ಹೇಳಿದರು. ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಅವಧಿಯಲ್ಲಿ ʻಉಜ್ವಲʼ ಅನಿಲ ಸಂಪರ್ಕಕ್ಕಾಗಿ 4.5 ಲಕ್ಷ ಹೊಸ ಅರ್ಜಿಗಳು ಸಲ್ಲಿಕೆಯಾಗಿವೆ, 1 ಕೋಟಿ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ, 1.25 ಕೋಟಿ ಆರೋಗ್ಯ ತಪಾಸಣೆ ನಡೆಸಲಾಗಿದೆ, 70 ಲಕ್ಷ ಜನರಿಗೆ ಕ್ಷಯರೋಗ ಪರೀಕ್ಷೆ ಮಾಡಲಾಗಿದೆ, 15 ಲಕ್ಷ ʻಕುಡಗೋಲು ಕೋಶ ರಕ್ತಹೀನತೆʼ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಏಕಕಾಲದಲ್ಲಿ ʻಎಬಿಎಚ್ಎʼ ಕಾರ್ಡ್‌ಳನ್ನು ವಿತರಿಸುವುದರಿಂದ ಫಲಾನುಭವಿಗಳ ವೈದ್ಯಕೀಯ ದಾಖಲೆಗಳು ಸೃಷ್ಟಿಯಾಗುತ್ತವೆ ಎಂದು ಅವರು ಮಾಹಿತಿ ನೀಡಿದರು. "ಇದು ಇಡೀ ದೇಶದಲ್ಲಿ ಆರೋಗ್ಯದ ಬಗ್ಗೆ ಹೊಸ ಜಾಗೃತಿಯನ್ನು ಹರಡುತ್ತದೆ" ಎಂದು ಪ್ರಧಾನಿ ಹೇಳಿದರು.

ಅನೇಕ ಮಂದಿ ಹೊಸಬರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಜವಾಬ್ದಾರಿಯನ್ನು ಒತ್ತಿ ಹೇಳಿದರು. ಗ್ರಾಮ, ವಾರ್ಡ್, ನಗರ ಮತ್ತು ಪ್ರದೇಶದ ಪ್ರತಿಯೊಬ್ಬ ಅರ್ಹ ವ್ಯಕ್ತಿಯನ್ನು ಗುರುತಿಸುವಂತೆ ಪ್ರಧಾನಿ ಸೂಚಿಸಿದರು.

ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲು, ಭಾರತ ಸರ್ಕಾರವು ಹಳ್ಳಿಗಳಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗವನ್ನು ಒದಗಿಸಲು ಬೃಹತ್ ಅಭಿಯಾನವನ್ನು ನಡೆಸುತ್ತಿದೆ. ಕಳೆದ ಹಲವು ವರ್ಷಗಳಲ್ಲಿ, ದೇಶದಲ್ಲಿ ಸುಮಾರು 10 ಕೋಟಿ ಸಹೋದರಿಯರು, ಹೆಣ್ಣುಮಕ್ಕಳು ಮತ್ತು ದೀದಿಗಳು ಸ್ವಸಹಾಯ ಗುಂಪುಗಳನ್ನು ಸೇರಿದ್ದಾರೆ. ಈ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಬ್ಯಾಂಕುಗಳು 7.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಸಾಲನವನ್ನು ನೀಡಿವೆ. "ಈ ಅಭಿಯಾನವನ್ನು ಮತ್ತಷ್ಟು ವಿಸ್ತರಿಸಲು, ಮುಂದಿನ ಮೂರು ವರ್ಷಗಳಲ್ಲಿ 2 ಕೋಟಿ ʻಲಕ್ಷಾಧಿಪತಿ ದೀದಿʼಗಳನ್ನು ಸೃಷ್ಟಿಸುವ ಗುರಿಯನ್ನು ನಾನು ಹೊಂದಿದ್ದೇನೆ," ಎಂದು ಪ್ರಧಾನಿ ಘೋಷಿಸಿದರು. ಗ್ರಾಮೀಣ ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುವ ʻನಮೋ ಡ್ರೋನ್ ದೀದಿʼ ಯೋಜನೆಯನ್ನು ಅವರು ಉಲ್ಲೇಖಿಸಿದರು.

ಸಣ್ಣ ರೈತರನ್ನು ಸಂಘಟಿಸುವ ಅಭಿಯಾನದ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ʻಕೃಷಿ ಉತ್ಪನ್ನ ಸಂಸ್ಥೆಗಳು (ಎಫ್‌ಪಿಒ) ಮತ್ತು ʻಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘʼಗಳಂತಹ(ಪಿಎಸಿ) ಸಹಕಾರಿ ಉದ್ಯಮಗಳ ಬಗ್ಗೆ ಮಾತನಾಡಿದರು. "ಸಹಕಾರ ವಲಯವು ಭಾರತದ ಗ್ರಾಮೀಣ ಜೀವನದ ಸದೃಢ ಭಾಗವಾಗಿ ಹೊರಹೊಮ್ಮುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ. ಇಲ್ಲಿಯವರೆಗೆ ನಾವು ಹಾಲು ಮತ್ತು ಕಬ್ಬು ಕ್ಷೇತ್ರಗಳಲ್ಲಿನ ಸಹಕಾರದ ಪ್ರಯೋಜನಗಳನ್ನು ನೋಡಿದ್ದೇವೆ. ಈಗ ಇದನ್ನು ಕೃಷಿಯ ಇತರ ಕ್ಷೇತ್ರಗಳು ಮತ್ತು ಮೀನು ಉತ್ಪಾದನೆಯಂತಹ ಕ್ಷೇತ್ರಗಳಿಗೂ ವಿಸ್ತರಿಸಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ 2 ಲಕ್ಷ ಹಳ್ಳಿಗಳಲ್ಲಿ ಹೊಸ ʻಪಿಎಸಿʼಗಳನ್ನು ಸ್ಥಾಪಿಸುವ ಗುರಿಯೊಂದಿಗೆ ನಾವು ಮುಂದುವರಿಯುತ್ತಿದ್ದೇವೆ. ಹೈನುಗಾರಿಕೆ ಮತ್ತು ಸಂಗ್ರಹಣೆಯಲ್ಲಿ ಸಹಕಾರಿ ಪರಿಹಾರಗಳನ್ನು ಉತ್ತೇಜಿಸುವ ಪ್ರಸ್ತಾಪಗಳ ಬಗ್ಗೆಯೂ ಪ್ರಧಾನಿ ಮಾಹಿತಿ ನೀಡಿದರು. ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳನ್ನು ಬಲಪಡಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಪ್ರಧಾನಮಂತ್ರಿಯವರು ʻಒಂದು ಜಿಲ್ಲೆ ಒಂದು ಉತ್ಪನ್ನʼ ಯೋಜನೆಯ ಬಗ್ಗೆಯೂ ಪ್ರಸ್ತಾಪಿಸಿದರು. 'ವೋಕಲ್‌ ಫಾರ್‌ ಲೋಕಲ್‌' ಅಭಿಯಾನವನ್ನು ಪ್ರೇರೇಪಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು. ʻಮೋದಿ ಅವರ ಗ್ಯಾರಂಟಿಯ ಗಾಡಿʼ ಸ್ಥಳೀಯ ಉತ್ಪನ್ನಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದೆ ಮತ್ತು ಈ ಉತ್ಪನ್ನಗಳನ್ನು ʻಜಿಇಎಂ ಪೋರ್ಟಲ್ʼನಲ್ಲಿಯೂ ನೋಂದಾಯಿಸಬಹುದು ಎಂದು ಅವರು ಹೇಳಿದರು. ʻಮೋದಿ ಅವರ ಗ್ಯಾರಂಟಿಯ ಗಾಡಿʼಯ ನಿರಂತರ ಯಶಸ್ಸನ್ನು ಆಶಿಸುವ ಮೂಲಕ ಪ್ರಧಾನಿಯವರು ಮಾತು ಮುಗಿಸಿದರು.

ಹಿನ್ನೆಲೆ

2023ರ ನವೆಂಬರ್ 15ರಂದು ʻವಿಕಾಸ ಭಾರತ ಸಂಕಲ್ಪ ಯಾತ್ರೆʼಗೆ ಚಾಲನೆ ನೀಡಲಾಗಿದ್ದು, ಅಂದಿನಿಂದ ಪ್ರಧಾನಮಂತ್ರಿಯವರು ದೇಶಾದ್ಯಂತ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಮೂರು ಬಾರಿ (ನವೆಂಬರ್ 30, ಡಿಸೆಂಬರ್ 9 ಮತ್ತು ಡಿಸೆಂಬರ್ 16) ಸಂವಾದ ನಡೆದಿದೆ. ಅಲ್ಲದೆ, ಮಂತ್ರಿಯವರು ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸತತ ಎರಡು ದಿನಗಳ ಕಾಲ (ಡಿಸೆಂಬರ್ 17-18) ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದರು.

ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯನ್ನು ದೇಶಾದ್ಯಂತ ಕೈಗೊಳ್ಳಲಾಗುತ್ತಿದ್ದು, ಕೇಂದ್ರ ಸರಕಾರದ ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸುವುದು ಇದರ ಗುರಿಯಾಗಿದೆ.

 

***



(Release ID: 1990924) Visitor Counter : 96