ಪ್ರಧಾನ ಮಂತ್ರಿಯವರ ಕಛೇರಿ

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳನ್ನು ಉದ್ದೇಶಿಸಿ ಪ್ರಧಾನಿಯವರ ಭಾಷಣ


“'ಮೋದಿ ಕಿ ಗ್ಯಾರಂಟಿ' ವಾಹನ ಈಗ ದೇಶದ ಎಲ್ಲಾ ಭಾಗಗಳನ್ನು ತಲುಪುತ್ತಿದೆ”

“ಮೋದಿ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದರೂ, ಇಂದು ದೇಶವಾಸಿಗಳು ಅದರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂಬುದು ಸತ್ಯ”

“ದೇಶದ ನೂರಾರು ಸಣ್ಣ ನಗರಗಳು ಅಭಿವೃದ್ಧಿ ಹೊಂದಿದ ಭಾರತದ ಭವ್ಯ ಸೌಧವನ್ನು ಬಲಪಡಿಸಲಿವೆ”

"ಇತರರಿಂದ ನಿರೀಕ್ಷೆಗಳು ಕೊನೆಗೊಂಡಾಗ ಮೋದಿಯವರ ಗ್ಯಾರಂಟಿ ಪ್ರಾರಂಭವಾಗುತ್ತದೆ"

"ನಗರ ಪ್ರದೇಶದ ಕುಟುಂಬಗಳ ಹಣ ಉಳಿತಾಯಕ್ಕೆ ಸರ್ಕಾರ ಬದ್ಧವಾಗಿದೆ"

"ಕಳೆದ 10 ವರ್ಷಗಳಲ್ಲಿ ಆಧುನಿಕ ಸಾರ್ವಜನಿಕ ಸಾರಿಗೆಗಾಗಿ ಮಾಡಿದ ಕೆಲಸವು ಅನುಪಮವಾದುದು"

Posted On: 16 DEC 2023 6:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಐದು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡುವ ಅವಕಾಶವನ್ನು ಪಡೆದಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು ಮತ್ತು 'ಮೋದಿ ಕಿ ಗ್ಯಾರಂಟಿ' ವಾಹನವು ಈಗ ದೇಶದ ಎಲ್ಲಾ ಭಾಗಗಳನ್ನು ತಲುಪುತ್ತಿದೆ ಎಂದು ಹೇಳಿದರು. ತನ್ನ ಒಂದು ತಿಂಗಳ ಪ್ರಯಾಣದಲ್ಲಿ, ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಸಾವಿರಾರು ಹಳ್ಳಿಗಳು ಮತ್ತು ಸಣ್ಣ ನಗರಗಳು ಹಾಗೂ ಪಟ್ಟಣಗಳನ್ನು ಒಳಗೊಂಡಂತೆ 1500 ನಗರಗಳನ್ನು ತಲುಪಿದೆ ಎಂದು ಪ್ರಧಾನಿ ತಿಳಿಸಿದರು. ಚುನಾವಣಾ ಸಮಯದಲ್ಲಿ ಮಾದರಿ ನೀತಿ ಸಂಹಿತೆಯಿಂದಾಗಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಮೊದಲೇ ಪ್ರಾರಂಭಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ ಪ್ರಧಾನಿ, ಐದು ರಾಜ್ಯಗಳಲ್ಲಿ ಹೊಸದಾಗಿ ಚುನಾಯಿತ ಸರ್ಕಾರಗಳು ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ತ್ವರಿತವಾಗಿ ವಿಸ್ತರಿಸುವಂತೆ ಒತ್ತಾಯಿಸಿದರು.

ಪ್ರಧಾನಮಂತ್ರಿಯವರು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಜನಾಂದೋಲನ ಆಯಾಮವನ್ನು ಒತ್ತಿ ಹೇಳಿದರು. ಮೋದಿ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದರೂ, ಇಂದು ದೇಶವಾಸಿಗಳು ಅದರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂಬುದು ಸತ್ಯ ಎಂದರು. ಫಲಾನುಭವಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ಅವರು ‘ಮೋದಿ ಕಿ ಗ್ಯಾರಂಟಿ ಕಿ ಗಾಡಿʼಯನ್ನು ಸ್ವಾಗತಿಸಲು ಜನರ ಉತ್ಸಾಹ ಮತ್ತು ಸ್ಪರ್ಧೆಯ ಬಗ್ಗೆ ಗಮನ ಸೆಳೆದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯೊಂದಿಗೆ ತಮಗೆ ಇದು ನಾಲ್ಕನೇ ಕಾರ್ಯಕ್ರಮ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಗ್ರಾಮೀಣ ಪ್ರದೇಶದ ಜನರೊಂದಿಗೆ ನಡೆಸಿದ ಸಂವಾದವನ್ನು ಪ್ರಸ್ತಾಪಿಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಸಹಜ ಕೃಷಿ, ಗ್ರಾಮೀಣ ಆರ್ಥಿಕತೆಯ ಅಂಶಗಳು ಮತ್ತು ಭಾರತದ ಹಳ್ಳಿಗಳನ್ನು ಅಭಿವೃದ್ಧಿಪಡಿಸುವ ಕುರಿತು ಮಾತನಾಡಿದರು. ಇಂದಿನ ಕಾರ್ಯಕ್ರಮದಲ್ಲಿ ನಗರ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿರುವುದನ್ನು ಗಮನಿಸಿದ ಪ್ರಧಾನಿ ಮೋದಿ, ಇಂದಿನ ಗಮನವು ನಗರಾಭಿವೃದ್ಧಿಯ ಕಡೆಗೆ ಇರುತ್ತದೆ ಎಂದು ಹೇಳಿದರು.

 “ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದಲ್ಲಿ ನಮ್ಮ ನಗರಗಳು ಬಹುದೊಡ್ಡ ಪಾತ್ರವನ್ನು ಹೊಂದಿವೆ. ಸ್ವಾತಂತ್ರ್ಯಾನಂತರ ಬಹುಕಾಲದವರೆಗೆ ಏನೇ ಅಭಿವೃದ್ಧಿ ನಡೆದರೂ ಅದರ ವ್ಯಾಪ್ತಿ ದೇಶದ ಕೆಲವು ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ನಾವು ದೇಶದ 2 ಮತ್ತು 3 ನೇ ಶ್ರೇಣಿ ನಗರಗಳ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದೇವೆ. ದೇಶದ ನೂರಾರು ಸಣ್ಣ ನಗರಗಳು ಅಭಿವೃದ್ಧಿ ಹೊಂದಿದ ಭಾರತದ ಭವ್ಯ ಸೌಧವನ್ನು ಬಲಪಡಿಸಲಿವೆ.” ಎಂದು ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ, ಅವರು ಅಮೃತ್ ಮಿಷನ್ ಮತ್ತು ಸ್ಮಾರ್ಟ್ ಸಿಟಿ ಮಿಷನ್‌ ಗಳ ಉದಾಹರಣೆಗಳನ್ನು ನೀಡಿದರು, ಅದು ಸಣ್ಣ ನಗರಗಳಲ್ಲಿ ಮೂಲ ಸೌಕರ್ಯಗಳನ್ನು ನವೀಕರಿಸುತ್ತಿದೆ, ಈ ನವೀಕರಣಗಳು ಸುಲಭ ಜೀವನ, ಸುಗಮ ಪ್ರಯಾಣ ಮತ್ತು ಸುಲಭ ವ್ಯಾಪಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಬಡವರು, ನವ ಮಧ್ಯಮ ವರ್ಗದವರು, ಮಧ್ಯಮ ವರ್ಗದವರು ಅಥವಾ ಶ್ರೀಮಂತರು ಎಲ್ಲರೂ ಈ ಸೌಲಭ್ಯಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

"ಕುಟುಂಬದ ಸದಸ್ಯರಾಗಿ ನಿಮ್ಮ ಸಮಸ್ಯೆಗಳನ್ನು ಕಡಿಮೆ ಮಾಡುವತ್ತ ಸರ್ಕಾರವು ಗಮನಹರಿಸಿದೆ" ಎಂದು ಪ್ರಧಾನಿ ಹೇಳಿದರು. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು ಒದಗಿಸಿದ ನೆರವನ್ನು ಪ್ರಧಾನಿ ಪ್ರಸ್ತಾಪಿಸಿದರು. 20 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ವಿತರಣೆ, ಉಚಿತ ಕೋವಿಡ್ ಲಸಿಕೆ, ಬಡ ಕುಟುಂಬಗಳಿಗೆ ಉಚಿತ ಪಡಿತರ ಮತ್ತು ಸಣ್ಣ ವ್ಯಾಪಾರಗಳಿಗೆ ಲಕ್ಷಾಂತರ ಕೋಟಿ ಮೌಲ್ಯದ ಸಹಾಯವನ್ನು ಪ್ರಸ್ತಾಪಿಸಿದರು. "ಇತರರಿಂದ ನಿರೀಕ್ಷೆಗಳು ಕೊನೆಗೊಂಡಾಗ ಮೋದಿಯವರ ಗ್ಯಾರಂಟಿ ಪ್ರಾರಂಭವಾಗುತ್ತದೆ" ಎಂದು ಪ್ರಧಾನಿ ಹೇಳಿದರು. ಬೀದಿ ಬದಿ ವ್ಯಾಪಾರಿಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸುವ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು, ಅವರು ಈಗ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ ಸುಲಭವಾಗಿ ಸಾಲವನ್ನು ಪಡೆಯಬಹುದು. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಇದುವರೆಗೆ 50 ಲಕ್ಷಕ್ಕೂ ಹೆಚ್ಚು ಜನರು ಬ್ಯಾಂಕ್‌ ಸಹಾಯವನ್ನು ಪಡೆದಿದ್ದಾರೆ ಎಂದು ತಿಳಿಸಿದ ಪ್ರಧಾನಮಂತ್ರಿ ಅವರು, ವಿ ಬಿ ಎಸ್‌ ವೈ ಮೂಲಕ 1.25 ಲಕ್ಷ ಜನರು ಪ್ರಧಾನಮಂತ್ರಿ ಸ್ವನಿಧಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು. "ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಫಲಾನುಭವಿಗಳಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಜನರು ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಸದಸ್ಯರಾಗಿದ್ದು, ಸುಮಾರು 45 ಪ್ರತಿಶತ ಮಹಿಳಾ ಫಲಾನುಭವಿಗಳು" ಎಂದು ಹೇಳಿದರು. ಬ್ಯಾಂಕ್‌ ಗೆ ಯಾವುದೇ ಗ್ಯಾರಂಟಿ ಹೊಂದಿರದವರಿಗೆ ಮೋದಿಯವರ ಗ್ಯಾರಂಟಿ ಉಪಯುಕ್ತವಾಗಿದೆ ಎಂದು ಪ್ರಧಾನಿ ಹೇಳಿದರು.

ನಗರವಾಸಿಗಳ ಸಾಮಾಜಿಕ ಭದ್ರತೆಗೆ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ನಗರ ಪ್ರದೇಶದ ಜನರಿಗೆ ವಿಸ್ತರಿಸುತ್ತಿರುವ ಭದ್ರತಾ ಜಾಲದ ಕುರಿತು ಅವರು ವಿವರಿಸಿದರು. ಅಟಲ್ ಪಿಂಚಣಿ ಯೋಜನೆಯು 6 ಕೋಟಿ ಚಂದಾದಾರರನ್ನು ಹೊಂದಿದ್ದು, ಇದು 60 ವರ್ಷ ವಯಸ್ಸಿನ ನಂತರ 5 ಸಾವಿರ ರೂಪಾಯಿ ಮಾಸಿಕ ಪಿಂಚಣಿಯನ್ನು ಖಾತರಿಪಡಿಸುತ್ತದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಮತ್ತು ಜೀವನ ಜ್ಯೋತಿ ಯೋಜನೆಯು 2 ಲಕ್ಷ ರೂಪಾಯಿಗಳವರೆಗೆ ಜೀವ ರಕ್ಷಣೆಯನ್ನು ಒದಗಿಸುತ್ತಿದೆ. ಈ ಯೋಜನೆಗಳ ಅಡಿಯಲ್ಲಿ ಈಗಾಗಲೇ 17 ಸಾವಿರ ಕೋಟಿ ರೂ. ಮೌಲ್ಯದ ಕ್ಲೈಮುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪ್ರತಿಯೊಬ್ಬರೂ ಈ ಯೋಜನೆಗಳಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ತಮ್ಮ ಸುರಕ್ಷಾ ಕವಚವನ್ನು ಬಲಪಡಿಸಿಕೊಳ್ಳಬೇಕು ಎಂದು ಅವರು ವಿನಂತಿಸಿದರು.

"ಆದಾಯ ತೆರಿಗೆಯಾಗಿರಲಿ ಅಥವಾ ಕಡಿಮೆ ವೆಚ್ಚದ ಚಿಕಿತ್ಸೆಯಾಗಿರಲಿ ನಗರ ಕುಟುಂಬಗಳಿಗೆ ಹಣವನ್ನು ಉಳಿಸಲು ಸರ್ಕಾರ ಬದ್ಧವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಆಯುಷ್ಮಾನ್ ಭಾರತ್ ಯೋಜನೆ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಆಯುಷ್ಮಾನ್ ಕಾರ್ಡ್ ನಿಂದಾಗಿ ಕೋಟ್ಯಂತರ ನಗರ ಬಡವರಿಗೆ ವೈದ್ಯಕೀಯ ವೆಚ್ಚದಲ್ಲಿ 1 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿದೆ ಎಂದರು. ಜನೌಷಧಿ ಕೇಂದ್ರಗಳಲ್ಲಿ 80 ಪ್ರತಿಶತದಷ್ಟು ರಿಯಾಯಿತಿಯಲ್ಲಿ ಔಷಧಿಗಳು ಲಭ್ಯವಿವೆ, ಇದರಿಂದಾಗಿ ನಗರಗಳಲ್ಲಿ ವಾಸಿಸುವ ಬಡ ಮತ್ತು ಮಧ್ಯಮ ವರ್ಗದವರಿಗೆ 25,000 ಕೋಟಿಗೂ ಹೆಚ್ಚು ಹಣವನ್ನು ಉಳಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು. ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 25,000 ಕ್ಕೆ ಹೆಚ್ಚಿಸುವ ಸರ್ಕಾರದ ನಿರ್ಧಾರದ ಬಗ್ಗೆಯೂ ಪ್ರಧಾನಿ ತಿಳಿಸಿದರು. ಉಜಾಲಾ ಯೋಜನೆಯಡಿಯಲ್ಲಿ ದೇಶದಲ್ಲಿ ಎಲ್‌ ಇ ಡಿ ಬಲ್ಬ್‌ ಗಳ ಕ್ರಾಂತಿಯನ್ನು ಶ್ರೀ ಮೋದಿ ಪ್ರಸ್ತಾಪಿಸಿದರು. ಇದು ನಗರ ಕುಟುಂಬಗಳಿಗೆ ವಿದ್ಯುತ್ ಬಿಲ್‌ ಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದರು.

ಒಂದು ರಾಷ್ಟ್ರ, ಒಂದು ಪಡಿತರ ಚೀಟಿಯು ವಲಸೆ ಕಾರ್ಮಿಕರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಪ್ರಧಾನಿ ಪ್ರಸ್ತಾಪಿಸಿದರು. ಕಳೆದ 9 ವರ್ಷಗಳಲ್ಲಿ ಬಡ ಕುಟುಂಬಗಳಿಗೆ 4 ಕೋಟಿಗೂ ಹೆಚ್ಚು ಮನೆಗಳನ್ನು ನೀಡಲಾಗಿದೆ, ಅದರಲ್ಲಿ ಒಂದು ಕೋಟಿ ಮನೆಗಳನ್ನು ನಗರದ ಬಡ ಫಲಾನುಭವಿಗಳಿಗೆ ಒದಗಿಸಲಾಗಿದೆ ಎಂದು ಅವರು ಹೇಳಿದರು. "ನಮ್ಮ ಸರ್ಕಾರವು ಮಧ್ಯಮ ವರ್ಗದ ಕುಟುಂಬಗಳಿಗೆ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ" ಎಂದು ಅವರು ಹೇಳಿದರು, ಸಾಲಾಧಾರಿತ ಸಬ್ಸಿಡಿ ಯೋಜನೆ, ಸ್ವಂತ ಮನೆಗಳಿಲ್ಲದವರಿಗೆ ಸಮಂಜಸವಾದ ಬಾಡಿಗೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ಮತ್ತು ವಲಸೆ ಕಾರ್ಮಿಕರಿಗಾಗಿ ವಿಶೇಷ ಸಂಕೀರ್ಣಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

 “ನಗರಗಳಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉತ್ತಮ ಜೀವನವನ್ನು ಒದಗಿಸುವ ಮತ್ತೊಂದು ಪ್ರಮುಖ ಸಾಧನವೆಂದರೆ ಸಾರ್ವಜನಿಕ ಸಾರಿಗೆ. ಕಳೆದ 10 ವರ್ಷಗಳಲ್ಲಿ ಆಧುನಿಕ ಸಾರ್ವಜನಿಕ ಸಾರಿಗೆಗಾಗಿ ಮಾಡಿದ ಕೆಲಸವು ಅನುಪಮವಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ 10 ವರ್ಷಗಳಲ್ಲಿ 15 ಹೊಸ ನಗರಗಳು ಮೆಟ್ರೋ ಸೇವೆಯನ್ನು ಪಡೆದುಕೊಂಡಿವೆ, ಮೆಟ್ರೋದ ಕೆಲಸವು 27 ನಗರಗಳಲ್ಲಿ ಪೂರ್ಣಗೊಂಡಿದೆ ಅಥವಾ ನಡೆಯುತ್ತಿದೆ. ಪ್ರಧಾನಮಂತ್ರಿ-ಇಬಸ್ ಸೇವಾ ಅಭಿಯಾನದ ಅಡಿಯಲ್ಲಿ ಅನೇಕ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲಾಗುತ್ತಿದೆ. ಎರಡು-ಮೂರು ದಿನಗಳ ಹಿಂದೆ ಕೇಂದ್ರ ಸರ್ಕಾರ ದೆಹಲಿಯಲ್ಲಿ 500 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಿದೆ. ಈಗ ದೆಹಲಿಯಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ 1300 ದಾಟಿದೆ ಎಂದು ಅವರು ಹೇಳಿದರು.

ನಗರಗಳು ಯುವಜನರು ಮತ್ತು ಮಹಿಳೆಯರಿಬ್ಬರನ್ನೂ ಸಬಲೀಕರಣಗೊಳಿಸಲು ಉತ್ತಮ ಮಾಧ್ಯಮಗಳಾಗಿವೆ ಮತ್ತು "ಮೋದಿ ಕಿ ಗ್ಯಾರಂಟಿ" ವಾಹನವು ಯುವ ಶಕ್ತಿ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ವಿ ಬಿ ಎಸ್‌ ವೈ ನ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬೇಕು ಮತ್ತು ವಿಕಸಿತ ಭಾರತದ ಸಂಕಲ್ಪವನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದ ಪ್ರಧಾನಿಯವರು ತಮ್ಮ ಮಾತು ಮುಕ್ತಾಯ ಮಾಡಿದರು.

ಹಿನ್ನೆಲೆ

ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶದಾದ್ಯಂತ ಕೈಗೊಳ್ಳಲಾಗುತ್ತಿದ್ದು, ಯೋಜನೆಗಳ ಸವಲತ್ತುಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ತಲುಪುವುದನ್ನು ಖಾತ್ರಿಪಡಿಸುವ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ದೇಶಾದ್ಯಂತದ ಸಾವಿರಾರು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 

Gladdening to see the impact of Viksit Bharat Sankalp Yatras across the country. https://t.co/11WtwGdGOj

— Narendra Modi (@narendramodi) December 16, 2023

देश के सैकड़ों छोटे शहर ही विकसित भारत की भव्य इमारत को सशक्त करने वाले हैं: PM @narendramodi pic.twitter.com/gjOT2QQRda

— PMO India (@PMOIndia) December 16, 2023

Ensuring 'Ease of Living' for the citizens. pic.twitter.com/BOTUQ3kP6s

— PMO India (@PMOIndia) December 16, 2023

हमारी सरकार मिडिल क्लास परिवारों के घर का सपना पूरा करने में भी हर संभव मदद कर रही है: PM @narendramodi pic.twitter.com/5l9VtlEHh1

— PMO India (@PMOIndia) December 16, 2023

*****



(Release ID: 1987257) Visitor Counter : 73