ಪ್ರಧಾನ ಮಂತ್ರಿಯವರ ಕಛೇರಿ

ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಲಶ ಯಾತ್ರೆ ಮುಕ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ


ದೇಶದ ಪ್ರತಿಯೊಂದು ಭಾಗದಿಂದ ಸಂಗ್ರಹಿಸಿದ ಮಣ್ಣಿನಿಂದ ಅಭಿವೃದ್ಧಿಪಡಿಸಲಾಗುವ ಅಮೃತ ವಾಟಿಕಾ ಮತ್ತು ಅಮೃತ ಮಹೋತ್ಸವ ಸ್ಮಾರಕಕ್ಕೆ ಶಂಕುಸ್ಥಾಪನೆ

‘ಮೇರಾ ಯುವ ಭಾರತ್’ - MY Bharat ಪ್ಲಾಟ್‌ ಫಾರ್ಮ್‌ ಗೆ ಚಾಲನೆ

 ಅತ್ಯುತ್ತಮ ಕಾರ್ಯಕ್ಷಮತೆಯ 3 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಶಸ್ತಿ ಪ್ರದಾನ - 1. ಜಮ್ಮು ಮತ್ತು ಕಾಶ್ಮೀರ 2. ಗುಜರಾತ್ ಮತ್ತು 3. ಹರಿಯಾಣ

ಉತ್ತಮ ಕಾರ್ಯಕ್ಷಮತೆಯ 3 ಸಚಿವಾಲಯಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಶಸ್ತಿ ಪ್ರದಾನ - 1. ವಿದೇಶಾಂಗ ವ್ಯವಹಾರಗಳ ಸಚಿವಾಲಯ, 2. ರಕ್ಷಣಾ ಸಚಿವಾಲಯ; 3 ನೇ ಸ್ಥಾನ ಜಂಟಿಯಾಗಿ ರೈಲ್ವೆ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯ

"21ನೇ ಶತಮಾನದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಮೇರಾ ಯುವ ಭಾರತ್ ದೊಡ್ಡ ಪಾತ್ರ ವಹಿಸಲಿದೆ"

"ನನ್ನ ಮಣ್ಣು ನನ್ನ ದೇಶ ಅಭಿಯಾನವು ಭಾರತದ ಯುವಜನರು ಹೇಗೆ ಸಂಘಟಿತರಾಗುತ್ತಾರೆ ಮತ್ತು ಪ್ರತಿಯೊಂದು ಗುರಿಯನ್ನು ಹೇಗೆ ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ"

"ಹಲವು ಮಹಾನ್ ನಾಗರಿಕತೆಗಳು ನಾಶವಾಗಿವೆ, ಆದರೆ ಪ್ರಾಚೀನ ಕಾಲದಿಂದ ಇಂದಿನವರೆಗೂ ಈ ರಾಷ್ಟ್ರವನ್ನು ಉಳಿಸಿದ ಚೈತನ್ಯ ಭಾರತದ ಮಣ್ಣಿನಲ್ಲಿದೆ"

"ಭಾರತದ ಮಣ್ಣು ಆತ್ಮಕ್ಕೆ ಆಧ್ಯಾತ್ಮದ ಕಡೆಗೆ ಒಲವನ್ನು ಸೃಷ್ಟಿಸುತ್ತದೆ"

"ಅಮೃತ ವಾಟಿಕಾ ಮುಂಬರುವ ಪೀಳಿಗೆಗೆ 'ಏಕ್ ಭಾರತ್ ಶ್ರೇಷ್ಠ ಭಾರತ್' ಕುರಿತು ಕಲಿಸುತ್ತದೆ"

"ಅಮೃತ ಮಹೋತ್ಸವವು ಒಂದು ರೀತಿಯಲ್ಲಿ ಭವಿಷ್ಯದ ಪೀಳಿಗೆಗೆ ಇತಿಹಾಸದ ಕಾಣೆಯಾದ ಪುಟಗಳನ್ನು ಸೇರಿಸಿದೆ"

"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ, ದೇಶವು ರಾಜಪಥದಿಂದ ಕರ್ತವ್ಯ ಪಥದವರೆಗೆ ಪ್ರಯಾಣವನ್ನು ಪೂರ್ಣಗೊಳಿಸಿತು"

"ಮೇರಾ ಯುವ ಭಾರತ್ ಭಾರತದ ಯುವ ಶಕ್ತಿಯ ಘೋಷಣೆಯಾಗಿದೆ"

Posted On: 31 OCT 2023 7:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಕರ್ತವ್ಯ ಪಥದಲ್ಲಿ ಮೇರಿ ಮಾಟಿ ಮೇರಾ ದೇಶ್ (ನನ್ನ ಮಣ್ಣು, ನನ್ನ ದೇಶ) ಅಭಿಯಾನದ ಅಮೃತ ಕಲಶ ಯಾತ್ರೆಯ ಮುಕ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವೂ ಆಗಿತ್ತು. ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಅಮೃತ ವಾಟಿಕಾ ಮತ್ತು ಅಮೃತ ಮಹೋತ್ಸವ ಸ್ಮಾರಕಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದರು ಮತ್ತು ದೇಶದ ಯುವಜನರಿಗಾಗಿ ‘ಮೇರಾ ಯುವ ಭಾರತ್ʼ - MY Bharat ಪ್ಲಾಟ್‌ ಫಾರ್ಮ್‌ ಗೆ ಚಾಲನೆ ನೀಡಿದರು.

ಪ್ರಧಾನಿಯವರು ಅಗ್ರ 3 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹಾಗೂ ಸಚಿವಾಲಯಗಳು/ ಇಲಾಖೆಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಅಗ್ರ 3 ಕಾರ್ಯಕ್ಷಮತೆಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರ, ಗುಜರಾತ್ ಮತ್ತು ಹರಿಯಾಣ ಪ್ರಶಸ್ತಿಗಳನ್ನು ಪಡೆದರೆ, ಅಗ್ರ 3 ಕಾರ್ಯಕ್ಷಮತೆಯ ಸಚಿವಾಲಯಗಳಲ್ಲಿ ಕ್ರಮವಾಗಿ ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ಮೂರನೇ ಸ್ಥಾನಕ್ಕೆ ರೈಲ್ವೆ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯಗಳು ಜಂಟಿಯಾಗಿ ಪ್ರಶಸ್ತಿಗಳನ್ನು ಪಡೆದವು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕರ್ತವ್ಯ ಪಥವು ಸರ್ದಾರ್ ಸಾಹೇಬರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಹಾಯಜ್ಞಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಮಹಾತ್ಮ ಗಾಂಧಿಯವರ ದಂಡಿ ಯಾತ್ರೆಯಿಂದ ಪ್ರೇರಿತವಾದ ಸ್ವಾತಂತ್ರ್ಯದ ಅಮೃತ ಮಹೋತ್ಸವ ದೀಕ್ಷೆಯು ಮಾರ್ಚ್ 12, 2021 ರಂದು ಆರಂಭವಾಗಿದ್ದನ್ನು ಸ್ಮರಿಸಿಕೊಂಡ ಅವರು, ಸರ್ದಾರ್ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್ 31, 2023 ರಂದು ಅದರ ಸಮಾರೋಪ ನಡೆಯುತ್ತಿದೆ ಎಂದು ಹೇಳಿದರು. ಪ್ರತಿಯೊಬ್ಬ ಭಾರತೀಯನ ಭಾಗವಹಿಸುವಿಕೆಯನ್ನು ಕಂಡ ದಂಡಿ ಯಾತ್ರೆಯೊಂದಿಗೆ ಹೋಲಿಸಿದ ಪ್ರಧಾನಿಯವರು, ಸ್ವಾತಂತ್ರ್ಯದ ಅಮೃತ ಮಹೋತ್ಸವವು ಜನರ ಭಾಗವಹಿಸುವಿಕೆಯ ಹೊಸ ದಾಖಲೆಯನ್ನು ಸೃಷ್ಟಿಸಿದ ಬಗ್ಗೆ ಗಮನ ಸೆಳೆದರು. "ದಂಡಿ ಯಾತ್ರೆ ಸ್ವಾತಂತ್ರ್ಯದ ಕಿಡಿಯನ್ನು ಮತ್ತೆ ಹೊತ್ತಿಸಿತು, ಅಮೃತ ಕಾಲವು ಭಾರತದ ಅಭಿವೃದ್ಧಿ ಪಯಣದ 75 ವರ್ಷಗಳ ಪಯಣದ ಸಂಕಲ್ಪವಾಗಿ ಹೊರಹೊಮ್ಮುತ್ತಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ 2 ವರ್ಷಗಳ ಆಚರಣೆಗಳು ‘ನನ್ನ ಮಣ್ಣು ನನ್ನ ದೇಶ’ಅಭಿಯಾನದೊಂದಿಗೆ ಮುಕ್ತಾಯಗೊಂಡಿವೆ ಎಂದು ಹೇಳಿದರು. ಇಂದಿನ ಐತಿಹಾಸಿಕ ಸಂಘಟನೆಯ ಬಗ್ಗೆ ಭವಿಷ್ಯದ ಪೀಳಿಗೆಗೆ ನೆನಪಿಸುವ ಸ್ಮಾರಕದ ಶಂಕುಸ್ಥಾಪನೆಯ ಬಗ್ಗೆ ಅವರು ಗಮನಸೆಳೆದರು. ಅತ್ಯುತ್ತಮ ಸಾಧನೆ ಮಾಡಿದ ಪ್ರಶಸ್ತಿಗಳನ್ನು ಪಡೆದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಚಿವಾಲಯಗಳನ್ನು ಪ್ರಧಾನಿಯವರು ಅಭಿನಂದಿಸಿದರು.

ನಾವು ಇಂದು ಭವ್ಯವಾದ ಆಚರಣೆಗೆ ವಿದಾಯ ಹೇಳುತ್ತಿದ್ದೇವೆ, ಹಾಗೆಯೇ ಮೇರಾ ಯುವ ಭಾರತ್‌  ಸಂಕಲ್ಪದೊಂದಿಗೆ ಹೊಸ ಆರಂಭ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು. 21ನೇ ಶತಮಾನದಲ್ಲಿ ಮೇರಾ ಯುವ ಭಾರತ್‌ ಸಂಸ್ಥೆಯು ರಾಷ್ಟ್ರ ನಿರ್ಮಾಣದಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತೀಯ ಯುವಜನರ ಸಾಮೂಹಿಕ ಶಕ್ತಿಯನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, “ಭಾರತದ ಯುವಜನರು ಹೇಗೆ ಸಂಘಟಿತರಾಗುತ್ತಾರೆ ಮತ್ತು ಪ್ರತಿಯೊಂದು ಗುರಿಯನ್ನು ಹೇಗೆ ಸಾಧಿಸಬಹುದು ಎಂಬುದಕ್ಕೆ ನನ್ನ ಮಣ್ಣು ನನ್ನ ದೇಶ ಅಭಿಯಾನವು ಸ್ಪಷ್ಟ ಉದಾಹರಣೆಯಾಗಿದೆ”ಎಂದು ಹೇಳಿದರು. ದೇಶದ ಮೂಲೆ ಮೂಲೆಗಳಿಂದ ಅಸಂಖ್ಯಾತ ಯುವಜನರ ಪಾಲ್ಗೊಳ್ಳುವಿಕೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ದೇಶಾದ್ಯಂತ 8500 ಅಮೃತ ಕಲಶಗಳು ಕರ್ತವ್ಯ ಪಥವನ್ನು ತಲುಪಿವೆ ಮತ್ತು ಕೋಟ್ಯಂತರ ಭಾರತೀಯರು ಪಂಚ ಪ್ರಾಣ ಪ್ರತಿಜ್ಞೆ ಮಾಡಿ ಸೆಲ್ಫಿಗಳನ್ನು ಅಭಿಯಾನ ಜಾಲತಾಣದಲ್ಲಿ ಅಪ್‌ ಲೋಡ್ ಮಾಡಿದ್ದಾರೆ ಎಂದು ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪಕ್ಕೆ ಮಣ್ಣನ್ನು ಏಕೆ ಬಳಸಲಾಯಿತು ಎಂದು ವಿವರಿಸಿದ ಪ್ರಧಾನಿ, ಕವಿಯೊಬ್ಬರ ಮಾತುಗಳನ್ನು ಉಲ್ಲೇಖಿಸಿದರು ಮತ್ತು ಇದು ನಾಗರಿಕತೆಗಳು ಪ್ರವರ್ಧಮಾನಕ್ಕೆ ಬಂದ, ಮಾನವರು ಪ್ರಗತಿ ಸಾಧಿಸಿದ ಮತ್ತು ಯುಗಗಳು ಛಾಪು ಮೂಡಿಸಿದ ನೆಲದ ಮಣ್ಣು ಎಂದು ಹೇಳಿದರು. “ಭಾರತದ ಮಣ್ಣಿಗೆ ಒಂದು ಚೈತನ್ಯವಿದೆ. ಇದು ನಾಗರಿಕತೆಯ ಅವನತಿಯನ್ನು ತಡೆಯುವ ಜೀವನ ರೂಪವನ್ನು ಹೊಂದಿದೆ”ಎಂದು ಶ್ರೀ ಮೋದಿ ಹೇಳಿದರು, ಅನೇಕ ನಾಗರಿಕತೆಗಳು ಕುಸಿದರೂ ಭಾರತವು ಇನ್ನೂ ಹೇಗೆ ಬಲಿಷ್ಠವಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದರು. "ಭಾರತದ ಮಣ್ಣು ಆತ್ಮಕ್ಕೆ ಆಧ್ಯಾತ್ಮದ ಕಡೆಗೆ ಒಲವನ್ನು ಸೃಷ್ಟಿಸುತ್ತದೆ" ಎಂದು ಅವರು ಹೇಳಿದರು. ಭಾರತದ ಶೌರ್ಯದ ಹಲವಾರು ಸಾಹಸಗಾಥೆಗಳನ್ನು ಪ್ರಸ್ತಾಪಿಸಿದ ಅವರು ಶಹೀದ್ ಭಗತ್ ಸಿಂಗ್ ಅವರ ಕೊಡುಗೆಗಳನ್ನು ಉಲ್ಲೇಖಿಸಿದರು. ಪ್ರತಿಯೊಬ್ಬ ಪ್ರಜೆಯೂ ಮಾತೃಭೂಮಿಯ ಮಣ್ಣಿನಲ್ಲಿ ಹೇಗೆ ಆಳವಾಗಿ ಬೇರೂರಿದ್ದಾನೆ ಎಂಬುದನ್ನು ಎತ್ತಿ ಹೇಳಿದ ಪ್ರಧಾನಮಂತ್ರಿಯವರು, “ಭಾರತದ ಮಣ್ಣಿನ ಋಣವನ್ನು ತೀರಿಸದಿದ್ದರೆ ಜೀವನ ಸಾರ್ಥಕವಲ್ಲ” ಎಂದು ಹೇಳಿದರು. ದೆಹಲಿಗೆ ಆಗಮಿಸಿರುವ ಸಾವಿರಾರು 'ಅಮೃತ ಕಲಶ'ಗಳ ಮಣ್ಣು ಪ್ರತಿಯೊಬ್ಬರಿಗೂ ಕರ್ತವ್ಯ ಅಥವಾ ಜವಾಬ್ದಾರಿಯ ಭಾವನೆಯನ್ನು ನೆನಪಿಸುತ್ತದೆ ಮತ್ತು ವಿಕಸಿತ ಭಾರತದ ಸಂಕಲ್ಪವನ್ನು ಸಾಧಿಸಲು ಪ್ರತಿಯೊಬ್ಬರನ್ನು ಪ್ರೇರೇಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ನೀಡಬೇಕು ಎಂದು ಪ್ರಧಾನಿ ಕರೆ ನೀಡಿದರು.

ದೇಶಾದ್ಯಂತ ಸಸಿಗಳೊಂದಿಗೆ ನಿರ್ಮಿಸಲಾಗುವ ಅಮೃತ ವಾಟಿಕಾ ಮುಂಬರುವ ಪೀಳಿಗೆಗೆ ‘ಏಕ್ ಭಾರತ್ ಶ್ರೇಷ್ಠ ಭಾರತ್’ಕುರಿತು ಕಲಿಸಲಿದೆ ಎಂದು ಪ್ರಧಾನಿ ಹೇಳಿದರು. ಎಲ್ಲಾ ರಾಜ್ಯಗಳ ಮಣ್ಣಿನಿಂದ 75 ಮಹಿಳಾ ಕಲಾವಿದರು ಹೊಸ ಸಂಸತ್ ಭವನದಲ್ಲಿ ನಿರ್ಮಿಸಿರುವ ಜನ, ಜನನಿ, ಜನ್ಮಭೂಮಿ ಕಲಾಕೃತಿಯ ಕುರಿತು ಪ್ರಧಾನಿಯವರು ಸಭಿಕರಿಗೆ ಮಾಹಿತಿ ನೀಡಿದರು.

ಸುಮಾರು 1000 ದಿನಗಳ ಕಾಲ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಕಾರಾತ್ಮಕ ಪರಿಣಾಮವು ಭಾರತದ ಯುವ ಪೀಳಿಗೆಯ ಮೇಲೆ ಬೀರಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದಿನ ಪೀಳಿಗೆ ಗುಲಾಮಗಿರಿ ಅನುಭವಿಸಿಲ್ಲ ಎಂದ ಅವರು, ತಾವು ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿಯೂ ಹೌದು ಎಂದರು. ಪರಕೀಯರ ಆಳ್ವಿಕೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಚಳವಳಿ ನಡೆಯದಿರುವ ಒಂದು ಕ್ಷಣವೂ ಇರಲಿಲ್ಲ ಮತ್ತು ಈ ಚಳವಳಿಗಳಲ್ಲಿ ಸೇರದ ಯಾವುದೇ ವರ್ಗ ಅಥವಾ ಧರ್ಮವೂ ಇರಲಿಲ್ಲ ಎಂಬುದನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವವು ಜನರಿಗೆ ನೆನಪಿಸಿತು ಎಂದು ಅವರು ಹೇಳಿದರು.

"ಅಮೃತ ಮಹೋತ್ಸವವು ಒಂದು ರೀತಿಯಲ್ಲಿ ಭವಿಷ್ಯದ ಪೀಳಿಗೆಗೆ ಇತಿಹಾಸದ ಕಾಣೆಯಾದ ಪುಟಗಳನ್ನು ಸೇರಿಸಿದೆ" ಎಂದು ಪ್ರಧಾನಿ ಹೇಳಿದರು. ಭಾರತದ ಜನರು ಅಮೃತ ಮಹೋತ್ಸವವನ್ನು ಜನಾಂದೋಲನವನ್ನಾಗಿ ಮಾಡಿದರು. ಹರ್ ಘರ್ ತಿರಂಗಾದ ಯಶಸ್ಸು ಪ್ರತಿಯೊಬ್ಬ ಭಾರತೀಯನ ಯಶಸ್ಸು ಎಂದರು. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಕುಟುಂಬ ಮತ್ತು ಗ್ರಾಮಗಳ ಕೊಡುಗೆಯ ಬಗ್ಗೆ ಜನರು ತಿಳಿದುಕೊಂಡರು. ಸ್ವಾತಂತ್ರ್ಯ ಹೋರಾಟಗಾರರ ಜಿಲ್ಲಾವಾರು ಡೇಟಾ ಬೇಸ್‌ ರಚಿಸಲಾಗಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿಯಲ್ಲಿ ಭಾರತದ ಸಾಧನೆಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ವಿಶ್ವದ ಅಗ್ರ 5 ಆರ್ಥಿಕತೆಗಳಿಗೆ ಭಾರತದ ಏರಿಕೆ, ಚಂದ್ರಯಾನ 3 ರ ಯಶಸ್ವಿ ಲ್ಯಾಂಡಿಂಗ್, ಜಿ20 ಶೃಂಗಸಭೆಯ ಆಯೋಜನೆ, ಏಷ್ಯನ್ ಕ್ರೀಡಾಕೂಟ ಮತ್ತು ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ 100 ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ ಐತಿಹಾಸಿಕ ದಾಖಲೆ, ನೂತನ ಸಂಸತ್ ಭವನ ಉದ್ಘಾಟನೆ, ನಾರಿ ಶಕ್ತಿ ವಂದನಾ ಅಧಿನಿಯಮ ಅಂಗೀಕಾರ, ರಫ್ತಿನಲ್ಲಿ ಹೊಸ ದಾಖಲೆಗಳು, ಕೃಷಿ ಉತ್ಪನ್ನಗಳು, ವಂದೇ ಭಾರತ್ ರೈಲು ಜಾಲದ ವಿಸ್ತರಣೆ, ಅಮೃತ ಭಾರತ ನಿಲ್ದಾಣ ಅಭಿಯಾನದ ಆರಂಭ, ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ರೈಲು ನಮೋ ಭಾರತ್, 65,000 ಕ್ಕೂ ಹೆಚ್ಚು ಅಮೃತ್ ಸರೋವರಗಳ ನಿರ್ಮಾಣ, ಮೇಡ್ ಇನ್ ಇಂಡಿಯಾ 5G ಯ ಬಿಡುಗಡೆ ಮತ್ತು ಸಂಪರ್ಕವನ್ನು ಸುಧಾರಿಸಲು ಪ್ರಧಾನಮಂತ್ರಿ ಗತಿಶಕ್ತಿ ಮಾಸ್ಟರ್‌ಪ್ಲಾನ್ ಯೋಜನೆಯ ಆರಂಭವನ್ನು ಪ್ರಸ್ತಾಪಿಸಿದರು.

 “ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ, ದೇಶವು ರಾಜಪಥದಿಂದ ಕರ್ತವ್ಯ ಪಥದವರೆಗೆ ಪ್ರಯಾಣವನ್ನು ಪೂರ್ಣಗೊಳಿಸಿತು. ನಾವು ಗುಲಾಮಗಿರಿಯ ಅನೇಕ ಚಿಹ್ನೆಗಳನ್ನು ತೆಗೆದುಹಾಕಿದ್ದೇವೆ. ಇಂಡಿಯಾ ಗೇಟ್‌ ನಲ್ಲಿ ನೇತಾಜಿ ಸುಭಾಷ್ ಬೋಸ್ ಅವರ ಪ್ರತಿಮೆ, ನೌಕಾಪಡೆಗೆ ಹೊಸ ಲಾಂಛನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸ್ಪೂರ್ತಿದಾಯಕ ಹೆಸರುಗಳು, ಜನಜಾತೀಯ ಗೌರವ್ ದಿವಸ್ ಘೋಷಣೆ, ಸಾಹಿಬ್‌ಜಾದೆ ಅವರ ಸ್ಮರಣಾರ್ಥ ವೀರ್ ಬಾಲ್ ದಿವಸ್ ಮತ್ತು ಪ್ರತಿ ವರ್ಷ ಆಗಸ್ಟ್ 14 ರಂದು ವಿಭಜನೆಯ ಭಯಾನಕ ದಿನದ ಆಚರಣೆಯ ನಿರ್ಧಾರವನ್ನು ಅವರು ಪ್ರಸ್ತಾಪಿಸಿದರು.

"ಒಂದು ಅಂತ್ಯವು ಯಾವಾಗಲೂ ಹೊಸದರ ಆರಂಭವನ್ನು ಸೂಚಿಸುತ್ತದೆ" ಎಂದು ಪ್ರಧಾನಮಂತ್ರಿಯವರು ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿದರು. ಅಮೃತ ಮಹೋತ್ಸವದ ಸಮಾರೋಪದೊಂದಿಗೆ ಮೇರಾ ಯುವ ಭಾರತ್‌ ಪ್ರಾರಂಭವಾಗುತ್ತಿರುವುದನ್ನು ಅವರು ಉಲ್ಲೇಖಿಸಿದರು. ಮೇರಾ ಯುವ ಭಾರತ್‌ ಭಾರತದ ಯುವ ಶಕ್ತಿಯ ಘೋಷಣೆಯಾಗಿದೆ ಎಂದು ಅವರು ಹೇಳಿದರು. ದೇಶದ ಪ್ರತಿಯೊಬ್ಬ ಯುವಜನರನ್ನು ಒಂದೇ ವೇದಿಕೆಯಲ್ಲಿ ತರಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಹೆಚ್ಚಿನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಇದು ಉತ್ತಮ ಮಾಧ್ಯಮವಾಗಲಿದೆ ಎಂದು ಅವರು ಒತ್ತಿ ಹೇಳಿದರು. ಮೇರಾ ಯುವ ಭಾರತ್‌ ವೆಬ್ ಸೈಟ್ ಬಿಡುಗಡೆ ಕುರಿತು ಮಾಹಿತಿ ನೀಡಿದ ಅವರು, ಯುವಕರಿಗಾಗಿ ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ಸೇರಿಸಲಾಗುವುದು ಎಂದರು. ಯುವಕರು ಸಾಧ್ಯವಾದಷ್ಟು ಅದರೊಂದಿಗೆ ಸಂಪರ್ಕ ಸಾಧಿಸಬೇಕು, ಭಾರತವನ್ನು ಹೊಸ ಶಕ್ತಿಯಿಂದ ತುಂಬಿಸಬೇಕು ಮತ್ತು ದೇಶವನ್ನು ಪ್ರಗತಿಯತ್ತ ಮುನ್ನಡೆಸಬೇಕು ಎಂದು ಪ್ರಧಾನಿ ಮೋದಿ ಒತ್ತಾಯಿಸಿದರು.

ಭಾರತದ ಸ್ವಾತಂತ್ರ್ಯವು ಪ್ರತಿಯೊಬ್ಬ ನಾಗರಿಕನ ಸಾಮಾನ್ಯ ಸಂಕಲ್ಪಗಳ ಈಡೇರಿಕೆಯಾಗಿದೆ ಎಂದ ಪ್ರಧಾನಿ, ಅದನ್ನು ಒಗ್ಗಟ್ಟಿನಿಂದ ರಕ್ಷಿಸುವಂತೆ ಕರೆ ನೀಡಿದರು. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸಂಕಲ್ಪವನ್ನು ಉಲ್ಲೇಖಿಸಿದ ಅವರು, ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಈ ವಿಶೇಷ ದಿನವನ್ನು ರಾಷ್ಟ್ರವು ನೆನಪಿಸಿಕೊಳ್ಳುತ್ತದೆ ಎಂದು ಹೇಳಿದರು. "ನಾವು ತೆಗೆದುಕೊಂಡ ಸಂಕಲ್ಪ, ಮುಂಬರುವ ಪೀಳಿಗೆಗೆ ನೀಡಿದ ಭರವಸೆಗಳನ್ನು ನಾವು ಈಡೇರಿಸಬೇಕಾಗಿದೆ" ಎಂದು ಅವರು ಹೇಳಿದರು. ಇದಕ್ಕಾಗಿ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಪ್ರಧಾನಿ ಒತ್ತಾಯಿಸಿದರು. “ಅಭಿವೃದ್ಧಿ ಹೊಂದಿದ ದೇಶ ಎಂಬ ಗುರಿಯನ್ನು ಸಾಧಿಸಲು ಪ್ರತಿಯೊಬ್ಬ ಭಾರತೀಯನ ಕೊಡುಗೆ ಮುಖ್ಯವಾಗಿದೆ. ಬನ್ನಿ, ಅಮೃತ ಮಹೋತ್ಸವದ ಮೂಲಕ ವಿಕಸಿತ ಭಾರತದ ಅಮೃತ ಕಾಲದ ಹೊಸ ಪ್ರಯಾಣವನ್ನು ಪ್ರಾರಂಭಿಸೋಣ”ಎಂದು ಹೇಳಿದ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ನನ್ನ ಮಣ್ಣು ನನ್ನ ದೇಶ (ಮೇರಿ ಮಾಟಿ ಮೇರಾ ದೇಶ್)

ನನ್ನ ಮಣ್ಣು ನನ್ನ ದೇಶ ಅಭಿಯಾನವು ದೇಶಕ್ಕಾಗಿ ಪರಮ ತ್ಯಾಗ ಮಾಡಿದ ವೀರರು ಮತ್ತು ವೀರಾಂಗನೆಯರಿಗೆ ಸಲ್ಲಿಸುವ ಗೌರವವಾಗಿದೆ. ಜನಭಾಗೀದಾರಿಯ ಮನೋಭಾವದಲ್ಲಿ, ಅಭಿಯಾನವು ದೇಶದಾದ್ಯಂತ ಪಂಚಾಯತ್/ಗ್ರಾಮ, ಬ್ಲಾಕ್, ನಗರ ಸ್ಥಳೀಯ ಸಂಸ್ಥೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಸಲಾದ ಅನೇಕ ಚಟುವಟಿಕೆಗಳು ಮತ್ತು ಸಮಾರಂಭಗಳನ್ನು ಒಳಗೊಂಡಿದೆ. ಅತ್ಯುನ್ನತ ತ್ಯಾಗವನ್ನು ಮಾಡಿದ ಎಲ್ಲಾ ವೀರರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಶಿಲಾಫಲಕಮ್ (ಸ್ಮಾರಕ) ನಿರ್ಮಾಣ; ಶಿಲಾಫಲಕದಲ್ಲಿ ಜನರು ಮಾಡಿದ ‘ಪಂಚ ಪ್ರಾಣ’ಪ್ರತಿಜ್ಞೆ; ಸ್ಥಳೀಯ ಜಾತಿಯ ಸಸಿಗಳನ್ನು ನೆಡುವುದು ಮತ್ತು 'ಅಮೃತ ವಾಟಿಕಾ' (ವಸುಧಾ ವಂದನ್) ಅಭಿವೃದ್ಧಿಪಡಿಸುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮರಣ ಹೊಂದಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ (ವೀರೋ ಕಾ ವಂದನ್) ಸನ್ಮಾನ ಸಮಾರಂಭಗಳು ಇದರಲ್ಲಿ ಸೇರಿವೆ.

36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 2.3 ಲಕ್ಷಕ್ಕೂ ಹೆಚ್ಚು ಶಿಲಾಫಲಕಗಳನ್ನು ನಿರ್ಮಿಸುವುದರೊಂದಿಗೆ ಅಭಿಯಾನವು ಭಾರೀ ಯಶಸ್ಸನ್ನು ಕಂಡಿತು; ಸುಮಾರು 4 ಕೋಟಿ ಪಂಚ ಪ್ರಾಣ ಪ್ರತಿಜ್ಞೆ ಸೆಲ್ಫಿ ಅಪ್ಲೋಡ್ ಮಾಡಲಾಗಿದೆ; 2 ಲಕ್ಷಕ್ಕೂ ಹೆಚ್ಚು ರಾಷ್ಟ್ರವ್ಯಾಪಿ ‘ವೀರೋ ಕಾ ವಂದನ್’ ಕಾರ್ಯಕ್ರಮಗಳನ್ನು ನಡೆಸಲಾಗಿದೆ; 2.36 ಕೋಟಿಗೂ ಹೆಚ್ಚು ಸ್ಥಳೀಯ ಸಸಿಗಳನ್ನು ನೆಡಲಾಗಿದೆ; ಮತ್ತು ದೇಶಾದ್ಯಂತ ವಸುಧಾ ವಂದನ್ ಅಡಿಯಲ್ಲಿ 2.63 ಲಕ್ಷ ಅಮೃತ ವಾಟಿಕಾಗಳನ್ನು ನಿರ್ಮಿಸಲಾಗಿದೆ.

ʼನನ್ನ ಮಣ್ಣು ನನ್ನ ದೇಶ' ಅಭಿಯಾನವು ಅಮೃತ ಕಲಶ ಯಾತ್ರೆಯನ್ನು ಒಳಗೊಂಡಿದೆ, ಇದು ಗ್ರಾಮೀಣ ಪ್ರದೇಶಗಳಲ್ಲಿನ 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಂದ ಮತ್ತು ನಗರ ಪ್ರದೇಶಗಳಲ್ಲಿನ ವಾರ್ಡ್‌ಗಳಿಂದ ಮಿಟ್ಟಿ (ಮಣ್ಣು) ಮತ್ತು ಅಕ್ಕಿ ಧಾನ್ಯಗಳ ಸಂಗ್ರಹವನ್ನು ಒಳಗೊಂಡಿರುತ್ತದೆ, ಇದನ್ನು ಬ್ಲಾಕ್ ಮಟ್ಟಕ್ಕೆ ಕಳುಹಿಸಲಾಗುತ್ತದೆ (ಇಲ್ಲಿ ಬ್ಲಾಕ್‌ ನಲ್ಲಿರುವ ಎಲ್ಲಾ ಹಳ್ಳಿಗಳ ಮಣ್ನನ್ನು ಮಿಶ್ರಣಮಾಡಲಾಗುತ್ತದೆ) ಮತ್ತು ನಂತರ ರಾಜ್ಯ ರಾಜಧಾನಿಗೆ ಕಳುಹಿಸಲಾಗುತ್ತದೆ. ಸಾವಿರಾರು ಅಮೃತ ಕಲಶ ಯಾತ್ರಿಗಳ ಜೊತೆಯಲ್ಲಿ ರಾಜ್ಯ ಮಟ್ಟದಿಂದ ಮಣ್ಣನ್ನು ರಾಷ್ಟ್ರ ರಾಜಧಾನಿಗೆ ಕಳುಹಿಸಲಾಗುತ್ತದೆ.

ನಿನ್ನೆ, ಅಮೃತ ಕಲಶ ಯಾತ್ರೆಯು ಆಯಾ ಬ್ಲಾಕ್‌ ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಪ್ರತಿನಿಧಿಸುವ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 'ಏಕ್ ಭಾರತ್ ಶ್ರೇಷ್ಠ ಭಾರತ'ದ ಉತ್ಸಾಹದಲ್ಲಿ ಒಂದು ಬೃಹದಾಕಾರಾದ ಅಮೃತ ಕಲಶದಲ್ಲಿ ತಮ್ಮ ಕಲಶದಿಂದ ಮಣ್ಣನ್ನು ಹಾಕಿದವು. ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದ ಅಮೃತ ವಾಟಿಕಾ ಮತ್ತು ಅಮೃತ ಮಹೋತ್ಸವ ಸ್ಮಾರಕವನ್ನು ದೇಶದ ಪ್ರತಿಯೊಂದು ಭಾಗದಿಂದ ಸಂಗ್ರಹಿಸಿದ ಮಣ್ಣಿನಿಂದ ನಿರ್ಮಿಸಲಾಗುವುದು.

ʼನನ್ನ ಮಣ್ಣು ನನ್ನ ದೇಶ' ಅಭಿಯಾನವನ್ನು 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ದ ಅಂತಿಮ ಕಾರ್ಯಕ್ರಮವಾಗಿ ರೂಪಿಸಲಾಗಿತ್ತು. ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ಸ್ವಾತಂತ್ರ್ಯದ ಅಮೃತ ಮಹೋತ್ಸವವು 12ನೇ ಮಾರ್ಚ್ 2021 ರಂದು ಪ್ರಾರಂಭವಾಯಿತು. ಅಂದಿನಿಂದ ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ಆಯೋಜಿಸಲಾದ ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ಇದು ಸಾಕ್ಷಿಯಾಯಿತು.

MY Bharat

ʼಮೇರಾ ಯುವ ಭಾರತ್’- ದೇಶದ ಯುವಜನರಿಗೆ ಒಂದು-ನಿಲುಗಡೆಯ ಸಂಪೂರ್ಣ ಸರ್ಕಾರದ ವೇದಿಕೆಯಾಗಿ ಸೇವೆ ಸಲ್ಲಿಸಲು ಸ್ವಾಯತ್ತ ಸಂಸ್ಥೆಯಾಗಿ MY Bharat ಅನ್ನು ಸ್ಥಾಪಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ಯುವಕರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, MY Bharat ಸರ್ಕಾರದ ಸಂಪೂರ್ಣ ವ್ಯಾಪ್ತಿಯಾದ್ಯಂತ ಕಾರ್ಯವಿಧಾನವನ್ನು ಒದಗಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ, ಇದರಿಂದಾಗಿ ಯುವಜನರು ತಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಬಹುದು ಮತ್ತು 'ವಿಕಸಿತ ಭಾರತ' ನಿರ್ಮಾಣಕ್ಕೆ ಕೊಡುಗೆ ನೀಡಬಹುದು. MY Bharat ಉದ್ದೇಶವು ಯುವಕರನ್ನು ಸಮುದಾಯ ಬದಲಾವಣೆಯ ಏಜೆಂಟ್‌ ಗಳು ಮತ್ತು ರಾಷ್ಟ್ರ ನಿರ್ಮಾತೃಗಳಾಗಲು ಪ್ರೇರೇಪಿಸುವುದಾಗಿದೆ. ಸರ್ಕಾರ ಮತ್ತು ನಾಗರಿಕರ ನಡುವೆ 'ಯುವ ಸೇತು' ಆಗಿ ಕಾರ್ಯನಿರ್ವಹಿಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಈ ಅರ್ಥದಲ್ಲಿ, 'MY Bharat ದೇಶದಲ್ಲಿ 'ಯುವ ನೇತೃತ್ವದ ಅಭಿವೃದ್ಧಿ'ಗೆ ಪ್ರಮುಖ ಪ್ರೋತ್ಸಾಹವನ್ನು ನೀಡುತ್ತದೆ.

*****



(Release ID: 1973572) Visitor Counter : 150