ಪ್ರಧಾನ ಮಂತ್ರಿಯವರ ಕಛೇರಿ

ವಲ್ಲಲಾರ್ ಎಂದೂ ಕರೆಯಲ್ಪಡುವ ಶ್ರೀ ರಾಮಲಿಂಗ ಸ್ವಾಮಿ ಅವರ 200ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ


" ವಲ್ಲಲಾರ್ ನ ಪ್ರಭಾವವು ಜಾಗತಿಕವಾಗಿದೆ"

"ನಾವು ವಲ್ಲಲಾರ್ ಅವರನ್ನು ನೆನಪಿಸಿಕೊಂಡಾಗ, ಅವರ ಕಾಳಜಿ ಮತ್ತು ಸಹಾನುಭೂತಿಯ ಮನೋಭಾವವನ್ನು ನಾವು ನೆನಪಿಸಿಕೊಳ್ಳುತ್ತೇವೆ"

"ಹಸಿದವರೊಂದಿಗೆ ಆಹಾರವನ್ನು ಹಂಚಿಕೊಳ್ಳುವುದು ಎಲ್ಲಾ ದಯೆಯ ಕಾರ್ಯಗಳಲ್ಲಿ ಅತ್ಯಂತ ಉದಾತ್ತವಾದುದು ಎಂದು ವಲ್ಲಲಾರ್ ನಂಬಿದ್ದರು"

"ಸಾಮಾಜಿಕ ಸುಧಾರಣೆಗಳ ವಿಷಯಕ್ಕೆ ಬಂದಾಗ ವಲ್ಲಲಾರ್ ತಮ್ಮ ಸಮಯಕ್ಕಿಂತ ಮುಂದಿದ್ದರು"

"ವಲ್ಲಲಾರ್ ಅವರ ಬೋಧನೆಗಳು ಸಮಾನ ಸಮಾಜಕ್ಕಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿವೆ"

"ಕಾಲ ಮತ್ತು ಸ್ಥಳದಾದ್ಯಂತ ಭಾರತದ ಸಾಂಸ್ಕೃತಿಕ ಜ್ಞಾನದಲ್ಲಿನ ವೈವಿಧ್ಯತೆಯು ಮಹಾನ್ ಸಂತರ ಬೋಧನೆಗಳ ಸಾಮಾನ್ಯ ಎಳೆಯಿಂದ ಸಂಪರ್ಕ ಹೊಂದಿದೆ, ಇದು ಏಕ್ ಭಾರತ್ ಶ್ರೇಷ್ಠ ಭಾರತದ ಸಾಮೂಹಿಕ ಕಲ್ಪನೆಗೆ ಬಲವನ್ನು ನೀಡುತ್ತದೆ" ಎಂದು ಅವರು ಹೇಳಿದರು.

Posted On: 05 OCT 2023 1:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಲ್ಲಲಾರ್ ಎಂದೂ ಕರೆಯಲ್ಪಡುವ ಶ್ರೀ ರಾಮಲಿಂಗ ಸ್ವಾಮಿ ಅವರ 200ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಭಾಷಣ ಮಾಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ವಲ್ಲಲಾರ್ ಗೆ ನಿಕಟ ಸಂಬಂಧ ಹೊಂದಿರುವ ವಡಲೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಲ್ಲಲಾರ್ ಅವರು 19 ನೇ ಶತಮಾನದಲ್ಲಿ ಭೂಮಿಯ ಮೇಲೆ ನಡೆದ ಭಾರತದ ಅತ್ಯಂತ ಗೌರವಾನ್ವಿತ ಸಂತರಲ್ಲಿ ಒಬ್ಬರು ಮತ್ತು ಅವರ ಆಧ್ಯಾತ್ಮಿಕ ಒಳನೋಟಗಳು ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿವೆ ಎಂದು ಅವರು ಹೇಳಿದರು. " ವಲ್ಲಲಾರ್ ಅವರ ಪ್ರಭಾವ ಜಾಗತಿಕವಾಗಿದೆ" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು, ಅವರ ಚಿಂತನೆಗಳು ಮತ್ತು ಆದರ್ಶಗಳ ಮೇಲೆ ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದು ಒತ್ತಿ ಹೇಳಿದರು.

"ನಾವು ವಲ್ಲಲಾರ್ ಅವರನ್ನು ಸ್ಮರಿಸಿದಾಗ, ಅವರ ಕಾಳಜಿ ಮತ್ತು ಸಹಾನುಭೂತಿಯ ಮನೋಭಾವವನ್ನು ನಾವು ಸ್ಮರಿಸುತ್ತೇವೆ," ಎಂದು ಪ್ರಧಾನಿ ಹೇಳಿದ್ದಾರೆ. ಸಹ ಮಾನವರ ಬಗ್ಗೆ ಸಹಾನುಭೂತಿ ಪ್ರಾಥಮಿಕವಾಗಿರುವ ಜೀವನ ವಿಧಾನವನ್ನು ವಲ್ಲಲಾರ್ ನಂಬಿದ್ದರು ಎಂದು ಅವರು ಪ್ರತಿಪಾದಿಸಿದ್ದಾರೆ. ಹಸಿವನ್ನು ನಿವಾರಿಸುವಲ್ಲಿ ಅವರ ಪ್ರಮುಖ ಕೊಡುಗೆ ಮತ್ತು ಬದ್ಧತೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, " ಒಬ್ಬ ಮನುಷ್ಯನು ಖಾಲಿ ಹೊಟ್ಟೆಯಲ್ಲಿ ಮಲಗುವುದಕ್ಕಿಂತ ಹೆಚ್ಚಿನ ನೋವು ಬೇರೊಂದಿಲ್ಲ. ಹಸಿದವರೊಂದಿಗೆ ಆಹಾರವನ್ನು ಹಂಚಿಕೊಳ್ಳುವುದು ಎಲ್ಲಾ ದಯೆಯ ಕಾರ್ಯಗಳಲ್ಲಿ ಅತ್ಯಂತ ಉದಾತ್ತವಾದುದು ಎಂದು ಅವರು ನಂಬಿದ್ದರು," ಎಂದು ವಲ್ಲಲಾರ್ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, " ಬೆಳೆಗಳು ಒಣಗುತ್ತಿರುವುದನ್ನು ನೋಡಿದಾಗಲೆಲ್ಲಾ ನಾನೂ ಒಣಗುತ್ತಿದ್ದೆ," ಎಂದು ಹೇಳಿದರು, ಸರ್ಕಾರವು ಅವರ ಆದರ್ಶಕ್ಕೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಉಚಿತ ಪಡಿತರವನ್ನು ಒದಗಿಸುವ ಮೂಲಕ 80 ಕೋಟಿ ಸಹ ಭಾರತೀಯರಿಗೆ ದೊಡ್ಡ ಪರಿಹಾರವನ್ನು ನೀಡಿದ ಉದಾಹರಣೆಯನ್ನು ಅವರು ನೀಡಿದರು.

ಕಲಿಕೆ ಮತ್ತು ಶಿಕ್ಷಣದ ಶಕ್ತಿಯಲ್ಲಿ ವಲ್ಲಲಾರ್ ಅವರ ನಂಬಿಕೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಮಾರ್ಗದರ್ಶಕರಾಗಿ ಅವರ ಬಾಗಿಲು ಯಾವಾಗಲೂ ತೆರೆದಿರುತ್ತದೆ ಮತ್ತು ಅವರು ಅಸಂಖ್ಯಾತ ಜನರಿಗೆ ಮಾರ್ಗದರ್ಶನ ನೀಡಿದರು ಎಂದು ಹೇಳಿದರು. ಕುರಾಲ್ ಅನ್ನು ಹೆಚ್ಚು ಜನಪ್ರಿಯಗೊಳಿಸಲು ವಲ್ಲಲಾರ್ ಅವರ ಪ್ರಯತ್ನಗಳನ್ನು ಮತ್ತು ಆಧುನಿಕ ಪಠ್ಯಕ್ರಮಗಳಿಗೆ ಅವರು ನೀಡಿದ ಪ್ರಾಮುಖ್ಯತೆಯನ್ನು ಶ್ರೀ ನರೇಂದ್ರ ಮೋದಿ ಬಿಂಬಿಸಿದರು. ಕಳೆದ 9 ವರ್ಷಗಳಲ್ಲಿ ಭಾರತೀಯ ಶಿಕ್ಷಣದ ಮೂಲಸೌಕರ್ಯವನ್ನು ಪರಿವರ್ತಿಸುವ ಸರ್ಕಾರದ ಪ್ರಯತ್ನಗಳನ್ನು ಬಿಂಬಿಸಿ, ವಲ್ಲಲಾರ್ ಅವರು, ಯುವಕರು ತಮಿಳು, ಸಂಸ್ಕೃತ ಮತ್ತು ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಮಾತನಾಡಬೇಕೆಂದು ಬಯಸಿದ್ದರು ಎಂದು ಪ್ರಧಾನಿ ಪುನರುಚ್ಚರಿಸಿದರು. 3 ದಶಕಗಳ ನಂತರ ಭಾರತಕ್ಕೆ ದೊರೆತ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಈ ನೀತಿಯು ನಾವಿನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸುವ ಮೂಲಕ ಇಡೀ ಶೈಕ್ಷಣಿಕ ಭೂದೃಶ್ಯವನ್ನು ಪರಿವರ್ತಿಸುತ್ತಿದೆ ಎಂದರು. 

ಕಳೆದ 9 ವರ್ಷಗಳಲ್ಲಿ ದಾಖಲೆಯ ಸಂಖ್ಯೆಯ ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು ಮತ್ತು ಯುವಕರು ಈಗ ತಮ್ಮ ಸ್ಥಳೀಯ ಭಾಷೆಗಳಲ್ಲಿ ಅಧ್ಯಯನ ಮಾಡುವ ಮೂಲಕ ವೈದ್ಯರು ಮತ್ತು ಎಂಜಿನಿಯರ್ ಗಳಾಗಬಹುದು ಮತ್ತು ಯುವಕರಿಗೆ ಹಲವಾರು ಅವಕಾಶಗಳನ್ನು ತೆರೆಯಬಹುದು ಎಂದು ಹೇಳಿದರು.

"ಸಾಮಾಜಿಕ ಸುಧಾರಣೆಗಳ ವಿಷಯಕ್ಕೆ ಬಂದಾಗ ವಲ್ಲಲಾರ್ ತಮ್ಮ ಸಮಯಕ್ಕಿಂತ ಮುಂದಿದ್ದರು" ಎಂದು ಒತ್ತಿ ಹೇಳಿದ ಪ್ರಧಾನಿ, ವಲ್ಲಲಾರ್ ಅವರ ದೇವರ ದೃಷ್ಟಿಕೋನವು ಧರ್ಮ, ಜಾತಿ ಮತ್ತು ಮತದ ಅಡೆತಡೆಗಳನ್ನು ಮೀರಿದೆ ಎಂದು ಒತ್ತಿ ಹೇಳಿದರು. 

ವಲ್ಲಲಾರ್ ಅವರು ಬ್ರಹ್ಮಾಂಡದ ಪ್ರತಿಯೊಂದು ಪರಮಾಣುವಿನಲ್ಲಿ ದೈವತ್ವವನ್ನು ಕಂಡರು ಮತ್ತು ಈ ದೈವಿಕ ಸಂಪರ್ಕವನ್ನು ಗುರುತಿಸಲು ಮತ್ತು ಪೋಷಿಸಲು ಮಾನವಕುಲವನ್ನು ಒತ್ತಾಯಿಸಿದರು. ವಲ್ಲಾಲರ್ ಅವರ ಬೋಧನೆಗಳು ಸಮಾನ ಸಮಾಜಕ್ಕಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿರುವುದರಿಂದ ಅವರಿಗೆ ಗೌರವ ಸಲ್ಲಿಸುವಾಗ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ನಲ್ಲಿನ ತಮ್ಮ ನಂಬಿಕೆ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಪ್ರಧಾನಿಪ್ರತಿಪಾದಿಸಿದರು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವ ನಾರಿ ಶಕ್ತಿ ವಂದನ ಅಧಿನಿಯಮಂ ಅಂಗೀಕಾರಕ್ಕೆ ವಲ್ಲಲಾರ್ ಆಶೀರ್ವದಿಸುತ್ತಿದ್ದರು ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. ವಲ್ಲಾಲರ್ ಅವರ ಕೃತಿಗಳ ಸರಳತೆಯನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಅವು ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭ ಮತ್ತು ಸಂಕೀರ್ಣ ಆಧ್ಯಾತ್ಮಿಕ ಜ್ಞಾನವನ್ನು ಸರಳ ಪದಗಳಲ್ಲಿ ತಿಳಿಸುತ್ತವೆ ಎಂದರು. ಕಾಲ ಮತ್ತು ಸ್ಥಳಗಳಾದ್ಯಂತ ಭಾರತದ ಸಾಂಸ್ಕೃತಿಕ ಜ್ಞಾನದಲ್ಲಿನ ವೈವಿಧ್ಯತೆಯು ಮಹಾನ್ ಸಂತರ ಬೋಧನೆಗಳ ಸಾಮಾನ್ಯ ಎಳೆಯಿಂದ ಸಂಪರ್ಕ ಹೊಂದಿದೆ, ಇದು ಏಕ್ ಭಾರತ್ ಶ್ರೇಷ್ಠ ಭಾರತದ ಸಾಮೂಹಿಕ ಕಲ್ಪನೆಗೆ ಬಲವನ್ನು ನೀಡುತ್ತದೆ ಎಂದು ಪ್ರಧಾನಿ ಪುನರುಚ್ಚರಿಸಿದರು.

ಈ ಪವಿತ್ರ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ವಲ್ಲಲಾರ್ ಅವರ ಆದರ್ಶಗಳನ್ನು ಈಡೇರಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಪ್ರೀತಿ, ದಯೆ ಮತ್ತು ನ್ಯಾಯದ ಸಂದೇಶವನ್ನು ಹರಡುವಂತೆ ಪ್ರತಿಯೊಬ್ಬರನ್ನು ಒತ್ತಾಯಿಸಿದರು. "ಅವರ ಹೃದಯಕ್ಕೆ ಹತ್ತಿರವಾದ ಕ್ಷೇತ್ರಗಳಲ್ಲಿಯೂ ನಾವು ಕಷ್ಟಪಟ್ಟು ಕೆಲಸ ಮಾಡೋಣ. ನಮ್ಮ ಸುತ್ತಲಿನ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳೋಣ. ಪ್ರತಿಯೊಂದು ಮಗುವೂ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ಖಾತ್ರಿಪಡಿಸೋಣ", ಎಂದು ಪ್ರಧಾನಮಂತ್ರಿ ಭಾಷಣ ಮುಕ್ತಾಯಗೊಳಿಸಿದರು.

*****

 



(Release ID: 1964666) Visitor Counter : 97