ಪ್ರಧಾನ ಮಂತ್ರಿಯವರ ಕಛೇರಿ

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

Posted On: 15 AUG 2023 2:04PM by PIB Bengaluru

ನನ್ನ ಪ್ರೀತಿಯ 140 ಕೋಟಿ ಕುಟುಂಬ ಸದಸ್ಯರೇ,

ನಮ್ಮದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಜನಸಂಖ್ಯೆಯ ವಿಚಾರದಲ್ಲೂ, ನಾವು ʻನಂಬರ್ ಒನ್ʼ ಎಂದು ನಂಬಲಾಗಿದೆ. ಅಂತಹ ದೊಡ್ಡ ರಾಷ್ಟ್ರವು ಇಂದು ತನ್ನ 140 ಕೋಟಿ ಸಹೋದರ ಸಹೋದರಿಯರು ಮತ್ತು ಎಲ್ಲಾ ಕುಟುಂಬ ಸದಸ್ಯರೊಂದಿಗೆ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸುತ್ತಿದೆ. ಈ ಮಹತ್ವದ ಮತ್ತು ಪವಿತ್ರ ಸಂದರ್ಭದಲ್ಲಿ, ನಾನು ದೇಶದ ಪ್ರತಿಯೊಬ್ಬ ನಾಗರಿಕನಿಗೂ, ನಮ್ಮ ರಾಷ್ಟ್ರವಾದ ಭಾರತವನ್ನು ಪ್ರೀತಿಸುವ, ಗೌರವಿಸುವ ಮತ್ತು ಹೆಮ್ಮೆಪಡುವ ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಅಸಹಕಾರ ಮತ್ತು ಸತ್ಯಾಗ್ರಹ ಚಳವಳಿಯ ನೇತೃತ್ವ ವಹಿಸಿದ ನಮ್ಮ ʻಪೂಜ್ಯ ಬಾಪುʼ ಮಹಾತ್ಮ ಗಾಂಧೀಜಿ; ಭಗತ್ ಸಿಂಗ್, ಸುಖದೇವ್, ರಾಜಗುರು ಅವರಂತಹ ವೀರ ಕಲಿಗಳು ಮತ್ತು ಅವರ ಪೀಳಿಗೆ ಹೀಗೆ ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡದ ಯಾವುದೇ ವ್ಯಕ್ತಿ ಇರಲು ಸಾಧ್ಯವಿಲ್ಲ. ನಮ್ಮ ಸ್ವಾತಂತ್ರ್ಯ ಚಳವಳಿಗೆ ಕೊಡುಗೆ ನೀಡಿದ ಮತ್ತು ಹೋರಾಟದಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದ ಎಲ್ಲರಿಗೂ ಇಂದು ನಾನು ಗೌರವಪೂರ್ವಕವಾಗಿ ನಮನ ಸಲ್ಲಿಸುತ್ತೇನೆ. ನಮಗೆ ಸ್ವತಂತ್ರ ರಾಷ್ಟ್ರವನ್ನು ನೀಡುವಲ್ಲಿ ಅವರ ತಪಸ್ಸಿಗೆ ನಾನು ನಮ್ರತೆಯಿಂದ ತಲೆಬಾಗುತ್ತೇನೆ.

ಇಂದು, ಆಗಸ್ಟ್ 15, ಮಹಾನ್ ಕ್ರಾಂತಿಕಾರಿ ಮತ್ತು ಆಧ್ಯಾತ್ಮಿಕ ಜೀವನದ ಪ್ರವರ್ತಕ ಶ್ರೀ ಅರಬಿಂದೋ ಅವರ 150ನೇ ಜನ್ಮ ದಿನಾಚರಣೆ. ಇಂದು ಸ್ವಾಮಿ ದಯಾನಂದ ಸರಸ್ವತಿ ಅವರ 150ನೇ ಜನ್ಮ ದಿನಾಚರಣೆಯೂ ಹೌದು. ಈ ವರ್ಷ ನಮ್ಮ ರಾಷ್ಟ್ರವು ಅಪ್ರತಿಮ ಮಹಿಳಾ ಯೋಧೆ ರಾಣಿ ದುರ್ಗಾವತಿ ಅವರ 500ನೇ ಜನ್ಮ ದಿನಾಚರಣೆಯನ್ನು ಬಹಳ ಉತ್ಸಾಹದಿಂದ ಆಚರಿಸಲಿದೆ. 'ಭಕ್ತಿ ಮತ್ತು ಯೋಗ' ಮಾರ್ಗದರ್ಶಕರಾದ ಮೀರಾಬಾಯಿ ಅವರನ್ನು ಅವರ ಜೀವನದ 525ನೇ ವರ್ಷದ ಸಂದರ್ಭದಲ್ಲಿ ನಾವು ಸ್ಮರಿಸಲಿದ್ದೇವೆ. ಮುಂದಿನ ಜನವರಿ 26ರಂದು ನಮ್ಮ ಗಣರಾಜ್ಯೋತ್ಸವದಂದು ನಮ್ಮ ದೇಶವು 75ನೇ ವರ್ಷದ ಮೈಲುಗಲ್ಲನ್ನು ಆಚರಿಸಲಿದೆ. ದೇಶವು ಅಪಾರ ಸಾಧ್ಯತೆಗಳು ಮತ್ತು ಅವಕಾಶಗಳಿಗೆ ತೆರೆದುಕೊಂಡಿರುವುದರಿಂದ ಹೊಸ ಪ್ರೇರಣೆ, ಹೊಸ ಪ್ರಜ್ಞೆ, ಹೊಸ ಸಂಕಲ್ಪಗಳೊಂದಿಗೆ ರಾಷ್ಟ್ರೀಯ ಅಭಿವೃದ್ಧಿಗೆ ಬದ್ಧರಾಗಲು ಇದಕ್ಕಿಂತ ಉತ್ತಮವಾದ ದಿನ ಮತ್ತೊಂದಿಲ್ಲ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ದುರದೃಷ್ಟವಶಾತ್, ಈ ಬಾರಿ ನೈಸರ್ಗಿಕ ವಿಪತ್ತು ದೇಶದ ಅನೇಕ ಭಾಗಗಳಲ್ಲಿ ಊಹಿಸಲಾಗದ ಸಂಕಟವನ್ನು ಸೃಷ್ಟಿಸಿದೆ. ಈ ಬಿಕ್ಕಟ್ಟಿನಲ್ಲಿ ಬಳಲುತ್ತಿರುವ ಎಲ್ಲಾ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ನಿಮ್ಮೊಂದಿಗೆ ನಿಲ್ಲಲು ಮತ್ತು ಆ ಎಲ್ಲಾ ತೊಂದರೆಗಳನ್ನು ಶೀಘ್ರವಾಗಿ ಪರಿಹರಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಲಿವೆ ಎಂದು ಭರವಸೆ ನೀಡುತ್ತೇನೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಕಳೆದ ಕೆಲವು ವಾರಗಳಲ್ಲಿ, ವಿಶೇಷವಾಗಿ ಈಶಾನ್ಯದ ಮಣಿಪುರದ ಮತ್ತು ಭಾರತದ ಇತರ ಕೆಲವು ಭಾಗಗಳು, ಹಿಂಸಾಚಾರದ ಅಲೆಗೆ ಸಾಕ್ಷಿಯಾಗಿವೆ. ಅಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ, ತಾಯಂದಿರು ಮತ್ತು ಹೆಣ್ಣುಮಕ್ಕಳ ಘನತೆಗೆ ಕಳಂಕ ತರಲಾಗಿದೆ. ಆದಾಗ್ಯೂ, ಕಳೆದ ಕೆಲವು ದಿನಗಳಿಂದ, ನಾವು ನಿರಂತರವಾಗಿ ಶಾಂತಿ ಮತ್ತು ಸಹಜತೆಯ ವರದಿಗಳನ್ನು ಕೇಳುತ್ತಿದ್ದೇವೆ. ಇಡೀ ರಾಷ್ಟ್ರವು ಮಣಿಪುರದ ಜನರೊಂದಿಗೆ ನಿಂತಿದೆ. ಮಣಿಪುರದ ಜನರು ಕಳೆದ ಕೆಲವು ದಿನಗಳಿಂದ ಶಾಂತಿಯನ್ನು ಕಾಯ್ದುಕೊಂಡಿದ್ದಾರೆ. ಅವರು ಆ ಶಾಂತ ಸ್ಥಿತಿಯನ್ನು ಮುಂದುವರಿಸಬೇಕು.  ಏಕೆಂದರೆ ಶಾಂತಿಯೊಂದೇ ಪರಿಹಾರದ ಮಾರ್ಗವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಒಟ್ಟಾಗಿ ಕೆಲಸ ಮಾಡುತ್ತಿವೆ ಮತ್ತು ಈ ಪ್ರಯತ್ನ ಮುಂದುವರಿಸುತ್ತವೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ನಾವು ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ, ಅಳಿಸಲಾಗದ ಗುರುತನ್ನು ಮೂಡಿಸಿದ ಕ್ಷಣಗಳಿವೆ, ಮತ್ತು ಅವುಗಳ ಪ್ರಭಾವವು ಶತಮಾನಗಳವರೆಗೆ ಮುಂದುವರಿದಿರುವುದನ್ನು ಕಾಣಬಹುದು. ಕೆಲವೊಮ್ಮೆ, ಈ ಘಟನೆಗಳು ಆರಂಭದಲ್ಲಿ ಸಣ್ಣ ಮತ್ತು ನಗಣ್ಯವೆಂದು ತೋರಬಹುದು, ಆದರೆ ಅವು ಹಲವಾರು ಸಮಸ್ಯೆಗಳಿಗೆ ಬೇರುಗಳನ್ನು ಸೃಷ್ಟಿಸುತ್ತವೆ. ನಮ್ಮ ದೇಶವು 1000-1200 ವರ್ಷಗಳ ಹಿಂದೆ ಆಕ್ರಮಣಕ್ಕೊಳಗಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ. ಒಂದು ಸಣ್ಣ ರಾಜ್ಯ ಮತ್ತು ಅದರ ರಾಜ ಸೋತರು. ಆದಾಗ್ಯೂ, ಈ ಘಟನೆಯು ಭಾರತವನ್ನು ಸಾವಿರ ವರ್ಷಗಳ ದಾಸ್ಯಕ್ಕೆ ತಳ್ಳುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ನಾವು ಗುಲಾಮಗಿರಿಯಲ್ಲಿ ಸಿಕ್ಕಿಹಾಕಿಕೊಂಡೆವು.  ಯಾರೇ ಬಂದರೂ ನಮ್ಮನ್ನು ಲೂಟಿ ಮಾಡಿದರು ಮತ್ತು ನಮ್ಮನ್ನು ಆಳಿದರು. ಆ ಸಾವಿರ ವರ್ಷಗಳ ಅವಧಿ ಅದೆಂತಹ ಪ್ರತಿಕೂಲ ಅವಧಿಯಾಗಿರಬೇಕು ಯೋಚಿಸಿ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಒಂದು ಘಟನೆಯು ಸಣ್ಣದಾಗಿ ತೋರಬಹುದು, ಆದರೆ ಅದರ ಪರಿಣಾಮಗಳು ಸಾವಿರಾರು ವರ್ಷಗಳವರೆಗೆ ಮುಂದುವರಿಯಬಹುದು. ಇಂದು, ನಾನು ಇದನ್ನು ಏಕೆ ಉಲ್ಲೇಖಿಸಲು ಬಯಸುತ್ತೇನೆಂದರೆ, ಈ ಹಂತದಲ್ಲಿ, ದೇಶಾದ್ಯಂತ ಭಾರತದ ಕೆಚ್ಚೆದಯ ಆತ್ಮಗಳು ಸ್ವಾತಂತ್ರ್ಯದ ಜ್ವಾಲೆಯನ್ನು ಆರದಂತೆ ಉರಿಸುತ್ತಲೇ ಇದ್ದವು ಮತ್ತು ತ್ಯಾಗದ ಸಂಪ್ರದಾಯವನ್ನು ಸ್ಥಾಪಿಸಿದವು. ಭಾರತ ಮಾತೆಯು ಸರಪಳಿಗಳನ್ನು ಮುರಿಯಲು, ಸಂಕೋಲೆಗಳಿಂದ ಕಳಚಿಕೊಳ್ಳಲು ಎದ್ದು ನಿಂತಳು. ಮಹಿಳಾ ಶಕ್ತಿ, ಯುವ ಶಕ್ತಿ, ರೈತರು ಮತ್ತು ಹಳ್ಳಿಗಳ ಜನರು, ಕಾರ್ಮಿಕರು ಮತ್ತು ಸ್ವಾತಂತ್ರ್ಯದ ಕನಸಿಗಾಗಿ ಬದುಕಿದ, ಉಸಿರಾಡಿದ ಮತ್ತು ಶ್ರಮಿಸಿದ ಪ್ರತಿಯೊಬ್ಬ ಭಾರತೀಯರೂ ಸನ್ನದ್ಧರಾದರು. ಸ್ವಾತಂತ್ರ್ಯವನ್ನು ಪಡೆಯಲು ಒಂದು ಅಸಾಧಾರಣ ಶಕ್ತಿಯು ತ್ಯಾಗಗಳಿಗೆ ಸಿದ್ಧವಾಗಿತ್ತು. ತಮ್ಮ ಯೌವನವನ್ನು ಜೈಲುಗಳಲ್ಲಿ ಕಳೆದ ಅಸಂಖ್ಯಾತ ಮಹಾನ್ ಚೇತನಗಳು ಗುಲಾಮಗಿರಿಯ ಸರಪಳಿಗಳನ್ನು ಮುರಿಯಲು ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದವು.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ತ್ಯಾಗ ಮತ್ತು ತಪಸ್ಸಿನ ಸರ್ವವ್ಯಾಪಿ ರೂಪವಾದ ಆ ವ್ಯಾಪಕ ಪ್ರಜ್ಞೆಯು, ಜನಸಾಮಾನ್ಯರ ಹೃದಯಗಳಲ್ಲಿ ಹೊಸ ನಂಬಿಕೆಯನ್ನು ಹುಟ್ಟುಹಾಕಿತು. 1947ರಲ್ಲಿ, ದೇಶವು ಅಂತಿಮವಾಗಿ ಸ್ವಾತಂತ್ರ್ಯವನ್ನು ಸಾಧಿಸಿತು, ಸಾವಿರ ವರ್ಷಗಳ ದಾಸ್ಯದ ಸಮಯದಲ್ಲಿ ಕಂಡ ಕನಸುಗಳನ್ನು ಈಡೇರಿಸಿತು.

ಸ್ನೇಹಿತರೇ,

ನಾನು ಒಂದು ಕಾರಣಕ್ಕಾಗಿ ಸಾವಿರ ವರ್ಷಗಳ ಹಿಂದಿನ ಘಟನೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ನಮ್ಮ ದೇಶದ ಮುಂದಿರುವ ಮತ್ತೊಂದು ಅವಕಾಶಕ್ಕೆ ನಾನು ಸಾಕ್ಷಿಯಾಗುತ್ತಿದ್ದೇನೆ. ನಾವೀಗ ಅಂತಹ ಅವಧಿಯಲ್ಲಿ ವಾಸಿಸುತ್ತಿದ್ದೇವೆ. ನಾವು ಅಂತಹ ಯುಗವನ್ನು ಪ್ರವೇಶಿಸಿದ್ದೇವೆ. ನಾವು ಯೌವನದಲ್ಲಿ ಜೀವಿಸುತ್ತಿದ್ದೇವೆ ಅಥವಾ 'ಅಮೃತ ಕಾಲ'ದ ಮೊದಲ ವರ್ಷದಲ್ಲಿ ಭಾರತ ಮಾತೆಯ ಮಡಿಲಲ್ಲಿ ಜನಿಸಿದ್ದೇವೆ ಎಂಬುದು ನಮ್ಮ ಸೌಭಾಗ್ಯ. ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ನಾವು ಕೈಗೊಳ್ಳುವ ಕ್ರಮಗಳು, ನಾವು ಇಡುವ ಹೆಜ್ಜೆಗಳು, ನಾವು ಮಾಡುವ ತ್ಯಾಗಗಳು, ಈ ಯುಗದಲ್ಲಿ ನಾವು ಕೈಗೊಳ್ಳುವ ತಪಸ್ಸು ನಮ್ಮ ಪರಂಪರೆಯನ್ನು ವ್ಯಾಖ್ಯಾನಿಸುತ್ತದೆ.

ʻಸರ್ವಜನ ಹಿತಾಯ, ಸರ್ವಜನ ಸುಖಾಯ; ನಾವು ಒಂದರ ನಂತರ ಒಂದರಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಮುಂದಿನ 1000 ವರ್ಷಗಳ ದೇಶದ ಸುವರ್ಣ ಇತಿಹಾಸವು ಈ ನಿರ್ಧಾರಗಳಿಂದಲೇ ಹೊರಹೊಮ್ಮಲಿದೆ. ಈ ಅವಧಿಯಲ್ಲಿ ನಡೆಯುತ್ತಿರುವ ಘಟನೆಗಳು ಮುಂದಿನ 1000 ವರ್ಷಗಳ ಮೇಲೆ ಪರಿಣಾಮ ಬೀರಲಿವೆ. ಗುಲಾಮತನದ ಮನಸ್ಥಿತಿಯಿಂದ ಹೊರಬಂದು, ʻಪಂಚಪ್ರಾಣʼ ಅಥವಾ ʻಪಂಚ ಸಂಕಲ್ಪʼಗಳಿಗೆ ತನ್ನನ್ನು ಸಮರ್ಪಿಸಿಕೊಂಡಿರುವ ದೇಶವು ಇಂದು ಹೊಸ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿದೆ. ಹೊಸ ನಿರ್ಣಯಗಳನ್ನು ಪೂರೈಸಲು ರಾಷ್ಟ್ರವು ಪೂರ್ಣ ಹೃದಯದಿಂದ ಕೆಲಸ ಮಾಡುತ್ತಿದೆ. ಒಂದು ಕಾಲದಲ್ಲಿ ಶಕ್ತಿಯ ಶಕ್ತಿ ಕೇಂದ್ರವಾಗಿದ್ದ, ಆದರೆ ಬೂದಿ ರಾಶಿಯ ಅಡಿಯಲ್ಲಿ ಹೂತುಹೋಗಿದ್ದ ನನ್ನ ಭಾರತ ಮಾತೆಯು 140 ಕೋಟಿ ದೇಶವಾಸಿಗಳ ಪ್ರಯತ್ನಗಳು, ಪ್ರಜ್ಞೆ ಮತ್ತು ಶಕ್ತಿಯಿಂದ ಮತ್ತೊಮ್ಮೆ ಜಾಗೃತವಾಗಿದ್ದಾಳೆ. ಮಾತೆ ಭಾರತಿ ಜಾಗೃತಳಾಗಿದ್ದಾಳೆ. ಈ ಅವಧಿಯಲ್ಲಿ ಭಾರತದ ಕಡೆಗೆ, ಭಾರತದ ಸಾಮರ್ಥ್ಯದ ಕಡೆಗೆ ಪ್ರಪಂಚದಾದ್ಯಂತ ಹೊಸ ನಂಬಿಕೆ, ಹೊಸ ಭರವಸೆ ಮತ್ತು ಹೊಸ ಆಕರ್ಷಣೆ ಹೊರಹೊಮ್ಮಿರುವುದು ಕಳೆದ 9-10 ವರ್ಷಗಳಲ್ಲಿ ನಮ್ಮ ಅನುಭವಕ್ಕೆ ಬಂದಿದೆ. ಭಾರತದಿಂದ ಹೊರಹೊಮ್ಮುತ್ತಿರುವ ಈ ಬೆಳಕಿನ ಕಿರಣದಲ್ಲಿ ಜಗತ್ತು ತನ್ನದೇ ಆದ ಕಿಡಿಯನ್ನು ನೋಡಬಹುದು. ಪ್ರಪಂಚದಾದ್ಯಂತ ಭಾರತದ ಮೇಲೆ ಹೊಸ ವಿಶ್ವಾಸ ಬೆಳೆಯುತ್ತಿದೆ.

ನಾವು ನಮ್ಮ ಪೂರ್ವಜರಿಂದ ಕೆಲವು ವಿಷಯಗಳನ್ನು ಅನುವಂಶಿಕವಾಗಿ ಪಡೆದಿದ್ದೇವೆ. ಪ್ರಸ್ತುತ ಯುಗವು ಸಹ ಇನ್ನೂ ಕೆಲವು ಅಂಶಗಳನ್ನು ಸೃಷ್ಟಿಸಿರುವುದು ನಮ್ಮ ಅದೃಷ್ಟ. ಇಂದು ನಾವು ಜನಸಂಖ್ಯಾಬಲವನ್ನು ಹೊಂದಿದ್ದೇವೆ; ನಮ್ಮಲ್ಲಿ ಪ್ರಜಾಪ್ರಭುತ್ವವಿದೆ; ನಮ್ಮಲ್ಲಿ ವೈವಿಧ್ಯತೆ ಇದೆ. ಜನಸಂಖ್ಯಾಬಲ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯ ಈ ʻತ್ರಿಮೂರ್ತಿʼಗಳು ಭಾರತದ ಪ್ರತಿಯೊಂದು ಕನಸನ್ನು ಈಡೇರಿಸುವ ಸಾಮರ್ಥ್ಯವನ್ನು ಹೊಂದಿವೆ. ಇಂದು, ಪ್ರಪಂಚದಾದ್ಯಂತದ ಬಹುತೇಕ ದೇಶಗಳ ಜನಸಂಖ್ಯೆ ವೃದ್ಧಾಪ್ಯದತ್ತ ಸಾಗುತ್ತಿದೆ.  ಆದರೆ, ಭಾರತದ ಜನಸಂಖ್ಯೆಯು ಯೌವನದತ್ತ ರಭಸದಿಂದ ಸಾಗುತ್ತಿದೆ. ಇದು ಬಹಳ ಹೆಮ್ಮೆಯ ಅವಧಿಯಾಗಿದೆ, ಏಕೆಂದರೆ ಇಂದು ಭಾರತವು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗರಿಷ್ಠ ಯುವಕರು, ಕೋಟ್ಯಂತರ ಕೈಗಳು, ಕೋಟ್ಯಂತರ ಮಿದುಳುಗಳು, ಕೋಟ್ಯಂತರ ಕನಸುಗಳು, ಕೋಟಿಕೋಟಿ ಸಂಕಲ್ಪಗಳು ಇವು ನಮ್ಮ ದೇಶವು ಹೊಂದಿರುವ ಅಗಾಧ ಸಂಪತ್ತು. ಆದ್ದರಿಂದ, ನನ್ನ ಸಹೋದರ ಸಹೋದರಿಯರೇ, ನನ್ನ ಕುಟುಂಬ ಸದಸ್ಯರೇ, ನಾವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಇಂತಹ ಅಂಶಗಳು ದೇಶದ ಹಣೆಬರಹವನ್ನು ಬದಲಾಯಿಸುತ್ತವೆ. ಈ ಶಕ್ತಿಯು ದೇಶದ ಹಣೆಬರಹವನ್ನು ಬದಲಾಯಿಸುತ್ತದೆ. ನಾವು 1000 ವರ್ಷಗಳ ಗುಲಾಮಗಿರಿ ಹಾಗೂ 1000 ವರ್ಷಗಳ ಭವ್ಯ ಭವಿಷ್ಯದ ನಡುವಿನ ಮೈಲುಗಲನ್ನು ತಲುಪಿದ್ದೇವೆ. ನಾವು ಈ ಕೂಡಲಿಯಲ್ಲಿದ್ದೇವೆ. ಆದ್ದರಿಂದ ನಾವು ನಿಲ್ಲಲು ಅಥವಾ ಇನ್ನು ಮುಂದೆ ಸಂದಿಗ್ಧತೆಯಲ್ಲಿ ಬದುಕಲು ಸಾಧ್ಯವಿಲ್ಲ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಹಿಂದೊಮ್ಮೆ ಕಳೆದುಹೋದ ಪರಂಪರೆಯ ಬಗ್ಗೆ ಹೆಮ್ಮೆ ಪಡೋಣ, ಕಳೆದುಹೋದ ಸಮೃದ್ಧಿಯನ್ನು ಮರಳಿ ಪಡೆಯೋಣ. ನಾವು ಏನೇ ಮಾಡಿದರೂ, ನಾವು ಯಾವುದೇ ಹೆಜ್ಜೆ ಇಟ್ಟರೂ, ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಮುಂದಿನ 1000 ವರ್ಷಗಳವರೆಗೆ ನಮ್ಮ ದಿಕ್ಕನ್ನು ನಿರ್ಧರಿಸುತ್ತದೆ ಮತ್ತು ಭಾರತದ ಭವಿಷ್ಯವನ್ನು ಬರೆಯುತ್ತದೆ ಎಂದು ಮತ್ತೊಮ್ಮೆ ನಂಬೋಣ. ಇಂದು ನಾನು ನನ್ನ ದೇಶದ ಯುವಕರಿಗೆ, ನನ್ನ ದೇಶದ ಪುತ್ರರು ಮತ್ತು ಪುತ್ರಿಯರಿಗೆ ಹೇಳಲು ಬಯಸುವುದೇನೆಂದರೆ,  ನೀವು ಅದೃಷ್ಟವಂತರು. ನಮ್ಮ ಯುವಕರು ಈಗ ಪಡೆಯುತ್ತಿರುವ ಅವಕಾಶವನ್ನು ಎಲ್ಲ ಪೀಳಿಗೆಯ ಜನರು ಪಡೆಯಲು ಸಾಧ್ಯವಿಲ್ಲ, ಆದ್ದರಿಂದ ನಾವು ಅದನ್ನು ಕಳೆದುಕೊಳ್ಳಬಾರದು. ನಮ್ಮ ಯುವ ಶಕ್ತಿಯ ಮೇಲೆ ನನಗೆ ಅಪಾರ ನಂಬಿಕೆ ಇದೆ. ನಮ್ಮ ಯುವ ಶಕ್ತಿಯಲ್ಲಿ ಅಪಾರ ಶಕ್ತಿ/ ಸಾಮರ್ಥ್ಯವಿದೆ. ಈ ಸಾಮರ್ಥ್ಯವನ್ನು ಬಲಪಡಿಸಲು ಅನುವು ಮಾಡಿಕೊಡುವ ವಾತಾವರಣವನ್ನು ನಮ್ಮ ನೀತಿಗಳು ಮತ್ತು ನಮ್ಮ ಮಾರ್ಗಗಳು ಒದಗಿಸುತ್ತವೆ.

ಇಂದು ನನ್ನ ದೇಶದ ಯುವಕರು ಭಾರತವನ್ನು ವಿಶ್ವದ ಮೊದಲ ಮೂರು ನವೋದ್ಯಮ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದು ನಿರ್ದಿಷ್ಟ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಭಾರತದ ಈ ಶಕ್ತಿಯನ್ನು ನೋಡಿ ವಿಶ್ವದ ಯುವಕರು ಆಶ್ಚರ್ಯಚಕಿತರಾಗಿದ್ದಾರೆ. ಇಂದು ಜಗತ್ತು ತಂತ್ರಜ್ಞಾನದಿಂದ ಮುನ್ನಡೆಸಲ್ಪಡುತ್ತಿದೆ, ಮುಂಬರುವ ಯುಗವು ತಂತ್ರಜ್ಞಾನದಿಂದ ಪ್ರಭಾವಿತವಾಗಲಿದೆ. ಇದು ತಂತ್ರಜ್ಞಾನದಲ್ಲಿ ಭಾರತದ ಪ್ರತಿಭೆಯ ಪರಾಕ್ರಮವನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ, ಭಾರತದ ಪ್ರತಿಭೆಗಳು ಹೊಸ ಹಾಗೂ ಮಹತ್ವದ ಪಾತ್ರವನ್ನು ವಹಿಸಲಿದ್ದಾರೆ.

ಸ್ನೇಹಿತರೇ,

ಇತ್ತೀಚೆಗೆ, ನಾನು ಜಿ -20 ಶೃಂಗಸಭೆಗಾಗಿ ಬಾಲಿಗೆ ಹೋಗಿದ್ದೆ. ಅಲ್ಲಿ ವಿಶ್ವದ ಅತ್ಯಂತ ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಪ್ರಧಾನ ಮಂತ್ರಿಗಳು ನಮ್ಮ ಡಿಜಿಟಲ್ ಇಂಡಿಯಾದ ಸೂಕ್ಷ್ಮತೆಗಳು ಮತ್ತು ಯಶಸ್ಸಿನ ಬಗ್ಗೆ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿದ್ದರು, ಅಪಾರ ಕುತೂಹಲ ವ್ಯಕ್ತಪಡಿಸಿದರು. ಭಾರತವು ಸಾಧಿಸಿದ ಈ ಅದ್ಭುತವು ದೆಹಲಿಯ ಯುವಕರು ಮಾಡಿದ ಪ್ರಯತ್ನಗಳಿಗೆ ಸೀಮಿತವಾಗಿಲ್ಲ.  ಮುಂಬೈ, ಚೆನ್ನೈ ಮಾತ್ರವಲ್ಲದೆ ನನ್ನ ಶ್ರೇಣಿ -2, ಶ್ರೇಣಿ -3 ನಗರಗಳ ಯುವಕರು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ನಾನು ಹೇಳಿದಾಗ ಅವರು ನಮ್ಮ ಪ್ರತಿಭೆಯ ಬಗ್ಗೆ ಚಕಿತರಾದರು. ಇಂದು ಸಣ್ಣ ಸ್ಥಳಗಳಿಂದ ಬಂದ ಯುವಕರು ಸಹ ನನ್ನ ದೇಶದ ಹಣೆಬರಹವನ್ನು ರೂಪಿಸುತ್ತಿದ್ದಾರೆ. ನಾನು ಇಂದು ಇದನ್ನು ಬಹಳ ವಿಶ್ವಾಸದಿಂದ ಹೇಳುತ್ತೇನೆ, ದೇಶದ ಈ ಹೊಸ ಸಾಮರ್ಥ್ಯವು ಗೋಚರಿಸುತ್ತಿದೆ. ಅದಕ್ಕಾಗಿಯೇ ನಮ್ಮ ಸಣ್ಣ ನಗರಗಳು ಗಾತ್ರ ಮತ್ತು ಜನಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ ಅವು ಪ್ರದರ್ಶಿಸಿದ ಭರವಸೆ ಮತ್ತು ಆಕಾಂಕ್ಷೆಗಳು, ಪ್ರಯತ್ನ ಮತ್ತು ಪ್ರಭಾವವು ಯಾವುದಕ್ಕೂ ಕಡಿಮೆಯಿಲ್ಲ ಎಂದು ನಾನು ಹೇಳುತ್ತೇನೆ. ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು, ಪರಿಹಾರಗಳನ್ನು ಒದಗಿಸಲು ಮತ್ತು ತಾಂತ್ರಿಕ ಸಾಧನಗಳನ್ನು ವಿನ್ಯಾಸಗೊಳಿಸಲು ಯುವಕರು ಹೊಸ ಆಲೋಚನೆಗಳನ್ನು ಹೊಂದಿದ್ದಾರೆ. ನಮ್ಮ ಕ್ರೀಡಾ ಜಗತ್ತು ಹೇಗೆ ವಿಕಸನಗೊಂಡಿದೆ ಎಂಬುದನ್ನು ನೋಡಿ. ಕೊಳೆಗೇರಿಗಳಿಂದ ಬಂದ ಮಕ್ಕಳು ಇಂದು ಕ್ರೀಡಾ ಜಗತ್ತಿನಲ್ಲಿ ತಮ್ಮ ಶಕ್ತಿಯನ್ನು ತೋರಿಸುತ್ತಿದ್ದಾರೆ. ಸಣ್ಣ ಹಳ್ಳಿಗಳು, ಸಣ್ಣ ಪಟ್ಟಣಗಳ ಯುವಕರು, ನಮ್ಮ ಪುತ್ರರು ಮತ್ತು ಪುತ್ರಿಯರು ಇಂದು ಈ ಕ್ಷೇತ್ರದಲ್ಲಿ ಅದ್ಭುತಗಳನ್ನು ಸಾಧಿಸುತ್ತಿದ್ದಾರೆ. ಈಗ ನೋಡಿ, ನನ್ನ ದೇಶದಲ್ಲಿ 100 ಶಾಲೆಗಳಿವೆ, ಅಲ್ಲಿ ಮಕ್ಕಳು ಉಪಗ್ರಹಗಳನ್ನು ತಯಾರಿಸುತ್ತಿದ್ದಾರೆ,  ಮತ್ತು ಅವುಗಳನ್ನು ಒಂದು ದಿನ ಉಡ್ಡಯನ ಮಾಡಲು ಬಯಸುತ್ತಾರೆ. ಇಂದು ಸಾವಿರಾರು ಟಿಂಕರಿಂಗ್ ಲ್ಯಾಬ್‌ಗಳು ಹೊಸ ವಿಜ್ಞಾನಿಗಳನ್ನು ಸೃಷ್ಟಿಸುತ್ತಿವೆ. ಇಂದು, ಸಾವಿರಾರು ಟಿಂಕರಿಂಗ್ ಲ್ಯಾಬ್‌ಗಳು ಲಕ್ಷಾಂತರ ಮಕ್ಕಳನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಹಾದಿ ಹಿಡಿಯುವಂತೆ ಪ್ರೇರೇಪಿಸುತ್ತಿವೆ.

ನಾನು ನನ್ನ ದೇಶದ ಯುವಕರಿಗೆ ಹೇಳಲು ಬಯಸುವುದೇನೆಂದರೆ, ಇಂದು ಅವಕಾಶಗಳಿಗೆ ಕೊರತೆಯಿಲ್ಲ. ನಿಮಗೆ ಬೇಕಾದಷ್ಟು ಅಗಾಧ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಈ ದೇಶ ಹೊಂದಿದೆ, ಇದಕ್ಕೆ ಆಕಾಶವೇ ಮಿತಿ.

ಇಂದು, ಕೆಂಪು ಕೋಟೆಯ ಕೊತ್ತಲಗಳಿಂದ, ನಾನು ನನ್ನ ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಲು ಬಯಸುತ್ತೇನೆ. ನನ್ನ ತಾಯಂದಿರು ಮತ್ತು ಸಹೋದರಿಯರ ವಿಶೇಷ ಪರಾಕ್ರಮ ಮತ್ತು ಸಾಮರ್ಥ್ಯದಿಂದಾಗಿ ನಮ್ಮ ದೇಶ ಇಂದು ಒಂದು ಮಟ್ಟವನ್ನು ತಲುಪಿದೆ. ಇಂದು ದೇಶವು ಪ್ರಗತಿಯ ಹಾದಿಯಲ್ಲಿದೆ, ಆದ್ದರಿಂದ ನಾನು ನನ್ನ ರೈತ ಸಹೋದರ-ಸಹೋದರಿಯರನ್ನು ಅಭಿನಂದಿಸಲು ಬಯಸುತ್ತೇನೆ. ಇಂದು ನಾನು ನನ್ನ ದೇಶದ ಕಾರ್ಮಿಕರಿಗೆ, ನನ್ನ ಪ್ರೀತಿಯ ಕುಟುಂಬ ಸದಸ್ಯರಾಗಿರುವ ನನ್ನ ಕಾರ್ಮಿಕರಿಗೆ ಹಾಗೂ ಈ ವರ್ಗಕ್ಕೆ ಸೇರಿದ ಕೋಟ್ಯಂತರ ಜನರಿಗೆ ನಮಿಸುತ್ತೇನೆ. ಇಂದು, ಆಧುನಿಕತೆಯತ್ತ ಸಾಗುತ್ತಿರುವ ಭಾರತವನ್ನು ಜಗತ್ತಿಗೆ ಹೋಲಿಸಬಹುದಾದ ಒಂದು ಶಕ್ತಿಯಾಗಿ ನೋಡಲಾಗುತ್ತದೆ. ನನ್ನ ದೇಶದ ಕಾರ್ಮಿಕರ ದೊಡ್ಡ ಕೊಡುಗೆಯಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಕೆಂಪು ಕೋಟೆಯ ಕೊತ್ತಲಗಳಿಂದ ಅವರ ದಣಿವರಿಯದ ಪ್ರಯತ್ನಗಳನ್ನು ಶ್ಲಾಘಿಸಲು ಇಂದು ಸೂಕ್ತ ಸಮಯ. ಅವರೆಲ್ಲರನ್ನೂ ನಾನು ನಿಜವಾಗಿಯೂ ಮನದಾಳದಿಂದ ಅಭಿನಂದಿಸುತ್ತೇನೆ.

ನನ್ನ ಕುಟುಂಬ ಸದಸ್ಯರನ್ನು, ನನ್ನ ದೇಶದ 140 ಕೋಟಿ ನಾಗರಿಕರನ್ನು, ಈ ಕಾರ್ಮಿಕರನ್ನು, ಈ ಬೀದಿ ಬದಿ ವ್ಯಾಪಾರಿಗಳನ್ನು ಮತ್ತು ಹಣ್ಣು-ತರಕಾರಿ ಮಾರಾಟಗಾರರನ್ನು ನಾನು ಗೌರವಿಸುತ್ತೇನೆ. ನನ್ನ ರಾಷ್ಟ್ರವನ್ನು ಮುನ್ನಡೆಸುವಲ್ಲಿ, ಭಾರತವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ವೃತ್ತಿಪರರು ಮಹತ್ವದ ಪಾತ್ರ ವಹಿಸುತ್ತಾರೆ. ವಿಜ್ಞಾನಿಗಳು, ಎಂಜಿನಿಯರ್ ಗಳು, ವೈದ್ಯರು, ದಾದಿಯರು, ಶಿಕ್ಷಕರು, ವಿದ್ವಾಂಸರು, ವಿಶ್ವವಿದ್ಯಾಲಯಗಳು, ಗುರುಕುಲಗಳು ಹೀಗೆ ಯಾರೇ ಆಗಿರಲಿ, ಪ್ರತಿಯೊಬ್ಬರೂ ಭಾರತ ಮಾತೆಯ ಭವಿಷ್ಯವನ್ನು ಉಜ್ವಲಗೊಳಿಸಲು ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ರಾಷ್ಟ್ರೀಯ ಪ್ರಜ್ಞೆ ಎಂಬುದು ನಮ್ಮನ್ನು ಚಿಂತೆಗಳಿಂದ ಮುಕ್ತಗೊಳಿಸುವ ಪದವಾಗಿದೆ. ಇಂದು, ಭಾರತದ ಅತಿದೊಡ್ಡ ಶಕ್ತಿಯೆಂದರೆ ಅದು ʻವಿಶ್ವಾಸʼ ಎಂಬುದನ್ನು ಈ ರಾಷ್ಟ್ರೀಯ ಪ್ರಜ್ಞೆಯು ಸಾಬೀತುಪಡಿಸುತ್ತಿದೆ. ಭಾರತದ ಅತಿದೊಡ್ಡ ಶಕ್ತಿಯೆಂದರೆ ನಂಬಿಕೆ, ಪ್ರತಿಯೊಬ್ಬ ವ್ಯಕ್ತಿಯ ಮೇಲಿನ ನಮ್ಮ ನಂಬಿಕೆ, ಸರ್ಕಾರದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆ, ರಾಷ್ಟ್ರದ ಉಜ್ವಲ ಭವಿಷ್ಯದ ಬಗ್ಗೆ ಪ್ರತಿಯೊಬ್ಬರ ನಂಬಿಕೆ ಮತ್ತು ಭಾರತದ ಮೇಲಿನ ವಿಶ್ವದ ನಂಬಿಕೆ. ಇದು ನಮ್ಮ ನೀತಿಗಳು ಮತ್ತು ಆಚರಣೆಗಳ ಮೇಲಿನ ನಂಬಿಕೆಯಾಗಿದೆ. ಭಾರತದ ಉಜ್ವಲ ಭವಿಷ್ಯದತ್ತ ಸಾಗುತ್ತಿರುವ ನಮ್ಮ ದೃಢವಾದ ಹೆಜ್ಜೆಗಳಿಂದ ಈ ವಿಶ್ವಾಸವು ಮೂಡಿದೆ.

ಸಹೋದರ-ಸಹೋದರಿಯರೇ,

ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ಭಾರತದ ಸಾಮರ್ಥ್ಯಗಳು ಮತ್ತು ಸಾಧ್ಯತೆಗಳು ವಿಶ್ವಾಸದ ಹೊಸ ಎತ್ತರವನ್ನು ದಾಟಲಿವೆ ಎಂಬುದು ಖಚಿತವಾಗಿದೆ. ಹೊಸ ಶಕ್ತಿ ಮತ್ತು ಸಾಮರ್ಥ್ಯಗಳ ಮೇಲಿನ ಈ ವಿಶ್ವಾಸವನ್ನು ಮತ್ತಷ್ಟು ಉಳಿಸಿ, ಬೆಳೆಸಬೇಕು. ಇಂದು, ಜಿ-20 ಶೃಂಗಸಭೆಯ ಆತಿಥ್ಯ ವಹಿಸುವ ಅವಕಾಶ ದೇಶಕ್ಕೆ ಸಿಕ್ಕಿದೆ. ಜೊತೆಗೆ, ಕಳೆದ ವರ್ಷದಿಂದ ಭಾರತದ ಮೂಲೆ ಮೂಲೆಯಲ್ಲೂ ವಿವಿಧ ಜಿ -20 ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕಾರ್ಯಕ್ರಮಗಳು ಸಾಮಾನ್ಯ ಜನರ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿವೆ. ಈ ಕಾರ್ಯಕ್ರಮಗಳು ಭಾರತದ ವೈವಿಧ್ಯತೆಯನ್ನು ಜಗತ್ತಿಗೆ ಪರಿಚಯಿಸಿವೆ. ಜಗತ್ತು ಭಾರತದ ವೈವಿಧ್ಯತೆಯನ್ನು ಅಚ್ಚರಿಯಿಂದ ಗಮನಿಸುತ್ತಿದೆ. ಇದರ ಪರಿಣಾಮವಾಗಿ, ಭಾರತದತ್ತ ಆಕರ್ಷಣೆಯೂ ಹೆಚ್ಚಾಗಿದೆ. ಭಾರತವನ್ನು ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಬಯಕೆ ಬೆಳೆಯುತ್ತಿದೆ. ಅಂತೆಯೇ, ಭಾರತದ ರಫ್ತು ವೇಗವಾಗಿ ಬೆಳೆಯುತ್ತಿದೆ. ಈ ಎಲ್ಲಾ ಮಾನದಂಡಗಳ ಆಧಾರದ ಮೇಲೆ ವಿಶ್ವದಾದ್ಯಂತದ ತಜ್ಞರು ಭಾರತಕ್ಕೆ ಈಗ ತಡೆಯೇ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ನಾನು ಈ ಸಂದರ್ಭದಲ್ಲಿ ತಿಳಿಸಲು ಬಯಸುತ್ತೇನೆ. ಭಾರತವನ್ನು ಹೊಗಳದ ಯಾವುದೇ ರೇಟಿಂಗ್ ಏಜೆನ್ಸಿ ಜಗತ್ತಿನಲ್ಲಿ ಇಲ್ಲ.

ಕರೋನಾ ಅವಧಿಯ ನಂತರ ಜಗತ್ತು ಹೊಸ ರೀತಿಯಲ್ಲಿ ಯೋಚಿಸಲು ಪ್ರಾರಂಭಿಸಿದೆ. ಎರಡನೇ ಮಹಾಯುದ್ಧದ ನಂತರ, ಜಗತ್ತು ಹೊಸ ವಿಶ್ವ ಕ್ರಮಕ್ಕೆ, ಹೊಸ ಬದಲಾವಣೆಗೆ ಸಾಕ್ಷಿಯಾದ ರೀತಿಯಲ್ಲೇ ಈಗ ಕರೋನಾ ನಂತರ ಜಗತ್ತು ಹೊಸ ವಿಶ್ವ ಕ್ರಮ, ಹೊಸ ಜಾಗತಿಕ ಕ್ರಮಕ್ಕೆ ಸಾಕ್ಷಿಯಾಗುತ್ತಿರುವುದನ್ನು ನಾನು ಖಂಡಿತ ನೋಡಬಲ್ಲೆ. ಜೊತೆಗೆ, ಕೋವಿಡ್‌ ಬಳಿಕ ಹೊಸ ಭೌಗೋಳಿಕ-ರಾಜಕೀಯ ಸಮೀಕರಣವು ವೇಗವಾಗಿ ಪ್ರಗತಿ ಹೊಂದುತ್ತಿರುವುದನ್ನು ನಾನು ಗಮನಿಸಿದ್ದೇನೆ. ಭೌಗೋಳಿಕ-ರಾಜಕೀಯ ಸಮೀಕರಣದ ಎಲ್ಲಾ ಅರ್ಥೈಕೆಗಳು, ವ್ಯಾಖ್ಯಾನಗಳು ಬದಲಾಗುತ್ತಿವೆ. ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ಬದಲಾಗುತ್ತಿರುವ ಜಗತ್ತನ್ನು ರೂಪಿಸುವಲ್ಲಿ ನನ್ನ 140 ಕೋಟಿ ಸಹ ನಾಗರಿಕರ ಸಾಮರ್ಥ್ಯವನ್ನು ಜಗತ್ತು ನೋಡುತ್ತಿದೆ ಎಂದು ನೀವು ಹೆಮ್ಮೆ ಪಡಬಹುದು. ನೀವು ಈಗ ತಿರುವಿನ ಬಿಂದುವಿನಲ್ಲಿ ನಿಂತಿದ್ದೀರಿ.

ಕರೋನಾ ಅವಧಿಯಲ್ಲಿ, ಭಾರತವು ದೇಶವನ್ನು ಮುನ್ನಡೆಸಿದ ರೀತಿಯಲ್ಲಿ ಜಗತ್ತು ನಮ್ಮ ಸಾಮರ್ಥ್ಯಗಳನ್ನು ನೋಡಿದೆ. ವಿಶ್ವದ ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಾಗ, ದೊಡ್ಡ ಆರ್ಥಿಕತೆಗಳ ಮೇಲೆ ಒತ್ತಡವಿದ್ದಾಗ, ಆ ಸಮಯದಲ್ಲಿಯೂ, ವಿಶ್ವದ ಅಭಿವೃದ್ಧಿಯನ್ನು ನೋಡಬೇಕು ಎಂದು ನಾವು ಹೇಳಿದ್ದೆವು. ಇದು ಮಾನವ ಕೇಂದ್ರಿತ ಮತ್ತು ಮಾನವೀಯವಾಗಿರಬೇಕು; ಆಗ ಮಾತ್ರ ನಾವು ಸಮಸ್ಯೆಗಳಿಗೆ ಸರಿಯಾದ ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಮಾನವ ಸಂವೇದನೆಗಳ ಹೊರತಾಗಿ ನಾವು ವಿಶ್ವದ ಕಲ್ಯಾಣವನ್ನು ಮಾಡಲು ಸಾಧ್ಯವಿಲ್ಲ ಎಂಬ ಪಾಠವನ್ನು ಕೋವಿಡ್ ನಮಗೆ ಪಾಠ ಕಲಿಸಿತು ಅಥವಾ ಈ ವಿಷಯವನ್ನು ಅನಿವಾರ್ಯವಾಗಿ ಅರಿತುಕೊಳ್ಳುವಂತೆ ಮಾಡಿತು.

ಇಂದು ಭಾರತವು ಜಾಗತಿಕ ದಕ್ಷಿಣದ ಧ್ವನಿಯಾಗುತ್ತಿದೆ. ಭಾರತದ ಸಮೃದ್ಧಿ ಮತ್ತು ಪರಂಪರೆ ಇಂದು ಜಗತ್ತಿಗೆ ಅವಕಾಶಗಳಾಗಿ ಬದಲಾಗುತ್ತಿದೆ. ಸ್ನೇಹಿತರೇ, ಜಾಗತಿಕ ಆರ್ಥಿಕತೆ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಭಾಗವಹಿಸುವಿಕೆಯಿಂದಾಗಿ ಮತ್ತು ಭಾರತವು ತನ್ನದೇ ಆದ ಸ್ಥಾನವನ್ನು ಗಳಿಸಿರುವುದರಿಂದ, ಇಂದು ಭಾರತದ ಪ್ರಸ್ತುತ ಸನ್ನಿವೇಶವು ಜಗತ್ತಿನಲ್ಲಿ ಸ್ಥಿರತೆಯ ಖಾತರಿಯನ್ನು ತಂದಿದೆ ಎಂದು  ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. ನಮ್ಮ ಮನಸ್ಸಿನಲ್ಲಿ, ನನ್ನ 140 ಕೋಟಿ ಕುಟುಂಬ ಸದಸ್ಯರ ಮನಸ್ಸಿನಲ್ಲಿ ಅಥವಾ ವಿಶ್ವದ ಮನಸ್ಸಿನಲ್ಲಿ ಈಗ 'ಒಂದು ವೇಳೆ' ಅಥವಾ 'ಆದರೆ' ಎಂಬ ಅಪನಂಬಿಕೆಗಳು ಇಲ್ಲ. ಸಂಪೂರ್ಣ ವಿಶ್ವಾಸ ಮನೆ ಮಾಡಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಈಗ ಚೆಂಡು ನಮ್ಮ ಅಂಗಳದಲ್ಲಿದೆ; ನಾವು ಅವಕಾಶವನ್ನು ಬಿಡಬಾರದು; ನಾವು ಅವಕಾಶವನ್ನು ಕಳೆದುಕೊಳ್ಳಬಾರದು. ನಾನು ಭಾರತದಲ್ಲಿನ ನನ್ನ ದೇಶವಾಸಿಗಳನ್ನು ಅಭಿನಂದಿಸುತ್ತೇನೆ, ಏಕೆಂದರೆ ನನ್ನ ದೇಶವಾಸಿಗಳು ಸಮಸ್ಯೆಗಳ ಮೂಲಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದ್ದರಿಂದಲೇ 2014ರಲ್ಲಿ, 30 ವರ್ಷಗಳ ಅನುಭವದ ನಂತರ, ದೇಶವನ್ನು ಮುಂದೆ ಕೊಂಡೊಯ್ಯಲು, ಸ್ಥಿರ ಮತ್ತು ಬಲವಾದ ಸರ್ಕಾರದ ಅಗತ್ಯವಿದೆ ಎಂದು ನನ್ನ ದೇಶವಾಸಿಗಳು ನಿರ್ಧರಿಸಿದರು; ಪೂರ್ಣ ಬಹುಮತದ ಸರ್ಕಾರ ಬೇಕಾಗಿತ್ತು. ಆದ್ದರಿಂದ, ದೇಶವಾಸಿಗಳು ಬಲವಾದ ಮತ್ತು ಸ್ಥಿರವಾದ ಸರ್ಕಾರವನ್ನು ರಚಿಸಿದರು. ಮತ್ತು ದೇಶವನ್ನು ಕಾಡುತ್ತಿದ್ದ ಮೂರು ದಶಕಗಳ ಅನಿಶ್ಚಿತತೆ, ಅಸ್ಥಿರತೆ ಮತ್ತು ರಾಜಕೀಯ ಒತ್ತಡಗಳಿಂದ ಭಾರತವು ಮುಕ್ತವಾಯಿತು.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ದೇಶವು ಇಂದು ಸ್ಥಿರ ಸರ್ಕಾರವನ್ನು ಹೊಂದಿದೆ, ಅದು ದೇಶದ ಸಮತೋಲಿತ ಅಭಿವೃದ್ಧಿಗಾಗಿ ಕಾಲದ ಪ್ರತಿ ಕ್ಷಣವನ್ನು ಮತ್ತು ಜನರ ಹಣದ ಪ್ರತಿ ಪೈಸೆಯನ್ನು ವಿನಿಯೋಗಿಸುತ್ತಿದೆ; ʻ‍ಸರ್ವಜನ ಹಿತಾಯ: ಸರ್ವಜನ ಸುಖಾಯʼಕ್ಕಾಗಿ ಇವುಗಳನ್ನು ಬಳಸುತ್ತಿದೆ. ನನ್ನ ಸರ್ಕಾರ ಮತ್ತು ನನ್ನ ದೇಶವಾಸಿಗಳ ಹೆಮ್ಮೆಯ ಭಾವವು ಒಂದು ವಿಷಯದೊಂದಿಗೆ ನಂಟು ಹೊಂದಿದೆ. ಅದೆಂದರೆ, ನಮ್ಮ ಪ್ರತಿಯೊಂದು ನಿರ್ಧಾರ, ನಮ್ಮ ಪ್ರತಿಯೊಂದು ದಿಕ್ಕು ಕೇವಲ ಒಂದು ಮಾನದಂಡಕ್ಕೆ ಸಂಬಂಧಿಸಿದ್ದಾಗಿದೆ, ಅಂದರೆ 'ರಾಷ್ಟ್ರವೇ ಮೊದಲು'. ಮತ್ತು 'ರಾಷ್ಟ್ರವೇ ಮೊದಲುʼ ಎಂಬ ಚಿಂತನೆಯು ದೂರಗಾಮಿ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸಗಳು ನಡೆಯುತ್ತಿವೆ. ಆದರೆ, 2014 ಮತ್ತು 2019 ರಲ್ಲಿ ನೀವು ಬಲವಾದ ಸರ್ಕಾರಕ್ಕೆ ಅಧಿಕಾರ ನೀಡಿದ್ದೀರಿ. ಆದ್ದರಿಂದಲೇ ಮೋದಿಯವರು ಸುಧಾರಣೆಗಳನ್ನು ತರುವ ಧೈರ್ಯವನ್ನು ಪಡೆದರು ಎಂದು ನಾನು ಹೇಳಲು ಬಯಸುತ್ತೇನೆ. ಸುಧಾರಣೆಗಳನ್ನು ತರಲು ಮೋದಿಯವರಲ್ಲಿ ಧೈರ್ಯ ತುಂಬುವಂತಹ ಸರ್ಕಾರವನ್ನು ನೀವು ರಚಿಸಿದ್ದೀರಿ. ಮೋದಿಯವರು ಒಂದರ ನಂತರ ಒಂದರಂತೆ ಸುಧಾರಣೆಗಳನ್ನು ತಂದಾಗ, ಭಾರತದ ಮೂಲೆ ಮೂಲೆಗಳಲ್ಲಿ ಸರ್ಕಾರದ ಭಾಗವಾಗಿ ಕೆಲಸ ಮಾಡುತ್ತಿರುವ ನನ್ನ ಅಧಿಕಾರಶಾಹಿಯ ಸಿಬ್ಬಂದಿಯು, ನನ್ನ ಕೋಟ್ಯಂತರ ಕೈಕಾಲುಗಳಂತೆ 'ಪರಿವರ್ತನೆಗಾಗಿ ಕಾರ್ಯನಿರ್ವಹಿಸಿದರು'. ಅವರು ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದರು. ಇದರಲ್ಲಿ ಸಾರ್ವಜನಿಕರು ಕೈ ಜೋಡಿಸಿದಾಗ, ನಾವು ಪರಿವರ್ತನೆಯನ್ನು ಸ್ಪಷ್ಟವಾಗಿ ನೋಡಬಹುದು. ಅದಕ್ಕಾಗಿಯೇ ಈ 'ಸುಧಾರಣೆ, ಪ್ರದರ್ಶನ, ಪರಿವರ್ತನೆ' ಯುಗವು ಈಗ ಭಾರತದ ಭವಿಷ್ಯವನ್ನು ರೂಪಿಸುತ್ತಿದೆ. ಮತ್ತು ನಾವು ದೇಶದೊಳಗೆ ಆ ಶಕ್ತಿಗಳನ್ನು ಉತ್ತೇಜಿಸುತ್ತಿದ್ದೇವೆ, ಇವೆಲ್ಲವೂ ಒಟ್ಟುಗೂಡಿ ಮುಂಬರುವ ಸಾವಿರ ವರ್ಷಗಳ ಅಡಿಪಾಯವನ್ನು ಬಲಪಡಿಸಲಿವೆ.

ಜಗತ್ತಿಗೆ ಯುವ ಶಕ್ತಿ, ಯುವ ಕೌಶಲ್ಯಗಳ ಅಗತ್ಯವಿದೆ. ಕೌಶಲ್ಯ ಅಭಿವೃದ್ಧಿಗಾಗಿ ನಾವು ಪ್ರತ್ಯೇಕ ಸಚಿವಾಲಯವನ್ನು ರಚಿಸಿದ್ದೇವೆ. ಇದು ಭಾರತದ ಅಗತ್ಯಗಳನ್ನು ಪೂರೈಸುವುದಲ್ಲದೆ, ವಿಶ್ವದ ಅಗತ್ಯಗಳನ್ನು ಸಹ ಪೂರೈಸುತ್ತದೆ.

ನಾವು ಜಲಶಕ್ತಿ ಸಚಿವಾಲಯವನ್ನು ರಚಿಸಿದ್ದೇವೆ. ಸಚಿವಾಲಯದ ಸಂಯೋಜನೆಯನ್ನು ವಿಶ್ಲೇಷಿಸಿದರೆ, ನೀವು ಈ ಸರ್ಕಾರದ ಮನಸ್ಸು ಮತ್ತು ಮೆದುಳನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜಲಶಕ್ತಿ ಸಚಿವಾಲಯವು ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಶುದ್ಧ ಕುಡಿಯುವ ನೀರು ತಲುಪುವಂತೆ ಖಚಿತಪಡಿಸಿಕೊಳ್ಳಲು ಒತ್ತು ನೀಡುತ್ತಿದೆ. ಪರಿಸರವನ್ನು ರಕ್ಷಿಸುವ ಸಲುವಾಗಿ ಸೂಕ್ಷ್ಮ ವ್ಯವಸ್ಥೆಗಳ ಅಭಿವೃದ್ಧಿಯನ್ನು ನಾವು ಪುನರುಚ್ಚರಿಸುತ್ತಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಗಮನ ಹರಿಸುತ್ತಿದ್ದೇವೆ. ನಮ್ಮ ದೇಶವು ಕರೋನಾ ಸಾಂಕ್ರಾಮಿಕವನ್ನು ಧೈರ್ಯದಿಂದ ಎದುರಿಸಿದ ನಂತರ, ಜಗತ್ತು ಸಮಗ್ರ ಆರೋಗ್ಯ ರಕ್ಷಣೆಯನ್ನು ಹುಡುಕುತ್ತಿದೆ; ಇದು ಇಂದಿನ ತುರ್ತು ಅಗತ್ಯವೂ ಹೌದು. ನಾವು ಪ್ರತ್ಯೇಕ ʻಆಯುಷ್ʼ ಸಚಿವಾಲಯವನ್ನು ರಚಿಸಿದ್ದೇವೆ.  ಇಂದು ಯೋಗ ಮತ್ತು ʻಆಯುಷ್ʼ ವಿಶ್ವದಾದ್ಯಂತ ವೇಗವಾಗಿ ವ್ಯಾಪಿಸುತ್ತಿವೆ. ಪ್ರಪಂಚದ ಬಗ್ಗೆ ನಮ್ಮ ಬದ್ಧತೆಯಿಂದಾಗಿ, ಜಗತ್ತು ನಮ್ಮತ್ತ ನೋಡುತ್ತಿದೆ. ನಮ್ಮ ಈ ಸಾಮರ್ಥ್ಯವನ್ನು ನಾವೇ ದುರ್ಬಲಗೊಳಿಸಿದರೆ, ಜಗತ್ತು ಅದನ್ನು ಹೇಗೆ ಒಪ್ಪಿಕೊಳ್ಳುತ್ತದೆ? ಈ ಸಚಿವಾಲಯವನ್ನು ರಚಿಸಿದಾಗ, ಲೋಕವು ಅದರ ಮೌಲ್ಯವನ್ನು ಅರ್ಥಮಾಡಿಕೊಂಡಿತು. ನಾವು ಮೀನುಗಾರಿಕೆ ಮತ್ತು ನಮ್ಮ ದೊಡ್ಡ ಕಡಲತೀರಗಳನ್ನು ನಿರ್ಲಕ್ಷಿಸುತ್ತಿಲ್ಲ. ನಮ್ಮ ಕೋಟ್ಯಂತರ ಮೀನುಗಾರ ಸಹೋದರ-ಸಹೋದರಿಯರ ಕಲ್ಯಾಣವನ್ನು ಖಾತ್ರಿಪಡಿಸುವ ಬಗ್ಗೆ ನಮಗೆ ಅರಿವಿದೆ. ಅವರು ನಮ್ಮ ಹೃದಯದಲ್ಲಿದ್ದಾರೆ ಮತ್ತು ಅದಕ್ಕಾಗಿಯೇ ನಾವು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯಗಳನ್ನು ರಚಿಸಿದ್ದೇವೆ, ಇದರಿಂದ ನಾವು ಸಮಾಜದ ಆ ವರ್ಗಗಳನ್ನು ಮತ್ತು ಹಿಂದುಳಿದಿರುವ ವರ್ಗಗಗಳನ್ನು ಬೆಂಬಲಿಸಬಹುದು.

ದೇಶದಲ್ಲಿ ಸರ್ಕಾರದ ಆರ್ಥಿಕತೆಯ ಭಾಗಗಳಿವೆ, ಆದರೆ ಸಮಾಜದ ಆರ್ಥಿಕತೆಯ ಹೆಚ್ಚಿನ ಭಾಗವು ಸಹಕಾರಿ ಚಳುವಳಿ ರೂಪದಲ್ಲಿದೆ. ಹೀಗಾಗಿ ಪ್ರತ್ಯೇಕ ಸಹಕಾರಿ ಸಚಿವಾಲಯವನ್ನು ಸಹ ರಚಿಸಲಾಗಿದೆ, ಅದು ನಮ್ಮ ಸಹಕಾರಿ ಸಂಸ್ಥೆಗಳ ಮೂಲಕ ತನ್ನ  ಜಾಲವನ್ನು ವ್ಯಾಪಿಸುತ್ತಿದೆ, ಇದರಿಂದ ಕಡು ಬಡವರ ಸಮಸ್ಯೆಗಳನ್ನು ಆಲಿಸಲಾಗುತ್ತದೆ, ಅವರ ಅಗತ್ಯಗಳನ್ನು ಪೂರೈಸಲಾಗುತ್ತದೆ ಮತ್ತು ಅವರು ಸಹ ಸಣ್ಣ ಉದ್ಯಮದ ಭಾಗವಾಗುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಂಘಟಿತ ರೀತಿಯಲ್ಲಿ ಕೊಡುಗೆ ನೀಡಬಹುದು. ನಾವು ʻಸಹಕಾರದ ಮೂಲಕ ಸಮೃದ್ಧಿʼಯ ಮಾರ್ಗವನ್ನು ಅಳವಡಿಸಿಕೊಂಡಿದ್ದೇವೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ನಾವು 2014ರಲ್ಲಿ ಅಧಿಕಾರಕ್ಕೆ ಬಂದಾಗ, ನಾವು ಜಾಗತಿಕ ಆರ್ಥಿಕತೆಯಲ್ಲಿ 10 ನೇ ಸ್ಥಾನದಲ್ಲಿದ್ದೆವು, ಮತ್ತು ಇಂದು 140 ಕೋಟಿ ದೇಶವಾಸಿಗಳ ನಿರಂತರ ಪ್ರಯತ್ನಗಳು ಅಂತಿಮವಾಗಿ ಫಲ ನೀಡಿವೆ. ಏಕೆಂದರೆ ನಾವು ವಿಶ್ವ ಆರ್ಥಿಕತೆಯಲ್ಲಿ 5ನೇ ಸ್ಥಾನವನ್ನು ತಲುಪಿದ್ದೇವೆ. ದೇಶವು ಭ್ರಷ್ಟಾಚಾರದ ಸಂಕೋಲೆಯಲ್ಲಿ ಸಿಲುಕಿದ್ದಾಗ, ಲಕ್ಷಾಂತರ ಕೋಟಿ ರೂ.ಗಳ ಹಗರಣಗಳು ಆರ್ಥಿಕತೆಯನ್ನು ವಿನಾಶಕ್ಕೆ ತಳ್ಳುತ್ತಿದ್ದಾಗ, ದುರ್ಬಲ ಆಡಳಿತ ಮತ್ತು ಕಡತ ವಿಲೇವಾರಿಯೊಂದಿಗೆ ದೇಶವನ್ನು ಗುರುತಿಸುತ್ತಿದ್ದ ಸಮಯದಲ್ಲಿ ಇದು ಸಾಧ್ಯವಾಗಿರಲಿಲ್ಲ. ನಾವು ಸೋರಿಕೆಯನ್ನು ನಿಲ್ಲಿಸಿದ್ದೇವೆ, ಬಲಿಷ್ಠ ಆರ್ಥಿಕತೆಯನ್ನು ರಚಿಸಿದ್ದೇವೆ; ನಾವು ಬಡವರ ಕಲ್ಯಾಣಕ್ಕಾಗಿ ಹೆಚ್ಚು ಹೆಚ್ಚು ಹಣವನ್ನು ಖರ್ಚು ಮಾಡಲು ಪ್ರಯತ್ನಿಸಿದ್ದೇವೆ. ಇಂದು, ದೇಶವು ಆರ್ಥಿಕವಾಗಿ ಸಮೃದ್ಧವಾಗಿದ್ದಾಗ, ಅದು ಕೇವಲ ಬೊಕ್ಕಸವನ್ನು ತುಂಬುವುದಷ್ಟೇ ಅಲ್ಲ, ಅದು ನಾಗರಿಕರು ಮತ್ತು ರಾಷ್ಟ್ರದ ಸಾಮರ್ಥ್ಯವನ್ನು ನಿರ್ಮಿಸುತ್ತದೆ ಎಂದು ನಾನು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ. ತನ್ನ ನಾಗರಿಕರ ಕಲ್ಯಾಣಕ್ಕಾಗಿ ಇದನ್ನು ಪ್ರಾಮಾಣಿಕವಾಗಿ ಖರ್ಚು ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಸರ್ಕಾರವಿದ್ದರೆ, ಎಂತಹ ಫಲಿತಾಂಶಗಳನ್ನಾದರೂ ಸಾಧಿಸಬಹುದು.

ನಮ್ಮ ತ್ರಿವರ್ಣ ಧ್ವಜ ಸಾಕ್ಷಿಯಾಗಿರುವ ಈ ಕೆಂಪು ಕೋಟೆಯ ಕೊತ್ತಲಗಳಿಂದ ನಾನು ನನ್ನ ದೇಶವಾಸಿಗಳಿಗೆ 10 ವರ್ಷಗಳ ಲೆಕ್ಕವನ್ನು ನೀಡುತ್ತಿದ್ದೇನೆ. ನೀವು ಕೇಳುವ ಅಂಕಿ-ಅಂಶಗಳು ಬದಲಾವಣೆಯ ಕುತೂಹಲಕಾರಿ ಕಥೆಯನ್ನು ಹೇಳುತ್ತವೆ, ಮತ್ತು ಇದನ್ನು ಹೇಗೆ ಸಾಧಿಸಲಾಯಿತು, ಅಂತಹ ಪರಿವರ್ತನೆಯನ್ನು ಸುಗಮಗೊಳಿಸುವ ನಮ್ಮ ಸಾಮರ್ಥ್ಯವು ಎಷ್ಟು ಶಕ್ತಿಯುತವಾಗಿದೆ ಎಂದು ನಿಮಗೆ ಅಚ್ಚರಿಯಾಗಬಹುದು. 10 ವರ್ಷಗಳ ಹಿಂದೆ, ಭಾರತ ಸರ್ಕಾರದಿಂದ 30 ಲಕ್ಷ ಕೋಟಿ ರೂ. ರಾಜ್ಯಗಳಿಗೆ ಹೋಗುತ್ತಿತ್ತು. ಕಳೆದ 9 ವರ್ಷಗಳಲ್ಲಿ ಈ ಪ್ರಮಾಣ 100 ಲಕ್ಷ ಕೋಟಿ ರೂ. ತಲುಪಿದೆ. ಈ ಹಿಂದೆ, ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಭಾರತ ಸರ್ಕಾರದ ಖಜಾನೆಯಿಂದ 70 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿತ್ತು, ಇಂದು ಅದು 3 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ. ಈ ಹಿಂದೆ ಬಡವರ ಮನೆಗಳನ್ನು ನಿರ್ಮಿಸಲು 90 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿತ್ತು. ಇಂದು ಅದು 4 ಪಟ್ಟು ಹೆಚ್ಚಾಗಿದೆ ಮತ್ತು ಬಡವರ ಮನೆಗಳನ್ನು ನಿರ್ಮಿಸಲು 4 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಖರ್ಚು ಮಾಡಲಾಗುತ್ತಿದೆ.

ಮೊದಲು ಬಡವರಿಗೆ ಅಗ್ಗದ ದರದಲ್ಲಿ ಯೂರಿಯಾ ಸಿಗಬೇಕು. ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ 3,000 ರೂ.ಗೆ ಮಾರಾಟವಾಗುವ ಯೂರಿಯಾ ಚೀಲಗಳನ್ನು ನಾವು ನಮ್ಮ ರೈತರಿಗೆ 300 ರೂ.ಗಳಿಗೆ ಒದಗಿಸುತ್ತೇವೆ, ಆದ್ದರಿಂದ ಸರ್ಕಾರವು ನಮ್ಮ ರೈತರಿಗೆ ಯೂರಿಯಾ ಮೇಲೆ 10 ಲಕ್ಷ ಕೋಟಿ ರೂ.ಗಳ ಸಬ್ಸಿಡಿಯನ್ನು ಒದಗಿಸುತ್ತಿದೆ. 20 ಲಕ್ಷ ಕೋಟಿ ರೂ. ಗಳ ಬಜೆಟ್ ಹೊಂದಿರುವ ʻಮುದ್ರಾ ಯೋಜನೆʼ ನಮ್ಮ ದೇಶದ ಯುವಕರಿಗೆ ಸ್ವಯಂ ಉದ್ಯೋಗ, ವ್ಯವಹಾರ ಮತ್ತು ಉದ್ಯಮಗಳಿಗೆ ಅವಕಾಶಗಳನ್ನು ಒದಗಿಸಿದೆ. ಸುಮಾರು ಎಂಟು ಕೋಟಿ ಜನರು ಹೊಸ ವ್ಯವಹಾರಗಳನ್ನು ಪ್ರಾರಂಭಿಸಿದ್ದಾರೆ, ಜೊತೆಗೆ, ಇಂತಹ ಪ್ರತಿಯೊಬ್ಬ ಉದ್ಯಮಿಯೂ ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳಿಗೆ ಉದ್ಯೋಗವನ್ನು ಒದಗಿಸಿದ್ದಾರೆ. ಎಂಟು ಕೋಟಿ ನಾಗರಿಕರು ಪಡೆದ ʻಮುದ್ರಾ ಯೋಜನೆʼಯ ಸಾಲದ ಮೂಲಕ 8-10 ಕೋಟಿ ಹೊಸ ವ್ಯಕ್ತಿಗಳಿಗೆ ಉದ್ಯೋಗ ನೀಡುವ ಸಾಮರ್ಥ್ಯವನ್ನು ಸಾಧಿಸಲಾಗಿದೆ.

ಕರೋನಾ ಬಿಕ್ಕಟ್ಟಿನ ಸಮಯದಲ್ಲಿ, ʻಎಂಎಸ್ಎಂಇʼಗಳಿಗೆ ಸುಮಾರು 3.5 ಲಕ್ಷ ಕೋಟಿ ರೂ.ಗಳನ್ನು ನೀಡಿ ಬೆಂಬಲಿಸಲಾಯಿತು, ಆ ಮೂಲಕ ಅವು ಮುಳುಗುವುದನ್ನು ತಡೆಯಿತು, ಇದು ಅವುಗಳಿಗೆ ಹೊಸ ಶಕ್ತಿಯನ್ನು ನೀಡಿತು. ನಮ್ಮ ಸೈನಿಕರಿಗೆ ಗೌರವ ಸಲ್ಲಿಸುವ "ಸಮಾನ ಶ್ರೇಣಿಒನ್ ಸಮಾನ ಪಿಂಚಣಿ”(ಒಆರ್‌ಓಪಿ) ಉಪಕ್ರಮದ ಅಡಿಯಲ್ಲಿ, ಭಾರತದ ಖಜಾನೆಯಿಂದ 70,000 ಕೋಟಿ ರೂ.ಗಳು ಅವರನ್ನು ತಲುಪಿವೆ. ನಮ್ಮ ನಿವೃತ್ತ ಸೈನಿಕರ ಕುಟುಂಬಗಳಿಗೆ ಈ ಹಣ ಸಿಕ್ಕಿದೆ. ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ. ನಾನು ಹೆಚ್ಚು ಸಮಯ ತೆಗೆದುಕೊಳ್ಳಲು ಬಯಸುವುದಿಲ್ಲ. ದೇಶದ ಅಭಿವೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡಿದ ಇನ್ನೂ ಅನೇಕ ಉಪಕ್ರಮಗಳಿವೆ. ಅವು ರಾಷ್ಟ್ರದ ವಿವಿಧ ಮೂಲೆಗಳಲ್ಲಿ ಉದ್ಯೋಗವನ್ನು ಸೃಷ್ಟಿಸಿವೆ.  ಏಕೆಂದರೆ ಮೊದಲಿಗೆ ಹೋಲಿಸಿದರೆ ಅನುದಾನವನ್ನು ಎಲ್ಲಾ ವಿಭಾಗಗಳಲ್ಲಿ ಅನೇಕ ಪಟ್ಟು ಹೆಚ್ಚಿಸಲಾಗಿದೆ.

ಮತ್ತು ನನ್ನ ಪ್ರೀತಿಯ ಪ್ರೀತಿಪಾತ್ರರೇ,

ಆದರೆ ಅಷ್ಟೆ ಅಲ್ಲ; ಈ ಎಲ್ಲ ಪ್ರಯತ್ನಗಳ ಫಲವಾಗಿ ನನ್ನ ಮೊದಲ ಐದು ವರ್ಷಗಳ ಅಧಿಕಾರಾವಧಿಯಲ್ಲಿ 13.5 ಕೋಟಿ ಬಡ ಸಹೋದರ-ಸಹೋದರಿಯರು ಬಡತನದ ಸರಪಳಿಯಿಂದ ಮುಕ್ತರಾಗಿ ಹೊಸ ಮಧ್ಯಮ ವರ್ಗವನ್ನು ಪ್ರವೇಶಿಸಿದ್ದಾರೆ. ಜೀವನದಲ್ಲಿ ಇದಕ್ಕಿಂತ ದೊಡ್ಡ ತೃಪ್ತಿ ಬೇರೊಂದಿಲ್ಲ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ವಸತಿ ಯೋಜನೆಗಳಿಂದ ಹಿಡಿದು, ʻಪಿಎಂ ಸ್ವನಿಧಿʼ ಯೋಜನೆಯ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ 50,000 ಕೋಟಿ ರೂ.ಒದಗಿಸುವುದು ಮತ್ತು ಇನ್ನೂ ಅನೇಕ ಯೋಜನೆಗಳು ಈ 13.5 ಕೋಟಿ ಜನರಿಗೆ ಬಡತನದ ಕಷ್ಟಗಳಿಂದ ಹೊರಬರಲು ಸಹಾಯ ಮಾಡಿವೆ. ಮುಂಬರುವ ದಿನಗಳಲ್ಲಿ, ನಾವು ʻವಿಶ್ವಕರ್ಮ ಜಯಂತಿʼಯ ಸಂದರ್ಭದಲ್ಲಿ ಒಂದು ಯೋಜನೆಯನ್ನು ಪ್ರಾರಂಭಿಸುತ್ತೇವೆ. ಇದು ಸಾಂಪ್ರದಾಯಿಕ ಕರಕುಶಲತೆಯಲ್ಲಿ ನುರಿತ ವ್ಯಕ್ತಿಗಳಿಗೆ, ವಿಶೇಷವಾಗಿ ಒಬಿಸಿ ಸಮುದಾಯದವರಿಗೆ ಪ್ರಯೋಜನವನ್ನು ನೀಡುತ್ತದೆ. ಮರಗೆಲಸಗಾರರು, ನೇಕಾರರು, ಕಲ್ಲುಕೆಲಸಗಾರರು. ಅಕ್ಕಸಾಲಿಗರು, ಕಮ್ಮಾರರು, ಲಾಂಡ್ರಿ ಕಾರ್ಮಿಕರು, ಕ್ಷೌರಿಕರು ಮತ್ತು ಅಂತಹ ಕುಟುಂಬಗಳನ್ನು ʻವಿಶ್ವಕರ್ಮ ಯೋಜನೆʼಯ ಮೂಲಕ ಸಬಲೀಕರಣಗೊಳಿಸಲಾಗುವುದು. ಇದು ಸುಮಾರು 13-15 ಸಾವಿರ ಕೋಟಿ ರೂ. ಗಳ ಅನುದಾನದೊಂದಿಗೆ ಪ್ರಾರಂಭವಾಗಲಿದೆ. ʻಪಿಎಂ ಕಿಸಾನ್ ಸಮ್ಮಾನ್ ನಿಧಿʼಯ ಮೂಲಕ ನಾವು ನೇರವಾಗಿ 2.5 ಲಕ್ಷ ಕೋಟಿ ರೂ.ಗಳನ್ನು ನಮ್ಮ ರೈತರ ಖಾತೆಗಳಿಗೆ ಜಮಾ ಮಾಡಿದ್ದೇವೆ. ನಾವು ʻಜಲ ಜೀವನ್ ಮಿಷನ್ʼಗಾಗಿ 2 ಲಕ್ಷ ಕೋಟಿ ರೂ. ಗಳನ್ನು ಖರ್ಚು ಮಾಡಿದ್ದೇವೆ. ಪ್ರತಿ ಮನೆಗೂ ಶುದ್ಧ ನೀರನ್ನು ಖಾತ್ರಿಪಡಿಸಿದ್ದೇವೆ. ʻಆಯುಷ್ಮಾನ್ ಭಾರತ್ʼ ಯೋಜನೆಯಡಿ ಅನಾರೋಗ್ಯದ ಸಮಯದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಬಡವರ ಹೊರೆಯನ್ನು ನಾವು ಕಡಿಮೆ ಮಾಡಿದ್ದೇವೆ. ʻಆಯುಷ್ಮಾನ್ ಭಾರತ್ʼ ಯೋಜನೆಯಡಿ ನಾವು 70,000 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ, ಅವರಿಗೆ ಔಷಧ, ಚಿಕಿತ್ಸೆ ಮತ್ತು ಗುಣಮಟ್ಟದ ಆಸ್ಪತ್ರೆ ಆರೈಕೆಯ ಲಭ್ಯತೆಯನ್ನು ಖಚಿತಪಡಿಸಿದ್ದೇವೆ. ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ಉಚಿತ ಲಸಿಕೆಗಳನ್ನು ಒದಗಿಸಲು ನಾವು 40,000 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ ಎಂಬುದು ದೇಶಕ್ಕೆ ತಿಳಿದಿದೆ. ಜಾನುವಾರುಗಳನ್ನು ಉಳಿಸಲು ಲಸಿಕೆ ಹಾಕಲು ನಾವು ಸುಮಾರು 15,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದೇವೆ ಎಂದು ತಿಳಿದರೆ ನಿಮಗೆ ಸಂತೋಷವಾಗಬಹುದು.

ನನ್ನ ಪ್ರೀತಿಯ ನಾಗರಿಕರೇ, ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಜನೌಷಧ ಕೇಂದ್ರಗಳು ನಮ್ಮ ದೇಶದ ಹಿರಿಯ ನಾಗರಿಕರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೊಸ ಶಕ್ತಿಯನ್ನು ನೀಡಿವೆ. ಅವಿಭಕ್ತ ಕುಟುಂಬದಲ್ಲಿ, ಯಾರಿಗಾದರೂ ಮಧುಮೇಹವಿದ್ದರೆ, ತಿಂಗಳಿಗೆ 2000-3000 ರೂ.ಗಳ ವೈದ್ಯಕೀಯ ಅಥವಾ ಔಷಧದ ಖರ್ಚು ಬರುವುದು ಸಹಜ. ನಾವು ಮಾರುಕಟ್ಟೆಯಲ್ಲಿ 100 ರೂ.ಗಳ ಬೆಲೆಯ ಔಷಧಗಳನ್ನು ಕೇವಲ 10, 15, 20 ರೂ.ಗಳಿಗೆ ʻಜನೌಷಧ ಕೇಂದ್ರʼಗಳ ಮೂಲಕ ಒದಗಿಸುತ್ತೇವೆ. ಮತ್ತು ಇಂದು, ದೇಶಾದ್ಯಂತ 10,000 ಜನೌಷಧ ಕೇಂದ್ರಗಳ ಮೂಲಕ, ಈ ರೀತಿಯ ರೋಗಗಳಿಗೆ ಔಷಧಗಳ ಅಗತ್ಯವಿರುವ ಜನರ ಸುಮಾರು 20 ಕೋಟಿ ರೂ.ಗಳನ್ನು ಉಳಿಸಲಾಗಿದೆ. ಮತ್ತು ಇವರು ಹೆಚ್ಚಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಜನರು. ಆದರೆ ಇಂದು ಅದರ ಯಶಸ್ಸನ್ನು ನೋಡಿದಾಗ, ನಾವು ʻವಿಶ್ವಕರ್ಮ ಯೋಜನೆʼಯೊಂದಿಗೆ ಸಮಾಜದ ಆ ವರ್ಗವನ್ನು ಸ್ಪರ್ಶಿಸಲಿದ್ದೇವೆ ಎಂದು ನಾನು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ. ಇದೇ ವೇಳೆ, ಪ್ರಸ್ತುತ 10,000 ಇರುವ ʻಜನೌಷಧ ಕೇಂದ್ರʼಗಳ ಸಂಖ್ಯೆಯನ್ನು ಮುಂಬರುವ ದಿನಗಳಲ್ಲಿ ದೇಶಾದ್ಯಂತ 25,000ಕ್ಕೆ ಹೆಚ್ಚಿಸುವ ಗುರಿಯ ನಿಟ್ಟಿನಲ್ಲೂ ನಾವು ಕೆಲಸ ಮಾಡಲಿದ್ದೇವೆ.

 

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ದೇಶದಲ್ಲಿ ಬಡತನ ಕಡಿಮೆಯಾದಾಗ, ದೇಶದ ಮಧ್ಯಮ ವರ್ಗದ ಶಕ್ತಿಯ ಶಕ್ತಿ ಅನೇಕ ಪಟ್ಟು ಹೆಚ್ಚಾಗುತ್ತದೆ. ಮತ್ತು ಮುಂದಿನ ಐದು ವರ್ಷಗಳಲ್ಲಿ, ದೇಶವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಮೋದಿ ʻಗ್ಯಾರಂಟಿʼ ನೀಡುತ್ತಾರೆ; ಅದು ಖಂಡಿತವಾಗಿಯೂ ಇರುತ್ತದೆ. ಇಂದು ಬಡತನದಿಂದ ಹೊರಬಂದ 13.5 ಕೋಟಿ ಜನರು ಒಂದು ರೀತಿಯಲ್ಲಿ ಮಧ್ಯಮ ವರ್ಗದವರಾಗಿದ್ದಾರೆ. ಬಡವರ ಕೊಳ್ಳುವ ಶಕ್ತಿ ಹೆಚ್ಚಾದಾಗ, ವ್ಯವಹಾರ ನಡೆಸುವ ಮಧ್ಯಮ ವರ್ಗದ ಶಕ್ತಿಯೂ ಬೆಳೆಯುತ್ತದೆ. ಹಳ್ಳಿಗಳ ಕೊಳ್ಳುವ ಶಕ್ತಿ ಹೆಚ್ಚಾದಾಗ, ಪಟ್ಟಣ ಮತ್ತು ನಗರದ ಹಣಕಾಸು ವ್ಯವಸ್ಥೆಯು ವೇಗವಾಗಿ ಚಲಿಸುತ್ತದೆ. ಮತ್ತು ನಮ್ಮ ಆರ್ಥಿಕ ಚಕ್ರವು ಪರಸ್ಪರ ಸಂಬಂಧ ಹೊಂದಿದೆ. ಅದನ್ನು ಬಲಪಡಿಸುವ ಮೂಲಕ ನಾವು ಮುಂದೆ ಸಾಗಲು ಬಯಸುತ್ತೇವೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ನಗರಗಳಲ್ಲಿ ವಾಸಿಸುವ ದುರ್ಬಲ ವರ್ಗಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತವೆ. ಮಧ್ಯಮ ವರ್ಗದ ಕುಟುಂಬಗಳು ಸ್ವಂತ ಮನೆ ಖರೀದಿಸುವ ಕನಸು ಕಾಣುತ್ತಿವೆ. ನಗರಗಳಲ್ಲಿ ವಾಸಿಸುವ ಆದರೆ ಬಾಡಿಗೆ ಮನೆಗಳು, ಕೊಳೆಗೇರಿಗಳು, ಅಥವಾ ವಠಾರಗಳು ಮತ್ತು ಅನಧಿಕೃತ ಕಾಲೋನಿಗಳಲ್ಲಿ ನೆಲೆಸಿರುವ ಕುಟುಂಬಗಳಿಗೆ ಪ್ರಯೋಜನವಾಗುವಂತಹ ಹೊಸ ಯೋಜನೆಯನ್ನು ನಾವು ಮುಂಬರುವ ವರ್ಷಗಳಲ್ಲಿ ತರುತ್ತಿದ್ದೇವೆ. ಅವರು ಸ್ವಂತ ಮನೆಗಳನ್ನು ನಿರ್ಮಿಸಲು ಬಯಸಿದರೆ, ಬಡ್ಡಿದರಗಳಲ್ಲಿ ರಿಯಾಯಿತಿ ಮತ್ತು ಬ್ಯಾಂಕುಗಳಿಂದ ಸುಲಭ ಸಾಲಗಳೊಂದಿಗೆ ನಾವು ಅವರಿಗೆ ಸಹಾಯ ಮಾಡುತ್ತೇವೆ, ಅದು ಅವರಿಗೆ ಲಕ್ಷಾಂತರ ರೂ. ಗಳನ್ನು ಉಳಿಸಲು ಸಹಾಯ ಮಾಡುತ್ತದೆ. ನನ್ನ ಮಧ್ಯಮ ವರ್ಗದ ಕುಟುಂಬಗಳಿಗೆ ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದು ಸಂಬಳ ಪಡೆಯುವ ವರ್ಗ, ಮಧ್ಯಮ ವರ್ಗದವರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. 2014 ಕ್ಕಿಂತ ಮೊದಲು ಇಂಟರ್ನೆಟ್ ಡೇಟಾ ತುಂಬಾ ದುಬಾರಿಯಾಗಿತ್ತು. ಈಗ ನಾವು ವಿಶ್ವದ ಅಗ್ಗದ ಇಂಟರ್ನೆಟ್ ಡೇಟಾವನ್ನು ನಾವು ಹೊಂದಿದ್ದೇವೆ. ಪ್ರತಿ ಕುಟುಂಬದ ಹಣವನ್ನು ಉಳಿಸಲಾಗುತ್ತಿದೆ.

ನನ್ನ ಕುಟುಂಬ ಸದಸ್ಯರೇ,

ಕೊರೊನಾ ದುಷ್ಪರಿಣಾಮಗಳಿಂದ ಜಗತ್ತು ಇನ್ನೂ ಹೊರಬಂದಿಲ್ಲ; ಯುದ್ಧವು ಮತ್ತೆ ಹೆಚ್ಚುವರಿ ಸಮಸ್ಯೆಯನ್ನು ಸೃಷ್ಟಿಸಿದೆ. ಇಂದು ಜಗತ್ತು ಹಣದುಬ್ಬರದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಣದುಬ್ಬರವು ಇಡೀ ವಿಶ್ವದ ಆರ್ಥಿಕತೆಯನ್ನು ಆವರಿಸಿದೆ. ನಾವು ಪ್ರಪಂಚದಾದ್ಯಂತದ ಕೆಲವು ಸರಕುಗಳನ್ನು ಆಮದು ಮಾಡಿಕೊಳ್ಳುತ್ತೇವೆ. ದುರದೃಷ್ಟವಶಾತ್, ನಾವು ಹೆಚ್ಚಿನ ಬೆಲೆಗೆ ಆಮದು ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ, ಈ ಇಡೀ ಜಗತ್ತು ಹಣದುಬ್ಬರದಿಂದ ಪೀಡಿತವಾಗಿದೆ.

ಆದರೆ ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಹಣದುಬ್ಬರವನ್ನು ನಿಯಂತ್ರಿಸಲು ಭಾರತವು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದೆ. ಹಿಂದಿನ ಅವಧಿಗೆ ಹೋಲಿಸಿದರೆ, ನಾವು ಸ್ವಲ್ಪ ಯಶಸ್ಸನ್ನು ಸಹ ಹೊಂದಿದ್ದೇವೆ. ಆದರೆ ನಾವು ಅದರೊಂದಿಗೆ ತೃಪ್ತರಾಗಲು ಸಾಧ್ಯವಿಲ್ಲ. ನಮ್ಮ ಪರಿಸ್ಥಿತಿಗಳು ಜಾಗತಿಕ ಪರಿಸ್ಥಿತಿಗಳಿಗಿಂತ ಉತ್ತಮವಾಗಿವೆ ಎಂದು ನಾವು ತೃಪ್ತರಾಗಬಾರದು. ನನ್ನ ದೇಶವಾಸಿಗಳ ಮೇಲೆ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡಲು ನಾನು ಈ ನಿಟ್ಟಿನಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಮತ್ತು ನಾವು ದಿಶೆಯಲ್ಲಿ ಹೆಜ್ಜೆಯನ್ನು ಮುಂದುವರಿಸುತ್ತೇವೆ. ನನ್ನ ಪ್ರಯತ್ನಗಳು ಮುಂದುವರಿಯುತ್ತವೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಇಂದು ದೇಶವು ವಿವಿಧ ಸಾಮರ್ಥ್ಯಗಳೊಂದಿಗೆ ಮುಂದುವರಿಯುತ್ತಿದೆ. ದೇಶವು ಆಧುನಿಕತೆಯತ್ತ ಸಾಗಲು ಕೆಲಸ ಮಾಡುತ್ತಿದೆ. ಇಂದು ದೇಶವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುತ್ತಿದೆ; ಇಂದು ದೇಶವು ಹಸಿರು ಜಲಜನಕದ ಮೇಲೆ ಕೆಲಸ ಮಾಡುತ್ತಿದೆ; ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯ ಹೆಚ್ಚುತ್ತಿದೆ.

ಆದ್ದರಿಂದ ದೇಶವು ಆಳ ಸಮುದ್ರ ಕಾರ್ಯಾಚರಣೆಯಲ್ಲೂ ಯಶಸ್ವಿಯಾಗಿ ಮುಂದುವರಿಯುತ್ತಿದೆ. ದೇಶದಲ್ಲಿ ರೈಲು ಆಧುನೀಕರಣಗೊಳ್ಳುತ್ತಿದೆ. ʻವಂದೇ ಭಾರತ್ʼ ಬುಲೆಟ್ ರೈಲು ಕೂಡ ಇಂದು ದೇಶದೊಳಗೆ ಯಶಸ್ವಿಯಾಗಿ ಚಲಿಸುತ್ತಿದೆ. ಪ್ರತಿ ಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇಂದು ದೇಶದಲ್ಲಿ ಎಲೆಕ್ಟ್ರಿಕ್ ಬಸ್ಸುಗಳು ಮತ್ತು ಮೆಟ್ರೋ ರೈಲುಗಳನ್ನು ಸಹ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಇಂದು ಇಂಟರ್ನೆಟ್ ಪ್ರತಿ ಹಳ್ಳಿಯಲ್ಲೂ ಕೊನೆಯ ಮೈಲಿಯನ್ನು ತಲುಪುತ್ತಿದೆ, ಏಕೆಂದರೆ ನಾವು ʻಕ್ವಾಂಟಮ್ ಕಂಪ್ಯೂಟರ್ʼಗಳಿಗೆ ಹೋಗಲು ಬಯಸುತ್ತೇವೆ. ಒಂದೆಡೆ ʻನ್ಯಾನೋ ಯೂರಿಯಾʼ ಮತ್ತು ʻನ್ಯಾನೋ ಡಿಎಪಿʼಗಳ ಮೇಲೆ ಕೆಲಸ ಮಾಡುತ್ತಿದ್ದರೆ, ಮತ್ತೊಂದೆಡೆ ನಾವು ಸಾವಯವ ಕೃಷಿಗೆ ಸಹ ಒತ್ತು ನೀಡುತ್ತಿದ್ದೇವೆ. ಇಂದು ʻರೈತ ಉತ್ಪಾದಕ ಸಂಘದ ತಂತ್ರಾಂಶʼಗಳನ್ನು ಸಹ ನಿರ್ಮಿಸಲಾಗುತ್ತಿದೆ; ಮತ್ತೊಂದೆಡೆ ನಾವು ಅರೆವಾಹಕಗಳನ್ನು ನಿರ್ಮಿಸಲು ಬಯಸಿದ್ದೇವೆ.

ನಮ್ಮ ವಿಶೇಷ ಚೇತನ ನಾಗರಿಕರಾದ ʻದಿವ್ಯಾಂಗʼರಿಗೆ ಲಭ್ಯವಾಗುವ ಮತ್ತು ಎಲ್ಲರನ್ನೂ ಒಳಗೊಂಡ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇಂತಹ ಸಮಯದಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಲು ನನ್ನ ದಿವ್ಯಾಂಗರಿಗೆ ನಾವು ಅನುವು ಮಾಡಿಕೊಡುತ್ತಿದ್ದೇವೆ. ನಾವು ಈ ಆಟಗಾರರಿಗೆ ವಿಶೇಷ ತರಬೇತಿ ನೀಡುತ್ತಿದ್ದೇವೆ. ಇಂದು, ಹಳೆಯ ಚಿಂತನೆ, ಹಳೆಯ ವ್ಯಾಪ್ತಿಯನ್ನು ಬಿಟ್ಟು, ಭಾರತವು ಈ ಭವಿಷ್ಯದ ಗುರಿಗಳನ್ನು ಸಾಧಿಸುವ ದೃಷ್ಟಿಯಿಂದ ಮುಂದುವರಿಯುತ್ತಿದೆ. ಮತ್ತು ನಾನು ಹೇಳಲು ಬಯಸುವ ಮತ್ತೊಂದು ವಿಷಯವೆಂದರೆ, ನಮ್ಮ ಸರ್ಕಾರವು ಯಾವುದಾದರೂ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರೆ, ಅದು ನಮ್ಮ ಆಡಳಿತಾವಧಿಯಲ್ಲೇ ಉದ್ಘಾಟನೆಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಾನು ಆಯ್ಕೆಯಾಗಿರುವುದು ನನಗೆ ಸಂದ ಆಶೀರ್ವಾದ. ಅನೇಕ ಯೋಜನೆಗಳನ್ನು ಉದ್ಘಾಟಿಸುವುದು ಮತ್ತು ಅಡಿಪಾಯ ಹಾಕುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ.

ಮಹತ್ವಾಕಾಂಕ್ಷೆಯ ಮನಸ್ಥಿತಿ, ದೊಡ್ಡದಾಗಿ ಯೋಚಿಸುವ, ದೂರದೃಷ್ಟಿಯ ನಮ್ಮ ಕೆಲಸದ ಸಂಸ್ಕೃತಿ, ʻಸರ್ವಜನ ಹಿತಾಯ: ಸರ್ವಜನ ಸುಖಾಯʼ ಇದು ನಮ್ಮ ಕಾರ್ಯಶೈಲಿಯಾಗಿದೆ. ಮತ್ತು ಈ ಶಕ್ತಿಯೊಂದಿಗೆ ನಾವು ಸಂಕಲ್ಪಕ್ಕಿಂತ ಹೆಚ್ಚಿನದನ್ನು ಹೇಗೆ ಸಾಧಿಸುವುದು ಎಂಬುದರ ಮೇಲೆ ಕೆಲಸ ಮಾಡುತ್ತೇವೆ. ʻಸ್ವಾತಂತ್ರ್ಯದ ಅಮೃತ ಮಹೋತ್ಸವʼದಲ್ಲಿ 75 ಸಾವಿರ ʻಅಮೃತ ಸರೋವರʼಗಳನ್ನು ನಿರ್ಮಿಸಲು ನಾವು ಸಂಕಲ್ಪ ಮಾಡಿದ್ದೆವು. ಆ ಸಮಯದಲ್ಲಿ, ನಾವು ಪ್ರತಿ ಜಿಲ್ಲೆಯಲ್ಲಿ 75 ʻಅಮೃತ ಸರೋವರʼಗಳನ್ನು ನಿರ್ಮಿಸಲು ನಿರ್ಧರಿಸಿದ್ದೆವು. ಸುಮಾರು 50-55 ಸಾವಿರ ʻಅಮೃತ ಸರೋವರʼಗಳನ್ನು ನಿರ್ಮಿಸಲಾಯಿತು. ಆದರೆ, ಇಂದು ಸುಮಾರು 75 ಸಾವಿರ ʻಅಮೃತ ಸರೋವರʼ ನಿರ್ಮಾಣದ ಕೆಲಸ ನಡೆಯುತ್ತಿದೆ. ಇದು ಸಹ ಒಂದು ದೊಡ್ಡ ಕಾರ್ಯವಾಗಿದೆ. ಮಾನವಶಕ್ತಿ ಮತ್ತು ಜಲಶಕ್ತಿಯನ್ನೊಳಗೊಂಡ ಈ ಬಲವು ಭಾರತದ ಪರಿಸರ ಸಂಪತ್ತನ್ನು ರಕ್ಷಿಸಲು ಸಹ ಉಪಯುಕ್ತವಾಗಲಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಒದಗಿಸುವುದು, ಜನಸಾಮಾನ್ಯರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಹೆಣ್ಣುಮಕ್ಕಳಿಗೆ ಶೌಚಾಲಯಗಳನ್ನು ನಿರ್ಮಿಸುವುದು ಸೇರಿದಂತೆ ಎಲ್ಲಾ ಗುರಿಗಳನ್ನು ಸಮಯಕ್ಕಿಂತ ಮುಂಚಿತವಾಗಿ ಪೂರ್ಣ ಶಕ್ತಿಯಿಂದ ಸಾಧಿಸಲಾಗುವುದು.

ಜೊತೆಗೆ, ಭಾರತವು ಒಂದು ನಿರ್ಧಾರವನ್ನು ಕೈಗೊಂಡಾಗ, ಅದು ಅದನ್ನು ಸಾಧಿಸುತ್ತದೆ. ನಮ್ಮ ಟ್ರ್ಯಾಕ್ ರೆಕಾರ್ಡ್ ಇದನ್ನೇ ಹೇಳುತ್ತದೆ. 200 ಕೋಟಿ ಲಸಿಕೆಗಳ ನೀಡಿಕೆಯನ್ನು ಯಶಸ್ವಿಯಾಗಿ ಸಾಧಿಸಿದ್ದು ಭಾರತದ ಬಗ್ಗೆ ವಿಶ್ವದ ಕಣ್ಣು ತೆರೆಸಿತು. 200 ಕೋಟಿ ಅಂಕಿ-ಅಂಶವು ಅವರನ್ನು ದಿಗ್ಭ್ರಮೆಗೊಳಿಸುತ್ತದೆ. ನನ್ನ ದೇಶದ ಅಂಗನವಾಡಿ ಕಾರ್ಯಕರ್ತರು, ನಮ್ಮ ಆಶಾ ಕಾರ್ಯಕರ್ತರು ಮತ್ತು ನಮ್ಮ ಆರೋಗ್ಯ ಕಾರ್ಯಕರ್ತರು ಇದನ್ನು ಸಾಧ್ಯವಾಗಿಸಿದ್ದಾರೆ. ಇದು ನನ್ನ ದೇಶದ ಶಕ್ತಿ. ನಾವು `5-ಜಿ’ ಹೊರತಂದಿದ್ದೇವೆ. ನನ್ನ ದೇಶವು `5-ಜಿ’ ಅನ್ನು ಹೊರತರುವಲ್ಲಿ ವಿಶ್ವದ ಅತ್ಯಂತ ವೇಗದ ದೇಶವಾಗಿದೆ. ನಾವು 700ಕ್ಕೂ ಹೆಚ್ಚು ಜಿಲ್ಲೆಗಳನ್ನು ತಲುಪಿದ್ದೇವೆ. ಮತ್ತು ಈಗ ನಾವು ಈಗಾಗಲೇ 6-ಜಿ ಗಾಗಿ ತಯಾರಿ ನಡೆಸುತ್ತಿದ್ದೇವೆ.

ನಾವು ಕಾರ್ಯಪಡೆಯನ್ನು ರಚಿಸಿದ್ದೇವೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವು ನಮ್ಮ ನಿಗದಿತ ಗುರಿಯನ್ನು ಮೀರಿದ್ದೇವೆ. 2030ರ ವೇಳೆಗೆ ನವೀಕರಿಸಬಹುದಾದ ಇಂಧನಕ್ಕಾಗಿ ನಾವು ನಿಗದಿಪಡಿಸಿದ ಗುರಿಯನ್ನು 2021-22ರಲ್ಲಿ ಸಾಧಿಸಲಾಗಿದೆ. ನಾವು ಶೇ. 20 ರಷ್ಟು ಎಥೆನಾಲ್‌ ಮಿಶ್ರಣದ ಬಗ್ಗೆ ಮಾತನಾಡಿದ್ದೆವು, ಹಾಗೆಯೇ ನಾವು ನಿಗದಿತ ಅವಧಿಗಿಂತ ಐದು ವರ್ಷ ಮುಂಚಿತವಾಗಿ ಅದನ್ನು ಪೂರ್ಣಗೊಳಿಸಿದ್ದೇವೆ. 500 ಶತಕೋಟಿ ಡಾಲರ್ ರಫ್ತಿನ ವಿಷಯದಲ್ಲೂ ಇದು ನಿಜವಾಗಿದೆ. ಇದನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಧಿಸಲಾಗಿದೆ ಮತ್ತು ರಫ್ತು 500 ಶತಕೋಟಿ ಡಾಲರ್‌ಗಳಿಗಿಂತ ಮೀರಿದೆ.

ನಮ್ಮ ದೇಶಕ್ಕೆ ಹೊಸ ಸಂಸತ್ತು ಬೇಕು ಎಂಬುದು ನಮ್ಮ ದೇಶದಲ್ಲಿ ಕಳೆದ 25 ವರ್ಷಗಳಿಂದ ಬರೀ ಚರ್ಚೆಯ ಹಂತದಲ್ಲೇ ಇದ್ದ ವಿಷಯವಾಗಿತ್ತು. ನಾವು ಅದನ್ನು ಸಾಧಿಸುವ ಸಂಕಲ್ಪವನ್ನು ಮಾಡಿದೆವು, ಈಗ ಅದು ಸಿದ್ಧವಾಗಿದೆ. ಹೊಸ ಸಂಸತ್ತು ಇರಬೇಕು ಎಂದು ಸಂಸತ್ತಿನ ಈ ರೀತಿಯ ಅಧಿವೇಶನ ಹಿಂದೆಂದೂ ನಡೆದಿಲ್ಲ. ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಹೊಸ ಸಂಸತ್ತು ನಿಗದಿತ ಸಮಯಕ್ಕಿಂತಲೂ ಮುಂಚಿತವಾಗಿ ಸಿದ್ಧವಾಗುವಂತೆ ನೋಡಿಕೊಂಡಿರುವುದು ಮೋದಿ. ನಮ್ಮದು ಕೆಲಸ ಮಾಡುವ ಸರ್ಕಾರ, ನಿಗದಿತ ಗುರಿಗಳನ್ನು ಮೀರುವ ಸರ್ಕಾರ, ಇದು ಹೊಸ ಭಾರತ, ಇದು ಆತ್ಮವಿಶ್ವಾಸದಿಂದ ತುಂಬಿದ ಭಾರತ, ಇದು ತನ್ನ ಸಂಕಲ್ಪಗಳನ್ನು ನನಸಾಗಿಸಲು ಶ್ರಮಿಸುತ್ತಿರುವ ಭಾರತ.

ಆದ್ದರಿಂದ ಈ ಭಾರತವನ್ನು ತಡೆಯಲಾಗುವುದಿಲ್ಲ, ಇದು ದಣಿವರಿಯದ ಭಾರತ, ಈ ಭಾರತವು ಉಸಿರುಗಟ್ಟುವುದಿಲ್ಲ ಮತ್ತು ಈ ಭಾರತವು ಬಿಟ್ಟುಕೊಡುವುದಿಲ್ಲ. ಅದಕ್ಕಾಗಿಯೇ, ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ಆರ್ಥಿಕ ಪರಾಕ್ರಮದಿಂದ ನಮ್ಮ ಕಾರ್ಮಿಕ ಬಲಕ್ಕೆ ಹೊಸ ಶಕ್ತಿ ಬಂದಿದೆ, ನಮ್ಮ ಗಡಿಗಳು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿವೆ ಮತ್ತು ಸೈನಿಕರು ಗಡಿಗಳನ್ನು ಗಮನಿಸುತ್ತಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ, ನಾನು ಇಲ್ಲಿ ಭಾಷಣದೊಂದಿಗೆ ಮುಂದುವರಿಸುವುದರ ಜೊತೆಗೆ ನಮ್ಮ ರಾಷ್ಟ್ರದ ಗಡಿಗಳನ್ನು ರಕ್ಷಿಸುತ್ತಿರುವ ನನ್ನ ಸೈನಿಕರಿಗೆ ಮತ್ತು ನಮ್ಮ ಆಂತರಿಕ ಭದ್ರತೆಗೆ ಜವಾಬ್ದಾರರಾಗಿರುವ ಸಮವಸ್ತ್ರಧಾರಿ ಪಡೆಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಸೈನ್ಯವು ಮಿಲಿಟರಿ ನ್ಯಾಯಮಂಡಳಿಯನ್ನು ಹೊಂದಿರಬೇಕು, ಸಶಕ್ತವಾಗಿರಬೇಕು, ಯೌವನದಿಂದಿರಬೇಕು, ಯುದ್ಧಕ್ಕೆ ಸಿದ್ಧವಾಗಿರಬೇಕು ಮತ್ತು ಯುದ್ಧಕ್ಕೆ ಸನ್ನದಧವಾಗಿರಬೇಕು, ಅದಕ್ಕಾಗಿಯೇ ನಮ್ಮ ಸಶಸ್ತ್ರ ಪಡೆಗಳಲ್ಲಿ ನಿರಂತರ ಸುಧಾರಣೆಗಳು ನಡೆಯುತ್ತಿವೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಅಲ್ಲಲ್ಲಿ ಬಾಂಬ್ ಸ್ಫೋಟಗಳು ನಡೆಯುತ್ತಿರುವ ಬಗ್ಗೆ ನಾವು ಪ್ರತಿದಿನ ಕೇಳುತ್ತಿದ್ದೆವು. ಎಲ್ಲೆಡೆ, ಅನುಮಾನಾಸ್ಪದ ಚೀಲಗಳನ್ನು ಮುಟ್ಟದಂತೆ ಜನರನ್ನು ಎಚ್ಚರಿಸುವ ಚಿಹ್ನೆಗಳು ಇದ್ದವು ಮತ್ತು ಆಗಾಗ್ಗೆ ಪ್ರಕಟಣೆಗಳನ್ನು ಮಾಡಲಾಗುತ್ತಿತ್ತು. ಇಂದು, ರಾಷ್ಟ್ರದಲ್ಲಿ ಸುರಕ್ಷತೆಯ ಭಾವನೆ ಮೂಡಿದೆ ಮತ್ತು ರಾಷ್ಟ್ರವು ಸುರಕ್ಷಿತವಾದಾಗ, ಶಾಂತಿ ಸ್ಥಾಪನೆ ಸಾಧ್ಯವಾಗುತ್ತದೆ, ಅದು ಪ್ರಗತಿಯ ಹೊಸ ಕನಸುಗಳನ್ನು ಸಾಕಾರಗೊಳಿಸಲು ನಮಗೆ ಸಹಾಯ ಮಾಡುತ್ತದೆ. ಸರಣಿ ಬಾಂಬ್ ಸ್ಫೋಟಗಳ ಯುಗವು ಈಗ ಗತಕಾಲಕ್ಕೆ ಸೇರಿದೆ ಮತ್ತು ಅದರ ಪರಿಣಾಮವಾಗಿ ಮುಗ್ಧ ಜನರ ಸಾವಿನ ಪ್ರಕರಣಗಳು ಈಗ ಚರಿತ್ರೆಯ  ಪುಟ ಸೇರಿವೆ. ದೇಶವು ಭಯೋತ್ಪಾದಕ ದಾಳಿಗಳಲ್ಲಿ ಗಮನಾರ್ಹ ಇಳಿಕೆಗೆ ಸಾಕ್ಷಿಯಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಪ್ರಮುಖ ಪರಿವರ್ತನೆಯಾಗಿದ್ದು, ಪ್ರಮುಖ ಬದಲಾವಣೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಪ್ರಗತಿಯ ಪ್ರತಿಯೊಂದು ಅಂಶದಲ್ಲೂ, ನಾವು 2047ರ ವೇಳೆಗೆ ʻಅಭಿವೃದ್ಧಿ ಹೊಂದಿದʼ ಭಾರತದ ಕನಸಿನೊಂದಿಗೆ ಮುಂದುವರಿಯುತ್ತಿದ್ದೇವೆ. ಅದು ಕೇವಲ ಕನಸು ಮಾತ್ರವಲ್ಲ, 1.4 ಶತಕೋಟಿ ನಾಗರಿಕರ ಸಂಕಲ್ಪವಾಗಿದೆ. ಆ ಸಂಕಲ್ಪವನ್ನು ಪೂರೈಸಲು, ಕಠಿಣ ಪರಿಶ್ರಮ ಅತ್ಯಗತ್ಯ, ಜೊತೆಗೆ ನಮ್ಮ ರಾಷ್ಟ್ರೀಯ ಪಾತ್ರವು ಅತ್ಯಂತ ಮಹತ್ವದ ಶಕ್ತಿಯಾಗಿದೆ. ಪ್ರಗತಿ ಸಾಧಿಸಿದ ದೇಶಗಳು, ಸವಾಲುಗಳನ್ನು ಜಯಿಸಿದ ದೇಶಗಳೆಲ್ಲವೂ ಒಂದು ನಿರ್ಣಾಯಕ ವೇಗವರ್ಧಕ ಅಂಶವನ್ನು ಹೊಂದಿದ್ದವು ಅದೆಂದರೆ - ಅವುಗಳ ರಾಷ್ಟ್ರೀಯ ಪಾತ್ರ. ನಾವು ನಮ್ಮ ರಾಷ್ಟ್ರೀಯ ಪಾತ್ರವನ್ನು ಮತ್ತಷ್ಟು ಬಲಪಡಿಸಬೇಕು ಮತ್ತು ಮುಂದೆ ಸಾಗಬೇಕು. ನಮ್ಮ ರಾಷ್ಟ್ರ, ನಮ್ಮ ರಾಷ್ಟ್ರೀಯ ಪಾತ್ರವು ಹುರುಪಿನಿಂದ, ಕ್ರಿಯಾತ್ಮಕವಾಗಿ, ಕಠಿಣ ಪರಿಶ್ರಮಿಯಾಗಿ, ಧೈರ್ಯಶಾಲಿ ಮತ್ತು ಅತ್ಯುತ್ತಮವಾಗಿರುವಂತೆ ನೋಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಮುಂದಿನ 25 ವರ್ಷಗಳಲ್ಲಿ, ನಾವು ಒಂದೇ ಮಂತ್ರವನ್ನು ಪಠಿಸಬೇಕು, ಅದು ನಮ್ಮ ರಾಷ್ಟ್ರೀಯ ಪಾತ್ರದ ಉತ್ತುಂಗವಾಗಿರಬೇಕು. ನಾವು ಭಾರತದ ಏಕತೆಯನ್ನು ಬದುಕುವ ಸಂದೇಶದೊಂದಿಗೆ ಮುಂದುವರಿಯಬೇಕು ಮತ್ತು ಭಾರತದ ಏಕತೆಗೆ ಯಾವುದೇ ಹಾನಿ ಉಂಟುಮಾಡುವ ಯಾವುದೇ ಮಾತು ಅಥವಾ ಕೆಲಸದಿಂದ ದೂರವಿರಬೇಕು. ಪ್ರತಿ ಕ್ಷಣವೂ, ದೇಶದ ಏಕತೆಯನ್ನು ಖಚಿತಪಡಿಸಿಕೊಳ್ಳಲು ನಾನು ನನ್ನ ಪ್ರಯತ್ನಗಳನ್ನು ಮುಂದುವರಿಸುತ್ತೇನೆ. ಭಾರತದ ಏಕತೆ ನಮಗೆ ಶಕ್ತಿಯನ್ನು ನೀಡುತ್ತದೆ.

ಅದು ಉತ್ತರ ಅಥವಾ ದಕ್ಷಿಣವಾಗಿರಲಿ, ಪೂರ್ವ ಅಥವಾ ಪಶ್ಚಿಮವಾಗಿರಲಿ, ಹಳ್ಳಿ ಅಥವಾ ನಗರವಾಗಿರಲಿ, ಗಂಡು ಅಥವಾ ಹೆಣ್ಣಾಗಿರಲಿ - ನಾವೆಲ್ಲರೂ ಏಕತೆ ಮತ್ತು ವೈವಿಧ್ಯತೆಯ ಮನೋಭಾವದಿಂದ ನಮ್ಮ ದೇಶದ ಶಕ್ತಿಗೆ ಕೊಡುಗೆ ನೀಡುತ್ತೇವೆ. ನಾನು ಗಮನಿಸುತ್ತಿರುವ ಎರಡನೇ ಪ್ರಮುಖ ಅಂಶವೆಂದರೆ, 2047ರ ವೇಳೆಗೆ ನಮ್ಮ ದೇಶವನ್ನು ʻಅಭಿವೃದ್ಧಿ ಹೊಂದಿದ ಭಾರತʼವಾಗಿ ನೋಡಲು ನಾವು ಬಯಸಿದರೆ, ನಾವು 'ಶ್ರೇಷ್ಠ ಭಾರತ' ಮಂತ್ರದಿಂದ ಬದುಕಬೇಕು ಮತ್ತು ಅದನ್ನು ನಿರೂಪಿಸಬೇಕು. ಈಗ ನಮ್ಮ ಉತ್ಪಾದನೆಯ ಬಗ್ಗೆ ಮಾತನಾಡುವುದಾದರೆ, ನಾನು 2014ರಲ್ಲಿ "ಶೂನ್ಯ ನಷ್ಟ, ಶೂನ್ಯ ಪರಿಣಾಮ" ಎಂದು ಹೇಳಿದ್ದೆ. ವಿಶ್ವದ ಯಾವುದೇ ಮೇಜಿನ ಮೇಲೆ "ಮೇಡ್ ಇನ್ ಇಂಡಿಯಾ" ಉತ್ಪನ್ನವಿದ್ದರೆ, ಇದಕ್ಕಿಂತ ಉತ್ತಮವಾದುದು ಮತ್ತೊಂದಿಲ್ಲ ಇಲ್ಲ ಎಂಬ ವಿಶ್ವಾಸವನ್ನು ಜಗತ್ತು ಹೊಂದಿರಬೇಕು. ಇದೇ ಅಂತಿಮವಾಗಿರಬೇಕು. ಅದು ನಮ್ಮ ಉತ್ಪನ್ನಗಳಾಗಿರಲಿ, ನಮ್ಮ ಸೇವೆಗಳಾಗಿರಬಹುದು, ನಮ್ಮ ಮಾತುಗಳಾಗಿರಬಹುದು, ನಮ್ಮ ಸಂಸ್ಥೆಗಳು ಅಥವಾ ನಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಾಗಿರಬಹುದು, ಎಲ್ಲವೂ ಸರ್ವೋಚ್ಚವಾಗಿರುತ್ತವೆ. ಆಗ ಮಾತ್ರ ನಾವು ಉತ್ಕೃಷ್ಟತೆಯ ಸಾರವನ್ನು ಮುಂದುವರಿಸಬಹುದು.

ಮೂರನೆಯ ಅಂಶವೆಂದರೆ, ಮಹಿಳಾ ನೇತೃತ್ವದ ಅಭಿವೃದ್ಧಿಯ ಹೆಚ್ಚುವರಿ ಶಕ್ತಿಯು ದೇಶವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುತ್ತದೆ. ಇಂದು, ವಿಶ್ವದ ಯಾವುದೇ ದೇಶವು ನಾಗರಿಕ ವಿಮಾನಯಾನದಲ್ಲಿ ಅತಿ ಹೆಚ್ಚು ಮಹಿಳಾ ಪೈಲಟ್ ಗಳನ್ನು ಹೊಂದಿದ್ದರೆ, ಅದು ನಮ್ಮ ದೇಶ ಎಂದು ಭಾರತ ಹೆಮ್ಮೆಯಿಂದ ಹೇಳಬಹುದು. ಅದು ʻಚಂದ್ರಯಾನʼವಾಗಿರಲಿ ಅಥವಾ ಮತ್ತಾವುದೇ ಸಾಧನೆಯಾಗಿರಲಿ ಅನೇಕ ಮಹಿಳಾ ವಿಜ್ಞಾನಿಗಳು ಇಂದು ಮುಂಚೂಣಿಯಲ್ಲಿದ್ದಾರೆ.

ಇಂದು 2 ಕೋಟಿ ʻಲಕ್ಷಾಧೀಶ ದೀದಿʼಗಳನ್ನು ಸೃಷ್ಟಿಸುವ ಗುರಿಯೊಂದಿಗೆ, ನಾವು ಮಹಿಳಾ ಸ್ವಸಹಾಯ ಗುಂಪುಗಳ ಮೇಲೆ ಕೆಲಸ ಮಾಡುತ್ತಿದ್ದೇವೆ. ನಾವು, ನಮ್ಮ ಮಹಿಳಾ ಶಕ್ತಿಯ ಸಾಮರ್ಥ್ಯವನ್ನು ಉತ್ತೇಜಿಸುವುದರ ಜೊತೆಗೆ, ನಾವು ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದೇವೆ. ʻಜಿ-20ʼ ಗುಂಪಿನಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯ ವಿಷಯವನ್ನು ನಾನು ಮುಂದಿಟ್ಟಾಗ, ಇಡೀ ʻಜಿ-20ʼ ಗುಂಪು ಅದರ ಮಹತ್ವವನ್ನು ಒಪ್ಪಿಕೊಂಡಿತು. ಮತ್ತು ಅದರ ಮಹತ್ವವನ್ನು ಒಪ್ಪಿಕೊಳ್ಳುವ ಮೂಲಕ, ಅವರು ಅದಕ್ಕೆ ಸಾಕಷ್ಟು ಒತ್ತು ನೀಡುತ್ತಿದ್ದಾರೆ. ಅಂತೆಯೇ, ಭಾರತವು ವೈವಿಧ್ಯತೆಗಳಿಂದ ಕೂಡಿದ ದೇಶವಾಗಿದೆ. ನಾವು ಅಭಿವೃದ್ಧಿಯ ಅಸಮತೋಲನದ ಬಲಿಪಶುಗಳಾಗಿದ್ದೇವೆ. ನಮ್ಮ ದೇಶದ ಕೆಲವು ಭಾಗಗಳು ಪರಕೀಯ ಬಲಿಪಶುಗಳಾಗಿವೆ. ಈಗ ನಾವು ಸಮತೋಲಿತ ಅಭಿವೃದ್ಧಿಗಾಗಿ ಪ್ರಾದೇಶಿಕ ಆಕಾಂಕ್ಷೆಗಳಿಗೆ ಒತ್ತು ನೀಡಬೇಕು ಮತ್ತು ಪ್ರಾದೇಶಿಕ ಆಕಾಂಕ್ಷೆಗಳಿಗೆ ಸಂಬಂಧಿಸಿದ ಮನೋಭಾವಕ್ಕೆ ಸೂಕ್ತ ಗೌರವವನ್ನು ನೀಡಬೇಕು. ನಮ್ಮ ಭಾರತ ಮಾತೆಯ ಯಾವುದೇ ಒಂದು ಭಾಗ ಅಥವಾ ನಮ್ಮ ದೇಹದ ಯಾವುದೇ ಭಾಗವು ಸರಿಯಾಗಿ ಅಭಿವೃದ್ಧಿ ಹೊಂದಿದ್ದರೆ, ನಮ್ಮ ದೇಹವನ್ನು ಪರಿಪೂರ್ಣವಾಗಿ ಅಭಿವೃದ್ಧಿ ಹೊಂದಿದ ದೇಹವಾಗಿ ಪರಿಗಣಿಸಲಾಗುವುದಿಲ್ಲ. ನಮ್ಮ ದೇಹದ ಯಾವುದೇ ಭಾಗವು ದುರ್ಬಲವಾಗಿದ್ದರೆ, ನಮ್ಮನ್ನು ಆರೋಗ್ಯವಂತರೆಂದು ಪರಿಗಣಿಸಲಾಗುವುದಿಲ್ಲ. ಅಂತೆಯೇ, ನನ್ನ ಭಾರತ ಮಾತೆಯ ಯಾವುದೇ ಭಾಗ ಅಥವಾ ಸಮಾಜದ ಒಂದು ವರ್ಗವು ದುರ್ಬಲವಾಗಿದ್ದರೆ, ನಾವು ನನ್ನ ಭಾರತ ಮಾತೆಯನ್ನು ಆರೋಗ್ಯಕರ ಮತ್ತು ಸಮರ್ಥ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಪ್ರಾದೇಶಿಕ ಆಕಾಂಕ್ಷೆಗಳನ್ನು ಪರಿಹರಿಸಬೇಕಾಗಿದೆ ಮತ್ತು ಅದಕ್ಕಾಗಿಯೇ ನಾವು ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಪ್ರತಿ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಯ ದಿಕ್ಕಿನಲ್ಲಿ ಮುಂದುವರಿಯಲು ಬಯಸುತ್ತೇವೆ.  ಪ್ರತಿ ಪ್ರದೇಶವು ತನ್ನ ಗರಿಷ್ಠ ಸಾಮರ್ಥ್ಯವನ್ನು ತಲುಪುವ ಅವಕಾಶ ಪಡೆಯುವುದನ್ನು ಖಚಿತಪಡಿಸಲು ನಾವು ಬಯಸುತ್ತೇವೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತವು ವೈವಿಧ್ಯತೆಯ ಮಾದರಿಯಾಗಿದೆ. ಹಲವಾರು ಭಾಷೆಗಳು, ಹಲವಾರು ಉಪಭಾಷೆಗಳು, ವಿವಿಧ ವೇಷಭೂಷಣಗಳು ಮತ್ತು ವೈವಿಧ್ಯತೆ ಇಲ್ಲಿದೆ. ನಾವು ಇದೆಲ್ಲದರ ಆಧಾರದ ಮೇಲೆ ಮುಂದುವರಿಯಬೇಕು.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ನಾನು ಈಗ ಏಕತೆಯ ಬಗ್ಗೆ ಮಾತನಾಡುತ್ತಿರುವುದರಿಂದ ಒಂದು ವಿಷಯ ಹೇಳಲು ಬಯಸುತ್ತೇನೆ, ಮಣಿಪುರದಲ್ಲಿ ಒಂದು ಕಹಿ ಘಟನೆ ನಡೆದರೆ, ಅದರ ನೋವು ಮಹಾರಾಷ್ಟ್ರದಲ್ಲಿ ಅನುಭವಕ್ಕೆ ಬರುತ್ತದೆ; ಅಸ್ಸಾಂನಲ್ಲಿ ಪ್ರವಾಹ ಉಂಟಾದರೆ ಕೇರಳ ಪ್ರಕ್ಷುಬ್ಧವಾಗುತ್ತದೆ. ಭಾರತದ ಯಾವುದೇ ಭಾಗದಲ್ಲಿ ಏನಾದರೂ ಅಹಿತಕರ ಘಟನೆ ಸಂಭವಿಸಿದರೆ, ಒಂದು ಅಂಗಕ್ಕೆ ಆದ ನೋವು ಇಡೀ ದೇಹಕ್ಕೆ ತಾಗುವಂತೆ ಇತರೆಡೆಯಲ್ಲೂ ನಾವು ಅದನ್ನು ಅನುಭವಿಸುತ್ತೇವೆ. ನನ್ನ ದೇಶದ ಹೆಣ್ಣುಮಕ್ಕಳು ದೌರ್ಜನ್ಯಕ್ಕೆ ತುತ್ತಾಗದಂತೆ ನೋಡಿಕೊಳ್ಳುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. ಇದು ನಮ್ಮ ಕುಟುಂಬದ ಜವಾಬ್ದಾರಿ ಮತ್ತು ಒಂದು ದೇಶವಾಗಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗುರು ಗ್ರಂಥ ಸಾಹಿಬ್‌ನ ಪ್ರತಿಗಳನ್ನು ಅಫ್ಘಾನಿಸ್ತಾನದಿಂದ ಮರಳಿ ತಂದಾಗ, ಇಡೀ ದೇಶ ಹೆಮ್ಮೆ ಪಟ್ಟಿತು. ವಿಶ್ವದ ಯಾವುದೇ ದೇಶದಲ್ಲಿ, ಕೋವಿಡ್ ಸಮಯದಲ್ಲಿ, ನನ್ನ ಸಿಖ್ ಸಹೋದರರೊಬ್ಬರು ಲಂಗರ್ ಸ್ಥಾಪಿಸಿದಾಗ, ಹಸಿದವರಿಗೆ ಆಹಾರವನ್ನು ನೀಡಿದಾಗ, ಮತ್ತು ಇಡೀ ಜಗತ್ತು ಇದರ ಬಗ್ಗೆ ಶ್ಲಾಘಿಸಿದಾಗ, ಭಾರತವು ಹೆಮ್ಮೆಪಟ್ಟಿತು.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಮಹಿಳೆಯರ ಗೌರವದ ಬಗ್ಗೆ ಮಾತನಾಡುತ್ತಾ ಒಂದು ವಿಷಯ ಹೇಳಲು ಬಯಸುತ್ತೇನೆ. ಇತ್ತೀಚೆಗೆ, ನಾನು ಒಂದು ದೇಶಕ್ಕೆ ಭೇಟಿ ನೀಡಿದ್ದೆ, ಅಲ್ಲಿ ಹಿರಿಯ ಸಚಿವರೊಬ್ಬರು ನನ್ನನ್ನು ಕುರಿತು - "ನಿಮ್ಮ ಹೆಣ್ಣುಮಕ್ಕಳು ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಷಯಗಳನ್ನು ಅಧ್ಯಯನ ಮಾಡುತ್ತಾರೆಯೇ?" ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರವಾಗಿ ನಾನು ಇಂದು ನನ್ನ ದೇಶದಲ್ಲಿ ಹುಡುಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳೇ ʻಸ್ಟೆಮ್‌ʼ(ಎಸ್‌ಟಿಇಎಂ) ಅಂದರೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯಳನ್ನು ಅಧ್ಯಯನಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ. ನನ್ನ ಹೆಣ್ಣುಮಕ್ಕಳು ಅದರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತಿಳಿದು ಅವರಿಗೆ ಆಶ್ಚರ್ಯವಾಯಿತು. ನಮ್ಮ ದೇಶದ ಈ ಸಾಮರ್ಥ್ಯ ಇಂದು ಗೋಚರಿಸುತ್ತಿದೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಇಂದು 10 ಕೋಟಿ ಮಹಿಳೆಯರು ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನೀವು ಮಹಿಳಾ ಸ್ವಸಹಾಯ ಗುಂಪುಗಳೊಂದಿಗೆ ಹಳ್ಳಿಗೆ ಹೋದರೆ ಬ್ಯಾಂಕ್ ದೀದಿಗಳು, ಅಂಗನವಾಡಿ ದೀದಿಗಳು ಮತ್ತು ಔಷಧಗಳನ್ನು ವಿತರಿಸುವ ದೀದಿಗಳನ್ನು ನೀವು ಕಾಣಬಹುದು. ಹಳ್ಳಿಗಳಲ್ಲಿ 2 ಕೋಟಿ ʻಲಕ್ಷಾಧೀಶ ದೀದಿʼಗಳನ್ನು ಸೃಷ್ಟಿಸುವುದು ಈಗ ನನ್ನ ಕನಸಾಗಿದೆ. ಮತ್ತು ಈಗ ನಮಗೆ ಹೊಸ ಆಯ್ಕೆಗಳಿವೆ, ಅಂದರೆ ವಿಜ್ಞಾನ ಮತ್ತು ತಂತ್ರಜ್ಞಾನ. ನಮ್ಮ ಹಳ್ಳಿಗಳಲ್ಲಿನ ಮಹಿಳೆಯರ ಸಾಮರ್ಥ್ಯವನ್ನು ನಾನು ನೋಡಬಲ್ಲೆ ಮತ್ತು ಅದಕ್ಕಾಗಿಯೇ ನಾನು ಹೊಸ ಯೋಜನೆಯ ಬಗ್ಗೆ ಯೋಚಿಸುತ್ತಿದ್ದೇನೆ. ಅದು ನಮ್ಮ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಏಕೀಕರಣದೊಂದಿಗೆ ಮಹಿಳಾ ಸ್ವಸಹಾಯ ಗುಂಪಿನ ಸಹೋದರಿಯರಿಗೆ ತರಬೇತಿ ನೀಡುತ್ತದೆ, ಆ ಮೂಲಕ ನಮ್ಮ ಕೃಷಿ ತಂತ್ರಜ್ಞಾನವನ್ನು ಬಲಪಡಿಸುತ್ತದೆ. ನಾವು ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುತ್ತೇವೆ ಮತ್ತು ಡ್ರೋನ್‌ಗಳನ್ನು ನಿರ್ವಹಿಸಲು ಹಾಗೂ ದುರಸ್ತಿ ಮಾಡಲು ಅವರಿಗೆ ತರಬೇತಿ ನೀಡುತ್ತೇವೆ. ಭಾರತ ಸರ್ಕಾರವು ಇಂತಹ ಸಾವಿರಾರು ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸಲಿದೆ. ನಮ್ಮ ಕೃಷಿ ಕೆಲಸಗಳಿಗೆ ಡ್ರೋನ್ ಸೇವೆಗಳನ್ನು ಲಭ್ಯವಾಗುವಂತೆ ಮಾಡುತ್ತೇವೆ. ಮೊದಲಿಗೆ, ನಾವು ಈ ನಿಟ್ಟಿನಲ್ಲಿ 15 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳನ್ನು ಸೃಷ್ಟಿಸಲಿದ್ದೇವೆ, ಇದು ದೃಢವಾದ ಡ್ರೋನ್ ತರಬೇತಿ ಕಾರ್ಯಾಚರಣೆಯನ್ನು ಸಾಧ್ಯವಾಗಿಸುವ ಕನಸಿಗೆ ರೆಕ್ಕೆ ನೀಡುತ್ತದೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಇಂದು ದೇಶ ಆಧುನಿಕತೆಯತ್ತ ಸಾಗುತ್ತಿದೆ. ಅದು ಹೆದ್ದಾರಿಯಾಗಿರಹಬುದು, ರೈಲ್ವೆ, ವಾಯುಮಾರ್ಗವಾಗಿರಬಹುದು, ʻಐ-ವೇಸ್ʼ ಅಥವಾ ʻಮಾಹಿತಿ ಮಾರ್ಗʼಗಳಾಗಿರಬಹುದುʼ, ಜಲಮಾರ್ಗಗಳೇ ಆಗಿರಬಹುದು, ದೇಶವು ಇಂದು ಪ್ರಗತಿ ಸಾಧಿಸದ ಯಾವುದೇ ಕ್ಷೇತ್ರವಿಲ್ಲ. ಕಳೆದ 9 ವರ್ಷಗಳಲ್ಲಿ ನಾವು ಕರಾವಳಿ ಪ್ರದೇಶಗಳು, ಬುಡಕಟ್ಟು ಪ್ರದೇಶಗಳು ಮತ್ತು ನಮ್ಮ ಗುಡ್ಡಗಾಡು ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ʻಪರ್ವತ ಮಾಲಾʼ, ʻಭಾರತ್ ಮಾಲಾʼದಂತಹ ಯೋಜನೆಗಳನ್ನು ಪರಿಚಯಿಸುವ ಮೂಲಕ ನಾವು ಸಮಾಜದ ಈ ವರ್ಗಗಳಿಗೆ ಶಕ್ತಿ ನೀಡಿದ್ದೇವೆ. ನಮ್ಮ ಸಮೃದ್ಧ ಪೂರ್ವ ಭಾರತದ ರಾಜ್ಯಗಳನ್ನು ಅನಿಲ ಕೊಳವೆ ಮಾರ್ಗಗಳೊಂದಿಗೆ ಮುಖ್ಯವಾಹಿನಿಗೆ ತರುವ ಕೆಲಸವನ್ನು ನಾವು ಖಾತರಿಪಡಿಸಿದ್ದೇವೆ. ಆಸ್ಪತ್ರೆಗಳ ಸಂಖ್ಯೆ ಹೆಚ್ಚಳಕ್ಕೆ ಮಂಜೂರಾತಿ ನೀಡುವ ಮೂಲಕ ಆರೋಗ್ಯ ಮೂಲಸೌಕರ್ಯವನ್ನು ವಿಸ್ತರಿಸಿದ್ದೇವೆ. ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ನಾವು ಘೋಷಿಸಿದ್ದೇವೆ, ಇದರಿಂದ ನಮ್ಮ ಮಕ್ಕಳು ವೈದ್ಯರಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ತಮ್ಮ ಕನಸನ್ನು ಈಡೇರಿಸಬಹುದು. ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಲು ಶಿಫಾರಸು ಮಾಡುವ ಮೂಲಕ ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ನಾವು ಒತ್ತು ನೀಡಿದ್ದೇವೆ. ಈ ವಿಚಾರದ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ನಿಲುವನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ, ಈಗ ನ್ಯಾಯಾಲಯಕ್ಕೆ ಹೋಗುವ ಜನರು ತಮ್ಮ ಮಾತೃಭಾಷೆಯಲ್ಲೇ ತೀರ್ಪನ್ನು ಆಲಿಸಲು ಮತ್ತು ಕಾರ್ಯಾಚರಣೆಯ ಭಾಗವನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ ಅನುವು ಮಾಡಿಕೊಟ್ಟಿದೆ. ಇಂದಿನ ಕಾಲದಲ್ಲಿ ಮಾತೃಭಾಷೆಯ ಪ್ರಾಮುಖ್ಯತೆ ಹೆಚ್ಚುತ್ತಿದೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಇಂದು ನಮ್ಮ ದೇಶದ ಗಡಿ ಗ್ರಾಮಗಳು ಎಂದು ಕರೆಯಲ್ಪಡುವ ಹಳ್ಳಿಗಳಿಗಾಗಿ, ನಾವು ʻರೋಮಾಂಚಕ ಗಡಿ ಗ್ರಾಮʼ ಎಂಬ ಕಾರ್ಯಕ್ರಮವನ್ನು ಪರಿಚಯಿಸಿದ್ದೇವೆ. ನಮ್ಮ ದೇಶದ ಗಡಿ ಗ್ರಾಮಗಳನ್ನು ಇಲ್ಲಿಯವರೆಗೆ ದೇಶದ ಕೊನೆಯ ಗ್ರಾಮವೆಂದು ಪರಿಗಣಿಸಲಾಗಿತ್ತು. ನಾವು ಇಡೀ ಆಲೋಚನಾ ಪ್ರಕ್ರಿಯೆಯನ್ನು ಪರಿವರ್ತಿಸಿದ್ದೇವೆ. ಇದು ದೇಶದ ಕೊನೆಯ ಹಳ್ಳಿಯಲ್ಲ. ಗಡಿಯಲ್ಲಿ ಕಾಣುವ ಹಳ್ಳಿಗಳು ನನ್ನ ದೇಶದ ಮೊದಲ ಗ್ರಾಮಗಳು. ಸೂರ್ಯನು ಪೂರ್ವದಲ್ಲಿ ಉದಯಿಸಿದಾಗ, ಈ ಬದಿಯಲ್ಲಿರುವ ಗ್ರಾಮವು ಸೂರ್ಯನ ಬೆಳಕಿನ ಮೊದಲ ಕಿರಣವನ್ನು ಪಡೆಯುತ್ತದೆ. ಸೂರ್ಯ ಮುಳುಗಿದಾಗ, ಗ್ರಾಮವು ಕೊನೆಯ ಕಿರಣದ ಪ್ರಯೋಜನವನ್ನು ಪಡೆಯುತ್ತದೆ. ಇದು ನನ್ನ ಮುಂಚೂಣಿಯ ಗ್ರಾಮ. ಈ ಗಡಿ ಗ್ರಾಮಗಳ 600 ಮುಖ್ಯಸ್ಥರು ಇಂದು ಈ ಕಾರ್ಯಕ್ರಮದಲ್ಲಿ ನನ್ನ ವಿಶೇಷ ಅತಿಥಿಗಳಾಗಿರುವುದು, ಈ ಐತಿಹಾಸಿಕ ಕೆಂಪು ಕೋಟೆಯಲ್ಲಿ ಈ ಪ್ರಮುಖ ಕಾರ್ಯಕ್ರಮದ ಭಾಗವಾಗಿರುವುದು ನನಗೆ ಸಂತಸ ತಂದಿದೆ. ಅವರು ಮೊದಲ ಬಾರಿಗೆ ಇಲ್ಲಿಯವರೆಗೆ ಪ್ರಯಾಣಿಸಿದ್ದಾರೆ ಮತ್ತು ಹೊಸ ಸಂಕಲ್ಪ, ಪರಾಕ್ರಮ, ಹುರುಪು ಮತ್ತು ದೃಢನಿಶ್ಚಯದೊಂದಿಗೆ ಇದರಲ್ಲಿ ಭಾಗಿಯಾಗಿದ್ದಾರೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಸಮತೋಲಿತ ಅಭಿವೃದ್ಧಿಯನ್ನು ಮರುಸ್ಥಾಪಿಸಲು ನಾವು ʻಮಹತ್ವಾಕಾಂಕ್ಷೆಯ ಜಿಲ್ಲೆʼ ಮತ್ತು ʻಮಹತ್ವಾಕಾಂಕ್ಷೆಯ ಬ್ಲಾಕ್ʼ ಪರಿಕಲ್ಪನೆ ರೂಪಿಸಿದ್ದೇವೆ. ಇದರ ಸಕಾರಾತ್ಮಕ ಫಲಿತಾಂಶಗಳನ್ನು ಇಂದು ನಾವು ನೋಡಬಹುದು. ರಾಜ್ಯಗಳ ಸಾಮಾನ್ಯ ನಿಯತಾಂಕಗಳೊಂದಿಗೆ, ಒಂದು ಕಾಲದಲ್ಲಿ ಬಹಳ ಹಿಂದುಳಿದಿದ್ದ ಈ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಇಂದು ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿವೆ. ಮುಂಬರುವ ದಿನಗಳಲ್ಲಿ, ನಮ್ಮ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ನಮ್ಮ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು ಖಂಡಿತವಾಗಿಯೂ ಮತ್ತಷ್ಟು ಮುಂದುವರಿಯುತ್ತವೆ ಎಂಬ ವಿಶ್ವಾಸ ನನಗಿದೆ. ನಾನು ಭಾರತದ ಪಾತ್ರದ ಬಗ್ಗೆ ಮಾತನಾಡುವಾಗ- ಮೊದಲು ನಾನು ಭಾರತದ ಏಕತೆಯನ್ನು ಉಲ್ಲೇಖಿಸಿದೆ; ಎರಡನೆಯದಾಗಿ, ಭಾರತವು ಉತ್ಕೃಷ್ಟತೆಯತ್ತ ಗಮನ ಹರಿಸಬೇಕು ಎಂದು ನಾನು ಉಲ್ಲೇಖಿಸಿದೆ, ಮೂರನೆಯದಾಗಿ, ನಾನು ಮಹಿಳಾ ಅಭಿವೃದ್ಧಿಯ ಬಗ್ಗೆ ಮಾತನಾಡಿದೆ. ಮತ್ತು ಇಂದು, ನಾನು ಇನ್ನೂ ಒಂದು ವಿಷಯವನ್ನು ಪುನರುಚ್ಚರಿಸಲು ಬಯಸುತ್ತೇನೆ, ನಾಲ್ಕನೆಯದು ʻಪ್ರಾದೇಶಿಕ ಆಕಾಂಕ್ಷೆʼ. ಐದನೇ ಪ್ರಮುಖ ವಿಷಯವೆಂದರೆ ಅದು ಭಾರತದ ʻರಾಷ್ಟ್ರೀಯ ಪಾತ್ರʼ ಮತ್ತು ನಾವು ಆ ದಿಕ್ಕಿನಲ್ಲಿ ಮುಂದುವರಿಯುತ್ತಿದ್ದೇವೆ. ನಮ್ಮ ರಾಷ್ಟ್ರೀಯ ಪಾತ್ರವು ವಿಶ್ವದ ಸುಧಾರಣೆಯ ಬಗ್ಗೆ ಯೋಚಿಸಬೇಕು. ನಾವು ದೇಶವನ್ನು ಎಷ್ಟು ಬಲಪಡಿಸಬೇಕು ಎಂದರೆ ಅದು ವಿಶ್ವದ ಕಲ್ಯಾಣಕ್ಕಾಗಿ ತನ್ನ ಪಾತ್ರವನ್ನು ವಹಿಸಬೇಕು. ಕರೋನಾದಂತಹ ಜಾಗತಿಕ ಬಿಕ್ಕಟ್ಟನ್ನು ನಿಭಾಯಿಸಿದ ರೀತಿ, ಜಗತ್ತಿಗೆ ಸಹಾಯ ಮಾಡಲು ನಾವು ಒಂದು ದೇಶವಾಗಿ ನಿಂತ ರೀತಿಯ ಫಲವಾಗಿ ನಮ್ಮ ದೇಶವು ಈಗ ವಿಶ್ವದ ಸ್ನೇಹಿತನ ಸ್ಥಾನವನ್ನು ಪಡೆದುಕೊಂಡಿದೆ.

ವಿಶ್ವದ ಅಚಲ ಮಿತ್ರನಾಗಿ, ಭಾರತವು ಇಂದು ತನ್ನ ಹೆಗ್ಗುರುತನ್ನು ಸ್ಥಾಪಿಸಿದೆ. ನಾವು ಜಾಗತಿಕ ಕಲ್ಯಾಣದ ಬಗ್ಗೆ ಮಾತನಾಡುವಾಗ, ಆ ಆಲೋಚನೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಭಾರತದ ಮೂಲಭೂತ ಆಲೋಚನೆಯಾಗಿದೆ. ಆಗಸ್ಟ್ 15ರ ಈ ಸಂದರ್ಭದಲ್ಲಿ, ಅಮೆರಿಕ ಕಾಂಗ್ರೆಸ್‌ನ ಹಲವಾರು ಗೌರವಾನ್ವಿತ ಪ್ರತಿನಿಧಿಗಳು ನಮ್ಮ ನಡುವೆ ಇರುವುದು ನನಗೆ ಸಂತೋಷ ತಂದಿದೆ.

ಭಾರತದ ದೃಷ್ಟಿಕೋನವೇನು, ಜಾಗತಿಕ ಕಲ್ಯಾಣದ ಆಲೋಚನೆಯನ್ನು ನಾವು ಹೇಗೆ ಮುನ್ನಡೆಸುತ್ತೇವೆ? ಈಗ, ನಾವು ಯೋಚಿಸಿದಾಗ, ನಾವು ಏನು ಹೇಳುತ್ತೇವೆ? ನಾವು ಈ ದೃಷ್ಟಿಕೋನವನ್ನು ಜಗತ್ತಿಗೆ ಪ್ರಸ್ತುತಪಡಿಸಿದ್ದೇವೆ, ಮತ್ತು ಜಗತ್ತು ಈ ದೃಷ್ಟಿಕೋನದೊಂದಿಗೆ ನಮ್ಮೊಂದಿಗೆ ಕೈಜೋಡಿಸುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವು "ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್" ಎಂದು ಹೇಳಿದ್ದೇವೆ. ಇದು ನಮ್ಮಿಂದ ಜಗತ್ತಿಗೆ ನೀಡಿದ ಒಂದು ಮಹತ್ವದ ಹೇಳಿಕೆಯಾಗಿದೆ, ಮತ್ತು ಇಂದು ಜಗತ್ತು ಇದನ್ನು ಅಂಗೀಕರಿಸುತ್ತಿದೆ. ಕೋವಿಡ್ ನಂತರ, ನಮ್ಮ ಕಾರ್ಯವಿಧಾನವು "ಒಂದು ಭೂಮಿ, ಒಂದು ಆರೋಗ್ಯ" ಆಗಿರಬೇಕು ಎಂದು ನಾವು ಜಗತ್ತಿಗೆ ಹೇಳಿದ್ದೇವೆ. ಅನಾರೋಗ್ಯದ ಸಮಯದಲ್ಲಿ ಮಾನವರು, ಪ್ರಾಣಿಗಳು ಮತ್ತು ಸಸ್ಯಗಳನ್ನು ಸಮಾನವಾಗಿ ನೋಡಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರಗಳು ಕಾಣಿಸುತ್ತವೆ.

ಜಿ 20 ಶೃಂಗಸಭೆಗಾಗಿ ನಾವು "ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯ" ಪರಿಕಲ್ಪನೆಯನ್ನು ಮುಂದಿಟ್ಟಿದ್ದೇವೆ ಮತ್ತು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಜಗತ್ತು ಹವಾಮಾನ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ನಾವು ದಾರಿ ತೋರಿಸಿದ್ದೇವೆ ಮತ್ತು ಪರಿಸರಕ್ಕಾಗಿ ಜೀವನಶೈಲಿ - ʻಮಿಷನ್ ಲೈಫ್‌ʼ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ. ನಾವು ವಿಶ್ವದ ಸಹಯೋಗದೊಂದಿಗೆ ʻಅಂತರರಾಷ್ಟ್ರೀಯ ಸೌರ ಒಕ್ಕೂಟʼವನ್ನು ರಚಿಸಿದ್ದೇವೆ ಮತ್ತು ಅನೇಕ ದೇಶಗಳು ಈಗ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಭಾಗವಾಗಿವೆ. ನಾವು ಜೀವವೈವಿಧ್ಯತೆಯ ಮಹತ್ವವನ್ನು ಒತ್ತಿಹೇಳಿದ್ದೇವೆ ಮತ್ತು "ಬಿಗ್ ಕ್ಯಾಟ್ ಅಲೈಯನ್ಸ್" ಸ್ಥಾಪನೆಯನ್ನು ಮುನ್ನಡೆಸಿದ್ದೇವೆ.

ನೈಸರ್ಗಿಕ ವಿಪತ್ತುಗಳಿಂದ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮೂಲಸೌಕರ್ಯಗಳಿಗೆ ಉಂಟಾಗುವ ಹಾನಿಗೆ, ದೀರ್ಘಕಾಲೀನ ಪರಹಾರ ವ್ಯವಸ್ಥೆಯೊಂದರ ಅವಶ್ಯಕತೆಯಿದೆ. ಆದ್ದರಿಂದ, ನಾವು ಪರಿಹಾರವಾಗಿ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟವನ್ನು (ಸಿಡಿಆರ್‌ಐ) ಪರಿಚಯಿಸಿದ್ದೇವೆ. ಜಗತ್ತು ಪ್ರಸ್ತುತ ಸಾಗರಗಳಲ್ಲಿ ಸಂಘರ್ಷಗಳಿಗೆ ಸಾಕ್ಷಿಯಾಗುತ್ತಿರುವ ಸಂದರ್ಭದಲ್ಲಿ, ಜಾಗತಿಕ ಕಡಲ ಶಾಂತಿಯನ್ನು ಖಾತರಿಪಡಿಸುವ "ಸಾಗರ್ ಪ್ಲಾಟ್‌ಫಾರ್ಮ್" ಪರಿಕಲ್ಪನೆಯನ್ನು ನಾವು ಜಗತ್ತಿಗೆ ಒದಗಿಸಿದ್ದೇವೆ. ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಅಗತ್ಯವನ್ನು ಒತ್ತಿಹೇಳುತ್ತಾ, ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಜಾಗತಿಕ ಮಟ್ಟದ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ. ಯೋಗ ಮತ್ತು ಆಯುರ್ವೇದದ ಮೂಲಕ ನಾವು ಜಾಗತಿಕ ಯೋಗಕ್ಷೇಮ ಮತ್ತು ಆರೋಗ್ಯಕ್ಕಾಗಿ ಕೆಲಸ ಮಾಡಿದ್ದೇವೆ. ಇಂದು, ಭಾರತವು ಜಾಗತಿಕ ಕಲ್ಯಾಣಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತಿದೆ. ಈ ಬಲವಾದ ಅಡಿಪಾಯವನ್ನು ನಿರ್ಮಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ನಮಗೆ ಅನೇಕ ಕನಸುಗಳು, ಸ್ಪಷ್ಟ ನಿರ್ಣಯಗಳು ಮತ್ತು ನಿರ್ದಿಷ್ಟ ನೀತಿಗಳಿವೆ. ಇಲ್ಲಿ ಉದ್ದೇಶವನ್ನು ಪ್ರಶ್ನಿಸುವ ಪ್ರಶ್ನೆಯೇ ಇಲ್ಲ. ಆದಾಗ್ಯೂ, ನಾವು ಕೆಲವು ವಾಸ್ತವಾಂಶಗಳನ್ನು ಅಂಗೀಕರಿಸಬೇಕು ಮತ್ತು ಅವುಗಳ ಪರಿಹಾರಕ್ಕಾಗಿ ಕೆಲಸ ಮಾಡಬೇಕು. ಆದ್ದರಿಂದ, ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ನಿಮ್ಮ ಸಹಾಯ ಮತ್ತು ಆಶೀರ್ವಾದವನ್ನು ಪಡೆಯಲು ನಾನು ಇಂದು ಕೆಂಪು ಕೋಟೆಗೆ ಬಂದಿದ್ದೇನೆ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ, ನಾನು ರಾಷ್ಟ್ರದ ಅಗತ್ಯಗಳನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ಅದರ ಅವಶ್ಯಕತೆಗಳನ್ನು ನಿರ್ಣಯಿಸಿದ್ದೇನೆ. ನನ್ನ ಅನುಭವದ ಆಧಾರದ ಮೇಲೆ, ನಾವು ಈಗ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಸ್ವಾತಂತ್ರ್ಯದ 'ಅಮೃತ ಕಾಲ'ದ ಸಮಯದಲ್ಲಿ, 2047ರಲ್ಲಿ ರಾಷ್ಟ್ರವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ ರಾರಾಜಿಸುವ ತ್ರಿವರ್ಣ ಧ್ವಜವು ʻಅಭಿವೃದ್ಧಿ ಹೊಂದಿದ ಭಾರತʼದ ತ್ರಿವರ್ಣಧ್ವಜವಾಗಿರಬೇಕು. ನಾವು ಒಂದು ಕ್ಷಣವೂ ನಿಲ್ಲಬಾರದು, ಹಿಂದೆ ಸರಿಯಬಾರದು. ಇದಕ್ಕಾಗಿ, ಜಾಗೃತಿ, ಪಾರದರ್ಶಕತೆ ಮತ್ತು ನಿಷ್ಪಕ್ಷಪಾತವು ಅತ್ಯಗತ್ಯ ಸಾಮರ್ಥ್ಯಗಳಾಗಿವೆ. ಈ ಶಕ್ತಿಗೆ ನಾವು ಸಾಧ್ಯವಾದಷ್ಟು ಪೋಷಣೆಯನ್ನು ಒದಗಿಸಬೇಕು.

ಒಬ್ಬ ನಾಗರಿಕನಾಗಿ ಮತ್ತು ಕುಟುಂಬವಾಗಿ ನಾವು ಅದನ್ನು ಸಂಸ್ಥೆಗಳ ಮೂಲಕ ಒದಗಿಸುವುದನ್ನು ಖಾತರಿಪಡಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿರಬೇಕು. ಅದಕ್ಕಾಗಿಯೇ ನಾವು ಕಳೆದ 75 ವರ್ಷಗಳ ಇತಿಹಾಸವನ್ನು ನೋಡಿದರೆ, ಭಾರತದ ಸಾಮರ್ಥ್ಯಕ್ಕೆ ಕೊರತೆಯಿಲ್ಲ. ಮತ್ತು ಒಂದು ಕಾಲದಲ್ಲಿ 'ಚಿನ್ನದ ಹಕ್ಕಿ' ಎಂದು ಕರೆಯಲ್ಪಡುತ್ತಿದ್ದ ಈ ದೇಶವು ಅದೇ ಸಾಮರ್ಥ್ಯದೊಂದಿಗೆ ಮತ್ತೆ ಪುಟಿದೇಳಲು ಏಕೆ ಸಾಧ್ಯವಿಲ್ಲ? ಸ್ನೇಹಿತರೇ, ನನ್ನ ಪ್ರೀತಿಯ ಕುಟುಂಬ ಸದಸ್ಯರೇ, 2047ರಲ್ಲಿ, ದೇಶವು 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ, ನನ್ನ ದೇಶವು ಅಭಿವೃದ್ಧಿ ಹೊಂದಿದ ಭಾರತವಾಗಲಿದೆ ಎಂಬ ಅಚಲ ನಂಬಿಕೆ ನನಗಿದೆ. ನನ್ನ ದೇಶದ ಶಕ್ತಿ, ನಮ್ಮ ಲಭ್ಯವಿರುವ ಸಂಪನ್ಮೂಲಗಳು ಮತ್ತು ವಿಶೇಷವಾಗಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರ ಶಕ್ತಿಯ ಮೇಲೆ ಇರುವ ನಂಬಿಕೆಯ ಆಧಾರದ ಮೇಲೆ ನಾನು ಇದನ್ನು ಹೇಳುತ್ತಿದ್ದೇನೆ. ಜೊತೆಗೆ, ನನ್ನ ತಾಯಂದಿರು ಮತ್ತು ಸಹೋದರಿಯರ ಶಕ್ತಿಯ ಆಧಾರದ ಮೇಲೆ ಸಹ ನಾನು ಇದನ್ನು ಹೇಳುತ್ತಿದ್ದೇನೆ. ಆದಾಗ್ಯೂ, ಇದಕ್ಕೆ ಕೆಲವು ಅಡೆತಡೆಗಳಿವೆ, ಏಕೆಂದರೆ ಕಳೆದ 75 ವರ್ಷಗಳಲ್ಲಿ ಕೆಲವು ದುಷ್ಟ ಅಂಶಗಳು ಸಮಾಜದಲ್ಲಿ ನುಸುಳಿವೆ, ಮತ್ತು ನಮ್ಮ ಸಾಮಾಜಿಕ ವ್ಯವಸ್ಥೆಯ ಒಂದು ಭಾಗವಾಗಿವೆ. ಕೆಲವೊಮ್ಮೆ ನಾವು ಕಣ್ಣುಮುಚ್ಚಿ ಇವುಗಳಿಗೆ ಕುರುಡಾಗುತ್ತೇವೆ. ಆದರೆ, ಈಗ ಕಣ್ಣು ಮುಚ್ಚುವ ಸಮಯವಲ್ಲ.

ಕನಸುಗಳು ಈಡೇರಬೇಕಾದರೆ, ಸಂಕಲ್ಪಗಳನ್ನು ಸಾಧಿಸಬೇಕಾದರೆ, ಮೂರೂ ದುಷ್ಟ ಶಕ್ತಿಗಳ ವಿರುದ್ಧ ವೀರಾವೇಶದಿಂದ ಹೋರಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಭ್ರಷ್ಟಾಚಾರವು ನಮ್ಮ ದೇಶದ ಎಲ್ಲಾ ಸಮಸ್ಯೆಗಳ ಮೂಲವಾಗಿದೆ. ಗೆದ್ದಲಿನ ಮಾದರಿಯಲ್ಲಿ ಇದು ದೇಶದ ಎಲ್ಲಾ ವ್ಯವಸ್ಥೆಗಳನ್ನು ಮತ್ತು ದೇಶದ ಎಲ್ಲಾ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ತಿಂದುಹಾಕಿದೆ. ಭ್ರಷ್ಟಾಚಾರದಿಂದ ಮುಕ್ತವಾಗುವುದು, ಪ್ರತಿಯೊಂದು ಕ್ಷೇತ್ರದಲ್ಲಿ ಮತ್ತು ಪ್ರತಿಯೊಂದು ವಲಯದಲ್ಲೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ದೇಶವಾಸಿಗಳೇ, ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ಇದು ಮೋದಿ ಅವರ ಬದ್ಧತ; ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಡುವುದನ್ನು ಮುಂದುವರಿಸುತ್ತೇನೆ ಎಂದು ನಾನು ವೈಯಕ್ತಿಕವಾಗಿ ಮಾತು ಕೊಡುತ್ತಿದ್ದೇನೆ. ಎರಡನೆಯದಾಗಿ, ವಂಶಪಾರಂಪರ್ಯ ರಾಜಕೀಯವು ನಮ್ಮ ದೇಶವನ್ನು ನಾಶಪಡಿಸಿದೆ. ಈ ವಂಶಪಾರಂಪರ್ಯ ವ್ಯವಸ್ಥೆಯು ಇಡೀ ದೇಶವನ್ನು ತನ್ನ ಕಬಂಧ ಬಾಹುವಿನಲ್ಲಿ ಹಿಡಿದಿಟ್ಟಿತ್ತು ಮತ್ತು ದೇಶದ ಜನರ ಹಕ್ಕುಗಳನ್ನು ಕಸಿದುಕೊಂಡಿತ್ತು.

ಮೂರನೆಯ ದುಷ್ಟ ಶಕ್ತಿಯೆಂದರೆ ಓಲೈಕೆ. ಈ ಓಲೈಕೆಯು ದೇಶದ ಮೂಲ ಚಿಂತನೆಗೆ, ನಮ್ಮ ಸಾಮರಸ್ಯದ ರಾಷ್ಟ್ರೀಯ ಗುಣಲಕ್ಷಣಕ್ಕೆ ಕಳಂಕ ತಂದಿದೆ. ಈ ಜನರು ಎಲ್ಲವನ್ನೂ ನಾಶಪಡಿಸಿದರು. ಆದ್ದರಿಂದ, ನನ್ನ ಪ್ರೀತಿಯ ದೇಶವಾಸಿಗಳೇ, ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ನಾವು ಈ ಮೂರು ದುಷ್ಟ ಶಕ್ತಿಗಳ ವಿರುದ್ಧ ನಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡಬೇಕು. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಓಲೈಕೆ; ಈ ಸವಾಲುಗಳು ನಮ್ಮ ದೇಶದ ಜನರ ಆಕಾಂಕ್ಷೆಗಳನ್ನು ಹತ್ತಿಕ್ಕಿವೆ. ಈ ದುಷ್ಟ ಶಕ್ತಿಗಳು ನಮ್ಮ ದೇಶವನ್ನು ಕೆಲವು ಜನರ ಸಾಮರ್ಥ್ಯಗಳಿಂದ ದೂರ ಮಾಡಿವೆ. ಇವು ನಮ್ಮ ಜನರ ಭರವಸೆಗಳು ಮತ್ತು ಆಕಾಂಕ್ಷೆಗಳ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕುವ ವಿಷಯಗಳಾಗಿವೆ. ನಮ್ಮ ಬಡವರಾಗಿರಲಿ, ದಲಿತರಾಗಿರಲಿ, ಹಿಂದುಳಿದವರಾಗಿರಲಿ, ಪಸ್ಮಾಂಡಾ ಸಮುದಾಯದವರಾಗಿರಲಿ, ನಮ್ಮ ಬುಡಕಟ್ಟು ಸಹೋದರ ಸಹೋದರಿಯರಾಗಿರಲಿ, ಅಥವಾ ನಮ್ಮ ತಾಯಂದಿರು ಅಥವಾ ಸಹೋದರಿಯರಾಗಿರಲಿ, ನಾವೆಲ್ಲರೂ ತಮ್ಮ ಹಕ್ಕುಗಳ ರಕ್ಷಣೆಗೆ ಈ ಮೂರು ದುಷ್ಟ ಶಕ್ತಿಗಳನ್ನು ತೊಡೆದುಹಾಕಬೇಕಾಗಿದೆ. ನಾವು ಭ್ರಷ್ಟಾಚಾರದ ಬಗ್ಗೆ ದ್ವೇಷದ ವಾತಾವರಣವನ್ನು ಸೃಷ್ಟಿಸಬೇಕು. ನಾವು ಕೊಳಕನ್ನು ಇಷ್ಟಪಡದ ಕಾರಣ ಕೊಳಕು ನಮ್ಮ ಮನಸ್ಸಿನಲ್ಲಿ ಹೇವರಿಕೆಯನ್ನು ಉಂಟು ಮಾಡುತ್ತದೆ. ಅದೇ ರೀತಿ ಸಾರ್ವಜನಿಕ ಜೀವನದಲ್ಲಿ ಇದಕ್ಕಿಂತ ದೊಡ್ಡ ಕೊಳಕು ಮತ್ತೊಂದು ಇರಲು ಸಾಧ್ಯವಿಲ್ಲ.

ಅದಕ್ಕಾಗಿಯೇ ನಾವು ನಮ್ಮ ಸ್ವಚ್ಛತಾ ಅಭಿಯಾನಕ್ಕೆ ಹೊಸ ತಿರುವನ್ನು ನೀಡಬೇಕು ಮತ್ತು ನಮ್ಮ ವ್ಯವಸ್ಥೆಯನ್ನು ಭ್ರಷ್ಟಾಚಾರದಿಂದ ಶುದ್ಧೀಕರಿಸಬೇಕು. ತಂತ್ರಜ್ಞಾನದ ಬಳಕೆಯೊಂದಿಗೆ ಭ್ರಷ್ಟಾಚಾರವನ್ನು ತೊಡೆದುಹಾಕಲು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಈ ದೇಶದಲ್ಲಿ ಕಳೆದ 9 ವರ್ಷಗಳಲ್ಲಿ ಏನೆಲ್ಲಾ ಸಾಧನೆಯಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ನೀವು ಆತಂಕಕಾರಿ ಅಂಕಿ-ಅಂಶಗಳನ್ನು ಕೇಳಿದರೆ, ಮೋದಿ ಅಂತಹ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ನಿಮಗೆ ಅರಿವಾಗುತ್ತದೆ. ಸುಮಾರು ಹತ್ತು ಕೋಟಿ ಜನರು ತೆಗೆದುಕೊಳ್ಳುತ್ತಿದ್ದ ಅನ್ಯಾಯದ ಪ್ರಯೋಜನವನ್ನು ನಾನು ನಿಲ್ಲಿಸಿದೆ. ಈ ಜನರಿಗೆ ತೀವ್ರ ಅನ್ಯಾಯವಾಗಿದೆ ಎಂದು ನಿಮ್ಮಲ್ಲಿ ಕೆಲವರು ಹೇಳಬಹುದು; ಆದರೆ ಖಂಡಿತ ಇಲ್ಲ. ಏಕೆಂದರೆ, ಈ 10 ಕೋಟಿ ಜನರು ಯಾರು ಗೊತ್ತೇ? ಆತಂಕಕಾರಿ ಸಂಗತಿಯೆಂದರೆ, ಈ 10 ಕೋಟಿ ಜನರು ಇನ್ನೂ ಜನಿಸದವರಾಗಿದ್ದರು. ಅನೇಕರು ತಮ್ಮನ್ನು ವಿಧವೆಯರು ಮತ್ತು ದಿವ್ಯಾಂಗರು ಎಂದು ತಪ್ಪಾಗಿ ಗುರುತಿಸಿಕೊಂಡು ಪ್ರಯೋಜನಗಳನ್ನು ಪಡೆಯುತ್ತಿದ್ದರು. ಅಂತಹ ಮಹಿಳೆಯರು ವಯಸ್ಸಾದ ನಂತರ ವಿಕಲಚೇತನರಾಗುತ್ತಿದ್ದರು ಮತ್ತು ಆ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸುತ್ತಿದ್ದರು. ದಶಕಗಳಿಂದ ನಡೆಯುತ್ತಿದ್ದ ಇಂತಹ 100 ದಶಲಕ್ಷ ಬೇನಾಮಿ ಚಟುವಟಿಕೆಗಳನ್ನು ನಿಲ್ಲಿಸಲು ನಮಗೆ ಸಾಧ್ಯವಾಗಿದೆ. ಇದೊಂದು ಪವಿತ್ರ ಕಾರ್ಯ. ನಾವು ವಶಪಡಿಸಿಕೊಂಡಿರುವ ಭ್ರಷ್ಟರ ಆಸ್ತಿ ಮೊದಲಿಗಿಂತ 20 ಪಟ್ಟು ಹೆಚ್ಚಾಗಿದೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದೋಚಿದ ನಂತರ ಈ ಜನರು ಪರಾರಿಯಾಗಿದ್ದಾರೆ. ನಾವು 20 ಪಟ್ಟು ಹೆಚ್ಚು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ, ಆದ್ದರಿಂದ ನನ್ನ ಬಗ್ಗೆ ಈ ಜನರ ಅಸಮಾಧಾನ ಸಹಜ. ಆದರೆ ನಾನು ಭ್ರಷ್ಟಾಚಾರದ ವಿರುದ್ಧದ ಈ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ. ನಮ್ಮ ದೋಷಪೂರಿತ ಸರ್ಕಾರಿ ವ್ಯವಸ್ಥೆಯಿಂದಾಗಿ, ಕ್ಯಾಮೆರಾದ ಕಣ್ಣಿನ ಎದುರಲ್ಲೇ ಏನಾದರೂ ನಡೆದರೂ ಸಹ ಮುಂದೆ ಅದೂ ಯಾವುದೋ ಹಂತದಲ್ಲಿ ನಿಂತಿ ಹೋಗುತ್ತಿತ್ತು. ಹಿಂದಿನ ಸಮಯಕ್ಕೆ ಹೋಲಿಸಿದರೆ, ನಾವು ಈಗ ನ್ಯಾಯಾಲಯದಲ್ಲಿ ಹೆಚ್ಚಿನ ಆರೋಪ ಪಟ್ಟಿಗಳನ್ನು ಸಲ್ಲಿಸಿದ್ದೇವೆ ಮತ್ತು ಜಾಮೀನು ಪಡೆಯುವುದು ಈಗ ಮೊದಲಿನಷ್ಟು ಸುಲಭವಲ್ಲ. ಅಂತಹ ದೃಢವಾದ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ನಾವು ಪ್ರಗತಿ ಸಾಧಿಸುತ್ತಿದ್ದೇವೆ, ಏಕೆಂದರೆ ನಾವು ಭ್ರಷ್ಟಾಚಾರದ ವಿರುದ್ಧ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಹೋರಾಡುತ್ತಿದ್ದೇವೆ.

ಇಂದು, ಸ್ವಜನಪಕ್ಷಪಾತ ಮತ್ತು ಓಲೈಕೆ ದೇಶಕ್ಕೆ ದೊಡ್ಡ ದುರಾದೃಷ್ಟವನ್ನು ತಂದಿದೆ. ಒಂದು ರಾಜಕೀಯ ಪಕ್ಷವು- ನಾನು ಒಂದು 'ರಾಜಕೀಯ ಪಕ್ಷ'ವನ್ನು ಒತ್ತಿ ಹೇಳುತ್ತಿದ್ದೇನೆ ನನ್ನ ದೇಶದ ಪ್ರಜಾಪ್ರಭುತ್ವಕ್ಕೆ ಇಂತಹ ವಿರೂಪವನ್ನು ತಂದಿರುವುದು ಹೇಗೆ ಸಾಧ್ಯ? ಪ್ರಜಾಪ್ರಭುತ್ವದಲ್ಲಿ ಇದು ನಡೆಯಲು ಹೇಗೆ ಸಾಧ್ಯ? ಇದರಿಂದ ಭಾರತದ ಪ್ರಜಾಪ್ರಭುತ್ವವನ್ನು ಎಂದಿಗೂ ಬಲಪಡಿಸಲು ಸಾಧ್ಯವಿಲ್ಲ. ಆ ರೋಗ ಯಾವುದು: ಕುಟುಂಬ ರಾಜಕಾರಣ. ಮತ್ತು ಅವರ ಮಂತ್ರವೇನು? ʻಕುಟುಂಬದ, ಕುಟುಂಬದಿಂದ ಮತ್ತು ಕುಟುಂಬಕ್ಕಾಗಿ ಪಕ್ಷʼ. ಅವರ ಜೀವನ ಮಂತ್ರವೆಂದರೆ ಅವರ ರಾಜಕೀಯ ಪಕ್ಷವು ಕುಟುಂಬಕ್ಕೆ ಸೇರಿದ್ದು, ಕುಟುಂಬದಿಂದ ಬದದ್ದು ಮತ್ತು ಕುಟುಂಬಕ್ಕಾಗಿ ಇರುವಂಥದ್ದು. ಸ್ವಜನಪಕ್ಷಪಾತ ಮತ್ತು ಪಕ್ಷಪಾತವು ನಮ್ಮ ಪ್ರತಿಭೆಯ ಶತ್ರುಗಳು. ಈ ಪಕ್ಷಗಳು ಸಾಮರ್ಥ್ಯಗಳನ್ನು ನಿರಾಕರಿಸುತ್ತವೆ ಮತ್ತು ದಕ್ಷತೆಯನ್ನು ಸ್ವೀಕರಿಸಲು ನಿರಾಕರಿಸುತ್ತವೆ. ಆದ್ದರಿಂದ, ಈ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾವು ಸ್ವಜನಪಕ್ಷಪಾತದಿಂದ ನಮ್ಮನ್ನು ಮುಕ್ತಗೊಳಿಸಬೇಕು. ಸರ್ವಜನ ಹಿತಾಯ, ಸರ್ವಜನ ಸುಖಾಯ! ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಪಡೆಯಲು ಅರ್ಹರು. ಆದ್ದರಿಂದ, ಸಾಮಾಜಿಕ ನ್ಯಾಯವನ್ನು ಪುನಃಸ್ಥಾಪಿಸುವುದು ಬಹಳ ಮುಖ್ಯ. ಓಲೈಕೆಯು ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹಾನಿ ಮಾಡಿದೆ. ಸಾಮಾಜಿಕ ನ್ಯಾಯವನ್ನು ನಾಶಪಡಿಸಿದವರು ಯಾರಾದರೂ ಇದ್ದರೆ, ಅದು ಈ ಓಲೈಕೆ ಚಿಂತನೆ, ಓಲೈಕೆ ರಾಜಕೀಯವೇ. ಓಲೈಕೆಗಾಗಿ ಮಾಡಿದ ಸರ್ಕಾರದ ಯೋಜನೆಗಳು ನಿಜವಾಗಿಯೂ ಸಾಮಾಜಿಕ ನ್ಯಾಯವನ್ನು ಕೊಂದಿವೆ. ಅದಕ್ಕಾಗಿಯೇ ಓಲೈಕೆ ಮತ್ತು ಭ್ರಷ್ಟಾಚಾರವು ಅಭಿವೃದ್ಧಿಯ ಅತಿದೊಡ್ಡ ಶತ್ರುಗಳು ಎಂದು ನಾವು ಅರಿತುಕೊಂಡಿದ್ದೇವೆ. ದೇಶವು ಅಭಿವೃದ್ಧಿಯನ್ನು ಬಯಸಿದರೆ, ದೇಶವು ಅಭಿವೃದ್ಧಿ ಹೊಂದಿದ ಭಾರತದ 2047ರ ಕನಸನ್ನು ಈಡೇರಿಸಲು ಬಯಸಿದರೆ, ನಾವು ಯಾವುದೇ ಸಂದರ್ಭದಲ್ಲೂ ದೇಶದಲ್ಲಿ ಭ್ರಷ್ಟಾಚಾರವನ್ನು ಸಹಿಸಬಾರದು. ಈ ಮನಸ್ಥಿತಿಯೊಂದಿಗೆ ನಾವು ಮುಂದೆ ನಡೆಯಬೇಕು.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ನಾವೆಲ್ಲರೂ ಬಹಳ ಮುಖ್ಯವಾದ ಜವಾಬ್ದಾರಿಯನ್ನು ಹೊಂದಿದ್ದೇವೆ. ನಮ್ಮ ಮುಂದಿನ ಪೀಳಿಗೆಯನ್ನು ನೀವು ಬದುಕಿದ ರೀತಿಯಲ್ಲಿಯೇ ಬದುಕುವಂತೆ ಒತ್ತಾಯಿಸುವುದು ಅಪರಾಧ. ನಮ್ಮ ಭವಿಷ್ಯದ ಪೀಳಿಗೆಗೆ ಸಮೃದ್ಧ ಮತ್ತು ಸಮತೋಲಿತ ರಾಷ್ಟ್ರವನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಭವಿಷ್ಯದ ಪೀಳಿಗೆಯು ಸಣ್ಣ ವಿಷಯಗಳಿಗಾಗಿ ಹೆಣಗಾಡಬೇಕಾಗಿಲ್ಲ. ಸಾಮಾಜಿಕ ನ್ಯಾಯದಲ್ಲಿ ಬದ್ಧವಾಗಿರುವ ದೇಶವನ್ನು ಒದಗಿಸುವ ಗುರಿಯನ್ನು ನಾವು ಹೊಂದಿರಬೇಕು. ಇದು ನಮ್ಮೆಲ್ಲರ ಕರ್ತವ್ಯ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಯುಗ - ʻಅಮೃತ ಕಾಲವೇ ಕರ್ತವ್ಯದ ಕಾಲʼ - ಕರ್ತವ್ಯದ ಯುಗವೂ ಹೌದು. ನಮ್ಮ ಜವಾಬ್ದಾರಿಗಳಲ್ಲಿ ನಾವು ಹಿಂದೆ ಬೀಳಲು ಸಾಧ್ಯವಿಲ್ಲ. ಮಹಾತ್ಮಾ ಗಾಂಧಿ ಕನಸು ಕಂಡ ಭಾರತ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತ, ನಮ್ಮ ಕೆಚ್ಚೆದೆಯ ಹುತಾತ್ಮರು ಕನಸು ಕಂಡ ಭಾರತ, ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ನಮ್ಮ ದಿಟ್ಟ ಮಹಿಳೆಯರು ಕನಸು ಕಂಡ ಭಾರತವನ್ನು ನಾವು ನಿರ್ಮಿಸಬೇಕಾಗಿದೆ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ನಾನು 2014ರಲ್ಲಿ ಅಧಿಕಾರಕ್ಕೆ ಬಂದಾಗ, ಬದಲಾವಣೆಯ ಭರವಸೆಯೊಂದಿಗೆ ಬಂದಿದ್ದೆ. 2014ರಲ್ಲಿ ನಾನು ಬದಲಾವಣೆಯನ್ನು ತರುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಮತ್ತು ನನ್ನ ಕುಟುಂಬದ 140 ಕೋಟಿ ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟರು ಮತ್ತು ಆ ನಂಬಿಕೆಯನ್ನು ಪೂರೈಸಲು ನಾನು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ. ʻಸುಧಾರಣೆ, ಕಾರ್ಯದಕ್ಷತೆ, ಪರಿವರ್ತನೆʼಯ ಭರವಸೆಯು ನಂಬಿಕೆಯಾಗಿ ಬದಲಾಯಿತು. ಏಕೆಂದರೆ ನಾನು ಬದಲಾವಣೆಯ ಭರವಸೆ ನೀಡಿದ್ದೆ. ʻಸುಧಾರಣೆ, ಕಾರ್ಯದಕ್ಷತೆ, ಪರಿವರ್ತನೆʼಯ ಮೂಲಕ ನಾನು ಈ ಭರವಸೆಯನ್ನು ನಂಬಿಕೆಯನ್ನಾಗಿ ಪರಿವರ್ತಿಸಿದ್ದೇನೆ. ನಾನು ದಣಿವರಿಯದೆ ಕೆಲಸ ಮಾಡಿದ್ದೇನೆ, ನಾನು ದೇಶಕ್ಕಾಗಿ ಕೆಲಸ ಮಾಡಿದ್ದೇನೆ, ನಾನು ಹೆಮ್ಮೆಯಿಂದ ಕೆಲಸ ಮಾಡಿದ್ದೇನೆ ಮತ್ತು ನಾನು ಅದನ್ನು "ರಾಷ್ಟ್ರ ಮೊದಲು" ಎಂಬ ಮನೋಭಾವದಿಂದ ಮಾಡಿದ್ದೇನೆ. ನನ್ನ ಕಾರ್ಯಕ್ಷಮತೆಯ ಆಧಾರದ ಮೇಲೆ, ನೀವು 2019 ರಲ್ಲಿ ಮತ್ತೊಮ್ಮೆ ನನ್ನನ್ನು ಆಶೀರ್ವದಿಸಿದ್ದೀರಿ ಮತ್ತು ಬದಲಾವಣೆಯ ಭರವಸೆ ನನ್ನನ್ನು ಇಲ್ಲಿಗೆ ಕರೆತಂದಿದೆ. ಮುಂದಿನ ಐದು ವರ್ಷಗಳು ಅಭೂತಪೂರ್ವ ಅಭಿವೃದ್ಧಿಯ ವರ್ಷಗಳಾಗಿವೆ. ಮುಂದಿನ ಐದು ವರ್ಷಗಳು 2047ರ ಕನಸನ್ನು ನನಸಾಗಿಸುವ ಸುವರ್ಣ ಕ್ಷಣಗಳಾಗಿವೆ. ಮತ್ತು ಮುಂದಿನ ಬಾರಿ, ಆಗಸ್ಟ್ 15ರಂದು, ಇದೇ ಕೆಂಪು ಕೋಟೆಯಿಂದ ನಾನು ದೇಶದ ಸಾಧನೆಗಳು, ನಿಮ್ಮ ಸಾಮರ್ಥ್ಯಗಳು, ನೀವು ಸಾಧಿಸಿದ ಪ್ರಗತಿ, ಸಾಧಿಸಿದ ಯಶಸ್ಸನ್ನು ಮತ್ತಷ್ಟು ಹೆಚ್ಚಿನ ಆತ್ಮವಿಶ್ವಾಸದಿಂದ ನಿಮಗೆ ಪ್ರಸ್ತುತಪಡಿಸುತ್ತೇನೆ.

ನನ್ನ ಪ್ರೀತಿಯ ಪ್ರೀತಿಪಾತ್ರರೇ,

ನಾನು ನಿಮ್ಮ ನಡುವಿನಿಂದಲೇ ಬಂದಿದ್ದೇನೆ, ಆದರೆ ನಾನು ನಿಮಗಾಗಿ ಬದುಕುತ್ತೇನೆ. ನನಗೆ ಏನಾದರೂ ಒಂದು ಕನಸಿದ್ದರೆ ಅದು ನಿಮಗಾಗಿ. ನಾನು ಬೆವರು ಹರಿಸಿದರೆ ಅದು ನಿಮಗಾಗಿ. ಇದೆಲ್ಲಾ ನೀವು ನನಗೆ ಈ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದಕ್ಕಾಗಿ ಅಲ್ಲ, ಬದಲಿಗೆ, ನೀವು ನನ್ನ ಕುಟುಂಬವಾಗಿರುವುದರಿಂದ. ನಿಮ್ಮ ಕುಟುಂಬದ ಸದಸ್ಯನಾಗಿ, ನಿಮ್ಮ ಯಾವುದೇ ದುಃಖಗಳಿಗೆ ನಾನು ಸಾಕ್ಷಿಯಾಗಲು ಸಾಧ್ಯವಿಲ್ಲ, ನಿಮ್ಮ ಕನಸುಗಳು ಛಿದ್ರವಾಗುವುದನ್ನು ನಾನು ಸಹಿಸಲಾರೆ. ನಿಮ್ಮ ಸಂಕಲ್ಪಗಳನ್ನು ಪೂರೈಸಲು, ನಿಮ್ಮ ಸಂಗಾತಿಯಾಗಿ ನಿಮ್ಮೊಂದಿಗೆ ನಿಲ್ಲಲು, ನಿಮ್ಮ ಸೇವೆ ಮಾಡಲು, ನಿಮ್ಮೊಂದಿಗೆ ಸಂಪರ್ಕ ಹೊಂದಲು, ನಿಮ್ಮೊಂದಿಗೆ ವಾಸಿಸಲು ಮತ್ತು ನಿಮಗಾಗಿ ಹೋರಾಡಲು ನಾನು ಇಲ್ಲಿದ್ದೇನೆ. ನಾನು ದೃಢನಿಶ್ಚಯದಿಂದ ಈ ಪ್ರಯಾಣವನ್ನು ಪ್ರಾರಂಭಿಸಿದ್ದೇನೆ ಮತ್ತು ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಕೈಗೊಂಡ ಹೋರಾಟಗಳು ಮತ್ತು ಅವರು ಹೊಂದಿದ್ದ ಕನಸುಗಳು ಇಂದು ನಮ್ಮೊಂದಿಗಿವೆ ಎಂದು ನಾನು ನಂಬುತ್ತೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡಿದವರ ಆಶೀರ್ವಾದ ನಮ್ಮೊಂದಿಗಿದೆ. ನಮ್ಮ ದೇಶದ 140 ಕೋಟಿ ನಾಗರಿಕರಿಗೆ ಒಂದು ಅವಕಾಶ ಬಂದಿದೆ, ಮತ್ತು ಈ ಅವಕಾಶವು ಮತ್ತಷ್ಟು ಹೆಚ್ಚಿನ ಸಾಮರ್ಥ್ಯ ಮತ್ತು ಶಕ್ತಿಯೊಂದಿಗೆ ನಮಗೆ ದೊರೆತಿದೆ.

ಆದ್ದರಿಂದ, ನನ್ನ ಪ್ರೀತಿಯ ಪ್ರೀತಿಪಾತ್ರರೇ,

ಇಂದು, ನಾನು ಈ 'ಅಮೃತ ಕಾಲ'ದಲ್ಲಿ ನಿಮ್ಮೊಂದಿಗೆ ಮಾತನಾಡುತ್ತಿರುವ ವೇಳೆ, 'ಅಮೃತ ಕಾಲ'ದ ಮೊದಲ ವರ್ಷದಲ್ಲಿ, ನಾನು ನಿಮಗೆ ಸಂಪೂರ್ಣ ವಿಶ್ವಾಸದಿಂದ ಹೇಳಲು ಬಯಸುತ್ತೇನೆ -

ಸಮಯದ ಚಕ್ರವು ತಿರುಗುತ್ತಿರುವಾಗ,

`ಅಮೃತಕಾಲ’ದ ಚಕ್ರ ಪರಿಭ್ರಮಿಸುತ್ತಿರುವಾಗ,

ಪ್ರತಿಯೊಬ್ಬರ ಕನಸುಗಳು ನನ್ನವೇ ಕನಸುಗಳು,

ಎಲ್ಲಾ ಕನಸುಗಳನ್ನು ಪೋಷಿಸುತ್ತಾ, ಸ್ಥಿರವಾಗಿ ಚಲಿಸುತ್ತಾ, ಧೈರ್ಯದಿಂದ ಮುನ್ನಡೆಯುತ್ತಾ, ನಮ್ಮ ಯುವಕರು ದಾಪುಗಾಲು ಹಾಕುತ್ತಿದ್ದಾರೆ,

ಸರಿಯಾದ ತತ್ವಗಳೊಂದಿಗೆ, ಹೊಸ ಮಾರ್ಗ ರೂಪಿಸಲಾಗುತ್ತಿದೆ, ಸರಿಯಾದ ಮಾರ್ಗದಲ್ಲಿ ಸರಿಯಾದ ವೇಗವನ್ನು ನಿಗದಿಪಡಿಸಲಾಗಿದೆ

ಸವಾಲುಗಳನ್ನು ದೃಢ ಧೈರ್ಯದಿಂದ ಸ್ವೀಕರಿಸಿ, ಜಗತ್ತಿನಲ್ಲಿ ರಾಷ್ಟ್ರದ ಹೆಸರನ್ನು ಉನ್ನತೀಕರಿಸಿ.

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಭಾರತದ ಮೂಲೆ ಮೂಲೆಯಲ್ಲಿರುವ ನನ್ನ ಕುಟುಂಬ ಸದಸ್ಯರೇ, ವಿಶ್ವದ ಮೂಲೆ ಮೂಲೆಯಲ್ಲಿರುವ ನನ್ನ ಕುಟುಂಬ ಸದಸ್ಯರೇ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ! ಮತ್ತು ಈ ʻಅಮೃತ ಕಾಲʼವು ನಮ್ಮೆಲ್ಲರಿಗೂ ಕರ್ತವ್ಯದ ಸಮಯವಾಗಿದೆ. ಈ ʻಅಮೃತ ಕಾಲʼವು ತಾಯಿ ಭಾರತಿಗಾಗಿ ನಾವೆಲ್ಲರೂ ಏನನ್ನಾದರೂ ಮಾಡಬೇಕಾದ ಅವಧಿಯಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ, 1947ಕ್ಕಿಂತ ಮೊದಲು ಜನಿಸಿದ ಪೀಳಿಗೆಗೆ ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡುವ ಅವಕಾಶ ಸಿಕ್ಕಿತು. ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಬೇಕಾದ ಯಾವುದೇ ಅವಕಾಶವನ್ನು ಕೈಬಿಡಲಿಲ್ಲ. ಆದರೆ ನಮಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಅವಕಾಶವಿಲ್ಲ. ಆದರೆ ದೇಶಕ್ಕಾಗಿ ಬದುಕಲು ಇದಕ್ಕಿಂತ ದೊಡ್ಡ ಅವಕಾಶ ನಮಗೆ ಇರಲು ಸಾಧ್ಯವಿಲ್ಲ! ನಾವು ದೇಶಕ್ಕಾಗಿ ಪ್ರತಿ ಕ್ಷಣವೂ ಬದುಕಬೇಕು ಮತ್ತು ಈ ಸಂಕಲ್ಪದೊಂದಿಗೆ, ಈ 'ಅಮೃತ ಕಾಲ'ದಲ್ಲಿ 140 ಕೋಟಿ ದೇಶವಾಸಿಗಳ ಕನಸುಗಳನ್ನು ಈಡೇರಿಸಲು ನಾವು ಹೊಸ ಸಂಕಲ್ಪವನ್ನು ತೊಡಬೇಕಾಗಿದೆ. 140 ಕೋಟಿ ದೇಶವಾಸಿಗಳ ಸಂಕಲ್ಪವನ್ನು ಸಾಧಿಸಬೇಕಾಗಿದೆ ಮತ್ತು 2047ರಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದಾಗ, ಜಗತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಶ್ಲಾಘಿಸುತ್ತದೆ. ಈ ನಂಬಿಕೆಯೊಂದಿಗೆ, ಈ ಸಂಕಲ್ಪದೊಂದಿಗೆ, ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು. ನನ್ನ ಹೃತ್ಪೂರ್ವಕ ಅಭಿನಂದನೆಗಳು!

ಜೈ ಹಿಂದ್, ಜೈ ಹಿಂದ್, ಜೈ ಹಿಂದ್!

ಭಾರತ್ ಮಾತಾ ಕೀ ಜೈ, ಭಾರತ್ ಮಾತಾ ಕೀ ಜೈ, ಭಾರತ್ ಮಾತಾ ಕೀ ಜೈ!

ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ!

ಅನಂತ ಧನ್ಯವಾದಗಳು!

***



(Release ID: 1949263) Visitor Counter : 248