ಪ್ರಧಾನ ಮಂತ್ರಿಯವರ ಕಛೇರಿ

​​​​​​​ಕರ್ನಾಟಕದ ಶಿವಮೊಗ್ಗದಲ್ಲಿ 3,600 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

ಎರಡು ರೈಲು ಯೋಜನೆಗಳು ಮತ್ತು ಬಹು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ

ಬಹು-ಗ್ರಾಮ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ

44 ಸ್ಮಾರ್ಟ್ ಸಿಟಿ ಯೋಜನೆಗಳ ಉದ್ಘಾಟನೆ

"ಇದು ಕೇವಲ ವಿಮಾನ ನಿಲ್ದಾಣವಲ್ಲ, ಯುವ ಪೀಳಿಗೆಯ ಕನಸುಗಳನ್ನು ನನಸಾಗಿಸುವ ಅಭಿಯಾನವಾಗಿದೆ"

"ಕರ್ನಾಟಕದ ಪ್ರಗತಿಯ ಹಾದಿಯು ರೈಲು ಮಾರ್ಗಗಳು, ರಸ್ತೆಮಾರ್ಗಗಳು, ವಾಯುಮಾರ್ಗಗಳು ಮತ್ತು ಐವೇ (ಡಿಜಿಟಲ್ ಸಂಪರ್ಕ) ಗಳಲ್ಲಿನ ದಾಪುಗಾಲುಗಳಿಂದ ಸುಗಮವಾಗಿದೆ"

"ಭಾರತದಲ್ಲಿ ವಿಮಾನ ಪ್ರಯಾಣವು ಸಾರ್ವಕಾಲಿಕ ಉತ್ತುಂಗದಲ್ಲಿರುವ ಸಮಯದಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಗುತ್ತಿದೆ"

"ಇಂದಿನ ಏರ್ ಇಂಡಿಯಾ ನವ ಭಾರತದ ಸಾಮರ್ಥ್ಯ ಎಂದು ಗುರುತಿಸಲ್ಪಟ್ಟಿದೆ, ಅದು ಯಶಸ್ಸಿನ ಉತ್ತುಂಗವನ್ನು ಏರುತ್ತಿದೆ"

" ಮೂಲಸೌಕರ್ಯವು ಉತ್ತಮ ಸಂಪರ್ಕದೊಂದಿಗೆ ಇಡೀ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ"

"ಡಬಲ್ ಇಂಜಿನ್ ಸರ್ಕಾರವು ಹಳ್ಳಿಗಳು, ಬಡವರು, ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಸೇರಿದೆ"

Posted On: 27 FEB 2023 1:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಶಿವಮೊಗ್ಗದಲ್ಲಿ 3,600 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿದರು. ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದರು ಹಾಗೂ ಅದರ ಸೌಲಭ್ಯಗಳನ್ನು ವೀಕ್ಷಿಸಿದರು. ಶಿವಮೊಗ್ಗ - ಶಿಕಾರಿಪುರ - ರಾಣೆಬೆನ್ನೂರು ಹೊಸ ರೈಲು ಮಾರ್ಗ ಮತ್ತು ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ ಸೇರಿದಂತೆ ಶಿವಮೊಗ್ಗದಲ್ಲಿ ಎರಡು ರೈಲ್ವೆ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. 215 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ ಬಹು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜಲ ಜೀವನ್ ಮಿಷನ್ ಅಡಿಯಲ್ಲಿ 950 ಕೋಟಿ ರೂ.ಗೂ ಹೆಚ್ಚು ಮೊತ್ತದ ಬಹುಗ್ರಾಮ ಯೋಜನೆಗಳನ್ನು ಉದ್ಘಾಟಿಸಿದರು ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಶಿವಮೊಗ್ಗ ನಗರದಲ್ಲಿ 895 ಕೋಟಿ ರೂ.ಗೂ ಅಧಿಕ ಮೊತ್ತದ 44 ಸ್ಮಾರ್ಟ್ ಸಿಟಿ ಯೋಜನೆಗಳನ್ನು ಉದ್ಘಾಟಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಏಕ ಭಾರತ ಶ್ರೇಷ್ಠ ಭಾರತಕ್ಕಾಗಿ ಸಮರ್ಪಣಾ ಭಾವವನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವ ರಾಷ್ಟ್ರಕವಿ ಕುವೆಂಪು ಅವರ ನಾಡಿಗೆ ತಲೆಬಾಗಿ ನಮಿಸಿದರು. ಶಿವಮೊಗ್ಗದಲ್ಲಿ ನೂತನವಾಗಿ ಉದ್ಘಾಟನೆಗೊಂಡ ವಿಮಾನ ನಿಲ್ದಾಣವನ್ನು ಉಲ್ಲೇಖಿಸಿದ ಪ್ರಧಾನಿ, ಬಹಳ ದಿನಗಳ ನಂತರ ಇಂದು ನಾಗರಿಕರ ಅಗತ್ಯಗಳನ್ನು ಈಡೇರಿಸಲಾಗಿದೆ ಎಂದು ಹೇಳಿದರು. ವಿಮಾನ ನಿಲ್ದಾಣದ ಭವ್ಯವಾದ ಸೌಂದರ್ಯ ಮತ್ತು ನಿರ್ಮಾಣದ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕರ್ನಾಟಕದ ಸಂಪ್ರದಾಯಗಳು ಮತ್ತು ತಂತ್ರಜ್ಞಾನದ ಸಮ್ಮಿಲನವನ್ನು ವಿವರಿಸಿದರು. ಇದು ಕೇವಲ ವಿಮಾನ ನಿಲ್ದಾಣವಾಗದೆ ಯುವ ಪೀಳಿಗೆಯ ಕನಸುಗಳನ್ನು ನನಸಾಗಿಸುವ ಅಭಿಯಾನವಾಗಿದೆ ಎಂದು ಹೇಳಿದರು. ಇಂದು ಶಂಕುಸ್ಥಾಪನೆ ಮಾಡಲಾಗುತ್ತಿರುವ ‘ಹರ್ ಘರ್ ನಲ್ ಸೇ ಜಲ್’ಯೋಜನೆಗಳ ಜೊತೆಗೆ ರಸ್ತೆ ಮತ್ತು ರೈಲು ಯೋಜನೆಗಳ ಬಗ್ಗೆಯೂ ಅವರು ಮಾತನಾಡಿದರು ಮತ್ತು ಈ ಜಿಲ್ಲೆಗಳ ನಾಗರಿಕರನ್ನು ಅಭಿನಂದಿಸಿದರು.

ಪ್ರಧಾನಮಂತ್ರಿಯವರು ಇಂದು ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು ಮತ್ತು ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಮಾಡಿದ ಭಾಷಣ ಸಾರ್ವಜನಿಕ ಜೀವನದಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು. ಮೊಬೈಲ್‌ಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ಗೌರವಿಸುವಂತೆ ಪ್ರಧಾನ ಮಂತ್ರಿಯವರು ಮಾಡಿದ ಮನವಿಗೆ ನೆರೆದಿದ್ದ ಜನರಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು ಮತ್ತು ಜನರು ಹಿರಿಯ ನಾಯಕನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು.

ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಪ್ರಗತಿಯ ಹಾದಿಯು ರಸ್ತೆಮಾರ್ಗಗಳು, ವಾಯುಮಾರ್ಗಗಳು ಮತ್ತು ಐವೇ (ಡಿಜಿಟಲ್ ಸಂಪರ್ಕ) ಗಳಲ್ಲಿ ಇಡುತ್ತಿರುವ ದಾಪುಗಾಲುಗಳಿಂದ ಸುಗಮವಾಗಿದೆ ಎಂದು ಪ್ರಧಾನಿ ಹೇಳಿದರು. ಕರ್ನಾಟಕದ ಡಬಲ್ ಇಂಜಿನ್ ಸರ್ಕಾರವು ಕರ್ನಾಟಕದ ಪ್ರಗತಿಯ ರಥಕ್ಕೆ ಶಕ್ತಿ ತುಂಬುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹಿಂದೆ ಇದ್ದ ದೊಡ್ಡ ನಗರಗಳನ್ನು ಕೇಂದ್ರೀಕರಿಸುತ್ತಿದ್ದ ಅಭಿವೃದ್ಧಿಗೆ ವಿರುದ್ಧವಾಗಿ ಡಬಲ್ ಇಂಜಿನ್ ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ ಹಳ್ಳಿಗಳಿಗೆ ಮತ್ತು 2-3 ಶ್ರೇಣಿ ನಗರಗಳಿಗೆ ಅಭಿವೃದ್ಧಿಯನ್ನು ವ್ಯಾಪಕವಾಗಿಸಲಾಗಿದೆ ಎಂದು ವಿವರಿಸಿದರು. ಶಿವಮೊಗ್ಗದ ಅಭಿವೃದ್ಧಿಯು ಈ ಚಿಂತನೆಯ ಫಲಿತಾಂಶವಾಗಿದೆ ಅವರು ಹೇಳಿದರು.

ಭಾರತದಲ್ಲಿ ವಿಮಾನ ಪ್ರಯಾಣವು ಸಾರ್ವಕಾಲಿಕ ಉತ್ತುಂಗದಲ್ಲಿರುವ ಸಮಯದಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಗುತ್ತಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಇತ್ತೀಚೆಗಷ್ಟೇ ಏರ್ ಇಂಡಿಯಾ ವಿಶ್ವದ ಅತಿ ಹೆಚ್ಚು ಪ್ರಯಾಣಿಕ ವಿಮಾನಗಳ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 2014 ರ ಮೊದಲು, ಏರ್ ಇಂಡಿಯಾವನ್ನು ಸಾಮಾನ್ಯವಾಗಿ ಋಣಾತ್ಮಕ ಕಾರಣಗಳಿಗಾಗಿ ಚರ್ಚಿಸಲಾಗುತ್ತಿತ್ತು ಮತ್ತು ಅದರ ಗುರುತು ಯಾವಾಗಲೂ ಹಗರಣಗಳೊಂದಿಗೆ ಸಂಬಂಧ ಹೊಂದಿತ್ತು ಎಂದು ಅವರು ಗಮನಸೆಳೆದರು. ಇಂದಿನ ಏರ್ ಇಂಡಿಯಾ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿರುವ ನವ ಭಾರತದ ಸಾಮರ್ಥ್ಯ ಎಂದು ಗುರುತಿಸಲ್ಪಟ್ಟಿದೆ ಎಂದು ಅವರು ಹೇಳಿದರು. ಭಾರತದ ವಿಮಾನಯಾನ ಮಾರುಕಟ್ಟೆಯು ವಿಸ್ತರಿಸುತ್ತಿರುವುದರ ಬಗ್ಗೆ ಗಮನ ಸೆಳೆದ ಅವರು ಮುಂದಿನ ದಿನಗಳಲ್ಲಿ ದೇಶಕ್ಕೆ ಸಾವಿರಾರು ವಿಮಾನಗಳು ಬೇಕಾಗುತ್ತವೆ, ಅಲ್ಲಿ ಸಾವಿರಾರು ಯುವ ನಾಗರಿಕರು ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ನಾವು ಇಂದು ಈ ವಿಮಾನಗಳನ್ನು ಆಮದು ಮಾಡಿಕೊಳ್ಳುತ್ತಿದ್ದರೂ ಸಹ, ಭಾರತದ ನಾಗರಿಕರು ಮೇಡ್ ಇನ್ ಇಂಡಿಯಾ ಪ್ರಯಾಣಿಕ ವಿಮಾನಗಳನ್ನು ಹಾರಿಸುವ ದಿನ ದೂರವಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು.

ವಿಮಾನಯಾನ ಕ್ಷೇತ್ರದ ಅಭೂತಪೂರ್ವ ವಿಸ್ತರಣೆಗೆ ಕಾರಣವಾದ ಸರ್ಕಾರದ ನೀತಿಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಹಿಂದಿನ ಸರ್ಕಾರಗಳ ವಿಧಾನಕ್ಕಿಂತ ಭಿನ್ನವಾಗಿ, ಪ್ರಸ್ತುತ ಸರ್ಕಾರವು ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳಿಗೆ ಒತ್ತು ನೀಡಿದೆ ಎಂದು ಅವರು ಹೇಳಿದರು. ದೇಶವು ಸ್ವಾತಂತ್ರ್ಯದ ಮೊದಲ 7 ದಶಕಗಳಲ್ಲಿ 2014 ರವರೆಗೆ 74 ವಿಮಾನ ನಿಲ್ದಾಣಗಳನ್ನು ಹೊಂದಿತ್ತು, ಆದರೆ ಕಳೆದ 9 ವರ್ಷಗಳಲ್ಲಿ 74 ಹೆಚ್ಚಿನ ವಿಮಾನ ನಿಲ್ದಾಣಗಳನ್ನು ಸೇರಿಸಲಾಯಿತು, ಇವು ಅನೇಕ ಸಣ್ಣ ನಗರಗಳನ್ನು ಸಂಪರ್ಕಿಸುತ್ತವೆ. ಹವಾಯಿ ಚಪ್ಪಲಿ ಧರಿಸಿದ ಸಾಮಾನ್ಯ ನಾಗರಿಕರು ಹವಾಯಿ ಜಹಾಜ್‌ನಲ್ಲಿ ಪ್ರಯಾಣಿಸಲು ಸಾಧ್ಯವಾಗಬೇಕು ಎಂಬ ತಮ್ಮ ದೃಷ್ಟಿಯನ್ನು ಸಾಕಾರಗೊಳಿಸಲು ಕೈಗೆಟುಕುವ ವಿಮಾನ ಪ್ರಯಾಣಕ್ಕಾಗಿ ಉಡಾನ್ ಯೋಜನೆಯನ್ನು ಆರಂಭಿಸಿದ್ದನ್ನು ಪ್ರಧಾನಿ ಪ್ರಸ್ತಾಪಿಸಿದರು.

ಹೊಸ ವಿಮಾನ ನಿಲ್ದಾಣವು ನಿಸರ್ಗ, ಸಂಸ್ಕೃತಿ ಮತ್ತು ಕೃಷಿಯ ನಾಡಾದ ಶಿವಮೊಗ್ಗಕ್ಕೆ ಅಭಿವೃದ್ಧಿಯ ಬಾಗಿಲು ತೆರೆಯಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪಶ್ಚಿಮ ಘಟ್ಟಗಳಿಗೆ ಹೆಸರುವಾಸಿಯಾಗಿರುವ ಶಿವಮೊಗ್ಗವು ಮಲೆನಾಡು ಪ್ರದೇಶಕ್ಕೆ ಹೆಬ್ಬಾಗಿಲು ಮತ್ತು ಹಸಿರು, ವನ್ಯಜೀವಿ ಅಭಯಾರಣ್ಯಗಳು, ನದಿಗಳು, ಪ್ರಸಿದ್ಧ ಜೋಗ ಜಲಪಾತ ಮತ್ತು ಆನೆ ಶಿಬಿರ, ಸಿಂಹಧಾಮದ ಸಿಂಹ ಸಫಾರಿ ಮತ್ತು ಆಗುಂಬೆಯ ಪರ್ವತ ಶ್ರೇಣಿಗಳಿಗೆ ತವರಾಗಿದೆ ಎಂದರು. ಗಂಗಾ ನದಿಯಲ್ಲಿ ಮೀಯದ ಮತ್ತು ತುಂಗಭದ್ರಾ ನದಿಯ ನೀರನ್ನು ಕುಡಿಯದವರ ಜೀವನ ಅಪೂರ್ಣ ಎಂಬ ಗಾದೆಯನ್ನು ಪ್ರಧಾನಿಯವರು ನೆನಪಿಸಿಕೊಂಡರು.

ಶಿವಮೊಗ್ಗದ ಸಾಂಸ್ಕೃತಿಕ ಶ್ರೀಮಂತಿಕೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು ರಾಷ್ಟ್ರಕವಿ ಕುವೆಂಪು ಮತ್ತು ಪ್ರಪಂಚದ ಏಕೈಕ ಜೀವಂತ ಸಂಸ್ಕೃತ ಗ್ರಾಮ ಮತ್ತೂರು ಮತ್ತು ಶಿವಮೊಗ್ಗದಲ್ಲಿರುವ ಅನೇಕ ಶ್ರದ್ಧಾ ಕೇಂದ್ರಗಳನ್ನು ಪ್ರಸ್ತಾಪಿಸಿದರು. ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟದ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಶಿವಮೊಗ್ಗದ ಕೃಷಿ ವೈಶಿಷ್ಯತೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಇದು ದೇಶದ ಅತ್ಯಂತ ಫಲವತ್ತಾದ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಈ ಪ್ರದೇಶದ ಬೆಳೆಗಳ ವೈವಿಧ್ಯತೆಯನ್ನು ಕುರಿತು ಪ್ರಸ್ತಾಪಿಸಿದರು. ಡಬಲ್ ಇಂಜಿನ್ ಸರ್ಕಾರವು ಕೈಗೊಳ್ಳುತ್ತಿರುವ ದೃಢವಾದ ಸಂಪರ್ಕ ಕ್ರಮಗಳಿಂದ ಈ ಕೃಷಿ ಸಂಪತ್ತು ಉತ್ತೇಜನ ಪಡೆಯುತ್ತಿದೆ. ಹೊಸ ವಿಮಾನ ನಿಲ್ದಾಣವು ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಮತ್ತು ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ರೈಲು ಸಂಪರ್ಕವು ರೈತರಿಗೆ ಹೊಸ ಮಾರುಕಟ್ಟೆಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಹೊಸ ರೈಲು ಮಾರ್ಗ ಪೂರ್ಣಗೊಂಡಾಗ ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಿಗೂ ಅನುಕೂಲವಾಗಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಮಾರ್ಗದಲ್ಲಿ ಯಾವುದೇ ಲೆವೆಲ್ ಕ್ರಾಸಿಂಗ್ ಇರುವುದಿಲ್ಲ, ಇದು ಸುರಕ್ಷಿತ ರೈಲು ಮಾರ್ಗವಾಗಿದ್ದು, ವೇಗದ ರೈಲುಗಳು ಸರಾಗವಾಗಿ ಚಲಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಹೊಸ ಕೋಚಿಂಗ್ ಟರ್ಮಿನಲ್ ನಿರ್ಮಾಣದ ನಂತರ ಶಾರ್ಟ್ ಹಾಲ್ಟ್ ಸ್ಟೇಷನ್ ಆಗಿದ್ದ ಕೋಟಗಂಗೂರು ನಿಲ್ದಾಣವು ಹೆಚ್ಚಿನ ಸಾಮರ್ಥ್ಯವನ್ನು ಪಡೆಯುತ್ತದೆ ಎಂದು ಅವರು ತಿಳಿಸಿದರು. ಈಗ 4 ರೈಲು ಮಾರ್ಗಗಳು, 3 ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲ್ವೆ ಕೋಚಿಂಗ್ ಡಿಪೋದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಶಿವಮೊಗ್ಗವು ಈ ಪ್ರದೇಶದ ಶೈಕ್ಷಣಿಕ ಕೇಂದ್ರವಾಗಿದೆ ಎಂಬುದನ್ನು ಗಮನಿಸಿದ ಪ್ರಧಾನಮಂತ್ರಿಯವರು, ಹೆಚ್ಚಿನ ಸಂಪರ್ಕ ವ್ಯವಸ್ಥೆಯು ಹತ್ತಿರದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶಿವಮೊಗ್ಗಕ್ಕೆ ಭೇಟಿ ನೀಡಲು ಸುಲಭವಾಗುತ್ತದೆ ಎಂದು ಹೇಳಿದರು. ಇದು ಈ ಪ್ರದೇಶದ ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತದೆ ಎಂದು ಅವರು ಹೇಳಿದರು. ಉತ್ತಮ ಸಂಪರ್ಕವಿರುವ ಮೂಲಸೌಕರ್ಯವು ಇಡೀ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಜಲ ಜೀವನ್ ಮಿಷನ್ ಶಿವಮೊಗ್ಗದ ಮಹಿಳೆಯರಿಗೆ ಸುಗಮ ಜೀವನವನ್ನು ಒದಗಿಸುವ ದೊಡ್ಡ ಅಭಿಯಾನ ಎಂದು ಪ್ರಧಾನಮಂತ್ರಿಯವರು ಕರೆದರು. ಜಲ ಜೀವನ್ ಮಿಷನ್ ಆರಂಭಕ್ಕೂ ಮುನ್ನ ಶಿವಮೊಗ್ಗದಲ್ಲಿ 3 ಲಕ್ಷ ಕುಟುಂಬಗಳ ಪೈಕಿ 90 ಸಾವಿರ ಕುಟುಂಬಗಳು ಮಾತ್ರ ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು ಎಂದು ಅವರು ಮಾಹಿತಿ ನೀಡಿದರು. ಈಗ, ಡಬಲ್ ಇಂಜಿನ್ ಸರ್ಕಾರವು 1.5 ಲಕ್ಷ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಿದೆ ಮತ್ತು ಸಂಪೂರ್ಣ ಗುರಿ ಸಾಧನೆಗಾಗಿ ಕೆಲಸ ನಡೆಯುತ್ತಿದೆ. ಕಳೆದ 3.5 ವರ್ಷಗಳಲ್ಲಿ 40 ಲಕ್ಷ ಕುಟುಂಬಗಳು ನಲ್ಲಿ ನೀರಿನ ಸಂಪರ್ಕ ಪಡೆದಿವೆ ಎಂದರು.

ಡಬಲ್ ಇಂಜಿನ್ ಸರ್ಕಾರವು ಹಳ್ಳಿಗಳು, ಬಡವರು, ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಸೇರಿದೆ ಎಂದು ಪ್ರಧಾನಿ ಹೇಳಿದರು. ಶೌಚಾಲಯಗಳು, ಅಡುಗೆ ಅನಿಲ ಸಂಪರ್ಕಗಳು ಮತ್ತು ನಲ್ಲಿ ನೀರು ಪೂರೈಕೆಯ ಉದಾಹರಣೆಗಳನ್ನು ನೀಡಿದ ಪ್ರಧಾನಿಯವರು, ತಾಯಂದಿರು ಮತ್ತು ಸಹೋದರಿಯರಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಡಬಲ್ ಇಂಜಿನ್ ಸರ್ಕಾರವು ಪ್ರಾಮಾಣಿಕವಾಗಿ ಪ್ರತಿ ಮನೆಗೆ ನಲ್ಲಿ ನೀರು ಲಭ್ಯವಾಗುವಂತೆ ಮಾಡಲು ಶ್ರಮಿಸುತ್ತಿದೆ ಎಂದು ಅವರು ಪುನರುಚ್ಚರಿಸಿದರು.

ಇದು ಭಾರತದ ಅಮೃತ ಕಾಲ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಸಮಯ ಎಂದು ಕರ್ನಾಟಕದ ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಇಂತಹ ಅವಕಾಶ ಒದಗಿ ಬಂದಿರುವುದು ಇದೇ ಮೊದಲು ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿ ಕೇಳಿಬರುತ್ತಿದೆ ಎಂದು ಅವರು ಒತ್ತಿ ಹೇಳಿದರು. ಪ್ರಪಂಚದಾದ್ಯಂತದ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ ಮತ್ತು ಇದು ಕರ್ನಾಟಕ ಮತ್ತು ಅದರ ಯುವಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಕರ್ನಾಟಕದ ಅಭಿವೃದ್ಧಿಗಾಗಿ ಈ ಅಭಿಯಾನವು ಇನ್ನಷ್ಟು ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಎಲ್ಲರಿಗೂ ಭರವಸೆ ನೀಡಿದರು. ನಾವು ಒಟ್ಟಿಗೆ ನಡೆಯಬೇಕು. ನಾವು ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಕರ್ನಾಟಕ ಸರ್ಕಾರದ ಸಚಿವರು ಮತ್ತಿತರರು ಉಪಸ್ಥಿತರಿದ್ದರು.

ಹಿನ್ನೆಲೆ

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯೊಂದಿಗೆ ದೇಶದಾದ್ಯಂತ ವಾಯು ಸಂಪರ್ಕವನ್ನು ಸುಧಾರಿಸಲು ಪ್ರಧಾನಿಯವರು ನೀಡುತ್ತಿರುವ ಒತ್ತಿಗೆ ಮತ್ತೊಂದು ಉದಾಹರಣೆಯಾಗಿದೆ. ಹೊಸ ವಿಮಾನ ನಿಲ್ದಾಣವನ್ನು ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಕಟ್ಟಡವು ಗಂಟೆಗೆ 300 ಪ್ರಯಾಣಿಕರನ್ನು ನಿಭಾಯಿಸಬಲ್ಲದು ಮತ್ತು ಶಿವಮೊಗ್ಗ ಮತ್ತು ಮಲೆನಾಡು ಪ್ರದೇಶದ ಇತರ ನೆರೆಯ ಪ್ರದೇಶಗಳ ಸಂಪರ್ಕ ಮತ್ತು ಪ್ರವೇಶವನ್ನು ಸುಧಾರಿಸುತ್ತದೆ.

ಶಿವಮೊಗ್ಗದಲ್ಲಿ ಎರಡು ರೈಲು ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ಮತ್ತು ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ ಸೇರಿವೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗವನ್ನು 990 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಬೆಂಗಳೂರು-ಮುಂಬೈ ಮುಖ್ಯ ಮಾರ್ಗದೊಂದಿಗೆ ಮಲೆನಾಡು ಪ್ರದೇಶಕ್ಕೆ ಹೆಚ್ಚಿನ ಸಂಪರ್ಕವನ್ನು ಒದಗಿಸುತ್ತದೆ. ಶಿವಮೊಗ್ಗದಿಂದ ಹೊಸ ರೈಲುಗಳನ್ನು ಪ್ರಾರಂಭಿಸಲು ಮತ್ತು ಬೆಂಗಳೂರು ಮತ್ತು ಮೈಸೂರಿನಲ್ಲಿ ನಿರ್ವಹಣಾ ಸೌಲಭ್ಯಗಳನ್ನು ಕಡಿಮೆ ಮಾಡಲು ಶಿವಮೊಗ್ಗ ನಗರದಲ್ಲಿ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋವನ್ನು 100 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಬಹು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. 215 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವ ಯೋಜನೆಗಳಲ್ಲಿ ಬೈಂದೂರು - ರಾಣಿಬೆನ್ನೂರು ಸಂಪರ್ಕಿಸುವ ಎನ್‌ ಹೆಚ್ 766C ನಲ್ಲಿ ಶಿಕಾರಿಪುರ ಪಟ್ಟಣಕ್ಕೆ ಹೊಸ ಬೈಪಾಸ್ ರಸ್ತೆ ನಿರ್ಮಾಣ; ಮೇಗರವಳ್ಳಿಯಿಂದ ಆಗುಂಬೆಯವರೆಗೆ ಎನ್‌ ಹೆಚ್-169A ರಸ್ತೆ ಅಗಲೀಕರಣ; ಮತ್ತು ಎನ್‌ ಹೆಚ್‌ 169 ರಲ್ಲಿ ತೀರ್ಥಹಳ್ಳಿ ತಾಲೂಕಿನ ಭಾರತೀಪುರದಲ್ಲಿ ಹೊಸ ಸೇತುವೆಯ ನಿರ್ಮಾಣ ಸೇರಿವೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಜಲ ಜೀವನ್ ಮಿಷನ್ ಅಡಿಯಲ್ಲಿ 950 ಕೋಟಿ ರೂ.ಗೂ ಹೆಚ್ಚು ಮೊತ್ತದ ಬಹುಗ್ರಾಮ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದರು. ಗೌತಮಪುರ ಮತ್ತು ಇತರ 127 ಗ್ರಾಮಗಳಿಗೆ ಒಂದು ಬಹುಗ್ರಾಮ ಯೋಜನೆ ಉದ್ಘಾಟನೆ ಮತ್ತು ಒಟ್ಟು 860 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ ಮೂರು ಬಹುಗ್ರಾಮ ಯೋಜನೆಗಳಿಗೆ ಶಂಕುಸ್ಥಾಪನೆಯೂ ಇದರಲ್ಲಿ ಸೇರಿದೆ. ನಾಲ್ಕು ಯೋಜನೆಗಳು ಗೃಹಬಳಕೆಯ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸುತ್ತವೆ ಮತ್ತು ಒಟ್ಟು 4.4 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡುತ್ತವೆ. 

ಶಿವಮೊಗ್ಗ ನಗರದಲ್ಲಿ 895 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 44 ಸ್ಮಾರ್ಟ್ ಸಿಟಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಯೋಜನೆಗಳು 110 ಕಿಮೀ ಉದ್ದದ 8 ಸ್ಮಾರ್ಟ್ ರಸ್ತೆ ಪ್ಯಾಕೇಜ್‌ಗಳನ್ನು ಒಳಗೊಂಡಿವೆ; ಇಂಟಿಗ್ರೇಟೆಡ್ ಕಮಾಂಡ್ & ಕಂಟ್ರೋಲ್ ಸೆಂಟರ್ ಮತ್ತು ಬಹು ಹಂತದ ಕಾರು ಪಾರ್ಕಿಂಗ್; ಸ್ಮಾರ್ಟ್ ಬಸ್ ಶೆಲ್ಟರ್ ಯೋಜನೆಗಳು; ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ; ಶಿವಪ್ಪನಾಯ್ಕ ಅರಮನೆಯಂತಹ ಪಾರಂಪರಿಕ ಯೋಜನೆಗಳನ್ನು ಸಂವಾದಾತ್ಮಕ ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸುವುದು, 90 ಸಂರಕ್ಷಣಾ ಪಥಗಳು, ಉದ್ಯಾನವನಗಳ ನಿರ್ಮಾಣ ಮತ್ತು ನದಿ ತಟದ ಅಭಿವೃದ್ಧಿ ಯೋಜನೆ ಇತ್ಯಾದಿಗಳು ಇದರಲ್ಲಿ ಸೇರಿವೆ.

 

***

 



(Release ID: 1902794) Visitor Counter : 132