ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ಎರಡು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ  ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಇಂಗ್ಲಿಷ್ ಭಾಷಣ

Posted On: 10 FEB 2023 6:04PM by PIB Bengaluru

ಭಾರತ ಮಾತೆಗೆ ಜಯವಾಗಲಿ!

ಭಾರತ ಮಾತೆಗೆ ಜಯವಾಗಲಿ!

ಭಾರತ ಮಾತೆಗೆ ಜಯವಾಗಲಿ!

ರೈಲ್ವೆ ವಲಯದಲ್ಲಿ ವ್ಯಾಪಕ ಕ್ರಾಂತಿಯಾಗಲಿದೆ. ಇಂದು, ಒಂಭತ್ತು ಮತ್ತು ಹತ್ತನೇ ವಂದೇ ಭಾರತ್ ರೈಲುಗಳನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತಿರುವುದರಿಂದ ನಾನು ಅತ್ಯಂತ ಪ್ರಫುಲ್ಲಿತನಾಗಿದ್ದೇನೆ 
ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಅವರೇ, ಉಪಮುಖ್ಯಮಂತ್ರಿ ದೇವೇಂದ್ರ ಅವರೇ, ನನ್ನ ಸಂಪುಟ ಸಹೋದ್ಯೋಗಿಗಳೇ, ಮಹಾರಾಷ್ಟ್ರ ಸರ್ಕಾರದ ಸಚಿವರೇ, ಎಲ್ಲಾ ಸಂಸದರು, ಶಾಸಕರು, ಇತರ ಎಲ್ಲ ಗಣ್ಯರೇ, ಸಹೋದರ ಸಹೋದರಿಯರೇ!

ಇಂದು ಭಾರತೀಯ ರೈಲ್ವೆಗೆ, ವಿಶೇಷವಾಗಿ ಮುಂಬೈ ಮತ್ತು ಮಹಾರಾಷ್ಟ್ರದ ಆಧುನಿಕ ಸಂಪರ್ಕ ಕ್ಷೇತ್ರಕ್ಕೆ ಬಹು ದೊಡ್ಡ ದಿನವಾಗಿದೆ. ಇಂದು, ಮೊದಲ ಬಾರಿಗೆ, ಎರಡು ವಂದೇ ಭಾರತ್ ರೈಲುಗಳನ್ನು ಏಕಕಾಲದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ಈ ವಂದೇ ಭಾರತ್ ರೈಲುಗಳು ದೇಶದ ಆರ್ಥಿಕ ಕೇಂದ್ರಗಳಾದ ಮುಂಬೈ ಮತ್ತು ಪುಣೆ ನಗರಗಳನ್ನು ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ. ಇದರಿಂದ ಕಾಲೇಜಿಗೆ ಹೋಗುವವರು, ಕಚೇರಿಗೆ ಹೋಗುವವರು, ವ್ಯಾಪಾರಸ್ಥರು, ರೈತರು, ಭಕ್ತರು ಎಲ್ಲರಿಗೂ ಅನುಕೂಲವಾಗಲಿದೆ.

ಇವು ಮಹಾರಾಷ್ಟ್ರದ ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಗೆ ಹೆಚ್ಚಿನ ಉತ್ತೇಜನ ನೀಡಲಿವೆ. ಶಿರಡಿಯಲ್ಲಿ ಸಾಯಿಬಾಬಾ ಅವರ ದರ್ಶನವಾಗಲಿ, ನಾಸಿಕ್ ನ ರಾಮ್ ಕುಂಡಕ್ಕೆ ಭೇಟಿಯಾಗಲಿ ಅಥವಾ ತ್ರಯಂಬಕೇಶ್ವರ ದರ್ಶನವಾಗಲಿ ಮತ್ತು ಪಂಚವಟಿ ಪ್ರದೇಶಕ್ಕೆ ಭೇಟಿ ನೀಡುವುದಾಗಲಿ, ಹೊಸ ವಂದೇ ಭಾರತ್ ರೈಲಿನಿಂದ ಎಲ್ಲವೂ ತುಂಬಾ ಸುಲಭವಾಗಲಿದೆ.

ಅದೇ ರೀತಿ, ಮುಂಬೈ-ಸೋಲಾಪುರ ವಂದೇ ಭಾರತ್ ರೈಲಿನೊಂದಿಗೆ, ಪಂಢರಪುರದ ವಿಠ್ಠಲ್-ರಖುಮಾಯಿಯ ದರ್ಶನ, ಸೋಲಾಪುರದ ಸಿದ್ಧೇಶ್ವರ ದೇವಸ್ಥಾನ, ಅಕ್ಕಲಕೋಟೆಯ ಸ್ವಾಮಿ ಸಮರ್ಥ, ಅಥವಾ ತಾಯಿ ತುಳಜಾಭವಾನಿಯ ದರ್ಶನ ಈಗ ಎಲ್ಲರಿಗೂ ಸುಲಭವಾಗಿ ದೊರೆಯಲಿದೆ. ಮತ್ತು ವಂದೇ ಭಾರತ್ ರೈಲು ಸಹ್ಯಾದ್ರಿ ಘಟ್ಟಗಳ ಮೂಲಕ ಹಾದುಹೋದಾಗ ಜನರು ನೈಸರ್ಗಿಕ ಸೌಂದರ್ಯದ ದಿವ್ಯ ಅನುಭವವನ್ನು ಪಡೆಯಲಿದ್ದಾರೆ ಎಂದು ನನಗೆ ತಿಳಿದಿದೆ! ಈ ಹೊಸ ವಂದೇ ಭಾರತ್ ರೈಲುಗಳಿಗಾಗಿ ನಾನು ಮುಂಬೈ ಮತ್ತು ಮಹಾರಾಷ್ಟ್ರದ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ವಂದೇ ಭಾರತ್ ರೈಲು ಇಂದಿನ ಆಧುನಿಕ ಭಾರತದ ಅದ್ಭುತ ಚಿತ್ರಣವಾಗಿದೆ. ಇದು ಭಾರತದ ವೇಗ ಮತ್ತು ಮಾನದಂಡ ಎರಡರ ಪ್ರತಿಬಿಂಬವಾಗಿದೆ. ದೇಶವು ಎಷ್ಟು ವೇಗವಾಗಿ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡುತ್ತಿದೆ ಎಂಬುದನ್ನು ನೀವು ನೋಡಬಹುದು. ಇದುವರೆಗೆ ದೇಶಾದ್ಯಂತ ಇಂತಹ 10 ರೈಲುಗಳು ಸಂಚಾರ ಆರಂಭಿಸಿವೆ. ಇಂದು, ದೇಶದ 17 ರಾಜ್ಯಗಳ 108 ಜಿಲ್ಲೆಗಳು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಸಂಪರ್ಕ ಹೊಂದಿವೆ.

ಸಂಸದರು ತಮ್ಮ ಪ್ರದೇಶದ ನಿಲ್ದಾಣಗಳಲ್ಲಿ ಒಂದು ಅಥವಾ ಎರಡು ನಿಮಿಷಗಳ ಕಾಲ ರೈಲು ನಿಲುಗಡೆಗೆ ವ್ಯವಸ್ಥೆ ಮಾಡುವಂತೆ ಪತ್ರಗಳನ್ನು ಬರೆಯುತ್ತಿದ್ದುದು ನನಗೆ ನೆನಪಿದೆ. ಈಗ, ದೇಶಾದ್ಯಂತ ಸಂಸದರು ಭೇಟಿಯಾದಾಗಲೆಲ್ಲಾ ಅವರು ಈ ರೈಲಿಗೆ ಒತ್ತಾಯಿಸುತ್ತಾರೆ; ತಮ್ಮಲ್ಲಿಯೂ ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸಬೇಕೆಂದು ಆಗ್ರಹಿಸುತ್ತಾರೆ. ಇದು ಇಂದಿನ ವಂದೇ ಭಾರತ್ ರೈಲುಗಳ ಬಗೆಗಿರುವ ಅತಿಯಾದ ಉತ್ಸಾಹ.

ಸ್ನೇಹಿತರೇ,

ಇಂದು ಮುಂಬೈ ಜನರ ಜೀವನವನ್ನು ಸುಲಭಗೊಳಿಸುವ ಯೋಜನೆಗಳು ಇಲ್ಲಿ ಪ್ರಾರಂಭವಾಗಿರುವುದು ನನಗೆ ಸಂತೋಷವೆನಿಸಿದೆ. ಇಂದು ಉದ್ಘಾಟನೆಗೊಂಡ 'ಎಲಿವೇಟೆಡ್ ಕಾರಿಡಾರ್' ಮುಂಬೈನಲ್ಲಿ ಪೂರ್ವ-ಪಶ್ಚಿಮ ಸಂಪರ್ಕದ ಅಗತ್ಯವನ್ನು ಪೂರೈಸುತ್ತದೆ. ಮುಂಬೈ ಜನತೆ ಇದಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು. ಪ್ರತಿನಿತ್ಯ 2 ಲಕ್ಷಕ್ಕೂ ಹೆಚ್ಚು ವಾಹನಗಳು ಈ ಕಾರಿಡಾರ್ ಮೂಲಕ ಸಂಚರಿಸಲಿದ್ದು, ಜನರ ಸಮಯವೂ ಉಳಿತಾಯವಾಗಲಿದೆ.

ಇದೇ ಕಾರಣದಿಂದಾಗಿ ಈಗ ಪೂರ್ವ ಮತ್ತು ಪಶ್ಚಿಮ ಉಪನಗರ ಪ್ರದೇಶಗಳ ಸಂಪರ್ಕವೂ  ಸುಧಾರಿಸಿದೆ. ಕುರಾರ್ ಕೆಳ ಸೇತುವೆ ಕೂಡ ಬಹಳ ಮುಖ್ಯವಾದುದಾಗಿದೆ. ಈ ಯೋಜನೆಗಳನ್ನು ಪೂರ್ಣಗೊಳಿಸಿದ ಮುಂಬಯಿಗರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇನೆ.

ಸ್ನೇಹಿತರೇ,

21 ನೇ ಶತಮಾನದ ಭಾರತ ತನ್ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅತ್ಯಂತ ವೇಗವಾಗಿ ಸುಧಾರಿಸಬೇಕಾಗಿದೆ. ನಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಎಷ್ಟು ವೇಗವಾಗಿ ನಿರ್ಮಾಣಗೊಳ್ಳುತ್ತದೆಯೋ,  ಅಷ್ಟು ಬೇಗ ದೇಶದ ನಾಗರಿಕರ ಜೀವನ ಉತ್ತಮಗೊಳ್ಳುತ್ತದೆ ಮತ್ತು ಅವರ ಜೀವನದ ಗುಣಮಟ್ಟವೂ ಸುಧಾರಿಸುತ್ತದೆ. ಈ ಚಿಂತನೆಯೊಂದಿಗೆ ಇಂದು ದೇಶದಲ್ಲಿ ಆಧುನಿಕ ರೈಲುಗಳು ಸಂಚರಿಸುತ್ತಿವೆ, ಮೆಟ್ರೋ ವಿಸ್ತರಣೆಯಾಗುತ್ತಿದೆ, ಹೊಸ ವಿಮಾನ ನಿಲ್ದಾಣಗಳು ಮತ್ತು ಬಂದರುಗಳನ್ನು ನಿರ್ಮಿಸಲಾಗುತ್ತಿದೆ. ಕೆಲ ದಿನಗಳ ಹಿಂದೆ ಘೋಷಣೆಯಾದ ದೇಶದ ಆಯವ್ಯಯದಲ್ಲೂ ಈ ಉತ್ಸಾಹಕ್ಕೆ ಬಲ ನೀಡಲಾಗಿದೆ. ಮತ್ತು ನಮ್ಮ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೂಡ ಇದನ್ನು ಸಾಕಷ್ಟು ಪ್ರಶಂಸಿಸಿದ್ದಾರೆ.

ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮಾತ್ರ ರೂ10 ಲಕ್ಷ ಕೋಟಿ ಮೀಸಲಿರಿಸಲಾಗಿದೆ. ಇದು ಕಳೆದ 9 ವರ್ಷಗಳಿಗೆ ಹೋಲಿಸಿದರೆ 5 ಪಟ್ಟು ಹೆಚ್ಚಾಗಿದೆ. ಇದರಲ್ಲಿ ರೈಲ್ವೆಯ ಪಾಲು ಸುಮಾರು ರೂ 2.5 ಲಕ್ಷ ಕೋಟಿ. ಮಹಾರಾಷ್ಟ್ರದ ರೈಲ್ವೇ ಬಜೆಟ್ ‌ನಲ್ಲಿಯೂ  ಐತಿಹಾಸಿಕ ಏರಿಕೆಯಾಗಿದೆ. ಡಬಲ್ ಇಂಜಿನ್ ಸರ್ಕಾರದ ದುಪ್ಪಟ್ಟು ಪ್ರಯತ್ನಗಳೊಂದಿಗೆ, ಮಹಾರಾಷ್ಟ್ರದಲ್ಲಿ ಸಂಪರ್ಕವು ವೇಗ ಪಡೆಯಲಿದೆ ಮತ್ತು ಇನ್ನಷ್ಟು ಆಧುನೀಕರಣಗೊಳ್ಳುತ್ತದೆ ಎಂದು ನನಗೆ ಭರವಸೆಯಿದೆ.

ಸ್ನೇಹಿತರೇ,

ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡುವ ಪ್ರತಿ ರೂಪಾಯಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಸಿಮೆಂಟ್, ಮರಳು, ಕಬ್ಬಿಣ, ಕಟ್ಟಡ ನಿರ್ಮಾಣದಲ್ಲಿ ಬಳಸುವ ಯಂತ್ರಗಳು ಮತ್ತು ಈ ವಲಯಗಳಿಗೆ ಸಂಬಂಧಿಸಿದ ಪ್ರತಿಯೊಂದು ಉದ್ಯಮಕ್ಕೂ ಉತ್ತೇಜನ ದೊರೆಯಲಿದೆ. ವ್ಯಾಪಾರದಲ್ಲಿ ತೊಡಗಿರುವ ಮಧ್ಯಮ ವರ್ಗದವರೂ ಇದರಿಂದ ಲಾಭ ಪಡೆಯುತ್ತಾರೆ ಮತ್ತು ಬಡವರಿಗೆ ಉದ್ಯೋಗ ಲಭಿಸುತ್ತದೆ. ಇದರಿಂದಾಗಿ ಇಂಜಿನಿಯರ್ ‌ಗಳಿಗೆ ಉದ್ಯೋಗ, ಕೂಲಿ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಅಂದರೆ, ಮೂಲಸೌಕರ್ಯ ನಿರ್ಮಾಣ ಪ್ರಕ್ರಿಯೆಯಲ್ಲಿ, ಪ್ರತಿಯೊಬ್ಬರೂ ಆದಾಯ ಗಳಿಸುತ್ತಾರೆ ಮತ್ತು ಅದು ಸಿದ್ಧವಾದಾಗ, ಅದು ಹೊಸ ಕೈಗಾರಿಕೆಗಳು ಮತ್ತು ಹೊಸ ವ್ಯಾಪಾರಗಳಿಗೆ ಮತ್ತಷ್ಟು ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಸಹೋದರ ಮತ್ತು ಸಹೋದರಿಯರೇ,

ನಾನು ವಿಶೇಷವಾಗಿ ಮುಂಬೈ ಜನತೆಗೆ ಈ ಆಯವ್ಯಯದಲ್ಲಿ ಮಧ್ಯಮ ವರ್ಗವನ್ನು ಹೇಗೆ ಬಲಪಡಿಸಲಾಗಿದೆ ಎಂಬುದರ ಕುರಿತು ಹೇಳಲು ಬಯಸುತ್ತೇನೆ. ಸಂಬಳ ಪಡೆಯುವ ವರ್ಗವೇ ಆಗಿರಲಿ, ವ್ಯಾಪಾರದಿಂದ ಆದಾಯ ಗಳಿಸುವ ಮಧ್ಯಮ ವರ್ಗವೇ ಆಗಿರಲಿ, ಈ ಆಯವ್ಯಯ ಎರಡೂ ವರ್ಗದವರಲ್ಲಿ ಸಂತಸ ಮೂಡಿಸಿದೆ. 2014 ರ ಹಿಂದಿನ ಪರಿಸ್ಥಿತಿಯನ್ನು ನೋಡಿ; ಒಂದು ವರ್ಷದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿದ ಯಾವುದೇ ವ್ಯಕ್ತಿಗೆ ತೆರಿಗೆ ವಿಧಿಸಲಾಗುತ್ತಿತ್ತು.ಈ ಹಿಂದೆ ಬಾಜಪ ಸರ್ಕಾರ ರೂ 5 ಲಕ್ಷ ಆದಾಯದವರೆಗೆ ತೆರಿಗೆ ವಿನಾಯತಿ ನೀಡಿತ್ತು ಈಗ ಅದನ್ನು ಈ ಆಯವ್ಯಯದಲ್ಲಿ ರೂ 7 ಲಕ್ಷಕ್ಕೆ ಏರಿಸಲಾಗಿದೆ. 

ಯುಪಿಎ ಸರ್ಕಾರವು ಮಧ್ಯಮ ವರ್ಗದ ಕುಟುಂಬಕ್ಕೆ ಆದಾಯದ ಮೇಲೆ ಶೇಕಡಾ 20 ರಷ್ಟು ತೆರಿಗೆಯನ್ನು ವಿಧಿಸುತ್ತಿತ್ತು, ಆದರೆ ಇಂದು ಶೂನ್ಯ ತೆರಿಗೆಯನ್ನು ಪಾವತಿಸಬೇಕಾಗಿದೆ. ಈಗ ಹೊಸ ಉದ್ಯೋಗ ಪಡೆದಿರುವ, ಮಾಸಿಕ ಆದಾಯ ರೂ. 60-65 ಸಾವಿರವರೆಗೆ ಇರುವಂತಹ  ಯುವ ಸ್ನೇಹಿತರು ಹೆಚ್ಚೆಚ್ಚು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಬಡವರು ಮತ್ತು ಮಧ್ಯಮ ವರ್ಗದವರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುವ ಸರ್ಕಾರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

ಸ್ನೇಹಿತರೇ,

'ಸಬ್ಕಾ ವಿಕಾಸ್ ಸೇ ಸಬ್ಕಾ ಪ್ರಯಾಸ್' ಎಂಬ ಮನೋಭಾವವನ್ನು ಸಶಕ್ತಗೊಳಿಸುವ ಈ ಆಯವ್ಯಯ  ಪ್ರತಿ ಕುಟುಂಬಕ್ಕೂ ಸ್ಫೂರ್ತಿ ತುಂಬಲಿದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಇದು ನಮ್ಮೆಲ್ಲರನ್ನು ಮತ್ತಷ್ಟು ಉತ್ತೇಜಿಸಲಿದೆ. ಮತ್ತೊಮ್ಮೆ, ಆಯವ್ಯಯ  ಮತ್ತು ಹೊಸ ರೈಲುಗಳಿಗಾಗಿ ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನನ್ನ ಶುಭ ಹಾರೈಕೆಗಳು! ಧನ್ಯವಾದ!

ಹಕ್ಕು ನಿರಾಕರಣೆ: ಇದು ಪ್ರಧಾನಿ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

******



(Release ID: 1899138) Visitor Counter : 159