ಪ್ರಧಾನ ಮಂತ್ರಿಯವರ ಕಛೇರಿ

ಅಹಮದಾಬಾದ್ ನಲ್ಲಿ ನಡೆದ ಕೇಂದ್ರ – ರಾಜ್ಯ ವಿಜ್ಞಾನ ಸಮಾವೇಶವನ್ನು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಉದ್ಘಾಟಿಸಿದ ಪ್ರಧಾನಮಂತ್ರಿ


“ವಿಜ್ಞಾನ 21 ನೇ ಶತಮಾನದ ಅಭಿವೃದ‍್ದಿಯ ಇಂಧನದಂತೆ, ಇದು ಪ್ರತಿಯೊಂದು ವಿಭಾಗ ಮತ್ತು ರಾಜ್ಯಗಳ ಅಭಿವೃದ‍್ಧಿಗೆ ವೇಗ ನೀಡುವ ಶಕ್ತಿ ಹೊಂದಿದೆ”

“ನಾಲ್ಕನೇ ಕೈಗಾರಿಕಾ ಕ್ರಾಂತಿಯತ್ತ ಸಾಗಲು ಭಾರತದ ವಿಜ್ಞಾನ ಮತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಪಾತ್ರ ಬಹಳ ಮುಖ್ಯ”

“ನವ ಭಾರತ ಇದೀಗ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಅಷ್ಟೇ ಅಲ್ಲದೇ ಜೈ ಅನುಸಂಧಾನ್ ನತ್ತ ಸಾಗುತ್ತಿದೆ”

“ವಿಜ್ಞಾನ ಪರಿಹಾರ, ವಿಕಾಸ ಮತ್ತು ನಾವೀನ್ಯತೆಯ ಮೂಲವಾಗಿದೆ”

“ನಾವು ವಿಜ್ಞಾನಿಗಳ ಸಾಧನೆಗಳನ್ನು ಆಚರಿಸಿದರೆ ವಿಜ್ಞಾನ ನಮ್ಮ ಸಮಾಜ ಮತ್ತು ಸಂಸ್ಕೃತಿಯ ಭಾಗವಾಗಲಿದೆ”

“ಸರ್ಕಾರ ವಿಜ್ಞಾನ ಆಧಾರಿತ ಅಭಿವೃದ‍್ಧಿಯ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದೆ”

“ಹೆಚ್ಚು ಹೆಚ್ಚು ವೈಜ್ಞಾನಿಕ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ನಾವೀನ್ಯತೆಯನ್ನು ಪ್ರೋತ್ಸಾಹಿಸಲು ಒತ್ತು ನೀಡಲಾಗುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಈ ಪ್ರಕ್ರಿಯೆಯನ್ನು ಸರಳಗೊಳಿಸಬೇಕಾಗಿದೆ”

“ವಿಜ್ಞಾನಿಗಳೊಂದಿಗೆ ಸರ್ಕಾರಗಳು ಸಹಭಾಗಿತ್ವ ಮತ್ತು ಸಹಕಾರ ಹೊಂದಬೇಕು, ಇದರಿಂದ ಆಧುನಿಕ ವೈಜ್ಞಾನಿಕ ವಾತಾವರಣ ನಿರ್ಮಿಸಲು ಸಾಧ್ಯ”

Posted On: 10 SEP 2022 11:57AM by PIB Bengaluru

ಅಹಮದಾಬಾದ್ ನಲ್ಲಿ ಕೇಂದ್ರ – ರಾಜ್ಯ ವಿಜ್ಞಾನ ಸಮಾವೇಶವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಉದ್ಘಾಟಿಸಿದರು.ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂತಹ ಸಮಾವೇಶವನ್ನು ಎಲ್ಲರ ಪ್ರಯತ್ನದಿಂದ ಸಂಘಟಿಸಿದ್ದು, ಇದು ಎಲ್ಲರ ಪ್ರಯತ್ನಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ವಿಜ್ಞಾನ 21 ನೇ ಶತಮಾನದ ಅಭಿವೃದ್ಧಿಯ ಇಂಧನದಂತೆ, ಇದು ಪ್ರತಿಯೊಂದು ವಿಭಾಗ ಮತ್ತು ರಾಜ್ಯಗಳ ಅಭಿವೃದ‍್ಧಿಗೆ ವೇಗ ನೀಡುವ ಶಕ್ತಿ ಹೊಂದಿದೆ ಎಂದು ಹೇಳಿದರು. ಭಾರತ ನಾಲ್ಕನೇ ಕೈಗಾರಿಕಾ ಕ್ರಾಂತಿಯತ್ತ ಸಾಗುತ್ತಿದ್ದು, ಭಾರತದ ವಿಜ್ಞಾನಿಗಳ ಪಾತ್ರ ಮತ್ತು ಈ ವಲಯದಲ್ಲಿನ ಜನ ಅತ್ಯಂತ ಮುಖ್ಯವಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತದಲ್ಲಿನ ಜನರ ಜವಾಬ್ದಾರಿತನ ಮತ್ತು ನೀತಿ ನಿರೂಪಣೆ ಗಣನೀಯವಾಗಿ ಹೆಚ್ಚಾಗಿದೆ. ವಿಜ್ಞಾನ:  ಪರಿಹಾರ, ವಿಕಾಸ ಮತ್ತು ನಾವೀನ್ಯತೆಯ ಮೂಲವಾಗಿದೆ. ಮತ್ತು ಇದೇ ಸ್ಫೂರ್ತಿಯಿಂದ ನವ ಭಾರತ ಇದೀಗ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಅಷ್ಟೇ ಅಲ್ಲದೇ ಜೈ ಅನುಸಂಧಾನ್ ನತ್ತ ಸಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ನೆರವಾಗುವ ಇತಿಹಾಸದಿಂದ ನಾವು ಕಲಿಯಬಹುದಾದ ಪಾಠಗಳ ಕುರಿತು ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿ ಅವರು, ಕಳೆದ ಶತಮಾನದ ಆರಂಭದ ದಶಕಗಳನ್ನು ನಾವು ನೆನಪಿಸಿಕೊಂಡರೆ, ಜಗತ್ತು ವಿನಾಶ ಮತ್ತು ದುರಂತದ ಅವಧಿಯನ್ನು ಹೇಗೆ ಎದುರಿಸುತ್ತಿದೆ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ಆದರೆ ಆ ಯುಗದಲ್ಲಿ ಅದು ಪೂರ್ವ ಅಥವಾ ಪಶ್ಚಿಮದ ಬಗ್ಗೆ ಇರಲಿ ವಿಜ್ಞಾನಿಗಳು ಎಲ್ಲೆಡೆ ಆವಿಷ್ಕಾರಗಳಲ್ಲಿ ತೊಡಗಿದ್ದರು. ಪಾಶ‍್ಚಿಮಾತ್ಯ ರಾಷ್ಟ್ರಗಳಲ್ಲಿ ಐನ್ ಸ್ಟೀನ್, ಫೆರ್ಮಿ, ಮ್ಯಾಕ್ಸ್ ಫ್ಲಾಂಕ್, ನೀಲ್ಸ್ ಬೋರ್, ಟೆಸ್ಲಾ ಮುಂತಾದ ವಿಜ್ಞಾನಿಗಳು ತಮ್ಮ ಪ್ರಯೋಗಗಳಿಂದ ಜಗತ್ತನ್ನು ಬೆರಗುಗೊಳಿಸುತ್ತಿದ್ದರು. ಇದೇ ಅವಧಿಯಲ್ಲಿ ಸಿ.ವಿ. ರಾಮನ್, ಜಗದೀಶ್ ಚಂದ್ರ ಬೋಸ್, ಸತ್ಯೇಂದ್ರನಾಥ್ ಬೋಸ್, ಮೇಘನಾಥ್  ಸಹಾ ಮತ್ತು ಎಸ್. ಚಂದ್ರಶೇಖರ್ ತಮ್ಮ ಆವಿಷ್ಕಾರಗಳನ್ನು ಮುನ್ನೆಲೆಗೆ ತರುತ್ತಿದ್ದರು. ನಮ್ಮ ವಿಜ್ಞಾನಿಗಳ ಕೆಲಸಕ್ಕೆ ನಾವು ಸರಿಯಾದ ಮನ್ನಣೆ ನೀಡುತ್ತಿಲ್ಲ ಎಂದು ಪೂರ್ವ ಮತ್ತು ಪಶ್ಚಿಮಗಳ ನಡುವಿನ ವ್ಯತ್ಯಾಸವನ್ನು ಪ್ರಧಾನಮಂತ್ರಿ ಅವರು ಪ್ರಸ್ತಾಪಿಸಿದರು. ನಾವು ವಿಜ್ಞಾನಿಗಳ ಸಾಧನೆಗಳನ್ನು ಆಚರಿಸಿದರೆ ವಿಜ್ಞಾನ ನಮ್ಮ ಸಮಾಜ ಮತ್ತು ಸಂಸ್ಕೃತಿಯ ಭಾಗವಾಗಲಿದೆ. ನಮ್ಮ ದೇಶದ ವಿಜ್ಞಾನಿಗಳ ಸಾಧನೆಗಳನ್ನು ಪ್ರತಿಯೊಬ್ಬರೂ ಸಂಭ್ರಮಿಸಬೇಕು ಎಂದು ಪ್ರಧಾನಮಂತ್ರಿ ಅವರು ಮನವಿ ಮಾಡಿದರು.  “ವಿಜ್ಞಾನಿಗಳು” “ಇವರ ಸಾಧನೆಗಳನ್ನು ಆಚರಿಸಲು ದೇಶಕ್ಕೆ ಸಾಕಷ್ಟು ಕಾರಣಗಳಿವೆ”. ಭಾರತದ ವಿಜ್ಞಾನಿಗಳು ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ ಮತ್ತು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರ ವಿಜ್ಞಾನ ಆಧಾರಿತ ಅಭಿವೃದ್ಧಿಯ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. “2014 ರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಹೂಡಿಕೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.”. ಈ ಪ್ರಯತ್ನದಿಂದಾಗಿ ಭಾರತ 2015 ರಲ್ಲಿ ಜಾಗತಿಕ ನಾವಿನ್ಯದ ಸೂಚ್ಯಂಕದಲ್ಲಿ 81 ರಲ್ಲಿತ್ತು, ಈಗ ಭಾರತ 46 ನೇ ಸ್ಥಾನಕ್ಕೇರಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದೇಶದಲ್ಲಿ ದಾಖಲೆ ಸಂಖ್ಯೆಯ ಪೇಟೆಂಟ್ ಗಳನ್ನು ನೋಂದಾಯಿಸಲಾಗಿದೆ. ನಾವೀನ್ಯದ ವಾತಾವರಣ ಮತ್ತು ಉಜ್ವಲ ಆರಂಭಿಕ ಪರಿಸರ ವ್ಯವಸ್ಥೆ ಬಗ್ಗೆಯೂ ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.  

“ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯಗಳ ಒಲವು ನಮ್ಮ ಯುವ ಪೀಳಿಗೆಯ ಡಿಎನ್ಎ ನಲ್ಲಿದೆ. ಪೂರ್ಣ ಪ್ರಮಾಣದಲ್ಲಿ ನಮ್ಮ ಯುವ ಪೀಳಿಗೆಗೆ ಬೆಂಬಲ ನೀಡಬೇಕಾಗಿದೆ.” ಯುವ ಸಮೂಹದ ನಾವೀನ್ಯ ಮತ್ತು ಸಂಶೋಧನಾ ಅಭಿಯಾನದ  ಸ್ಫೂರ್ತಿಗೆ ಬೆಂಬಲ ನೀಡಲು ಪ್ರಧಾನಮಂತ್ರಿ ಅವರು ಹೊಸ ವಲಯಗಳನ್ನು ಪಟ್ಟಿ ಮಾಡಿದರು. ಬಾಹ್ಯಾಕಾಶ ಅಭಿಯಾನ, ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಅಭಿಯಾನ, ಸೆಮಿಕಂಡಕ್ಟರ್ ಅಭಿಯಾನ, ಜಲಜನಕ ಅಭಿಯಾನ ಮತ್ತು ಡ್ರೋನ್ ತಂತ್ರಜ್ಞಾನ, ಇದೇ ರೀತಿ ಎನ್ಇಪಿ ಮಾತೃ ಭಾಷೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಶಿಕ್ಷಣ ನೀಡುವ ಮೂಲಕ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.   

ಅಮೃತ ಕಾಲದಲ್ಲಿ ಭಾರತವನ್ನು ಸಂಶೋಧನೆ ಮತ್ತು ನಾವೀನ್ಯದಲ್ಲಿ ಜಾಗತಿಕ ಕೇಂದ್ರವನ್ನಾಗಿ ಮಾಡಲು ಇದೇ ಸಂದರ್ಭದಲ್ಲಿ ನಾವು ಹಲವಾರು ವಲಯಗಳಲ್ಲಿ ಕೆಲಸ ಮಾಡಬೇಕಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಸಂಶೋಧನೆಯನ್ನು ಸ್ಥಳೀಯ ಹಂತಕ್ಕೆ ಕೊಂಡೊಯ್ಯುವ ಅಗತ್ಯವನ್ನು ಸಹ ಅವರು ಒತ್ತಿ ಹೇಳಿದರು. ರಾಜ್ಯಗಳು ಸಂಶೋಧನೆ ಮತ್ತು ನಾವೀನ್ಯತೆಯನ್ನು ಅವರ ಸ್ಥಳೀಯ ಅಗತ್ಯಗಳಿಗಾಗಿ ಉತ್ತೇಜಿಸಬೇಕು.  ಹೆಚ್ಚು ಹೆಚ್ಚು ವೈಜ್ಞಾನಿಕ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ನಾವೀನ್ಯವನ್ನು ಪ್ರೋತ್ಸಾಹಿಸಲು ಒತ್ತು ನೀಡಲಾಗುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಈ ಪ್ರಕ್ರಿಯೆಯನ್ನು ಸರಳಗೊಳಿಸಬೇಕಾಗಿದೆ. ರಾಜ್ಯಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯದ ಪ್ರಯೋಗಾಲಯಗಳ ಸಂಖ್ಯೆಯನ್ನು ವೃದ್ಧಿಸಬೇಕಾಗಿದೆ. ಪ್ರತಿಯೊಂದು ರಾಜ್ಯಗಳು ವಿಜ್ಞಾನ, ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಧುನಿಕ ನೀತಿಯನ್ನು ಜಾರಿಗೆ ತರಬೇಕು. ವಿಜ್ಞಾನಿಗಳೊಂದಿಗೆ ಸರ್ಕಾರಗಳು ಸಹಭಾಗಿತ್ವ ಮತ್ತು ಸಹಕಾರ ಹೊಂದಬೇಕು, ಇದರಿಂದ ಆಧುನಿಕ ವೈಜ್ಞಾನಿಕ ವಾತಾವರಣ ನಿರ್ಮಿಸಲು ಸಾಧ್ಯ ಎಂದರು.

ಪ್ರಸ್ತುತ ಲಭ್ಯವಿರುವ ರಾಷ್ಟ್ರಮಟ್ಟದ ವೈಜ್ಞಾನಿಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳಲ್ಲಿನ ಸಾಮರ್ಥ್ಯ ಮತ್ತು ಪರಿಣತಿಯ ಲಾಭವನ್ನು ರಾಜ್ಯ ಸರ್ಕಾರಗಳು ಪಡೆದುಕೊಳ್ಳಬೇಕು. “ವೈಜ್ಞಾನಿಕ ಸಂಸ್ಥೆಗಳು ಮತ್ತು ಪರಿಣತಿಯ ಅತ್ಯುತ್ತಮ ಬಳಕೆಗಾಗಿ ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಸಂಸ್ಥೆಗಳನ್ನು ಹೊರಗಡೆ ಕರೆದು ತರಬೇಕಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ವಿಜ್ಞಾನ ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಆಯೋಜಿಸಬೇಕು. ತಮ್ಮ ವಿಜ್ಞಾನ ಪಠ್ಯದಲ್ಲಿ ಉತ್ತಮ ಆಯಾಮಗಳು ಮತ್ತು ಅಭ್ಯಾಸಗಳನ್ನು ಪರಿಚಯಿಸಬೇಕು ಎಂದು ಕರೆ ನೀಡಿದರು.   

ರಾಜ್ಯ – ಕೇಂದ್ರ ವಿಜ್ಞಾನ ಸಮಾವೇಶ ಹೊಸ ಆಯಾಮ ಸೃಷ್ಟಿಸಲಿದೆ ಮತ್ತು ದೇಶದಲ್ಲಿ ವಿಜ್ಞಾನ ಬೆಳವಣಿಗೆಯ ಸಮಸ್ಯೆಗಳನ್ನು ನಿವಾರಿಸಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಯಾವುದೇ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದು ಪ್ರಧಾನಮಂತ್ರಿ ಅವರು ಎಲ್ಲರಿಗೂ ಮನವಿ ಮಾಡಿದರು. “ಮುಂದಿನ 25 ವರ್ಷಗಳು ಅತ್ಯಂತ ಮಹತ್ವದ ವರ್ಷಗಳು, ಭಾರತಕ್ಕೆ ಈ ಅವಧಿಯಲ್ಲಿ ದೃಢ ನಿಶ್ಚಯದ ಹೊಸ ಗುರುತು ಮತ್ತು ಶಕ್ತಿಯನ್ನು ನೀಡಲಿದೆ ಎಂದು ತಮ್ಮ ಭಾಷಣದ ಕೊನೆಯಲ್ಲಿ ಪ್ರಸ್ತಾಪಿಸಿದರು. ಸಮಾವೇಶದಲ್ಲಿ ಪಾಲ್ಗೊಂಡಿರುವವರು ತಮ್ಮ ರಾಜ್ಯಗಳಿಗಾಗಿ ಕಲಿಯಬೇಕು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಿನ್ನೆಲೆ

ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಅವರ ಅವಿರತ ಪ್ರಯತ್ನಗಳಿಗೆ ಅನುಗುಣವಾಗಿ ಇದೇ ಮೊದಲ ಬಾರಿಗೆ ರಾಜ್ಯ ಮತ್ತು ಕೇಂದ್ರದ ಸಮನ್ವಯತೆ ಮತ್ತು ಸಹಭಾಗಿತ್ವದಿಂದ ಸಮಾವೇಶ ಆಯೋಜಿಸಲಾಗಿತ್ತು. ಸಹಕಾರಿ ಒಕ್ಕೂಟ, ದೃಢವಾದ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ [ಎಸ್.ಟಿ.ಐ] ಪರಿಸರ ವ್ಯವಸ್ಥೆಯ ಸ್ಫೂರ್ತಿಯನ್ನು ಇದು ಒಳಗೊಂಡಿದೆ.   

2022 ರ ಸೆಪ್ಟೆಂಬರ್ 10-11 ರಂದು ಎರಡು ದಿನಗಳ ಕಾಲ ವಿಜ್ಞಾನ ನಗರಿ ಅಹಮದಾಬಾದ್ ನಲ್ಲಿ ಎರಡು ದಿನಗಳ ಸಮಾವೇಶ ಆಯೋಜಿಸಲಾಗಿದೆ. ಎಸ್.ಟಿ.ಐ ದೃಷ್ಟಿಕೋನ 2047: ಸರ್ವರಿಗೂ ಆರೋಗ್ಯ – ಡಿಜಿಟಲ್ ಆರೋಗ್ಯ ಆರೈಕೆ: 2030ರ ವೇಳೆಗೆ ಖಾಸಗಿ ವಲಯದ ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ಹೂಡಿಕೆ ದ್ವಿಗುಣಗೊಳಿಸುವ: ಕೃಷಿ – ರೈತರ ಸುಧಾರಣೆಗಾಗಿ ತಂತ್ರಜ್ಞಾನದಲ್ಲಿ ಪರಿವರ್ತನೆ: ಜಲ – ಶುದ್ಧ ಕುಡಿಯುವ ನೀರಿನ ಉತ್ಪಾದನೆಯಲ್ಲಿ ನಾವೀನ್ಯತೆ: ಭವಿಷ್ಯದ ಆರ್ಥಿಕತೆಗಾಗಿ ಆಳ ಸಮುದ್ರ ಅಭಿಯಾನ ಮತ್ತು ಕರಾವಳಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಮಹತ್ವ ಕುರಿತ ಗೋಷ್ಠಿಗಳನ್ನು ಆಯೋಜಿಸಲಾಗಿದೆ.   

ಸಮಾವೇಶದಲ್ಲಿ ಗುಜರಾತ್ ಮುಖ್ಯಮಂತ್ರಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ [ಎಸ್ ಅಂಡ್ ಟಿ] ರಾಜ್ಯ ಸಚಿವರು, ಕೇಂದ್ರಾಡಳಿತ/ರಾಜ್ಯಗಳ ಎಸ್ ಅಂಡ್ ಟಿ ಸಚಿವರು ಹಾಗೂ ಕಾರ್ಯದರ್ಶಿಗಳು, ಕೈಗಾರಿಕಾ ವಲಯದ ನಾಯಕರು, ಉದ್ಯಮಿಗಳು, ಸ್ವಯಂ ಸೇವಾ ಸಂಘಟನೆಗಳು, ಯುವ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

*****

 



(Release ID: 1858324) Visitor Counter : 217