ಪ್ರಧಾನ ಮಂತ್ರಿಯವರ ಕಛೇರಿ

ಬ್ರಿಟನ್ ಪ್ರಧಾನಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಪಠ್ಯ

Posted On: 22 APR 2022 3:40PM by PIB Bengaluru

ಘನತೆವೆತ್ತ, ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರೇ 

ಗೌರವಾನ್ವಿತ ಪ್ರತಿನಿಧಿಗಳೇ
ಮಾಧ್ಯಮದ ನಮ್ಮ ಮಿತ್ರರೇ, 

ನಮಸ್ಕಾರ 
ಮೊದಲನೆಯದಾಗಿ, ನಾನು ಭಾರತಕ್ಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಮತ್ತು ಅವರ ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. 

ಪ್ರಧಾನ ಮಂತ್ರಿಯಾಗಿ ಇದು ಭಾರತಕ್ಕೆ ಅವರ ಮೊದಲ ಭೇಟಿಯಾಗಿರಬಹುದು, ಆದರೆ ಭಾರತದ ಹಳೆಯ ಮಿತ್ರನಾಗಿ ಅವರು ಭಾರತವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ ಮತ್ತು ಅರ್ಥಮಾಡಿಕೊಂಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ, ಭಾರತ ಮತ್ತು ಯುಕೆ(ಬ್ರಿಟನ್) ನಡುವಿನ ಸಂಬಂಧ ಬಲವರ್ಧನೆಯಲ್ಲಿ ಪ್ರಧಾನ ಮಂತ್ರಿ ಜಾನ್ಸನ್ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. 
ಭಾರತವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ, ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರ ಭೇಟಿಯು ಸ್ವತಃ ಒಂದು ಐತಿಹಾಸಿಕ ಕ್ಷಣವಾಗಿದೆ. ಮತ್ತು ನೀವು ನಿನ್ನೆ ಸಾಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿಯವರಿಗೆ ನಮನ ಸಲ್ಲಿಸುವ ಮೂಲಕ ಭಾರತದ ಭೇಟಿ ಆರಂಭಿಸಿರುವುದನ್ನು ಇಡೀ ಭಾರತ ವೀಕ್ಷಿಸಿದೆ. 

ಮಿತ್ರರೇ ,

ನಾವು ಕಳೆದ ವರ್ಷ ಎರಡೂ ದೇಶಗಳ ನಡುವೆ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಸ್ಥಾಪಿಸಿದ್ದೇವೆ. ಪ್ರಸಕ್ತ ಅಥವಾ ಸದ್ಯದ ದಶಕದಲ್ಲಿ ನಮ್ಮ ಸಂಬಂಧಕ್ಕೆ ಮಾರ್ಗದರ್ಶನ ನೀಡಲು ನಾವು ಮಹತ್ವಾಕಾಂಕ್ಷೆಯ ‘ನೀಲನಕ್ಷೆ 2030’ಗೂ ಸಹ ಚಾಲನೆ ನೀಡಿದ್ದೇವೆ. ನಮ್ಮಇಂದಿನ ಸಂವಾದದಲ್ಲಿ, ನಾವು ಈ ನೀಲನಕ್ಷೆಯಲ್ಲಿ ಮಾಡಿದ ಪ್ರಗತಿಯನ್ನು ಸಹ ಪರಿಶೀಲಿಸಿದ್ದೇವೆ ಮತ್ತು ಭವಿಷ್ಯಕ್ಕಾಗಿ ಕೆಲವು ಗುರಿಗಳನ್ನು ನಿಗದಿಪಡಿಸಿದ್ದೇವೆ. 
ಎರಡೂ ದೇಶಗಳ ತಂಡಗಳು ಮುಕ್ತ ವ್ಯಾಪಾರ ಒಪ್ಪಂದದ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಾತುಕತೆಯಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ಎಫ್‌ಟಿಎ ಅಂತಿಮಗೊಳಿಸುವ ನಿಟ್ಟಿನಲ್ಲಿ ಸಂಪೂರ್ಣ ಪ್ರಯತ್ನಗಳನ್ನು ಮಾಡಲು ನಾವು ನಿರ್ಧರಿಸಿದ್ದೇವೆ. ಕಳೆದ ಕೆಲವು ತಿಂಗಳುಗಳಲ್ಲಿ, ಭಾರತವು ಯುಎಇ ಮತ್ತು ಆಸ್ಟ್ರೇಲಿಯಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಅದೇ ವೇಗದಲ್ಲಿ, ಅದೇ ಬದ್ಧತೆಯೊಂದಿಗೆ ನಾವು ಯುನೈಟೆಡ್ ಕಿಂಗ್ ಡಂ ನೊದಿಗೆ ಎಫ್ ಟಿಎಯಲ್ಲಿ ಮುನ್ನಡೆಯಲು ಬಯಸುತ್ತೇವೆ. 
ನಾವು ರಕ್ಷಣಾ ವಲಯದಲ್ಲಿ ಸಹಕಾರ ವೃದ್ಧಿಗೂ ಸಹ ಒಪ್ಪಿದ್ದೇವೆ. ರಕ್ಷಣಾ ವಲಯದಲ್ಲಿ ಉತ್ಪಾದನೆ, ತಂತ್ರಜ್ಞಾನ, ವಿನ್ಯಾಸ ಮತ್ತು ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಲ್ಲಿ ‘ಆತ್ಮನಿರ್ಭರ ಭಾರತ’ ಗುರಿ ಸಾಧನೆಗೆ ಯುಕೆ ಎಲ್ಲ ರೀತಿಯ ಬೆಂಬಲ ನೀಡುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. 

ಮಿತ್ರರೇ ,
ಅಲ್ಲದೆ, ಭಾರತದಲ್ಲಿ ನಡೆಯುತ್ತಿರುವ ಸಮಗ್ರ ಸುಧಾರಣೆಗಳು, ನಮ್ಮ ಮೂಲಸೌಕರ್ಯ ಆಧುನೀಕರಣ ಯೋಜನೆ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಕುರಿತು ನಾವು ಚರ್ಚೆ ನಡೆಸಿದ್ದೇವೆ. ಬ್ರಿಟನ್ನಿನ ಕಂಪನಿಗಳು ಭಾರತದಲ್ಲಿ ಹೂಡಿಕೆ ಹೆಚ್ಚಳ ಮಾಡುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಮತ್ತು ಇದಕ್ಕೊಂದು ಒಳ್ಳೆಯ ಉದಾಹರಣೆಯನ್ನು ನಿನ್ನೆ ಗುಜರಾತ್‌ನ ಹಲೋಲ್‌ನಲ್ಲಿ ನಾವು ನೋಡಿದ್ದೇವೆ. 
ಯುನೈಟೆಡ್ ಕಿಂಗ್ ಡಂನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ 1.6 ಮಿಲಿಯನ್ ಜನರು ಸಮಾಜಕ್ಕೆ ಮತ್ತು ಆರ್ಥಿಕತೆಯ ಪ್ರತಿಯೊಂದು ವಲಯಕ್ಕೂ ಧನಾತ್ಮಕ ಕೊಡುಗೆಗಳನ್ನು ನೀಡುತ್ತಿದ್ದಾರೆ. ಅವರ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಮತ್ತು ನಾವು ಈ ಜೀವಂತ ಸೇತುವೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಬಯಸುತ್ತೇವೆ. ಪ್ರಧಾನ ಮಂತ್ರಿ ಜಾನ್ಸನ್ ವೈಯಕ್ತಿಕವಾಗಿ ಆ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. 
ಮಿತ್ರರೇ ,

ಗ್ಲಾಸ್ಗೋದಲ್ಲಿ ನಡೆದ ಸಿಒಪಿ-26 ನಲ್ಲಿ ಕೈಗೊಂಡ ನಿರ್ಣಯಗಳನ್ನು ಈಡೇರಿಸಲು ನಾವು ನಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದೇವೆ. ನಾವು ಇಂದು ನಮ್ಮ ಹವಾಮಾನ ಮತ್ತು ಇಂಧನ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ನಿರ್ಧರಿಸಿದ್ದೇವೆ. ಭಾರತದ ರಾಷ್ಟ್ರೀಯ ಹೈಡ್ರೋಜನ್ ಮಿಷನ್‌ಗೆ ಸೇರಲು ನಾವು ಯುಕೆಯನ್ನು ಆಹ್ವಾನಿಸುತ್ತೇವೆ ಮತ್ತು ನಮ್ಮ ನಡುವೆ ಕಾರ್ಯತಾಂತ್ರಿಕ ತಾಂತ್ರಿಕ ಮಾತುಕತೆ ಸ್ಥಾಪನೆಯನ್ನು ನಾನು ಪ್ರಾಮಾಣಿಕವಾಗಿ ಸ್ವಾಗತ ಮಾಡುತ್ತೇನೆ. 

ಮಿತ್ರರೇ,
ನಮ್ಮ ನಡುವಿನ ಜಾಗತಿಕ ಆವಿಷ್ಕಾರ ಪಾಲುದಾರಿಕೆಯ ಅನುಷ್ಠಾನದ ವ್ಯವಸ್ಥೆಗಳ ತೀರ್ಮಾನವು ಇಂದು ಬಹು ಮುಖ್ಯ ಉಪಕ್ರಮವೆಂದು ಸಾಬೀತುಪಡಿಸುತ್ತದೆ. ಇದು ಇತರ ದೇಶಗಳೊಂದಿಗೆ ನಮ್ಮ ಅಭಿವೃದ್ಧಿ ಪಾಲುದಾರಿಕೆ ಮತ್ತಷ್ಟು ಬಲವರ್ಧನೆಗೊಳಿಸುತ್ತದೆ. ಇದರ ಅಡಿಯಲ್ಲಿ, ಭಾರತ ಮತ್ತು ಯುಕೆ ತೃತೀಯ ರಾಷ್ಟ್ರಗಳಿಗೆ ‘ಮೇಡ್ ಇನ್ ಇಂಡಿಯಾ’ ಆವಿಷ್ಕಾರಗಳನ್ನು ವರ್ಗಾಯಿಸಲು ಮತ್ತು ವಿಸ್ತರಿಸಲು 100 ಮಿಲಿಯನ್ ಡಾಲರ್ ವರೆಗೆ ಹಣಕಾಸು ನೆರವು ಸಹ ನೀಡುತ್ತವೆ. ಇವುಗಳು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮತ್ತು ಹವಾಮಾನ ವೈಪರೀತ್ಯವನ್ನು ನಿಭಾಯಿಸುವ ಪ್ರಯತ್ನಗಳಲ್ಲಿ ಸಹಾಯ ಮಾಡುತ್ತವೆ. ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸುವಲ್ಲಿ ಮತ್ತು ಅವರ ಆವಿಷ್ಕಾರಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನಮ್ಮ ನವೋದ್ಯಮಗಳು ಮತ್ತು ಎಂಎಸ್ಎಂಇ ವಲಯಕ್ಕೆ ಇದು ತುಂಬಾ ಉಪಯುಕ್ತವಾಗಿದೆಯೆಂದು ಸಾಬೀತಾಗಿದೆ. 

ಮಿತ್ರರೇ,
ಅಲ್ಲದೆ, ನಾವು ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಿದ್ದೇವೆ. ನಾವು ಉಚಿತ, ಮುಕ್ತ, ಅಂತರ್ಗತ ಮತ್ತು ನಿಯಮಗಳನ್ನು ಆಧರಿಸಿದ  ಇಂಡೋ-ಪೆಸಿಫಿಕ್ ಪ್ರದೇಶ ಸ್ಥಾಪನೆಗೆ ಒತ್ತು ನೀಡಿದ್ದೇವೆ. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮಕ್ಕೆ ಸೇರುವ ಯುಕೆ ನಿರ್ಧಾರವನ್ನು ಭಾರತ ಸ್ವಾಗತಿಸುತ್ತದೆ. 

ತಕ್ಷಣದ ಕದನ ವಿರಾಮ ಮತ್ತು ಉಕ್ರೇನ್‌ನಲ್ಲಿನ ಸಮಸ್ಯೆಯ ಪರಿಹಾರಕ್ಕಾಗಿ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ನಾವು ಆದ್ಯತೆ ನೀಡಿದ್ದೇವೆ. ಎಲ್ಲಾ ದೇಶಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಗೆ ಗೌರವ ನೀಡುವ ಪ್ರಾಮುಖ್ಯತೆಯನ್ನು ನಾವು ಪುನರುಚ್ಚರಿಸುತ್ತೇವೆ. 

ಎಲ್ಲರನ್ನೂ ಒಳಗೊಂಡ ಸರ್ಕಾರವಿರುವ ಶಾಂತಿಯುತ, ಸ್ಥಿರ ಮತ್ತು ಸುರಕ್ಷಿತ ಅಫ್ಘಾನಿಸ್ತಾನಕ್ಕೆ ನಾವು ನಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದೇವೆ. ಆಫ್ಘನ್ ಪ್ರದೇಶವನ್ನು ಇತರ ದೇಶಗಳಲ್ಲಿ ಭಯೋತ್ಪಾದನೆಯನ್ನು ಹರಡಲು ಬಳಸಬಾರದು ಎಂಬುದು ಅತ್ಯಗತ್ಯ. 

ಘನತೆವೆತ್ತವರೇ,
ಭಾರತ ಮತ್ತು ಯುಕೆ ನಡುವಿನ ಸಂಬಂಧವನ್ನು ಬಲವರ್ಧನೆಗೆ ನೀವು ಸದಾ ವಿಶೇಷ ಪ್ರಯತ್ನಗಳನ್ನು ಮಾಡಿದ್ದೀರಿ. ಅದಕ್ಕಾಗಿ ನಾವು ನಿಮ್ಮನ್ನು ಅಭಿನಂದಿಸುತ್ತೇವೆ. 

ಮತ್ತೊಮ್ಮೆ ನೀವು ಮತ್ತು ನಿಮ್ಮ ನಿಯೋಗಕ್ಕೆ ಭಾರತಕ್ಕೆ ಆತ್ಮೀಯ ಸ್ವಾಗತ. 

ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು 
 
ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲ, ಮೂಲತಃ ಅವರು ಹಿಂದಿಯಲ್ಲಿ ಭಾಷಣ ಮಾಡಿದರು. 


***



(Release ID: 1819282) Visitor Counter : 491