ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ʻಗಂಗಾ ಎಕ್ಸ್‌ಪ್ರೆಸ್ ವೇʼಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ


ʻಗಂಗಾ ಎಕ್ಸ್‌ಪ್ರೆಸ್ ವೇʼ ಮೀರತ್, ಹಾಪುರ್, ಬುಲಂದ್ ಶಹರ್, ಅಮ್ರೋಹಾ, ಸಂಭಾಲ್, ಬುದೌನ್, ಶಹಜಹಾನ್‌ಪುರ್, ಹರ್ದೋಯಿ, ಉನ್ನಾವೋ, ರಾಯ್‌ಬರೇಲಿ, ಪ್ರತಾಪಗಢ ಮತ್ತು ಪ್ರಯಾಗ್ ರಾಜ್ ಮೂಲಕ ಹಾದುಹೋಗಲಿದೆ

ನಾಳೆ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕ್ ಉಲ್ಲಾ ಖಾನ್, ಠಾಕೂರ್ ರೋಷನ್ ಸಿಂಗ್ ಅವರ ಹುತಾತ್ಮ ದಿನದ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ

"ಉತ್ತರ ಪ್ರದೇಶದ ಪ್ರಗತಿಗೆ ಹೊಸ ಬಾಗಿಲುಗಳನ್ನು ಗಂಗಾ ಎಕ್ಸ್‌ಪ್ರೆಸ್ ವೇ, ತೆರೆಯಲಿದೆ"

"ಇಡೀ ಉತ್ತರ ಪ್ರದೇಶ ಒಟ್ಟಿಗೆ ಬೆಳೆದಾಗ, ದೇಶವು ಪ್ರಗತಿ ಹೊಂದುತ್ತದೆ. ಆದ್ದರಿಂದ, ಅವಳಿ ಎಂಜಿನ್ ಸರಕಾರದ ಗಮನವು ಉತ್ತರ ಪ್ರದೇಶ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ"

''ಸಮಾಜದಲ್ಲಿ ಯಾರು ಹಿಂದೆ ಉಳಿದಿದ್ದಾರೆ, ಕೆಳ ಸ್ತರದಲ್ಲಿದ್ದಾರೆ ಅವರಿಗೆ ಅಭಿವೃದ್ಧಿಯ ಲಾಭವನ್ನು ತಲುಪಿಸುವುದು ಸರಕಾರದ ಆದ್ಯತೆಯಾಗಿದೆ. ಇದೇ ಭಾವನೆಯನ್ನು ನಮ್ಮ ಕೃಷಿ ನೀತಿಯಲ್ಲಿ ಮತ್ತು ರೈತರಿಗೆ ಸಂಬಂಧಿಸಿದ ನೀತಿಯಲ್ಲಿ ಕಾಣಬಹುದು" ಎಂದು ಹೇಳಿದರು

"ಉತ್ತರ ಪ್ರದೇಶದ ಜನರು ʻಯುಪಿ ಜೊತೆಗೆ ಯೋಗಿ, ಬಹುತ್ ಹೈ ಉಪಯೋಗಿ- U.P.Y.O.G.I.ʼ ಎಂದು ಹೇಳುತ್ತಿದ್ದಾರೆ"

Posted On: 18 DEC 2021 2:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ʻಗಂಗಾ ಎಕ್ಸ್‌ಪ್ರೆಸ್ ವೇʼಗೆ ಶಂಕುಸ್ಥಾಪನೆ ನೆರವೇರಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಶ್ರೀ ಬಿ.ಎಲ್. ವರ್ಮಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಕಾಕೋರಿ ಘಟನೆಯ ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕ್ ಉಲ್ಲಾ ಖಾನ್ ಮತ್ತು ರೋಷನ್ ಸಿಂಗ್ ಅವರಿಗೆ ಮೊದಲು ಗೌರವ ನಮನ ಸಲ್ಲಿಸಿದರು. ಸ್ಥಳೀಯ ಆಡುಭಾಷೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯ ಹೋರಾಟದ ಕವಿಗಳಾದ ದಾಮೋದರ ಸ್ವರೂಪ್ 'ವಿದ್ರೋಹಿ', ರಾಜ್ ಬಹದ್ದೂರ್ ವಿಕಾಲ್ ಮತ್ತು ಅಗ್ನಿವೇಶ್ ಶುಕ್ಲಾ ಅವರಿಗೆ ಗೌರವ ನಮನ ಸಲ್ಲಿಸಿದರು. "ನಾಳೆ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕ್ ಉಲ್ಲಾ ಖಾನ್, ಠಾಕೂರ್ ರೋಷನ್ ಸಿಂಗ್ ಅವರು ಹುತಾತ್ಮರಾದ ದಿನ. ಬ್ರಿಟಿಷ್ ಆಡಳಿತವನ್ನು ಪ್ರಶ್ನಿಸಿದ ಶಹಜಹಾನ್‌ಪುರದ ಈ ಮೂವರು ಪುತ್ರರನ್ನು ಡಿಸೆಂಬರ್ 19ರಂದು ಗಲ್ಲಿಗೇರಿಸಲಾಯಿತು. ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಅಂತಹ ವೀರರಿಗೆ ನಾವು ಅತ್ಯಂತ ಋಣಿಗಳಾಗಿದ್ದೇವೆ,ʼʼ ಎಂದು ಪ್ರಧಾನಿ ಹೇಳಿದರು.

ಗಂಗಾ ಮಾತೆಯು ನಮ್ಮೆಲ್ಲಾ ಶುಭ ಮತ್ತು ಎಲ್ಲಾ ಪ್ರಗತಿಗೆ ಮೂಲವಾಗಿದ್ದಾಳೆ ಎಂದು ಪ್ರಧಾನಿ ಹೇಳಿದರು. ಗಂಗಾ ಮಾತೆಯು ಎಲ್ಲಾ ಸಂತೋಷವನ್ನು ನೀಡುತ್ತಾಳೆ ಮತ್ತು ಎಲ್ಲಾ ನೋವನ್ನು ತೊಡೆದುಹಾಕುತ್ತಾಳೆ. ಅದೇ ರೀತಿ, ʻಗಂಗಾ ಎಕ್ಸ್‌ಪ್ರೆಸ್ ವೇʼ ಹೆದ್ದಾರಿಯು ಉತ್ತರ ಪ್ರದೇಶದ ಪ್ರಗತಿಗೆ ಹೊಸ ಬಾಗಿಲುಗಳನ್ನು ತೆರೆಯಲಿದೆ ಎಂದರು. ಹೊಸ ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ಮಾರ್ಗಗಳ ಜಾಲವನ್ನು ಉಲ್ಲೇಖಿಸಿದ ಪ್ರಧಾನಿಯವರು ʻಗಂಗಾ ಎಕ್ಸ್‌ಪ್ರೆಸ್‌ ವೇʼ ರಾಜ್ಯಕ್ಕೆ ಐದು ವರದಾನಗಳನ್ನು ನೀಡಲಿದೆ ಎಂದು ಬಣ್ಣಿಸಿದರು. ಮೊದಲ ವರವೆಂದರೆ - ಜನರ ಸಮಯವನ್ನು ಉಳಿಸುವುದು. ಎರಡನೇ ವರ- ಜನತೆಗೆ ಅನುಕೂಲ ಹೆಚ್ಚಳ ಮತ್ತು ಸುಗಮ ಸಂಚಾರ. ಮೂರನೇ ವರವೆಂದರೆ- ಉತ್ತರ ಪ್ರದೇಶದ ಸಂಪನ್ಮೂಲಗಳ ಸದ್ಬಳಕೆ. ನಾಲ್ಕನೇ ವರ- ಉತ್ತರ ಪ್ರದೇಶ ಸಾಮರ್ಥ್ಯ ಹೆಚ್ಚಳ. ಐದನೇ ವರವೆಂದರೆ – ಉತ್ತರ ಪ್ರದೇಶದಲ್ಲಿ ಸರ್ವಾಂಗೀಣ ಸಮೃದ್ಧಿ ಎಂದು ಪ್ರಧಾನಿ ವಿವರಿಸಿದರು. 

ಇಂದು ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಮೂಲಸೌಕರ್ಯವು ಸಂಪನ್ಮೂಲಗಳ ಸದ್ಬಳಕೆಯನ್ನು ಸೂಚಿಸುತ್ತದೆ ಎಂದು ಪ್ರಧಾನಿ ಹೇಳಿದರು. "ಸಾರ್ವಜನಿಕ ಹಣವನ್ನು ಈ ಹಿಂದೆ ಹೇಗೆ ಬಳಸಲಾಗುತ್ತಿತ್ತು ಎಂಬುದನ್ನು ನೀವು ಸ್ಪಷ್ಟವಾಗಿ ನೋಡಿದ್ದೀರಿ. ಆದರೆ ಇಂದು ಉತ್ತರ ಪ್ರದೇಶದ ಹಣವನ್ನು ಉತ್ತರ ಪ್ರದೇಶದ ಅಭಿವೃದ್ಧಿಗೇ ಹೂಡಿಕೆ ಮಾಡಲಾಗುತ್ತಿದೆ", ಎಂದು ಪ್ರಧಾನಿ ಒತ್ತಿ ಹೇಳಿದರು. ಇಡೀ ಉತ್ತರ ಪ್ರದೇಶ ಒಟ್ಟಾಗಿ ಬೆಳೆದಾಗ, ದೇಶವೂ ಪ್ರಗತಿ ಸಾಧಿಸುತ್ತದೆ. ಆದ್ದರಿಂದಲೇ, ಅವಳಿ ಎಂಜಿನ್ ಸರಕಾರದ ಗಮನವು ಉತ್ತರ ಪ್ರದೇಶ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ ಎಂದರು. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್‌ʼ ಮಂತ್ರದೊಂದಿಗೆ ನಾವು ಉತ್ತರ ಪ್ರದೇಶ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಐದು ವರ್ಷಗಳ ಹಿಂದಿನ ಪರಿಸ್ಥಿತಿಯತ್ತ ಪ್ರಧಾನಮಂತ್ರಿಯವರು ಗಮನ ಸೆಳೆದರು. "ರಾಜ್ಯದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ಇತರ ನಗರಗಳು ಮತ್ತು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಲಭ್ಯವಿರಲಿಲ್ಲ. ಅವಳಿ ಎಂಜಿನ್ ಹೊಂದಿರುವ ಸರಕಾರವು ಉತ್ತರ ಪ್ರದೇಶದಲ್ಲಿ ಸುಮಾರು 80 ಲಕ್ಷ ಉಚಿತ ವಿದ್ಯುತ್ ಸಂಪರ್ಕಗಳನ್ನು ನೀಡಿರುವುದು ಮಾತ್ರವಲ್ಲದೆ, ಪ್ರತಿಯೊಂದು ಜಿಲ್ಲೆಗೂ ಮೊದಲಿಗಿಂತ ಅನೇಕ ಪಟ್ಟು ಹೆಚ್ಚು ವಿದ್ಯುತ್ ನೀಡಲಾಗುತ್ತಿದೆ" ಎಂದು ಅವರು ಮಾಹಿತಿ ನೀಡಿದರು. 30ಲಕ್ಷಕ್ಕೂ ಹೆಚ್ಚು ಬಡವರು ಸದೃಢ ಮನೆಗಳನ್ನು ಪಡೆದಿದ್ದಾರೆ. ಉಳಿದ ಎಲ್ಲಾ ಅರ್ಹ ಫಲಾನುಭವಿಗಳಿಗೂ ಈ ಅನುಕೂಲದ ವಿಸ್ತರಣೆಗಾಗಿ ಈ ಅಭಿಯಾನವು ಮುಂದುವರಿಸುತ್ತದೆ ಎಂದು ಅವರು ಹೇಳಿದರು. ಶಹಜಹಾನ್‌ಪುರದಲ್ಲಿಯೂ 50 ಸಾವಿರ ಸದೃಢ ಮನೆಗಳನ್ನು ನಿರ್ಮಿಸಲಾಯಿತು ಎಂದು ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ದಲಿತರು, ಅವಕಾಶ ವಂಚಿತರು ಮತ್ತು ಹಿಂದುಳಿದವರ ಅಭಿವೃದ್ಧಿಗೆ ಅವರ ಮಟ್ಟದಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. "ಸಮಾಜದಲ್ಲಿ ಹಿಂದೆ ಉಳಿದಿದವರು ಮತ್ತು ಕೆಳ ಸ್ತರದಲ್ಲಿರುವವರಿಗೆ ಅಭಿವೃದ್ಧಿಯ ಪ್ರಯೋಜನಗಳನ್ನು ತಲುಪಿಸುವುದು ಸರಕಾರದ ಆದ್ಯತೆಯಾಗಿದೆ. ಇದೇ ಭಾವನೆಯನ್ನು ನಮ್ಮ ಕೃಷಿ ನೀತಿಯಲ್ಲಿ ಮತ್ತು ರೈತರಿಗೆ ಸಂಬಂಧಿಸಿದ ನೀತಿಯಲ್ಲೂ ಕಾಣಬಹುದು,ʼʼ ಎಂದರು. 

ದೇಶದ ಅಭಿವೃದ್ಧಿಗಾಗಿ ಮತ್ತು ದೇಶದ ಪರಂಪರೆಗಾಗಿ ಮಾಡಬೇಕಾದ ಕೆಲಸಗಳಿಂದ ಹಿಂಜರಿಯುವ ಮನಸ್ಥಿತಿಯನ್ನು ಪ್ರಧಾನಿ ಟೀಕಿಸಿದರು. ಬಡವರು ಮತ್ತು ಸಾಮಾನ್ಯ ಜನರನ್ನು ಅಂತಹ ಶಕ್ತಿಗಳು ತಮ್ಮ ಮೇಲೆ ಅವಲಂಬಿತವಾಗಿಡಲು ಬಯಸುತ್ತವೆ ಎಂದು ಅವರು ಹೇಳಿದರು. "ಕಾಶಿಯಲ್ಲಿ ಬಾಬಾ ವಿಶ್ವನಾಥನ ಭವ್ಯ ಧಾಮವನ್ನು ನಿರ್ಮಿಸಲು ಈ ಜನರಿಗೆ ಸಮಸ್ಯೆ ಆಯಿತು. ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರವನ್ನು ನಿರ್ಮಿಸಲು ಈ ಜನರಿಗೆ ಸಮಸ್ಯೆ ಆಯಿತು. ಗಂಗಾ ಮಾತೆಯ ಸ್ವಚ್ಛತಾ ಅಭಿಯಾನದಲ್ಲಿ ಈ ಜನರಿಗೆ ಸಮಸ್ಯೆ ಕಂಡಿತು. ಈ ಜನರು ಉಗ್ರರ ವಿರುದ್ಧ ಸೇನೆಯ ಕ್ರಮವನ್ನು ಪ್ರಶ್ನಿಸುತ್ತಾರೆ. ಭಾರತೀಯ ವಿಜ್ಞಾನಿಗಳು ತಯಾರಿಸಿದ ʻಮೇಡ್ ಇನ್ ಇಂಡಿಯಾʼ ಕೋವಿಡ್‌ ಲಸಿಕೆಯನ್ನು ಬದಿಗೆ ಇರಿಸಿದ ಜನರು ಇವರು", ಎಂದು ಪ್ರಧಾನಿ ಟೀಕಿಸಿದರು. ರಾಜ್ಯದಲ್ಲಿದ್ದ ಕೆಟ್ಟ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ನೆನಪಿಸಿಕೊಂಡ ಅವರು ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಉತ್ತಮಗೊಂಡಿರುವ ಬಗ್ಗೆ ಹೇಳಿದರು. ಪ್ರಧಾನಮಂತ್ರಿಯವರು ʻಯುಪಿ ಜೊತೆಗೆ ಯೋಗಿ, ಬಹುತ್‌ ಹೈ ಉಪಯೋಗಿ U.P.Y.O.G.I.ʼ(ಯುಪಿ ಜತೆಗೆ ಯೋಗಿ, ಅತ್ಯಂತ ಉಪಯೋಗಕಾರಿ) ಎಂಬ ಸೂತ್ರವನ್ನು ನೀಡಿದರು.

ದೇಶಾದ್ಯಂತ ವೇಗದ ಸಂಪರ್ಕವನ್ನು ಒದಗಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನವೇ ʻಎಕ್ಸ್‌ಪ್ರೆಸ್ ವೇʼಯ ಹಿಂದಿನ ಸ್ಫೂರ್ತಿಯಾಗಿದೆ. 594 ಕಿ.ಮೀ ಉದ್ದದ ಆರು ಪಥದ ಎಕ್ಸ್‌ಪ್ರೆಸ್ ವೇ ಅನ್ನು 36,200 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುವುದು. ಮೀರತ್‌ನ ಬಿಜೌಲಿ ಗ್ರಾಮದ ಬಳಿಯಿಂದ ಪ್ರಾರಂಭವಾಗುವ ಎಕ್ಸ್‌ಪ್ರೆಸ್ ವೇ, ಪ್ರಯಾಗ್‌ರಾಜ್‌ನ ಜುದಾಪುರ ದಾಂಡು ಗ್ರಾಮದವರೆಗೂ ವಿಸ್ತರಿಸಿರಲಿದೆ. ಇದು ಮೀರತ್, ಹಾಪುರ್, ಬುಲಂದ್ ಶಹರ್, ಅಮ್ರೋಹಾ, ಸಂಭಾಲ್, ಬುಡೌನ್, ಶಹಜಹಾನ್‌ಪುರ್, ಹರ್ದೋಯಿ, ಉನ್ನಾವೋ, ರಾಯ್‌ ಬರೇಲಿ, ಪ್ರತಾಪಗಢ ಮತ್ತು ಪ್ರಯಾಗ್ ರಾಜ್ ಮೂಲಕ ಹಾದುಹೋಗುತ್ತದೆ. ಕಾಮಗಾರಿ ಪೂರ್ಣಗೊಂಡ ನಂತರ, ಇದು ಉತ್ತರ ಪ್ರದೇಶದ ಅತಿ ಉದ್ದದ ಎಕ್ಸ್‌ಪ್ರೆಸ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದು ರಾಜ್ಯದ ಪಶ್ಚಿಮ ಮತ್ತು ಪೂರ್ವ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಶಹಜಹಾನ್‌ಪುರದ ಎಕ್ಸ್‌ಪ್ರೆಸ್ ವೇನಲ್ಲಿ ವಾಯುಪಡೆಯ ವಿಮಾನಗಳ ತುರ್ತು ಲ್ಯಾಂಡಿಂಗ್‌ ಮತ್ತು ಟೇಕ್ ಆಫ್‌ಗೆ ಸಹಾಯ ಮಾಡಲು 3.5 ಕಿ.ಮೀ ಉದ್ದದ ʻಏರ್‌ ಸ್ಟ್ರಿಪ್‌ʼ ಸಹ ನಿರ್ಮಿಸಲಾಗುವುದು. ಎಕ್ಸ್‌ಪ್ರೆಸ್ ವೇ ಉದ್ದಕ್ಕೂ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಪ್ರಸ್ತಾಪಿಸಲಾಗಿದೆ.

ಕೈಗಾರಿಕಾ ಅಭಿವೃದ್ಧಿ, ವ್ಯಾಪಾರ, ಕೃಷಿ, ಪ್ರವಾಸೋದ್ಯಮ ಸೇರಿದಂತೆ ಅನೇಕ ವಲಯಗಳಿಗೆ ಎಕ್ಸ್‌ಪ್ರೆಸ್ ವೇ ಉತ್ತೇಜನ ನೀಡಲಿದೆ. ಇದು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ದೊಡ್ಡ ಉತ್ತೇಜನ ನೀಡಲಿದೆ.

***



(Release ID: 1783029) Visitor Counter : 164