ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಿಸೆಂಬರ್ 18ರಂದು ಶಹಜಹಾನ್‌ಪುರದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ


ದೇಶದಾದ್ಯಂತ ವೇಗದ ಸಂಪರ್ಕವನ್ನು ಒದಗಿಸುವ ಪ್ರಧಾನ ಮಂತ್ರಿಯ ಅವರ ದೃಷ್ಟಿಕೋನದಿಂದ ಇದು ಪ್ರೇರೇಪಿಸಲ್ಪಟ್ಟಿದೆ

ಮೀರತ್‌ನಿಂದ ಪ್ರಯಾಗ್‌ರಾಜ್‌ಗೆ, ಎಕ್ಸ್‌ಪ್ರೆಸ್‌ ವೇ ಉತ್ತರ ಪ್ರದೇಶದ 12 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ರಾಜ್ಯದ ಪಶ್ಚಿಮ ಮತ್ತು ಪೂರ್ವ ಪ್ರದೇಶಗಳನ್ನು ಸಂಪರ್ಕಿಸುತ್ತದೆ.

36,200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಇದು ಉತ್ತರ ಪ್ರದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಲಿದೆ.

3.5 ಕಿಮೀ ಉದ್ದದ ಏರ್ ಸ್ಟ್ರಿಪ್ ತುರ್ತು ಟೇಕ್ ಆಫ್ ಮತ್ತು ಏರ್ ಫೋರ್ಸ್ ವಿಮಾನಗಳ ಲ್ಯಾಂಡಿಂಗ್‌ಗೆ ಸಹಾಯ ಮಾಡಲು ಶಹಜಾನ್‌ಪುರದ ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಿಸಲಾಗುವುದು 

ಪ್ರಕಟಣಾ ದಿನಾಂಕ: 16 DEC 2021 2:12PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು,  2021 ಡಿಸೆಂಬರ್ 18 ರಂದು ಸುಮಾರು ಮಧ್ಯಾಹ್ನ 1 ಗಂಟೆಗೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ದೇಶದಾದ್ಯಂತ ವೇಗದ ಸಂಪರ್ಕವನ್ನು ಒದಗಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಯು ಎಕ್ಸ್‌ಪ್ರೆಸ್‌ವೇಯ ಹಿಂದಿನ ಸ್ಫೂರ್ತಿಯಾಗಿದೆ. 594 ಕಿಮೀ ಉದ್ದದ ಆರು ಪಥಗಳ ಎಕ್ಸ್‌ಪ್ರೆಸ್‌ವೇಯನ್ನು 36,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು.

ಮೀರತ್‌ನ ಬಿಜೌಲಿ ಗ್ರಾಮದ ಬಳಿ ಪ್ರಾರಂಭವಾಗುವ ಎಕ್ಸ್‌ಪ್ರೆಸ್‌ವೇ ಪ್ರಯಾಗ್‌ರಾಜ್‌ನ ಜುದಾಪುರ್ ದಂಡು ಗ್ರಾಮದವರೆಗೆ ವಿಸ್ತರಿಸುತ್ತದೆ. ಇದು ಮೀರತ್, ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬುದೌನ್, ಶಹಜಹಾನ್‌ಪುರ, ಹರ್ದೋಯಿ, ಉನ್ನಾವೋ, ರಾಯ್‌ಬರೇಲಿ, ಪ್ರತಾಪ್‌ಗಢ ಮತ್ತು ಪ್ರಯಾಗ್‌ರಾಜ್ ಮೂಲಕ ಹಾದುಹೋಗುತ್ತದೆ.

 ಕಾಮಗಾರಿ ಪೂರ್ಣಗೊಂಡ ನಂತರ, ಇದು ಉತ್ತರ ಪ್ರದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಲಿದ್ದು, ರಾಜ್ಯದ ಪಶ್ಚಿಮ ಮತ್ತು ಪೂರ್ವ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ತುರ್ತು ಟೇಕ್ ಆಫ್ ಮತ್ತು ಏರ್ ಫೋರ್ಸ್ ವಿಮಾನಗಳ ಲ್ಯಾಂಡಿಂಗ್‌ಗೆ ಸಹಾಯ ಮಾಡಲು 3.5 ಕಿಮೀ ಉದ್ದದ ಏರ್ ಸ್ಟ್ರಿಪ್ ಅನ್ನು ಶಹಜಹಾನ್‌ಪುರದ ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಿಸಲಾಗುವುದು. ಎಕ್ಸ್ ಪ್ರೆಸ್ ವೇ ಉದ್ದಕ್ಕೂ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿದೆ.

ಎಕ್ಸ್‌ಪ್ರೆಸ್‌ವೇಯು ಕೈಗಾರಿಕಾ ಅಭಿವೃದ್ಧಿ, ವ್ಯಾಪಾರ, ಕೃಷಿ, ಪ್ರವಾಸೋದ್ಯಮ ಇತ್ಯಾದಿಗಳನ್ನು ಒಳಗೊಂಡಂತೆ ಬಹು ವಲಯಗಳಿಗೆ ಪೂರಕವಾಗಿದ್ದು  ಇದು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ.

***


(ಪ್ರಕಟಣೆ ಐ.ಡಿ.: 1782208) ವಿಸಿಟರ್ ಕೌಂಟರ್ : 312