ಪ್ರಧಾನ ಮಂತ್ರಿಯವರ ಕಛೇರಿ

ವಿದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳ ಮುಖ್ಯಸ್ಥರು ಮತ್ತು ವ್ಯಾಪಾರ ಹಾಗೂ ವಾಣಿಜ್ಯ ವಲಯದ ಪಾಲುದಾರರೊಂದಿಗೆ ಪ್ರಧಾನಮಂತ್ರಿ ಸಂವಾದ


75ನೇ ಸ್ವಾತಂತ್ರೋತ್ಸವ ಆಚರಿಸುವುದರೊಂದಿಗೆ ಆಜಾ಼ದಿ ಕ ಮಹೋತ್ಸವವು ಭವಿಷ್ಯದ ಭಾರತಕ್ಕಾಗಿ ಸ್ಪಷ್ಟ ಮುನ್ನೋಟ ಮತ್ತು ನೀಲನಕ್ಷೆ ರೂಪಿಸುವ ಅವಕಾಶವಾಗಿದೆ: ಪ್ರಧಾನಮಂತ್ರ

ಭೌತಿಕ, ತಾಂತ್ರಿಕ ಮತ್ತು ಆರ್ಥಿಕ ಸಂಪರ್ಕದಿಂದಾಗಿ ಸಂಕುಚಿತಗೊಳ್ಳುತ್ತಿರುವ ಜಗತ್ತಿನಲ್ಲಿ ನಮ್ಮ ರಫ್ತು ವಿಸ್ತರಣೆಗಾಗಿ ಜಗತ್ತಿನಾದ್ಯಂತ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲಾಗುತ್ತಿದೆ: ಪ್ರಧಾನಮಂತ್ರಿ

ನಮ್ಮ ಆರ್ಥಿಕತೆ ಮತ್ತು ಸಾಮರ್ಥ್ಯ , ನಮ್ಮ ಉತ್ಪಾದನಾ ಮತ್ತು ಸೇವಾ ಉದ್ಯಮದ ನೆಲೆಯನ್ನು ಪರಿಗಣಿಸಿ ರಫ್ತು ವೃದ್ಧಿಗೆ ವಿಪುಲ ಅವಕಾಶವಿದೆ: ಪ್ರಧಾನಮಂತ್ರಿ

ಉತ್ಪಾದನೆ ಆಧರಿಸಿದ ಪ್ರೋತ್ಸಾಹಕ ಯೋಜನೆಯಿಂದಾಗಿ  ನಮ್ಮ ತಯಾರಿಕಾ ವಲಯದ ವ್ಯಾಪ್ತಿಯ ಹೆಚ್ಚಳದ ಜತೆಗೆ ಜಾಗತಿಕ ಗುಣಮಟ್ಟ ಮತ್ತು ದಕ್ಷತೆಯ ಮಟ್ಟವೂ ಹೆಚ್ಚಲಿದೆ: ಪ್ರಧಾನಮಂತ್ರಿ

ಪೂರ್ವಾನ್ವಯ ತೆರಿಗೆಯನ್ನು ತೊಡೆದುಹಾಕಲು ಭಾರತ ಕೈಗೊಂಡ ನಿರ್ಧಾರವು ತನ್ನ ಬದ್ಧತೆಯನ್ನು ತೋರುತ್ತದೆ, ನೀತಿಗಳಲ್ಲಿ ಸ್ಥಿರತೆಯನ್ನು ತೋರುತ್ತದೆ ಮತ್ತು ಭಾರತ ಹೊಸ ಸಾಧ್ಯತೆಗಳ ಬಾಗಿಲು ತೆರೆಯುವ ಜೊತೆಗೆ ನಿರ್ಣಾಯಕ ಭಾರತ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸುವ ಇಚ್ಛೆ ಹೊಂದಿದೆ ಎಂಬ ಸ್ಪಷ್ಟ ಸಂದೇಶವನ್ನು ಎಲ್ಲ ಹೂಡಿಕೆದಾರರಿಗೆ ನೀಡುತ್ತದೆ: ಪ್ರಧಾನಮಂತ್ರಿ

ನಿಯಂತ್ರಣಗಳ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದೆ: ಪ್ರಧಾನಮಂತ್ರಿ

ರಫ್ತು ತ

Posted On: 06 AUG 2021 8:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿ ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಯ ಮುಖ್ಯಸ್ಥರು ಮತ್ತು ವ್ಯಾಪಾರ ಹಾಗೂ ವಾಣಿಜ್ಯ ವಲಯದ ಪಾಲುದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಕೇಂದ್ರ ವಾಣಿಜ್ಯ ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಸಂವಾದದ ವೇಳೆ ಭಾಗವಹಿಸಿದ್ದರು. ಅಲ್ಲದೆ 22ಕ್ಕೂ ಅಧಿಕ ಇಲಾಖೆಗಳ ಕಾರ್ಯದರ್ಶಿಗಳು, ರಾಜ್ಯ ಸರ್ಕಾರಗಳ ಅಧಿಕಾರಿಗಳು, ರಫ್ತು ಉತ್ತೇಜನಾ ಮಂಡಳಿ ಮತ್ತು ವಾಣಿಜ್ಯ ಒಕ್ಕೂಟಗಳ ಸದಸ್ಯರು ಸಂವಾದಕ್ಕೆ ಸಾಕ್ಷಿಯಾದರು.

ಸಂವಾದದಲ್ಲಿ  ಪಾಲ್ಗೊಂಡವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇದು ಆಜಾ಼ದಿ ಕಾ ಅಮೃತ ಮಹೋತ್ಸವದ ಸಮಯವಾಗಿದೆ. ನಾವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಜೊತೆಗೆ ಭವಿಷ್ಯದ ಭಾರತಕ್ಕಾಗಿ ಸ್ಪಷ್ಟ ಮುನ್ನೋಟ ಮತ್ತು ನೀಲನಕ್ಷೆಯನ್ನು ರೂಪಿಸುವ ಅವಕಾಶ ದೊರೆತಿದೆ ಎಂದರು. ಇದರಲ್ಲಿ ನಮ್ಮ ರಫ್ತು ಆಕಾಂಕ್ಷಿಗಳು ಮತ್ತು ಎಲ್ಲ ಪಾಲುದಾರರು ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದಾರೆ. ಭೌತಿಕ, ತಾಂತ್ರಿಕ ಮತ್ತು ಆರ್ಥಿಕ ಸಂಪರ್ಕಗಳಿಂದಾಗಿ ಪ್ರತಿ ದಿನ ಜಗತ್ತು ಸಂಕುಚಿತಗೊಳ್ಳುತ್ತಿದೆ ಎಂದು ಅವರು ಹೇಳಿದರು. ಇಂತಹ ವಾತಾವರಣದಲ್ಲಿ ನಮ್ಮ ರಫ್ತುಗಳ ವಿಸ್ತರಣೆಗೆ ಜಗತ್ತಿನಾದ್ಯಂತ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದರು. ಈ ಉಪಕ್ರಮಕ್ಕಾಗಿ ಪಾಲುದಾರರನ್ನು ಅಭಿನಂದಿಸಿದ ಅವರು, ಪಾಲುದಾರರು ತೋರುತ್ತಿರುವ ಉತ್ಸಾಹ, ಸಕಾರಾತ್ಮಕತೆ ಮತ್ತು ಬದ್ಧತೆ, ರಫ್ತಿಗೆ ಸಂಬಂಧಿಸಿದಂತೆ ನಮ್ಮ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸಲು ನೆರವಾಗಲಿದೆ ಎಂದರು. ಜಾಗತಿಕ ಆರ್ಥಿಕತೆಯಲ್ಲಿ ಹಿಂದೆ ಭಾರತ ಅತಿ ಹೆಚ್ಚಿನ ಪಾಲು ಹೊಂದಿರಲು ಮುಖ್ಯ ಕಾರಣವೆಂದರೆ ಅದು ಬಲಿಷ್ಠ ವ್ಯಾಪಾರ ಮತ್ತು ರಫ್ತು ದೇಶ ಆಗಿದ್ದುದು ಎಂದು ಅವರು ನೆನಪು ಮಾಡಿಕೊಟ್ಟರು. ಜಾಗತಿಕ ಆರ್ಥಿಕತೆಯಲ್ಲಿ ನಮ್ಮ ಹಿಂದಿನ ಪಾಲನ್ನು ಮತ್ತೆ ಪಡೆದುಕೊಳ್ಳಲು ನಮ್ಮ ರಫ್ತನ್ನು ಬಲವರ್ಧನೆಗೊಳಿಸುವ ಪ್ರಾಮುಖ್ಯದ ಬಗ್ಗೆ ಅವರು ಬಲವಾಗಿ ಪ್ರತಿಪಾದಿಸಿದರು.

ಕೋವಿಡ್ ನಂತರದ ಜಾಗತಿಕ ಜಗತ್ತಿನಲ್ಲಿ ಜಾಗತಿಕ ಪೂರೈಕೆ ಸರಣಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಸೃಷ್ಟಿಯಾಗುತ್ತಿರುವ ಹೊಸ ಅವಕಾಶಗಳ ಸಂಪೂರ್ಣ ಲಾಭ ಪಡೆಯಲು ಪಾಲುದಾರರು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು. ನಮ್ಮ ಆರ್ಥಿಕತೆ ಮತ್ತು ಸಾಮರ್ಥ್ಯದ ಗಾತ್ರವನ್ನು, ನಮ್ಮ ಉತ್ಪಾದನೆ ಮತ್ತು ಸೇವಾ ವಲಯದ ನೆಲೆಯನ್ನು ಪರಿಗಣಿಸಿದರೆ ರಫ್ತು ಸಾಮರ್ಥ್ಯವೃದ್ಧಿಗೆ ವಿಪುಲ ಅವಕಾಶಗಳಿವೆ ಎಂದರು. ದೇಶ ಆತ್ಮನಿರ್ಭರ ಭಾರತ ಗುರಿಯತ್ತ ಸಾಗುತ್ತಿರುವಾಗ ಅದರ ಒಂದು ಉದ್ದೇಶ ಎಂದರೆ ಭಾರತದ ರಫ್ತು ಪಾಲನ್ನು ಹಲವು ಪಟ್ಟು ಹೆಚ್ಚಿಸುವುದಾಗಿದೆ ಎಂದರು. ಇದನ್ನು ನಾವು ಸಾಧಿಸಲು ನಾವು ಜಾಗತಿಕ ಪೂರೈಕೆ ಸರಣಿ ಲಭ್ಯತೆಯನ್ನು ಖಾತ್ರಿಪಡಿಸಬೇಕಾಗಿದೆ. ಅದರಿಂದಾಗಿ ನಮ್ಮ ವ್ಯಾಪಾರದ ವಿಸ್ತಾರ ಮತ್ತು ಪ್ರಗತಿಯಾಗಲಿದೆ ಎಂದರು. ನಮ್ಮ ಉದ್ಯಮ ಉತ್ತಮ ತಂತ್ರಜ್ಞಾನದತ್ತ ಸಾಗಬೇಕಿದೆ, ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಆವಿಷ್ಕಾರಗಳಿಗೆ ಒತ್ತು ನೀಡಬೇಕಿದೆ ಎಂದರು. ಈ ಮಾರ್ಗವನ್ನು ಅನುಸರಿಸುವುದರಿಂದ ಮಾತ್ರ ಜಾಗತಿಕ ಮೌಲ್ಯ ಸರಣಿಯಲ್ಲಿ ನಮ್ಮ ಪಾಲು ಹೆಚ್ಚಲಿದೆ ಎಂದು ಹೇಳಿದರು. ಸ್ಪರ್ಧೆ ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸುವ ಜೊತೆಗೆ ನಾವು ಪ್ರತಿಯೊಂದು ವಲಯದಲ್ಲೂ ಜಾಗತಿಕ ಚಾಂಪಿಯನ್ ಗಳನ್ನು ಸಜ್ಜುಗೊಳಿಸಬೇಕಿದೆ ಎಂದು ಬಲವಾಗಿ ಪ್ರತಿಪಾದಿಸಿದರು. 

ರಫ್ತು ಹೆಚ್ಚಳಕ್ಕೆ ನಾಲ್ಕು ಅಂಶಗಳು ಅತ್ಯಂತ ಪ್ರಮುಖವಾದವು ಎಂದು ಪ್ರಧಾನಮಂತ್ರಿ ಅವರು ಪ್ರಸ್ತಾಪಿಸಿದರು. ಮೊದಲನೆಯದಾಗಿ ದೇಶದಲ್ಲಿ ಉತ್ಪಾದನೆ ಹಲವು ಪಟ್ಟು ಹೆಚ್ಚಾಗಬೇಕು ಮತ್ತು ಗುಣಮಟ್ಟದಲ್ಲಿ ಸ್ಪರ್ಧಾತ್ಮಕತೆ ತರಬೇಕಿದೆ. ಎರಡನೆಯದಾಗಿ ಸಾರಿಗೆ ಸಾಗಣೆ ವಲಯದಲ್ಲಿನ ಸಮಸ್ಯೆಗಳನ್ನು ನಿವಾರಣೆ. ಅದಕ್ಕಾಗಿ ಕೇಂದ್ರ, ರಾಜ್ಯಗಳು ಮತ್ತು ಖಾಸಗಿ ಪಾಲುದಾರರು ನಿರಂತರವಾಗಿ ಕಾರ್ಯನಿರ್ವಹಿಸಬೇಕಿದೆ. ಮೂರನೆಯದಾಗಿ ಸರ್ಕಾರ ರಫ್ತುದಾರರ ಜೊತೆಗೆ ಕೈಹಿಡಿದು ಸಾಗಬೇಕಿದೆ ಹಾಗು ಕೊನೆಯದಾಗಿ ಭಾರತೀಯ ಉತ್ಪನ್ನಗಳಿಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಯ  ಅಗತ್ಯವಿದೆ. ಈ ನಾಲ್ಕು ಅಂಶಗಳು ಸಂಯೋಜನೆಗೊಂಡಾಗ ಮಾತ್ರ ಭಾರತ ವಿಶ್ವಕ್ಕೆ ಅತ್ಯುತ್ತಮ ರೀತಿಯಲ್ಲಿ ಮೇಕ್ ಇನ್ ಇಂಡಿಯಾ ಗುರಿಯನ್ನು ಸಾಧಿಸಲು ಸಮರ್ಥವಾಗಲಿದೆ. 

ದೇಶದಲ್ಲಿನ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳು ಇಂದಿನ ವಾಣಿಜ್ಯ ಜಗತ್ತಿನ ಅಗತ್ಯಗಳನ್ನು ಅರ್ಥಮಾಡಿಕೊಂಡು ಮುನ್ನಡೆಯುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಎಂಎಸ್ಎಂಇಗಳ ಉತ್ತೇಜನಕ್ಕೆ ಸರ್ಕಾರ ಕೈಗೊಂಡಿರುವ ಉಪಕ್ರಮಗಳನ್ನು ವಿವರಿಸಿದ ಅವರು, ಆತ್ಮನಿರ್ಭರ ಭಾರತ ಅಭಿಯಾನದಡಿ ಹಲವು ನಿಯಮಗಳ ಪಾಲನೆಗೆ ವಿನಾಯಿತಿ ನೀಡಲಾಗಿದೆ ಮತ್ತು ತುರ್ತು ಸಾಲ ಖಾತ್ರಿ ಯೋಜನೆಗೆ ಮೂರು ಲಕ್ಷ ಕೋಟಿ ರೂಪಾಯಿ ತೆಗೆದಿರಿಸಲಾಗಿದೆ ಎಂದರು. ಉತ್ಪಾದನೆ ಆಧರಿತ ಪ್ರೋತ್ಸಾಹಕ ಯೋಜನೆ ಕೇವಲ ನಮ್ಮ ಉತ್ಪಾದನೆ ವ್ಯಾಪ್ತಿಯ ಹೆಚ್ಚಳ ಮಾಡುವುದಷ್ಟೇ ಅಲ್ಲದೆ  ಜಾಗತಿಕ ಗುಣಮಟ್ಟ ಮತ್ತು ದಕ್ಷತೆಯ ಮಟ್ಟವನ್ನು ಹೆಚ್ಚಿಸಲಿದೆ ಎಂದರು. ಇದು ಆತ್ಮನಿರ್ಭರ ಭಾರತಕ್ಕೆ ಹೊಸ ಪೂರಕ ವ್ಯವಸ್ಥೆಯನ್ನು ಒದಗಿಸುತ್ತದೆ. ದೇಶ ಉತ್ಪಾದನೆ ಮತ್ತು ರಫ್ತು ವಲಯದಲ್ಲಿ ಹೊಸ ಜಾಗತಿಕ ಚಾಂಪಿಯನ್ ಗಳನ್ನು ಪಡೆಯಲಿದೆ. ಹೇಗೆ ಉತ್ಪಾದನೆ ಆಧರಿತ ಪ್ರೋತ್ಸಾಹಕ ಕ್ರಮ ಮೊಬೈಲ್ ಫೋನ್ ಉತ್ಪಾದನಾ ವಲಯದ ಬಲವರ್ಧನೆಗೆ ಸಹಕಾರಿಯಾಗಿದೆ ಎಂಬುದನ್ನು ಅವರು ವಿವರಿಸಿದರು. ಮೊಬೈಲ್ ಫೋನ್ ವಲಯದಲ್ಲಿ ಇದರ ಪರಿಣಾಮವನ್ನು ನಾವು ಕಾಣುತ್ತಿದ್ದೇವೆ. ಏಳು ವರ್ಷಗಳ ಹಿಂದೆ ನಾವು ಸುಮಾರು 8 ಬಿಲಿಯನ್ ಮೌಲ್ಯದ ಮೊಬೈಲ್ ಫೋನ್ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಇದೀಗ ಆ ಪ್ರಮಾಣ ಎರಡು ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ. ಏಳು ವರ್ಷಗಳ ಹಿಂದೆ ಭಾರತ 0.3 ಬಿಲಿಯನ್ ಮೌಲ್ಯದ ಮೊಬೈಲ್ ಫೋನ್  ಗಳನ್ನು ರಫ್ತು ಮಾಡುತ್ತಿತ್ತು. ಇದೀಗ ಆ ಪ್ರಮಾಣ ಮೂರು ಬಿಲಿಯನ್ ಡಾಲರ್ ಗೂ ಅಧಿಕವಾಗಿದೆ.

ಕೇಂದ್ರ ಮತ್ತು ರಾಜ್ಯಗಳಲ್ಲಿನ ಎರಡೂ ಸರ್ಕಾರಗಳು ದೇಶದಲ್ಲಿ ಸಾಗಣೆಯ ವೆಚ್ಚ ಮತ್ತು ಸಮಯವನ್ನು ತಗ್ಗಿಸಲು ಹೆಚ್ಚಿನ ಒತ್ತು ನೀಡುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಕೆಲಸಕ್ಕಾಗಿ ಮಲ್ಟಿ ಮಾಡಲ್ ಸಂಪರ್ಕ ಸೃಷ್ಟಿಸಲು ಪ್ರತಿಯೊಂದು ಹಂತದಲ್ಲೂ ಕ್ಷಿಪ್ರಗತಿಯಲ್ಲಿ ಕಾರ್ಯಗಳು ನಡೆಯುತ್ತಿವೆ.

ಸಾಂಕ್ರಾಮಿಕದ ಪರಿಣಾಮವನ್ನು ಕನಿಷ್ಠಗೊಳಿಸಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸೋಂಕನ್ನು ನಿಯಂತ್ರಿಸಲು ನಾವು ಸಾಧ್ಯವಾದ ಎಲ್ಲ ಉತ್ತಮ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಇಂದು ದೇಶದಲ್ಲಿ ಲಸಿಕೆ ನೀಡಿಕೆ ಕಾರ್ಯ ಅತ್ಯಂತ ವೇಗವಾಗಿ ಸಾಗುತ್ತಿದೆ. ದೇಶವಾಸಿಗಳು ಮತ್ತು ಉದ್ಯಮದವರ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಅವಧಿಯಲ್ಲಿ  ಉದ್ಯಮ ಮತ್ತು ವ್ಯಾಪಾರವು ಹೊಸ ಸವಾಲುಗಳಿಗೆ ತನ್ನನ್ನು ತಾನು ಹೊಂದಿಸಿಕೊಳ್ಳುವ ಮೂಲಕ ಹೊಸತನವನ್ನು ನೀಡಿದೆ. ಉದ್ಯಮ, ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ದೇಶಕ್ಕೆ ಸಹಕಾರಿಯಾಗಿದೆ ಮತ್ತು ಆರ್ಥಿಕ ಪುನಶ್ಚೇತನದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಇದೇ ಕಾರಣಕ್ಕಾಗಿ ಇಂದು ಔಷಧಗಳು ಮತ್ತು ಫಾರ್ಮಸಿಟಿಕಲ್ಸ್ ಮಾತ್ರವಲ್ಲದೆ ನಮ್ಮ ರಫ್ತು ಕೃಷಿ ವಲಯ ಸೇರಿದಂತೆ ಹಲವು ವಲಯಗಳಲ್ಲಿ ಹೊಸ ಎತ್ತರಕ್ಕೆ ಏರಿದೆ. ಇಂದು ಕೇವಲ ಆರ್ಥಿಕ ಚೇತರಿಕೆಯಲ್ಲಿ ಮಾತ್ರವಲ್ಲ, ಪ್ರಗತಿಯಲ್ಲೂ ಸಹ ಸಕಾರಾತ್ಮಕ ಸೂಚನೆಗಳನ್ನು ಕಾಣುತ್ತಿದ್ದೇವೆ ಎಂದರು. ಆದ್ದರಿಂದ ರಫ್ತಿಗೆ ಗರಿಷ್ಠ ಗುರಿಗಳನ್ನು ನಿಗದಿಪಡಿಸಲು ಮತ್ತು ಅವುಗಳನ್ನು ಸಾಧಿಸಲು ಇದು ಸಕಾಲವಾಗಿದೆ. ಇದನ್ನು ಸಾಧಿಸಲು ಸರ್ಕಾರ ಪ್ರತಿಯೊಂದು ಹಂತದಲ್ಲೂ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು. ಇತ್ತೀಚೆಗೆ ಸರ್ಕಾರ ನಮ್ಮ ರಫ್ತುದಾರರನ್ನು ವಿಮಾ ವ್ಯಾಪ್ತಿಗೆ ಒಳಪಡಿಸುವ ಮೂಲಕ ಸುಮಾರು 88 ಸಾವಿರ ಕೋಟಿ ರೂಪಾಯಿಗಳ ಉತ್ತೇಜನ ನೀಡುವ  ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಅಂತೆಯೇ ನಮ್ಮ ರಫ್ತು ಪ್ರೋತ್ಸಾಹಗಳನ್ನು ಹೆಚ್ಚಿಸಲು ನಮ್ಮ ರಫ್ತು ಡಬ್ಲ್ಯೂಟಿಒಗೆ ಅನುಗುಣವಾಗಿರುತ್ತವೆ ಮತ್ತು ಉತ್ತೇಜನವನ್ನೂ ಸಹ ಪಡೆಯುತ್ತವೆ.

ವ್ಯಾಪಾರ ಮಾಡುವಾಗ ಸ್ಥಿರತೆ ಕಾಯ್ದುಕೊಳ್ಳುವ ಪ್ರಾಮುಖ್ಯದ ಕುರಿತು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಪೂರ್ವಾನ್ವಯ ತೆರಿಗೆ ಪದ್ಧತಿಯನ್ನು ತೊಡೆದು ಹಾಕುವ ನಿರ್ಧಾರವನ್ನು ಭಾರತ ಕೈಗೊಂಡಿರುವುದು ನಮ್ಮ ಬದ್ಧತೆಯನ್ನು ತೋರುತ್ತದೆ. ನೀತಿಗಳ ಕುರಿತು ಸ್ಥಿರತೆಯನ್ನು ತೋರುತ್ತದೆ ಮತ್ತು ಎಲ್ಲ ಹೂಡಿಕೆದಾರರಿಗೆ ಭಾರತ ಕೇವಲ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತಿಲ್ಲ. ಭಾರತ ಸರ್ಕಾರ ನಿರ್ಣಾಯಕವಾಗಿ ಭರವಸೆಗಳನ್ನು ಈಡೇರಿಸುವ ಇಚ್ಛೆಯನ್ನು ಹೊಂದಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದೆ.

ರಪ್ತು ಗುರಿಗಳ ಸಾಧನೆ ಮತ್ತು ಸುಧಾರಣೆಗಳ ಜಾರಿ, ಬಂಡವಾಳ ಆಕರ್ಷಣೆ, ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣ ಮತ್ತು ಕೊನೆಯ ಮೈಲಿವರೆಗೆ ಮೂಲಸೌಕರ್ಯ ಸೃಷ್ಟಿಯಲ್ಲಿ ರಾಜ್ಯಗಳ ಪಾತ್ರದ ಕುರಿತು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು. ರಫ್ತು ಮತ್ತು ಹೂಡಿಕೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿಯಂತ್ರಣಗಳ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ರಾಜ್ಯಗಳಲ್ಲಿ ರಫ್ತು ತಾಣಗಳನ್ನು ನಿರ್ಮಿಸಲು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲಾಗುತ್ತಿದೆ. ಒಂದು ಜಿಲ್ಲೆ ಉತ್ಪನ್ನಕ್ಕೆ ಆದ್ಯತೆ ನೀಡಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ನಮ್ಮ ಮಹತ್ವಾಕಾಂಕ್ಷೆಯ ರಫ್ತು ಗುರಿ ಸಾಧನೆಯನ್ನು ಸಮಗ್ರ ಮತ್ತು ವಿಸ್ತೃತ ಕ್ರಿಯಾ ಯೋಜನೆಯ ಮೂಲಕ ಮಾತ್ರ ಸಾಧಿಸಲು ಸಾಧ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಹಾಲಿ ಇರುವ ರಫ್ತುಗಳನ್ನು ವೇಗವರ್ಧಕಗೊಳಿಸಬೇಕು ಮತ್ತು ಹೊಸ ಮಾರುಕಟ್ಟೆಗಳು, ಹೊಸ ತಾಣಗಳನ್ನು ಸೃಷ್ಟಿಸುವ ಕೆಲಸ ಆಗಬೇಕು ಎಂದು ಅವರು ಪಾಲುದಾರರಿಗೆ ಕರೆ ನೀಡಿದರು. ಸದ್ಯ ನಮ್ಮ ಅರ್ಧದಷ್ಟು ರಫ್ತು ಕೇವಲ ನಾಲ್ಕು ಪ್ರಮುಖ ತಾಣಗಳಿಂದ ಆಗುತ್ತಿದೆ. ಅಂತೆಯೇ ನಮ್ಮ ಶೇಕಡ 60ರಷ್ಟು ರಫ್ತು ಇಂಜಿನಿಯರಿಂಗ್ ಉತ್ಪನ್ನಗಳು, ಮುತ್ತು ಮತ್ತು ಆಭರಣಗಳು, ಪೆಟ್ರೋಲಿಯಂ ಮತ್ತು ರಾಸಾಯನಿಕ ಪದಾರ್ಥಗಳು ಮತ್ತು ಫಾರ್ಮಸಿಟಿಕಲ್ಸ್. ಹೊಸ ತಾಣಗಳನ್ನು ಹುಡುಕಬೇಕು ಮತ್ತು ನಮ್ಮ ಹೊಸ ಉತ್ಪನ್ನಗಳನ್ನು ಜಗತ್ತಿಗೆ ಕೊಂಡೊಯ್ಯಬೇಕು ಎಂದು ಅವರು ಆಗ್ರಹಿಸಿದರು. ಗಣಿಗಾರಿಕೆ, ಕಲ್ಲಿದ್ದಲು, ರಕ್ಷಣಾ, ರೈಲ್ವೆಗಳಂತಹ ವಲಯಗಳಲ್ಲಿ ಅವಕಾಶಗಳನ್ನು ತೆರೆಯಲಾಗಿದೆ. ನಮ್ಮ ಉದ್ದಿಮೆದಾರರಿಗೆ ರಫ್ತು ಹೆಚ್ಚಳಕ್ಕೆ ಹೊಸ ಅವಕಾಶಗಳು ಲಭ್ಯವಾಗುತ್ತಿವೆ ಎಂದರು.

ರಾಯಭಾರಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಯಾವುದೇ ದೇಶದಲ್ಲಿದ್ದರೂ ಭಾರತವನ್ನು ಅವರು ಪ್ರತಿನಿಧಿಸುತ್ತಿದ್ದರೆ ಅವರು ಆ ದೇಶದ ಅಗತ್ಯಗಳನ್ನು ಸೂಕ್ತವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಇಲ್ಲಿನ ವಾಣಿಜ್ಯ ಮತ್ತು ಕೈಗಾರಿಕೆಗೆ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು. ನಾನಾ ದೇಶಗಳಲ್ಲಿರುವ ಭಾರತೀಯ ಕಚೇರಿಗಳು, ಭಾರತದ ಉತ್ಪಾದನಾ ಶಕ್ತಿಯ ಪ್ರತಿನಿಧಿಗಳಾಗಬೇಕು ಎಂದು ಅವರು ಕರೆ ನೀಡಿದರು. ಅಂತಹ ವ್ಯವಸ್ಥೆಯನ್ನು ಸೃಷ್ಟಿಸುವಂತೆ ವಾಣಿಜ್ಯ ಸಚಿವಾಲಯಕ್ಕೆ ಮನವಿ ಮಾಡಿದ ಅವರು, ಇದರಿಂದಾಗಿ ನಮ್ಮ ರಫ್ತುದಾರರು ಮತ್ತು ನಮ್ಮ ರಾಯಭಾರ ಕಚೇರಿಗಳ ನಡುವೆ ನಿರಂತರ ಸಂಪರ್ಕ ಸಾಧ್ಯವಾಗಲಿದೆ ಎಂದರು.

ನಮ್ಮ ರಫ್ತುದಾರರಿಂದ ನಮ್ಮ ಆರ್ಥಿಕತೆಗೆ ಗರಿಷ್ಠ ಲಾಭವಾಗಬೇಕು. ನಾವು ದೇಶದೊಳಗೂ ಸಹ ಅಡೆತಡೆ ರಹಿತ ಹಾಗು ಉನ್ನತ ಮಟ್ಟದ ಪೂರೈಕೆ ಸರಣಿಯನ್ನು ನಿರ್ಮಾಣ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಅದಕ್ಕಾಗಿ ನಾವು ಹೊಸ ಸಂಬಂಧಗಳು ಮತ್ತು ಹೊಸ ಪಾಲುದಾರಿಕೆಯನ್ನು ನಿರ್ಮಾಣ ಮಾಡುವ ಅಗತ್ಯವಿದೆ. ನಮ್ಮ ಎಂಎಸ್ಎಂಇಗಳು, ರೈತರು ಮತ್ತು ನಮ್ಮ ಮೀನುಗಾರರೊಂದಿಗೆ ಪಾಲುದಾರಿಕೆಯನ್ನು ಬಲವರ್ಧನೆಗೊಳಿಸ ಎಂದು ಎಂದು ರಫ್ತುದಾರರಿಗೆ ಮನವಿ ಮಾಡಿದ ಅವರು, ನವೋದ್ಯಮಗಳಿಗೆ ಉತ್ತೇಜನ ಮತ್ತು ಬೆಂಬಲ ನೀಡಬೇಕು ಎಂದರು.

ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಹೊಸ ಹೆಗ್ಗುರುತನ್ನು ಸ್ಥಾಪಿಸಬೇಕು ಎಂದು ಕರೆ ನೀಡಿದ ಪ್ರಧಾನಮಂತ್ರಿ ಜಗತ್ತಿನ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಭಾರತದ ಉತ್ತಮ ಮೌಲ್ಯವರ್ಧಿತ ಉತ್ಪನ್ನಗಳಿಗೆ ಸ್ವಾಭಾವಿಕ ಬೇಡಿಕೆ ಸೃಷ್ಟಿಯಾಗಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದರು. ಪ್ರತಿಯೊಂದು ವಿಧದಲ್ಲೂ ಸರ್ಕಾರ ರಫ್ತುದಾರರಿಗೆ ಬೆಂಬಲ ನೀಡಲಿದೆ ಎಂದು ಅವರು ಉದ್ಯಮಕ್ಕೆ ಭರವಸೆ ನೀಡಿದರು. ಉದ್ಯಮ ಆತ್ಮನಿರ್ಭರ ಭಾರತ ಮತ್ತು ಸಮೃದ್ಧ ಭಾರತ ಸಂಕಲ್ಪವನ್ನು ನನಸು ಮಾಡಬೇಕು ಎಂದು ಕರೆ ನೀಡಿದರು. 

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಎಸ್. ಜೈಶಂಕರ್, ಕಾರ್ಯಕ್ರಮದ ವಿಶಿಷ್ಟ ಸ್ವರೂಪದ ಕುರಿತು ಪ್ರಮುಖವಾಗಿ ವಿವರಿಸಿದರು. ಈ ಕಾರ್ಯಕ್ರಮದ ಘೋಷವಾಕ್ಯ 'ಸ್ಥಳೀಯ ಉತ್ಪನ್ನಗಳ ಜಾಗತಿಕರಣ' ಎಂಬುದಾಗಿದೆ. ನಮ್ಮ ಉತ್ಪಾದಕರಿಗೆ ನೆರವಾಗುವುದು, ನಿರ್ದಿಷ್ಟ ರಾಷ್ಟ್ರಗಳ ಬೇಡಿಕೆಯೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದರು. ಕೇಂದ್ರ ವಾಣಿಜ್ಯ ಸಚಿವ ಶ್ರೀ ಪಿಯೂಷ್ ಗೋಯಲ್, ಜಾಗತಿಕ ವಾತಾವರಣ ಅನುಕೂಲಕರವಾಗಿದೆ ಮತ್ತು ನಮ್ಮ ರಫ್ತು ವೃದ್ಧಿಗೆ ಇತರೆ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಅನುಕೂಲಗಳ ಬಗ್ಗೆ ನಾವು ಗಮನಹರಿಸಬೇಕಾಗಿದ ಎಂದರು.

ಭಾರತೀಯ ರಾಯಭಾರ ಕಚೇರಿಗಳ ಮುಖ್ಯಸ್ಥರು, ಭಾರತದ ರಫ್ತು ಹೆಚ್ಚಳಕ್ಕೆ ತಮ್ಮ ಸಲಹೆ ಮತ್ತು ಮಾಹಿತಿಯನ್ನು ನೀಡಿದರು. ವಲಯ ಮತ್ತು ಪ್ರದೇಶವಾರು ನಿರ್ದಿಷ್ಟ ವ್ಯಾಪಾರ ಗುರಿಗಳನ್ನು ಹೊಂದುವುದು, ಮೌಲ್ಯವರ್ಧನೆಗೆ ಆದ್ಯತೆ ನೀಡುವ ಅಗತ್ಯ, ಗುಣಮಟ್ಟದ ಉತ್ಪನ್ನಗಳು, ಪೂರೈಕೆ ಸರಣಿಯಲ್ಲಿ ವೈವಿಧ್ಯ, ಪೂರೈಕೆಯಲ್ಲಿ ವಿಶ್ವಾಸಾರ್ಹತೆ ಖಾತ್ರಿ ಮತ್ತು ಸಂಪರ್ಕ ಸುಧಾರಣೆ ವಿಷಯಗಳ ಕುರಿತು ಅವರು ಮಾತನಾಡಿದರು. ಹೊಸ ಮಾರುಕಟ್ಟೆಗಳು ಮತ್ತು ಪ್ರದೇಶವಾರು ನಿರ್ದಿಷ್ಟ ಉತ್ಪನ್ನಗಳಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು. ಇದೇ ವೇಳೆ ಸದ್ಯ ನಾವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉತ್ಪನ್ನಗಳು ಮತ್ತು ಪ್ರದೇಶಗಳಲ್ಲಿ ನಮ್ಮ ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದರು. 

***



(Release ID: 1743453) Visitor Counter : 315