ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ


ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದ ಪ್ರಯತ್ನಗಳಿಗೆ ಕಾಶಿ ಮತ್ತು ಉತ್ತರ ಪ್ರದೇಶವನ್ನು ಶ್ಲಾಘಿಸಿದ  ಪ್ರಧಾನಿ

ಕಾಶಿ ಪೂರ್ವಾಂಚಲದ ದೊಡ್ಡ ವೈದ್ಯಕೀಯ ಕೇಂದ್ರವಾಗುತ್ತಿದೆ: ಪ್ರಧಾನಿ

ಗಂಗಾ ಮಾತೆ ಹಾಗು ಕಾಶಿಯ ಸ್ವಚ್ಛತೆ ಮತ್ತು ಸೌಂದರ್ಯವು ನಮ್ಮ ಆಕಾಂಕ್ಷೆ ಮತ್ತು ಆದ್ಯತೆ: ಪ್ರಧಾನಿ

ಈ ಪ್ರದೇಶದಲ್ಲಿ 8000 ಕೋಟಿ ರೂ.ಮೌಲ್ಯದ ಯೋಜನೆಗಳ ಕೆಲಸ ನಡೆಯುತ್ತಿದೆ: ಪ್ರಧಾನಿ

ಉತ್ತರ ಪ್ರದೇಶ ದೇಶದ ಪ್ರಮುಖ ಹೂಡಿಕೆ ತಾಣವಾಗಿ ವೇಗವಾಗಿ ಹೊರಹೊಮ್ಮುತ್ತಿದೆ: ಪ್ರಧಾನಿ

ಕಾನೂನು ಮತ್ತು ಅಭಿವೃದ್ಧಿಯತ್ತ ಗಮನಹರಿಸುತ್ತಿರುವುದರಿಂದ ಉತ್ತರ ಪ್ರದೇಶದ ಜನರು ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ: ಪ್ರಧಾನಿ

ವೈರಾಣು ಬಗ್ಗೆ ಜಾಗರೂಕರಾಗಿರುವಂತೆ ರಾಜ್ಯದ ಜನತೆಗೆ ನೆನಪಿಸಿದ ಪ್ರಧಾನಿ

Posted On: 15 JUL 2021 1:18PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಬಿಎಚ್‌ಯುನಲ್ಲಿ 100 ಹಾಸಿಗೆಗಳ ಎಂಸಿಎಚ್ ವಿಭಾಗ, ಗೋದೌಲಿಯಾದಲ್ಲಿ ಬಹು ಹಂತದ ಪಾರ್ಕಿಂಗ್, ಗಂಗಾ ನದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೋ-ರೋ ನೌಕೆಗಳು ಮತ್ತು ವಾರಾಣಸಿ- ಗಾಜಿಪುರ ಹೆದ್ದಾರಿಯಲ್ಲಿ ಮೂರು ಪಥದ ಫ್ಲೈಓವರ್ ಸೇರಿದಂತೆ ಸುಮಾರು 744 ಕೋಟಿ ರೂ. ಮೌಲ್ಯದ ವಿವಿಧ ಸಾರ್ವಜನಿಕ ಯೋಜನೆಗಳನ್ನು ಅವರು ಉದ್ಘಾಟಿಸಿದರು.

ಸುಮಾರು 839 ಕೋಟಿ ರೂ.ಮೌಲ್ಯದ ಹಲವಾರು ಯೋಜನೆಗಳಿಗೆ ಪ್ರಧಾನಿಯವರು ಶಿಲಾನ್ಯಾಸ ನೆರವೇರಿಸಿದರು. ಇವುಗಳಲ್ಲಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಸಿಐಪಿಇಟಿ) ಕೌಶಲ್ಯ ಮತ್ತು ತಾಂತ್ರಿಕ ಬೆಂಬಲ ಕೇಂದ್ರ, ಜಲ ಜೀವನ್ ಮಿಷನ್ ಅಡಿಯಲ್ಲಿ 143 ಗ್ರಾಮೀಣ ಯೋಜನೆಗಳು ಮತ್ತು ಕಾರ್ಖಿಯಾನ್‌ನಲ್ಲಿ ಸಂಯೋಜಿತ ಮಾವು ಮತ್ತು ತರಕಾರಿ ಪ್ಯಾಕ್ ಹೌಸ್ ಸೇರಿವೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಕಳೆದ ಕೆಲವು ತಿಂಗಳುಗಳಲ್ಲಿ ರೂಪಾಂತರಿ ಕೊರೊನಾವೈರಸ್ ಪೂರ್ಣ ಬಲದಿಂದ ದಾಳಿ ಮಾಡಿದಾಗಿನ ಕಷ್ಟವನ್ನು ನೆನಪಿಸಿಕೊಂಡರು. ಸವಾಲನ್ನು ಎದುರಿಸಲು ಉತ್ತರ ಪ್ರದೇಶ ಮತ್ತು ಕಾಶಿಯ ಜನರು ಮಾಡಿದ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ಸಾಂಕ್ರಾಮಿಕ ರೋಗವನ್ನು ಎದುರಿಸಲು ಉತ್ತರ ಪ್ರದೇಶ ಸರ್ಕಾರ ಕೈಗೊಂಡ ಕ್ರಮಗಳನ್ನು ಪ್ರಯತ್ನವನ್ನು ಅವರು ಪ್ರಶಂಸಿಸಿದರು. ಕಾಶಿಯಲ್ಲಿ ವ್ಯವಸ್ಥೆಗಳನ್ನು ಸೃಷ್ಟಿಸಲು ಹಗಲು ರಾತ್ರಿ ದುಡಿದ ಕಾಶಿಯಲ್ಲಿನ ತಮ್ಮ ತಂಡ, ಆಡಳಿತ ಮತ್ತು ಕೊರೊನಾ ಯೋಧರ ಇಡೀ ತಂಡವನ್ನು ಅವರು ಶ್ಲಾಘಿಸಿದರು. "ಕಷ್ಟದ ದಿನಗಳಲ್ಲಿಯೂ ಸಹ, ಕಾಶಿ ಎಂದಿಗೂ ನಿಲ್ಲುವುದಿಲ್ಲ ಮತ್ತು ಎಂದಿಗೂ ಆಯಾಸಗೊಳ್ಳುವುದಿಲ್ಲ ಎಂದು ತೋರಿಸಿದೆ" ಎಂದು ಪ್ರಧಾನಿ ಹೇಳಿದರು. ವೈದ್ಯಕೀಯ ಸೌಲಭ್ಯಗಳು ಮತ್ತು ರಾಜಕೀಯ ಇಚ್ಛಾಶಕ್ತಿಯ ಅನುಪಸ್ಥಿತಿಯಲ್ಲಿ ಸಣ್ಣ ಸವಾಲುಗಳು ಸಹ ಬೃಹತ್ತಾಗಿ ನಿಲ್ಲುತ್ತವೆ. ಇಂದು ಉತ್ತರ ಪ್ರದೇಶ ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸಿರುವ ಮತ್ತು ಲಸಿಕೆ ನೀಡಿರುವ ಹೊಂದಿರುವ ರಾಜ್ಯವಾಗಿದೆ ಎಂದು ಅವರು ಹೇಳಿದರು.

ಉತ್ತರಪ್ರದೇಶದಲ್ಲಿ ತ್ವರಿತವಾಗಿ ಸುಧಾರಿಸುತ್ತಿರುವ ವೈದ್ಯಕೀಯ ಮೂಲಸೌಕರ್ಯದ ಬಗ್ಗೆ ವಿವರಿಸಿದ ಶ್ರೀ ಮೋದಿ, ಕಳೆದ ನಾಲ್ಕು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಅನೇಕ ವೈದ್ಯಕೀಯ ಕಾಲೇಜುಗಳು ವಿವಿಧ ರಾಜ್ಯಗಳಲ್ಲಿ ಪೂರ್ಣಗೊಂಡಿವೆ ಎಂದರು. ರಾಜ್ಯದಲ್ಲಿ ಸುಮಾರು 550 ಆಕ್ಸಿಜನ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ, ಅವುಗಳಲ್ಲಿ 14 ಇಂದು ಉದ್ಘಾಟನೆಯಾಗಿವೆ ಎಂದರು. ರಾಜ್ಯ ಸರ್ಕಾರವು ಮಕ್ಕಳ ಐಸಿಯು ಮತ್ತು ಆಮ್ಲಜನಕ ಸೌಲಭ್ಯಗಳನ್ನು ಸುಧಾರಿಸುವ ನಡೆಸಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಇತ್ತೀಚೆಗೆ ಘೋಷಿಸಿದ 23000 ಕೋಟಿ ರೂ.ಗಳ ಪ್ಯಾಕೇಜ್ ಉತ್ತರ ಪ್ರದೇಶಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಕಾಶಿ ನಗರವು ಪೂರ್ವಾಂಚಲ್‌ನ ದೊಡ್ಡ ವೈದ್ಯಕೀಯ ಕೇಂದ್ರವಾಗುತ್ತಿದೆ. ದೆಹಲಿ ಮತ್ತು ಮುಂಬೈಗೆ ಹೋಗಬೇಕಾದ ಕೆಲವು ಕಾಯಿಲೆಗಳಿಗೆ ಈಗ ಕಾಶಿಯಲ್ಲಿಯೇ ಚಿಕಿತ್ಸೆ ಲಭ್ಯವಿದೆ. ಇಂದು ಉದ್ಘಾಟನೆಯಾದ ಕೆಲವು ಯೋಜನೆಗಳು ನಗರದ ವೈದ್ಯಕೀಯ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದು ಅವರು ಹೇಳಿದರು.

 

ಪ್ರಾಚೀನ ನಗರವಾದ ಕಾಶಿಯ ವೈಶಿಷ್ಟ್ಯವನ್ನು ಕಾಪಾಡಿಕೊಂಡು ಅನೇಕ ಯೋಜನೆಗಳ ಮೂಲಕ ನಗರವನ್ನು ಅಭಿವೃದ್ಧಿಯ ಹಾದಿಗೆ ತರಲಾಗಿದೆ ಎಂದು ಪ್ರಧಾನಿ ಹೇಳಿದರು. ಹೆದ್ದಾರಿಗಳು, ಫ್ಲೈಓವರ್‌ಗಳು, ರೈಲ್ವೆ ಮೇಲ್ಸೇತುವೆಗಳು, ನೆಲದಡಿಯ ವೈರಿಂಗ್, ಒಳಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸುವುದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮುಂತಾದ ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ಹೇಳಿದರು. "ಪ್ರಸ್ತುತ 8000 ಕೋಟಿ ರೂ. ಮೌಲ್ಯದ ಯೋಜನೆಗಳ ಕೆಲಸ ನಡೆಯುತ್ತಿದೆ" ಎಂದು ಪ್ರಧಾನಿ ಹೇಳಿದರು.

ಗಂಗಾ ಮಾತೆ ಮತ್ತು ಕಾಶಿಯ ಸ್ವಚ್ಛತೆ ಮತ್ತು ಸೌಂದರ್ಯವು ತಮ್ಮ ಆಕಾಂಕ್ಷೆ ಮತ್ತು ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಇದಕ್ಕಾಗಿ ರಸ್ತೆಗಳು, ಒಳಚರಂಡಿ ನೀರಿನ ಸಂಸ್ಕರಣೆ, ಉದ್ಯಾನವನಗಳು ಮತ್ತು ಘಾಟ್‌ಗಳ ಸೌಂದರೀಕರಣ ಮುಂತಾದ ಪ್ರತಿಯೊಂದು ವಿಭಾಗದಲ್ಲೂ ಕೆಲಸ ನಡೆಯುತ್ತಿದೆ. ಪಂಚಕೋಸಿ ಮಾರ್ಗದ ವಿಸ್ತರಣೆ, ವಾರಣಾಸಿ ಘಾಜಿಪುರದ ಸೇತುವೆಯು ಅನೇಕ ಗ್ರಾಮಗಳು ಮತ್ತು ಪಕ್ಕದ ನಗರಗಳಿಗೆ ಪ್ರಯೋಜನ ಕಲ್ಪಿಸುತ್ತದೆ ಎಂದರು.

ನಗರದಾದ್ಯಂತ ದೊಡ್ಡ ಎಲ್‌ಇಡಿ ಪರದೆಗಳನ್ನು ಸ್ಥಾಪಿಸಲಾಗಿದೆ ಮತ್ತು ಘಾಟ್‌ಗಳಲ್ಲಿನ ಇತ್ತೀಚಿನ ತಂತ್ರಜ್ಞಾನ ಮಾಹಿತಿ ಫಲಕಗಳು ಕಾಶಿಗೆ ಭೇಟಿ ನೀಡುವವರಿಗೆ ಹೆಚ್ಚಿನ ಸಹಾಯ ಮಾಡುತ್ತವೆ ಎಂದು ಪ್ರಧಾನಿ ಹೇಳಿದರು. ಎಲ್‌ಇಡಿ ಪರದೆಗಳು ಮತ್ತು ಮಾಹಿತಿ ಫಲಕಗಳು ಇತಿಹಾಸ, ವಾಸ್ತುಶಿಲ್ಪ, ಕರಕುಶಲ ವಸ್ತುಗಳು, ಕಲೆಯಂತಹ ಕಾಶಿಯ ಪ್ರತಿಯೊಂದು ಮಾಹಿತಿಯನ್ನು ಆಕರ್ಷಕ ರೀತಿಯಲ್ಲಿ ಪ್ರಸ್ತುತಪಡಿಸುತ್ತವೆ ಮತ್ತು ಇದರಿಂದ ಭಕ್ತರಿಗೆ ಹೆಚ್ಚಿನ ಉಪಯೋಗವಾಗಲಿದೆ. ಗಂಗಾ ಮಾತೆಯ ಘಾಟ್ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಆರತಿ ಕಾರ್ಯಕ್ರಮವು ದೊಡ್ಡ ಪರದೆಗಳ ಮೂಲಕ ಇಡೀ ನಗರದಲ್ಲಿ ಪ್ರಸಾರವಾಗಲಿದೆ. ಇಂದು ಉದ್ಘಾಟನೆಯಾದ ರೋ-ರೋ ಸೇವೆ ಮತ್ತು ಕ್ರೂಸ್ ಸೇವೆಯು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಇಂದು ಉದ್ಘಾಟನೆಯಾಗುತ್ತಿರುವ ರುದ್ರಾಕ್ಷ ಕೇಂದ್ರವು ನಗರದ ಕಲಾವಿದರಿಗೆ ವಿಶ್ವ ದರ್ಜೆಯ ವೇದಿಕೆಯನ್ನು ಒದಗಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಆಧುನಿಕ ಕಾಲದಲ್ಲಿ ಕಾಶಿಯನ್ನು ಕಲಿಕೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಇಂದು ಕಾಶಿಗೆ ಮಾದರಿ ಶಾಲೆ, ಐಟಿಐನಂತಹ ಅನೇಕ ಸಂಸ್ಥೆಗಳು ದೊರೆತಿವೆ. ಸಿಪೆಟ್‌ನ ಕೌಶಲ್ಯ ಮತ್ತು ತಾಂತ್ರಿಕ ಬೆಂಬಲ ಕೇಂದ್ರವು ಪ್ರದೇಶದ ಕೈಗಾರಿಕಾ ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತದೆ. ದೇಶದ ಪ್ರಮುಖ ಹೂಡಿಕೆ ತಾಣವಾಗಿ ಉತ್ತರ ಪ್ರದೇಶ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಹೇಳಿದರು. ಕೆಲವು ವರ್ಷಗಳ ಹಿಂದೆ ವ್ಯಾಪಾರ ಮಾಡಲು ಕಷ್ಟವೆಂದು ಪರಿಗಣಿಸಲಾಗಿದ್ದ ಉತ್ತರ ಪ್ರದೆಶ ಇಂದು ಮೇಕ್ ಇನ್ ಇಂಡಿಯಾದ ನೆಚ್ಚಿನ ಸ್ಥಳವಾಗುತ್ತಿದೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ ಹರಿಸುತ್ತಿರುವ ಯೋಗಿ ಸರ್ಕಾರದ ಬಗ್ಗೆ ಪ್ರಧಾನಿಯವರು ಪ್ರಶಂಸೆ ವ್ಯಕ್ತಪಡಿಸಿದರುಡಿಫೆನ್ಸ್ ಕಾರಿಡಾರ್, ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ವೇ, ಗೋರಖ್‌ಪುರ್ ಲಿಂಕ್ ಎಕ್ಸ್‌ಪ್ರೆಸ್ ವೇ ಮತ್ತು ಗಂಗಾ ಎಕ್ಸ್‌ಪ್ರೆಸ್ ವೇ ಗಳು ಇತ್ತೀಚಿನ ಇಂತಹ ಕೆಲವು ಪ್ರಮುಖ ಯೋಜನೆಗಳಿಗೆ ಉದಾಹರಣೆಗಳಾಗಿವೆ ಎಂದು ಪ್ರಧಾನಿ ಹೇಳಿದರು.

 

ದೇಶದಲ್ಲಿ ಕೃಷಿ ಮೂಲಸೌಕರ್ಯಗಳನ್ನು ಆಧುನೀಕರಿಸಲು 1 ಲಕ್ಷ ಕೋಟಿ ರೂ.ಗಳ ವಿಶೇಷ ನಿಧಿಯನ್ನು ರಚಿಸಲಾಗಿದೆ, ಇದು ಈಗ ನಮ್ಮ ಕೃಷಿ ಮಾರುಕಟ್ಟೆಗಳಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು. ದೇಶದ ಕೃಷಿ ಮಾರುಕಟ್ಟೆಗಳ ವ್ಯವಸ್ಥೆಯನ್ನು ಆಧುನಿಕ ಮತ್ತು ಅನುಕೂಲಕರವಾಗಿಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದರು.

 

ಉತ್ತರಪ್ರದೇಶದಲ್ಲಿ ಹೊಸ ಅಭಿವೃದ್ಧಿ ಯೋಜನೆಗಳ ಸುದೀರ್ಘ ಪಟ್ಟಿಯನ್ನು ವಿವರಿಸಿದ ಪ್ರಧಾನಿ, ಹಿಂದೆಯೂ ರಾಜ್ಯಕ್ಕಾಗಿ ಯೋಜನೆಗಳು ಮತ್ತು ಹಣಕಾಸು ನೆರವನ್ನು ಯೋಜಿಸಲಾಗುತ್ತಿತ್ತು. ಆದರೆ ಅವುಗಳು ಲಖನೌದಲ್ಲಿಯೇ ಬಂಧಿಯಾಗುತ್ತಿದ್ದವು ಎಂದು ಹೇಳಿದರು ಅಭಿವೃದ್ಧಿಯ ಫಲಿತಾಂಶವು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಲು ಉತ್ತರ ಪ್ರದೇಶದ ಮುಖ್ಯಮಂತ್ರಿಯವರು  ಮಾಡುತ್ತಿರುವ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು.

ಉತ್ತರ ಪ್ರದೇಶದಲ್ಲಿ ಇಂದು ಕಾನೂನು ಮತ್ತು ಸುವ್ಯವಸ್ಥೆ ಇದೆ ಎಂದು ಪ್ರಧಾನಿ ಹೇಳಿದರು. ಒಂದು ಕಾಲದಲ್ಲಿ ನಿಯಂತ್ರಣ ತಪ್ಪಿ ಹೋಗುತ್ತಿದ್ದ ಮಾಫಿಯಾ ರಾಜ್ ಮತ್ತು ಭಯೋತ್ಪಾದನೆ ಈಗ ಕಾನೂನಿನ ಹಿಡಿತದಲ್ಲಿದೆ. ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಹೆತ್ತವರು ಮತ್ತು ಪೋಷಕರು ಯಾವಾಗಲೂ ಭಯದಿಂದ ಇರುತ್ತಿದ್ದರು. ಈಗ ಪರಿಸ್ಥಿತಿಯೂ ಬದಲಾಗಿದೆ. ಇಂದು ಉತ್ತರ ಪ್ರದೇಶ ಸರ್ಕಾರವು ಅಭಿವೃದ್ಧಿಯಿಂದ ನಡೆಯುತ್ತಿದೆಯೇ ಹೊರತು, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಿಂದಲ್ಲ. ಅದಕ್ಕಾಗಿಯೇ, ಇಂದು ಉತ್ತರ ಪ್ರದೇಶದಲ್ಲಿ, ಜನರು ನೇರವಾಗಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಅದಕ್ಕಾಗಿಯೇ ಇಂದು ಹೊಸ ಉದ್ಯಮಗಳು ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುತ್ತಿವೆ ಮತ್ತು ಇದರಿಂದಾಗಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂದು ಪ್ರಧಾನಿ ಹೇಳಿದರು.

ಕೊರೊನಾ ವೈರಾಣು ಮತ್ತೊಮ್ಮೆ ಶಕ್ತಿಯನ್ನು ಪಡೆಯಲು ಅವಕಾಶ ನೀಡದಿರುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಉತ್ತರ ಪ್ರದೇಶದ ಜನರಿಗೆ ಪ್ರಧಾನಿ ನೆನಪಿಸಿದರು. ಸೋಂಕು ಕಡಿಮೆಯಾಗಿದ್ದರೂ, ಯಾವುದೇ ಅಜಾಗರೂಕತೆಯು ಮತ್ತೊಂದು ಅಲೆಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು ಸಾಂಕ್ರಾಮಿಕದ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮತ್ತು "ಎಲ್ಲರಿಗೂ ಉಚಿತ ಲಸಿಕೆ" ಅಭಿಯಾನದ ಅಡಿಯಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಅವರು ಕರೆ ನೀಡಿದರು.

***



(Release ID: 1735865) Visitor Counter : 290