ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ನಿರ್ವಹಣೆ ಕುರಿತು ದೇಶಾದ್ಯಂತ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ

Posted On: 17 MAY 2021 7:29PM by PIB Bengaluru

ಪ್ರಧಾನಿ ನರೇಂದ್ರ ಮೋದಿ ಅವರು ಮೇ 18 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಗಳು ಮತ್ತು ಜಿಲ್ಲೆಗಳ ಕ್ಷೇತ್ರ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದು, ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಅವರ ಅನುಭವದ ಬಗ್ಗೆ ಚರ್ಚಿಸಲಿದ್ದಾರೆ.

ಸಂವಹನಕ್ಕೆ ಆಯ್ದುಕೊಂಡ ಜಿಲ್ಲೆಗಳ ಪೈಕಿ ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ವಿಪರೀತವಾಗಿದ್ದು, ಪ್ರಕರಣಗಳ ಸಂಖ್ಯೆಯಲ್ಲೂ ಭಾರಿ ಏರಿಕೆಗೆ ಅವು ಸಾಕ್ಷಿಯಾಗಿವೆ.

ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಕೋವಿಡ್-19 ವಿರುದ್ಧದ ಹೋರಾಟವನ್ನು ಕ್ಷೇತ್ರ ಮಟ್ಟದ ಅಧಿಕಾರಿಗಳು ಮುನ್ನಡೆಸುತ್ತಿದ್ದಾರೆ. ಅವರಲ್ಲಿ ಹಲವರು ಉತ್ತಮ ಉಪಕ್ರಮವನ್ನು ಕೈಗೊಂಡಿದ್ದು, ವಿನೂತನ ಪರಿಹಾರಗಳೊಂದಿಗೆ ಮುಂದೆ ಬಂದಿದ್ದಾರೆ. ಅಂತಹ ಉಪಕ್ರಮಗಳ ಬಗ್ಗೆ ಮೆಚ್ಚುಗೆಯು ಪರಿಣಾಮಕಾರಿ ಪ್ರತಿಕ್ರಿಯೆ ಯೋಜನೆ ರೂಪಿಸಲು, ಉದ್ದೇಶಿತ ಕಾರ್ಯತಂತ್ರ ಅನುಷ್ಠಾನಗೊಳಿಸಲು  ಮತ್ತು ಅಗತ್ಯ ನೀತಿ ಮಧ್ಯಸ್ಥಿಕೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ನಿಯಂತ್ರಣ ಕ್ರಮಗಳನ್ನು ಖಾತರಿಪಡಿಸುವುದರಿಂದ ಹಿಡಿದು, ಶರವೇಗ ಪಡೆದಿರುವ ಎರಡನೇ ಅಲೆಯನ್ನು ನಿಭಾಯಿಸಲು ಆರೋಗ್ಯ ಸೌಲಭ್ಯಗಳನ್ನು ಸಜ್ಜುಗೊಳಿಸುವುದು, ಆರೋಗ್ಯ ಕಾರ್ಯಪಡೆಯ ಲಭ್ಯತೆ, ಸಾಗಣೆ-ಸಂಚಾರ ಮತ್ತು ತಡೆರಹಿತ ಪೂರೈಕೆ ಸರಪಳಿಗೆ ವ್ಯವಸ್ಥೆ ಸೇರಿದಂತೆ ಅನೇಕ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿಯನ್ನು ನಿರ್ವಹಿಸಲು ಅವಿರತ ಪ್ರಯತ್ನಗಳನ್ನು ನಡೆಸುತ್ತಿರುವ ಈ ಜಿಲ್ಲೆಗಳು ಆ ಮೂಲಕ ದೇಶಾದ್ಯಂತ ಪುನರಾವರ್ತಿಸಬಹುದಾದ ಹಲವು ಯಶೋಗಾಥೆಗಳನ್ನೂ ಹೊಂದಿವೆ.

ಅಧಿಕಾರಿಗಳ ಜೊತೆಗಿನ ಸಂವಾದದ ವೇಳೆ ಪ್ರಸ್ತುತ ಕೋವಿಡ್-19 ವಿರುದ್ಧ ನಡೆಯುತ್ತಿರುವ ನಮ್ಮ ಹೋರಾಟವನ್ನು, ವಿಶೇಷವಾಗಿ ಉಪ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮುಂದುವರಿಸಲು ಅಗತ್ಯವಾದ ಸಲಹೆಗಳು ಮತ್ತು ಶಿಫಾರಸುಗಳನ್ನು ಪ್ರಧಾನಿ ನೀಡಲಿದ್ದಾರೆ. ಜೊತೆಗೆ ಕೆಲವೊಂದು ಅತ್ಯುತ್ತಮ ಕಾರ್ಯವಿಧಾನಗಳ ಮಾಹಿತಿಯನ್ನೂ ಅವರು ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.

ನಾಳೆ ನಡೆಯುವ ಸಭೆಯಲ್ಲಿ ಕರ್ನಾಟಕ, ಬಿಹಾರ, ಅಸ್ಸಾಂ, ಚಂಡೀಗ, ತಮಿಳುನಾಡು, ಉತ್ತರಾಖಂಡ, ಮಧ್ಯ ಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ದೆಹಲಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

****



(Release ID: 1719496) Visitor Counter : 224