ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ


ದೇಶ ಮೊದಲನೇ ಅಲೆಯ ಉತ್ತುಂಗವನ್ನು ದಾಟಿದೆ ಮತ್ತು ಬೆಳವಣಿಗೆ ದರ ಮೊದಲಿಗಿಂತಲೂ ಅತ್ಯಂತ ವೇಗವಾಗಿದೆ: ಪ್ರಧಾನಮಂತ್ರಿ

ನಮಗೆ ಈಗ ಉತ್ತಮ ಅನುಭವ, ಸಂಪನ್ಮೂಲ ಹಾಗೂ ಲಸಿಕೆ ಕೂಡ ಇದೆ: ಪ್ರಧಾನಮಂತ್ರಿ

‘ಪರೀಕ್ಷೆ, ಪತ್ತೆ, ಚಿಕಿತ್ಸೆ’ ಕೋವಿಡ್ ಸೂಕ್ತ ನಡವಳಿಕೆ ಮತ್ತು ಕೋವಿಡ್ ನಿರ್ವಹಣೆಗೆ ನಾವು ಹೆಚ್ಚಿನ ಗಮನ ಹರಿಸಬೇಕು: ಪ್ರಧಾನಮಂತ್ರಿ

ಕೋವಿಡ್  ಬಳಲಿಕೆ/ ಆಯಾಸದ ಕಾರಣಕ್ಕೆ ನಮ್ಮ ಪ್ರಯತ್ನಗಳಲ್ಲಿ ಯಾವುದೇ ವಿಶ್ರಾಂತಿ ಸಲ್ಲ: ಪ್ರಧಾನಮಂತ್ರಿ

ಹೆಚ್ಚಿನ ಗಮನಹರಿಸುತ್ತಿರುವ ಜಿಲ್ಲೆಗಳಲ್ಲಿ 45 ವರ್ಷ ಮೇಲ್ಪಟ್ಟ ಜನರಿಗೆ ಶೇಕಡ 100 ರಷ್ಟು ಲಸಿಕೆ ನೀಡುವಿಕೆ ಸಾಧಿಸಬೇಕು: ಪ್ರಧಾನಮಂತ್ರಿ

ಜ್ಯೋತಿಬಾ ಪುಲೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್  ಜಯಂತಿ ನಡುವೆ (ಏಪ್ರಿಲ್ 11-14) ಲಸಿಕಾ ಉತ್ಸವಕ್ಕೆ ಕರೆ

Posted On: 08 APR 2021 9:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್-19 ಸ್ಥಿತಿಗತಿ ಕುರಿತಂತೆ ಇಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಕೇಂದ್ರ ಗೃಹ ಸಚಿವರು ಕೋವಿಡ್ ವಿರುದ್ಧದ ಸಮರದಲ್ಲಿ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಚಿತ್ರಣವನ್ನು ವಿವರಿಸಿದರು. ಅಲ್ಲದೆ ಅವರು ದೇಶಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನದ ಪ್ರಗತಿ ಕುರಿತ ಸ್ಥೂಲಚಿತ್ರಣವನ್ನೂ ಸಹ ನೀಡಿದರು. ಕೇಂದ್ರ ಆರೋಗ್ಯ ಕಾರ್ಯದರ್ಶಿ, ದೇಶದಲ್ಲಿನ ಕೋವಿಡ್ ಸ್ಥಿತಿಗತಿ ಕುರಿತಂತೆ ವಿವಿರ ನೀಡಿ, ಸದ್ಯ ಅಧಿಕ ಪ್ರಕರಣಗಳು ಕಂಡುಬರುತ್ತಿರುವ ರಾಜ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಮತ್ತು ರಾಜ್ಯಗಳಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಳ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಅಲ್ಲದೆ ಅವರು ದೇಶದಲ್ಲಿ ಲಸಿಕೆ ಉತ್ಪಾದನೆ ಮತ್ತು ಪೂರೈಕೆಯ ವಿವರಗಳನ್ನು ಹಂಚಿಕೊಂಡರು.

ಮುಖ್ಯಮಂತ್ರಿಗಳು, ಕೊರೊನಾ ಸೋಂಕಿನ ವಿರುದ್ಧ ಸಾಮೂಹಿಕ ಹೋರಾಟವನ್ನು ಮುನ್ನಡೆಸುತ್ತಿರುವುದಕ್ಕಾಗಿ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅವರುಗಳು ತಮ್ಮ ತಮ್ಮ ರಾಜ್ಯಗಳಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಅಭಿಪ್ರಾಯಗಳನ್ನು ಸಲ್ಲಿಸಿದರು. ಸಕಾಲದಲ್ಲಿ ಲಸಿಕಾ ಅಭಿಯಾನವನ್ನು ಕೈಗೊಂಡಿರುವ ಕಾರಣ ಲಕ್ಷಾಂತರ ಜೀವಗಳನ್ನು ಉಳಿಸಲಾಗುತ್ತಿದೆ ಎಂದು ಅವರುಗಳು ಹೇಳಿದರು. ಲಸಿಕೀಕರಣ ಕುರಿತ ಹಿಂಜರಿಕೆ ಮತ್ತು ಲಸಿಕೆ ವ್ಯರ್ಥವಾಗುತ್ತಿರುವ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಪ್ರಧಾನಮಂತ್ರಿ ಅವರು ಮುಖ್ಯಮಂತ್ರಿಗಳ ಮುಂದೆ ಕೆಲವು ಸ್ಪಷ್ಟ ಸಂಗತಿಗಳನ್ನು ಒತ್ತಿ ಹೇಳಿದರು. ಮೊದಲಿಗೆ ದೇಶ ಮೊದಲ ಅಲೆಯ ಉತ್ತುಂಗವನ್ನು ದಾಟಿದೆ ಮತ್ತು ಇದೀಗ ಸೋಂಕು ಪ್ರಗತಿ ದರ ಮೊದಲಿಗಿಂತಲೂ ಅತ್ಯಂತ ವೇಗವಾಗಿದೆ ಎಂದರು. ಎರಡನೆಯದಾಗಿ ಮಹಾರಾಷ್ಟ್ರ, ಛತ್ತೀಸ್ ಗಢ, ಪಂಜಾಬ್, ಮಧ್ಯಪ್ರದೇಶ ಮತ್ತು ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೊದಲನೇ ಅಲೆಯ ಉತ್ತುಂಗವನ್ನು ದಾಟಿದೆ. ಹಲವು ರಾಜ್ಯಗಳು ಅದೇ ದಿಕ್ಕಿನಲ್ಲಿ ಸಾಗುತ್ತಿರುವುದು, ಗಂಭೀರ ಹಾಗೂ ಕಳವಳಕಾರಿ ಎಂದು ಹೇಳಿದರು. ಮೂರನೆಯದಾಗಿ ಬಾರಿ ಜನರು ಮತ್ತಷ್ಟು ಹಗುರವಾಗಿ ನೋಡುತ್ತಿದ್ದಾರೆ, ಕೆಲವು ರಾಜ್ಯಗಳಲ್ಲಿ ಆಡಳಿತಗಳೂ ಸಹ ಉದಾಸೀನತೆ ತೋರುತ್ತಿವೆ. ಅಂತಹ ಸಂದರ್ಭಗಳಲ್ಲಿ ಪ್ರಕರಣಗಳ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದರು.

 

ಅಲ್ಲದೆ ಪ್ರಧಾನಮಂತ್ರಿ ಅವರು ಹಲವು ಸವಾಲುಗಳ ನಡುವೆಯೂ ನಾವು ಉತ್ತಮ ಅನುಭವ ಮತ್ತು ಸಂಪನ್ಮೂಲಗಳನ್ನು ಹೊಂದಿದ್ದೇವೆ ಹಾಗೂ ಈಗ ಲಸಿಕೆ (ವ್ಯಾಕ್ಸಿನ್) ಕೂಡ ಲಭ್ಯವಿದೆ ಎಂದು ಪ್ರತಿಪಾದಿಸಿದರು. ಕಠಿಣ ಶ್ರಮ ವಹಿಸುತ್ತಿರುವ ವೈದ್ಯರು ಮತ್ತು ಆರೋಗ್ಯ ರಕ್ಷಣಾ ಸಿಬ್ಬಂದಿಯೊಂದಿಗೆ ಜನರೂ ಸಹ ಭಾಗಿಯಾಗುತ್ತಿರುವುದರಿಂದ ಪರಿಸ್ಥಿತಿ ನಿರ್ವಹಣೆಯಲ್ಲಿ ಸಾಕಷ್ಟು ಕೊಡುಗೆ ದೊರೆತಿದೆ ಮತ್ತು ಅವರು ಇನ್ನೂ ನಿರಂತರವಾಗಿ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದರು.

 

ನಾವು ಪರೀಕ್ಷೆ, ಪತ್ತೆ, ಚಿಕಿತ್ಸೆಗೆ, ಕೋವಿಡ್ ಸೂಕ್ತ ನಡವಳಿಕೆ ಮತ್ತು ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಲು ಮುಂದಾಗಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ನಾವು ಸೋಂಕನ್ನು ನಿಯಂತ್ರಿಸಲು ಮಾನವರು ಅದಕ್ಕೆ ಅತಿಥಿಯಾಗದಂತೆ ರಕ್ಷಿಸಬೇಕಾಗಿದೆ ಮತ್ತು ಇದರಲ್ಲಿ ಸೋಂಕು ಪರೀಕ್ಷೆ ಮತ್ತು ಪತ್ತೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಪ್ರಧಾನಮಂತ್ರಿ ಅವರು ಸಮುದಾಯದಲ್ಲಿ ಸೋಂಕು ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಪರೀಕ್ಷೆ ಅತ್ಯಂತ ನಿರ್ಣಾಯಕ ವಿಚಾರವಾಗಿದೆ ಎಂದು ವಿವರಿಸಿದರು ಮತ್ತು ಯಾರು ಸೋಂಕನ್ನು ಹರಡುತ್ತಾರೋ ಅಂತಹ ವ್ಯಕ್ತಿಗಳನ್ನು ಗುರುತಿಸಬೇಕು ಎಂದರು. ಪಾಸಿಟಿವಿಟಿ ದರವನ್ನು ಶೇ.5 ಅಥವಾ ಅದಕ್ಕಿಂತ ಕಡಿಮೆಗೆ ಇಳಿಸುವ ಗುರಿಯೊಂದಿಗೆ ನಾವು ಪ್ರತಿ ದಿನ ನಡೆಸುವ ಪರೀಕ್ಷೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಳ ಮಾಡಬೇಕಿದೆ. ವಿಶೇಷವಾಗಿ ನಿರ್ಬಂಧಿತ ವಲಯ ಮತ್ತು ಪ್ರದೇಶಗಳಲ್ಲಿ ಹಾಗೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಕ್ಲಸ್ಟರ್ ಗಳಲ್ಲಿ ಪರೀಕ್ಷೆಯ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕಿದೆ ಎಂದು ಹೇಳಿದರು. ಆರ್ ಟಿಪಿಸಿಆರ್ ಪರೀಕ್ಷಾ ಮೂಲಸೌಕರ್ಯ ಹೆಚ್ಚಳ ಮಾಡುವ ಮೂಲಕ ಒಟ್ಟಾರೆ ನಡೆಸುವ ಪರೀಕ್ಷೆಗಳಲ್ಲಿ ಶೇ.70ರಷ್ಟು ಆರ್ ಟಿಪಿಸಿಆರ್ ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಳ ಮಾಡುವ ಅಗತ್ಯವಿದೆ ಎಂದ ಅವರು ಬಲವಾಗಿ ಪ್ರತಿಪಾದಿಸಿದರು.  

 

ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಪ್ರತಿಯೊಬ್ಬ ಪಾಸಿಟಿವ್ ಹೊಂದಿರುವ ವ್ಯಕ್ತಿ ಇತರರಿಗೆ ಸೋಂಕನ್ನು ಹರಡುವ ಸಂಭವನೀಯತೆ ಇರುತ್ತದೆ ಎಂಬ ಅಂಶವನ್ನು ತಿಳಿಸಿದ ಅವರು, ಸಂಪರ್ಕ ಪತ್ತೆ ಮತ್ತು ನಿಗಾವಹಿಸುವುದು ಸೋಂಕು ಸಮುದಾಯದಲ್ಲಿ ಹರಡದಂತೆ ನಿಯಂತ್ರಿಸುವಲ್ಲಿ ಅತ್ಯಂತ ಪ್ರಮುಖ ಚಟುವಟಿಕೆಯಾಗಿದೆ ಎಂಬ ಅಂಶದ ಬಗ್ಗೆ ಚರ್ಚಿಸಲಾಯಿತು. ಪಾಸಿಟಿವ್ ಪ್ರಕರಣಗಳ ಕನಿಷ್ಠ 30 ಸಂಪರ್ಕಗಳನ್ನು ಪತ್ತೆಹಚ್ಚಿ, ಅವುಗಳನ್ನು ಪರೀಕ್ಷಿಸಿ ಕ್ವಾರಂಟೈನ್ ಗೆ ಒಳಪಡಿಸಬೇಕು. ಕಾರ್ಯ ಮೊದಲ 72 ಗಂಟೆಗಳೊಳಗೆ ನಡೆಯಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಅಂತೆಯೇ ನಿರ್ಬಂಧಿತ ವಲಯಗಳ ಗಡಿಗಳನ್ನೂ ಸಹ ಸ್ಪಷ್ಟಪಡಿಸಬೇಕು. ಕೋವಿಡ್ ಆಯಾಸ ಅಥವಾ ಬಳಲಿಕೆ ಕಾರಣಕ್ಕೆ ನಮ್ಮ ಪ್ರಯತ್ನಗಳಲ್ಲಿ ಯಾವುದೇ ವಿಶ್ರಾಂತಿ ಸಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ಅವರು ನಿರ್ಬಂಧಿತ ವಲಯಗಳಲ್ಲಿ ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳು(ಎಸ್ಒಪಿ) ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರು. ಸೋಂಕಿನಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ವಿಸ್ತೃತ ವಿಶ್ಲೇಷಣೆಯೊಂದಿಗೆ ಸಮಗ್ರ ದತ್ತಾಂಶವನ್ನು ಸಿದ್ಧಪಡಿಸುವ ಅಗತ್ಯವಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ದೆಹಲಿಯ ಏಮ್ಸ್ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಆಯೋಜಿಸುವ ವೆಬಿನಾರ್ ಗಳಲ್ಲಿ ಭಾಗವಹಿಸುವಂತೆ ಅವರು ರಾಜ್ಯಗಳಿಗೆ ಸೂಚಿಸಿದರು.

ಹೆಚ್ಚಿನ  ಸೋಂಕಿರುವ ಜಿಲ್ಲೆಗಳಲ್ಲಿ 45 ವರ್ಷ ಮೇಲ್ಪಟ್ಟ ಜನಸಂಖ್ಯೆಗೆ ಶೇಕಡ 100ರಷ್ಟು ಲಸಿಕೀಕರಣ ಕಾರ್ಯವನ್ನು ಕೈಗೊಳ್ಳಬೇಕು ಎಂದು ಪ್ರಧಾನಮಂತ್ರಿ ರಾಜ್ಯಗಳಿಗೆ ಮನವಿ ಮಾಡಿದರು. ಏಪ್ರಿಲ್ 11  ಜ್ಯೋತಿಬಾಪುಲೆ ಜಯಂತಿ ಹಾಗು ಏಪ್ರಿಲ್ 14 ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ನಡುವೆಟೀಕಾ ಉತ್ಸವ್’ –ಲಸಿಕಾ ಉತ್ಸವವನ್ನು ಆಚರಿಸುವಂತೆ  ಪ್ರಧಾನಮಂತ್ರಿಗಳು ಕರೆ ನೀಡಿದರು. ಲಸಿಕಾ  ಉತ್ಸವದ ವೇಳೆ ಗರಿಷ್ಠ ಸಂಖ್ಯೆಯ ಜನರಿಗೆ ಲಸಿಕೆ ಹಾಕಿಸುವ ಪ್ರಯತ್ನಗಳನ್ನು ಮಾಡಬೇಕು ಎಂದರು. 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಯುವಜನರು ಸಹಾಯ ಮಾಡಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು.

 

ಪ್ರಧಾನಮಂತ್ರಿ ಅವರು, ಉದಾಸೀನತೆಯ ಬಗ್ಗೆ ಎಚ್ಚರಿಕೆಯನ್ನು ನೀಡಿ, ಲಸಿಕೆ  ನೀಡುವಿಕೆ ನಡುವೆಯೂ ನಾವು ನಮ್ಮ ಹೋರಾಟವನ್ನು ಸಡಿಲಿಸುವಂತಿಲ್ಲ ಮತ್ತು ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವುದನ್ನು ಮುಂದುವರಿಸಬೇಕೆಂಬುದನ್ನು ಸದಾ ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದರು. ‘ದವಾಯಿ ಭಿ-ಕಡಾಯಿ ಭಿತಮ್ಮ ಮಂತ್ರವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು ಕೋವಿಡ್ ಸೂಕ್ತ ನಡವಳಿಕೆ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಹೇಳಿದರು.

***



(Release ID: 1710587) Visitor Counter : 236