ಪ್ರಧಾನ ಮಂತ್ರಿಯವರ ಕಛೇರಿ

ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ನವೋದ್ಯಮಗಳು: ಪ್ರಧಾನಮಂತ್ರಿ ನರೇಂದ್ರ ಮೋದಿ

Posted On: 16 JAN 2021 9:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣ ನಿಟ್ಟಿನಲ್ಲಿ ನವೋದ್ಯಮಗಳು ನೀಡುತ್ತಿರುವ ಕೊಡುಗೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅವರುಪ್ರಾರಂಭ: ಸ್ಟಾರ್ಟ್ ಅಪ್ ಇಂಡಿಯಾ ಅಂತಾರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಮಾತನಾಡಿದರು.

ಸಂದರ್ಭದಲ್ಲಿ ಮಾತನಾಡಿದ ಅವರು, ಶೇ.45ರಷ್ಟು ನವೋದ್ಯಮಗಳು ಎರಡು ಹಾಗೂ ಮೂರನೇ ದರ್ಜೆ ನಗರಗಳಲ್ಲಿವೆ. ಅವು ಸ್ಥಳೀಯ ಉತ್ಪನ್ನಗಳಿಗೆ ಬ್ರ್ಯಾಂಡ್ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಪ್ರತಿಯೊಂದು ರಾಜ್ಯವೂ ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ನವೋದ್ಯಮಗಳನ್ನು ಬೆಂಬಲಿಸುತ್ತಿವೆ ಮತ್ತು ಪೋಷಿಸುತ್ತಿವೆ ಹಾಗೂ ದೇಶದ ಶೇ.80ರಷ್ಟು ಜಿಲ್ಲೆಗಳು ಇದೀಗ ಸ್ಟಾರ್ಟ್ ಅಪ್ ಇಂಡಿಯಾ ಮಿಷನ್ ಭಾಗವಾಗಿದೆ ಎಂದರು. ಜನರು ತಮ್ಮ ಆಹಾರಾಭ್ಯಾಸದ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿರುವುದರಿಂದ ಆಹಾರ ಮತ್ತು ಕೃಷಿ ವಲಯದಲ್ಲಿ ಹೊಸ ಸಾಧ್ಯತೆಗಳು ಹೆಚ್ಚಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತ ಒಂದು ಲಕ್ಷ ಕೋಟಿ ರೂ.ಗಳ ಮೂಲ ಬಂಡವಾಳದೊಂದಿಗೆ ಕೃಷಿ ಮೂಲಸೌಕರ್ಯ ನಿಧಿಯನ್ನು ಸೃಷ್ಟಿಸುವ ಮೂಲಕ ವಲಯಗಳ ಪ್ರಗತಿಗೆ ವಿಶೇಷ ಗಮನವನ್ನು ಹರಿಸಿದೆ ಎಂದರು. ಹೊಸ ಅವಕಾಶಗಳ ಮೂಲಕ ನವೋದ್ಯಮಗಳು ರೈತರ ಜೊತೆ ಸಹಭಾಗಿತ್ವವನ್ನು ಸಾಧಿಸುತ್ತಿವೆ ಮತ್ತು ಸುಗಮ ರೀತಿಯಲ್ಲಿ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ತೋಟದಿಂದ ಗ್ರಾಹಕರ ಮನೆಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.   

ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣದ ನಿಟ್ಟಿನಲ್ಲಿ ನವೋದ್ಯಮಗಳು ನೀಡಿರುವ ಕೊಡುಗೆಯ ಕುರಿತು ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ನವೋದ್ಯಮಗಳು ಸ್ಯಾನಿಟೈಸರ್, ಪಿಪಿಇ ಕಿಟ್ ಲಭ್ಯತೆ ಖಾತ್ರಿಪಡಿಸುವಲ್ಲಿ ಮತ್ತು ಸಂಬಂಧಿತ ಪೂರೈಕೆ ಸರಣಿ ಕಾಯ್ದುಕೊಳ್ಳುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದವು ಎಂದು ಹೇಳಿದರು. ಸ್ಥಳೀಯ ಅಗತ್ಯತೆಗಳಾದ ದಿನಸಿ, ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ, ಮುಂಚೂಣಿ ಕಾರ್ಯಕರ್ತರಿಗೆ ಸಾರಿಗೆ ಸೌಕರ್ಯ ಕಲ್ಪಿಸುವಲ್ಲಿ ಮತ್ತು ಆನ್ ಲೈನ್ ಅಧ್ಯಯನ ಸಾಮಗ್ರಿ ಪೂರೈಸುವಲ್ಲಿ ಇವು ಮಹತ್ವದ ಪಾತ್ರವಹಿಸಿದವು. ನವೋದ್ಯಮಗಳು ಪ್ರತಿಕೂಲ ಪರಿಸ್ಥಿತಿಯಲ್ಲೂ ಹೊಸ ಅವಕಾಶಗಳನ್ನು ಹುಡುಕುವ ಮನೋಭಾವ ಹೊಂದಿರುವುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ವಿಪತ್ತಿನ ಸಮಯದಲ್ಲೂ ಅವು ವಿಶ್ವಾಸವನ್ನು ವೃದ್ಧಿಸಿದವು ಎಂದು ಹೇಳಿದರು.

***



(Release ID: 1689889) Visitor Counter : 104