ಪ್ರಧಾನ ಮಂತ್ರಿಯವರ ಕಛೇರಿ

ನೂತನ ಸಂಸತ್ ಭವನ ಶಂಕುಸ್ಥಾಪನೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 10 DEC 2020 4:57PM by PIB Bengaluru

ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾಜಿ, ರಾಜ್ಯಸಭಾ ಉಪಾಧ್ಯಕ್ಷ ಶ್ರೀ ಹರಿವಂಶ್ ಜಿ, ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ ಪ್ರಹ್ಲಾದ್ ಜೋಶಿ ಜಿ, ಶ್ರೀ ಹರ್ ದೀಪ್ ಸಿಂಗ್ ಪುರಿ ಜಿ, ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೇ, ವರ್ಚುವಲ್ ರೂಪದಲ್ಲಿ ಉಪಸ್ಥಿತರಿರುವ ನಾನಾ ದೇಶಗಳ ಸಂಸತ್ತಿನ ಸ್ಪೀಕರ್ ಅವರುಗಳೇ, ಇಲ್ಲಿ ಉಪಸ್ಥಿತರಿರುವ ಹಲವು ದೇಶಗಳ ರಾಯಭಾರಿಗಳೇ, ಅಂತರ ಸಂಸದೀಯ ಒಕ್ಕೂಟದ ಸದಸ್ಯರೇ, ಇತರೆ ಗಣ್ಯರೇ ಹಾಗೂ ನನ್ನ ನೆಚ್ಚಿನ ದೇಶವಾಸಿಗಳೇ, ಇಂದು ಐತಿಹಾಸಿಕ ದಿನವಾಗಿದೆ. ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಮಹತ್ವದ ಮೈಲಿಗಲ್ಲಾಗಿದೆ. ಭಾರತದ ಸಂಸತ್ ಭವನದ ನಿರ್ಮಾಣಕ್ಕೆ ಚಾಲನೆ ನೀಡುತ್ತಿರುವುದು ಭಾರತೀಯರ ಭಾರತೀಯತೆಯನ್ನು ಪ್ರತಿಬಿಂಬಿಸಲಿದೆ. ಇದು ನಮ್ಮ ಪ್ರಜಾಪ್ರಭುತ್ವದ ಪರಂಪರೆಯಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಭಾರತೀಯರಾದ ನಾವೆಲ್ಲರೂ ಸೇರಿ ಒಗ್ಗೂಡಿ ಹೊಸ ಸಂಸತ್ ಭವನವನ್ನು ನಿರ್ಮಾಣ ಮಾಡುತ್ತಿದ್ದೇವೆ.   

ಮಿತ್ರರೇ,

ಇದಕ್ಕಿಂತ ಸುಂದರವಿರುವುದಿಲ್ಲ ಅಥವಾ ನಮ್ಮ ಸಂಸತ್ತಿನ ಹೊಸ ಕಟ್ಟಡದಂತಹ ಸ್ವಚ್ಛ ಕಟ್ಟಡವಿರುವುದಿಲ್ಲ. ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ಕಟ್ಟಡ ಪ್ರತಿಯೊಬ್ಬರಿಗೂ ಸ್ಫೂರ್ತಿಯನ್ನು ನೀಡಲಿದೆ. ಇಂದು ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವ 130 ಕೋಟಿಗೂ ಅಧಿಕ ಭಾರತೀಯರಿಗೆ ಇದು ಹೆಮ್ಮೆಯ ಮತ್ತು ಪ್ರತಿಷ್ಠೆಯ ದಿನವಾಗಿದೆ.

ಸಂಸತ್ತಿನ ನೂತನ ಕಟ್ಟಡದ ನಿರ್ಮಾಣ ಹೊಸತು ಮತ್ತು ಹಳೆಯದರ ಸಹಬಾಳ್ವೆಯ ಒಂದು ಉದಾಹರಣೆಯಾಗಿದೆ. ಇದು ಬದಲಾಗುತ್ತಿರುವ ಕಾಲಕ್ಕೆ ಮತ್ತು ಅಗತ್ಯತೆಗಳಿಗೆ ತಕ್ಕಂತೆ

ತನ್ನೊಳಗೆ ಬದಲಾವಣೆಯನ್ನು ತರುವ ಒಂದು ಪ್ರಯತ್ನವಾಗಿದೆ. ನಾನು ಸಂಸದನಾಗಿ 2014ರಲ್ಲಿ ಮೊದಲ ಬಾರಿಗೆ ಸಂಸತ್ ಭವನ ಪ್ರವೇಶಿಸುವ ಅವಕಾಶ ದೊರೆತ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ. ನಾನು ಪ್ರಜಾಪ್ರಭುತ್ವದ ದೇಗುಲವನ್ನು ಪ್ರವೇಶಿಸುವ ಮುನ್ನ ಶಿರಬಾಗಿ ನಮಿಸಿದ್ದೆನು. ಹಾಲಿ ಸಂಸತ್ ಭವನ ಮೊದಲ ಸ್ವಾತಂತ್ರ್ಯ ಚಳವಳಿ ಮತ್ತು ಆನಂತರ ಸ್ವತಂತ್ರ ಭಾರತವನ್ನು ಬೆಸೆಯುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದೆ.  ಸ್ವತಂತ್ರ ಭಾರತದ ಮೊದಲ ಸರ್ಕಾರ ಇಲ್ಲಿ ರಚನೆಯಾಯಿತು ಮತ್ತು ಮೊದಲ ಸಂಸತ್ ಕೂಡ ಇಲ್ಲಿ ಕಲಾಪ ನಡೆಸಿತು. ಸಂಸತ್ ಭವನದಲ್ಲಿ ನಮ್ಮ ಸಂವಿಧಾನ ಸೃಷ್ಟಿಯಾಯಿತು ಮತ್ತು ನಮ್ಮ ಪ್ರಜಾಪ್ರಭುತ್ವ ಪುನರ್ ಸ್ಥಾಪನೆಯಾಯಿತು. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇತರ ಹಿರಿಯರು ಸೆಂಟ್ರಲ್ ಹಾಲ್ ನಲ್ಲಿ ಸಮಗ್ರ ಸಮಾಲೋಚನೆ ನಂತರ ಸಂವಿಧಾನವನ್ನು ನೀಡಿದರು. ಸದ್ಯದ ಸಂಸತ್ ಭವನ ಸ್ವತಂತ್ರ ಭಾರತದ ಹಲವು ಏಳುಬೀಳು, ನಮ್ಮ ಸವಾಲುಗಳು, ಪರಿಹಾರಗಳು, ಭರವಸೆಗಳು, ಆಶೋತ್ತರಗಳ ಮತ್ತು ಯಶಸ್ಸಿನ ಸಂಕೇತವಾಗಿದೆ. ಕಟ್ಟಡದಲ್ಲಿ ರೂಪಿಸಿರುವ ಪ್ರತಿಯೊಂದು ಕಾನೂನು ಮತ್ತು ಕಾನೂನುಗಳನ್ನು ರೂಪಿಸುವ ವೇಳೆ ಸಂಸತ್ತಿನ ಭವನದಲ್ಲಿ ನಡೆದ ಗಂಭೀರ ಚರ್ಚೆಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಂಪರೆಯಾಗಿವೆ.

ಮಿತ್ರರೇ,

ನಾವು ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಸಂಸತ್ತಿನ ಪ್ರಬಲ ಇತಿಹಾಸವನ್ನೂ ಸಹ ಅರ್ಥ ಮಾಡಿಕೊಳ್ಳುವುದು ಅಷ್ಟೇ ಅತ್ಯಗತ್ಯವಾಗಿದೆ. ಕಟ್ಟಡ ಇದೀಗ 100 ವರ್ಷಗಳಷ್ಟು ಹಳೆಯದಾಗಿದೆ. ಹಿಂದೆ ಕಾಲಕ್ಕೆ ತಕ್ಕಂತೆ ಕಟ್ಟಡವನ್ನು ನಿರಂತರವಾಗಿ ಉನ್ನತೀಕರಿಸಲಾಗುತ್ತಿತ್ತು. ಹೊಸ ಧ್ವನಿ ವ್ಯವಸ್ಥೆ, ಅಗ್ನಿ ಸುರಕ್ಷತಾ ವ್ಯವಸ್ಥೆ ಅಥವಾ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಅಳವಡಿಸುವ ಹಲವು ಸಂದರ್ಭಗಳಲ್ಲಿ ಹಲವು ಬಾರಿ ಗೋಡೆಗಳನ್ನು ಕೆಡವಲಾಗಿದೆ. ಲೋಕಸಭೆಯಲ್ಲಿ ಆಸನಗಳ ಸಾಮರ್ಥ್ಯ ಹೆಚ್ಚಳ ಮಾಡಲು ಗೋಡೆಗಳನ್ನು ತೆರವುಗೊಳಿಸಲಾಗಿದೆ. ಇಷ್ಟೆಲ್ಲದರ ನಡುವೆಯೂ ಸಂಸತ್ತಿನ ಭವನಕ್ಕೆ ಒಂದು ಬಿಡುವು ಬೇಕಾಗಿದೆ. ಇದೀಗ ಲೋಕಸಭಾ ಸ್ಪೀಕರ್, ಹಲವು ವರ್ಷಗಳಿಂದ ಸಂಸತ್ತಿಗೆ ಹೊಸ ಭವನದ ಅಗತ್ಯವಿತ್ತೆಂಬ ಬೇಡಿಕೆ ಇತ್ತೆಂದು ಹೇಳುತ್ತಿದ್ದರು. ಆದ್ದರಿಂದ 21ನೇ ಶತಮಾನದ ಭಾರತಕ್ಕಾಗಿ ಹೊಸ ಸಂಸತ್ ಭವನದ ನಿರ್ಮಾಣವನ್ನು ಖಾತ್ರಿಪಡಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ನಿಟ್ಟಿನಲ್ಲಿ ಇಂದು ಚಾಲನೆ ನೀಡಲಾಗಿದ್ದು, ಆದ್ದರಿಂದ ಇಂದು ನಾವು ಹೊಸ ಸಂಸತ್ ಭವನ ನಿರ್ಮಾಣ ಕಾರ್ಯವನ್ನು ಆರಂಭಿಸುತ್ತಿದ್ದೇವೆ. ಹಾಲಿ ಸಂಸತ್ತಿನ ಪ್ರಾಂಗಣಕ್ಕೆ ಹೊಸ ವರ್ಷಗಳ ಜೀವ ತುಂಬುತ್ತಿದ್ದೇವೆ.

ಹೊಸ ಸಂಸತ್ ಭವನದಲ್ಲಿ ಹಲವು ಹೊಸ ಸಂಗತಿಗಳನ್ನು ಪರಿಚಯಿಸಲಾಗುತ್ತಿದ್ದು, ಅವುಗಳಿಂದಾಗಿ ಸಂಸದರು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಲ್ಲದೆ ಅವರ ಕಾರ್ಯಶೈಲಿ ಆಧುನೀಕರಣಗೊಳ್ಳಲಿದೆ. ಉದಾಹರಣೆಗೆ ಹಾಲಿ ಸಂಸತ್ ಭವನದಲ್ಲಿ ಜನರು ತಮ್ಮ ಸಮಸ್ಯೆಗಳ ಕುರಿತು ತಮ್ಮ ಕ್ಷೇತ್ರಗಳ ಸಂಸದರನ್ನು ಬಂದು ಭೇಟಿ ಮಾಡುವಾಗ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಜನರು ತಮ್ಮ ಸಮಸ್ಯೆಗಳನ್ನು ತಮ್ಮ ಸಂಸದರ ಬಳಿ ಹೇಳಿಕೊಳ್ಳಲು ಬಂದಾಗ ಹಾಲಿ ಸಂಸತ್ ಭವನದಲ್ಲಿ ತೀವ್ರ ಜಾಗದ ಕೊರತೆ ಎದುರಿಸುತ್ತಾರೆ. ಭವಿಷ್ಯದಲ್ಲಿ ಹೊಸ ಸಂಕೀರ್ಣದಲ್ಲಿ ಪ್ರತಿಯೊಬ್ಬ ಸಂಸದರಿಗೂ  ತಮ್ಮ ಕ್ಷೇತ್ರದ ಜನರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸೌಕರ್ಯ ದೊರಕಲಿದೆ.  

ಹಳೆಯ ಸಂಸತ್ ಭವನ ಸ್ವಾತಂತ್ರ್ಯಾ ನಂತರದ ಭಾರತಕ್ಕೆ ದಿಕ್ಸೂಚಿ ನೀಡಿದರೆ, ಹೊಸ ಕಟ್ಟಡಆತ್ಮನಿರ್ಭರ ಭಾರತನಿರ್ಮಾಣಕ್ಕೆ ಸಾಕ್ಷಿಯಾಗಲಿದೆ. ಹಳೆಯ ಸಂಸತ್ ಕಟ್ಟಡ, ದೇಶದ ಅಗತ್ಯತೆಗಳನ್ನು ಈಡೇರಿಸಿದ್ದರೆ, ಹೊಸ ಕಟ್ಟಡ 21ನೇ ಶತಮಾನದ ಭಾರತದ ಆಶೋತ್ತರಗಳನ್ನು ಈಡೇರಿಸಲಿದೆ. ಸಂಸತ್ತಿನ ಹೊಸ ಕಟ್ಟಡ ಇಂಡಿಯಾ ಗೇಟ್ ನಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕದ ರೀತಿಯಲ್ಲಿ ತನ್ನದೇ ಆದ ಹೆಗ್ಗುರುತನ್ನು ಸ್ಥಾಪಿಸಲಿದೆ. ದೇಶದ ಜನ ಮತ್ತು ಮುಂದಿನ ಪೀಳಿಗೆ ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಗಮನದಲ್ಲಿರಿಸಿಕೊಂಡು ಸ್ವತಂತ್ರ್ಯ ಭಾರತದಲ್ಲಿ ನಿರ್ಮಿಸಿದ ಹೊಸ ಕಟ್ಟಡವನ್ನು ನೋಡಲು ಹೆಮ್ಮೆಯಿಂದ ಬರುತ್ತಾರೆ.  

ಮಿತ್ರರೇ,

ನಮ್ಮ ಪ್ರಜಾಪ್ರಭುತ್ವ ಅಧಿಕಾರದ ಮೂಲ ಮತ್ತು ಸಂಸತ್ ಭವನ ಶಕ್ತಿಯನ್ನು ನೀಡಲಿದೆ. ಸ್ವಾತಂತ್ರ್ಯದ ವೇಳೆ ಭಾರತದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರದ ಅಸ್ಥಿತ್ವದ ಬಗ್ಗೆ ವ್ಯಕ್ತಪಡಿಸಿದ ಅನುಮಾನಗಳೆಲ್ಲಾ ಇದೀಗ ಇತಿಹಾಸದ ಭಾಗವಾಗಿವೆ. ಅನಕ್ಷರತೆ, ಬಡತನ, ಸಾಮಾಜಿಕ ವೈವಿಧ್ಯತೆ ಹಾಗೂ ಅನನುಭವ ಮತ್ತಿತರ ಉದಾಹರಣೆಗಳನ್ನು ಮುಂದಿಟ್ಟುಕೊಂಡು ಭಾರತದಲ್ಲಿ ಪ್ರಜಾಪ್ರಭುತ್ವ ವಿಫಲವಾಗಲಿದೆ ಎಂದು ಕಲ್ಪಿಸಿಕೊಳ್ಳಲಾಗಿತ್ತು. ಇಂದು ದೇಶ ಅಂತಹ ಊಹೆಗಳೆಲ್ಲಾ ತಪ್ಪು ಎಂದು ಸಾಬೀತುಮಾಡಿದೆ ಎಂಬುದನ್ನು ನಾವು ಇಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದರೆ 21ನೇ ಶತಮಾನದಲ್ಲಿ ವಿಶ್ವ ಭಾರತವನ್ನು ಒಂದು ಪ್ರಮುಖ ಪ್ರಜಾಪ್ರಭುತ್ವದ ಶಕ್ತಿಯನ್ನಾಗಿ ಎದುರು ನೋಡುತ್ತಿದೆ.

ಮಿತ್ರರೇ,

ಭಾರತದಲ್ಲಿ ಪ್ರಜಾಪ್ರಭುತ್ವ ಹೇಗೆ ಯಶಸ್ವಿಯಾಯಿತು ಎಂಬುದನ್ನು ಪ್ರತಿಯೊಂದು ಪೀಳಿಗೆಯು ಅರ್ಥಮಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಅದು ಹೇಗೆ ಯಶಸ್ವಿಯಾಯಿತು ಮತ್ತು ಅದಕ್ಕೆ ಏಕೆ ಯಾರು ಯಾವುದೇ ರೀತಿಯ ಧಕ್ಕೆ ಮಾಡಲಾಗಲಿಲ್ಲ ಎಂಬುದು ಮುಖ್ಯವಾಗುತ್ತದೆ. ನಾವು 13ನೇ ಶತಮಾನದ ಮ್ಯಾಗ್ನಾ ಕಾರ್ಟಾದ (ವೈಯಕ್ತಿಕ ಮತ್ತು ರಾಜಕೀಯ ಸ್ವಾತಂತ್ರ್ಯದ ಮಹಾಸನ್ನದು) ಬಗ್ಗೆ ಕೇಳಿದ್ದೇವೆ. ಕೆಲವು ವಿದ್ವಾಂಸರು ಅದೇ ಪ್ರಜಾಪ್ರಭುತ್ವಕ್ಕೆ ತಳಹದಿ ಎಂದು ಕರೆಯುತ್ತಾರೆ. ಆದರೆ ಮ್ಯಾಗ್ನಾ ಕಾರ್ಟಾಗಿಂತ ಮುಂಚೆಯೇ 12ನೇ ಶತಮಾನದಲ್ಲಿ ಭಾರತದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿದ್ದರು ಎಂಬುದೂ ಕೂಡ ಅಷ್ಟೇ ನಿಜ. ಅನುಭವ ಮಂಟಪದ ಭಾಗವಾಗಿ ಅವರು ಕೇವಲ ಜನರ ಸಂಸತ್ ಅನ್ನು ನಿರ್ಮಿಸಲಿಲ್ಲ. ಆದರೆ ಅದರ ಕಾರ್ಯನಿರ್ವಹಣೆಯನ್ನೂ ಸಹ ಖಾತ್ರಿಪಡಿಸಿದ್ದರು. ಅಣ್ಣ ಬಸವಣ್ಣ ಹೀಗೆ ಹೇಳಿದ್ದರು  - यी अनुभवा मंटप जन सभा, नादिना मट्ठु राष्ट्रधा उन्नतिगे हागू, अभिवृध्दिगे पूरकावगी केलसा मादुत्थादे! ಇದರ ಅರ್ಥ ಅನುಭವ ಮಂಟಪ ಎಂಬುದು ಒಂದು ಶಾಸನಸಭೆ, ಅಲ್ಲಿ ಪ್ರತಿಯೊಬ್ಬರೂ ರಾಜ್ಯದ ಮತ್ತು ರಾಷ್ಟ್ರದ ಹಿತ ಕಾಯಲು ಅದರ ಅಭ್ಯುದಯಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅನುಭವ ಮಂಟಪ ಎಂಬುದೇ ಪ್ರಜಾಪ್ರಭುತ್ವದ ಒಂದು ವಿಧಾನ.

ಮಿತ್ರರೇ,

ಅವಧಿಗೂ ಮುನ್ನವೇ ತಮಿಳುನಾಡಿನ ಚೆನ್ನೈನಿಂದ 80-85 ಕಿ.ಮೀ. ದೂರದಲ್ಲಿರುವ ಉತ್ತರಮೆರೂರು ಗ್ರಾಮದಲ್ಲಿ ಒಂದು ಪ್ರಮುಖ ಐತಿಹಾಸಿಕ ಸಾಕ್ಷ್ಯವನ್ನು ನಾವು ಕಾಣಬಹುದಾಗಿದೆ. 10ನೇ ಶತಮಾನದಲ್ಲಿ ಚೋಳರ ಸಾಮ್ರಾಜ್ಯದಲ್ಲಿ ಪಂಚಾಯತ್ ವ್ಯವಸ್ಥೆ ಚಾಲ್ತಿಯಲ್ಲಿದ್ದರ ಕುರಿತು ಕಲ್ಲಿನ ಮೇಲೆ ಬಿಡಿಸಿರುವ ತಮಿಳು ಭಾಷೆಯ ಶಾಸನಗಳನ್ನು ಕಾಣಬಹುದಾಗಿದೆ.  ಅದರಲ್ಲಿ ಹೇಗೆ ಪ್ರತಿಯೊಂದು ಗ್ರಾಮವನ್ನು ಕುಡುಂಬು ಅಂದರೆ ನಾವು ಇಂದು ವಾರ್ಡ್ ಎಂದು ಕರೆಯುವ ರೀತಿಯಲ್ಲಿ ವರ್ಗೀಕರಿಸಿರುವುದನ್ನು ವಿವರಿಸಲಾಗಿದೆ. ಇಂದು ನಡೆಯುತ್ತಿರುವಂತೆ ಕುಡುಂಬುಗಳ ಓರ್ವ ಪ್ರತಿನಿಧಿಯನ್ನು ಸಾಮಾನ್ಯ ಶಾಸನಸಭೆಗೆ ಕಳುಹಿಸಲಾಗುತ್ತಿತ್ತು. ಸಾವಿರಾರು ವರ್ಷಗಳ ಹಿಂದೆ ಗ್ರಾಮಗಳಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗಳು ಇಂದಿಗೂ ಹೆಸರಾಗಿವೆ.

ಮಿತ್ರರೇ,

ಪ್ರಜಾಪ್ರಭುತ್ವ ವ್ಯವಸ್ಥೆ ಸಾವಿರಾರು ವರ್ಷಗಳ ಹಿಂದೆಯೇ ಬೆಳವಣಿಗೆಯಾಗಿತ್ತು ಎಂಬುದಕ್ಕೆ ಮತ್ತೊಂದು ಪ್ರಮುಖ ಸಾಕ್ಷ್ಯವಿದೆ. ಸಮಯದಲ್ಲಿಯೇ ಸಾರ್ವಜನಿಕ ಪ್ರತಿನಿಧಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುವ ಅಂಶಗಳ ಕುರಿತು ಕಲ್ಲಿನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಯಾವ ಸಾರ್ವಜನಿಕ ಪ್ರತಿನಿಧಿ ಅಥವಾ ಆತನ ಸಂಬಂಧಿಗಳು ತಮ್ಮ ಆಸ್ತಿಯ ವಿವರಗಳನ್ನು ಒದಗಿಸುವಲ್ಲಿ ವಿಫಲನಾಗುತ್ತಾರೋ ಅಂತಹವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿರಲಿಲ್ಲ. ಹಲವು ವರ್ಷಗಳ ಹಿಂದೆಯೇ ಚಾಲ್ತಿಯಲ್ಲಿದ್ದ ಅದರ ಬಗ್ಗೆ ಯೋಚಿಸಬೇಕಾಗಿದೆ, ಕಾಲದಲ್ಲೇ ಪ್ರಜಾಪ್ರಭುತ್ವ ಪರಂಪರೆಯ ಭಾಗವಾಗಿ ಅದನ್ನು ಸೇರಿಸಲಾಗಿದೆ ಮತ್ತು ಬಗ್ಗೆ ಸಮಾಲೋಚನೆಗಳನ್ನು ನಡೆಸಲಾಗಿದೆ.

ಮಿತ್ರರೇ,

ಪ್ರಜಾಪ್ರಭುತ್ವದ ಇತಿಹಾಸ ದೇಶದ ಮೂಲೆ ಮೂಲೆಗಳಲ್ಲೂ ಇರುವುದನ್ನು ನಾವು ಕಾಣಬಹುದಾಗಿದೆ. ಶಾಸನಸಭೆ, ಸಮಿತಿ, ಆಡಳಿತಗಾರ, ಸೇನಾ ಮುಖ್ಯಸ್ಥ ಮತ್ತಿತರ ಪದಗಳು ಅತ್ಯಂತ ಹೆಚ್ಚು ಜನಪ್ರಿಯವಾಗಿವೆ. ನಮ್ಮ ಮನಸ್ಸಿನಲ್ಲಿ ಆಳವಾಗಿ ಬೇರೂರಿವೆ. ಶತಮಾನಗಳ ಹಿಂದೆ ಶಕ್ಯ, ಮಲ್ಲ ಮತ್ತು ವೆಜ್ಜಿ ಅಥವಾ ಲಿಚ್ಚಾವಿ, ಮಲ್ಲಕ್ ಮಾರ್ಕಂಡ್ ಕಾಂಬೋಡಿಯಾ ಅಥವಾ ಮೌರ್ಯರ ಅವಧಿಯಲ್ಲಿ ಕಳಿಂಗ, ಇವೆಲ್ಲಾ ಗಣರಾಜ್ಯಗಳು ಆಡಳಿತಕ್ಕೆ ಪ್ರಜಾಪ್ರಭುತ್ವದ ಆಧಾರವನ್ನು ಹಾಕಿಕೊಟ್ಟಿರುವಂತಹವುಗಳು. ಸಾವಿರಾರು ವರ್ಷಗಳ ಹಿಂದೆ ರಚಿಸಲಾದ ನಮ್ಮ ವೇದಗಳಲ್ಲಿ ಸಾಮೂಹಿಕ ಪ್ರಜ್ಞೆಯೊಂದಿಗೆ ಪ್ರಜಾಪ್ರಭುತ್ವದ ತತ್ವವನ್ನು ಋಗ್ವೇದದಲ್ಲಿ ಕಾಣಬಹುದಾಗಿದೆ.  

ಮಿತ್ರರೇ,

ಎಲ್ಲೇ ಪ್ರಜಾಪ್ರಭುತ್ವದ ಬಗ್ಗೆ ನಾವು ಎಲ್ಲೇ ಚರ್ಚಿಸಿದರೂ ಅಲ್ಲಿ ಚುನಾವಣೆಗಳು, ಚುನಾವಣಾ ಪ್ರಕ್ರಿಯೆ, ಚುನಾಯಿತ ಸದಸ್ಯರು, ಅವರ ಆಡಳಿತದ ಬಗ್ಗೆ ಚರ್ಚಿಸುತ್ತೇವೆ. ಬಹುತೇಕ ಕಡೆ ಇದನ್ನು ಪ್ರಜಾಪ್ರಭುತ್ವ ಎನ್ನುತ್ತಾರೆ. ಆದರೆ ಬಗೆಯ ವ್ಯವಸ್ಥೆಗೆ ಒತ್ತು ನೀಡಬೇಕಾಗಿದೆ. ಆದರೆ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಜೀವನ ಮೌಲ್ಯಗಳಿವೆ. ಅದು ನಮ್ಮ ಜೀವನ ಕ್ರಮವಾಗಿದೆ ಮತ್ತು ರಾಷ್ಟ್ರದ ಆತ್ಮವಾಗಿದೆ. ಶತಮಾನಗಳ ಅನುಭವದಿಂದ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅದು ನಮ್ಮ ಜೀವನ ಮಂತ್ರವೂ ಆಗಿದೆ. ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜೀವನದ ಅಂಶಗಳಾಗಿವೆ, ಕಾಲ ಕಾಲಕ್ಕೆ ವ್ಯವಸ್ಥೆ ಮತ್ತು ಪ್ರಕ್ರಿಯೆ ಬದಲಾಗುತ್ತದೆ. ಆದರೆ ಪ್ರಜಾಪ್ರಭುತ್ವದ ಆತ್ಮ ಹಾಗೆಯೇ ಇರುತ್ತದೆ ಮತ್ತು ಕಾಕತಾಳೀಯವೆಂದರೆ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ನಮಗೆ ವಿವರಣೆ ನೀಡುತ್ತವೆ. ನಾವು ನಮ್ಮ ಪ್ರಜಾಪ್ರಭುತ್ವದ ಇತಿಹಾಸವನ್ನು ಹೆಮ್ಮೆಯಿಂದ ವೈಭವೀಕರಿಸಿದಾಗ, ವಿಶ್ವವೂ ಕೂಡ ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಹೇಳುವ ದಿನಗಳು ದೂರವಿಲ್ಲ.

ಮಿತ್ರರೇ,

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯ ದೇಶದ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ ಮತ್ತು ದೇಶವಾಸಿಗಳಿಗೆ ಹೊಸ ವಿಶ್ವಾಸ ಮೂಡಿಸಲಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ವಿಭಿನ್ನ ಪರಿಸ್ಥಿತಿಗಳು ಹುಟ್ಟಿಕೊಳ್ಳುತ್ತಿವೆ. ಭಾರತದ ಪ್ರಜಾಪ್ರಭುತ್ವದಲ್ಲಿ ನಿರಂತರವಾಗಿ ಆವಿಷ್ಕಾರಗಳನ್ನು ಮಾಡಲಾಗುತ್ತಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಲವು ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ನಾವು ನೋಡಿದ್ದೇವೆ. ಅಲ್ಲಿ ಮತದಾರರ ಮತದಾನ ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಿದೆ. ಅದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಪ್ರತಿಯೊಂದು ಚುನಾವಣೆಯಲ್ಲಿಯೂ ಮತದಾನದ ಪ್ರಮಾಣ ಹೆಚ್ಚಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮಹಿಳೆಯರು ಮತ್ತು ಯುವಕರ ಪಾಲ್ಗೊಳ್ಳುವಿಕೆ ಕೂಡ ನಿರಂತರವಾಗಿ ವೃದ್ಧಿಯಾಗುತ್ತಿದೆ.

ಮಿತ್ರರೇ,

ನಂಬಿಕೆ ಮತ್ತು ವಿಶ್ವಾಸದ ಹಿಂದೆ ಒಂದು ಕಾರಣವಿದೆ. ಭಾರತದಲ್ಲಿ ಪ್ರಜಾಪ್ರಭುತ್ವವೆಂದರೆ ಆಡಳಿತದ ಜೊತೆಗೆ ಭಿನ್ನಾಭಿಪ್ರಾಯಗಳು ಮತ್ತು ವೈರುಧ್ಯಗಳನ್ನು ಬಗೆಹರಿಸುವುದು ಎಂದರ್ಥ. ಭಿನ್ನ ಅಭಿಪ್ರಾಯಗಳು ಮತ್ತು ಆಯಾಮಗಳು ಪ್ರಜಾಪ್ರಭುತ್ವವನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುತ್ತವೆ. ನಮ್ಮ ಪ್ರಜಾಪ್ರಭುತ್ವ ಸದಾ ಭಿನ್ನ ಅಭಿಪ್ರಾಯಗಳಿಗೆ ಅವಕಾಶಗಳಿರುತ್ತವೆ ಎಂಬ ಗುರಿಯೊಂದಿಗೆ ಮುನ್ನಡೆಯುತ್ತಿದ್ದು, ಅದು ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹೊರಗಿರುವುದಿಲ್ಲ. ಗುರುನಾನಕ್ ದೇವ್ ಜಿ ಅವರು ಹೀಗೆ ಹೇಳಿದ್ದರು.  जब लगु दुनिआ रहीए नानक। किछु सुणिए, किछु कहिए. ಅಂದರೆ ಎಲ್ಲಿಯವರೆಗೂ ವಿಶ್ವವಿರುತ್ತದೆಯೋ ಅಲ್ಲಿಯವರೆಗೆ ಸಮಾಲೋಚನೆ ಮುಂದುವರಿಯಬೇಕು ಎಂದು, ಸಮಾಲೋಚನೆಯ ಆತ್ಮ ಅಭಿಪ್ರಾಯವನ್ನು ಕೇಳುವುದು ಮತ್ತು ಆಲಿಸುವುದು ಆಗಿದೆ. ಇದು ಪ್ರಜಾಪ್ರಭುತ್ವದ ಆತ್ಮವಾಗಿದೆ. ನೀತಿಗಳು ಮತ್ತು ರಾಜಕೀಯ ಭಿನ್ನವಾಗಿರಬಹುದು. ಆದರೆ ನಾವು ಜನರ ಸೇವೆಗೆ ಮತ್ತು ಅಂತಿಮ ಗುರಿಯ ಕುರಿತಂತೆ ಯಾವುದೇ ಭಿನ್ನಾಭಿಪ್ರಾಯಗಳಿರುವುದಿಲ್ಲ. ಸಂಸತ್ತಿನ ಒಳಗೆ ಅಥವಾ ಹೊರಗೆ ಎಲ್ಲಿ ಬೇಕಾದರೂ ಚರ್ಚೆ ನಡೆಯಬಹುದು. ರಾಷ್ಟ್ರೀಯ ಸೇವೆ ಮತ್ತು ಬದ್ಧತೆ ನಿಟ್ಟಿನಲ್ಲಿ ರಾಷ್ಟ್ರ ಹಿತಾಸಕ್ತಿ ಕುರಿತಂತೆ ಬದ್ಧತೆಯನ್ನು ಪುನರ್ ಬಿಂಬಿಸುತ್ತದೆ. ಆದ್ದರಿಂದ ಇಂದು ಸಂಸತ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ ವೇಳೆ ನಮ್ಮ ಸಂಸತ್ ಭವನದ ಇರುವಿಕೆಗೆ ಹೊಸ ಆಶಾವಾದವನ್ನು ಹುಟ್ಟುಹಾಕುತ್ತದೆ ಮತ್ತು ಆಧಾರವಾದ ಪ್ರಜಾಪ್ರಭುತ್ವದ ಹೊಣೆಗಾರಿಕೆಯಾಗಿದೆ. ಸಂಸತ್ತಿನ ಪ್ರತಿಯೊಬ್ಬ ಪ್ರತಿನಿಧಿಯೂ ಕೂಡ ಉತ್ತರದಾಯಿ ಆಗಿರಬೇಕು ಎಂಬುದನ್ನು ನಾವು ಸದಾ ನೆನಪಿಸಿಕೊಳ್ಳಬೇಕು. ಹೊಣೆಗಾರಿಕೆ ಜನರ ಕಡೆಗಿರಬೇಕು ಮತ್ತು ಸಂವಿಧಾನದ ಕಡೆ ಇರಬೇಕು. ನಾವು ಯಾವುದೇ ನಿರ್ಧಾರವನ್ನು ಕೈಗೊಂಡರೂ ಸಹ ಅದಕ್ಕೆ ರಾಷ್ಟ್ರ ಮೊದಲು ಎಂಬ ಸ್ಫೂರ್ತಿ ಇರಬೇಕು ಮತ್ತು ನಾವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರಗಳಲ್ಲಿಯೂ ರಾಷ್ಟ್ರೀಯ ಹಿತಾಸಕ್ತಿಯೇ ಅಗ್ರ ಆದ್ಯತೆಯಾಗಿರಬೇಕು. ರಾಷ್ಟ್ರೀಯ ಸಂಕಲ್ಪಗಳನ್ನು ಪೂರ್ಣಗೊಳಿಸಲು ನಾವು ಒಂದು ಧ್ವನಿಯಾಗಿ ನಿಲ್ಲಬೇಕಾದ್ದು ಅತ್ಯಂತ ಪ್ರಮುಖವಾಗಿದೆ.

ಮಿತ್ರರೇ,

ನಾವು ದೇವಾಲಯವನ್ನು ನಿರ್ಮಿಸಬೇಕಾದರೆ ಮೊದಲಿಗೆ ಅದರ ತಳಪಾಯವನ್ನು ಕೇವಲ ಇಟ್ಟಿಗೆ ಮತ್ತು ಕಲ್ಲಿನಿಂದ ಹಾಕುತ್ತೇವೆ. ಕಟ್ಟಡದ ನಿರ್ಮಾಣ ಕಾರ್ಯ ಪ್ರತಿಯೊಬ್ಬರೂ ಕರಕುಶಲಕರ್ಮಿಗಳು ಮತ್ತು ವಾಸ್ತುಶಿಲ್ಪಿಗಳು ಸೇರಿದಂತೆ ಎಲ್ಲರ ಕಠಿಣ ಶ್ರಮದಿಂದಾಗಿ ಪೂರ್ಣಗೊಳ್ಳಲಿದೆ. ಆದರೆ ಕಟ್ಟಡ ಪೂರ್ಣ ಪ್ರಮಾಣದಲ್ಲಿ ದೇಗುಲವಾಗುವುದು ಮತ್ತು ಸ್ಪಷ್ಟ ರೂಪ ತಳೆಯುವುದು ಅದು ಪವಿತ್ರವಾದಾಗ, ಅಲ್ಲಿಯವರೆಗೆ ಅದು ಕೇವಲ ಕಟ್ಟಡವಾಗಿಯೇ ಉಳಿಯಲಿದೆ.

ಮಿತ್ರರೇ,

ಸಂಸತ್ತಿನ ಹೊಸ ಕಟ್ಟಡ ಸಿದ್ಧವಾಗಲಿದೆ. ಆದರೆ ಅದು ಪವಿತ್ರವಾಗುವವರೆಗೆ ಅದು ಕೇವಲ ಕಟ್ಟಡವಾಗಿರಲಿದೆ. ಪವಿತ್ರಗೊಳ್ಳುವುದು ಮೂರ್ತಿಯನ್ನು ಪ್ರತಿಷ್ಠಾಪಿಸುವುದರಿಂದ ಅಲ್ಲ. ಪ್ರಜಾಪ್ರಭುತ್ವದ ದೇಗುಲವನ್ನು ಪವಿತ್ರಗೊಳಿಸುವ ಯಾವುದೇ ಸಂಪ್ರದಾಯಗಳು ಇಲ್ಲ. ದೇಗುಲಕ್ಕೆ ಬರುವ ಜನಪ್ರತಿನಿಧಿಗಳು ಅದನ್ನು ಪವಿತ್ರಗೊಳಿಸಬೇಕಿದೆ. ಅವರ ಬದ್ಧತೆ, ಅವರ ಸೇವೆ, ಅವರ ನಡವಳಿಕೆ, ಚಿಂತನೆ ಮತ್ತು ವರ್ತನೆ ದೇಗುಲಕ್ಕೆ ಜೀವ ತುಂಬಲಿದೆ. ಏಕತೆ ಮತ್ತು ಭಾರತದ ಸಮಗ್ರತೆಗೆ ಪ್ರಯತ್ನಗಳು ದೇವಾಲಯಕ್ಕೆ ಹೊಸ ಶಕ್ತಿ ತುಂಬಲಿವೆ. ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಯು ತನ್ನ ಜ್ಞಾನ, ಬುದ್ಧಿಶಕ್ತಿ, ಶಿಕ್ಷಣ ಹಾಗೂ ಅನುಭವವನ್ನು ರಾಷ್ಟ್ರದ ಹಿತಕ್ಕಾಗಿ ಸಂಪೂರ್ಣವಾಗಿ ಬಳಸಿದಾಗ ಹೊಸ ಸಂಸತ್ ಭವನಕ್ಕೆ ಒಂದು ಪಾವಿತ್ರ್ಯತೆ ದೊರಕಲಿದೆ.           ನಮ್ಮ ದೇಶದಲ್ಲಿ ರಾಜ್ಯಸಭೆ ರಾಜ್ಯಗಳನ್ನು ಪ್ರತಿನಿಧಿಸಲಿದ್ದು, ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡುತ್ತದೆ. ನಾವು ರಾಜ್ಯಗಳ ಅಭಿವೃದ್ಧಿಯ ಜೊತೆ ಜೊತೆಗೆ ರಾಷ್ಟ್ರದ ಅಭಿವೃದ್ಧಿಗೆ ಕೆಲಸ ಮಾಡುವ ಮೂಲ ತತ್ವವನ್ನು ಪಾಲಿಸುವ ಪಣ ತೊಡಬೇಕಿದೆ. ರಾಜ್ಯಗಳ ಶಕ್ತಿಯೇ ರಾಷ್ಟ್ರದ ಶಕ್ತಿಯಾಗಲಿದೆ ಮತ್ತು ರಾಜ್ಯಗಳ ಕಲ್ಯಾಣವೇ ರಾಷ್ಟ್ರದ ಕಲ್ಯಾಣವಾಗಲಿದೆ. ಭವಿಷ್ಯದಲ್ಲಿ ಇಲ್ಲಿಗೆ ಬಂದು ಪ್ರಮಾಣವಚನ ಸ್ವೀಕರಿಸಲಿರುವ ಜನಪ್ರತಿನಿಧಿಗಳ ಬದ್ಧತೆಯ ಕೊಡುಗೆ ಇಲ್ಲಿಂದ ಆರಂಭವಾಗಲಿದೆ. ಇದರಿಂದ ದೇಶದ ಕೋಟ್ಯಾಂತರ ಜನರಿಗೆ ಅನುಕೂಲವಾಗಲಿದೆ. ಹೊಸ ಸಂಸತ್ ಕಟ್ಟಡ ದೇಶವಾಸಿಗಳ ಜೀವನದಲ್ಲಿ ಸಂತೋಷವನ್ನು ತರುವ ಮತ್ತು ಜನರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವ ಸ್ಥಳವಾಗಲಿದೆ.  

ಮಿತ್ರರೇ,

ನಮ್ಮ ದೇಶದ ಶ್ರೇಷ್ಠ ಮಹಿಳೆಯರು ಮತ್ತು ಪುರುಷರ ಕನಸು 21ನೇ ಶತಮಾನ ಭಾರತದ ಶತಮಾನವಾಗಬೇಕು ಎಂಬುದಾಗಿದೆ. ದೀರ್ಘ ಕಾಲದಿಂದಲೂ ನಾವು ಇದನ್ನು ಕೇಳುತ್ತಿದ್ದೇವೆ. ಪ್ರತಿಯೊಬ್ಬ ಪ್ರಜೆಯೂ ಭಾರತವನ್ನು ಉತ್ತಮವಾಗಿಸಲು ಕೊಡುಗೆ ನೀಡಿದಾಗ ಮಾತ್ರ 21ನೇ ಶತಮಾನ ಭಾರತದ ಶತಮಾನವಾಗಲಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶಗಳು ದೊರಕುತ್ತಿವೆ. ಕೆಲವೊಮ್ಮೆ ಪ್ರವಾಹದ ರೀತಿ ಅವಕಾಶಗಳು ಸೃಷ್ಟಿಯಾಗುತ್ತವೆ. ಯಾವುದೇ ಸಂದರ್ಭದಲ್ಲಿ ನಮ್ಮ ಕೈಯಿಂದ ಇಂತಹ ಅವಕಾಶಗಳು ಕೈ ತಪ್ಪದಂತೆ ನಾವು ನೋಡಿಕೊಳ್ಳಬೇಕಿದೆ. ಕಳೆದ ಶತಮಾನದ ಅನುಭವ ನಮಗೆ ಸಾಕಷ್ಟು ಪಾಠ ಕಲಿಸಿದೆ. ಅನುಭವಗಳು ನಮಗೆ ಯಾವುದೇ ಕಾರಣಕ್ಕೂ ಅವುಗಳನ್ನು ವ್ಯರ್ಥಗೊಳಿಸಬಾರದು, ಕಾಲಕ್ಕೆ ಗೌರವ ನೀಡಬೇಕು ಎಂಬುದನ್ನು ಪದೇ ಪದೇ ನೆನಪಿಸುತ್ತವೆ.

ಮಿತ್ರರೇ,

ಇಂದು ನಾನು ಅತ್ಯಂತ ಪ್ರಮುಖ ಮತ್ತು ಹಳೆಯ ಸಂಗತಿಯನ್ನು ಉಲ್ಲೇಖಿಸಲು ಬಯಸುತ್ತೇನೆ. 1897ರಲ್ಲಿ ಸ್ವಾಮಿ ವಿವೇಕಾನಂದ ಜಿ ಅವರು ದೇಶದ ಜನತೆಗೆ ಮುಂದಿನ 50 ವರ್ಷಗಳಿಗೆ ಕರೆ ನೀಡಿದ್ದರು. ಸ್ವಾಮಿ ಜಿ ಮುಂದಿನ 50 ವರ್ಷಗಳ ಕಾಲ ಭಾರತ ಮಾತೆಯನ್ನು ಪೂಜಿಸುವುದು ಅಗ್ರ ಆದ್ಯತೆಯಾಗಬೇಕು ಎಂದು ಹೇಳಿದ್ದರು ಮತ್ತು ಭಾರತ ಮಾತೆಯನ್ನು ಪೂಜಿಸುವುದು ದೇಶವಾಸಿಗಳ ಕರ್ತವ್ಯವಾಗಿದೆ ಮತ್ತು ನಾವು ಶ್ರೇಷ್ಠ ವ್ಯಕ್ತಿಯ ಭಾಷಣದ ಶಕ್ತಿಯನ್ನು ಕಂಡಿದ್ದೇವೆ. ಕೇವಲ 50 ವರ್ಷಗಳ ನಂತರ ಭಾರತ 1947ರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಇಂದು ನಾವು ಸಂಸತ್ತಿನ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿರುವ ಸಂದರ್ಭದಲ್ಲಿ ದೇಶ ಕೂಡ ಹೊಸ ಸಂಕಲ್ಪಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕಿದೆ. ಪ್ರತಿಯೊಬ್ಬ ಪ್ರಜೆಯೂ ಹೊಸ ಸಂಕಲ್ಪಕ್ಕಾಗಿ ಶಂಕುಸ್ಥಾಪನೆ ನೆರವೇರಿಸಬೇಕಿದೆ. ಸ್ವಾಮಿ ವಿವೇಕಾನಂದ ಜಿ ಅವರ ಕರೆಯನ್ನು ಸ್ಮರಿಸುತ್ತಾ ನಾವು ಪಣತೊಡಬೇಕಿದೆ. ಭಾರತ ಮೊದಲು, ಎನ್ನುವುದು ನಮ್ಮ ಸಂಕಲ್ಪವಾಗಬೇಕು. ನಾವು ಭಾರತದ ಪ್ರಗತಿ ಮತ್ತು ಅಭಿವೃದ್ಧಿಯನ್ನು ನಾವು ಆರಾಧಿಸಬೇಕಿದೆ. ನಮ್ಮ ಪ್ರತಿಯೊಂದು ನಿರ್ಧಾರಗಳು ದೇಶವನ್ನು ಸಬಲೀಕರಣಗೊಳಿಸಬೇಕು. ದೇಶದ ಹಿತಾಸಕ್ತಿಯು ನಮ್ಮ ಪ್ರತಿಯೊಂದು ನಿರ್ಧಾರಗಳ ಮಾಪಕ ಆಗಿರಬೇಕು. ನಮ್ಮ ಪ್ರತಿಯೊಂದು ನಿರ್ಧಾರಗಳು ಹಾಲಿ ಹಾಗೂ ಭವಿಷ್ಯದ ಪೀಳಿಗೆಯ ಹಿತಾಸಕ್ತಿಯನ್ನು ಹೊಂದಿರಬೇಕು.

ಮಿತ್ರರೇ,

ಸ್ವಾಮಿ ವಿವೇಕಾನಂದರು 50 ವರ್ಷಗಳ ಹಿಂದೆ ಮಾತನಾಡಿದ್ದರು. ನಾವು 25-26 ವರ್ಷಗಳ ನಂತರ ಭಾರತದ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದೇವೆ. ನಾವು ಇಂದು ಸಂಕಲ್ಪ ಮಾಡಬೇಕಿದೆ ಮತ್ತು ಮುಂದಿನ 25-26 ವರ್ಷಗಳಿಗಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕಿದೆ. 2047ಕ್ಕೆ ದೇಶ 100ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ನಾವು ಹೇಗೆ ದೇಶವನ್ನು ಮುಂದೆ ಕೊಂಡೊಯ್ಯಬೇಕು ಎಂಬ ಕುರಿತು ಸಂಕಲ್ಪ ಮಾಡಬೇಕಿದೆ. ನಾವು ಇಂದು ಕೈಗೊಳ್ಳುವ ನಿರ್ಣಯದಲ್ಲಿ ದೇಶದ ಹಿತಾಸಕ್ತಿಗೆ ಅಗ್ರ ಆದ್ಯತೆ ನೀಡಬೇಕು. ದೇಶದ ಭವಿಷ್ಯವನ್ನು ಸುಧಾರಿಸಬೇಕು. ಸ್ವಾವಲಂಬಿ ಭಾರತ ನಿರ್ಮಾಣ ಮಾಡಬೇಕು, ಸಮೃದ್ಧ ಭಾರತ ನಿರ್ಮಾಣ ಮಾಡಬೇಕು. ದೇಶದ ಅಭಿವೃದ್ಧಿಯನ್ನು ಯಾರೊಬ್ಬರೂ ತಡೆಯಲು ಸಾಧ್ಯವಿಲ್ಲ.

ಮಿತ್ರರೇ,

ನಮಗೆ ರಾಷ್ಟ್ರದ ಹಿತಾಸಕ್ತಿಗಿಂತ ಬೇರೆ ಯಾವ ಹಿತಾಸಕ್ತಿಯೂ ಇಲ್ಲ ಎಂದು ನಾವು ಪಣತೊಡಬೇಕಿದೆ. ದೇಶದ ಬಗೆಗಿನ ನಮ್ಮ ಕಾಳಜಿ, ನಮ್ಮ ವೈಯಕ್ತಿಕ ಕಾಳಜಿಗಿಂತ ದೊಡ್ಡದು ಎಂದು ನಾವು ಪಣತೊಡಬೇಕಿದೆ. ದೇಶದ ಏಕತೆ ಮತ್ತು ಸಮಗ್ರತೆಗಿಂತ ಮುಖ್ಯವಾದುದು ಯಾವುದೂ ಇಲ್ಲ ಎಂದು ನಾವು ಪಣತೊಡಬೇಕಿದೆ. ನಮ್ಮ ಜೀವನದ ಅತಿ ದೊಡ್ಡ ಗುರಿ ಎಂದರೆ ದೇಶದ ಸಂವಿಧಾನದ ಘನತೆ ಮತ್ತು ನಿರೀಕ್ಷೆಗಳನ್ನು ಖಾತ್ರಿಪಡಿಸಬೇಕಾಗಿದೆ ಎಂದು ನಾವು ಪಣತೊಡಬೇಕಾಗಿದೆ. ನಾವು ಸದಾ ಗುರುದೇವ್ ರವೀಂದ್ರನಾಥ ಠ್ಯಾಗೂರ್ ಅವರಿಂದ ಸ್ಫೂರ್ತಿ ಪಡೆಯಬೇಕಿದೆ. ಗುರುದೇವ್ ರವೀಂದ್ರನಾಥ ಠ್ಯಾಗೂರ್ ಅವರ ಸ್ಫೂರ್ತಿ ಏನು ? ಗುರುದೇವ ಅವರು ಹೀಗೆ ಹೇಳುತ್ತಿದ್ದರು - एकोता उत्साहो धॉरो, जातियो उन्नॉति कॉरो, घुशुक भुबॉने शॉबे भारोतेर जॉय! ನಾವು ಏಕತೆಯ ಅತ್ಯುತ್ಸಾಹವನ್ನು ಮುಂದುವರಿಸಬೇಕಿದೆ. ಪ್ರತಿಯೊಬ್ಬ ಪ್ರಜೆಯೂ ಏಳಿಗೆ ಹೊಂದಬೇಕು. ಭಾರತವನ್ನು ವಿಶ್ವದಾದ್ಯಂತ ಪ್ರಶಂಸುವಂತಾಗಬೇಕು.

ಸಂಸತ್ತಿನ ಹೊಸ ಕಟ್ಟಡ ಹೊಸ ಮಾದರಿಯನ್ನು ಪ್ರಸ್ತುಪಡಿಸಲು ನಮ್ಮೆಲ್ಲರಿಗೂ ಪ್ರೇರಣೆ ನೀಡಲಿದೆ ಎಂಬ ಭರವಸೆ ನನಗಿದೆ. ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ವಿಶ್ವಾಸಾರ್ಹತೆ ಸದಾ ಬಲವರ್ಧನೆಗೊಳ್ಳಲಿ. ಆಶಯದೊಂದಿಗೆ ನಾನು ಭಾಷಣವನ್ನು ಸಮಾಪ್ತಿಗೊಳಿಸುತ್ತೇನೆ ಮತ್ತು 2047 ಅನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಪಣ ತೊಡುವತ್ತ ಮುಂದಾಗಬೇಕು ಎಂದು ನನ್ನೆಲ್ಲಾ ದೇಶವಾಸಿಗಳನ್ನು ಆಹ್ವಾನಿಸುತ್ತೇನೆ.

ನಿಮ್ಮೆಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು.

ಘೋಷಣೆ: ಪ್ರಧಾನಮಂತ್ರಿ ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು. ಇದು ಅದರ ಅಂಶಗಳನ್ನಾಧರಿಸಿದ ಅನುವಾದ.

***



(Release ID: 1680694) Visitor Counter : 799