ಸಂಪುಟ ಕಾರ್ಯಾಲಯ
ಕೇಂದ್ರ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ಸಭೆ
ಸಂಭಾವ್ಯ ಚಂಡಮಾರುತ ಎದುರಿಸಲು ದಕ್ಷಿಣದ ಕರಾವಳಿ ರಾಜ್ಯಗಳು ಮತ್ತು ಸಚಿವಾಲಯಗಳ ಸಿದ್ಧತೆ ಕುರಿತು ಚರ್ಚೆ
ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿಯ ಮುಖ್ಯ ಕಾರ್ಯದರ್ಶಿಗಳಿಂದ ಸಿದ್ಧತೆಯ ಬಗ್ಗೆ ಮಾಹಿತಿ
ಪ್ರಕಟಣಾ ದಿನಾಂಕ:
23 NOV 2020 3:12PM by PIB Bengaluru
ಕೇಂದ್ರ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರ ಅಧ್ಯಕ್ಷತೆಯಲ್ಲಿ ಇಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ (ಎನ್ಸಿಎಂಸಿ) ಸಭೆ ನಡೆಯಿತು. ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿಯ ಮುಖ್ಯ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಸಂಭಾವ್ಯ ಚಂಡಮಾರುತವನ್ನು ಎದುರಿಸಲು ಸಿದ್ಧತೆಗಳನ್ನು ಪರಿಶೀಲಿಸಿದರು.
ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿಯ ಮುಖ್ಯ ಕಾರ್ಯದರ್ಶಿಗಳು ಎನ್ಸಿಎಂಸಿಗೆ ತಮ್ಮ ಸನ್ನದ್ಧತೆಯ ಬಗ್ಗೆ ಮಾಹಿತಿ ನೀಡಿದರು. ಯಾವುದೇ ಸಂಭವನೀಯತೆಯನ್ನು ಎದುರಿಸಲು ಆಡಳಿತ ಸಂಪೂರ್ಣ ಸಿದ್ಧವಾಗಿದೆ ಎಂದು ತಿಳಿಸಿದರು. ಈ ಸವಾಲನ್ನು ಎದುರಿಸಲು ಎನ್ಡಿಆರ್ಎಫ್ ಮತ್ತು ಇತರ ಏಜೆನ್ಸಿಗಳೊಂದಿಗಿನ ಸಮನ್ವಯದ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಭಾರತ ಹವಾಮಾನ ಇಲಾಖೆಯ ಮಹಾನಿರ್ದೇಶಕರು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದರು. ಸಂಭಾವ್ಯ ಚಂಡಮಾರುತವು 2020 ರ ನವೆಂಬರ್ 24 ರಿಂದ 26 ರವರೆಗೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.
ನಾವೆಲ್ಲರೂ ಯಾವುದೇ ಪ್ರಾಣಹಾನಿಯಾಗದಂತೆ ಮತ್ತು ಸಂತ್ರಸ್ತ ಪ್ರದೇಶಗಳಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಸಂಪುಟ ಕಾರ್ಯದರ್ಶಿ ಹೇಳಿದರು. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸಲಹೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಅವರು ತಿಳಿಸಿದರು. ‘ಕಚ್ಚಾ’ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಸೂಚನೆ ನೀಡಬಹುದು ಎಂದರು.
ಗೃಹ, ವಿದ್ಯುತ್, ದೂರಸಂಪರ್ಕ, ನಾಗರಿಕ ವಿಮಾನಯಾನ, ಸಾಗಣೆ, ಆರೋಗ್ಯ ಸಚಿವಾಲಯಗಳ ಕಾರ್ಯದರ್ಶಿಗಳು, ರೈಲ್ವೆ ಮಂಡಳಿ ಅಧ್ಯಕ್ಷರು, ಎನ್ಡಿಎಂಎ ಸದಸ್ಯ ಕಾರ್ಯದರ್ಶಿ, ಎನ್ಡಿಆರ್ಎಫ್ ಮಹಾನಿರ್ದೇಶಕರು ಮತ್ತು ರಕ್ಷಣಾ ಸಚಿವಾಲಯದ ಪ್ರತಿನಿಧಿಗಳು ಸಂಬಂಧಪಟ್ಟ ರಾಜ್ಯಗಳಿಗೆ ವ್ಯವಸ್ಥೆ ಮತ್ತು ನೆರವು ಕುರಿತು ಎನ್ಸಿಎಂಸಿಗೆ ಮಾಹಿತಿ ನೀಡಿದರು.
***
(ಪ್ರಕಟಣೆ ಐ.ಡಿ.: 1675084)
ವಿಸಿಟರ್ ಕೌಂಟರ್ : 613