ಪ್ರಧಾನ ಮಂತ್ರಿಯವರ ಕಛೇರಿ

ಕಟಕ್ ನಲ್ಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ)ಯ ಅತ್ಯಾಧುನಿಕ ಕಚೇರಿ ಮತ್ತು ವಸತಿ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

Posted On: 11 NOV 2020 7:01PM by PIB Bengaluru

ಜೈ ಜಗನ್ನಾಥ್

ಒಡಿಶಾ ಮುಖ್ಯಮಂತ್ರಿ ಮತ್ತು ನನ್ನ ಹಿರಿಯ ಸಹೋದ್ಯೋಗಿ ಶ್ರೀ ನವೀನ್ ಪಟ್ನಾಯಕ್ ಜಿ,  ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ರವಿಶಂಕರ ಪ್ರಸಾದ್ ಜಿ, ಒಡಿಶಾದ ಮಣ್ಣಿನ ಮಗ ಮತ್ತು ನನ್ನ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಧರ್ಮೇಂದ್ರ ಪ್ರಧಾನ್ ಜಿ, ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣದ ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿ ಪಿ.ಪಿ. ಭಟ್ ಜಿ, ಒಡಿಶಾ ಸಂಸದರು, ಶಾಸಕರು ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಮಿತ್ರರೇ,

        ಜಗನ್ನಾಥ ದೇವರ ಆಶೀರ್ವಾದದಿಂದಾಗಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ (ಐಟಿಎಟಿ)ಯ ಕಟಕ್ ಪೀಠ ಇಂದು ತನ್ನ ಹೊಸ ಮತ್ತು ಆಧುನಿಕ ಸಂಕೀರ್ಣಕ್ಕೆ ವರ್ಗಾವಣೆಗೊಳ್ಳುತ್ತಿದೆ. ದೀರ್ಘಕಾಲದಿಂದ ಬಾಡಿಗೆ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಾಧೀಕರಣ ಇದೀಗ ಹೊಸ ಸಂಕೀರ್ಣಕ್ಕೆ ವರ್ಗಾವಣೆಯಾಗುತ್ತಿರುವ ಖುಷಿಯನ್ನು ನಿಮ್ಮೆಲ್ಲರ ಮುಖದಲ್ಲೂ ನಾನು ಕಾಣುತ್ತಿದ್ದೇನೆ. ನಿಮ್ಮ ಈ ಸಂತೋಷದ ಕ್ಷಣಗಳಲ್ಲಿ ಭಾಗಿಯಾಗಿ ನಾನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ  ಅಭಿನಂದಿಸುತ್ತೇನೆ ಮತ್ತು ಶುಭಾಶಯಗಳನ್ನು ಕೋರುತ್ತೇನೆ. ಕಟಕ್ ನ ಈ ಪೀಠ, ಒಡಿಶಾದ ಲಕ್ಷಾಂತರ ತೆರಿಗೆ ಪಾವತಿದಾರರಿಗೆ ಆಧುನಿಕ ಸೌಲಭ್ಯಗಳನ್ನಷ್ಟೇ ಒದಗಿಸುತ್ತಿಲ್ಲ. ದೇಶದ ಪೂರ್ವ ಮತ್ತು ಈಶಾನ್ಯ ಭಾಗಕ್ಕೂ ಸೌಕರ್ಯವನ್ನು ಒದಗಿಸುತ್ತಿದೆ. ಈ ನ್ಯಾಯಮಂಡಳಿ ಹೊಸ ಸೌಕರ್ಯಗಳ ನಂತರ ಕೋಲ್ಕತ್ತಾ ವಲಯದ ಇತರ ಪೀಠಗಳಲ್ಲಿರುವ ಬಾಕಿ ಮೇಲ್ಮನವಿಗಳನ್ನೂ ಸಹ ಇತ್ಯರ್ಥಪಡಿಸಲಿವೆ. ಆದ್ದರಿಂದ ಈ ಹೊಸ ಸಂಕೀರ್ಣದ ಪ್ರಯೋಜನ ಪಡೆಯಲಿರುವ ಎಲ್ಲ ತೆರಿಗೆ ಪಾವತಿದಾರರಿಗೆ ನಾನು ಶುಭಾಶಯಗಳನ್ನು ಕೋರುತ್ತೇನೆ ಮತ್ತು ಇದರಿಂದಾಗಿ ಮೇಲ್ಮನವಿಗಳ ಶೀಘ್ರ ವಿಚಾರಣೆಗೆ ಅವಕಾಶವಾಗಲಿದೆ.

ಮಿತ್ರರೇ,

        ಇಂದು ಶ್ರದ್ಧೆಯಿಂದ ಆ ಆತ್ಮವನ್ನು ಸ್ಮರಿಸಬೇಕಾದ ದಿನ. ಏಕೆಂದರೆ ಅವರ ಪ್ರಯತ್ನ ಇಲ್ಲದಿದ್ದರೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣದ ಕಟಕ್ ನ ಪೀಠ ಇಂತಹ ರೂಪ ಪಡೆದುಕೊಳ್ಳುತ್ತಿರಲಿಲ್ಲ. ಒಡಿಶಾಕ್ಕೆ ಮತ್ತು ಜನರ ಸೇವೆಗೆ ಬದ್ಧವಾಗಿದ್ದ ಬಿಜು ಪಟ್ನಾಯಕ್ ಅವರಿಗೆ ನಾನು ನಮನಗಳನ್ನು ಸಲ್ಲಿಸುತ್ತೇನೆ.  

ಮಿತ್ರರೇ,

ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣಕ್ಕೆ ವೈಭವದ ಇತಿಹಾಸವಿದೆ. ದೇಶಾದ್ಯಂತ ಆಧುನಿಕ ಮೂಲಸೌಕರ್ಯ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಸದ್ಯದ ತಂಡವನ್ನು ನಾನು ಅಭಿನಂದಿಸುತ್ತೇನೆ. ಕಟಕ್ ಗೂ ಮುನ್ನ ಬೆಂಗಳೂರು ಮತ್ತು ಜೈಪುರ ಪೀಠಗಳ ಸ್ವಂತದ ಹೊಸ ಸಂಕೀರ್ಣಗಳೂ ಕೂಡ ಸಜ್ಜಾಗಿವೆ ಎಂಬುದನ್ನು ಕೇಳಿದ್ದೇನೆ. ಇತರೆ ನಗರಗಳಲ್ಲೂ ಕೂಡ ಹಳೆಯ ಕಟ್ಟಡಗಳ ಉನ್ನತೀಕರಣ ಅಥವಾ ಹೊಸ ಸಂಕೀರ್ಣಗಳ ನಿರ್ಮಾಣ ಕಾರ್ಯದಲ್ಲಿ ನೀವು ತೊಡಗಿದ್ದೀರಿ.

ಮಿತ್ರರೇ,

ಇಂದಿನ ತಾಂತ್ರಿಕ ಯುಗದಲ್ಲಿ ನಾವು ಇಡೀ ವ್ಯವಸ್ಥೆಯನ್ನು ಉನ್ನತೀಕರಿಸುವುದು ಅತ್ಯಂತ ಪ್ರಮುಖವಾಗಿ ಆಗಬೇಕಿದೆ.  ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಧುನಿಕತೆ ಮತ್ತು  ತಂತ್ರಜ್ಞಾನದ ಹೆಚ್ಚಿನ ಬಳಕೆ ದೇಶದ ನಾಗರಿಕರಿಗೆ ಹಲವು ವಿಧದಲ್ಲಿ ಸುಲಭಗೊಳಿಸಿದೆ. ನ್ಯಾಯಯುತವಾಗಿ, ಸುಲಭವಾಗಿ ಮತ್ತು ತ್ವರಿತ ನ್ಯಾಯದಾನದ ಆದರ್ಶಗಳನ್ನು ನೀವು ಪಾಲಿಸುತ್ತಿದ್ದು, ಆಧುನಿಕ ಸೌಕರ್ಯಗಳು ಮತ್ತು ತಾಂತ್ರಿಕ ಪರಿಹಾರಗಳಿಂದ ಅವು ಇನ್ನಷ್ಟು ಸಬಲೀಕರಣಗೊಳ್ಳಲಿವೆ. ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ, ದೇಶಾದ್ಯಂತ ತನ್ನೆಲ್ಲಾ ಪೀಠಗಳನ್ನು ವರ್ಚುವಲ್ ವಿಚಾರಣೆಗೆ ಉನ್ನತೀಕರಿಸುತ್ತಿರುವುದು ತೃಪ್ತಿದಾಯಕ ವಿಚಾರ. ಶ್ರೀ ಪಿ.ಪಿ. ಭಟ್ ಅವರು ಹೇಳಿದಂತೆ ವರ್ಚುವಲ್ ವಿಚಾರಣೆಯ ಬಹುದೊಡ್ಡ ಕಾರ್ಯ ಈ ಕೊರೊನಾ ಸಮಯದಲ್ಲಿ ಘಟಿಸಿದೆ ಮತ್ತು ರವಿಶಂಕರ್ ಜಿ ಅವರು ಇಡೀ ದೇಶದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.

ಮಿತ್ರರೇ,

ತೆರಿಗೆ ಪಾವತಿದಾರ ಮತ್ತು ತೆರಿಗೆ ಸಂಗ್ರಹಕಾರರ ನಡುವೆ ಅತ್ಯಂತ ದೀರ್ಘಕಾಲ ದೌರ್ಜನ್ಯಕ್ಕೆ ಒಳಗಾದವರು ಮತ್ತು ದೌರ್ಜನ್ಯ ಮಾಡುವವರು ಎಂಬ ಗುಲಾಮಗಿರಿ ಬೆಳೆದುಬಿಟ್ಟಿತ್ತು. ದುರದೃಷ್ಟಕರ ಸಂಗತಿ ಎಂದರೆ ಸ್ವಾತಂತ್ರ್ಯಾ ನಂತರ ನಾವು ತೆರಿಗೆ ವ್ಯವಸ್ಥೆಯ ಸ್ವರೂಪ ಬದಲಿಸಲು ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ. ಆದರೆ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ತೆರಿಗೆ ಪ್ರಾಮುಖ್ಯತೆ ಮತ್ತು ವಹಿವಾಟಿನಲ್ಲಿ ಅತ್ಯಂತ ಆರೋಗ್ಯಕರ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದೆ. ಗೋಸ್ವಾಮಿ ತುಳಸಿದಾಸ್ ಅವರು, ಹೀಗೆ ಹೇಳಿದ್ದಾರೆ.

बरसत हरसत सब लखें, करसत लखे कोय

तुलसी प्रजा सुभाग से, भूप भानु सो होय’

ಅದರ ಅರ್ಥ, ಮೋಡಗಳು ಮಳೆ ಸುರಿಸಿದರೆ ಅದರ ಪ್ರಯೋಜನ ಎಲ್ಲರಿಗೂ ಕಾಣಿಸುತ್ತದೆ. ಆದರೆ ಮೋಡಗಳು ದಟ್ಟೈಸಿ ಕೂಡಿಕೊಂಡಾಗ, ಸೂರ್ಯ ನೀರನ್ನು ಹೀರಿಕೊಳ್ಳುತ್ತಾನೆ. ಆದರೆ ಇದು ಯಾರೊಬ್ಬರಿಗೂ ಅರ್ಥವಾಗುವುದಿಲ್ಲ. ಅದೇ ರೀತಿ ಸರ್ಕಾರವೂ ಕೂಡ ಅದೇ ರೀತಿ ಇರಬೇಕು. ತೆರಿಗೆಗಳನ್ನು ಸಂಗ್ರಹಿಸಿದಾಗ ಸಾಮಾನ್ಯ ಜನರಿಗೆ ಅದರಿಂದ ತೊಂದರೆಯಾಗಬಾರದು. ಆದರೆ ಅದೇ ಹಣ ನಾಗರಿಕರಿಗೆ ತಲುಪಿದಾಗ ಜನರು, ಅದು ತಮ್ಮ ಜೀವನಕ್ಕೆ ಪ್ರಯೋಜನವಾಯಿತು ಎಂದು ಭಾವಿಸುವಂತಾಗಬೇಕು. ಕೆಲವು ವರ್ಷಗಳಿಂದೀಚೆಗೆ ಸರ್ಕಾರ ಈ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿದೆ.

ಮಿತ್ರರೇ,

        ಇಂದು ತೆರಿಗೆ ಪಾವತಿದಾರರು ಒಟ್ಟಾರೆ ತೆರಿಗೆ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಯನ್ನು ಮತ್ತು ಪಾರದರ್ಶಕತೆಯನ್ನು ಕಾಣುತ್ತಿದ್ದಾರೆ. ಮರುಪಾವತಿಗಾಗಿ ತಿಂಗಳುಗಟ್ಟಲೆ ಕಾಯಬೇಕಿಲ್ಲ. ಕೆಲವೇ ವಾರಗಳಲ್ಲಿ ತೆರಿಗೆ ಮರುಪಾವತಿಯಾಗುತ್ತದೆ. ಪಾರದರ್ಶಕತೆಯೂ ಕೂಡ ಅವರ ಅನುಭವಕ್ಕೆ ಬಂದಿದೆ. ಇಲಾಖೆಯೇ ಒಂದು ಹೆಜ್ಜೆ ಮುಂದೆ ಹೋಗಿ ಹಳೆಯ ವ್ಯಾಜ್ಯಗಳನ್ನು ತಾನೇ ಬಗೆಹರಿಸಲು ಮತ್ತು ವ್ಯಾಜ್ಯಗಳಿಂದ ಮುಕ್ತವಾಗಲು ಸಂಕಲ್ಪ ಮಾಡಿದ್ದು, ಜನರು ಪಾರದರ್ಶಕತೆಯನ್ನು ಕಾಣುತ್ತಿದ್ದಾರೆ. ತೆರಿಗೆದಾರರು ಮುಖಾಮುಖಿ ರಹಿತ ಮೇಲ್ಮನವಿ ವಿಚಾರಣೆ ಸೌಕರ್ಯವನ್ನು ಪಡೆಯುತ್ತಿದ್ದು, ಅವರಿಗೆ ತೆರಿಗೆ ಪಾರದರ್ಶಕತೆಯ ಹೆಚ್ಚಿನ ಅರಿವಾಗುತ್ತಿದೆ. ಆದಾಯ ತೆರಿಗೆ ನಿರಂತರವಾಗಿ ಇಳಿಕೆಯಾಗುತ್ತಿರುವುದರಿಂದ ಹೆಚ್ಚಿನ ಪಾರದರ್ಶಕತೆಯನ್ನು ಅವರು ಸಾಕ್ಷೀಕರಿಸುತ್ತಿದ್ದಾರೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ತೆರಿಗೆ ಭಯೋತ್ಪಾದನೆ ದೂರುಗಳು ಬರುತ್ತಿದ್ದವು. ತೆರಿಗೆ ಭಯೋತ್ಪಾದನೆ ಪದವನ್ನು ಎಲ್ಲೆಡೆಯೂ ಕೇಳುತ್ತಿದ್ದೆವು. ಇಂದು ದೇಶ ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯತ್ತ ಸಾಗಿದೆ. ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯಡೆಗಿನ ಈ ಬದಲಾವಣೆಯಾಗಲು ಕಾರಣ ನಾವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಮನೋಭಾವದಿಂದ ಮುನ್ನಡೆಯುತ್ತಿರುವುದು. ತಂತ್ರಜ್ಞಾನದ ಗರಿಷ್ಠ ಸಹಾಯದಿಂದ ನಿಯಮ ಮತ್ತು ನಿಬಂಧನೆಗಳಲ್ಲಿ ಭಾರೀ ಸುಧಾರಣೆಗಳನ್ನು ತರುತ್ತಿದ್ದೇವೆ. ನಾವು ಅತ್ಯಂತ ಸ್ಪಷ್ಟ ಆತ್ಮಸಾಕ್ಷಿ ಮತ್ತು ಸ್ಪಷ್ಟ ಗುರಿಗಳೊಂದಿಗೆ ಸಾಧನೆ ಮಾಡುತ್ತಿದ್ದು,  ತೆರಿಗೆ ಆಡಳಿತದ ಮನಸ್ಥಿತಿಯನ್ನು ನಾವು ಬದಲಾಯಿಸುತ್ತಿದ್ದೇವೆ.

ಮಿತ್ರರೇ,

        ದೇಶದಲ್ಲಿ ಇಂದು 5 ಲಕ್ಷ ರೂ.ಗಳ ವರೆಗೆ ಶೂನ್ಯ ಆದಾಯ ತೆರಿಗೆ ಇದೆ. ಇಂದು ಕೆಳ ಮಧ್ಯಮ ವರ್ಗದ ಯುವಕರು ಇದರಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಈ ವರ್ಷದ ಬಜೆಟ್ ನಲ್ಲಿ ನೀಡಿರುವ ಆದಾಯ ತೆರಿಗೆಯ ಹೊಸ ಆಯ್ಕೆ ಅತ್ಯಂತ ಸರಳವಾಗಿದೆ ಮತ್ತು ತೆರಿಗೆ ಪಾವತಿದಾರರನ್ನು ಅನಗತ್ಯ ಒತ್ತಡ ಮತ್ತು ಖರ್ಚು ಮಾಡುವುದನ್ನು ಉಳಿತಾಯ ಮಾಡುತ್ತದೆ. ಅದೇ ರೀತಿ ಅಭಿವೃದ್ಧಿಯ ವೇಗವನ್ನು ಚುರುಕುಗೊಳಿಸಲು ಮತ್ತು ಭಾರತವನ್ನು ಬಂಡವಾಳ ಹೂಡಿಕೆ ಸ್ನೇಹಿಯನ್ನಾಗಿ ಮಾಡಲು ಕಾರ್ಪೊರೇಟ್ ತೆರಿಗೆ ಕಡಿತ ಮಾಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಲಕ್ಷಾಂತರ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡುವ ಕಂಪನಿಗಳ ಕಾರ್ಪೊರೇಟ್ ತೆರಿಗೆ ತಗ್ಗಿಸಲಾಗಿದೆ. ದೇಶ ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಹೊಸ ದೇಶೀಯ ಉತ್ಪಾದನಾ ಕಂಪನಿಗಳಿಗೆ ಶೇ.15ರಷ್ಟು ತೆರಿಗೆಯನ್ನು ನಿಗದಿಪಡಿಸಲಾಗಿದ್ದು, ಇದರಿಂದ ಭಾರತದ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತಿದೆ ಮತ್ತು ಲಾಭಾಂಶ ವಿತರಣಾ ತೆರಿಗೆಯನ್ನು ರದ್ದುಗೊಳಿಸಲಾಗಿದೆ. ಜಿಎಸ್ ಟಿ ಜಾರಿಯಿಂದಾಗಿ ಡಜನ್ ಗಟ್ಟಲೆ ಇದ್ದ ತೆರಿಗೆಗಳು ಕಡಿತಗೊಂಡಿದ್ದು, ಬಹುತೇಕ ಸರಕು ಸೇವೆಗಳ ತೆರಿಗೆ ದರ ಇಳಿಕೆಯಾಗಿದೆ.

ಮಿತ್ರರೇ,

          ಕಳೆದ 5-6 ವರ್ಷಗಳವರೆಗೆ ಆದಾಯ ತೆರಿಗೆ ಆಯುಕ್ತರೇ, ಆದಾಯ ತೆರಿಗೆ ಪಾವತಿದಾರರಿಗೆ 3 ಲಕ್ಷ ರೂ.ಗಳ ವರೆಗೆ ತಾವೇ ಪರಿಹಾರವನ್ನು ನೀಡುತ್ತಿದ್ದಂತಹ ಸ್ಥಿತಿ ಇತ್ತು. ಅದನ್ನು ಐಟಿಎಟಿ ಮುಂದೆ ಪ್ರಶ್ನಿಸಲಾಗುತ್ತಿತ್ತು. ನಮ್ಮ ಸರ್ಕಾರ ಆ ಮಿತಿಯನ್ನು 3 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಅಂತೆಯೇ ಕನಿಷ್ಠ 2 ಕೋಟಿ ರೂ.ಗಳ ವರೆಗಿನ ತೆರಿಗೆ ಮೇಲ್ಮನವಿಗಳನ್ನು ಮಾತ್ರ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಬಹುದಾಗಿದೆ. ಈ ಪ್ರಯತ್ನಗಳಿಂದಾಗಿ ವ್ಯಾಪಾರ – ವಹಿವಾಟು ನಡೆಸುವುದು ಸುಲಭವಾಗಿರುವುದಲ್ಲದೆ, ಹಲವು ಸಂಸ್ಥೆಗಳ ಮೇಲೆ ಇದ್ದ ವ್ಯಾಜ್ಯಗಳ ಹೊರೆಯನ್ನು ಇಳಿಕೆಯಾಗಿದೆ.

ಮಿತ್ರರೇ,

ತೆರಿಗೆ ಕಡಿತದ ಜೊತೆಗೆ ಅತಿದೊಡ್ಡ ಸುಧಾರಣಾ ಕ್ರಮಗಳನ್ನೂ ಸಹ ಕೈಗೊಳ್ಳಲಾಗಿದೆ ಮತ್ತು ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ, ತೆರಿಗೆ ಪಾವತಿದಾರರ ಗೌರವವನ್ನು ಕಾಯಲು ಮತ್ತು ಅವರಿಗೆ ಸಮಸ್ಯೆಯಾಗದಂತೆ ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ತೆರಿಗೆ ಪಾವತಿದಾರರ ಹಕ್ಕು ಮತ್ತು ಪಾವತಿದಾರರ ಎರಡನ್ನೂ ಕ್ರೂಢೀಕರಿಸಲಾಗಿದೆ, ಅವುಗಳು ಕಾನೂನು ಬದ್ಧವಾಗಿ ಗುರುತಿಸಲ್ಪಟ್ಟಿವೆ. ಅಂತಹ ವ್ಯವಸ್ಥೆಯನ್ನು ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಇದು ತೆರಿಗೆ ಪಾವತಿದಾರರು ಮತ್ತು ತೆರಿಗೆ ಸಂಗ್ರಹಗಾರರ ನಡುವೆ ವಿಶ್ವಾಸ ವೃದ್ಧಿ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಯಾವ ವ್ಯಕ್ತಿ ದೇಶದ ಅಭಿವೃದ್ಧಿಗಾಗಿ ತನ್ನ ಶ್ರಮ ಮತ್ತು ಬೆವರು ಹರಿಸುತ್ತಾನೋ ಮತ್ತು ಇತರೆ ದೇಶವಾಸಿಗಳಿಗೆ ಉದ್ಯೋಗಗಳನ್ನು ನೀಡುತ್ತಾನೋ ಅಂತಹ ವ್ಯಕ್ತಿ ನಿಜಕ್ಕೂ ಗೌರವಕ್ಕೆ ಅರ್ಹರಾಗುತ್ತಾರೆ. ಆಗಸ್ಟ್ 15ರಂದು ಕೆಂಪುಕೋಟೆಯಿಂದ ಮಾಡಿದ ಭಾಷಣದಲ್ಲಿ ನಾನು ಉಲ್ಲೇಖಿಸಿದಂತೆ ದೇಶದ ಸಂಪತ್ತು ಸೃಷ್ಟಿಸುವವರ ಸಮಸ್ಯೆಗಳನ್ನು ನಿವಾರಿಸಿದರೆ ಮತ್ತು ಅವರನ್ನು ರಕ್ಷಿಸಿದರೆ ಅವರ ವಿಶ್ವಾಸ ದೇಶದ ವ್ಯವಸ್ಥೆಯೊಳಗೆ ವೃದ್ಧಿಯಾಗುತ್ತದೆ. ಈ ವಿಶ್ವಾಸವೃದ್ಧಿ ಬೆಳವಣಿಗೆಯಾಗುತ್ತಿರುವ ಪರಿಣಾಮವಾಗಿ ಹೆಚ್ಚು ಹೆಚ್ಚು ಸ್ನೇಹಿತರು ದೇಶದ ಅಭಿವೃದ್ಧಿಗಾಗಿ ತೆರಿಗೆ ವ್ಯವಸ್ಥೆಗೆ ಸೇರ್ಪಡೆಯಾಗಲು ಮುಂದೆ ಬರುತ್ತಿದ್ದಾರೆ. ಸರ್ಕಾರ ಹೇಗೆ ತೆರಿಗೆ ಪಾವತಿದಾರರನ್ನು ಅವಲಂಬಿಸಿದೆ ಎಂಬುದಕ್ಕೆ ನಾನು ಮತ್ತೊಂದು ಉದಾಹರಣೆಯನ್ನು ನಿಮಗೆ ನೀಡಲು ಬಯಸುತ್ತೇನೆ.

ಮಿತ್ರರೇ,

ಮೊದಲು ಆದಾಯ ತೆರಿಗೆ ರಿಟರ್ನ್ಸ್ ಗಳನ್ನು ಸಲ್ಲಿಸುವಾಗ ಬಹುತೇಕ ಜನರು ಅಥವಾ ವಾಣಿಜ್ಯೋದ್ಯಮಿಗಳು ಆದಾಯ ತೆರಿಗೆ ಇಲಾಖೆಯಿಂದ ತಪಾಸಣೆಗಳನ್ನು ಎದುರಿಸಬೇಕಾಗಿತ್ತು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಸರ್ಕಾರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ಕೂಡಲೇ ಮೊದಲಿಗೆ ಅದನ್ನು ಸಂಪೂರ್ಣವಾಗಿ ನಂಬುವಂತಹ ಚಿಂತನಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದೆ. ಅದರ ಪರಿಣಾಮವಾಗಿ ಇಂದು ದೇಶದಲ್ಲಿ ಶೇ.99.75ರಷ್ಟು ರಿಟರ್ನ್ಸ್ ಗಳನ್ನು ಯಾವುದೇ ಆಕ್ಷೇಪಣೆಗಳಿಲ್ಲದೆ ಸ್ವೀಕರಿಸಲಾಗುತ್ತಿದೆ ಮತ್ತು ಕೇವಲ ಶೇ.0.25ರಷ್ಟು ಪ್ರಕರಣಗಳಲ್ಲಿ ಮಾತ್ರ ಪರಿಶೀಲನೆ ನಡೆಸಲಾಗುತ್ತಿದೆ. ದೇಶದ ತೆರಿಗೆ ವ್ಯವಸ್ಥೆಯಲ್ಲಿ ಇಂತಹ ದೊಡ್ಡ ಬದಲಾವಣೆಯನ್ನು ತರಲಾಗಿದೆ.

ಮಿತ್ರರೇ,

ದೇಶದಲ್ಲಿ ತೆರಿಗೆ ಸುಧಾರಣೆಯ ಗುರಿಗಳನ್ನು ಸಾಧಿಸುವಲ್ಲಿ ನ್ಯಾಯಮಂಡಳಿಗಳ ಪಾತ್ರ ಅತ್ಯಂತ ಪ್ರಮುಖವಾದುದು. ನೀವು ನಿಮ್ಮ ವರ್ಚುವಲ್ ಸಮಯವನ್ನು ಬಳಸಿಕೊಂಡು ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ಅಲ್ಲದೆ ನೀವು ಮುಖಾಮುಖಿ ರಹಿತ ವ್ಯವಸ್ಥೆಯ ಬಗ್ಗೆ ಭರವಸೆ ಹೊಂದಿದ್ದೀರಿ. ಮೇಲ್ಮನವಿ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಇರುವ ಮುಖಾಮುಖಿ ರಹಿತ ವ್ಯವಸ್ಥೆಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿಗಳಿಗೂ ಜಾರಿಗೊಳಿಸುವ ಕುರಿತು ಚಿಂತನೆ ನಡೆಸಿ. ಭೌತಿಕ ವಿಚಾರಣೆಗೆ ಬದಲಾಗಿ ಇ-ವಿಚಾರಣೆಗೆ ಆದ್ಯತೆ ನೀಡಬಹುದೇ ಯೋಚಿಸಿ ? ಇದನ್ನು ಕೊರೊನಾ ಸಂದರ್ಭದಲ್ಲಿ ಮಾಡಿದ್ದರೆ ಅದನ್ನು ಭವಿಷ್ಯದಲ್ಲಿ ಮುಂದುವರಿಸಬಹುದು.

ಮಿತ್ರರೇ,

ಕೊರೊನಾದ ಈ ಅವಧಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಸಂಗತಿಗಳನ್ನು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಮಾಡಬಹುದು ಎಂಬುದು ನಮ್ಮ ಅನುಭವಕ್ಕೆ ಬಂದಿದೆ. ಇಂದು ನೀವು ದೇಶಾದ್ಯಂತ ನ್ಯಾಯಪೀಠಗಳಲ್ಲಿ ಆಧುನಿಕ ಸೌಕರ್ಯಗಳೊಂದಿಗೆ ಕಟ್ಟಡ ಸಂಕೀರ್ಣಗಳನ್ನು ನಿರ್ಮಾಣ ಮಾಡುತ್ತಿದ್ದೀರಿ. ಇದರಿಂದ ತೆರಿಗೆ ಪಾವತಿದಾರರ ಸಮಯ, ಹಣ ಮತ್ತು ಶಕ್ತಿ ಉಳಿತಾಯವಾಗುತ್ತದೆ. ಅಲ್ಲದೆ ವ್ಯಾಜ್ಯಗಳೂ ಕೂಡ ತ್ವರಿತವಾಗಿ ಇತ್ಯರ್ಥವಾಗುತ್ತದೆ.

ಮಿತ್ರರೇ,

ವಿದ್ವಾಂಸರು ಹೀಗೆ ಹೇಳಿದ್ದಾರೆ  - न्यायमूलं सुराज्यं स्यात्, संघमूलं महाबलम्

ನ್ಯಾಯ ಉತ್ತಮ ಸರ್ಕಾರದ ತಳಹದಿ ಮತ್ತು ವ್ಯವಸ್ಥೆ ಅಸಾಮಾನ್ಯ ಶಕ್ತಿಯ ಮೂಲ. ಆದ್ದರಿಂದ ನ್ಯಾಯದ ಶಕ್ತಿಯನ್ನು ವೃದ್ಧಿಸಲು ನಿರಂತರ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಮತ್ತು ಸ್ವಾವಲಂಬಿ ಭಾರತದ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ. ಭಾರತದಲ್ಲಿ ಕೈಗೊಂಡಿರುವ ಸರಣಿ ಸುಧಾರಣೆಗಳ ಹಿಂದೆ ಇಂತಹ ಪ್ರೇರಣೆ ಇದೆ. ನನಗೆ ಸಂಪೂರ್ಣ ವಿಶ್ವಾಸವಿದೆ. ನಮ್ಮೆಲ್ಲರ ಸಾಮೂಹಿಕ ಪ್ರಯತ್ನದಿಂದಾಗಿ ಎಲ್ಲ ಪ್ರಯತ್ನಗಳು ಯಶಸ್ವಿಯಾಗುತ್ತವೆ ಎಂದು.

ಮತ್ತೊಮ್ಮೆ, ನಾನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಜೊತೆ ಸಂಬಂಧ ಹೊಂದಿದ ಎಲ್ಲ ಸ್ನೇಹಿತರನ್ನು ಹಾಗೂ ಆಧುನಿಕ ಸಂಕೀರ್ಣ ಹೊಂದಿದ ಒಡಿಶಾದ ಜನರನ್ನು ಅಭಿನಂದಿಸುತ್ತೇನೆ. ದೀಪಾವಳಿ ಸೇರಿದಂತೆ ಮುಂಬರುವ ಹಬ್ಬಗಳಿಗೆ ನನ್ನ ಹಾರ್ದಿಕ ಶುಭಾಶಯಗಳು. ನಾನು ಒಂದು ಸಂಗತಿಯನ್ನು ಖಂಡಿತ ಹೇಳ ಬಯಸುತ್ತೇನೆ. ಕೊರೊನಾವನ್ನು ಹಗುರವಾಗಿ ಪರಿಗಣಿಸಬೇಡಿ ಎಂದು, ವಿಶೇಷವಾಗಿ ನಾನು ಒಡಿಶಾದ ಜನರಲ್ಲಿ ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಪದೇ ಪದೇ ಕೈತೊಳೆಯುವುದು ಇತ್ಯಾದಿ ಸಣ್ಣ ಸಣ್ಣ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕೆಂದು ಕೋರುತ್ತೇನೆ. ಒಡಿಶಾ ಕಲೆ ಮತ್ತು ಸಂಸ್ಕೃತಿಯ ಶ್ರೇಷ್ಠ ತವರೂರು. ಇಂದು ಎಲ್ಲೆಡೆ ವೋಕಲ್ ಫಾರ್ ಲೋಕಲ್ ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ ಎಂಬ ಕೂಗು ಅಥವಾ ಮಂತ್ರ ಮೊಳಗುತ್ತಿದೆ. ಭಾರತದ ನೆಲದಿಂದ ಮತ್ತು ನಮ್ಮ ದೇಶದ ಯುವ ಪ್ರತಿಭೆಗಳ ಪರಿಶ್ರಮದ ಫಲವಾಗಿ ಉತ್ಪಾದನೆಯಾಗಿರುವ ವಸ್ತುಗಳನ್ನು ಮಾತ್ರ ನಾವು ಖರೀದಿಸಬೇಕಿದೆ. ಒಡಿಶಾ ಮತ್ತು ದೇಶವಾಸಿಗಳಿಗೆ ದೇವ ಜಗನ್ನಾಥನ ಈ ಭೂಮಿಯಿಂದ ನಾನು ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ ಎಂದು ಎಲ್ಲರಿಗೂ  ಮನವಿ ಮಾಡುತ್ತೇನೆ. ಕೇವಲ ದೀಪಾವಳಿ ವೇಳೆ ಮಾತ್ರ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಬಾರದು, ದೀಪಾವಳಿಯನ್ನು ವರ್ಷದ 365 ದಿನವೂ ಆಚರಿಸಬೇಕು. ಎಲ್ಲಾ 365 ದಿನವೂ ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಬೇಕು. ಆಗ ದೇಶದ ಆರ್ಥಿಕತೆ ಎಷ್ಟು ವೇಗವಾಗಿ ಬೆಳವಣಿಗೆ ಹೊಂದುತ್ತದೆ ಎಂಬುದನ್ನು ನೋಡಿ. ನಮ್ಮ ಶ್ರೇಷ್ಠ ಜನರ ಬೆವರಿನ ಶಕ್ತಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಈ ನಂಬಿಕೆಯೊಂದಿಗೆ ನಾವು ಈ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ನಾನು ಶುಭಾಶಯಗಳನ್ನು ಹೇಳ ಬಯಸುತ್ತೇನೆ.

ತುಂಬಾ ತುಂಬಾ ಧನ್ಯವಾದಗಳು.

*****



(Release ID: 1672255) Visitor Counter : 176