ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಸಂಶೋಧನೆ ಮತ್ತು ಲಸಿಕೆ ವಿತರಣೆ ವ್ಯವಸ್ಥೆ ಕುರಿತು ಪ್ರಧಾನಿಯವರಿಂದ ಪರಿಶೀಲನಾ ಸಭೆ

Posted On: 15 OCT 2020 5:30PM by PIB Bengaluru

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಪರೀಕ್ಷಾ ತಂತ್ರಜ್ಞಾನಗಳು, ಸಂಪರ್ಕ ಪತ್ತೆಹಚ್ಚುವಿಕೆ, ಔಷಧಗಳು ಮತ್ತು ಚಿಕಿತ್ಸಕ ವಿಧಾನಗಳು ಸೇರಿದಂತೆ ಸಂಶೋಧನೆ ಮತ್ತು ಲಸಿಕೆ ವಿತರಣೆ ವ್ಯವಸ್ಥೆಯನ್ನು ಕುರಿತು  ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಶ್ರೀ ಹರ್ಷವರ್ಧನ್, ನೀತಿ ಆಯೋಗದ ಸದಸ್ಯ (ಆರೋಗ್ಯ), ಪ್ರಧಾನ ವೈಜ್ಞಾನಿಕ ಸಲಹೆಗಾರರು, ಹಿರಿಯ ವಿಜ್ಞಾನಿಗಳು ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಕೋವಿಡ್-19 ಸವಾಲನ್ನು ಎದುರಿಸಲು ಭಾರತದ ಲಸಿಕೆ ಅಭಿವರ್ಧಕರು ಮತ್ತು ತಯಾರಕರು ಮಾಡಿರುವ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ಅಂತಹ ಎಲ್ಲಾ ಪ್ರಯತ್ನಗಳಿಗೆ ಸೌಲಭ್ಯ ಮತ್ತು ಬೆಂಬಲವನ್ನು ಮುಂದುವರಿಸಲು ಸರ್ಕಾರದ ಬದ್ಧವಾಗಿದೆ ಎಂದು ಅವರು ತಿಳಿಸಿದರು.

ನಿಯಂತ್ರಕ ಸುಧಾರಣೆಯು ಶಕ್ತಿಯುತವಾದ ಪ್ರಕ್ರಿಯೆ ಎಂದು ಪ್ರಧಾನಿ ಹೇಳಿದರು. ಅನೇಕ ಹೊಸ ವಿಧಾನಗಳು ಹೊರಹೊಮ್ಮುತ್ತಿರುವುದರಿಂದ ಪ್ರಸ್ತುತ ಇರುವ ಮತ್ತು ಉದಯೋನ್ಮುಖವಾದ ಪ್ರತಿಯೊಂದು ಕ್ಷೇತ್ರದ ತಜ್ಞರನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದರು.

ಆರೋಗ್ಯ ಸಚಿವಾಲಯವು ರೂಪಿಸಿರುವ ಲಸಿಕೆಗಳ ಸಮಗ್ರ ವಿತರಣೆ ಮತ್ತು ವಿತರಣಾ ಕಾರ್ಯವಿಧಾನದ ಬಗ್ಗೆ ಪ್ರಧಾನಿ ಪರಿಶೀಲನೆ ನಡೆಸಿದರು. ಸೂಕ್ತ ಸಂಗ್ರಹಣೆಯ ವ್ಯವಸ್ಥೆ ಮತ್ತು ಬೃಹತ್-ಸಂಗ್ರಹದ ತಂತ್ರಜ್ಞಾನಗಳು, ವಿತರಣೆಗಾಘಿ ಬಾಟಲುಗಳನ್ನು ತುಂಬಿಸುವುದು ಮತ್ತು ಪರಿಣಾಮಕಾರಿ ವಿತರಣೆಯನ್ನು ಖಾತ್ರಿಪಡಿಸುವ ಕ್ರಮಗಳ ಬಗ್ಗೆ ಪ್ರಧಾನಿಯವರು ಪರಿಶೀಲನೆ ನಡೆಸಿದರು.

ಸೆರೊ-ಸಮೀಕ್ಷೆಗಳು ಮತ್ತು ಪರೀಕ್ಷೆಗಳ ಎರಡನ್ನೂ ಹೆಚ್ಚಿಸಬೇಕು ಎಂದು ಪ್ರಧಾನಿ ನಿರ್ದೇಶನ ನೀಡಿದರು. ನಿಯಮಿತವಾಗಿ, ವೇಗವಾಗಿ ಮತ್ತು ಅಗ್ಗದ ಪರೀಕ್ಷೆಯ ಸೌಲಭ್ಯ ಎಲ್ಲರಿಗೂ ಲಭ್ಯವಾಗಬೇಕು ಎಂದು ಅವರು ಹೇಳಿದರು.

ಸಾಂಪ್ರದಾಯಿಕ ಔಷಧಿ ಚಿಕಿತ್ಸೆಗಳ ನಿರಂತರ ಮತ್ತು ಕಠಿಣ ವೈಜ್ಞಾನಿಕ ಪರೀಕ್ಷೆ ಮತ್ತು ಮೌಲ್ಯಮಾಪನದ ಅಗತ್ಯವನ್ನು ಪ್ರಧಾನಿ ಒತ್ತಿಹೇಳಿದರು. ಸಂಕಷ್ಟದ ಸಮಯದಲ್ಲಿ ಸಾಕ್ಷ್ಯ ಆಧಾರಿತ ಸಂಶೋಧನೆ ಮತ್ತು ವಿಶ್ವಾಸಾರ್ಹ ಪರಿಹಾರವನ್ನು ಒದಗಿಸಲು ಆಯುಷ್ ಸಚಿವಾಲಯ ನಡೆಸುತ್ತಿರುವ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಅಗ್ಗದ ಪರೀಕ್ಷೆ, ಲಸಿಕೆ ಮತ್ತು ಔಷಧಿಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುವ ದೇಶದ ಸಂಕಲ್ಪವನ್ನು ಪ್ರಧಾನಿ ಪುನರುಚ್ಚರಿಸಿದರು.

ಸಾಂಕ್ರಾಮಿಕ ರೋಗದ ವಿರುದ್ಧ ನಿರಂತರ ಜಾಗರೂಕತೆ ಮತ್ತು ಉನ್ನತ ಮಟ್ಟದ ಸಿದ್ಧತೆ ಇರಬೇಕು ಎಂದು ಪ್ರಧಾನಿ ಕರೆ ನೀಡಿದರು.

***



(Release ID: 1665129) Visitor Counter : 215