ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿರುವ 1.75 ಲಕ್ಷ ಮನೆಗಳ ಉದ್ಘಾಟನೆ ಮತ್ತು ‘ಗೃಹಪ್ರವೇಶ’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಪಠ್ಯ

Posted On: 12 SEP 2020 2:04PM by PIB Bengaluru

ಇಂದು ತಮ್ಮ ಕನಸಿನ ಮನೆಗಳನ್ನು ಪಡೆದುಕೊಂಡ ಫಲಾನುಭವಿಗಳೊಂದಿಗೆ ಸಮಾಲೋಚನೆ ನಡೆಸಿದೆ. ಅವರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಭಾರೀ ನಂಬಿಕೆ ಇಟ್ಟುಕೊಂಡಿದ್ದಾರೆ. ನಾನು ಮಧ್ಯಪ್ರದೇಶದಲ್ಲಿ ಇಂದು ಅಧಿಕೃತವಾಗಿ ತಮ್ಮ ಹೊಸ ಮನೆ ಪ್ರವೇಶಿಸುತ್ತಿರುವ 1.75 ಲಕ್ಷ ಕುಟುಂಬಗಳಿಗೆ ನಾನು ಶುಭಾಶಯಗಳನ್ನು ಕೋರಿದೆ ಮತ್ತು ಅವರನ್ನು ಅಭಿನಂದಿಸಿದೆ. ಮಧ್ಯಪ್ರದೇಶದ ನಾನಾ ಭಾಗಗಳ ಮಿತ್ರರು, ತಂತ್ರಜ್ಞಾನದ ಮೂಲಕ ಕಾರ್ಯಕ್ರಮಕ್ಕೆ ಸೇರ್ಪಡೆಯಾಗಿದ್ದಾರೆ. ಈವರೆಗೆ ತಾತ್ಕಾಲಿಕವಾಗಿ ಬಾಡಿಗೆ ಮನೆಗಳಲ್ಲಿ ಅಥವಾ ಕೊಳೆಗೇರಿಗಳಲ್ಲಿ ಅಥವಾ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿದ್ದ ನೀವು ಇಂದು ಕಳೆದ ಆರು ವರ್ಷಗಳಿಂದೀಚೆಗೆ ತಮ್ಮದೇ ಸ್ವಂತ ಸೂರುಗಳನ್ನು ಹೊಂದಿದ 2.25 ಕೋಟಿ ಕುಟುಂಬಗಳ ಜೊತೆಗೆ ಸೇರಿದ್ದೀರಿ.

ಮಿತ್ರರೇ, ಈ ವರ್ಷದ ದೀಪಾವಳಿಯಲ್ಲಿ ನಿಮ್ಮ ಸಂಭ್ರಮ ಮತ್ತೊಂದು ಮಟ್ಟದಲ್ಲಿರುತ್ತದೆ ಮತ್ತು ಬಾರಿ ಇತರ ಹಬ್ಬಗಳು ಕೂಡ. ಕೊರೊನಾ ಇಲ್ಲದಿದ್ದರೆ ನೀವು ನಿಮ್ಮ ಕುಟುಂಬದೊಂದಿಗೆ ನಿಮ್ಮ ಪ್ರಧಾನ ಸೇವಕ, ಖಂಡಿತ ನಿಮ್ಮ ಜೀವನದ ಅತಿ ದೊಡ್ಡ ಸಂತೋಷದ ಕ್ಷಣಗಳಲ್ಲಿ ನಿಮ್ಮ ಜೊತೆ ಇರುತ್ತಿದ್ದರು. ನಾನು ಕೂಡ ಸಂತೋಷದಲ್ಲಿ ಭಾಗಿಯಾಗುತ್ತಿದೆ. ಆದರೆ ಕೊರೊನಾ ಪರಿಸ್ಥಿತಿಯಿಂದಾಗಿ ನಾನು ಇಂದು ನಿಮ್ಮನ್ನು ದೂರದಿಂದ ಭೇಟಿಯಾಗುತ್ತಿದ್ದೇನೆ. ಆದರೆ ಅದು ಭಾರಿ ಕೊನೆಯಾಗಲಿ.

ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾದ ಶ್ರೀ ಶಿವರಾಜ್ ಸಿಂಗ್ ಚೌವ್ಹಾಣ್ ಜಿ ಹಾಗೂ ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ನರೇಂದ್ರ ಸಿಂಗ್ ತೋಮರ್ ಜಿ, ನನ್ನ ಸಹೋದ್ಯೋಗಿ ಜ್ಯೋತಿರಾದಿತ್ಯಾಜಿ, ಮಧ್ಯಪ್ರದೇಶದ ಎಲ್ಲ ಸಚಿವರು, ಸಂಸದರು, ಶಾಸಕರು, ಗ್ರಾಮ ಪಂಚಾಯಿತಿಯ ಪ್ರತಿನಿಧಿಗಳು ಮತ್ತು ನನ್ನ ಎಲ್ಲ ಪ್ರೀತಿಯ ಮಿತ್ರರೇ ಮತ್ತು ಗ್ರಾಮಗಳ ಸಹೋದರಿಯರೇ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಧ್ಯಪ್ರದೇಶದ ನನ್ನ ಜನರೇ.

ಇಂದು ಮಧ್ಯಪ್ರದೇಶದ ಸಾಮೂಹಿಕ ‘ಗೃಹ ಪ್ರವೇಶ’ ಕಾರ್ಯಕ್ರಮ 1.75 ಲಕ್ಷ ಬಡಕುಟುಂಬಗಳ ಜೀವನದಲ್ಲಿ ಅತ್ಯಂತ ಸ್ಮರಣಾರ್ಹ ಕ್ಷಣಗಳು. ಆದರೆ ದೇಶದ ಪ್ರತಿಯೊಬ್ಬ ವಸತಿರಹಿತ ವ್ಯಕ್ತಿಗೆ ಪಕ್ಕಾ ಮನೆಗಳನ್ನು ಒದಗಿಸುವುದೂ ಕೂಡ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಈ ಕಾರ್ಯಕ್ರಮ ದೇಶದಲ್ಲಿನ ವಸತಿರಹಿತರಿಗೆ ಭರವಸೆಯನ್ನು ಪುನರ್ ಸ್ಥಾಪಿಸುವಂತಹ ಕ್ಷಣಗಳಿಗೂ ಸಹ ಕಾರಣವಾಗುತ್ತದೆ. ಯಾರಿಗೆ ಸ್ವಂತ ಮನೆಯಿಲ್ಲವೋ ಅಂತಹವರು ಒಂದು ದಿನ ತಮ್ಮ ಸ್ವಂತ ಮನೆಯನ್ನು ಹೊಂದುತ್ತಾರೆ. ಆ ಮೂಲಕ ಅವರ ಕನಸುಗಳು ನನಸಾಗುತ್ತವೆ.

ಮಿತ್ರರೇ, ಈ ದಿನ ಸರ್ಕಾರದ ಯೋಜನೆಗಳ ಮೇಲೆ ಕೋಟ್ಯಾಂತರ ದೇಶವಾಸಿಗಳು ಇಟ್ಟಿರುವ ವಿಶ್ವಾಸವನ್ನು ಪುನಃ ನಿರೂಪಿಸುವ ದಿನವಾಗಿದೆ. ಸರ್ಕಾರ ಉತ್ತಮ ಉದ್ದೇಶದೊಂದಿಗೆ ರೂಪಿಸಿರುವ ಯೋಜನೆಗಳು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವುದಲ್ಲದೆ, ಫಲಾನುಭವಿಗಳಿಗೂ ಸಹ ತಲುಪುತ್ತಿದೆ. ಮನೆಗಳನ್ನು ಪಡೆದುಕೊಂಡ ಹಲವು ಮಿತ್ರರಲ್ಲಿ ಸ್ವಯಂ ವಿಶ್ವಾಸ ಮತ್ತು ತೃಪ್ತಿಯ ಭಾವನೆಯನ್ನು ನಾನು ಕಂಡಿದ್ದೇನೆ. ನಾನು ಅವರೊಂದಿಗೆ ಸಂವಾದ ನಡೆಸಿದ್ದೇನೆ ಮತ್ತು ನಾನು ಪರದೆಯ ಮೇಲೆ ಅವರನ್ನು ನೋಡುತ್ತಿದ್ದೇನೆ. ನಾನು ಎಲ್ಲ ಮಿತ್ರರಿಗೆ ಹೇಳುವುದೆಂದರೆ ಮನೆ ನಿಮ್ಮ ಉತ್ತಮ ಭವಿಷ್ಯದ ಭದ್ರ ಬುನಾದಿಯಾಗಲಿದೆ ಎಂದು ನೀವು ಇಲ್ಲಿಂದ ಹೊಸ ಜೀವನವನ್ನು ಆರಂಭಿಸಿ. ನಿಮ್ಮ ಮಕ್ಕಳು ಮತ್ತು ಕುಟುಂಬವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಿರಿ. ನೀವು ಮುನ್ನಡೆದರೆ ದೇಶವೂ ಕೂಡ ಮುನ್ನಡೆಯುತ್ತದೆ.

ಮಿತ್ರರೇ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ದೇಶಾದ್ಯಂತ 18 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಕೊರೊನಾ ಸಮಯದಲ್ಲಿ ಹಲವು ಸವಾಲುಗಳ ನಡುವೆಯೂ ಕಾರ್ಯ ನಡೆದಿದೆ. ಆ ಪೈಕಿ ಮಧ್ಯಪ್ರದೇಶ ಒಂದರಲ್ಲೇ 1.75 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಎಷ್ಟು ವೇಗವಾಗಿ ಕೆಲಸ ಸಾಗುತ್ತಿದೆ ಎಂದರೆ ಅದೇ ಒಂದು ದಾಖಲೆಯಾಗಿದೆ. ಸರಾಸರಿ 125 ದಿನಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಒಂದು ಮನೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ನಾನು ನಿಮಗೆ ಹೇಳುವುದೆಂದರೆ ದೇಶಕ್ಕೆ ಮತ್ತು ನಮ್ಮ ಮಾಧ್ಯಮ ಮಿತ್ರರಿಗೇ ಒಂದು ಸಕಾರಾತ್ಮಕ ಸುದ್ದಿಯನ್ನು ತಿಳಿಸಬಯಸುತ್ತೇನೆ. ಕೊರೊನಾ ಸಂದರ್ಭದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 125 ದಿನಗಳ ಬದಲಿಗೆ ಕೇವಲ 45 ರಿಂದ 60 ದಿನಗಳೊಳಗೆ ಮನೆಗಳನ್ನು ನಿರ್ಮಿಸಲಾಗಿದೆ. ಇದು ಪ್ರತಿಕೂಲ ಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಒಂದು ದೊಡ್ಡ ಉದಾಹರಣೆಯಾಗಿದೆ. ನೀವು ಯೋಚಿಸಬಹುದು ಇದು ಹೇಗೆ ಸಾಧ್ಯ ಎಂದು ? 125 ದಿನಗಳ ಬದಲಿಗೆ 40 ರಿಂದ 60 ದಿನಗಳಲ್ಲಿ ಇದನ್ನು ಹೇಗೆ ಮಾಡಬಹುದು ಎಂದು ?

ಮಿತ್ರರೇ, ಇದು ಸಾಧ್ಯವಾಗಿದ್ದು, ನಗರಗಳಿಂದ ವಲಸೆ ಬಂದಿರುವ ನಮ್ಮ ವಲಸೆ ಮಿತ್ರರಿಂದಾಗಿ. ಅವರಿಗೆ ಕೌಶಲ್ಯವಿದೆ. ಇಚ್ಛಾಶಕ್ತಿಯಿದೆ ಮತ್ತು ಅವರು ನಮ್ಮೊಂದಿಗೆ ಸೇರ್ಪಡೆಯಾದರು. ಹಾಗಾಗಿ ಇಂತಹ ಫಲಿತಾಂಶವನ್ನು ಕಾಣಬಹುದಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನದ ಸಂಪೂರ್ಣ ಲಾಭವನ್ನು ಪಡೆದುಕೊಂಡ ಮಿತ್ರರು ತಮ್ಮ ಕುಟುಂಬಗಳ ಬಗ್ಗೆ ಜಾಗೃತಿ ವಹಿಸಿದರು ಮತ್ತು ಇದೇ ವೇಳೆ ತಮ್ಮ ಬಡ ಸಹೋದರ, ಸಹೋದರಿಯರಿಗೆ ಮನೆಗಳನ್ನು ನಿರ್ಮಿಸಿಕೊಡಲು ಶ್ರಮಿಸಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಸುಮಾರು 23,000 ಕೋಟಿ ರೂ.ಗಳ ಯೋಜನೆಗಳು ಮಧ್ಯಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪೂರ್ಣಗೊಂಡಿರುವುದಕ್ಕೆ ನನಗೆ ತೃಪ್ತಿಯಿದೆ.

ಯೋಜನೆ ಅಡಿ ಗ್ರಾಮಗಳಲ್ಲಿ ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ಮನೆಗೂ ನೀರಿನ ಪೂರೈಕೆಗೆ ಕಾಮಗಾರಿಗಳು ನಡೆಯುತ್ತಿದೆ. ಅಂಗನವಾಡಿ ಮತ್ತು ಪಂಚಾಯಿತಿಗಳಿಗೆ ಕಟ್ಟಡಗಳ ನಿರ್ಮಾಣ. ಗೋಶಾಲೆ, ಕೆರೆಗಳು, ಬಾವಿಗಳು, ಗ್ರಾಮೀಣ ರಸ್ತೆಗಳು ಮತ್ತು ಗ್ರಾಮಗಳಲ್ಲಿ ಕೈಗೊಂಡಿದ್ದ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಗಿದೆ. ಇದರಿಂದಾಗಿ ಎರಡು ಬಗೆಯ ಅನುಕೂಲಗಳಾಗಿವೆ. ಒಂದು ನಗರಗಳಿಂದ ಗ್ರಾಮಗಳಿಗೆ ವಲಸೆ ಬಂದಿದ್ದ ಲಕ್ಷಾಂತರ ಮಿತ್ರರಿಗೆ ಉದ್ಯೋಗ ದೊರೆತಿರುವುದು, ಎರಡು, ಯಾರು ಇಟ್ಟಿಗೆ, ಸಿಮೆಂಟ್, ಮರಳು ಮತ್ತು ಇತರೆ ನಿರ್ಮಾಣ ಸಾಮಗ್ರಿಗಳ ವ್ಯಾಪಾರದಲ್ಲಿ ತೊಡಗಿದ್ದಾರೋ ಅವರುಗಳಿಗೆ ದಾಖಲೆಯ ಮಾರಾಟವಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನ ಒಂದು ರೀತಿಯಲ್ಲಿ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಆರ್ಥಿಕತೆಗೆ ಅತ್ಯಂತ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಕೈಗೊಂಡ ಹಲವು ಯೋಜನೆಗಳಿಂದ ಹೆಚ್ಚಿನ ಅನುಕೂಲಗಳಾಗಿವೆ.

ಮಿತ್ರರೇ, ಮೊದಲೂ ಸಹ ಸರ್ಕಾರದ ಯೋಜನೆಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ನೀವು ಅಂತಹ ಬದಲಾವಣೆ ಏನು ಮಾಡಿದ್ದೀರಿ ಎಂದು ಜನ ಕೆಲವೊಮ್ಮೆ ನನ್ನನ್ನು ಕೇಳುತ್ತಾರೆ. ಅದು ನಿಜ ಬಡವರಿಗೆ ವಸತಿ ನಿರ್ಮಾಣಕ್ಕೆ ದಶಕಗಳಿಂದ ದೇಶಾದ್ಯಂತ ನಾನಾ ಯೋಜನೆಗಳು ಜಾರಿಯಲ್ಲಿವೆ. ಆದರೆ ಸ್ವಾತಂತ್ರ್ಯಾ ನಂತರ ಮೊದಲ ದಶಕದಲ್ಲೇ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಡಿ ಕೆಲಸ ಕಾರ್ಯಗಳು ಆರಂಭವಾದವು. ಪ್ರತಿ 10 ರಿಂದ 15 ವರ್ಷಗಳಿಗೆ ಯೋಜನೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಯೋಜನೆಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಆದರೆ ಗೌರವಯುತ ಬಾಳ್ವೆ ನಡೆಸುವಂತಾಗಲು ಕೋಟ್ಯಾಂತರ ಬಡವರಿಗೆ ಸೂರು ಒದಗಿಸುವುದನ್ನು ಈಡೇರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ, ಈ ಯೋಜನೆಗಳಲ್ಲಿ ಸರ್ಕಾರದ ಅತಿಯಾದ ಹಸ್ತಕ್ಷೇಪ. ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳುತ್ತಿತ್ತು ಮತ್ತು ಅದು ಬಹುತೇಕ ದೆಹಲಿಯಲ್ಲೇ ಕೈಗೊಳ್ಳಲಾಗುತ್ತಿತ್ತು.

ಅಂತಹ ಮನೆಯಲ್ಲಿ ವಾಸಿಸುವಂತಹ ವ್ಯಕ್ತಿಗೆ ಏನನ್ನು ಹೇಳುವ ಹಕ್ಕಿರಲಿಲ್ಲ. ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ನಗರಗಳ ಮಾದರಿಯಲ್ಲಿ ಕಾಲೋನಿ ವ್ಯವಸ್ಥೆಯನ್ನು ಹೇರುವ ಪ್ರಯತ್ನಗಳು ನಡೆದವು. ನಗರಗಳ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ನಮ್ಮ ಬುಡಕಟ್ಟು ಸಹೋದರ ಸಹೋದರಿಯರ ಜೀವನಶೈಲಿ ನಗರಗಳಿಗಿಂತ ತುಂಬಾ ಭಿನ್ನವಾದುದು. ಅವರ ಅಗತ್ಯತೆಗಳೂ ಸಹ ಭಿನ್ನವಾಗಿರುತ್ತದೆ. ಅವರಿಗೆ ಸರ್ಕಾರ ನಿರ್ಮಿಸಿರುವ ವಸತಿಗಳಿಂದ ಆತ್ಮೀಯತೆಯ ಭಾವನೆ ಮೂಡುವುದಿಲ್ಲ. ಅಲ್ಲದೆ ಯೋಜನೆಗಳಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿತ್ತು. ಅಲ್ಲದೆ ಸಾಕಷ್ಟು ದೋಷಗಳು ಸಹ ಇದ್ದವು. ಆ ಬಗ್ಗೆ ಹೆಚ್ಚಿನ ವಿವರಗಳನ್ನು ನಾನು ಹೇಳಲು ಬಯಸುವುದಿಲ್ಲ. ಆದ್ದರಿಂದ ಮನೆಗಳ ನಿರ್ಮಾಣದ ಗುಣಮಟ್ಟವೂ ಕಳಪೆಯಾಗಿರುತ್ತಿತ್ತು. ಅದೆಲ್ಲಕ್ಕಿಂತ ಮುಖ್ಯವಾಗಿ ವಿದ್ಯುತ್ ಮತ್ತು ನೀರು ಮತ್ತಿತರ ಮೂಲ ಅಗತ್ಯತೆಗಳಿಗಾಗಿ ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಹಲವು ಸುತ್ತು ಅಲೆಯಬೇಕಾಗಿತ್ತು. ಅದರ ಪರಿಣಾಮ ಇಂತಹ ಯೋಜನೆಗಳಲ್ಲಿ ನಿರ್ಮಿಸಿದ ಮನೆಗಳಿಗೆ ಜನರು ಸ್ಥಳಾಂತರಗೊಳ್ಳುತ್ತಿರಲಿಲ್ಲ.

ಮಿತ್ರರೇ, ನಾವು 2014ರಲ್ಲಿ ಅಧಿಕಾರವನ್ನು ವಹಿಸಿಕೊಂಡಾಗ ಹಿಂದಿನ ಅನುಭವಗಳನ್ನು ವಿಶ್ಲೇಷಿಸಿದೆವು ಮತ್ತು ಹಿಂದಿನ ಯೋಜನೆಗಳಲ್ಲಿ ಪರಿಷ್ಕರಣೆಗಳನ್ನು ಮಾಡಿದೆವು ಮತ್ತು ಹೊಸ ಮನೋಭಾವದೊಂದಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಎಂಬ ಹೊಸ ಯೋಜನೆಯನ್ನು ಆರಂಭಿಸಿದೆವು ಅದರಲ್ಲಿ ಫಲಾನುಭವಿಗಳ ಆಯ್ಕೆಯಿಂದ ಹಿಡಿದು, ಮನೆಗಳನ್ನು ಹಸ್ತಾಂತರಿಸುವ ವರೆಗೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಿಂದೆ ಬಡವರು ಸರ್ಕಾರದ ಹಿಂದೆ ಓಡಬೇಕಾದ ಪರಿಸ್ಥಿತಿ ಇತ್ತು ಹಾಗೂ ಜನರು ತಮ್ಮ ಬಗ್ಗೆ ಶಿಫಾರಸ್ಸು ಮಾಡುವ ವ್ಯಕ್ತಿಗಳನ್ನು ಎದುರು ನೋಡುತ್ತಿದ್ದರು. ಇಂದು ಯೋಜನೆ ಮೂಲಕ ಸರ್ಕಾರವೇ ಜನರನ್ನು ತಲುಪುತ್ತಿದೆ. ಯಾರಿಗೆ ಅಗತ್ಯವಿದೆಯೋ ಅಂತಹವರಿಗೆ ಅಗತ್ಯ ಸಹಕಾರ ನೀಡಲಾಗುವುದು. ಫಲಾನುಭವಿಗಳ ಆಯ್ಕೆಯಿಂದ ಹಿಡಿದು ನಿರ್ಮಾಣದವರೆಗೆ ಪ್ರತಿಯೊಂದು ಹಂತದಲ್ಲೂ ವೈಜ್ಞಾನಿಕ ಮತ್ತು ಪಾರದರ್ಶಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಅಲ್ಲದೆ ಸ್ಥಳೀಯವಾಗಿ ಲಭ್ಯವಿರುವ ಸರಕುಗಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ಖರೀದಿಗೆ ಆದ್ಯತೆ ನೀಡಲಾಗಿದೆ. ಸ್ಥಳೀಯ ಅಗತ್ಯತೆಗಳು ಮತ್ತು ವಿನ್ಯಾಸಕ್ಕೆ ತಕ್ಕಂತೆ ಮನೆಗಳ ವಿನ್ಯಾಸಗಳನ್ನೂ ಸಹ ಸಿದ್ಧಪಡಿಸಲಾಗುತ್ತಿದೆ ಮತ್ತು ಅವುಗಳಿಗೆ ಅನುಮೋದನೆ ನೀಡಲಾಗುತ್ತಿದೆ. ಇದೀಗ ಸಂಪೂರ್ಣ ಪಾರದರ್ಶಕತೆ ಇರುವುದರಿಂದ ಫಲಾನುಭವಿಗಳೇ ಸ್ವತಃ ತಮ್ಮ ಕಟ್ಟಡದ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ನಿಗಾವಹಿಸುತ್ತಾರೆ. ಮನೆಗಳ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಅವರ ಖಾತೆಗೆ ಮನೆಯ ಕಂತಿನ ಹಣ ಠೇವಣಿಯಾಗುತ್ತದೆ. ಯಾರಾದರೂ ಅಪ್ರಾಮಾಣಿಕರಾಗಲು ಪ್ರಯತ್ನಿಸಿದರೆ ಆತನನ್ನು ಹಿಡಿಯಲು ಹಲವು ಮಾರ್ಗಗಳು ಇವೆ.

ಮಿತ್ರರೇ, ಪ್ರಧಾನಮಂತ್ರಿ ಆವಾಸ್ ಯೋಜನೆಯ ಅತಿದೊಡ್ಡ ಅಂಶವೆಂದರೆ ಹೊಳೆಯುವ ಸ್ವಭಾವ. ಕಾಮನಬಿಲ್ಲು ಹೇಗೆ ಬೇರೆ ಬೇರೆ ಬಣ್ಣಗಳನ್ನು ಹೊಂದಿರುತ್ತವೋ ಅದೇ ರೀತಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಮನೆಗಳಿಗೆ ತಮ್ಮದೇ ಆದ ಬಣ್ಣಗಳಿರುತ್ತವೆ. ಇದೀಗ ಬಡವರು ಕೇವಲ ಮನೆಗಳನ್ನಷ್ಟೇ ಪಡೆಯುತ್ತಿಲ್ಲ, ಮನೆಯ ಜೊತೆಗೆ ಶೌಚಾಲಯ, ಉಜ್ವಲ ಅನಿಲ ಸಂಪರ್ಕ, ಸೌಭಾಗ್ಯ ಯೋಜನೆ ಅಡಿ ವಿದ್ಯುತ್ ಸಂಪರ್ಕ, ಎಲ್ಇಡಿ ಬಲ್ಬ್, ನೀರಿನ ಸಂಪರ್ಕ ಮತ್ತು ಮನೆಯ ಜೊತೆಗೆ ಅಗತ್ಯವಾದ ಎಲ್ಲ ಸೌಲಭ್ಯವೂ ದೊರಕುತ್ತಿವೆ. ಇದರಿಂದಾಗಿ ಫಲಾನುಭವಿಗಳಿಗೆ ಪಿಎಂ ಆವಾಸ್ ಯೋಜನೆಯ ಆಧಾರದ ಮೇಲೆ ಹಲವು ಯೋಜನೆಯ ಎಲ್ಲ ಸವಲತ್ತುಗಳು ಒಟ್ಟಿಗೆ ಲಭ್ಯವಾಗುತ್ತವೆ. ನಾನು ಶಿವರಾಜ್ ಜಿ ಅವರ ಸರ್ಕಾರವನ್ನು ಮತ್ತೊಮ್ಮೆ ಅಭಿನಂದಿಸಲು ಬಯಸುತ್ತೇನೆ. ಸರ್ಕಾರ ಯೋಜನೆಯನ್ನು ವಿಸ್ತರಣೆ ಮಾಡಿದ್ದಕ್ಕಾಗಿ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 27 ಇತರ ಯೋಜನೆಗಳನ್ನು ಸಂಯೋಜನೆಗೊಳಿಸಿದ್ದಕ್ಕಾಗಿ.

ಮಿತ್ರರೇ, ಬಡವರಿಗೆ ಅದು ಪ್ರಧಾನಮಂತ್ರಿ ಆವಾಸ್ ಯೋಜನೆಯಾಗಿರಬಹುದು ಅಥವಾ ಸ್ವಚ್ಛ ಭಾರತ್ ಅಭಿಯಾನದಡಿ ಶೌಚಾಲಯ ನಿರ್ಮಾಣವಾಗಿರಬಹುದು. ಎಲ್ಲ ಸೌಕರ್ಯಗಳು ಸಿಗುತ್ತಿವೆ. ಇವು ಉದ್ಯೋಗ ಮತ್ತು ಸಬಲೀಕರಣದ ಪ್ರಮುಖ ವಿಧಾನಗಳಾಗಿವೆ. ವಿಶೇಷವಾಗಿ ಯೋಜನೆಗಳು ನಮ್ಮ ಗ್ರಾಮೀಣ ಭಾಗದ ಮಹಿಳೆಯರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಪಾತ್ರವನ್ನು ವಹಿಸುತ್ತಿವೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ನಿರ್ಮಿಸುತ್ತಿರುವ ಬಹುತೇಕ ಮನೆಗಳು ಮಹಿಳೆಯರ ಹೆಸರಿನಲ್ಲಿ ನೋಂದಣಿಯಾಗುತ್ತಿವೆ ಅಥವಾ ಜಂಟಿಯಾಗಿ ನೋಂದಣಿಯಾಗುತ್ತಿವೆ. ಇದೇ ವೇಳೆ ಬಹುದೊಡ್ಡ ಸಂಖ್ಯೆಯ ಮಹಿಳಾ ಮೇಸ್ತ್ರಿಗಳಿಗೆ ಹೊಸ ದುಡಿಯುವ ಅವಕಾಶಗಳನ್ನು ಸೃಷ್ಟಿಸಲಾಗಿದೆ. ಮಧ್ಯಪ್ರದೇಶ ಒಂದರಲ್ಲೇ 50 ಸಾವಿರಕ್ಕೂ ಅಧಿಕ ಮೇಸ್ತ್ರಿಗಳಿಗೆ ತರಬೇತಿ ನೀಡಲಾಗಿದೆ ಮತ್ತು ಅದರಲ್ಲಿ 9,000 ಮಹಿಳಾ ಮೇಸ್ತ್ರಿಗಳು ಸೇರಿದ್ದಾರೆ ಇದರಿಂದಾಗಿ ನಮ್ಮ ಸಹೋದರಿಯರಿಗೆ ಆತ್ಮವಿಶ್ವಾಸ ಹೆಚ್ಚಿರುವುದಲ್ಲದೆ, ಆದಾಯವೂ ಸಹ ವೃದ್ಧಿಯಾಗಿದೆ.

ಮಿತ್ರರೇ, ಬಡವರಲ್ಲಿ ಆದಾಯ ಮತ್ತು ಆತ್ಮ ವಿಶ್ವಾಸ ವೃದ್ಧಿಯಾದರೆ, ಅದು ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ನಮ್ಮ ಸಂಕಲ್ಪವನ್ನು ಬಲವರ್ಧನೆಗೊಳಿಸುತ್ತದೆ. ಆತ್ಮ ವಿಶ್ವಾಸವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಆಧುನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಮಗಳಿಗೆ ಅಗತ್ಯ ಮೂಲಸೌಕರ್ಯಗಳಾದ ಶೌಚಾಲಯ, ಅನಿಲ, ವಿದ್ಯುತ್ ಮತ್ತು ರಸ್ತೆಗಳನ್ನು 2019ರವರೆಗೆ ಮೊದಲ 5 ವರ್ಷಗಳಲ್ಲಿ ಲಭ್ಯವಾಗುವಂತೆ ಮಾಡಿದ್ದೆವು, ಇದೀಗ ಗ್ರಾಮಗಳಲ್ಲಿ ಸೌಕರ್ಯಗಳ ಜೊತೆಗೆ ಆಧುನಿಕ ಮೂಲಸೌಕರ್ಯಗಳನ್ನು ಒಗದಿಸಲಾಗುತ್ತಿದೆ. ಈ ವರ್ಷ ಆಗಸ್ಟ್ 15ರಂದು ಕೆಂಪುಕೋಟೆಯಿಂದ ನಾನು, ಮುಂದಿನ ಒಂದು ಸಾವಿರ ದಿನಗಳಲ್ಲಿ ಆರು ಲಕ್ಷ ಗ್ರಾಮಗಳಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಆಳವಡಿಸಲಾಗುವುದು ಎಂದು ಪ್ರಕಟಿಸಿದ್ದೆ. ಈ ಮೊದಲು 2.5ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ಫೈಬರ್ ಕೇಬಲ್ ಅಳವಡಿಸುವ ಗುರಿ ಹೊಂದಲಾಗಿತ್ತು, ಇದೀಗ ನಾವು ಪ್ರತಿಯೊಂದು ಗ್ರಾಮವನ್ನು ತಲುಪುವ ಪಣ ತೊಟ್ಟಿದ್ದೇವೆ.

ಕೊರೊನಾದ ಸಮಯದಲ್ಲೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನದಡಿ ಕಾಮಗಾರಿಗಳು ಕ್ಷಿಪ್ರವಾಗಿ ನಡೆಯುತ್ತಿವೆ. ಕಲವೇ ವಾರಗಳಲ್ಲಿ ದೇಶದ 116 ಜಿಲ್ಲೆಗಳಲ್ಲಿ 5ಸಾವಿರಕ್ಕೂ ಅಧಿಕ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲಾಗಿದೆ. ಅದರ ಪರಿಣಾಮ, 1.250 ಗ್ರಾಮ ಪಂಚಾಯ್ತಿಗಳಿಗೆ 15 ಸಾವಿರ ಉಚಿತ ವೈ-ಫೈ ಹಾಟ್ ಸ್ಪಾಟ್ ಗಳು ಮತ್ತು ಸುಮಾರು 19 ಸಾವಿರಕ್ಕೂ ಅಧಿಕ ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ನೀಡಲಾಗಿದೆ. ಮಧ್ಯಪ್ರದೇಶದ ಆಯ್ದ ಜಿಲ್ಲೆಗಳಲ್ಲಿ ಸುಮಾರು 1300 ಕಿಲೋಮೀಟರ್ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲಾಗಿದೆ. ನಾನು ನಿಮಗೆ ಮತ್ತೊಮ್ಮೆ ತಿಳಿಸುವುದೇನೆಂದರೆ, ಈ ಎಲ್ಲ ಕಾಮಗಾರಿ ಕೊರೊನಾ ಸಮಯದಲ್ಲಿ, ದೊಡ್ಡ ಬಿಕ್ಕಟ್ಟಿನ ನಡುವೆಯೇ ಆಗಿದೆ ಎಂಬುದು, ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ತಲುಪಿದಾಗ ಕ್ಷಣ, ಅಲ್ಲಿನ ನೆಟ್ ವರ್ಕ್ ಸಮಸ್ಯೆ ನಿವಾರಣೆಯಾಗಲಿದೆ. ಗ್ರಾಮಗಳಲ್ಲಿನ ಮಕ್ಕಳು ಮತ್ತು ಯುವಕರು ಶಿಕ್ಷಣದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ ಮತ್ತು ಉತ್ತಮ ವೇಗದ ಅಂತರ್ಜಾಲ ಸಂಪರ್ಕ ಗ್ರಾಮಗಳನ್ನು ತಲುಪುವುದರಿಂದ ಮತ್ತು ಎಲ್ಲೆಡೆ ವೈ-ಫೈ ಹಾಟ್ ಸ್ಪಾಟ್ ಗಳು ಲಭ್ಯವಿರುವುದರಿಂದ ಅವರ ಗಳಿಕೆಯೂ ಹೆಚ್ಚಾಗಲಿದೆ. ಗ್ರಾಮಗಳಿಗೆ ಕೇವಲ ವೈ-ಫೈ ಹಾಟ್ ಸ್ಪಾಟ್ ಸಂಪರ್ಕ ಮಾತ್ರವಲ್ಲ, ಅವುಗಳು ಆಧುನಿಕ ಚಟುವಟಿಕೆಗಳ ಮತ್ತು ವಾಣಿಜ್ಯದ ತಾಣಗಳಾಗಿವೆ.

ಮಿತ್ರರೇ, ಇಂದು ಸರ್ಕಾರದ ಪ್ರತಿಯೊಂದು ಸೇವೆ ಮತ್ತು ಸೌಕರ್ಯಗಳನ್ನು ಆನ್ ಲೈನ್ ಗೊಳಿಸಲಾಗಿದೆ, ಇದರಿಂದಾಗಿ ಅವುಗಳ ಪ್ರಯೋಜನ ಕ್ಷಿಪ್ರವಾಗಿ ದೊರಕಲಿವೆ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಮತ್ತು ಗ್ರಾಮಗಳ ಜನರು ಸಣ್ಣಪುಟ್ಟ ಕೆಲಸಗಳಿಗೆ ನಗರಕ್ಕೆ ಧಾವಿಸಬೇಕಾದ ಅಗತ್ಯವಿರುವುದಿಲ್ಲ. ನೀವು ನಿಮ್ಮ ಹೊಸ ಮನೆಗಳಲ್ಲಿ ಬಾಳ್ವೆ ನಡೆಸಲಾರಂಭಿಸಿದ ಮೇಲೆ ಡಿಜಿಟಲ್ ಭಾರತ ಅಭಿಯಾನ ನಿಮ್ಮ ಜೀವನವನ್ನು ಮತ್ತಷ್ಟು ಸುಲಭಗೊಳಿಸಲಿದೆ. ಈ ಅಭಿಯಾನ ಗ್ರಾಮಗಳು ಮತ್ತು ಬಡವರನ್ನು ಮತ್ತಷ್ಟು ಸಬಲೀಕರಣಗೊಳಿಸುತ್ತದೆ. ಈ ನಂಬಿಕೆಯೊಂದಿಗೆ ನಾನು ನಿಮ್ಮದೇ ಪಕ್ಕಾ ಮನೆಯನ್ನು ಹೊಂದುತ್ತಿರುವ ನನ್ನೆಲ್ಲಾ ಮಿತ್ರರಿಗೆ ಶುಭ ಕೋರುತ್ತೇನೆ. ಆದರೆ ಒಂದು ನೆನಪಿನಲ್ಲಿಟ್ಟುಕೊಳ್ಳಿ, ಸದಾ ಮತ್ತೆ ಮತ್ತೆ ಹೇಳುತ್ತಿರುತ್ತೇನೆ ಮತ್ತು ನೀವು ಕೂಡ ನೆನಪಿನಲ್ಲಿಟ್ಟುಕೊಂಡಿರುತ್ತೇರೆಂದು ಭಾವಿಸಿದ್ದೇನೆ, ಅಷ್ಟೇ ಅಲ್ಲ, ನೀವು ಇಲ್ಲಿ ಕೇಳಿಸಿಕೊಳ್ಳಿ, ಎಲ್ಲಿಯವರೆಗೆ ಕೊರೊನಾ ಸೋಂಕಿಗೆ ಔಷಧಿ ಇರುವುದಿಲ್ಲವೋ ಅಲ್ಲಿಯವರೆಗೆ ನೀವು ಮೈಮರೆಯಬೇಡಿ, ಎರಡು ಗಜ ದೂರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವ ಮಂತ್ರವನ್ನು ಮರೆಯಬೇಡಿ. ನಿಮ್ಮ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಿ.

ಶುಭಾಶಯಗಳೊಂದಿಗೆ ನಾನು ನಿಮಗೆ ತುಂಬಾ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಮತ್ತು ನಿಮಗೆಲ್ಲಾ ಒಳ್ಳೆಯದಾಗಲಿ.

***



(Release ID: 1653934) Visitor Counter : 178