ಪ್ರಧಾನ ಮಂತ್ರಿಯವರ ಕಛೇರಿ

ಪೆಟ್ರೋಲಿಯಂ ವಲಯಕ್ಕೆ ಸಂಬಂಧಿಸಿದ ಬಿಹಾರದ ಮೂರು ಪ್ರಮುಖ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ

Posted On: 13 SEP 2020 2:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೆಟ್ರೋಲಿಯಂ ವಲಯಕ್ಕೆ ಸಂಬಂಧಿಸಿದ ಬಿಹಾರದಲ್ಲಿನ ಮೂರು ಪ್ರಮುಖ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ರಾಷ್ಟ್ರಕ್ಕೆ ಸಮರ್ಪಿಸಿದರು. 

ಈ ಯೋಜನೆಗಳಲ್ಲಿ ಪಾರಾದೀಪ್–ಹಲ್ದಿಯಾ-ದುರ್ಗಾಪುರ್ ಕೊಳೆವೆ ಅಭಿವೃದ್ಧಿ ಮಾರ್ಗದ ದುರ್ಗಾಪುರ್-ಬಂಕಾ  ವಲಯ ಮತ್ತು ಎರಡು ಅಡುಗೆ ಅನಿಲ ಬಾಟ್ಲಿಂಗ್ ಘಟಕಗಳು ಸೇರಿವೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಉದ್ದಿಮೆಗಳಾದ ಇಂಡಿಯನ್ ಆಯಿಲ್ ಮತ್ತು ಎಚ್ ಪಿಸಿಎಲ್, ಈ ಯೋಜನೆಯನ್ನು ಕಾರ್ಯಾಚರಣೆಗೊಳಿಸಿವೆ. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಕೆಲವು ವರ್ಷಗಳ ಹಿಂದೆ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿತ್ತು. ಅದರಲ್ಲಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು ಎಂದರು. ಬಿಹಾರಕ್ಕೆ ನೀಡಲಾಗಿದ್ದ ವಿಶೇಷ ಪ್ಯಾಕೇಜ್ ನಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಕ್ಕೆ ಸಂಬಂಧಿಸಿದ ಹತ್ತು ದೊಡ್ಡ ಯೋಜನೆಗಳಿದ್ದವು, ಅವುಗಳ ಮೌಲ್ಯ 21 ಸಾವಿರ ಕೋಟಿ ರೂ.ಗಳು. ಅವುಗಳ ಪೈಕಿ ಬಿಹಾರದಲ್ಲಿ ಇಂದು ಏಳನೇ ಯೋಜನೆಯನ್ನು ಬಿಹಾರದ ಜನರಿಗೆ ಸಮರ್ಪಿಸಲಾಗಿದೆ ಎಂದರು. ಬಿಹಾರದಲ್ಲಿ ಈ ಮೊದಲು ಪೂರ್ಣಗೊಳಿಸಿರುವ ಆರು ಯೋಜನೆಗಳ ಪಟ್ಟಿಯನ್ನೂ ಸಹ ಅವರು ಉಲ್ಲೇಖಿಸಿದರು. 

ದುರ್ಗಾಪುರ್-ಬಂಕಾ ವಲಯ(ಸುಮಾರು 200ಕಿಲೋಮೀಟರ್) ಉದ್ಘಾಟಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಇದು ಅತ್ಯಂತ ಪ್ರಮುಖ ಅನಿಲ ಕೊಳವೆ ಮಾರ್ಗ ಯೋಜನೆಯಾಗಿದ್ದು, ಒಂದೂವರೆ ವರ್ಷದ ಹಿಂದೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದರು. ಕಡಿದಾದ ಪ್ರದೇಶಗಳಲ್ಲಿ ಹಲವು ಸವಾಲುಗಳ ಮಧ್ಯೆ, ಸಕಾಲದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಸಕ್ರಿಯ ಬೆಂಬಲ ಮತ್ತು ಕಾರ್ಮಿಕರು ಹಾಗೂ ಇಂಜಿನಿಯರ್ ಗಳ ಪರಿಶ್ರಮಕ್ಕ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಹಾರದಲ್ಲಿ ಮೊದಲು ಒಂದು ತಲೆಮಾರು ಕೆಲಸವನ್ನು ಆರಂಭಿಸುತ್ತಿತ್ತು ಮತ್ತು ಮತ್ತೊಂದು ತಲೆಮಾರು ಆ ಕೆಲಸವನ್ನು ಪೂರ್ಣಗೊಳಿಸುವಂತಹ ಕೆಲಸದ ಸಂಸ್ಕೃತಿ ಇತ್ತು. ಅದನ್ನು ಸಂಪೂರ್ಣವಾಗಿ ಬದಲಾಯಿಸುವಲ್ಲಿ ಬಿಹಾರದ ಮುಖ್ಯಮಂತ್ರಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹೊಸ ದುಡಿಯುವ ಸಂಸ್ಕೃತಿಯನ್ನು ಮತ್ತಷ್ಟು ಬಲವರ್ಧನೆಗೊಳಿಸಬೇಕಿದೆ ಎಂದ ಅವರು, ಇದರಿಂದ ಬಿಹಾರ ಮತ್ತು ಪೂರ್ವ ಭಾರತವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಬಹುದಾಗಿದೆ ಎಂದರು. 

ಪ್ರಧಾನಮಂತ್ರಿಗಳು, ನಮ್ಮ ಪುರಾಣ ಗ್ರಂಥಗಳಲ್ಲಿರುವ “सामर्थ्य मूलं स्वातंत्र्यम्, श्रम मूलं वैभवम् ಉಲ್ಲೇಖಿಸಿದರು. ಅದರ ಅರ್ಥ ಸ್ವಾತಂತ್ರ್ಯದ ಮೂಲ ಸಾಮರ್ಥ್ಯವಾಗಿದೆ. ಯಾವುದೇ ದೇಶದ ಅಭಿವೃದ್ಧಿಗೆ ಕಾರ್ಮಿಕ ವರ್ಗದ ಶಕ್ತಿಯೇ ಆಧಾರ ಎಂಬುದು. ಬಿಹಾರ ಸೇರಿದಂತೆ ಪೂರ್ವ ಭಾರತದಲ್ಲಿ ಕಾರ್ಮಿಕ ಶಕ್ತಿಗೆ ಯಾವುದೇ ಕೊರತೆ ಇಲ್ಲ ಎಂದ ಅವರು, ಈ ಭಾಗದಲ್ಲಿ ನೈಸರ್ಗಿಕ ಸಂಪನ್ಮೂಲಗಳಿಗೂ ಸಹ ಕೊರತೆ ಇಲ್ಲ. ಇದೆಲ್ಲದರ ನಡುವೆಯೇ ಬಿಹಾರ ಮತ್ತು ಪೂರ್ವ ಭಾರತ ಅಭಿವೃದ್ಧಿಯಲ್ಲಿ ದಶಕಗಳಷ್ಟು ಹಿಂದುಳಿದಿದೆ ಮತ್ತು ರಾಜಕೀಯ, ಆರ್ಥಿಕ ಕಾರಣಗಳು ಹಾಗೂ ಇತರೆ ಆದ್ಯತೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಸಾಕಷ್ಟು ವಿಳಂಬದಿಂದ ನಲುಗಿದೆ ಎಂದು ಹೇಳಿದರು. ರಸ್ತೆ ಸಂಪರ್ಕ, ರೈಲು ಸಂಪರ್ಕ, ವಾಯುಸಂಪರ್ಕ, ಅಂತರ್ಜಾಲ ಸಂಪರ್ಕ ಇವು ಮೊದಲು ಆದ್ಯತೆಗಳಾಗಿರಲಿಲ್ಲ. ಅನಿಲ ಆಧಾರಿತ ಉದ್ಯಮ ಮತ್ತು ಪೆಟ್ರೋ ಸಂಪರ್ಕ ಬಿಹಾರದಲ್ಲಿ ಕಲ್ಪಿಸಿಕೊಂಡಿರಲಿಲ್ಲ ಎಂದರು. ಬಿಹಾರದಲ್ಲಿ ಅನಿಲ ಆಧಾರಿತ ಉದ್ಯಮ ಅಭಿವೃದ್ಧಿಪಡಿಸುವುದು ಬೃಹತ್ ಸವಾಲಾಗಿತ್ತು. ಏಕೆಂದರೆ ಬಿಹಾರ ಎಲ್ಲ ಕಡೆಯಿಂದಲೂ ಭೂಮಿಯಿಂದ ಸುತ್ತುವರಿದ ರಾಜ್ಯವಾಗಿದೆ. ಆದ್ದರಿಂದ ಪೆಟ್ರೋಲಿಯಂ ಮತ್ತು ಅನಿಲಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳ ಕೊರತೆ ಇದೆ. ಆದರೆ ಸಮುದ್ರಕ್ಕೆ ಹೊಂದಿಕೊಂಡಿರುವ ಬಹುತೇಕ ರಾಜ್ಯಗಳಲ್ಲಿ ಈ ಸಂಪನ್ಮೂಲ ಲಭ್ಯವಿದೆ ಎಂದರು. 

ಅನಿಲ ಆಧಾರಿತ ಉದ್ಯಮ ಮತ್ತು ಪೆಟ್ರೋ ಸಂಪರ್ಕ ಜನರ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ ಎಂದ ಪ್ರಧಾನಮಂತ್ರಿ ಅವರು, ಜನರ ಜೀವನ ಮಟ್ಟದ ಮಾತ್ರ ಪರಿಣಾಮ ಬೀರುವುದಲ್ಲದೆ, ಮಿಲಿಯನ್ ಗಟ್ಟಲೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದರು. ಇಂದು ಸಿಎನ್ ಜಿ ಮತ್ತು ಪಿಎನ್ ಜಿ ಬಿಹಾರ ಮತ್ತು ಪೂರ್ವ ಭಾರತದ ಹಲವು ನಗರಗಳನ್ನು ತಲುಪುತ್ತಿದೆ. ಜನರು ಈ ಸೌಕರ್ಯಗಳನ್ನು ಅತ್ಯಂತ ಸುಲಭವಾಗಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಪೂರ್ವದ ಸಮುದ್ರದಲ್ಲಿರುವ ಪಾರಾದೀಪ್ ಅನ್ನು ಪೂರ್ವ ಭಾರತದ ಜೊತೆ ಸಂಪರ್ಕ ಸಾಧಿಸಲು ಭಗೀರಥ ಪ್ರಯತ್ನಗಳನ್ನು ನಡೆಸಲಾಯಿತು. ಪಶ್ಚಿಮ ಭಾಗದಲ್ಲಿರುವ ಕಾಂಡ್ಲಾ ಸಂಪರ್ಕಕ್ಕೆ ಪ್ರಧಾನಮಂತ್ರಿ ಉರ್ಜಾ ಗಂಗಾ ಯೋಜನೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಸುಮಾರು 3000 ಕಿಲೋಮೀಟರ್ ಉದ್ದದ ಅನಿಲ ಕೊಳವೆ ಮಾರ್ಗ ಏಳು ರಾಜ್ಯಗಳನ್ನು ಸಂಪರ್ಕಿಸಲಿದ್ದು, ಇದರಲ್ಲಿ ಬಿಹಾರ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು. ಪಾರಾದೀಪ್-ಹಲ್ದಿಯಾ ನಡುವಿನ ಮಾರ್ಗ ಇದೀಗ ಪಾಟ್ನಾ, ಮುಝಫರ್ ಪುರ್ ವರೆಗೆ ಮತ್ತಷ್ಟು ವಿಸ್ತರಿಸಲಾಗಿದೆ ಮತ್ತು ಕಾಂಡ್ಲಾದಿಂದ ಬರುವ ಪೈಪ್ ಲೈನ್ ಗೋರಖ್ ಪುರದ ವರೆಗೆ ತಲುಪಲಿದ್ದು, ಆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲಾಗುವುದು. ಇಡೀ ಯೋಜನೆ ಪೂರ್ಣಗೊಂಡರೆ ಅದು ವಿಶ್ವದ ಅತಿ ದೊಡ್ಡ ಕೊಳವೆ ಮಾರ್ಗ ಯೋಜನೆಯಾಗಲಿದೆ ಎಂದು ಪ್ರಧಾನಿ ಹೇಳಿದರು. 

ಈ ಅನಿಲ ಕೊಳವೆ ಮಾರ್ಗದಿಂದಾಗಿ ಬಿಹಾರದಲ್ಲಿ ದೊಡ್ಡ ಬಾಟ್ಲಿಂಗ್ ಘಟಕಗಳನ್ನು  ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆ ಪೈಕಿ ಎರಡು ಬಾಟ್ಲಿಂಗ್ ಘಟಕಗಳು ಇಂದು ಬಂಕಾ ಮತ್ತು ಚಂಪಾರಣ್ ಗಳಲ್ಲಿ ಆರಂಭವಾಗಿವೆ ಎಂದರು. ಈ ಎರಡು ಘಟಕಗಳು ಪ್ರತಿ ವರ್ಷ 125 ಮಿಲಿಯನ್ ಸಿಲಿಂಡರ್ ಗೂ ಅಧಿಕ ಸಿಲಿಂಡರ್ ಗಳನ್ನು ಭರ್ತಿಮಾಡುವ ಸಾಮರ್ಥ್ಯವನ್ನು ಹೊಂದಿವೆ. ಈ ಘಟಕಗಳು ಗೊಡ್ಡ, ದಿಯೋಘರ್, ದುಮ್ಕಾ, ಸಾಹಿಬ್ ಗಂಜ್, ಪಕೂರ್ ಜಿಲ್ಲೆಗಳು ಮತ್ತು ಉತ್ತರ ಪ್ರದೇಶ ಹಾಗೂ ಜಾರ್ಖಂಡ್ ನ ಕೆಲವು ಪ್ರದೇಶಗಳ ಎಲ್ ಪಿಜಿ ಅಗತ್ಯತೆಗಳನ್ನು ಪೂರೈಸಲಿದೆ. ಈ ಅನಿಲ ಕೊಳವೆ ಮಾರ್ಗ ಅಳವಡಿಕೆಯಿಂದಾಗಿ ಬಿಹಾರದಲ್ಲಿ ಸಾವಿರಾರು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಮತ್ತು ಇಂಧನ ಆಧರಿಸಿದ ಹೊಸ ಉದ್ಯಮಗಳು ಆರಂಭವಾಗಲಿವೆ ಎಂದರು 

ಬರೌನಿಯಲ್ಲಿದ್ದ ರಸಗೊಬ್ಬರ ಕಾರ್ಖಾನೆ ಹಿಂದೆ ಮುಚ್ಚಲ್ಪಟ್ಟಿತ್ತು. ಈ ಅನಿಲ ಕೊಳವೆ ಮಾರ್ಗ ನಿರ್ಮಾಣದ ನಂತರ ಅದು ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಉಜ್ವಲ ಯೋಜನೆ ಅಡಿ ಈವರೆಗೆ ದೇಶಾದ್ಯಂತ 8 ಕೋಟಿ ಬಡಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ ಎಂದು ಅವರು ಹೇಳಿದರು. ಕೊರೊನಾ ಸಮಯದಲ್ಲಿ ಇದು ಬಡವರ ಜೀವನ ಕ್ರಮವನ್ನು ಬದಲಾಯಿಸಿದೆ. ಏಕೆಂದರೆ ಜನರು ಮನೆಯಲ್ಲೇ ಉಳಿಯಲು ಇದು ಅತ್ಯಂತ ಅಗತ್ಯವಾಗಿತ್ತು. ಇಲ್ಲವಾದರೆ ಅವರು ಸೌದೆ ಮತ್ತು ಇತರೆ ಉರುವಲು ಸಂಗ್ರಹಕ್ಕಾಗಿ ಅವರು ಹೊರಗೆ ಹೋಗಬೇಕಿತ್ತು ಎಂದು ಅವರು ಹೇಳಿದರು. 

ಕೊರೊನಾ ಸಮಯದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಿಲಿಯನ್ ಗಟ್ಟಲೆ ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಾಗಿದೆ. ಇದರಿಂದ ಮಿಲಿಯನ್ ಗಟ್ಟಲೆ ಬಡಕುಟುಂಬಗಳಿಗೆ ಪ್ರಯೋಜನವಾಗಿದೆ ಎಂದು ಅವರು ಹೇಳಿದರು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಕಂಪನಿಗಳ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಸಹಸ್ರಾರು ವಿತರಣಾ ಪಾಲುದಾರರನ್ನು ಹೊಂದಿದ್ದಾರೆ. ಅವರು ಅನಿಲ ಕೊರತೆ ಎದುರಾಗದಂತೆ ನಿಗಾವಹಿಸಿದ್ದಾರೆ. ಕೊರೊನಾ ಸಮಯದಲ್ಲಿ ಸೋಂಕಿನ ಭೀತಿ ನಡುವೆಯೂ ಅವರುಗಳು ನಿರಂತರವಾಗಿ ಅಡುಗೆ ಅನಿಲ ಪೂರೈಸಿದ್ದಾರೆ ಎಂದರು. ಬಿಹಾರದಲ್ಲಿ ಅಡುಗೆ ಅನಿಲ ಸಂಪರ್ಕಕ್ಕಾಗಿ ಪ್ರಭಾವಿ ವ್ಯಕ್ತಿಗಳಿಂದ ಸಹಿ  ಮಾಡಿಸಿಕೊಳ್ಳಬೇಕಾದ ಕಾಲವಿತ್ತು. ಜನರು ಪ್ರತಿಯೊಂದು ಅನಿಲ ಸಂಪರ್ಕಕ್ಕೂ ಶಿಫಾರಸ್ಸುಗಳನ್ನು ಪಡೆಯಬೇಕಿತ್ತು. ಉಜ್ವಲ ಯೋಜನೆಯಿಂದಾಗಿ ಇದೀಗ ಬಿಹಾರದಲ್ಲಿ ಈ ಸ್ಥಿತಿ ಬದಲಾವಣೆಯಾಗಿದೆ. ಬಿಹಾರದಲ್ಲಿ ಸುಮಾರು 1.25 ಕೋಟಿ ಬಡಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಮನೆಗಳಲ್ಲಿ ಅಡುಗೆ ಅನಿಲ ಸಂಪರ್ಕದಿಂದ ಬಿಹಾರದ ಕೋಟ್ಯಾಂತರ ಬಡಜನರ ಜೀವನ ಬದಲಾಗಿದೆ ಎಂದು ಹೇಳಿದರು. 

ಬಿಹಾರದ ಯುವಜನರನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು, ಬಿಹಾರ ದೇಶದ ಪ್ರತಿಭೆಯ ಶಕ್ತಿ ತಾಣವಾಗಿದೆ ಎಂದರು. ಬಿಹಾರದ ಸಾಮರ್ಥ್ಯ ಮತ್ತು ಬಿಹಾರದ ಕಾರ್ಮಿಕ ಶಕ್ತಿಯ ಹೆಜ್ಜೆಗುರುತುಗಳು, ಪ್ರತಿಯೊಂದು ರಾಜ್ಯದ ಅಭಿವೃದ್ಧಿಯಲ್ಲಿ ಕಾಣಬಹುದಾಗಿದೆ ಎಂದು ಅವರು ಹೇಳಿದರು. ಕಳೆದ 15 ವರ್ಷಗಳಿಂದೀಚೆಗೆ ಬಿಹಾರದಲ್ಲೂ ಉತ್ತಮ ಸರ್ಕಾರ ಆಡಳಿತ ನಡೆಸುತ್ತಿದ್ದು, ಸೂಕ್ತ ನಿರ್ಧಾರಗಳನ್ನು ಮತ್ತು ಸ್ಪಷ್ಟ ನೀತಿಗಳನ್ನು ಕೈಗೊಳ್ಳುತ್ತಿರುವುದರಿಂದ ಅಭಿವೃದ್ಧಿ ಪ್ರಗತಿಯಲ್ಲಿದೆ ಮತ್ತು ಪ್ರತಿಯೊಬ್ಬರಿಗೂ ಅದು ತಲುಪುತ್ತಿದೆ ಎಂದು ಅವರು ಹೇಳಿದರು. ಬಿಹಾರದ ಯುವಕರು ಹೊಲಗಳಲ್ಲಿ ದುಡಿಯುವುದರಿಂದ ಅವರಿಗೆ ಶಿಕ್ಷಣದ ಅಗತ್ಯವಿಲ್ಲ ಎಂಬ ಭಾವನೆ ಇತ್ತು. ಈ ಚಿಂತನೆಯಿಂದಾಗಿ ಬಿಹಾರದಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಗಳ ಆರಂಭಿಸುವ ನಿಟ್ಟಿನಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗಿರಲಿಲ್ಲ. ಅದರ ಪರಿಣಾಮ ಬಿಹಾರದ ಯುವಕರು ಬಲವಂತವಾಗಿ ಹೊರ ರಾಜ್ಯಗಳಿಗೆ ಹೋಗಿ ಅಲ್ಲಿ ಓದುವ ಮತ್ತು ಕೆಲಸ ಮಾಡುವ ಸ್ಥಿತಿ ಸೃಷ್ಟಿಯಾಗಿತ್ತು. ತೋಟಗಳಲ್ಲಿ, ಹೊಲದಲ್ಲಿ ಕೆಲಸ ಮಾಡುವುದು ಅತ್ಯಂತ ಕಷ್ಟಕರ. ಆದರೆ ಯುವಕರಿಗೆ ಇತರೆ ಅವಕಾಶಗಳು ಸಿಗುತ್ತಿರಲಿಲ್ಲ ಮತ್ತು ಅಂತಹ ವ್ಯವಸ್ಥೆಗಳು ಇರಲಿಲ್ಲ, ಅದು ಸೂಕ್ತವಲ್ಲ.

ಇಂದು ಬಿಹಾರದಲ್ಲಿ ದೊಡ್ಡ ದೊಡ್ಡ ಶಿಕ್ಷಣ ಕೇಂದ್ರಗಳು ಆರಂಭವಾಗುತ್ತಿವೆ ಎಂದು ಪ್ರಧಾನಿ ಹೇಳಿದರು. ಇದೀಗ ಕೃಷಿ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ವೃದ್ಧಿಯಾಗುತ್ತಿವೆ. ಅಲ್ಲದೆ ಐಐಟಿ, ಐಐಎಂ ಮತ್ತು ಐಐಐಟಿ ಬಿಹಾರ ರಾಜ್ಯದಲ್ಲಿನ ಯುವಕರ ಕನಸುಗಳು ನನಸಾಗಲು ಸಹಾಯ ಮಾಡುತ್ತಿವೆ. ಪಾಲಿಟೆಕ್ನಿಕ್ ಕೇಂದ್ರಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿರುವ ಬಿಹಾರದ ಮುಖ್ಯಮಂತ್ರಿಗಳ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಎರಡು ಅತಿದೊಡ್ಡ ವಿಶ್ವವಿದ್ಯಾಲಯಗಳು, ಒಂದು ಐಐಟಿ, ಒಂದು ಐಐಎಂ, ಒಂದು ಎನ್ಐಎಫ್ ಟಿ ಮತ್ತು ಒಂದು ರಾಷ್ಟ್ರೀಯ ಕಾನೂನು ಕೇಂದ್ರಗಳು ಸ್ಥಾಪನೆಯಾಗಿವೆ ಎಂದರು. 

ಸ್ಟಾರ್ಟ್ ಅಪ್ ಇಂಡಿಯಾ, ಮುದ್ರಾ ಯೋಜನೆ ಮತ್ತು ಹಲವು ಯೋಜನೆಗಳು ಬಿಹಾರದಲ್ಲಿ ಯುವಜನತೆಗೆ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಅಗತ್ಯ ಹಣಕಾಸು ಸೌಲಭ್ಯವನ್ನು ಒದಗಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಬಿಹಾರದಲ್ಲಿ ಇದೀಗ ಹಿಂದೆಂದು ಕಾಣದ ರೀತಿಯಲ್ಲಿ ನಗರಗಳು ಮತ್ತು ಗ್ರಾಮಗಳಲ್ಲಿ ವಿದ್ಯುಚ್ಛಕ್ತಿ ಲಭ್ಯತೆ ಇದೆ ಎಂದು ಅವರು ಹೇಳಿದರು. ಇಂಧನ, ಪೆಟ್ರೋಲಿಯಂ ಮತ್ತು ಅನಿಲ ವಲಯಗಳಲ್ಲಿ ಆಧುನಿಕ ಮೂಲಸೌಕರ್ಯವನ್ನು ವೃದ್ಧಿಸಲಾಗುತ್ತಿದೆ. ಸುಧಾರಣೆಗಳನ್ನು ಕೈಗೊಂಡ ಪರಿಣಾಮ ಜನರ ಜೀವನ ಸುಲಭವಾಗುತ್ತಿದೆ ಮತ್ತು ಕೈಗಾರಿಕೆಗಳು ಹಾಗೂ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಕೊರೊನಾ ಸಮಯದಲ್ಲಿ ಪೆಟ್ರೋಲಿಯಂಗೆ ಸಂಬಂಧಿಸಿದ ಮೂಲಸೌಕರ್ಯ ಕಾರ್ಯಗಳು ಅಂದರೆ ರಿಫೈನರಿ ಘಟಕ ಮತ್ತು ಯೋಜನೆಗಳು, ಅನ್ವೇಷಣೆ ಅಥವಾ ಉತ್ಪಾದನೆ, ಕೊಳವೆ ಮಾರ್ಗ, ನಗರ ಅನಿಲ ಪೂರೈಕೆ ಯೋಜನೆಗಳು ಮತ್ತು ಹಲವು ಯೋಜನೆಗಳನ್ನು ಚುರುಕುಗೊಳಿಸಲಾಗಿದೆ ಎಂದರು ಸುಮಾರು 8 ಸಾವಿರಕ್ಕೂ ಅಧಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು,. ಅವುಗಳಿಗೆ ಮುಂಬರುವ ದಿನಗಳಲ್ಲಿ 6 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಎಂದು ಪ್ರಧಾನಿ ಹೇಳಿದರು. 

ವಲಸೆ ಕಾರ್ಮಿಕರು ತಮ್ಮ ತವರಿಗೆ ವಾಪಸ್ಸಾಗಿದ್ದಾರೆ ಮತ್ತು ಅವರಿಗಾಗಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಾಗತಿಕ ಸಾಂಕ್ರಾಮಿಕದ ನಡುವೆಯೂ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ವಿಶೇಷವಾಗಿ ಬಿಹಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿಲ್ಲ ಎಂದು ಅವರು ಹೇಳಿದರು. ಸುಮಾರು 100 ಲಕ್ಷ ಕೋಟಿಗೂ ಅಧಿಕ ಮೌಲ್ಯದ ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಯೋಜನೆಗಳಿಂದ ಆರ್ಥಿಕ ಚಟುವಟಿಕೆ ಹಚ್ಚಾಗಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಬಿಹಾರ, ಪೂರ್ವ ಭಾರತವನ್ನು ಅಭಿವೃದ್ಧಿಯ ಪ್ರಮುಖ ಕೇಂದ್ರವನ್ನಾಗಿ ಮಾಡಲು ಎಲ್ಲರೂ ವೇಗವಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು



(Release ID: 1653827) Visitor Counter : 232