PIB Headquarters
ಕೋವಿಡ್-19 ಪಿ ಐ ಬಿ ದೈನಿಕ ವರದಿ
Posted On:
10 JUL 2020 6:49PM by PIB Bengaluru
ಕೋವಿಡ್-19 ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು
ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)
ಕೋವಿಡ್ -19 ಕ್ಕೆ ಸಂಬಂಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಪ್ಡೇಟ್: ಗುಣಮುಖ ದರ ಇನ್ನಷ್ಟು ಏರಿಕೆಯಾಗಿ 62.42 % ತಲುಪಿದೆ.; 18 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುಣಮುಖದರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು; ಮೃತ್ಯು ಪ್ರಮಾಣ 2.72% ಗೆ ಇಳಿಕೆ
ಕೋವಿಡ್ -19 ರೋಗಿಗಳ ಸಂಖ್ಯೆಯಲ್ಲಿ ಸತತ ಹೆಚ್ಚಳ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 19,138 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 4,95,515 ಕ್ಕೇರಿದೆ. ಇದರ ಜೊತೆಯಲ್ಲೇ ರಾಷ್ಟ್ರೀಯ ಗುಣಮುಖ ದರ ಇಂದು 62.42 % ಆಗಿದೆ. 2,76,882 ಸಕ್ರಿಯ ಪ್ರಕರಣಗಳಿದ್ದು, ಎಲ್ಲವೂ ವೈದ್ಯಕೀಯ ನಿಗಾದಲ್ಲಿವೆ. ಇಂದಿನವರೆಗೆ ಪ್ರಸ್ತುತ 1218 ಕೋವಿಡ್ ಗಾಗಿಯೇ ಇರುವ ಆಸ್ಪತ್ರೆಗಳು, 2705 ಕೋವಿಡ್ ಗಾಗಿಯೇ ಇರುವ ಕೋವಿಡ್ ಆರೋಗ್ಯ ರಕ್ಷಣಾ ಕೇಂದ್ರಗಳು, 10,301 ಕೋವಿಡ್ ಶುಶ್ರೂಷಾ ಕೇಂದ್ರಗಳಿವೆ. 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುಣಮುಖದರ ರಾಷ್ಟ್ರೀಯ ದರಕ್ಕಿಂತ ಹೆಚ್ಚಾಗಿದೆ. ರಾಷ್ಟ್ರ ಮಟ್ಟದಲ್ಲಿ ಮೃತ್ಯು ದರ 2.72 % ಗೆ ಇಳಿಕೆಯಾಗಿದೆ. ಇದು ಜಗತ್ತಿನ ಇತರ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ್ದಾಗಿದೆ. 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೃತ್ಯು ಪ್ರಮಾಣದರ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ ತಂತ್ರ ಅನುಷ್ಟಾನ ಖಾತ್ರಿಗೆ ರಾಷ್ಟ್ರ ವ್ಯಾಪ್ತಿಯಲ್ಲಿ ಆದ್ಯತೆ ನೀಡಲಾಗಿದ್ದು, ಇದರಿಂದಾಗಿ 1,10,24,491 ಸ್ಯಾಂಪಲ್ ಗಳನ್ನು ಕೋವಿಡ್ -19 ಪತ್ತೆಗಾಗಿ ನಡೆಸಲಾಗಿದೆ. ದಿನವೊಂದಕ್ಕೆ ನಡೆಸುವ ಪರೀಕ್ಷೆಗಳ ಪ್ರಮಾಣವೂ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2,83,659 ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ. ದೇಶದಲ್ಲಿ ಪರೀಕ್ಷಾ ಪ್ರಯೋಗಾಲಯಗಳ ಜಾಲವನ್ನು ಇನ್ನಷ್ಟು ಬಲಪಡಿಸಲಾಗಿದೆ. ಸರಕಾರಿ ವಲಯದಲ್ಲಿ 835 ಪ್ರಯೋಗಾಲಯಗಳು ಮತ್ತು ಖಾಸಗಿ ವಲಯದಲ್ಲಿ 334 ಪ್ರಯೋಗಾಲಯಗಳು ಕಾರ್ಯಾಚರಿಸುತ್ತಿವೆ. ದೇಶದಲ್ಲಿ ಕಾರ್ಯಾಚರಿಸುತ್ತಿರುವ ಒಟ್ಟು ಪ್ರಯೋಗಾಲಯಗಳ ಸಂಖ್ಯೆ 1169.
41 ಸಾವಿರಕ್ಕೂ ಅಧಿಕ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಂದ (ಎ.ಬಿ.-ಎಚ್.ಡಬ್ಲ್ಯು. ಸಿ. ಗಳು) ವಿಶೇಷವಾಗಿ ಕೋವಿಡ್ -19 ಅವಧಿಯಲ್ಲಿ ಸಾರ್ವತ್ರಿಕ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆ
ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು (ಎಚ್.ಡಬ್ಲ್ಯು. ಸಿ. ಗಳು) ಆಯುಷ್ಮಾನ್ ಭಾರತದ ಪ್ರಮುಖ ಸ್ತಂಭಗಳಾಗಿವೆ. ಇವು 1,50,000 ಉಪ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 2022 ರೊಳಗೆ ಎಚ್.ಡಬ್ಲ್ಯು.ಸಿ.ಗಳನ್ನಾಗಿ ಪರಿವರ್ತಿಸುವ ಮೂಲಕ ಸಾರ್ವತ್ರಿಕ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣಾ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿವೆ. ಕೋವಿಡ್ -19 ರ ವಿರುದ್ದದ ಹೋರಾಟದಲ್ಲಿ ಎ.ಬಿ.-ಎಚ್. ಡಬ್ಲ್ಯು. ಸಿ. ಗಳು ಅಸಾಮಾನ್ಯ ಕೊಡುಗೆ ನೀಡಿದ ಹಲವಾರು ಉದಾಹರಣೆಗಳಿವೆ. ಅವುಗಳು ಕೆಲಸ ನಿರ್ವಹಿಸುವ ಸಮುದಾಯಗಳಲ್ಲಿ ತಳಮಟ್ಟದಲ್ಲಿ ಕೆಲಸ ನಿರ್ವಹಿಸಿರುವುದಕ್ಕೆ ಸಾಕ್ಷ್ಯಾಧಾರವಾಗಿ ಈ ವರ್ಷದ ಫೆಬ್ರವರಿ 1 ರಿಂದ ಆರಂಭಗೊಂಡಂತೆ ಐದು ತಿಂಗಳಲ್ಲಿ 8.8 ಕೋಟಿ ಹೆಜ್ಜೆ ಗುರುತುಗಳು ದಾಖಲಾಗಿವೆ. ಇದಲ್ಲದೆ ಕಳೆದ ಐದು ತಿಂಗಳಲ್ಲಿ ಎಚ್.ಡಬ್ಲ್ಯು.ಸಿ. ಗಳಲ್ಲಿ 1.41 ಕೋಟಿ ಜನರನ್ನು ಹೈಪರ್ ಟೆನ್ಷನ್ ಗಾಗಿ, 1.13 ಕೋಟಿ ಜನರನ್ನು ಮಧುಮೇಹಕ್ಕಾಗಿ ಮತ್ತು 1.34 ಕೋಟಿ ಜನರನ್ನು ಮುಖಾಂಗ, ಸ್ಥನ ಅಥವಾ ಗರ್ಭನಾಳ ಕ್ಯಾನ್ಸರ್ ಗಾಗಿ ತಪಾಸಣೆ ಮಾಡಲಾಗಿದೆ. ಕೋವಿಡ್ -19 ಸವಾಲುಗಳನ್ನು ಎದುರಿಸಿಯೂ ಎಚ್.ಡಬ್ಲ್ಯು.ಸಿ. ಗಳಲ್ಲಿ ಸುಮಾರು 5.62 ಲಕ್ಷ ಅಧಿಕ ರಕ್ತದೊತ್ತಡ ರೋಗಿಗಳಿಗೆ ಮತ್ತು 3.77 ಲಕ್ಷ ಮಧುಮೇಹಿಗಳಿಗೆ ಜೂನ್ ತಿಂಗಳೊಂದರಲ್ಲಿಯೇ ಔಷಧಿಯನ್ನು ನೀಡಲಾಗಿದೆ. ಕೋವಿಡ್ -19 ಸ್ಪೋಟದ ಬಳಿಕದ ಅವಧಿಯಲ್ಲಿ ಎಚ್.ಡಬ್ಲ್ಯು.ಸಿ. ಗಳಲ್ಲಿ 6.53 ಲಕ್ಷ ಯೋಗ ಮತ್ತು ಕ್ಷೇಮ ಅಧಿವೇಶನಗಳನ್ನು ನಡೆಸಲಾಗಿದೆ. 2020 ರ ಜನವರಿಯಿಂದ ಜೂನ್ ತಿಂಗಳವರೆಗೆ ಹೆಚ್ಚುವರಿ 12,425 ಎಚ್.ಡಬ್ಲ್ಯು. ಸಿ .ಗಳನ್ನು ಕಾರ್ಯಾಚರಿಸಲಾಗಿದೆ. ಇದರಿಂದ ಎಚ್.ಡಬ್ಯ್ಲು.ಸಿ. ಗಳ ಸಂಖ್ಯೆ 29,365 ರಿಂದ 41,790 ಕ್ಕೇರಿದೆ.
ರೇವಾ ಬೃಹತ್ ಸೌರ ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ರೇವಾ ಅಲ್ಟ್ರಾ ಬೃಹತ್ ಸೌರ ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.ಇದು ಏಶ್ಯಾದ ಅತ್ಯಂತ ದೊಡ್ಡ ವಿದ್ಯುತ್ ಯೋಜನೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು ರೇವಾ ಯೋಜನೆಯು ಈ ದಶಕದಲ್ಲಿ ಇಡೀಯ ವಲಯವನ್ನು ಶುದ್ದ ಮತ್ತು ಸ್ವಚ್ಚ ಇಂಧನ ತಾಣವನ್ನಾಗಿ ಮಾಡಲಿದೆ ಎಂದರು. ಸರಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ , ಪರಿಸರ ಸಂರಕ್ಷಣೆಗೆ ಮತ್ತು ಜೀವನಕ್ಕೆ ಅನುಕೂಲರ ವಾತಾವರಣ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು. ಸ್ವಚ್ಚ ಭಾರತ್, ಬಡ ಕುಟುಂಬಗಳಿಗೆ ಎಲ್.ಪಿ.ಜಿ.ಸಿಲಿಂಡರ್ ಗಳ ಪೂರೈಕೆ, ಸಿ.ಎನ್.ಜಿ. ಜಾಲದ ಅಭಿವೃದ್ದಿಗಳನ್ನು ಉಲ್ಲೇಖಿಸಿದ ಅವರು ಇವು ಜೀವನಕ್ಕೆ ಅನುಕೂಲಕರ ವಾತಾವರಣ ನಿರ್ಮಾಣಕ್ಕೆ ಅದ್ಯತೆ ನೀಡಿವೆ ಮತ್ತು ಬಡವರು ಹಾಗು ಮಧ್ಯಮವರ್ಗದವರ ಬದುಕನ್ನು ಸುಧಾರಿಸಲು ಆದ್ಯತೆ ನೀಡಿವೆ ಎಂದೂ ಹೇಳಿದರು. ಜಾಗತಿಕ ಸಾಂಕ್ರಾಮಿಕ ಕೋವಿಡ್ -19 ರಿಂದಾಗಿ ಈಗ ಚಾಲ್ತಿಯಲ್ಲಿರುವ ಬಿಕ್ಕಟ್ಟನ್ನು ಪ್ರಸ್ತಾಪಿಸಿದ ಅವರು ಅದು ಸರಕಾರವಿರಲಿ, ಸಮಾಜವಿರಲಿ ಅನುಕಂಪ, ಸಹಾನುಭೂತಿ ಮತ್ತು ಜಾಗೃತಿಗಳು ಈ ಕಠಿಣ ಸವಾಲನ್ನು ನಿಭಾಯಿಸಲು ಬಹು ದೊಡ್ಡ ಪ್ರೇರಕ ಶಕ್ತಿಗಳು ಎಂದರು.ಲಾಕ್ ಡೌನ್ ಆರಂಭದಿಂದ ಸರಕಾರವು ಬಡವರಿಗೆ ಮತ್ತು ಆವಶ್ಯಕತೆ ಉಳ್ಳವರಿಗೆ ಆಹಾರ ಮತ್ತು ಇಂಧನ ಲಭ್ಯವಾಗುವಂತೆ ಖಾತ್ರಿಪಡಿಸಿದೆ. ಅದೇ ಸ್ಪೂರ್ತಿಯಲ್ಲಿ ಸರಕಾರವು ಈ ವರ್ಷದ ನವೆಂಬರ್ ತಿಂಗಳವರೆಗೆ ಅನ್ -ಲಾಕ್ ಡೌನ್ ಅವಧಿಯ ಈ ಹಂತದಲ್ಲಿ ಕೂಡಾ ಉಚಿತ ಆಹಾರ ಮತ್ತು ಎಲ್.ಪಿ.ಜಿ. ಪೂರೈಕೆಯನ್ನು ಮುಂದುವರೆಸಲು ನಿರ್ಧಾರ ಮಾಡಿದೆ ಎಂದವರು ನುಡಿದರು.ಇದು ಮಾತ್ರವಲ್ಲ ಸರಕಾರವು ಮಿಲಿಯಾಂತರ ಖಾಸಗಿ ರಂಗದ ಉದ್ಯೋಗಿಗಳಿಗೆ ಕೂಡಾ ಇ.ಪಿ.ಎಫ್. ಖಾತೆಗಳಿಗೆ ಪೂರ್ಣ ದೇಣಿಗೆಯನ್ನು ಪಾವತಿಸುತ್ತಿದೆ, ಅದೇ ರೀತಿ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ ಅಡಿಯಲ್ಲಿ ವ್ಯವಸ್ಥೆಯ ಕನಿಷ್ಟ ಲಭ್ಯತೆ ಇರುವವರಿಗೂ ಪ್ರಯೋಜನಗಳು ಒದಗುವಂತೆ ಮಾಡಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಯುಕ್ತ ಕಾರ್ಮಿಕಶಕ್ತಿಯ ಬೇಡಿಕೆ -ಪೂರೈಕೆ ಅಂತರ ಜೋಡಣೆಗೆ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವಾಲಯದಿಂದ ಕೃತಕ ಬುದ್ಧಿ ಮತ್ತೆ ಆಧಾರಿತ ಅಸೀಮ್ ( ಎ.ಎಸ್.ಇ.ಇ.ಎಂ.) ಡಿಜಿಟಲ್ ವೇದಿಕೆ ಕಾರ್ಯಾರಂಭ
ಕೌಶಲ್ಯಯುಕ್ತ ಕಾರ್ಮಿಕ ಶಕ್ತಿಯ ಮಾರುಕಟ್ಟೆಯಲ್ಲಿ ಬೇಡಿಕೆ- ಪೂರೈಕೆ ಅಂತರವನ್ನು ಜೋಡಿಸಲು ಮತ್ತು ಮಾಹಿತಿ ಹರಿವನ್ನು ಸುಧಾರಿಸುವ ಪ್ರಯತ್ನವಾಗಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ ಇಂದು “ಆತ್ಮನಿರ್ಭರ ಕೌಶಲ್ಯಯುತ ಸಿಬ್ಬಂದಿ ಉದ್ಯೋಗದಾತ ಮ್ಯಾಪಿಂಗ್ (ಅಸೀಮ್ –ಎ.ಎಸ್.ಇ.ಇ. ಎಂ.) ಪೋರ್ಟಲನ್ನು ಕೌಶಲ್ಯಯುಕ್ತ ಜನರು ತಮ್ಮ ಜೀವನೋಪಾಯವನ್ನು ಹುಡುಕಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ಆರಂಭಿಸಿದೆ. ಕೌಶಲ್ಯಯುಕ್ತ ಜನರಿಗೆ ಉದ್ಯೋಗ ಒದಗಿಸುವುದಲ್ಲದೆ ಈ ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆಯು ಅವರು ಕೈಗಾರಿಕೆಗಳಿಗೆ ಸೂಕ್ತವಾದ ಕೌಶಲ್ಯಗಳನ್ನು ಪಡೆದುಕೊಳ್ಳುವ ತಮ್ಮ ಪ್ರಯಾಣದಲ್ಲಿ ಅವರ ಔದ್ಯೋಗಿಕ ಹಾದಿಗಳನ್ನು ನಿಭಾಯಿಸುತ್ತದೆಯಲ್ಲದೆ ಕೋವಿಡೋತ್ತರ ಕಾಲದಲ್ಲಿ ಲಭ್ಯವಾಗುವ ಅವಕಾಶಗಳನ್ನೂ ಅನ್ವೇಷಿಸುತ್ತದೆ. ಅಸೀಮ್ ಪೋರ್ಟಲ್ ಕಾರ್ಯಾರಂಭವನ್ನು ಘೋಷಿಸಿದ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವರಾದ ಡಾ. ಮಹೇಂದ್ರ ನಾಥ್ ಪಾಂಡೇ “ ಈ ಉಪಕ್ರಮವು ಕೋವಿಡೋತ್ತರ ಕಾಲದಲ್ಲಿ ಕೌಶಲ್ಯಯುಕ್ತ ಕಾರ್ಮಿಕ ಶಕ್ತಿಯನ್ನು ಮ್ಯಾಪಿಂಗ್ ಮಾಡಿ ಅವರನ್ನು ಅವರ ಸ್ಥಳೀಯ ಸಮುದಾಯದಲ್ಲಿಯೇ ಸೂಕ್ತ ಜೀವನೋಪಾಯ ಅವಕಾಶಗಳಿಗೆ ಸಂಪರ್ಕ ಮಾಡಿಕೊಡುವ ಮೂಲಕ ಭಾರತದ ಪುನಶ್ಚೇತನದ ಪಥಕ್ಕೆ ವೇಗ ದೊರಕಿಸಿಕೊಡುತ್ತದೆ” ಎಂದರು.
ಕೊರಿಯಾ ಗಣರಾಜ್ಯದ ರಕ್ಷಣಾ ಸಚಿವರ ಜೊತೆ ರಕ್ಷಣಾ ಸಚಿವ ಶ್ರೀ ರಾಜ್ ನಾಥ್ ಸಿಂಗ್ ದೂರವಾಣಿ ಮಾತುಕತೆ
ರಕ್ಷಣಾ ಮಂತ್ರಿ ಶ್ರೀ ರಾಜ್ ನಾಥ್ ಸಿಂಗ್ ಅವರು ಇಂದು ಕೊರಿಯಾ ಗಣತಂತ್ರದ (ಆರ್.ಒ.ಕೆ.) ರಾಷ್ಟ್ರೀಯ ರಕ್ಷಣಾ ಸಚಿವರಾದ ಶ್ರೀ ಜಿಯಾಂಗ್ ಕಿಯೊಂಗ್ –ಡೂ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಇಬ್ಬರು ರಕ್ಷಣಾ ಸಚಿವರೂ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. ಕೋವಿಡ್ -19 ರ ವಿರುದ್ದದ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಭಾರತದ ಕೊಡುಗೆಯ ಬಗ್ಗೆ ಶ್ರೀ ರಾಜ್ ನಾಥ್ ಸಿಂಗ್ ಅವರು ಶ್ರೀ ಜಿಯಾಂಗ್ ಕಿಯೊಂಗ್ –ಡೂ ಅವರಿಗೆ ಮಾಹಿತಿ ಒದಗಿಸಿದರಲ್ಲದೆ ಈ ಜಾಗತಿಕ ಸಾಂಕ್ರಾಮಿಕದ ವಿರುದ್ದ ಜಾಗತಿಕ ಹೋರಾಟದಲ್ಲಿ ಪರಸ್ಪರ ಸಹಕಾರ ಕ್ಷೇತ್ರಗಳ ಬಗ್ಗೆ ಚರ್ಚಿಸಿದರು. ಈ ಜಾಗತಿಕ ಸಾಂಕ್ರಾಮಿಕವು ಒಡ್ಡಿರುವ ಸಂಕೀರ್ಣ ಸವಾಲುಗಳ ವಿರುದ್ದ ಒಗ್ಗೂಡಿ ಕೆಲಸ ಮಾಡಲು ಇಬ್ಬರು ಸಚಿವರೂ ಒಪ್ಪಿಕೊಂಡರು. ದೂರವಾಣಿ ಮಾತುಕತೆಯಲ್ಲಿ ವಿವಿಧ ದ್ವಿಪಕ್ಷೀಯ ರಕ್ಷಣಾ ಸಹಕಾರ ಉಪಕ್ರಮಗಳ ಪ್ರಗತಿಯನ್ನು ಪರಾಮರ್ಶಿಸಿದರಲ್ಲದೆ ಸಶಸ್ತ್ರ ಪಡೆಗಳ ನಡುವೆ ರಕ್ಷಣಾ ಸಹಕಾರದ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತೇಜಿಸುವ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಿದರು.
2020 ರ ಮೇ ತಿಂಗಳ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಮತ್ತು ಬಳಕೆ-ಆಧಾರಿತ ಸೂಚ್ಯಂಕಗಳ ತ್ವರಿತ ಅಂದಾಜು ( 2011-12 =100 ಆಧಾರದಲ್ಲಿ )
ಕೈಗಾರಿಕಾ ಉತ್ಪಾದನೆಯ ತ್ವರಿತ ಸೂಚ್ಯಂಕ ಅಂದಾಜು (ಐ.ಐ.ಪಿ.) ಪ್ರತೀ ತಿಂಗಳ 12 ರಂದು ( 12 ನೇ ತಾರೀಖು ರಜೆ ಇದ್ದರೆ ಅದರ ಮುನ್ನಾ ಕೆಲಸದ ದಿನದಂದು ) ಆರು ವಾರಗಳ ಅವಧಿಗೆ ಅನ್ವಯಿಸಿ ಮತ್ತು ಉತ್ಪಾದನಾ ಕಾರ್ಖಾನೆಗಳು,/ ಸಂಸ್ಥೆಗಳಿಂದ ಮಾಹಿತಿ ಪಡೆದು ಸಲ್ಲಿಸುವ ಮಾಹಿತಿ ಮೂಲ ಏಜೆನ್ಸಿಗಳಿಂದ ಬಂದ ಮಾಹಿತಿಗಳನ್ನು ಕ್ರೋಢೀಕರಿಸಿ ಬಿಡುಗಡೆ ಮಾಡಲಾಗುತದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಹರಡುವಿಕೆಯನ್ನು ನಿಯಂತ್ರಿಸಲು ಕೈಗೊಂಡ ಪ್ರತಿಬಂಧಕ ಕ್ರಮಗಳು ಮತ್ತು ರಾಷ್ಟ್ರ ವ್ಯಾಪೀ ಲಾಕ್ ಡೌನ್ ಘೋಷಣೆಯಿಂದಾಗಿ ಬಹುತೇಕ ಕೈಗಾರಿಕಾ ವಲಯದ ಸಂಸ್ಥೆಗಳು 2020 ರ ಮಾರ್ಚ್ ತಿಂಗಳಾಂತ್ಯದಿಂದ ಕಾರ್ಯಾಚರಿಸಿಲ್ಲ. ಇದು ಲಾಕ್ ಡೌನ್ ಅವಧಿಯಲ್ಲಿ ಸಂಸ್ಥೆಗಳು ಉತ್ಪಾದಿಸುವ ಸರಕುಗಳ ಮೇಲೆ ಪರಿಣಾಮ ಉಂಟು ಮಾಡಿತು, ಮತ್ತು ಅದರ ಬಳಿಕ ನಿರ್ಬಂಧಗಳನ್ನು ಶರತ್ತುಬದ್ದವಾಗಿ ಸಡಿಲಿಕೆ ಮಾಡಲಾಯಿತು. 2020 ರ ಏಪ್ರಿಲ್ ತಿಂಗಳ ಸೂಚ್ಯಂಕ 53.6 ಆಗಿದ್ದು, ಅದಕ್ಕೆ ಹೋಲಿಸಿದರೆ ಮೇ ತಿಂಗಳ ಸೂಚ್ಯಂಕ 88.4 ರಲ್ಲಿದೆ. ಇದು ಆರ್ಥಿಕತೆಯಲ್ಲಿ ಹಂತಹಂತವಾಗಿ ಕೈಗಾರಿಕಾ ಚಟುವಟಿಕೆ ಚುರುಕುಗೊಳ್ಳುತ್ತಿರುವುದರ ಸೂಚನೆಯಾಗಿದೆ. ಲಾಕ್ ಡೌನಿನ ಆರಂಭದ ತಿಂಗಳುಗಳಿಗೆ ಹೋಲಿಸಿದರೆ 2020 ರ ಮೇ ತಿಂಗಳಲ್ಲಿ ಪ್ರತಿಕ್ರಿಯಿಸಿದ ಕೈಗಾರಿಕಾ ಘಟಕಗಳ ಸಂಖ್ಯೆಯಲ್ಲಿ ಸುಧಾರಣೆಯಾಗಿದೆ. 2020 ರ ಏಪ್ರಿಲ್ ಕ್ಯೂ.ಇ. ಯಲ್ಲಿ ವೈಟೇಜ್ ಪ್ರತಿಕ್ರಿಯೆ 87 ಶೇಕಡಾದಷ್ಟಿತ್ತು, ಅದೀಗ ಮೊದಲ ಪರಿಷ್ಕರಣೆಯಲ್ಲಿಯೇ 91 ಶೇಕಡಾಕ್ಕೆ ಪರಿಷ್ಕರಣೆಯಾಗಿದೆ.
ಆತನಿರ್ಭರ ಭಾರತ್ ಯೋಜನೆ ಅಡಿಯಲ್ಲಿ ಒದಗಿಸಲಾದ ಉಳಿಕೆ ಉಚಿತ ಆಹಾರ ಧಾನ್ಯಗಳು ಮತ್ತು ಕಾಳುಗಳ ವಿತರಣೆಯನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು 2020 ರ ಆಗಸ್ಟ್ 31 ರೊಳಗೆ ಪೂರ್ಣಗೊಳಿಸಬಹುದು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಯಾರೊಬ್ಬರೂ ಹಸಿವೆಯಿಂದ ಕಂಗೆಡಬಾರದು ಎಂಬ ಕಾರಣಕ್ಕಾಗಿ ಎರಡು ಬೃಹತ್ ಆಹಾರ ಧಾನ್ಯ ವಿತರಣಾ ಯೋಜನೆಗಳಾದ –ಪಿ.ಎಂ.ಜಿ.ಕೆ.ಎ.ವೈ. ಮತ್ತು ಎ.ಎನ್.ಬಿ.ಎ.ಗಳನ್ನು ಬಡವರು ಮತ್ತು ಆವಶ್ಯಕತೆ ಉಳ್ಳ ಜನರಿಗಾಗಿ ಆರಂಭಿಸಿದ್ದಾರೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವರಾದ ಶ್ರೀ ರಾಂ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಫಲಾನುಭವಿಗಳಿಗೆ ಒದಗಿಸಲಾದ ಬಾಕಿ ಇರುವ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ಇನ್ನಷ್ಟು ಕಾಲಾವಕಾಶ ನೀಡುವ ಸಂಪುಟದ ನಿರ್ಣಯವನ್ನು ಮಾಧ್ಯಮಗಳಿಗೆ ತಿಳಿಸಿದ ಸಚಿವ ಶ್ರೀ ಪಾಸ್ವಾನ್ ಅವರು ಆಹಾರ ಧಾನ್ಯಗಳನ್ನು 2020 ರ ಆಗಸ್ಟ್ 31 ರವರೆಗೆ ವಿತರಿಸಬಹುದೆಂದರು. ಈ ಎರಡು ಯೋಜನೆಗಳ ಅನುಷ್ಟಾನವು ದೇಶದಲ್ಲಿ ಕೋವಿಡ್ -19 ಸ್ಪೋಟದಿಂದ ಹದಗೆಟ್ಟಿರುವ, ಆರ್ಥಿಕ ಸ್ಥಿತಿಯಿಂದ ಕಂಗೆಟ್ಟಿರುವ ಬಡವರು ಮತ್ತು ಆವಶ್ಯಕತೆ ಉಳ್ಳ ಜನರ ಕಷ್ಟಗಳನ್ನು ನಿವಾರಣೆ ಮಾಡುತ್ತಿದೆ ಎಂದೂ ಸಚಿವರು ವಿವರಿಸಿದರು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮೇ ತಿಂಗಳಲ್ಲಿ 2.24 ಕೋಟಿ ಫಲಾನುಭವಿಗಳಿಗೆ ಮತ್ತು ಜೂನ್ ತಿಂಗಳಲ್ಲಿ 2.25 ಕೋಟಿ ಜನರಿಗೆ 2,32,433 ಎಂ.ಟಿ. ಆಹಾರ ಧಾನ್ಯಗಳನ್ನು ವಿತರಣೆ ಮಾಡಿವೆ ಎಂದು ತಿಳಿಸಿದ ಸಚಿವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೆಶಗಳಿಗೆ 33,620 ಎಂ.ಟಿ ಕಾಳುಗಳನ್ನು ಕಳುಹಿಸಿಕೊಡಲಾಗಿದೆ ಎಂದರು. ಪಿ.ಎಂ.ಜಿ.ಕೆ.ಎ.ವೈ. -2 ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2020 ರ ಜುಲೈಯಿಂದ ನವೆಂಬರ್ ವರೆಗಿನ ಐದು ತಿಂಗಳ ಅವಧಿಗೆ 201.1 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 91.14 ಎಲ್.ಎಂ.ಟಿ. ಗೋಧಿ ಮತ್ತು 109.94 ಎಲ್.ಎಂ.ಟಿ. ಅಕ್ಕಿಯೂ ಸೇರಿದೆ ಎಂದೂ ಅವರು ತಿಳಿಸಿದರು.
ಇ.ವಿ. ಪೂರಣ ಘಟಕಗಳು ಮತ್ತು ಇತರ ಪೂರಕ ಮೂಲಸೌಕರ್ಯ ಅಳವಡಿಸಲು ನೊಯ್ಡಾ ಜೊತೆ ಒಪ್ಪಂದಕ್ಕೆ ಇ.ಇ. ಎಸ್.ಎಲ್. ಅಂಕಿತ
ಭಾರತ ಸರಕಾರದ ಇಂಧನ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುವ ಜಂಟಿ ಸಹಯೋಗದ ಉದ್ಯಮವಾದ ಇಂಧನ ದಕ್ಷತೆ ಸೇವಾ ಸಂಸ್ಥೆ ( ಎನರ್ಜಿ ಎಫೀಶಿಯೆನ್ಸಿ ಸರ್ವಿಸಸ್ ಲಿಮಿಟೆಡ್ –ಇ.ಇ.ಎಸ್.ಎಲ್.)ಯು ನ್ಯೂ ಓಕ್ಲಾ ಕೈಗಾರಿಕಾ ಅಭಿವೃದ್ದಿ ಪ್ರಾಧಿಕಾರ (ನೊಯ್ಡಾ) ಜೊತೆ ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಇ.ವಿ. ಮರುಪೂರಣ ಕೇಂದ್ರಗಳು ಹಾಗು ಪೂರಕ ಸವಲತ್ತುಗಳನ್ನು ಸ್ಥಾಪಿಸಲು ಒಪ್ಪಂದಕ್ಕೆ ಅಂಕಿತ ಹಾಕಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದ ಹೊರಬರುತ್ತಿರುವ ದೇಶಕ್ಕೆ ಲಾಕ್ಡೌನೋತ್ತರ ಅವಧಿಯಲ್ಲಿ ಈ ಸಹಭಾಗಿತ್ವವು ಇ-ಸಂಚಾರವನ್ನು ಹೆಚ್ಚಿಸಲು ಅವಶ್ಯವಾದ ಮೂಲಸೌಕರ್ಯಗಳನ್ನು ರೂಪಿಸಲು ನೆರವಾಗಲಿದೆ.
ಭಾರತದ ಕೋವಿಡೋತ್ತರ ಆರ್ಥಿಕತೆಯಲ್ಲಿ ಬಿದಿರು ವಲಯವು ಪ್ರಮುಖ ಘಟಕವಾಗಿರಲಿದೆ: ಡಾ. ಜಿತೇಂದ್ರ ಸಿಂಗ್
ಭಾರತದ ಕೋವಿಡೋತ್ತರ ಆರ್ಥಿಕತೆಯಲ್ಲಿ ಬಿದಿರು ವಲಯವು ಪ್ರಮುಖ ಘಟಕವಾಗಿರಲಿದೆ ಎಂದು ಕೇಂದ್ರ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ಬೆತ್ತ ಮತ್ತು ಬಿದಿರು ತಂತ್ರಜ್ಞಾನ ಕೇಂದ್ರ (ಸಿ.ಬಿ.ಟಿ.ಸಿ.) ಗಳ ವಿವಿಧ ಗುಚ್ಛಗಳೊಂದಿಗಿನ ಮತ್ತು ಬಿದಿರು ವ್ಯಾಪಾರದೊಂದಿಗೆ ಸಂಬಂಧ ಹೊಂದಿರುವವರನ್ನು ಒಳಗೊಂಡ ವೆಬಿನಾರನ್ನು ಉದ್ದೇಶಿಸಿ ಮಾತನಾಡಿದ ಅವರು ಬಿದಿರು ಈಶಾನ್ಯ ವಲಯದಲ್ಲಿ ಆತ್ಮನಿರ್ಭರ ಭಾರತ್ ಅಭಿಯಾನವನ್ನು ಉತ್ತೇಜಿಸಲಿದೆ , ಮತ್ತು ಅದು ಭಾರತ ಹಾಗು ಈ ಉಪಖಂಡದಲ್ಲಿ ವ್ಯಾಪಾರದ ಪ್ರಮುಖ ವಾಹಕವಾಗಲಿದೆ ಎಂದರು. ಬಿದಿರು ಈಶಾನ್ಯ ಭಾರತದ ಕೋವಿಡೋತ್ತರ ಆರ್ಥಿಕತೆಗೆ ಪ್ರಮುಖ ಮಾತ್ರವಲ್ಲ, ಅದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಸ್ಥಳೀಯರಿಗಾಗಿ ಧ್ವನಿ” (ವೋಕಲ್ ಫಾರ್ ಲೋಕಲ್) ಕರೆಗೆ ಹೊಸ ವೇಗವನ್ನು ತರಲಿದೆ ಎಂದೂ ಸಚಿವರು ಹೇಳಿದರು.
ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ವರದಿ
- ಚಂಡೀಗಢ: ಕೋವಿಡ್ -19 ರ ಸವಾಲಿನ ಸಮಯದಲ್ಲಿಯೂ ವಿಶ್ವ ಯುವ ಕೌಶಲ್ಯ ದಿನವನ್ನು 2020 ರ ಜುಲೈ 15 ರಂದು ಆಚರಿಸಲಾಗುತ್ತದೆ. ಈ ಜಾಗತಿಕ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಕ್ರಮಗಳು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸಹಿತ ವಿಶ್ವವ್ಯಾಪಿಯಾಗಿ ಎಲ್ಲಾ ಚಟುವಟಿಕೆಗಳನ್ನು ಸ್ತಬ್ದಗೊಳಿಸಿವೆ. ಆದಾಗ್ಯೂ ಆರ್ಥಿಕ ಚಟುವಟಿಕೆಗಳ ಮಂದಗತಿಯಲ್ಲಿಯೂ , ಉದ್ಯೊಗ ನಷ್ಟದ ಪರಿಸ್ಥಿತಿಯಲ್ಲಿಯೂ ಕೌಶಲ್ಯ ಅಭಿವೃದ್ದಿ ಆವಶ್ಯಕತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಚಂಡೀಗಢ ಕೌಶಲ್ಯ ಅಭಿವೃದ್ದಿ ಮಿಶನ್ ಸಂಸ್ಥೆಯು ಇಂಡಿಯಾ ಸ್ಕಿಲ್ಸ್ ಜೊತೆಗೂಡಿ ಈ ದಿನವನ್ನು ಡಿಜಿಟೈಜೇಶನ್/ ಆನ್ ಲೈನ್ ಸಂವಾದ ಮಾದರಿಯಲ್ಲಿ ಆಚರಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಚಂಡೀಗಢ ಕೌಶಲ್ಯ ಅಭಿವೃದ್ದಿ ಮಿಶನ್ (ಸಿ.ಎಸ್.ಡಿ.ಎಂ.) 2020 ರ ಜುಲೈ 7 ರಿಂದ ಆರಂಭಗೊಂಡು ಸರಣಿ ವೆಬಿನಾರ್ ಗಳನ್ನು ಆಯೋಜಿಸಿದ್ದು, ಅವುಗಳು 2020 ರ ಜುಲೈ 15 ರವರೆಗೆ ಅಂದರೆ ವಿಶ್ವ ಯುವ ಕೌಶಲ್ಯ ದಿನದವರೆಗೆ ಮುಂದುವರೆಯಲಿವೆ. ,
- ಪಂಜಾಬ್ : ರಾಜ್ಯ ಸರಕಾರವು ತನ್ನ ಪೈಲೆಟ್ ಯೋಜನೆಯಾದ ತ್ವರಿತ ಆಂಟಿಜೆನ್ ಪರೀಕ್ಷಾ ಯೋಜನೆಯನ್ನು ತೀವ್ರವಾಗಿ ಬಾಧಿತವಾಗಿರುವ ಐದು ಜಿಲ್ಲೆಗಳಲ್ಲಿ .ಅನುಷ್ಟಾನಕ್ಕೆ ಮುಂದಡಿ ಇಟ್ಟಿರುವಾಗ ಪಂಜಾಬ್ ಮುಖ್ಯಮಂತ್ರಿ ಅವರು ಕೋವಿಡ್ ಪ್ಲಾಸ್ಮಾ ಚಿಕಿತ್ಸೆಗಾಗಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ನಿಟ್ಟಿನಲ್ಲಿ ಮುಂದುವರಿಯಲು ಅನುಮತಿ ನೀಡಿದ್ದಾರೆ. ಈ ಪ್ಲಾಸ್ಮಾ ಚಿಕಿತ್ಸೆಯನ್ನು ಐ.ಸಿ.ಎಂ.ಆರ್. ಪ್ರಾಯೋಗಿಕ ಯೋಜನೆಯಾಗಿ ರಾಜ್ಯದಲ್ಲಿಯ ಸರಕಾರಿ ಆಸ್ಪತ್ರೆಗಳಲ್ಲಿ ಜಾರಿಗೆ ತರಲಾಗಿದೆ. ಪ್ಲಾಸ್ಮಾ ಬ್ಯಾಂಕ್ ಗಂಭೀರವಾಗಿ ಅಸ್ವಸ್ಥರಾಗಿರುವ ರೋಗಿಗಳಿಗೆ ತಕ್ಷಣವೇ ಲಭ್ಯವಾಗುವ ಅವಶ್ಯ ಚಿಕಿತ್ಸಾ ಮೂಲವಾಗಿರುತ್ತದೆ ಮತ್ತು ಆ ಮೂಲಕ ಅದು ದಾನಿಯ ಪ್ಲಾಸ್ಮಾದಿಂದ ವಿವಿಧ ವಯೋಮಾನದ ವಯಸ್ಕರನ್ನು ಚಿಕಿತ್ಸೆಗೆ ಒಳಪಡಿಸಲು ಸಾಧ್ಯವಾಗಿಸುತ್ತದೆ.
- ಹರ್ಯಾಣಾ: ಹರ್ಯಾಣಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಖಾತೆ ಸಹಾಯಕ ಸಚಿವರು ನೊವೆಲ್ ಕೊರೊನಾವೈರಸ್ ಹರಡುವಿಕೆಯಿಂದ ಜನರನ್ನು ರಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ಹರ್ಯಾಣಾ ರಾಜ್ಯ ಮಹಿಳಾ ಆಯೋಗವು ಆಯೋಜಿಸಿರುವ ಮುಖಗವಸು ಮತ್ತು ಸ್ಯಾನಿಟೈಸರ್ ವಿತರಣಾ ಆಂದೋಲನಕ್ಕೆ ಚಾಲನೆ ನ್ನೀಡಿದರು. ಕೋವಿಡ್ -19 ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಲ ಕಾಲಕ್ಕೆ ಹೊರಡಿಸುವ ಮಾರ್ಗದರ್ಶಿಗಳನ್ನು ನಾವು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದವರು ಈ ಸಂದರ್ಭದಲ್ಲಿ ಹೇಳಿದರು. ಇದರ ಜೊತೆಗೆ ಜನರಿಗೆ ಈ ಜಾಗತಿಕ ಸಾಂಕ್ರಾಮಿಕದ ಬಗ್ಗೆ ತಿಳುವಳಿಕೆ ಲಭ್ಯವಾಗುವಂತೆ ಮಾಡಬೇಕು ಮತ್ತು ಆ ಮೂಲಕ ಈ ಜಾಗತಿಕ ಸಾಂಕ್ರಾಮಿಕವನ್ನು ಸಾಧ್ಯವಾದಷ್ಟು ಬೇಗ ತೊಲಗಿಸುವಂತಾಗಬೇಕು ಎಂದೂ ಅವರು ನುಡಿದರು.
- ಮಹಾರಾಷ್ಟ್ರ: ಕಳೆದ 24 ಗಂಟೆಗಳಲ್ಲಿ 6,875 ಹೊಸ ರೋಗಿಗಳಿಗೆ ಕೋವಿಡ್ -19 ತಗಲಿರುವುದು ಪತ್ತೆಯಾಗಿದೆ. ಇದರೊದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್ ಬಾಧಿತರ ಸಂಖ್ಯೆ 2.30 ಲಕ್ಷಕ್ಕೇರಿದೆ. ಒಟ್ಟು 1.27 ಲಕ್ಷ ಮಂದಿ ಗುಣಮುಖರಾಗಿದ್ದಾರೆ , 93,652 ಸಕ್ರಿಯ ಪ್ರಕರಣಗಳಿವೆ. ಮುಂಬಯಿಯಲ್ಲಿ ಕೊರೊನಾವೈರಸ್ ಸೋಂಕಿತ ರೋಗಿಗಳ ಸಂಖ್ಯೆ 88,795 ಕ್ಕೇರಿದೆ. ಈ ಮಧ್ಯೆ ರಾಜ್ಯ ಸರಕಾರವು ಮಹಾರಾಷ್ಟ್ರದಲ್ಲಿ ತ್ವರಿತ ಆಂಟಿಬಾಡಿ ಪರೀಕ್ಷೆಗಳ ದರಕ್ಕೆ ಮಿತಿ ನಿಗದಿ ಮಾಡಲು ಮುಂದಾಗಿದೆ.
- ಗುಜರಾತ್: ಗುಜರಾತಿನಲ್ಲಿ ಗುರುವಾರದಂದು ಒಂದೇ ದಿನದಲ್ಲಿ 861 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ.ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 39,280 ಕ್ಕೇರಿದೆ. ಸೂರತ್ ನಗರ ಮತ್ತು ಸೂರತ್ ಜಿಲ್ಲೆಯೊಂದರಿಂದಲೇ ಗರಿಷ್ಟಸಂಖ್ಯೆಯ ಅಂದರೆ 307 ಹೊಸ ಪ್ರಕರಣಗಳು ವರದಿಯಾಗಿವೆ. ಅಹ್ಮದಾಬಾದ್ ನಗರದಿಂದ 153 ಹೊಸ ಪ್ರಕರಣಗಳು , ವಡೋದರದಿಂದ 43 ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9,528. ಗುಜರಾತಿನ ಆಹಾರ ಮತ್ತು ಔಷಧಿ ನಿಯಂತ್ರಣ ಪ್ರಾಧಿಕಾರವು ಔಷಧಿಗಳಾದ ಟೊಸಿಲಿಜುಮಾಬ್ ಔಷಧಿಯ ಕಾಳ ಸಂತೆ ಜಾಲವನ್ನು ಪತ್ತೆ ಮಾಡಿದೆ. ಈ ಔಷಧಿಯು ಕೋವಿಡ್ -19 ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಇದನ್ನು ಈಗ ಸ್ವಿಜರ್ಲ್ಯಾಂಡಿನಿಂದ ಏಕೈಕ ಭಾರತೀಯ ಸಂಸ್ಥೆಯ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿದೆ. ಪೂರೈಕೆ ಸೀಮಿತ ಪ್ರಮಾಣದಲ್ಲಿದ್ದು, ಇದಕ್ಕೆ ಭಾರೀ ಬೇಡಿಕೆ ಇದೆ. ಇದರಿಂದಾಗಿ ಈ ಔಷಧಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
- ರಾಜಸ್ಥಾನ: ಇಂದು ಬೆಳಿಗ್ಗೆ 115 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜಸ್ಥಾನದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 22,678 ಕ್ಕೇರಿದೆ. ಈ ಪ್ರಕರಣಗಳಲ್ಲಿ ಗರಿಷ್ಟ ಸಂಖ್ಯೆಯ ಪ್ರಕರಣಗಳು ವರದಿಯಾಗಿರುವುದು ಪಾಲಿ ಜಿಲ್ಲೆಯಲ್ಲಿ ( 35 ) , ಆ ಬಳಿಕ ಜೈಪುರ (22) ಮತ್ತು ಅಜ್ಮೀರ (10).
- ಮಧ್ಯಪ್ರದೇಶ: ಗುರುವಾರದಂದು ರಾಜ್ಯದಲ್ಲಿ 305 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಕೋವಿಡ್ -19 ರೋಗಿಗಳ ಸಂಖ್ಯೆ 16,341 ಕೇರಿದೆ. ಪ್ರಸ್ತುತ 3,475 ಸಕ್ರಿಯ ರೋಗಿಗಳಿದ್ದಾರೆ, ಗುಣಮುಖರಾದವರ ಸಂಖ್ಯೆ 12,232 ಕ್ಕೇರಿದೆ.
- ಛತ್ತೀಸ್ ಗಢ: 133 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಛತ್ತೀಸ್ ಗಢದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 3,666 ಕ್ಕೇರಿದೆ. ಆದಾಗ್ಯೂ ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 748.
- ಗೋವಾ: ಗೋವಾದಲ್ಲಿ 112 ಹೊಸ ಸ್ಯಾಂಪಲ್ ಗಳು ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,151 ಕ್ಕೇರಿದೆ. ಇದರಲ್ಲಿ 896 ಸಕ್ರಿಯ ಪ್ರಕರಣಗಳು.
- ಅಸ್ಸಾಂ: ಅಸ್ಸಾಂನಲ್ಲಿ ಮತ್ತೆ ನಾಲ್ಕು ಮಂದಿ ಕೋವಿಡ್ -19 ರೋಗಿಗಳನ್ನು ಜಿ.ಎಂ.ಸಿ.ಎಚ್. ಐ.ಸಿ.ಯು. ಗೆ ಸೇರಿಸಲಾಗಿದ್ದು, ಅವರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವರು ಇಂದು ಟ್ವೀಟ್ ಮಾಡಿದ್ದಾರೆ.
- ಮಣಿಪುರ: ಮಣಿಪುರದ ಚಾಂಡೇಲ್ ಸ್ವಾಯತ್ತ ಜಿಲ್ಲಾ ಮಂಡಳಿಯು ಜಿಲ್ಲಾಡಳಿತಕ್ಕೆ ಕಾಲುಗಳಿಂದ ನಿರ್ವಹಿಸಲಾಗುವ ಮೂರು ಹ್ಯಾಂಡ್ ಸ್ಯಾನಿಟೈಸರ್ ಯಂತ್ರಗಳನ್ನು , ಹ್ಯಾಂಡ್ ಸ್ಯಾನಿಟೈಸರ್ ಗಳು, ಮುಖಗವಸುಗಳು, ಮತ್ತು ಕೋವಿಡ್ -19 ಜಾಗೃತಿ ಮೂಡಿಸುವ ಪೋಸ್ಟರುಗಳನ್ನು ದೇಣಿಗೆಯಾಗಿ ನೀಡಿದೆ. ಜೆ.ಎನ್.ಐ.ಎಂ.ಎಸ್. ನ ಓರ್ವ ಮಹಿಳಾ ವೈದ್ಯರು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 51 ಕ್ಕೆ ತಲುಪಿದೆ.
- ಮೇಘಾಲಯ: ಮೇಘಾಲಯದ ಅಂಪ್ಲಿಂಗ್ ನ 26 ಬಿ.ಎಸ್.ಎಫ್. ಸಿಬ್ಬಂದಿ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 121 ಆಗಿದೆ. ಇದುವರೆಗೆ 45 ಮಂದಿ ಗುಣಮುಖರಾಗಿದ್ದಾರೆ.
- ಮಿಜೋರಾಂ: ಮಿಜೋರಾಂನಲ್ಲಿಂದು 23 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. , ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 226 ಕೇರಿದೆ, ಅಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 83.
- ನಾಗಾಲ್ಯಾಂಡ್ : ನಾಗಾಲ್ಯಾಂಡಿನಲ್ಲಿ ಹೊಸ 36 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 732 ಕ್ಕೇರಿದೆ. ಅಲ್ಲಿ 428 ಸಕ್ರಿಯ ಪ್ರಕರಣಗಳಿವೆ. 304 ಮಂದಿ ಗುಣಮುಖರಾಗಿದ್ದಾರೆ.
- ಕೇರಳ: ರಾಜ್ಯ ರಾಜಧಾನಿ ಪೂಂಥುರಾದಲ್ಲಿ ಪರಿಸ್ಥಿತಿ ತೀರಾ ಸಂಕೀರ್ಣವಾಗಿದೆ ಎಂದು ಹೇಳಿರುವ ರಾಜ್ಯ ಆರೋಗ್ಯ ಸಚಿವರಾದ ಕೆ.ಕೆ. ಶೈಲಜಾ ಅವರು ಇತರ ರಾಜ್ಯಗಳಿಂದ ಬಂದಿರುವವರ ಜೊತೆ ಸಂವಾದ ನಡೆಸುವಾಗ ಜಾಗರೂಕರಾಗಿರುವಂತೆ ಜನತೆಯನ್ನು ಎಚ್ಚರಿಸಿದ್ದಾರೆ. ತಮಿಳುನಾಡಿನಾದ್ಯಂತ ಕೋವಿಡ್ -19 ಹರಡಿದೆ ಮತ್ತು ಅಲ್ಲಿಂದ ಹಲವಾರು ಮಂದಿ ವ್ಯಾಪಾರಕ್ಕಾಗಿ ಕೇರಳಕ್ಕೆ ಬರುತಿದ್ದಾರೆ. ಆಂಟಿಜೆನ್ ಪರೀಕ್ಷೆಯ ಬಗ್ಗೆ ಸುಳ್ಳು ಪ್ರಚಾರಕ್ಕೆ ಕಿವಿಗೊಡಬಾರದು ಎಂದು ಸಚಿವರು ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ನಡುವೆ ಪೂಂಥುರಾದಲ್ಲಿ ನಿವಾಸಿಗಳು ತ್ರಿವಳಿ ಲಾಕ್ ಡೌನ್ ಹೇರಿಕೆಯನ್ನು ಧಿಕ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಕೊಲ್ಲಂ ಮತ್ತು ಅಲೆಪ್ಪಿಯಲ್ಲಿ ಮೀನುಗಾರಿಕೆ ಮತ್ತು ಮೀನು ಮಾರಾಟವನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿ ನಿನ್ನೆ 339 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 133 ಪ್ರಕರಣಗಳು ಸ್ಥಳಿಯವಾಗಿ ಹರಡಿದಂತಹವು ಮತ್ತು 7 ಪ್ರಕರಣಗಳಲ್ಲಿ ಮೂಲ ಪತ್ತೆಯಾಗಿಲ್ಲ. 2,795 ರೋಗಿಗಳು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ವಿವಿಧ ಜಿಲ್ಲೆಗಳಲ್ಲಿ 1,85,960 ಮಂದಿ ಕ್ವಾರಂಟೈನಿನಲ್ಲಿದ್ದಾರೆ.
- ತಮಿಳುನಾಡು: ಕೈ ನೋಡಿ ಜೋತಿಷ್ಯ ಹೇಳುವವರೊಬ್ಬರು ಪುದುಚೇರಿಯ ಕರೈಕಾಲ್ ನಲ್ಲಿ 13 ಜನರಿಗೆ ಸೋಂಕು ಹರಡಿದ್ದಾರೆ. ರೇಶನ್ ಕಾರ್ಡ್ ಹೊಂದಿರುವ ಎಲ್ಲ ಕುಟುಂಬಗಳಿಗೂ ಕೋವಿಡ್ -19 ಪರಿಹಾರ ದೊರೆಯಬೇಕು ಎಂದು ಆಗ್ರಹಿಸಿ ಎ.ಐ.ಎ.ಡಿ.ಎಂ.ಕೆ. ಶಾಸಕರು ಪುದುಚೇರಿ ವಿಧಾನ ಸಭೆಯಲ್ಲಿ ಧರಣಿ ನಡೆಸಿದ್ದಾರೆ. ತಮಿಳುನಾಡು ರಾಜ್ಯ ಸಹಕಾರ ಸಚಿವ ಸೆಲ್ಲೂರು ಕೆ. ರಾಜು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಈ ಮೊದಲು 11 ಶಾಸಕರ ಜೊತೆ ಇತರ ಇಬ್ಬರು ಸಚಿವರು ಸೋಂಕು ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದರು. ತಮಿಳುನಾಡು ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದ್ದಂತೆಯೇ ಕೇಂದ್ರೀಯ ತಂಡವು ರಾಜ್ಯಕ್ಕೆ ಭೇಟಿ ನೀಡಿದೆ. ರಾಜ್ಯದಲ್ಲಿ ಕಳೆದ ಎರಡು ದಿನಗಳಲ್ಲಿ ಕೋವಿಡ್ -19 ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತವಾಗಿತ್ತಾದರೂ ಗುರುವಾರದಂದು ಏಕಾಏಕಿ 4,231 ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 1,216 ಪ್ರಕರಣಗಳು ಚೆನ್ನೈಯಿಂದಲೇ ವರದಿಯಾಗಿವೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳು: 1,26,581, ಸಕ್ರಿಯ ಪ್ರಕರಣಗಳು: 46,652. ಸಾವುಗಳು: 1765. ಚೆನ್ನೈಯಲ್ಲಿ ಸಕ್ರಿಯ ಪ್ರಕರಣಗಳು : 20,271.
- ಕರ್ನಾಟಕ: ಮೂವರು ಸಿಬ್ಬಂದಿಗಳಲ್ಲಿ ಕೋವಿಡ್ -19 ಪಾಸಿಟಿವ್ ಪತ್ತೆಯಾದ ಬಳಿಕ ಮುಖ್ಯಮಂತ್ರಿಗಳು ಗೃಹ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಕೆಲಸದ ನಿಬಂಧನೆಗಳು ಮತ್ತು ಸಂಭಾವನೆಗೆ ಸಂಬಂಧಿಸಿ ಶುಕ್ರವಾರದಿಂದ ಆಶಾ ಕಾರ್ಯಕರ್ತೆಯರು ರಾಜ್ಯವ್ಯಾಪೀ ಮುಷ್ಕರಕ್ಕಿಳಿಯಲಿದ್ದಾರೆ. ಬೆಂಗಳೂರಿನಲ್ಲಿ ಉಳಿಯಲು ನಿರ್ಧರಿಸಿದ ವಲಸೆ ಕಾರ್ಮಿಕರ ಸ್ಥಿತಿ-ಗತಿಯ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟು ಸರಕಾರಕ್ಕೆ ನಿರ್ದೇಶನ ನೀಡಿದೆ. 2019-20 ರ ಶೈಕ್ಷಣಿಕ ವರ್ಷದಲ್ಲಿ ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕೋರ್ಸುಗಳು ಸೇರಿದಂತೆ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳ ಮಧ್ಯಂತರ ಸೆಮಿಸ್ಟರ್ ಗಳ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆಯೇ ಉತ್ತೀರ್ಣರೆಂದು ಪ್ರಕಟಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ನಿನ್ನೆ 2228 ಹೊಸ ಪ್ರಕರಣಗಳು ವರದಿಯಾಗಿವೆ, 957 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಮತ್ತು 17 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪಾಸಿಟಿವ್ ಪ್ರಕರಣಗಳು : 31,105, ಸಕ್ರಿಯ ಪ್ರಕರಣಗಳು: 17,782, ಸಾವುಗಳು: 486.
- ಆಂಧ್ರ ಪ್ರದೇಶ: ಪ್ರಯಾಣಿಕರಲ್ಲಿ ನಗದು ರಹಿತ ವರ್ಗಾವಣೆಯನ್ನು ಉತೇಜಿಸಲು ಎ.ಪಿ.ಎಸ್.ಆರ್.ಟಿ.ಸಿ.ಯು ಜುಲೈ 20 ರಂದು “ಪ್ರಥಮ್” ಮೊಬೈಲ್ ಅಪ್ಲಿಕೇಶನನ್ನು ಆರಂಭಿಸಲಿದೆ. ಜುಲೈ 31 ರವರೆಗೆ ಶಿಕ್ಷಣ ಸಂಸ್ಥೆಗಳನ್ನು ತೆರೆಯದಂತೆ ಶಾಲಾ ಶಿಕ್ಷಣ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಎ.ಪಿ. ಇಂಟರ್ ಮೀಡಿಯೇಟ್ ಮಂಡಳಿಯು ದ್ವಿತೀಯ ವರ್ಷದ ಎಲ್ಲಾ ಅನುತ್ತೀರ್ಣ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ನಿರ್ಧರಿಸಿದೆ. ವಿವಾದದ ಬಳಿಕ ರಾಜ್ಯವು ತಿರುಮಲವನ್ನು ಕಂಟೈನ್ ಮೆಂಟ್ ವಲಯದಿಂದ ಮುಕ್ತಗೊಳಿಸಿದೆ. ಕಳೆದ 24 ಗಂಟೆಗಳಲ್ಲಿ 1608 ಹೊಸ ಪ್ರಕರಣಗಳು, 981 ಗುಣಮುಖರಾಗಿ ಬಿಡುಗಡೆ ಪ್ರಕರಣಗಳು ಮತ್ತು 15 ಸಾವುಗಳು ವರದಿಯಾಗಿವೆ. 21,020 ಸ್ಯಾಂಪಲ್ ಗಳನ್ನು ಈ ಅವಧಿಯಲ್ಲಿ ಪರೀಕ್ಷೆ ಮಾಡಲಾಗಿದೆ. ಒಟ್ಟು ಪ್ರಕರಣಗಳು: 25,422, ಸಕ್ರಿಯ ಪ್ರಕರಣಗಳು: 11,936, ಸಾವುಗಳು :292, ಗುಣಮುಖರಾಗಿ ಬಿಡುಗಡೆಯಾದವರು: 13,194.
- ತೆಲಂಗಾಣ: ಗುಣಮುಖರಾದ ಕೋವಿಡ್ -19 ರೋಗಿಗಳು ಚಿಕಿತ್ಸೆಯಲ್ಲಿರುವ ರೋಗಿಗಳಿಗೆ ಪ್ಲಾಸ್ಮಾವನ್ನು ದಾನ ಮಾಡಲು ಮುಂದೆ ಬರಬೇಕು ಎಂದು ಆರೋಗ್ಯ ಸಚಿವರಾದ ಎಟಾಲಾ ರಾಜೇಂದರ್ ಮನವಿ ಮಾಡಿದ್ದಾರೆ. ರಾಜ್ಯವೀಗ ದೇಶದಲ್ಲಿಯೇ ಕೋವಿಡ್ -19 ರ ಗರಿಷ್ಟ ಪಾಸಿಟಿವ್ ದರವನ್ನು ಹೊಂದಿದ ರಾಜ್ಯವಾಗಿದೆ. ಕೆಲವು ವಾರಗಳ ಹಿಂದೆ ರಾಜ್ಯವು ಮಹಾರಾಷ್ಟ್ರ ಮತ್ತು ದಿಲ್ಲಿಯ ನಂತರದಲ್ಲಿತ್ತು. ಈಗ ಅದು 21.91 % ನೊಂದಿಗೆ ( ಜುಲೈ 8 ರಲ್ಲಿದ್ದಂತೆ) ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದು ರಾಷ್ಟ್ರದ ಪಾಸಿಟಿವ್ ದರ 7.14 % ಗೆ ಹೋಲಿಸಿದಾಗ ಮೂರು ಪಟ್ಟಿಗೂ ಹೆಚ್ಚಾಗಿದೆ. ನಿನ್ನೆಯವರೆಗೆ ವರದಿಯಾದ ಒಟ್ಟು ಪ್ರಕರಣಗಳು: 30,946 , ಸಕ್ರಿಯ ಪ್ರಕರಣಗಳು: 12,423, ಸಾವುಗಳು : 331, ಗುಣಮುಖರಾಗಿ ಬಿಡುಗಡೆಯಾದವರು: 18,192.
ವಾಸ್ತವ ಪರಿಶೀಲನೆ
***
(Release ID: 1638281)
Visitor Counter : 194
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam